Monday, October 24, 2011

ಮಂಜುನಾಥ ಲತಾಗೆ ‘ಕರವೇ ನಲ್ನುಡಿ ಕಥಾ ಪ್ರಶಸ್ತಿ

‘ಕರವೇ ನಲ್ನುಡಿ ಮಾಸ ಪತ್ರಿಕೆ ಕನ್ನಡ ರಾಜ್ಯೋತ್ಸವ ವಿಶೇಷಾಂಕ ಪ್ರಯುಕ್ತ ಏರ್ಪಡಿಸಿದ್ದ ದ್ವಿತೀಯ ವರ್ಷದ ಕಥಾಸ್ಪರ್ಧೆ-೨೦೧೧ ರಲ್ಲಿ ಮಂಜುನಾಥ ಲತಾ ಅವರ ‘ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು ಕಥೆಯು ಪ್ರಥಮ ಬಹುಮಾನ ಪಡೆದು ಕೊಂಡಿದೆ.
ಗೌತಮ ಜೋತ್ಸ್ನ ಅವರ ‘ನೀಲಿ ಕಥೆಗೆ ದ್ವಿತೀಯ ಹಾಗೂ ನಾಗಮಂಗಲ ಕೃಷ್ಣಮೂರ್ತಿ ಅವರ ‘ಅಗ್ನಿಕೊಂಡ ಕಥೆ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ.
ಪ್ರಥಮ ಬಹುಮಾನ ರೂ.೨೫,೦೦೦, ದ್ವಿತೀಯ ರೂ. ೧೫,೦೦೦ ಹಾಗೂ ತೃತೀಯ ೧೦,೦೦೦ ರೂ. ಹಾಗೂ ಸ್ಮರಣಿಕೆ ಫಲಕಗಳನ್ನು ಒಳಗೊಂಡಿರುತ್ತದೆ.
ಚಿಂತಕ ಹಾಗೂ ಬರಹಗಾರ ಡಾ.ನಟರಾಜ್ ಹುಳಿಯಾರ್ ಅವರ ನೇತೃತ್ವದಲ್ಲಿ ತೀರ್ಪುಗಾರರ ಸಮಿತಿ ಸ್ಪಧೆಗೆ ಬಂದ ಕಥೆಗಳನ್ನು ಪರಿಶೀಲನೆ ನಡೆಸಿ ಫಲಿತಾಂಶ ಪ್ರಕಟಿಸಿದೆ.
ಮೆಚ್ಚುಗೆ ಪಡೆದ ಕಥೆಗಳು:
‘ಬಾಡಿ ಡೊನೇಷನ್ (ಡಾ.ಪ್ರಹ್ಲಾದ ಅಗಸನಕಟ್ಟೆ), ‘ಸ್ವರ್ಗದ ಬಾಗಿಲು ತೆರೆಯುವ ದಿನ (ತೊಡಿರಾನ ಅಬ್ದುಲ್ಲ), ‘ಉರಿವ ಸೂರ‍್ಯನ ಪಾದ (ಅಬ್ಬಾಸ ಮೇಲಿನ ಮನಿ), ಬಿಸಿಲುಗುದುರೆಯ ಬಿಸುಪು ( ಡಾ.ಬಸು ಬೇವಿನ ಗಿಡದ), ಪೆಪ್ಸಿಯ ಡೈರಿಯಿಂದ ಕದ್ದ ಪುಟಗಳು (ಡಾ.ಜಿ.ಎಸ್.ಸತೀಶ್ ಹೊಸಕೆರೆ), ಅಸ್ತಿತ್ವ (ಅನುಬೆಳ್ಳಿ), ನಿರ್ಗಮನ (ಜ್ಯೋತಿ ಬಿ.ಕುಲಕರ್ಣಿ), ಉಣಲೆಂದು ಬಂದ ಸುಖ (ಕಲ್ಲೇಶ್ ಕುಂಬಾರ್), ಮಸಿಪೆನ್ನು (ಬಸವಣ್ಣೆಪ್ಪ ಪ.ಕಂಬಾರ), ಚಡ್ಡಿ ಶಾಮಣ್ಣನೂ, ಹನ್ನೆರಡು ಕತ್ತೆಗಳೂ (ವಿಶ್ವನಾಥ ಪಾಟೀಲ ಗೋನಾಳ), ಅಭಿವೃದ್ಧಿ (ಹನುಮಂತ ಹಾಲಿಗೇರಿ) ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಕಥಾ ಸ್ಪರ್ಧೆಯ ವಿಜೇತರಿಗೆ ಕರವೇ ‘ನಲ್ನುಡಿ ವತಿಯಿಂದ ಬೆಂಗಳೂರಿನಲ್ಲಿ ನಡೆವ ಕಾರ‍್ಯಕ್ರಮದಲ್ಲಿ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.

Tuesday, October 18, 2011

ಶಿಕ್ಷಣದಲ್ಲಿ ಬದಲಾವಣೆ ಆಗಬೇಕು ಮಾತೃಭಾಷೆಯ ಮೂಲಕ ಶಿಕ್ಷಣ ಜಾರಿಯಾಗಬೇಕು



ವಿಚಾರವಾದಿ ರಂಗನಾಥ್‌ರವರ ಅಭಿಪ್ರಾಯಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಕಂಡ ಅನುಭವಿ, ಮುತ್ಸದ್ಧಿ, ಮಿಂಚಿನ ವ್ಯಕ್ತಿತ್ವದ ರಾಜಕಾರಣಿ ರಂಗನಾಥ್ ಅವರು ಪ್ರಬುದ್ಧ ಚಿಂತಕರಾಗಿ, ಸಂತ ಮನಸ್ಸಿನ ಸಾಹಿತ್ಯಾಭ್ಯಾಸಿ ರಾಜಕಾರಣಿಯಾಗಿ ಖ್ಯಾತರಾಗಿದ್ದಾರೆ. ಇವರನ್ನು ಮಾತನಾಡಿಸುವುದೆಂದರೆ ಒಬ್ಬ ಸೂಕ್ಷ್ಮಮತಿ ಹಾಗು ವಿಚಾರವಾದಿಯನ್ನು ಮಾತನಾಡಿಸಿದ ಅನುಭವವಾಗುತ್ತದೆ. ನಾವು ಕೇಳಿದ ಕೆಲವು ಪ್ರಶ್ನೆಗಳಿಗೆ ರಂಗನಾಥ್ ಅವರು ಹೀಗೆ ಉತ್ತರಿಸತೊಡಗಿದರು;
ನಿಮ್ಮ ಜೀವನದಲ್ಲಿ ಎಂದಾದರೂ ನೋವಿನ ಕ್ಷಣಗಳು ಬಂದಿವೆಯೇ?

(ಅವರ ಮಾಗಿದ ಮುಖದಲ್ಲಿ ಮುಗುಳ್ನಗು) ನಾನು ಎಂದೂ ಗೊಳೋ ಅಂಥ ಅಳುತ್ತಾ ಮುಖ ನೆಲಕ್ಕಾಕ್ಕಂಡು ಕೂತವನಲ್ಲ. ನನಗೆ ಉತ್ತಮ ಸ್ನೇಹಿತರ ಗುಂಪಿತ್ತು. ಜಿ.ವಿ ಆಂಜನಪ್ಪ, ಬಿ.ಎಲ್.ಗೌಡ ಮೊದಲಾದವರು ಈಗಲೂ ನನ್ನ ಕಣ್ಣೊಳಗೆ ಮೂಡಿಬರುತ್ತಾರೆ. ಇಷ್ಟಾದರೂ ನಾನು ನೋವು ಅನಭವಿಸಿದ್ದು, ನನ್ನಪ್ಪ ಸತ್ತಾಗ. ನನಗೆ ವಿವೇಕದ ಹಾದಿತೋರಿದ ಅಪ್ಪನ ಸಾವು ತೀರಾ ದುಃಖ ಹುಟ್ಟಿಸಿತು.

ನಿಮಗೆ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿದವರು ಯಾರು?
ರಾಜಕೀಯ ನನ್ನ ಜೊತೆ ಜೊತೆಗೇ ಬೆಳೆದುಬಂದ ವೃತ್ತಿ. ಹಳ್ಳಿಗಳಲ್ಲಿ ನಾನು ಚಿಕ್ಕಂದಿನಲ್ಲೇ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿದ್ದೆ. ಕೆಂಚಪ್ಪನವರು ನನ್ನ ರಾಜಕೀಯ ಕ್ಷೇತ್ರದ ಕೇಂದ್ರ ಬಿಂದು. ಪ್ರಭಾವ ಎನ್ನುವುದಾದರೆ ಅವರಿಂದಲೇ ಆಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಿಮಗೆ ದೇಶದ ಬಗೆಗಿದ್ದ ಕನಸುಗಳು ಯಾವುವು?
ಎಲ್ಲ ಜನರೂ ಸ್ವತಂತ್ರರಾಗುತ್ತಾರೆ, ಬಡತನ ನಿವಾರಣೆಯಾಗುತ್ತದೆ, ಮೂದಲಿಕೆ ಇಲ್ಲದ ಸ್ವಾತಂತ್ರ್ಯ ಲಭ್ಯವಾಗುತ್ತದೆ. ಜನಕ್ಕೆ ಪ್ರಗತಿಪರ ಮನೋಭಾವ ಬರುತ್ತದೆ. ಅಸ್ಪೃಶ್ಯತೆ ಮಾಯವಾಗುತ್ತದೆ.. ಇಂಥ ಹಲವಾರು ಕನಸುಗಳನ್ನು ಕಂಡಿದ್ದೆವು.

ನಿಮ್ಮ ಕನಸಿನ ಸ್ವಾತಂತ್ರ್ಯ ಸಿಕ್ಕಿದೆಯೇ?
ಸ್ವಾತಂತ್ರ್ಯಾ ನಂತರ ಅಭಿವೃದ್ಧಿಯಾಗಿದೆ. ಸುಮಾರು ಬದಲಾಗಿದೆ. ನಾವು ಕಂಡಾಗಿನ ಅಸ್ಷೃಶ್ಯತೆ ಈಗಿಲ್ಲ. ಬಾವಿಯ ಬಳಿ ಅಸ್ಪೃಶ್ಯತೆ ನೀರಿಗಾಗಿ ಕಾಯಬೇಕಿತ್ತು. ಈಗ ಅಂಥ ಸ್ಥಿತಿ ಕಡಿಮೆಯಾಗಿದೆ. ಆದರೆ ಮನಸ್ಸಿನ ನೋವು ಕಡಿಮೆಯಾಗಿಲ್ಲ.
ವ್ಯಕ್ತಿಯ ಜ್ಞಾನಕ್ಕೆ ಮಾನ್ಯತೆಯಿದೆ. ಆದರೆ ಜಾತಿಯ ನೋವು ಹಾಗೇ ಇದೆ. ಉದಾಹರಣೆಗೆ ಕರ್ಣ ಎಷ್ಟೇ ಸಮರ್ಥನಾಗಿದ್ದರೂ, ಅಂಗಾಧಿ ಪತಿಯಾದರೂ ಆತನನ್ನು ಸೂತಪುತ್ರ ಎನ್ನುವ ನೋವು ತಪ್ಪಿರಲಿಲ್ಲ. ಈಗಲೂ ಅಂಥ ವಾತಾವರಣ ಜೀವಂತವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ತಮ್ಮ ಹಕ್ಕಿನ ಅರಿವಿತ್ತು. ಈಗ ಅಂಥ ಅರಿವು ಕಡಿಮೆಯಾಗಿದೆ. ತುಳಿತಕ್ಕೊಳಗಾದವನು ಶಕ್ತಿಹೀನನಾಗಿದ್ದಾನೆ. ನಾವು ಸಮಾಜದಲ್ಲಿನ ಜಾತಿಯ ನೋವನ್ನು ಅಳಿಸಿಲ್ಲ. ಅಸ್ಪೃಶ್ಯರೊಳಗೂ ಇಂದು ಪರಸ್ಪರ ಶೋಷಣೆ, ದಬ್ಬಾಳಿಕೆಗಳು ತಲೆಯೆತ್ತುತ್ತಿವೆ. ಶೋಷಣೆಗೊಳಗಾದವರೇ ಶೋಷಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ನಾವು ನಿಜವಾಗಿಯೂ ಹೋರಾಟಮಾಡಬೇಕಿರುವುದು ಯಾವುದಕ್ಕೆ ಎಂಬ ಅರಿವು ಜನರಿಗೆ ಇಲ್ಲವಾಗುತ್ತಿದೆ.

ಜಾತಿಗಳು ಇತ್ತೀಚೆಗೆ ಹೆಚ್ಚು ಸಂಘಟಿತವಾಗುತ್ತಿವೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
ನೋವಿನ ಬಿಡುಗಡೆಗೆ ಸಂಘಟನೆ ಅಗತ್ಯ. ಅದು ಇನ್ನೊಬ್ಬರಿಗೆ ನೋವುಕೊಡಲು, ದಬ್ಬಾಳಿಕೆ ನಡೆಸಲು ಮುಂದಾಗುವುದಾದರೆ ಕಂಠಕಪ್ರಾಯ.
ಇಂದಿನ ರಾಜಕೀಯದ ವಾತಾವರಣದಲ್ಲಿ ಚುನಾವಣೆಗಳ ಸ್ಥಿತಿಯಲ್ಲಿ ಒಬ್ಬ ಬುದ್ದಿವಂತ ಹಾಗು ಪ್ರಾಮಾಣಿಕ ವ್ಯಕ್ತಿ ಸ್ಪರ್ಧಿಸಿ ಗೆಲ್ಲಬಲ್ಲನೆ?
ಬುದ್ದಿವಂತರಿಗೆ ಅವಕಾಶವಿದೆ. ನಾನು ಆಶಾವಾದಿ.

ನಿಮ್ಮ ರಾಜಕೀಯ ಜೀವನ ತೃಪ್ತಿ ನೀಡಿದೆಯೇ?
ನೀಡಿದೆ. ಸಣ್ಣಪುಟ್ಟ ವೇದನೆಗಳು ಬಂದಿರಬಹುದು. ಅವುಗಳನ್ನು ಒಳಿತಾಗೇ ಬಳಸಿಕೊಂಡಿದ್ದೇನೆ.

ಇಂದು ರಾಜಕಾಣಿಗಳಿರುವ ಮುಖ್ಯ ಸವಾಲುಗಳು ಯಾವುವು?
ಸರ್ವಕಾಲಕ್ಕೂ ಮಾನ್ಯವಾಗಬಲ್ಲ ಮೌಲ್ಯಗಳು ಸಮಾಜದಲ್ಲಿವೆ, ಅವುಗಳನ್ನು ರಾಜಕಾರಣಿಯಾದವನು ಅಳವಡಿಸಿಕೊಳ್ಳವುದರಲ್ಲಿ ಅರ್ಥವಿಲ್ಲ. ರಾಜಕೀಯದಲ್ಲಿದ್ದವನು ಕೇವಲ ಪತ್ರಿಕೆ ಓದಿದರೆ ಸಾಲದು. ಸಾಹಿತ್ಯ ಓದಬೇಕು. ಸಾಹಿತ್ಯ ಪರಿಣಾಮಕಾರಿಯಾದುದು. ರಾಜಕೀಯ ಒಂದು ಶಾಸ್ತ್ರ ಕುಣಿತವಲ್ಲ. ಸಾಹಿತ್ಯದಲ್ಲಿನ ಅನೇಕ ಸೂಕ್ಷ್ಮಗಳು ರಾಜಕಾರಣಿಯಾದವನಿಗೆ ಬೇಕಾಗುತ್ತವೆ. (ಕಾರಂತರ ಚೋಮನ ದುಡಿಯನ್ನು ವಿವರಿಸುತ್ತ ಅಲ್ಲಿನ ಆಸ್ತಿಯ ಹಕ್ಕಿನ ಬಗ್ಗೆ ಮಾತನಾಡಿದರು.) ರಾಜಕಾರಣಿಯಾದವನು ಇಂಥ ಸೂಕ್ಷ್ಮಗಳನ್ನು ಅರಿತು ಅಲ್ಲಿಂದ ಯೋಜನೆಗಳನ್ನು, ಬದಲಾವಣೆಯನ್ನು ಕೈಗೊಳ್ಳಬೇಕಾಗುತ್ತದೆ.

ನಮ್ಮ ಶಿಕ್ಷಣ ಹಾಗೂ ಉದ್ಯೋಗಕ್ಕೆ ಪರಸ್ಪರ ಸಂಬಂಧವಿಲ್ಲ. ಓದುವುದೆಂದರೆ ನಿರುದ್ಯೋಗಿಯಾಗುವುದು ಎಂಬ ಅರ್ಥವಿದೆ. ಇದಕ್ಕೆ ನಿಮ್ಮ ಅಭಿಪ್ರಾವೇನು?
ನಾನು ಮಾರ್ಕ್ಸ್ ಮತ್ತು ಲೆನಿನ್‌ರನ್ನು ಓದಿಕೊಂಡುವನು. ಈಗಲೂ ನನಗದರ ಕಾವಿದೆ. ಆರ್ಥಿಕ ಸಮಸ್ಯೆಯ ನಿವಾರಣೆ ಬಗ್ಗೆ ಜಪಾನ್ ನನಗೆ ಆಪ್ತವಾಗುತ್ತದೆ. ಅಲ್ಲಿ ಪ್ರತಿಯೊಂದು ಮನೆಯೂ ಒಂದು ಕೈಗಾರಿಕಾ ಕೇಂದ್ರವಾಗಿರುತ್ತವೆ. ಆ ದೃಷ್ಟಿಯಲ್ಲಿ ನಮ್ಮ ಸಮಾಜ ಚಲಿಸಬೇಕು. ಜಪಾನ್‌ಗಿರುವ ಕಾಲದ ಪ್ರಜ್ಞೆ, ರಾಷ್ಟ್ರಿಯ ದೃಷ್ಟಿಕೋನ, ತಮ್ಮ ಮಾಲನ್ನು ಮಾರಿಕೊಳ್ಳಲು ತಾವೇ ಸೃಷ್ಟಿಸಿಕೊಳ್ಳುವ ಮಾರುಕಟ್ಟೆ ವ್ಯವಸ್ಥೆ ಇಂಥ ಅಂಶಗಳನ್ನು ಪಾಲಿಸಬೇಕು. ಗಾಂಧೀಜಿಯವರ ಕಲ್ಪನೆಗಳು ಪ್ರಸ್ಥುತವಾಗುತ್ತವೆ. ಅವರ ಚಿಂತನೆಗಳನ್ನು ಅನುಸರಿಸುವುದರಿಂದ ಈ ದೇಶ ಅಭಿವೃದ್ಧಿಯಾಗಬಲ್ಲದು. ಗಾಂಧೀಜಿಯ ತತ್ವಗಳನ್ನು ವೈಜ್ಞಾನಿಕವಾಗಿ ನೋಡುವ ಕ್ರಮ ಅನಿವಾರ‍್ಯ.
ಶಿಕ್ಷಣದಲ್ಲಿ ಬದಲಾವಣೆ ಆಗಬೇಕು. ಮಾತೃಭಾಷೆಯ ಮೂಲಕ ಶಿಕ್ಷಣ ಜಾರಿಯಾಗಬೇಕು. ಮಾತೃಭಾಷೆಯ ಜೊತೆಗೆ ಹಿಂದಿ, ಇಂಗ್ಲಿಷ್‌ಗಳೂ ಬೇಕು. ಕನ್ನಡ ಭಾಷೆ ಪ್ರಾಥಮಿಕವಾಗಿ ದೊರೆಯದಿದ್ದರೆ ಮಕ್ಕಳಿಗೆ ನಮ್ಮ ಸಮಾಜದ ಅರಿವು, ಅನುಭವ ಆಗಲಾರದು. ಅವು ಸಮಾಜದಿಂದ ದೂರಾಗುತ್ತವೆ. ಮಾತೃಭಾಷೆಯನ್ನು ಮೂಲವಾಗಿ ಕಲಿತು ಇಂಗ್ಲೀಷ್‌ನಲ್ಲಿ ಪಾಂಡಿತ್ಯ ಪಡೆದವರು ಅನೇಕರಿದ್ದಾರೆ. (ಬಿ.ಎಂ.ಶ್ರೀ. ಎ.ಎನ್. ಮೂರ್ತಿರಾವ್ ಮೊದಲಾದವರ ಪ್ರಸ್ತಾಪ)

ನಿಮ್ಮ ಮೇಲೆ ಪ್ರಭಾವ ಬೀರಿರುವ ಮಹಾನ್ ವ್ಯಕ್ತಿಗಳು ಯಾರು?
ಅನೇಕರಿದ್ದಾರೆ. ಅವರಲ್ಲಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧಿ ಮುಖ್ಯರು. ಚಿಕ್ಕಂದಿನಲ್ಲಿ ನಾನು ಕ್ರಾಂತಿಯ ಸ್ವಭಾವ ಹೊಂದಿದ್ದೆ. ಆಗ ಸುಭಾಷ್‌ಚಂದ್ರಬೋಸ್ ನನಗೆ ತುಂಬಾ ಇಷ್ಟವಾಗಿದ್ದರು. ಕ್ರಮೇಣ ಗಾಂಧಿ ನನ್ನೊಳಗಿಳಿದರು.

ಅಂದು ರಾಜಕೀಯಕ್ಕೆ ಬರುತ್ತಿದ್ದವರು ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಭಾವಿಸಿದ್ದರು. ಆದರೆ ಇಂದು ಮೂರನೇ ದರ್ಜೆಯಿರಲಿ, ನಾಲ್ಕನೆ ದರ್ಜೆಗಿಂತಲೂ ಕಡೆಯಾದಂಥ ಮಂದಿ ರಾಜಕೀಯವನ್ನು ಒಂದು ಸ್ವಾರ್ಥದ, ಲಾಭದ ಉದ್ಯಮವೆಂದು ಭಾವಿಸಿದ್ದಾರೆ. ರಾಜಕೀಯೋದ್ಯಮಿಗಳೂ ಆಗಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಮಾಜದಲ್ಲಿ ಇಂಥ ಕಾಲ ಬಂದೇ ಬರುತ್ತದೆ. ಅದಕ್ಕೆ ಧೃತಿಗೆಡಬೇಕಿಲ್ಲ. ಏಕೆಂದರೆ ಅದು ಶಾಶ್ವತವಲ್ಲ. ಈ ಕುರಿತು ನನಗೆ ವೇದನೆಯಾಗುತ್ತದೆ. ಆದರೆ ಮುಂದಿನ ದಿನಗಳ ಬಗ್ಗೆ ನನಗೆ ಭರವಸೆಯಿದೆ.
೧೯೪೮ರಲ್ಲಿ ಜ್ಯೋತಿರಾವ್‌ಪುಲೆ ನಮ್ಮಲ್ಲಿಂದು ಸ್ವಾರ್ಥಿಗಳಿದ್ದಾರೆ, ಮುಂದಿನ ದಿನಗಳಲ್ಲಿ ಶೋಷಿತರೂ ಕೂಡ ಸ್ವಾರ್ಥಿಗಳಾಗುತ್ತಾರೆ. ಇಂಥ ಸ್ಥಿತಿಗಳು ಸಮಾಜದಲ್ಲಿ ಸಹಜ ಹಾಗೂ ತಾತ್ಕಾಲಿಕ ಎಂದಿದ್ದರು. ಮುಂದಿನ ದಿನಗಳ ಬಗ್ಗೆ ಅವರೂ ಆಶಾವಾದಿಯಾಗಿದ್ದರು. ಹಾಗೇ ನಾನು ಕೂಡ ಆಶಾವಾದಿ.

ನೀವು ಸಿನಮಾ ನೋಡುವ ಹವ್ಯಾಸ ಹೊಂದಿದ್ದೀರಾ?
(ನಗುತ್ತಾ) ಬಹಳ ಹಿಂದೆ ನೋಡ್ತಿದ್ದೆ. ನನಗೆ ನೆನಪಿರುವಂತೆ ವಸಂತಸೇನೆ, ಬಭ್ರುವಾಹನ ಹಾಗೂ ಗೋಪಾಲಗೌಡ್ರ ಜೊತೆ ಹೋಗಿ ಸಂಸ್ಕಾರ ಚಿತ್ರಗಳನ್ನು ನೋಡಿದ್ದೇನೆ.

ಇಂದಿನ ಯುವ ಸಮುದಾಯಕ್ಕೆ ನೀವು ನೀಡುವ ಸಲಹೆ ಏನು?
ಹೆಚ್ಚು ವಿದ್ಯಾವಂತರಾಗಬೇಕು. ಸಮರ್ಥರಾಗಬೇಕು. ಶಕ್ತಿಶಾಲಿ ಗಳಾಗಬೇಕು. ಸೌಜನ್ಯಶೀಲರಾಗಬೇಕು. ತಮ್ಮ ವಿವೇಚನೆಯನ್ನು ಒರೆಗೆ ಹಚ್ಚಿ ವಿಶಾಲ ಸಹೃದಯತೆ ಹಾಗೂ ಸಂಸ್ಕಾರದ ನಿಜವಾದ ಅರ್ಥವನ್ನು ಪಡೆಯಬೇಕು.

ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾಗಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸಿದ್ದೀರಿ ಪರಿಸರ ಸಂರಕ್ಷಣೆ ಕುರಿತು ತಾವು ಯಾವ ಕಾರ್ಯಯೋಜನೆಗಳನ್ನು ರೂಪಿಸಿದ್ದೀರಿ?
ಪರಿಸರ ಸಂರಕ್ಷಣೆಗಾಗಿ ನಾನೀಗ ನೀಲ ನಕ್ಷೆಯನ್ನು ತಯಾರಿಸಿದ್ದೇನೆ.
ಪರಿಸರ ಮಾಲಿನ್ಯ ಎಂದೊಡನೆ ಕೇವಲ ನಗರವನ್ನಷ್ಟೇ ಕೇಂದ್ರವಾಗಿಟ್ಟುಕೊಂಡು ಯೋಚಿಸುವುದು ತಪ್ಪಾಗುತ್ತದೆ. ಗ್ರಾಮೀಣ ಮಟ್ಟದಲ್ಲಿಯೂ ಮಾಲಿನ್ಯ ಉಂಟಾಗುತ್ತಿದೆ. ನಮ್ಮ ಯೋಜನೆಗಳು ಹಳ್ಳಿಗಳ ಮೂಲಕ ಆರಂಭವಾಗಬೇಕು. ಆದ್ದರಿಂದ ಹಳ್ಳಿಗಳ ನೈರ್ಮಲ್ಯಕ್ಕೆ ಹೆಚ್ಚು ಒತ್ತುಕೊಟ್ಟು ಪರಿಸರ ಸಂರಕ್ಷಣೆಯನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾನು ವಿಶೇಷ ಚಟುವಟಿಕೆಗಳನ್ನು ರೂಪಿಸಲು ಕಾರ‍್ಯೋನ್ಮುಖನಾಗಿದ್ದೇನೆ.
ಒಂದೂವರೆ ಘಂಟೆಯ ದೀರ್ಘಸಮಯದ ನಂತರ ರಂಗನಾಥ್ ಎದ್ದು ಕೋಣೆಯತ್ತ ಹೊರಟರು. ಪಕ್ಕದಲ್ಲಿದ್ದ ಬುದ್ಧನ ಪ್ರತಿಮೆಯಲಿ ಅವರ ಶುಭ್ರ ಚಿತ್ರ ಕಾಣುತ್ತಿತ್ತು.

- ನಾಗತಿಹಳ್ಳಿ ರಮೇಶ್

ಜನರ ಬದುಕಿನ ಕತ್ತಲೆಗೆ ಬೆಳಕಾಗಬಲ್ಲ ಕೆ.ಎಚ್. ರಂಗನಾಥ್



ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಜಾತಿ ಮತ್ತು ಬಂಡವಾಳಶಾಹಿ ಶಕ್ತಿಗಳೇ ರಾಜಕಾರಣದದ ಧಾತು ಧೋರಣೆಗಳಾಗಿವೆ. ಇಂಥ ಪ್ರತಿಕೂಲ ಸಾಮಾಜಿಕ ಸಂದರ್ಭದಲ್ಲಿ ದಮನಕ್ಕೆ ಒಳಗಾದ ಜನರ ಬಗ್ಗೆ ನಿರಂತರವಾಗಿ ಧ್ಯಾನಿಸುತ್ತಾ, ಸ್ಪಂದಿಸುತ್ತಾ ಬಂದಿರುವ ಸ್ಫಟಿಕದಂತಹ ಅಪರೂಪದ ರಾಜಕಾರಣಿ ಕೆ.ಎಚ್. ರಂಗನಾಥ್ ಅವರು. ಇವರ ಬೌದ್ಧಿಕತೆ, ಅನುಭವ, ಸಾಮಾಜಿಕ ಚಿಂತನೆ ವಿಶಿಷ್ಟವಾಗಿವೆ. ಇವರು ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್‌ರ ತಾತ್ವಿಕತೆಯಿಂದ ಕೂಡಿದ ಸೃಜನಶೀಲ ರಾಜಕಾರಣದ ಮೌನವನ್ನು ಸದಾ ನಾಡಿನ ರಾಜಕೀಯದಲ್ಲಿ ಸೃಷ್ಟಿಸುತ್ತಾ ಬಂದಿದ್ದಾರೆ. ಈ ಮೌನವೇ ಕರ್ನಾಟಕದ ರಾಜಕಾರಣವನ್ನು ಎಚ್ಚರಿಸುವ, ಪ್ರಗತಿಪರಗೊಳಿಸುವ ಶಕ್ತಿಯಾಗಿ ಕೆಲಸ ಮಾಡಿದೆ. ನುಡಿದಂತೆ ನಡೆವ, ಪರಿಶುದ್ಧ ಚಿಂತನೆಯ, ಸರಳ-ಸಜ್ಜನಿಕೆಗೆ, ಪ್ರಾಮಾಣಿಕತೆಗೆ ಅನ್ವರ್ಥರಾದ ಕೆ.ಎಚ್. ರಂಗನಾಥ್ ಅವರು ಹಲವಾರು ಸ್ತರಗಳಲ್ಲಿ ನಾಡಿನ ಜನತೆಯನ್ನು ಕಾಡುವ ಜೀವಚೇತನ. ಇತ್ತೀಚಿನ ರಾಜಕೀಯದ ಸ್ಥಿತಿ ವಿಚಿತ್ರವಾಗಿದೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಚೇಷ್ಟೆ ಅತಿಯಾಗುತ್ತಿದೆ. ರಾಜಕೀಯ ಎನ್ನುವುದು ತಮಗೆ ಬೇಕಾಗಿರುವುದನ್ನು ಲೂಟಿ ಮಾಡುವ ಕ್ಷೇತ್ರವೆಂದು ಹಲವರು ಭಾವಿಸಿರುವಂತಿದೆ. ಜನರ ಜೀವನಕ್ಕೆ ಅವರ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಯೋಜನೆ ರೂಪಿಸುವ ಕ್ರಿಯಾಶೀಲತೆಯ ನಡಾವಳಿ ಯಾರಿಗೂ ಬೇಕಾಗಿಲ್ಲ. ಯಾರಿಗೂ ಕಾಣುತ್ತಿಲ್ಲ. ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಹಾಗೂ ಜೀವಪರವಾದಿಯಾದ ರಾಜಕಾರಣಿ ಕೆ.ಎಚ್. ರಂಗನಾಥ್ ಅವರು ಕಂಡು ಬರುತ್ತಾರೆ.
-ನಾಗತಿಹಳ್ಳಿ ರಮೇಶ್

ಸಂತ ಮನಸ್ಸಿನ ಪ್ರಬುದ್ಧ ಚಿಂತಕ ಹಾಗೂ ಸಾಹಿತ್ಯಾಭ್ಯಾಸಿ ರಾಜಕಾರಣಿ



ಮಾರ್ಕ್ಸ್ ಮತ್ತು ಲೆನಿನ್‌ರನ್ನು ಆಳವಾಗಿ ಅಭ್ಯಾಸಮಾಡಿದ್ದ ರಂಗನಾಥ್‌ರವರಿಗೆ ಸಮಾಜ ಬದಲಾಗಬೇಕೆಂಬ ಉತ್ಕಟ ಕಾಳಜಿಯಿತ್ತು. ಈ ಕಾಳಜೀಯನ್ನೇ ರಾಜಕೀಯ ದೃಷ್ಟಿಯನ್ನಾಗಿಸಿಕೊಂಡರು. ಕರ್ನಾಟಕದ ಏಕೀಕರಣ ಚಳುವಳಿಗೂ ತೊಡಗಿಕೊಂಡರು. ೧೯೪೮ರಿಂದ ೫೨ರವರೆಗೆ ಪ್ರಜಾಸೋಷಿಯಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಂತರ ೧೯೬೯ರ ತನಕ ಅದೇ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕಾರ‍್ಯನಿರ್ವಹಿಸಿದರು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆ ಪಕ್ಷದಲ್ಲಿ ರಾಷ್ಟ್ರದ ಬಗ್ಗೆ ಮಿಡಿಯುವ ಮಹಾನ್ ನಾಯಕರುಗಳಿದ್ದರು ಇಂಥವರ ಬದುಕು ಹಾಗು ಕಾಳಜಿಗಳು ರಂಗನಾಥ್‌ರವರು ಒಬ್ಬ ಶ್ರೇಷ್ಟ ನಾಯಕರಾಗಿ ರೂಪುಗೊಳ್ಳಲು ಪ್ರೇರಕವಾದವು.

ಇಂದು ರಾಜಕೀಯದ ಬಗ್ಗೆ ಜನ ಬೇಸತ್ತಿದ್ದಾರೆ. ರಾಜಕೀಯವೆನ್ನುವುದು ’ಹೇಸಿಗೆಯೊಳಗಿನ ಸಂಪತ್ತನ್ನು ನಾಲಗೆಯಿಂದ ಕಬಳಿಸಲು ಭೃಷ್ಟರು ನಡೆಸುವ ಸ್ಪರ್ಧೆ ಎಂಬ ಮನೋಭಾವ ಜನರಲ್ಲಿ ಬೇರೂರುತ್ತಿದೆ. ನಾಯಕರೆನಿಸಿ ಕೊಂಡವರಿಗೆ ಈ ಮಣ್ಣಿನ ಸಂಕೀರ್ಣತೆಗಳನ್ನು ಅರಿಯುವ ಹಾಗು ಜನರಲ್ಲಿ ಕ್ರಿಯಾಶೀಲತೆಯನ್ನು ರೂಪಿಸುವ ಚೈತನ್ಯ ಇಲ್ಲವಾಗುತ್ತಿದೆ. ರಾಜಕೀಯ ಎನ್ನುವುದು ಜನಸೇವೆಯೆಂದು ಭಾವಿಸದೆ ಅದೊಂದು ಲಾಭಗಳಿಸುವ ಉದ್ಯಮವೆಂದುಕೊಂಡವರೇ ಹೆಚ್ಚು. ಹಣ ಚೆಲ್ಲಿ ಹಣ ಬಾಚುವ ತಂತ್ರವಿದ್ದವನೇ ಶ್ರೇಷ್ಠರಾಜಕಾರಣಿ ಎನಿಸಿಕೊಳ್ಳುತ್ತಿರುವ ಆತಂಕದ ಸಂದರ್ಭದಲ್ಲಿ, ವಂಶಾಡಳಿತವನ್ನು ಧಿಕ್ಕರಿಸಿ ಸರಳವಾಗಿದ್ದು ಸತ್ಯ, ಪ್ರಾಮಾಣಿಕತೆ ಹಾಗೂ ಮನುಷ್ಯರ ಸಂಕಟಗಳನ್ನು ನಿವಾರಿಸುವ ಪ್ರೀತಿಯುಳ್ಳ ಮೇಧಾವಿ ರಾಜಕಾರಣಿಗಳು ಅಪರೂಪ. ಅಂಥವರಲ್ಲಿ ಕೆ.ಹೆಚ್.ರಂಗನಾಥ್ ಅವರು ಪ್ರಮುಖರು.
ರಾಜಕೀಯ ಮನುಷ್ಯನ ರಕ್ತವಿದ್ದಂತೆ. ಅದು ಕಲುಷಿತಗೊಂಡಾಗಿನ ಅಪಾಯ ಭೀಕರವಾದದ್ದೆಂದು ನಂಬಿರುವ ಇವರು; ಇತಿಹಾಸದಲ್ಲಿ ಕಂಡು ಬರುವ ಪ್ರಗತಿಪರ ರಾಜಕಾರಣವನ್ನು ಇಷ್ಟಪಡುವಂತವರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹಾಗು ಭಕ್ತಿಪಂಥದ ಮಹನೀಯರು ಪ್ರತಿಪಾದಿಸಿದ ರಾಜಕಾರಣ ಜೀವಪರವಾದದ್ದು, ಇಂಥ ರಾಜಕಾರಣದ ಅಗತ್ಯವಿದೆ ಎನ್ನುವ ಇವರು; ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎದೆಯೊಳಗೆ ವಿಭಿನ್ನವಾದ ರಾಜಕೀಯದ ಗರ್ಭವನ್ನು ಒಂದು ಸಾರ್ವತ್ರಿಕವಾದ ರಾಜಕೀಯದ ಪರಿಕಲ್ಪನೆಯೆಂದು ಅಭಿಪ್ರಾಯಪಡುತ್ತಾರೆ.
ರಾಜಕಾರಣ ಸಭ್ಯರಿಗಲ್ಲವೆಂಬ ಭಾವನೆಯನ್ನು ವಿರೋಧಿಸುವ ಇವರು; ಯುವಕರು ಮಾತ್ರವಲ್ಲದೆ ಎಲ್ಲ ಬುದ್ದಿಜೀವಿಗಳೂ ಜನಸಾಮಾನ್ಯರೊಂದಿಗೆ ಬೆರೆತು, ಅವರೊಳಗೆ ಮಾನವೀಯವಾಗಿ ಗುರುತಿಸಿಕೊಂಡು ಬೆಳೆಯಬೇಕೆನ್ನುತ್ತಾರೆ.
ನಾಯಕನೆನಿಸಿಕೊಳ್ಳಲು ಹಣ, ಗೂಂಡಾಗಿರಿಗಳನ್ನೇ ಆಯುಧವೆಂದು ಭಾವಿಸಿರುವ ಕೆಲವರಿಗೆ; ಬೀದಿ ಬೀದಿ ತಿರುಗುತ್ತಾ ಭಿಕ್ಷೆ ಬೇಡುತ್ತಾ ಮನುಷ್ಯನ ಬದುಕಿನ ನಶ್ವರತೆಯ ಬಗ್ಗೆ ಪದಕಟ್ಟಿ ಹಾಡುವ ಸಂತನೊಬ್ಬ ಜನರ ನಾಯಕನಾಗಬಲ್ಲ ಎಂಬುದನ್ನು ತಿಳಿಸಬೇಕಾಗಿದೆ.
ಪ್ರತಿಯೊಬ್ಬ ರಾಜಕಾರಣಿಯೂ ಸಂತನ ಸರಳತನ ಮತ್ತು ಸಮೂಹ ಏಳ್ಗೆಯ ಮನಸ್ಸನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯವೆಂದು ಅಭಿಪ್ರಾಯಪಡುತ್ತಾರೆ. ಹಳ್ಳಿಯ ವಾತಾವರಣದಲ್ಲಿ ಕಷ್ಟಪಟ್ಟು ವ್ಯಾಸಂಗಮಾಡಿದ ಇವರು; ರಾಜಕೀಯ ನಾಯಕರಾಗಿ ಸಾವಿರಾರು ಜನರ ಬದುಕಿಗೆ ಬೆಳಕುತೋರಿದ್ದಾರೆ.
ಚಿಕ್ಕಂದಿನಲೇ ಗುರುಹಿರಿಯರ ಸರಳತೆಗೆ, ಸಾಹಿತ್ಯದ ವಿದ್ಯುತ್‌ಶಕ್ತಿಗೆ, ರಾಜಕೀಯದ ಸಾಮಾಜಿಕ ಶಕ್ತಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಆಕರ್ಷಿತರಾದ ಇವರು; ತಮ್ಮ ಬದುಕಿನುದ್ದಕ್ಕೂ ಇಂತಹ ಮೌಲ್ಯಗಳನ್ನು ಅಂತರಂಗದೊಳಗೆ ತುಂಬಿಕೊಳ್ಳಲು ಶ್ರಮಿಸುತ್ತಾ ಬಂದವರು. ವೃತ್ತಿ ಸಂಪನ್ನತೆಯ ಜೊತೆಗೆ ಸಾಹಿತ್ಯಾಭಿರುಚಿಯನ್ನೂ ರೂಢಿಸಿಕೊಂಡಿರುವ ಇವರ ಕಣ್ಣಲ್ಲಿ ಈ ದೇಶದ ದಾರಿದ್ರ್ಯ, ಜಾತಿ, ಧರ್ಮಗಳ ಹೆಸರಿನಲ್ಲಿ ಆಗುತ್ತಿರುವ ಹಿಂಸೆ ಮತ್ತು ರಾಜಕೀಯದ ದುರ್ಬೆಳವಣಿಗೆಯ ಬಗ್ಗೆ ಆತಂಕವಿದೆ. ಅಜ್ಞಾನ, ಅನಕ್ಷರತೆ, ನಿರುದ್ಯೋಗದಂಥ ರೋಗಗಳು ಜನರನ್ನು ಕೊಲ್ಲುತ್ತಿರುವುದರ ಬಗ್ಗೆ ಕಣ್ಣೀರಿದೆ. ಇತ್ತೀಚಿನ ದಿನಗಳಲ್ಲಿ ಯುವಶಕ್ತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಯುವಶಕ್ತಿ ಯಾವುದೇ ದೇಶದ ನಾಗರಿಕತೆಯ ಅಭಿವೃದ್ಧಿಯ ಸುಳಿ. ಅದನ್ನು ಚಿವುಟುವುದು ವಿನಾಶಕಾರಿಯಾದದ್ದೆಂದು ನಂಬಿರುವ ಇವರು ಯುವಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.
ಇಂದಿನ ಯುವಕರ ಸ್ಥಿತಿ ಗಾಳಿಯಲ್ಲಿ ಹಾರಾಡುವ ಮಾವಿನ ಸಸಿಯಂತೆ. ದೊಡ್ಡವರಾದವರು ಅದನ್ನು ಹಿಡಿದು ನೆಲಕ್ಕೊರಬೇಕು, ಒಂದಿಷ್ಟು ನೀರೆರೆಯಬೇಕು ನಂತರ ಅದು ಫಲನೀಡುತ್ತದೆ ಎನ್ನುವ ರಂಗನಾಥ್‌ರವರು ಯುವಕರ ಬದುಕಿನ ಕತ್ತಲೆಗೆ ಬೆಳಕಾಗಬಲ್ಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಅಹಂಕಾರವಿಲ್ಲದ, ಅಧಿಕಾರವನ್ನು ಜನರ ಶೋಷಣೆಯ ಅಸ್ತ್ರವಾಗಿಸಿಕೊಳ್ಳದ ದಯಾಮಯಿ ರಂಗನಾಥ್‌ರವರಿಗೆ ರೈತರ ಬಗ್ಗೆ, ಶೋಷಿತರ ಬಗ್ಗೆ ಅಪಾರ ಕಾಳಜಿ ಇದೆ. ಸಮಾಜದ ಅಭಿವೃದ್ಧಿಗಾಗಿ ಇವರ ತಲೆತುಂಬ ಸಾವಿರಾರು ಯೋಜನೆಗಳಿವೆ.
ಯಾವುದೇ ದೇಶದ ಧರ್ಮ, ಶಿಕ್ಷಣ, ರಾಜಕೀಯಗಳು ಮನುಷ್ಯನ ಸ್ವಾತಂತ್ರ್ಯವನ್ನು ಕಾಪಾಡಲು ಇರಬೇಕಾದಂಥವು. ಇವುಗಳೇ ಜೈಲುಗಳಾದರೆ ಜೀವನ ನಾಶವಾದಂತೆಯೇ ಎನ್ನುವ ಇವರಿಗೆ ಮನುಷ್ಯರ ನೆಮ್ಮದಿಯ ಬಗ್ಗೆ ಕಾಳಜಿ ಇದೆ. ಅನೇಕ ರಾಜಕಾರಣಿಗಳು ಜನರ ನೆಮ್ಮದಿಯನ್ನು ಹಾಳುಮಾಡಿ ಆ ಸ್ಥಿತಿಯಲ್ಲೇ ತಮ್ಮ ನೀಚರಾಜಕೀಯದ ಬೇಳೆಬೇಯಿಸಿಕೊಳ್ಳುತ್ತಾರೆ. ಆದರೆ ರಂಗನಾಥ್‌ರಂಥವರು ಇದಕ್ಕೆ ವಿರುದ್ಧವಾಗಿರುವುದು ಮೆಚ್ಚುವಂಥದ್ದು. ಈ ನಾಡಿನ ಜನರ ಅತಂತ್ರ ಸ್ಥಿತಿಯ ಬಗ್ಗೆ, ಭರವಸೆಗಳನ್ನು ಕಿವಿಯೊಳಗಿಟ್ಟುಕೊಂಡು ಬಾಡಿದ ಜನರ ಕಣ್ಣುಗಳ ಬಗ್ಗೆ ದುಃಖಪಡುವ ಇವರು, ಹಣ ಮತ್ತು ಡಂಭಾಚಾರವಿಲ್ಲದ ಶುದ್ಧರಾಜಕಾರಣಕ್ಕಾಗಿ ಕಾತರಿಸುತ್ತಾರೆ.
ರಾಜಕೀಯವೆನ್ನುವುದು ಒಂದು ಒಳ್ಳೆಯ ಸಾಹಿತ್ಯಕೃತಿ, ಕಲಾ ಕೃತಿಯೊಳಗಿನ ಮಾನವೀಯ ಮೌಲ್ಯದಷ್ಟೇ ಮುಖ್ಯವಾದದ್ದೆಂಬ ಅರಿವು ಮಾಯವಾಗುತ್ತಿದೆ. ಅನೇಕರು ರಾಜಕೀಯವನ್ನು, ಮನುಷ್ಯರ ಕಣ್ಣುಗಳನ್ನು ಕಿತ್ತು ಗೋಲಿಯಾಟವಾಡುವ ಸರ್ವಾಧಿಕಾರದ ಅಮಲೆಂದು ಭಾವಿಸಿರುವ ದುರಂತದಲ್ಲಿ ನಾವು ಬದುಕುತ್ತಿದ್ದೇವೆ. ಜನರ ಮೆದುಳಿನೊಳಗೆ ಜೀವನದ ಬಗ್ಗೆ ಆಸಕ್ತಿ ಹುಟ್ಟಿಸುವ, ಕ್ರೀಯಾಶೀಲತೆಯನ್ನು ಬೆಳೆಸುವ ತಾಕತ್ತು ನಾಯಕರಾದವರಿಗೆ ಇಲ್ಲವಾಗುತ್ತಿದೆ. ಇಂಥ ಸಂಧರ್ಭದಲ್ಲಿ ಸರಳ ಸಜ್ಜನಿಕೆಗಳೊಂದಿಗೆ ಸ್ಪಂದನಾಶೀಲ ಮನೋಭಾವವನ್ನು ಒಳಗೊಂಡಿರುವ ಸಂಭಾವಿತ, ದಕ್ಷ ವ್ಯಕ್ತಿತ್ವದ ಪ್ರಾಮಾಣಿಕ, ಪ್ರಗತಿಪರ ರಾಜಕಾರಣಿಯಾಗಿ ರಂಗನಾಥ್‌ರವರು ಬೆರಗುಗೊಳಿಸುತ್ತಾರೆ.
ಜೀವನದಲ್ಲಿ ಸದಾಸಕ್ತಿ, ಪಾಲಿನ ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಮಾಣಿಕತೆ ಮತ್ತು ನಿರಂತರವಾದ ಪ್ರಯತ್ನಶೀಲತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿದ್ದೇ ಆದರೆ, ಯಾವುದೂ ಕಷ್ಟವಲ್ಲ, ಯಾರಿಗೂ ಕಷ್ಟವಲ್ಲ ಎನ್ನುವ ಇವರು ಹಾಗೆಯೇ ಇದ್ದಾರೆ ಸಹ!
ರಂಗನಾಥ್ ಅವರ ಸೂಕ್ಷ್ಮತೆಯ ರಾಜಕೀಯ ಜೀವನ, ವಂಶಾಡಳಿತಕ್ಕೆ ಅನುವುಮಾಡಿಕೊಡದ ಬದ್ಧತೆ, ಸಾಹಿತ್ಯದ ಸಕ್ರಿಯ ಓದು, ಸ್ಪಷ್ಟ ಹಾಗು ಪ್ರಗತಿಪರ ಚಿಂತನೆ, ಅಂತರ್ಮುಖಿಯಾಗಿ ನಡೆಸುವ ಸರ್ವೋದಯ ಆಲೋಚನೆಗಳು, ಮಾನವೀಯತೆಯನ್ನು ಸಾರುವ ನಿಲುವುಗಳು, ಬದುಕಿನ ಸಂಕೀರ್ಣತೆಗಳ ಬಗೆಗಿನ ಆತ್ಮಶೋಧ, ಎಂಥ ಸಂದರ್ಭದಲ್ಲೂ ಭ್ರಷ್ಟಗೊಳ್ಳದ ರಾಜಕೀಯ ಬದ್ಧತೆ, ನಿಷ್ಪಕ್ಷಪಾತ ಆಡಳಿತ ವೈಖರಿ ಹಾಗೂ ಅಪಾರವಾದ ರಾಜಕೀಯ ಅನುಭವಗಳು ಅನೇಕರಿಗೆ ಮಾರ್ಗಸೂಚಿಯಾಗಿದ್ದು ಮಾದರಿಯಾಗಬಲ್ಲವು. ನಮ್ಮ ಯುವ ರಾಜಕಾರಣಿಗಳಿಗೆ ಅನುಕರಣೀಯವಾದಂಥವೂ ಕೂಡ. ಇಂಥ ಪ್ರಬುದ್ಧ ರಾಜಕಾರಣಿಯ ಬದುಕು, ವ್ಯಕ್ತಿತ್ವ ಕಲುಷಿತಗೊಂಡ ರಾಜಕೀಯಕ್ಕೆ ಸಂಜೀವಿನಿಯಾಗಲೆಂದು ಆಶಿಸುತ್ತೇವೆ.

-ನಾಗತಿಹಳ್ಳಿ ರಮೇಶ್

ಪ್ರಗತಿಪರ ಚಿಂತನೆಗಳ ಸಂವೇದನಾಶೀಲ ರಾಜಕಾರಣಿ ಕೆ.ಎಚ್.ರಂಗನಾಥ್



ನಮ್ಮ ಸಾಮಾಜಿಕ (ಜಾತೀಯ) ವ್ಯವಸ್ಥೆಯಿಂದ ಹುಟ್ಟಿ ಬೇರುಬಿಟ್ಟಿದ್ದ ಅಸ್ಪೃಶ್ಯತೆ ಸ್ವಾತಂತ್ರ್ಯಾ ನಂತರ ಕಾನೂನಿನ ಪೆಟ್ಟಿಗೆ ಸಿಕ್ಕಿ ಸಾಮಾನ್ಯೀಕರಣವಾಗಿರುವಂತೆ ಕಂಡು ಬರುತ್ತಿದೆ. ಆದರೆ ನೋವಿನ ತಾಪ ಕಡಿಮೆಯಾಗಿಲ್ಲ. ಅಂದರೆ ಅದು ಸಾಮಾಜೀಕರಣವಾಗಿಲ್ಲ, ಅದೇ ತೀರಾ ನೋವಿನ ಸಂಗತಿ ಎಂಬ ಅರಿತನುರಿತ ರಾಜಕಾರಣಿ ಕೆ.ಎಚ್.ರಂಗನಾಥ್ ಅವರ ಅಭಿಪ್ರಾಯ ಅತ್ಯಂತ ಗಮನಾರ್ಹ!


ನಾವು ಇಂದು ಕರೆಯುತ್ತಿರುವ ಹಾಗೂ ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ರಾಜಕೀಯವೇ ಮೂಲ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಚರ್ಚಿಸಲು ಹಾಗೂ ಸಂದರ್ಶಿಸಲು ಒಬ್ಬ ಸೂಕ್ಷ್ಮಮತಿ ಹಾಗೂ ಪ್ರಾಮಾಣಿಕ ರಾಜಕಾರಣಿಗಾಗಿ ಹುಡುಕಿದಾಗ, ನಮಗೆ ಕಂಡದ್ದು ’ಕರ್ನಾಟಕ ಜೀವಂತ ರಾಜಕೀಯ ಗ್ರಂಥ’ ಎಂದೇ ಹೆಸರಾದ ಕೆ.ಎಚ್. ರಂಗನಾಥ್.
ಇವರು ಹುಟ್ಟಿದ್ದು ೧೯೨೬ ಅಕ್ಟೋಬರ್ ೨೦ ರಂದು ಹರಿಹರದಲ್ಲಿ. ಇವರ ತಂದೆ, ಸರ್ಕಾರಿ ನೌಕರ ಹಾಗೂ ಮೇಧಾವಿಯಾಗಿದ್ದ ಹರಿಹರಪ್ಪ. ತಾಯಿ ಸಿದ್ಧಮ್ಮ. ಇವರ ಅಜ್ಜ ಸಾಹಿತ್ಯದಲ್ಲಿ ಪಾಂಡಿತ್ಯಗಳಿಸಿದ್ದರು. ವೇದಾಂತ ಮತ್ತಿತರ ಜ್ಞಾನದ ಗಾಢ ಪ್ರಭಾವ ಉಂಟಾಗಿತ್ತು.
ಇವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹೊನ್ನಾಳಿ, ಜಗಳೂರು, ಹರಿಹರ, ಚಿತ್ರದುರ್ಗದಲ್ಲಿ ಆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಹಾಗೂ ಕಾನೂನನ್ನು ಅಧ್ಯಯನ ಮಾಡಿದರು.
ಇವರೊಳಗೆ ರಾಜಕೀಯ, ಹೋರಾಟದ ಭಾವನೆ ಚಿಕ್ಕಂದಿನಲೇ ಬೆಳೆಯಲಾರಂಭಿಸಿತು. ಚಿತ್ರದುರ್ಗದಲ್ಲಿನ ಕುಂಚಿಟಿಗರ ಹಾಸ್ಟೆಲ್‌ನಲ್ಲಿ ಇವರು ಮೆಟ್ರಿಕ್ ವಿದ್ಯಾರ್ಥಿಯಾಗಿದ್ದಾಗ ವಕೀಲರಾದ ಕೆಂಚಪ್ಪನವರ ಗಾಢ ಪ್ರಭಾವಕ್ಕೊಳಗಾದರು. ಕುಂಚಿಟಿಗರ ಹಾಸ್ಟೆಲ್‌ನಲ್ಲಿ ಸರ್ವಜಾತಿಯವರಿಗೂ ಅವಕಾಶವಿತ್ತು. ಈ ಹಾಸ್ಟೆಲ್ ನಡೆಸುತ್ತಿದ್ದವರು ಕೆಂಚಪ್ಪನವರೇ ಆಗಿದ್ದರು. ಆಗ ಎಲ್ಲ ಕಡೆ ಸ್ವಾತಂತ್ರ್ಯದ ಕೂಗು ಕೇಳಿಬರುತ್ತಿತ್ತು. ೧೯೪೦-೪೨ರ ಸಂದರ್ಭದಲ್ಲಿ ಭುಗಿಲೆದ್ದ ’ಕ್ವಿಟ್ ಇಂಡಿಯಾ’ ಚಳವಳಿ ಕೆಂಚಪ್ಪನವರ ಮೂಲಕ ರಂಗನಾಥ್‌ರ ಹಾಸ್ಟೆಲ್‌ಗೂ ಹರಿಯಿತು. ಬಿಸಿರಕ್ತದ ಹಲವಾರು ಯುವಕರು ಈ ಚಳುವಳಿಗೆ ನೆಗೆದರು. ಅದರಲ್ಲಿ ರಂಗನಾಥ್‌ರವರೂ ಇದ್ದರು. ಇದರ ಫಲವಾಗಿ ಜೈಲು ಸೇರಿದರು.
ಸೆರೆವಾಸವನ್ನು ಅನುಭವಿಸಿದ ಇವರ ಅಂತರಂಗತದಲ್ಲಿ ದೇಶದ ಬಗ್ಗೆ ಅಪಾರವಾದ ಗೌರವ ಹಾಗೂ ಕಾಳಜಿಗಳು ಬಲವಾಗತೊಡಗಿದವು. ಸಮಾಜದ ಅಸಮಾನತೆ, ಅಸ್ಪೃಶ್ಯತೆಗಳ ಅನುಭವ ಇವರೊಳಗೆ ಪ್ರಗತಿಪರ ಕ್ರಾಂತಿಯ ಬಲವನ್ನು ಸೃಷ್ಟಿಸಿತು. ಚಿತ್ರದುರ್ಗದಲ್ಲಿ ಆರಂಭವಾದ ಸ್ವಾತಂತ್ರ್ಯಾಂದೋಲನದಲ್ಲಿ ಎಸ್.ನಿಜಲಿಂಗಪ್ಪ, ಭೀಮಪ್ಪನಾಯ್ಕ, ಕೆಂಚಪ್ಪ, ರಾಜಶೇಖರ್ ಹಿರೇಮಠ್, ಬಳ್ಳಾರಿ ಸಿದ್ದಮ್ಮ ಮುಂತಾದ ಧುರೀಣರು ಪಾಲ್ಗೊಂಡಿದ್ದರು. ಇಂಥವರ ಜೊತೆ ಅನುಭವ ಪಡೆಯುವ ಅವಕಾಶ ರಂಗನಾಥ್‌ರವರಿಗೂ ದೊರಕಿತು.
ಇವರ ಬದುಕಿನಲ್ಲಿ ರಾಜಕೀಯದಷ್ಟೇ ಸಹಜವಾಗಿ ಸಾಹಿತ್ಯಾಭ್ಯಾಸವೂ ಬೆಳಯತೊಡಗಿತು. ಆಲಿವರ್‌ಗೋಲ್ಡ್‌ಸ್ಮಿತ್, ವರ್ಡ್ಸ್‌ವರ್ತ್, ಶೇಕ್ಸ್‌ಪಿಯರ್ ಮೊದಲಾದವರ ಬರೆಹಗಳು ಇವರೊಳಗೆ ಪರಿಣಾಮಬೀರಿದವು. ಆಂಗ್ಲಭಾಷೆಯಲ್ಲಿದ್ದ ಹಿಡಿತ ಮತ್ತಷ್ಟು ಗಾಢವಾಯಿತು. ಗೋಲ್ಡ್‌ಸ್ಮಿತ್‌ನ ’ಸಿಟಿ ನೈಟ್ ಪೀಸ್ ಇವರಲ್ಲಿ ಸಮಾಜವಾದದ ಬಗ್ಗೆ ಒಲವುಂಟುಮಾಡಿತು. ಕನ್ನಡದ ಕುವೆಂಪು, ಬೇಂದ್ರೆ, ಅನಕೃ, ಬಸವರಾಜ ಕಟ್ಟೀಮನಿ, ವೆಂಕಣ್ಣಯ್ಯ, ಶಿವರಾಮಕಾರಂತ, ಹಿರೇಮಲ್ಲೂರು ಈಶ್ವರನ್ ಮೊದಲಾದವರ ಬರಹಗಳನ್ನು ಗಂಭೀರವಾಗಿ ಓದುತ್ತಿದ್ದರು. ತ.ರಾ.ಸು. ಇವರ ಗೆಳೆಯರಾಗಿದ್ದರು. ಕೈಲಾಸಂ ನಾಟಕಗಳು ಅದರಲ್ಲೂ ’ಕರ್ಣ , ’ಏಕಲವ್ಯ ಮೊದಲಾದವು ಇವರಿಗೆ ವಿಚಿತ್ರ ರೋಮಾಂಚನ ಉಂಟುಮಾಡಿದ್ದವು. ಜೈಲಿನ ದಿನಗಳಲ್ಲಿ ಓದಿದ ಗಾಂಧೀಜಿಯವರ ’ಯಂಗ್ ಇಂಡಿಯಾ’, ನೆಹರೂ ಅವರ ’ಡಿಸ್ಕವರಿ ಆಫ್ ಇಂಡಿಯಾ’ ಕೃತಿಗಳು ಇವರ ಮೇಲೆ ತೀವ್ರ ಪ್ರಭಾವ ಬೀರಿದವು. ಆತ್ಮಕತೆಗಳ ಬಗ್ಗೆ ಹೆಚ್ಚಿನ ಒಲವುಂಟಾಯಿತು.
ಮಾರ್ಕ್ಸ್ ಮತ್ತು ಲೆನಿನ್‌ರನ್ನು ಆಳವಾಗಿ ಅಭ್ಯಾಸಮಾಡಿದ್ದ ರಂಗನಾಥ್‌ರವರಿಗೆ ಸಮಾಜ ಬದಲಾಗಬೇಕೆಂಬ ಉತ್ಕಟ ಕಾಳಜಿಯಿತ್ತು. ಈ ಕಾಳಜೀಯನ್ನೇ ರಾಜಕೀಯ ದೃಷ್ಟಿಯನ್ನಾಗಿಸಿಕೊಂಡರು. ಕರ್ನಾಟಕದ ಏಕೀಕರಣ ಚಳುವಳಿಗೂ ತೊಡಗಿಕೊಂಡರು. ೧೯೪೮ರಿಂದ ೫೨ರವರೆಗೆ ’ಪ್ರಜಾಸೋಷಿಯಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಂತರ ೧೯೬೯ರ ತನಕ ಅದೇ ಪಾರ್ಟಿಯ ಜನರಲ್ ಸೆಕ್ರೆಟರಿಯಾಗಿ ಕಾರ‍್ಯನಿರ್ವಹಿಸಿದರು. ಈ ಸಂದರ್ಭ ಅವರ ರಾಜಕೀಯದ ಪಯಣವನ್ನು ಹೆಚ್ಚು ಸ್ಪಷ್ಟ ಹಾಗು ಖಚಿತಗೊಳಿಸಿತು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆ ಪಕ್ಷದಲ್ಲಿ ರಾಷ್ಟ್ರದ ಬಗ್ಗೆ ಮಿಡಿಯುವ ಮಹಾನ್ ನಾಯಕರುಗಳಿದ್ದರು ಇಂಥವರ ಬದುಕು ಹಾಗು ಕಾಳಜಿಗಳು ರಂಗನಾಥ್‌ರವರು ಒಬ್ಬ ಶ್ರೇಷ್ಟ ನಾಯಕರಾಗಿ ರೂಪುಗೊಳ್ಳಲು ಪ್ರೇರಕವಾದವು. ೧೯೭೨ ರಿಂದ ೭೪ ರವರೆಗೆ ’ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷರಾದರು. ಅದಕ್ಕೂ ಮೊದಲು ೧೯೭೧-೭೨ರವರೆಗೆ ಉಪಾಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ದಾಖಲಾರ್ಹ ಸೇವೆ ಸಲ್ಲಿಸಿದರು.
೧೯೬೨ ಇವರ ರಾಜಕೀಯ ಜೀವನದ ಪ್ರಮುಖ ಘಟ್ಟ. ಆಗ ರಾಜ್ಯ ಸಭೆಯ ಸದಸ್ಯರಾದರು. ೧೯೮೪-೮೯ರಲ್ಲಿ ಲೋಕಸಭೆಗೆ ಆಯ್ಕೆಯಾದರು. ದೇವರಾಜ ಅರಸು ಅವರ ಸಾಮಾಜಿಕ ಧೋರಣೆ ಹಾಗೂ ಆಡಳಿತದ ಮಾನವೀಯತೆ ಇವರಿಗೆ ಅತ್ಯಂತ ಪ್ರಿಯವಾಗಿತ್ತು. ದಿನಕಳೆದಂತೆ ಅಂಬೇಡ್ಕರ್, ಲೋಹಿಯಾ, ಗಾಂಧಿ ಮುಂತಾದವರ ಪ್ರಭಾವ ಗಾಢವಾಗತೊಡಗಿತು. ಬುದ್ಧ ಇವರ ಆಲೋಚನೆ ಮತ್ತು ಜೀವನವಿಧಾನವನ್ನು ಆವರಿಸತೊಡಗಿದ. ಸತ್ಯ, ಸರಳ ಹಾಗೂ ಜನಪರ ವ್ಯಕ್ತಿಯಾಗಿ ಕಾರ‍್ಯ ನಿರ್ವಹಿಸುತ್ತಲೇ ಅಂತರ್ಮುಖಿಯಾಗಿ ತನ್ನನ್ನು ತಾನು ವಿಮರ್ಶಿಸಿಕೊಳ್ಳುವುದನ್ನು ರಂಗನಾಥ್ ಅವರು ಸಾಹಿತ್ಯಾಭ್ಯಾಸ ಹಾಗೂ ಮಹಾತ್ಮರ ಪ್ರಭಾವದಿಂದ ಕಲಿತರು. ಹಿಂಸೆಯ ನೆಲೆಯಲ್ಲಿ ಸಮಾಜದ ಬದಲಾವಣೆಯಾಗುವುದೇ ಕ್ರಾಂತಿ ಎಂದು ಕೂಗುವರ ನಡುವೆ, ಪ್ರೀತಿ, ಶಾಂತಿ ಹಾಗು ವ್ಯಕ್ತಿಗತ ಜ್ಞಾನದ ಬಲದಿಂದ ಸಮಾಜ ಬದಲಾವಣೆ ಸಾಧ್ಯ ಎಂದು ನಂಬಿದ ಇವರು ೧೯೭೩ರಲ್ಲಿ ರಾಜ್ಯ ಸಂಪುಟ ದರ್ಜೆಯ ಸಚಿವರಾದರು.
ಸಾರಿಗೆ ಸಚಿವರಾಗಿ, ಸಹಕಾರ ಸಚಿವರಾಗಿ, ಶಿಕ್ಷಣ ಸಚಿವರಾಗಿ, ಕೃಷಿ ಸಚಿವರಾಗಿ, ಅರಣ್ಯ ಸಚಿವರಾಗಿ, ಗೃಹ ಸಚಿವರಾಗಿ, ಸಂಸದೀಯ ವ್ಯವಹಾರಗಳ ಸಚಿವರಾಗಿ, ಲೋಕೋಪಯೋಗಿ ಸಚಿವರಾಗಿ, ೧೯೭೩-೧೯೮೦ ಮತ್ತು ೧೯೯೨-೯೪ ರ ತನಕ ಆಡಳಿತ ನಡೆಸಿದ್ದಾರೆ. ಮಂತ್ರಿಯಾಗಿ ರಂಗನಾಥ್ ಅವರು ಸಲ್ಲಿಸಿದ ಸೇವೆ ಗಣನೀಯವಾದುದು.
೧೯೮೧ ರಿಂದ ೮೩ರ ತನಕ ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದರು. ಇವರು ಯಾವ ಸಂದರ್ಭದಲ್ಲೂ, ರಾಜ ವೈಭವವನ್ನು ಅಪೇಕ್ಷಿಸದೆ, ಗಾಂಧೀಯ ಸರಳತೆಯನ್ನು ರೂಢಿಸಿಕೊಂಡರು. ಯೂರೋಪ್ ಮತ್ತಿತರೆ ರಾಷ್ಟ್ರಗಳಲ್ಲಿ ಪ್ರವಾಸಮಾಡಿ ಅಲ್ಲಿನ ಸಮಾಜ, ಆರ್ಥಿಕತೆ, ಶಿಕ್ಷಣ ಹಾಗೂ ವೈಜ್ಞಾನಿಕತೆಗಳನ್ನು ಗ್ರಹಿಸಿದರು. ಇವರ ವಿದೇಶಿ
ಅನುಭವಗಳು ನಮ್ಮ ರಾಜ್ಯದ ಜನತೆಯ ಆಭಿವೃದ್ಧಿಗಾಗಿ ಉಪಯೋಗವಾಗತೊಡಗಿದವು.

- ನಾಗತಿಹಳ್ಳಿ ರಮೇಶ್

Saturday, August 13, 2011

ವಚನಕಾರ್ತಿಯರ ಧ್ವನಿಗಳು


ಸಮಾನವಾದ ಸಾತ್ವಿಕ ಪ್ರೇರಣೆ ಹೊಂದಿದ. ಸಂಕಲ್ಪ ಹೊಂದಿದ ಶರಣ ಸಮುದಾಯದಿಂದ, ಜನತೆಗೆ ಹತ್ತಿರವಾದ ದೇಶಿ ಭಾಷೆಯಲ್ಲಿ ಸೃಷ್ಟಿಯಾದದ್ದು ವಚನ ಸಾಹಿತ್ಯ. ಈ ಸಾಹಿತ್ಯ ಮೂಡಿ ಬಂದ ಕಾಲ ಬದಲಾವಣೆಯ ಕಾಲ ಎನ್ನುವುದಕ್ಕಿಂತ ಪರಿವರ್ತನೆಯ ಕಾಲ ಎನ್ನಬಹುದು. ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಬದಲಾವಣೆ ಆದವು. ಪರಂಪರಾನುಗತವಾಗಿ ಬಂದಿದ್ದ ಜಾತಿ-ಮತ, ವರ್ಣ-ವೃತ್ತಿ ಭೇದಗಳಂಥ ಭಾಷೆಗಳನ್ನು ಕಿತ್ತೊಗೆದು ಐಕ್ಯತೆಯನ್ನು ಸ್ಥಾಪಿಸಲು ಶರಣರು ಪ್ರಯತ್ನಿಸಿದರು. ಅವರಲ್ಲಿ ಸ್ತ್ರೀಯು ಸಹ ಸಮಾನ ಅವಕಾಶ ಹೊಂದಿದಳು. ತನ್ನನ್ನು ಸುತ್ತಿಕೊಂಡಿದ್ದ ಸಂಕೋಲೆಗಳಿಂದ ಮುಕ್ತವಾಗಿ ಹೊರಬಂದಳು. ತನ್ನ ವೈಚಾರಿಕ ಶಕ್ತಿಯಿಂದ ಬೆಳೆಯಲು ಪ್ರಯತ್ನಿಸಿದಳು. ಏಕಕಾಲಕ್ಕೆ ಪುರುಷಾಧಿಪತ್ಯ ಮತ್ತು ಪುರೋಹಿತಶಾಹಿಯನ್ನು ವಿರೋಧಿಸಿದಳು. ಸುಮಾರು ೩೫ ಜನ ವಚನಕಾರ್ತಿಯರು ಸು.೧೩೫೦ ವಚನಗಳನ್ನು ರಚಿಸಿದ್ದರೆ. ಇದರಲ್ಲಿ ಶೂದ್ರಾತಿಶೂದ್ರ ವಚನಕಾರ್ತಿಯರೂ ಇದ್ದಾರೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ ದಲಿತ ವಚನಕಾರ್ತಿಯರಾದ ಕಾಳವ್ವ, ಕೇತಲದೇವಿ, ಕಾಮಮ್ಮ, ರೆಮ್ಮವ್ವೆ, ಲಿಂಗಮ್ಮ, ಗೋಗವ್ವೆ ಪ್ರಮುಖರು.
ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಪುರುಷನೊಂದಿಗೆ ಸಮಾನ ನೆಲೆಯಲ್ಲಿ ಪ್ರವೇಶ ಇದ್ದಿತಲ್ಲದೇ, ಅನುಭಾವ ಗೋಷ್ಠಿಯಲ್ಲಿ ವಾದ ಮಂಡನೆಗೆ ಅವಕಾಶ ನೀಡಲಾಗಿತ್ತು. ತಮ್ಮ ವಚನಗಳ ಮುಖಾಂತರ ಕೆಲವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಿದರು. ಸಂಪ್ರದಾಯ ಬಂಧನವಾಗಿದ್ದ ಸ್ತ್ರೀ ಪುರುಷನಂತೆ ಸ್ವತಂತ್ರವಾಗಿ ದೇವರನ್ನು ಪೂಜಿಸಬಲ್ಲಳು, ಧರ್ಮ ಗ್ರಂಥವನ್ನು ಓದಬಲ್ಲಳು, ಮೋಕ್ಷ ಪಡೆಯಬಲ್ಲಳು, ಪುರುಷನಂತೆ ದೀಕ್ಷೆ ಹೊಂದುವ ಅಧಿಕಾರ ಇದೆ ಎಂದು ಬಸವಣ್ಣನವರು ಸಾರಿದರು. ಉಪನಯನ ಸಂದರ್ಭದಲ್ಲಿ ತನ್ನ ಅಕ್ಕನಿಗೆ ಇಲ್ಲದ ಜನಿವಾರ ನನಗೂ ಬೇಡ ಎಂದು ಉಪನಯನ ಸಂಸ್ಕಾರವನ್ನೇ ಧಿಕ್ಕರಿಸಿದ ಬಸವಣ್ಣ ಮೊದಲ ಮಹಿಳಾವಾದಿ. ಮಹಿಳೆಯ ಕೈಗೆ ಇಷ್ಟಲಿಂಗ ಕೊಟ್ಟು ಅಧ್ಯಾತ್ಮ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದರು. ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಜ್ಞಾನದಾಸೋಹ ನೀಡಿದರು.
ವಚನಕಾರ್ತಿಯರ ಕೆಲವು ವಿಚಾರಗಳನ್ನು ಅವರ ವಚನಗಳ ಮುಖಾಂತರ ನೋಡಬಹುದು.
ಕಾಯಕ:- ವಚನಕಾರ್ತಿಯರು ಕಾಯಕ ತತ್ವದ ಮೂಲಕ ಆರ್ಥಿಕ ಸ್ವಾತಂತ್ರ್ಯ ಅನುಭವಿಸಿದರು. ಆಯ್ದಕ್ಕಿ ಲಕ್ಕಮ್ಮ ಕಾಯಕ ತತ್ವದಂತೆ ಅಕ್ಕಿ ಆಯ್ದು ತಂದು ಜೀವನ ಸಾಗಿಸುತ್ತಾಳೆ. ’ಆವ ಕಾಯಕ ಮಾಡಿದೊಡೆ ಒಂದೇ ಕಾಯಕ’ ಎಂದು ಗಂಗಮ್ಮ ಹೇಳಿದಂತೆ ಕಾಯಕದಲ್ಲಿ ಮೇಲು-ಕೀಳಿಲ್ಲ. ಗಂಗೇಶ ಮಸಣಯ್ಯನ ಪುಣ್ಯಸ್ತ್ರೀ ಅಕ್ಕಮ್ಮ "ಖಂಡಿತ ಕಾಯಕದ ವ್ರತಾಂಗಿಯ ಮಾಡಿದ ಇರವೆಂತಂದಡೆ ಕೃತ್ಯದ ನೇಮವೆ ಸುಯಿಧಾನವೆ ಅಚ್ಚೊತ್ತಿದಂತೆ ತಂದು ಒಡೆಯರು ಭಕ್ತರು ತನ್ನ ಮಡದಿ ಮಕ್ಕಳ ಸಹಿತ ಒಡಗೂಡಿ ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ ಈಡಿಲ್ಲದಂತೆ" ಭಕ್ತಿ-ಶ್ರದ್ಧೆಯಿಂದ ಕಾಯಕ ಮಾಡಿ ಬಂದ ಆದಾಯವನ್ನು ಸದ್ವಿನಿಯೋಗ ಮಾಡುವ ಪರಿಯನ್ನು ಅಕ್ಕಮ್ಮ ಹೇಳಿದ್ದಾಳೆ. ಅದೇ ರೀತಿ ಲಕ್ಕಮ್ಮನ ಪತಿ ಮಾರಯ್ಯ ಪ್ರತಿ ದಿನ ತರುವುದಕ್ಕಿಂತ ಹೆಚ್ಚು ಅಕ್ಕಿ ತಂದಾಗ ’ನಮಗೆ ಎಂದಿನಂದವೆ ಸಾಕು ಮತ್ತೆ ಕೊಂಡು ಹೋಗಿ ಅಲ್ಲಿಯೇ ಸುರಿ’ ಎಂದು ಪತಿಗೆ ಹೇಳುತ್ತಾಳೆ. ಈ ತತ್ವದ ಹಿನ್ನೆಲೆ ಅಸಂಗ್ರಹ. ಅಂದಿನ ಕಾಯಕ ಅಂದಿಗೆ ಬೇಕಾದಷ್ಟು ಅದರಲ್ಲಿ ಕೆಲಭಾಗ ಗುರು-ಲಿಂಗ-ಜಂಗಮಕ್ಕೆ ವಿನಿಯೋಗವಾಗಬೇಕು. ಕಾಳವ್ವೆ. ಕನ್ನಡಿಕಾಯಕ ರೇವಮ್ಮೆ, ಕೊಟ್ಟಣದ ಸೋಮಮ್ಮ ಇವರೆಲ್ಲ ಕಾಯಕ ಶರಣೆಯರು.
"ಎಮ್ಮತಾಯಿ ನಿಂಬಿಯವ್ವೆ ನೀರನೆರೆದುಂಬುವಳು.
ಎಮ್ಮಕ್ಕ ಕಂಚಿಯಲ್ಲಿ ಬಾಣಸವೆ ಮಾಡುವಳು" ಎಂಬ ವಚನದಲ್ಲಿ ಆತ್ಮಗೌರವದ ಕಾಯಕ ಮಹತ್ವ ಕಂಡುಬರುವುದು.
ಸ್ತ್ರೀ ಪುರುಷ ಭೇದ:- ಸ್ತ್ರೀ ವಚನಕಾರರು ತಮ್ಮನ್ನು ತಾವು ಮೊದಲು ಗುರುತಿಸಿಕೊಂಡರು. ಇದು ಅವರು ಮಾಡಿದ ಮೊದಲ ಕ್ರಾಂತಿ. ಸಮಾನತೆಯ ವಾದವನ್ನು ಎತ್ತಿಹಿಡಿದರು. "ಮೊಲೆ ಮೂಡಿ ಇದ್ದದ್ದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಮೀಸೆ ಕಠಾರವಿದ್ದಡೆ ಗಂಡೆಂದು ಪ್ರಮಾಣಿಸಲಿಲ್ಲ ಅದು ಜಗದ ಹಾಗೆ ಬಲ್ಲವರ ನೀತಿಯಲ್ಲ ಎಂದು ಸತ್ಯಕ್ಕ ’ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಡಲುಂಟೇ’ ಎಂದು ಆಯ್ದಕ್ಕಿ ಲಕ್ಕಮ್ಮ, "ನಿಮ್ಮ ಭಕ್ತಿ ಸೂತ್ರದಿಂದ ಎನ್ನ ಸ್ತ್ರೀತ್ವ ನಿಮ್ಮ ಪಾಠದಲ್ಲಿ ಅಡಗಿತ್ತು ಎನಗೆ ಬೇಧ ಮಾತಿಲ್ಲ ಎಂದು ಮೋಶಿಗೆಯ ಮಹಾದೇವಿ, ಭಕ್ತಿಜ್ಞಾನ ಆಧ್ಯಾತ್ಮ ವಷಿಯಗಳ ಬಗ್ಗೆ ಸ್ತ್ರೀಪುರುಷರೆಂಬ ಭೇದ ಅರ್ಥಹೀನ ಎಂದರು. ಗಣೇಶ ಮಸಣಯ್ಯನ ನಿಜಪತ್ನಿ ಹೆಣ್ಣನ್ನು ಹೀನಾಯವಾಗಿ ಕಾಣುವವರಿಗೆ
"ಹೊನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಮಣ್ಣಬಿಟ್ಟು ಲಿಂಗವನೊಲಿಸಬೇಕೆಂಬರು
ಮಣ್ಣಿಂಗೂ ಲಿಂಗಕ್ಕೂ ವಿರುದ್ಧವೇ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಹೆಣ್ಣನ್ನು ಸಂಸಾರವನ್ನು ಬಿಟ್ಟರೆ ಮುಕ್ತಿ ಸಾಧ್ಯ ಅನ್ನುವುದು ಮೂರ್ಖತನ. ಧಾರ್ಮಿಕ ವಿಧಿವಿಧಾನಗಳಲ್ಲಿ ಹೆಣ್ಣಿಗೂ ಸಮಪಾಲು ಇದೆ. ದೇವರಿಗೆ ವಿರುದ್ಧವಲ್ಲದ ಅವಳು ಮನುಷ್ಯರಿಗೆ ಹೇಗೆ ವಿರುದ್ಧಳಾಗುವಳು? ಈ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಾಳೆ.
ಸ್ತ್ರೀವಾದ
ಅಕ್ಕಮಹಾದೇವಿ ಸ್ತ್ರೀಪರ ಹೋರಾಟಕ್ಕೆ ನಾಂದಿ ಹಾಕಿದಳು. ಭದ್ರಬುನಾದಿ ಹಾಕಿದಳು. ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಗಂಡ ಕೌಶಿಕನನ್ನೇ ಧಿಕ್ಕರಿಸಿ, ಸಮಾಜಮುಖಿಯಾದ ಶರಣ ಸಮುದಾಯ ಸೇರುತ್ತಾಳೆ. ಅವಳ ಬದುಕೇ ಬಂಡಾಯ. ಸಮಾಜದ ಕಟ್ಟಳೆ ಮೀರಿ ಬದುಕಿದಳು. ಶರಣೆಯರ ವಚನ ಕ್ರಾಂತಿ ಸ್ತ್ರೀ ಸ್ವಾತಂತ್ರ್ಯದ ಪ್ರಥಮ ಚಳವಳಿ ಎನ್ನಬಹುದು. ಅಕ್ಕ ಮನೆ ಬಿಟ್ಟು ಹೊರಡುವಾಗ ತಂದೆ-ತಾಯಿ ಮನೆಗೆ ಹಿಂದಿರುಗಿ ಬಾ ಎಂದಾಗ-
ಮನ-ಮನ ತಾರ್ಕಣೆಗೊಂಡು ಅನುಭವಿಸಲು
ನೆನಹೆ ಘನವಹುದಲ್ಲದೆ ಅದು ಹವಣದಲ್ಲಿ ನಿಲುವದೇ ನಿನ್ನ ತಾಯಿ ತವರನೊಲ್ಲೆ ಹೋಗಾ?’ ಎಂದು ಅಧೀನತೆಯನ್ನೂ ನಿರಾಕರಿಸಿದ ದಿಟ್ಟ ಸ್ತ್ರೀ ಅಕ್ಕ ಯಾವುದಕ್ಕೂ ಚಿಂತಿಸದೇ-
ಹಸಿವಾದೊಡೆ ಭಿಕ್ಷಾನ್ನಗಳುಂಟು ತೃಷೆಯಾದೊಡೆ ಕೆರೆಭಾವಿಗಳುಂಟು, ಶಯನಕೆ ಹಾಳು ದೇಗುಲಗಳುಂಟು ಆತ್ಮ ಸಂಗಾತಕ್ಕೆ ಚೆನ್ನ ಮಲ್ಲಿಕಾರ್ಜುನನುಂಟು’ ಎನ್ನುತ್ತಾಳೆ. ರಾಜತ್ವವನ್ನು ಐಹಿತ ಸುಖಭೋಗಗಳನ್ನು ತ್ಯಜಿಸಿ ಹೊರಡುತ್ತಾಳೆ. ಪುರುಷ ಪ್ರಧಾನ ಮೌಲ್ಯಗಳನ್ನು ತಿರಸ್ಕರಿಸಿದ್ದಾಳೆ.
ಶರಣೆ ಗೊಗೆವ್ವೆ ಪುರುಷ ಪ್ರಧಾನ ವ್ಯವಸ್ಥೆಗೆ ಈ ರೀತಿ ಸವಾಲು ಹಾಕುತ್ತಾಳೆ.
"ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲದೆ ನಾಸ್ತಿನಾಥನು ಪರಿಪೂರ್ಣನೆಂಬೆ."
ಗಂಡು ಹೆಣ್ಣನ್ನು ಮೋಹಿಸಿದಾಗ ಹೆಣ್ಣು ಆತನ ಒಡವೆ. ಆದರೆ ಹೆಣ್ಣು ಗಂಡನ್ನು ಮೋಹಿಸಿದಾಗ ಅವನು ಅವಳ ಒಡವೆಯೇ ಎಂದು ಪ್ರಶ್ನಿಸುತ್ತಾಳೆ. ಈ ಪ್ರಶ್ನೆ ಒಡೆತನ ಜಿಜ್ಞಾಸೆಯ ಮೌಲ್ಯದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಪಡೆಯಲು ಅಸಮರ್ಥವಾಗಿದೆ ಸಮಾಜ.
ಉರಿಲಿಂಗಪೆದ್ದಿಗಳ ನಿಜ ಸ್ತ್ರೀ ಕಾಳವ್ವೆ ಸ್ತ್ರೀ ವಾದದ ಮೊದಲ ಕಾಳು. ಜಾತಿ ಭೇದವ ಕಿತ್ತು ಶೂದ್ರ ಸ್ತ್ರೀ ಶಿವಶರಣೆಯಾದದ್ದು ಒಂದು ಸಾಧನೆ. ಆಯ್ದಕ್ಕಿ ಲಕ್ಕಮ್ಮ ಪತಿ ತಪ್ಪು ಮಾಡಿದಾಗ ತಿದ್ದಿ ಹೇಳಿದಳು. "ಆಸೆ ಎಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ ಎಂದು ಕಾಯಕದ ಮಹತ್ವ ಹೇಳಿದಳು. ಅನೇಕ ವಚನಕಾರ‍್ತಿಯರು, ಜಾತಿ, ಧರ್ಮ ಹೆಣ್ಣು ಗಂಡು ತಾರತಮ್ಯಗಳನ್ನು ಖಂಡಿಸಿ, ತಾವು ಅನುಭವಿಸಿದ ನೋವು ದೌರ್ಜನ್ಯಗಳನ್ನು ಮೆಟ್ಟಿ ನಿಂತು ಆತ್ಮಬಲದಿಂದ ಬಯಲನ್ನು ಸಾಧಿಸಿದರು.
ಜಾತಿ ವ್ಯವಸ್ಥೆ
ಕಾಳವ್ವೆ ಜಾತಿ ವ್ಯವಸ್ಥೆಯ ಬಗ್ಗೆ ಹೇಳುತ್ತ, "ಕುರಿಕೋಳಿ ತಿರಿಮೀನು ತಿಂಬವರಿಗೆಲ್ಲ ಕುಲಜರೆಂಬವರು ಶಿವಗೆ ಪಂಚಾಮೃತವೆ ಕರೆವ ಪಶುವ ತಿಂಬ ಮಾದಿಗ ಕೀಳು ಎಂಬುವರು. ಅವರೆಂತು ಕೀಳು ಜಾತಿಯಾದರೂ ಜಾತಿಗಳು ನೀವೇಕೆ ಕೀಳಾಗಿರೋ ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು. ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಂಗೆ ಶೋಭಿತವಾಯಿತು. ಅದೆಂತೆಂದಡೆ ಸಿದ್ಧಲಿಕೆಯಾಯಿತು ಸಗ್ಗಳೆಯಾಯಿತು. ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ
ಇಲ್ಲಿ ಮೇಲ್ವರ್ಗದವರಿಂದ ತನ್ನ ಜನಕ್ಕೆ ಆದ ಅನ್ಯಾಯವನ್ನೂ ನೇರವಾಗಿ ಪ್ರತಿಬಿಂಬಿಸುತ್ತಾಳೆ. ಶರಣೆ ಬೊಂತಾದೇವಿಯ ಮಾತುಗಳನ್ನು ಕೇಳಿ
"ಊರ ಒಳಗಣ ಬಯಲು ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು ಊರ ಹೊರಗೆ ಹೊಲೆ ಬಯಲೆಂದುಂಟೇ?
ಎಲ್ಲಿ ನೋಡಿದಡೆ ಬಯಲೊಂದೇ"
ಎಂದು ಪ್ರಶ್ನಿಸಿ ಬಯಲಿಗೆ ಇಲ್ಲದ ಜಾತಿ ಬಯಲಾಗುವ ಮನುಷ್ಯನಿಗೆ ಹೇಗೆ ಬಂದಿತು ಎಂದು ಪ್ರಶ್ನಿಸುವಳು. ಕದಿರೆಯ ರೆಮ್ಮವ್ವೆ ಕೂಡ
"ನಾ ತಿರುಗುವ ರಾಟೆಯ ಕುಲಜಾತಿ ಕೇಳಿರಣ್ಣಾ?" ಎಂದು ಸಹ ಪ್ರಶ್ನಿಸುವಳು.
ಡಾಂಭಿಕತೆ:- ಅಕ್ಕಮ್ಮ ಶರಣೆ ಉದರ ಪೋಷಣೆಗೆ ವೇಷ ಹಾಕುವವರನ್ನು ಕುರಿತು "ವೇಷ ಎಲ್ಲಿಯದು? ಸೂಳೆಯಲ್ಲಿ ಡೊಂಬನಲ್ಲಿ ಬೈರೂಪನಲ್ಲಿರದೆ? ವೇಷವ ತೋರಿ ಒಡಲ ಹೊರೆವ, ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೋ? ಅಡಾರವೇ ಪ್ರಾಣವಾದ ರಾಮೇಶ್ವರ ಲಿಂಗದಲ್ಲಿ?" ಎಂದು ಢಂಬಾಚಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೇ ರೀತಿ ಹೊರವೇಷದ ಸ್ವಾಮಿಯನ್ನು ಕಂಡು
’ಬತ್ತಲೆ ಇದ್ದವರೆಲ್ಲ ಕತ್ತೆಯ ಮರಿಗಳು
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ
ಆವ ಪ್ರಕಾರವಾದಡೇನು ಅರಿವೆ ಮುಖ್ಯವಲ್ಲ
ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ಆಚಾರ ಮುಖ್ಯ ಹೊರತು ಬಾಹ್ಯ ಆವರಣವಲ್ಲ ಎನ್ನುತ್ತಾಳೆ.
ಇನ್ನೊಬ್ಬ ಶರಣೆ ಗುಡ್ಡಕ್ಕ ’ತನು ಬತ್ತಲೆಯಾದಡೇನು ಮನ ಬತ್ತಲೆಯಾಗದನ್ನಕ್ಕ’ ಎಂದು ಅಕ್ಕಮ್ಮ ’ಜಗವ ಮೆಚ್ಚಬೇಕೆಂಬ ಶೀಲವ ನಾನರಿಯೆ’ ಎಂದು, ರಾಯಮ್ಮ ’ದೇಶದೇಶವ ತಿರುಗಿ ಮಾತುಗಳ ಕಲಿತು ಗ್ರಾಸಕ್ಕೆ ತಿರುಗುವ ದಾಸಿವೇಸಿಯ ಮಕ್ಕಳ ವಿರಕ್ತರೆಂಬೆನೇ" ಎಂದು ಹೇಳುತ್ತಾಳೆ. ಹೀಗೆ ಉದರಕ್ಕಾಗಿ ವೇಷ ಧರಿಸಿದವರನ್ನು ನಂಬಲಿಲ್ಲ. ಅಮುಗೆ ರಾಯಮ್ಮ, ಕಾವಿಯ ಹಿಂದಿರುವ ಅನೈತಿಕ ಕಾರ್ಯ ಮಾಡುವವರ ಕುರಿತು"
ಕಾವಿ ಕಾಷಾಂಬರವ ಹೊಯ್ದ ಕಾಮವಿಕಾರಕ್ಕೆ ತಿರುಗುವ
ಕರ್ಮಿಗಳ ಮುಖವ ನೋಡಲಾಗದು
ಜಂಗಮವಾಗಿ ಜಗದಿಚ್ಛೆಯ ನುಡಿವ
ಜಂಗುಳಿಗಳ ಮುಖವ ನೋಡಲಾಗದು
ಲಿಂಗೈಕ್ಯರೆನಿಸಿಕೊಂಡು ಅಂಗ ವಿಕಾರಕ್ಕೆ ತಿರುಗುವ
ಲಿಂಗದ್ರೋಹಿಗಳ ಮುಖವ ನೋಡಲಾಗದು
ಕಾಣಾ ಅಮುಗೇಶ್ವರ ಲಿಂಗವೆ"- ಎನ್ನುತ್ತಾರೆ.
ವ್ರತಭಷ್ಟರಿಂದ ವ್ರತಹೀನರಿಂದ ಸಾಮಾಜಿಕ ಧಾರ್ಮಿಕ ವಾತಾವರಣ ಹದಗೆಡುತ್ತದೆ ಅಂಥ ಕಂಟಕರನ್ನು ನಾಶ ಮಾಡುವೆ ಎಂದು ಕಾಲಕಣ್ಣಿಯ ಕಾಮಮ್ಮ ಈ ರೀತಿ ಹೇಳುತ್ತಾಳೆ.
ಎನ್ನ ಕರಣಂಗಳ ಲಿಂಗದಲಿ ಕಟ್ಟುವೆ
ಗುರು-ಲಿಂಗ-ಜಂಗಮದ ಕಾಲಕಟ್ಟುವೆ
ವ್ರತಭ್ರಷ್ಟನಿಟ್ಟೊರೆಸುವೆ ಸುಟ್ಟು ತುರುತುರುನೆ
ತೂರುವೆ ನಿರ್ಭೀತಿ ನಿಜಲಿಂಗದಲ್ಲಿ ಎಂದಿದ್ದಾಳೆ
ಹಾಗೆ ಕಾಲಕೂಟಯ್ಯಗಳ ನಿಜಸ್ತ್ರೀ ರೇಚವ್ವೆ
ಬಂಜೆಯಾವಿಂಗೆ ಕ್ಷೀರವುಂಟೆ
ವ್ರತಹೀನರ ಬೆರೆಯಲುಂಟೆ
ನೀ ಬೆರೆದಡೂ ಬೆರೆ ನಾನೊಲ್ಲೆ
ನಾ ಶಾಂತೇಶ್ವರ ಎಂದರೆ
ಕೇತಲದೇವಿ-ಹದ ಮಣ್ಣಲ್ಲದೆ ಮಡಿಕೆಯಾಗಲಾರದು ವ್ರತಹೀನರ ಬೆರೆಯಲಾಗದು; ವ್ರತಹೀನನ ನೆರೆಯ ನರಕವಲ್ಲದೆ ಮುಕ್ತಿಯಿಲ್ಲ ಎಂದು ಕಾಳವ್ವೆ
"ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತಹೀನನ ನೆರೆಯಲು ನರಕಕ್ಕೆ ಮೂಲ" ಎನ್ನುತ್ತಾಳೆ ಮಸಣಮ್ಮ. ಹಾಗೆ ಸೂಳೆ ಸಂಕವ್ವ ಕೂಡ.
"ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯ
ವ್ರತಹೀನನೆ ಬೆರೆದಡೆ ಕಾವ ಕತ್ತಿಯಲ್ಲ
ಕಿವಿ ಮೂಗ ಕೊಯ್ಯರಯ್ಯಾ ಎಂದಿದ್ದಾಳೆ.
ವ್ರತಹೀನ ಎಂದರೆ ನೀತಿವಿಹೀನ. ಬಹಿಷ್ಕೃತಳಾದ ವೇಶ್ಯೆಯು ಸಹ ದುಡ್ಡಿಗಾಗಿ ಹಂಬಲಿಸದೇ ತಮ್ಮ ವೃತ್ತಿ-ನಿಷ್ಠೆ ಹೊಂದಿದ್ದಳು. ಅವಳಿಗೂ ಸಮಾಜದ ಕಾಳಜಿ ಇದ್ದು ವ್ರತಹೀನನನ್ನು ಖಂಡಿಸುತ್ತಾಳೆ.
ಪೂಜೆ
ಪೂಜೆಯ ಬಗ್ಗೆ ಸತ್ಯಕ್ಕ-
"ಅರ್ಚನೆ ಪೂಜನೆ ನೇಮವಲ್ಲ ಮಂತ್ರ ತಂತ್ರ ನೇಮವಲ್ಲ ಧೂಪದೀಪಾರತಿ ನೇಮವಲ್ಲ. ಪರಧನ ಪರಸ್ತ್ರೀ ಪರದೈವಂಗಳಿಗೆ ಎರಗದಿಪ್ಪುದೇ ನೇಮ" ಎನ್ನುತ್ತ ಬಾಹ್ಯಾಂಡಬರ ಪೂಜೆಯನ್ನು ಖಂಡಿಸಿದರು. ಇಲ್ಲಿ ಎರಗದಿರುವುದು ಎಂದರೆ ಮೇಲೆ ಬೀಳದಿರುವುದು, ಪರದೈವಕ್ಕೆ ಎರಗದಿರುವುದು ಎಂದರೆ ನಮಸ್ಕರಿಸದಿರುವುದು. ಒಂದೇ ಶಬ್ದ ಎರಡು ಅರ್ಥದಲ್ಲಿ ಉಪಯೋಗಿಸಿದೆ ಪೂಜೆ ಆತ್ಮವಿಕಾಸಕ್ಕೆ ಸಾಧನೆ ಅದು ಸಿದ್ಧಿಯಲ್ಲ ಎಂಬುದನ್ನು ಅಕ್ಕಮ್ಮ_ "ವ್ರತವೆಂಬುದೇನು ಲಿಂಗ ಎಂಬುದಕ್ಕೆ ನಿಚ್ಚಣಿಕೆ ವ್ರತವೆಂಬುದೇನು ಇಂದ್ರಿಯಂಗಳ ಸಂದು ಮುರಿವ ಕುಲಕಠಾರ" ಎಂದಿದ್ದಾಳೆ.
ವ್ರತದ ಮಹತ್ವವನ್ನು ಹೇಳುತ್ತ ಮೂಢ ಸಂಪ್ರದಾಯಗಳನ್ನು ಖಂಡಿಸಿದರು.
ದಲಿತ ವಚನಕಾರ‍್ತಿಯರು
ಮೊದಲ ದಲಿತ ವಚನಕಾರ‍್ತಿ ಉರಿಲಿಂಗ ಪೆದ್ದಿಯ ಪತ್ನಿ ಕಾಳವ್ವೆ. ಇವಳ ೧೩ ವಚನಗಳು ದೊರೆತಿದ್ದು ಭಕ್ತನ ಬಗ್ಗೆ ಈ ರೀತಿ ಹೇಳುತ್ತಾಳೆ.
ಭಕ್ತರ ಕುಲವೆತ್ತಿ ನಿಂದಿಸುವಾಗ ಭಕ್ತನೇ?
ತೂಬುರದ ಕೊಳ್ಳಿಯಂತೆ ಉರಿವಾತ ಭಕ್ತನೇ? ಎಂದು ಪ್ರಶ್ನಿಸಿದಳು. ತನ್ನ ಒಂದು ವಚನದಲ್ಲಿ
’ನಿಂದಯಾ ಶಿವಭಕ್ತನಾರಿ ಕೋಟಿ ಜನ್ಮನಿ ಸೂಖರ:
ಸತ್ತ ಜನ್ಮನೀ ಭವೇತ್ ಕುಷ್ಠಿದಾಸೀ ಗರ್ಭೇಷಿ ಜಾಯಿತೇ’ (ಜಾತಿಯ ಹೆಸರಿನಿಂದ ಶಿವಭಕ್ತ ನಿಂದಿಸಿದರೆ ಕೋಟಿ ಜನ್ಮದಲ್ಲಿ ಹಂದಿಯಾಗುವರು. ಕುಷ್ಠರೋಗಿ ದಾಸಿ ಗರ್ಭದಿಂದ ಜನಿಸುವರು.
ಕಾಳವ್ವೆ ಸಂಸ್ಕೃತವನ್ನು ಅಭ್ಯಾಸ ಮಾಡಿರುವರು.
ಕುಂಬಾರ ಗುಂಡಯ್ಯನ ಪತ್ನಿ ಕೇತಲದೇವಿಯ ಒಂದು ವಚನ ಲಭ್ಯವಿದೆ. ಅದು ವ್ರತಹೀನರ ವಿಚಾರದ ಬಗ್ಗೆ
"ಹದಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಬೇಶ್ವರ" ಎಂದಿದ್ದಾಳೆ.
ತೊನ್ನು ರೋಗ ಪೀಡಿತೆ ಹೊಲತಿಯಾದ ಗುಡವ್ವೆ ಒಂದು ಸಲ ಅಗ್ರಹಾರದಲ್ಲಿ ಹೋಗುತ್ತಿರುವಾಗ ಬ್ರಾಹ್ಮಣರ ನಿಂದನೆಗೆ ಒಳಗಾಗಿ ದೂರ ಹೋಗು ಮೈಗೆಟ್ಟ ಹೊಲತಿ’ ಎಂದಾಗ, ಶಿವನನ್ನು ಸಾಕ್ಷಾತ್ಕರಿಸಿಕೊಂಡು ತನ್ನ ರೋಗ ನಿವಾರಣೆ ಮಾಡಿಕೊಂಡು ಕಾಲಿಡುವೆನೆಂದು ಪ್ರತಿಜ್ಞೆ ಮಾಡುವಳು ಎಂಬ ಪ್ರಸ್ತಾಪ ಬಸವಪುರಾಣ (ಭೀಮಕವಿ) ದಲ್ಲಿ ಬರುತ್ತದೆ. ಅಂತರಂಗ ಶುದ್ಧಿ ಇಲ್ಲದ ತೋರಿಕೆ ವ್ರತಾಚರಣೆ ಮೂಲಕ ಮೇಲು ಜಾತಿ ಎನಿಸಿಕೊಂಡವರ ಕುರಿತು
’ತನು ಬೆತ್ತಲಾದಡೇನು ಮನ ಬೆತ್ತಲೆಯಾಗದನ್ನಕ್ಕ
ವ್ರತವಿದ್ದಡೆಯು ವ್ರತಹೀನರಾದ ಬಳಿಕ
ನೆರೆದಡೆ ನರಕವಯ್ಯ ನಿಂಬೇಶ್ವರ’ ಎನ್ನುತ್ತಾಳೆ
ಕೊರವಂಜಿಯ ಶಿವಶರಣೆ ಕಾಲಕಣ್ಣಿಯ ಕಾಮಮ್ಮ ಸಹ ವ್ರತಭ್ರಷ್ಟರನ್ನು ಖಂಡಿಸುವ ರೀತಿ, ಕದಿರೆ ರೆಮ್ಮವ್ವೆ ತನ್ನ ಜಾತಿಯ ಬಗ್ಗೆ ಸವಾಲು ಹಾಕಿರುವುದನ್ನು ಈಗಾಗಲೇ ಪ್ರಸ್ತಾಪಿಸಿದೆ. ಹಾಗೆ ಗೊಗ್ಗವ್ವೆಯ ಆರು ವಚನಗಳು ಲಭ್ಯವಿದ್ದು ಭಕ್ತಿಗೆ ಲಿಂಗತಾರತಮ್ಯ ಇಲ್ಲ ಎಂಬುದನ್ನು ಸ್ತ್ರೀ ಸಮಾನತೆಯಲ್ಲಿ ಪ್ರಸ್ತಾಪಿಸಿದೆ.
ಕಸಗುಡಿಸುವ ಸತ್ಯಕ್ಕ ಶರಭುಜಕ್ಕೇಶ್ವರ ಅಂಕಿತದೊಂದಿಗೆ ೨೯ ವಚನಗಳನ್ನೂ ರಚಿಸಿದ್ದಾರೆ.
ತನ್ನ ಕಾಯಕದ ಮೂಲಕ ಶಿವನಿಷ್ಠ ಪ್ರತಿಪಾದಿಸಿದಳು ತಾನು ನಂಬಿರುವ ಶಿವನನ್ನೇ ನಿಷ್ಠುರವಾಗಿ ಈ ರೀತಿ ಪ್ರಶ್ನಿಸುವಳು.
ಏಕೆನ್ನ ಬಾರದ ಭಯಗಳಲ್ಲಿ ಭರಿಸಿದೆ
ಏಕೆನ್ನ ಘೋರ ಸಂಸಾರದಲ್ಲಿರಿಸಿದೆ
ಏಕೆನಗೆ ಕರುಣಿಸಲ್ಲೊಲ್ಲದೆ ಕಾಡಿಹೆ?
ಏಕೆ ಹೇಳಾ ನನ್ನ ಲಿಂಗವೇ? ನಾನು ಮಾಡಿದ ತಪ್ಪೇನು?
ಹಡಪದ ಅಪ್ಪಣ್ಣನ ಪತ್ನಿ ಲಿಂಗಮ್ಮ ತನ್ನ ಜೀವನದ ಅನುಭವಗಳನ್ನೇ ವಚನಗಳಲ್ಲಿ ಪ್ರತಿಪಾದಿಸಿದ್ದಾಳೆ. "ಕನಿಷ್ಠದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳೆದೆ ಸತ್ಯಶರಣರ ಪಾದ ಹಿಡಿದೆ" ಎಂದಿದ್ದಾಳೆ. ಇನ್ನೊಂದು ವಚನದಲ್ಲಿ
"ತನ್ನ ತಾನರಿಯದೇ ಅನ್ಯರ ಭೋಧೆಯ ಹೇಳುವವರ ಬಾಳುವೆ
ಕುರುಡ ಕನ್ನಡಿಯ ಹಿಡಿದಂತೆ
ತನ್ನ ಒಳಗೆ ಮೆರೆದು ಇದಿರಿಂಗೆ ಬೋಧೆಯ ಹೇಳಿ
ಉದರವ ಹೊರೆವ ಚದುರರೆಲ್ಲರೂ ಹಿರಿಯರೇ? ಅಲ್ಲಲ್ಲ ಎಂದು ಕಠಿಣವಾಗಿ ಹೇಳಿದ್ದಾಳೆ.
ವಚನಕಾರ‍್ತಿಯರಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭಟನೆಯು, ಅವರ ವಚನಗಳಲ್ಲಿ ಕಂಡುಬರುತ್ತದೆ.
ಹೆಣ್ಣಿನ ವ್ಯಕ್ತಿತ್ವಕ್ಕೆ ಘನತೆ ತಂದು ವೈದಿಕ ಆಶಯಗಳನ್ನು ನಿರಾಕರಿಸಿದ್ದು, ’ಮಾಯೆ’ ಕುರಿತು ವ್ಯಾಖ್ಯಾನಮಾಡಿದ್ದು ಅಕ್ಕನ ವಿಶೇಷ; ತನ್ನ ಚಿಂತನೆಗಳ ಮೂಲಕ ಧರ್ಮಲಿಂಗ ಆಚಾರ ವ್ಯವಸ್ಥೆ ಮೀರಿ ನಿಂತ ಅಮುಗೆ ರಾಯಮ್ಮ; ವ್ರತಾಚರಣೆಯಲ್ಲಿನ ದೋಷ ಖಂಡಿಸುವ ಅಕ್ಕಮ್ಮ; ಕಾಯಕ ಪ್ರೀತಿಸಿ, ಆತ್ಮವಿಶ್ವಾಸ ಪ್ರಾಮಾಣಿಕತೆ ಮೆರೆಸಿದ ಸತ್ಯಕ್ಕ; ವೈದಿಕರ ಆಚರಣೆಗಳನ್ನು ಖಂಡಿಸಿದ ಕಾಳವ್ವೆ; ಅರಿಷಡ್ವರ್ಗ ಗೆದ್ದು ಶರಣತ್ವ ಪಡೆವ ಬಗೆಯನ್ನು ಹೇಳಿದ ಲಿಂಗಮ್ಮ; ಮಡಿಮುಟ್ಟು ಮೈಲಿಗೆ ಮುಂತಾದ ವಿಷಯಗಳನ್ನು ದೂರವಿಟ್ಟು ತಾತ್ವಿಕ ನೆಲೆಯ ಮೂಲಕ ಹೆಣ್ಣಿನ ನೈಜ ಅಸ್ತಿತ್ವವನ್ನು ಪ್ರಕಟಿಸಿದ ಬಸವಣ್ನನ ಪತ್ನಿ ನೀಲಾಂಬಿಕೆ; ವೈಚಾರಿಕ, ಬೌದ್ಧಿಕ ಸಂವಾದದ, ಅನುಭಾವಜ್ಞಾನ ತಾತ್ವಿಕ ವಚನಗಳ ಮುಕ್ತಾಯಕ್ಕ ಇವರೆಲ್ಲ ವೈಚಾರಿಕ ಪ್ರಜ್ಞೆ ಹೊಂದಿದ ವಚನಕಾರ‍್ತಿಯರು ಸಮಾನತೆ, ಸೋದರತೆ, ಆವರಣದಲ್ಲಿ ಪ್ರಶ್ನಿಸುವ ಮನೋಭಾವ, ಚಿಂತನೆಗಳಿಂದ ಕೂಡಿದ ವಚನಗಳು. ವಚನಕಾರ‍್ತಿಯರ ಅಂದಿನ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಯು.ಎನ್.ಸಂಗನಾಳಮಠ
ವಿಶ್ರಾಂತ ಉಪನ್ಯಾಸಕರು-ಲೇಖಕರು, "ಜ್ಯೋತಿರ್ಲಿಂಗ", ೧ನೇ ತಿರುವು, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ,
ಹೊನ್ನಾಳಿ- ೫೭೭ ೨೧೭, ದಾವಣಗೆರೆ ಜಿಲ್ಲೆ.