Tuesday, March 15, 2011

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ರಹಮತ್ ತರೀಕೆರೆ



ಕನ್ನಡ ಸಾರಸ್ವತ ಲೋಕದ ಮಹತ್ವದ ಸಾಹಿತಿಯೆನ್ನಿ, ಸೂಕ್ಷ್ಮಾತಿಸೂಕ್ಷ್ಮ ತೀಕ್ಷ್ಣಾತಿತೀಕ್ಷ್ಣ ಒಳನೋಟಗಳ ಲೇಖಕನೆನ್ನಿ, ಕನ್ನಡ ಸಂಸ್ಕೃತಿಯ ಪ್ರಖರ ಚಿಂತಕನೆನ್ನಿ, ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಚಂಡ ಪಂಡಿತನೆನ್ನಿ, ಕನ್ನಡ ಸಾಹಿತ್ಯ ಮೀಮಾಂಸೆಯ ಹೊಸ ಮಿಂಚೆನ್ನಿ, ವೈಚಾರಿಕ ಪ್ರಜ್ಞೆಯ ಹೊಂಬೆಳಕೆನ್ನಿ, ಅಪ್ರತಿಮ ಅನುವಾದಕನೆನ್ನಿ, ಅಸಾಧಾರಣ ಸಂಶೋಧಕನೆನ್ನಿ, ಅಸಾಮಾನ್ಯ ಸಂಪಾದಕನೆನ್ನಿ, ಅಪೂರ್ವ ಇತಿಹಾಸಕಾರನೆನ್ನಿ, ಅನನ್ಯ ಜಾನಪದ ವಿದ್ವಾಂಸನೆನ್ನಿ, ಅದ್ಭುತ ಪ್ರಾಧ್ಯಾಪಕನೆನ್ನಿ, ಅಪರಿಮಿತ ಕಾಳಜಿಯ ಶಿಕ್ಷಣತಜ್ಞನೆನ್ನಿ, ಜನಪರ ನಿಲುವಿನ ಹೋರಾಟಗಾರನೆನ್ನಿ ಅಕ್ಷರಶಃ ಅದು ಡಾ|| ರಹಮತ್ ತರೀಕೆರೆ ಆಗಿರುತ್ತಾರೆ. ಇಷ್ಟೆಲ್ಲವೂ ಆಗಿರುವ ಇಷ್ಟೆಲ್ಲವನ್ನೂ ತನ್ನೊಳಗಿರಿಸಿಕೊಂಡಿರುವ ಇವರು ಇವೆಲ್ಲಕ್ಕಿಂತಲೂ ಮಿಗಿಲಾಗಿ ಮಾನವೀಯ ಅಂತಃಕರಣದ ತುಡಿತವಿರುವ ಲೇಖಕರು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಂತಿವೆ ೨೦೦೬ ರಲ್ಲಿ ಪ್ರಕಟಗೊಂಡ ತಮ್ಮ ಕತ್ತಿಯಂಚಿನ ದಾರಿ ಕುರಿತು ಆ ಕೃತಿಯಲ್ಲಿ ಸ್ವತಃ
ಡಾ|| ತರೀಕೆರೆ ಅವರೇ ಹೇಳಿಕೊಂಡು ಬರೆದಿರುವ ಈ ಮಾತುಗಳು -
ಇದೊಂದು ಬಿಕ್ಕಟ್ಟಿನ ಕಾಲ. ನನ್ನ ತಲೆಮಾರಿನ ಅನೇಕರ ನಡೆ-ನುಡಿಗಳ ನಡುವೆ ಕಾಣಿಸಿಕೊಳ್ಳುವ ಕಷ್ಟ ಕೂಡ. ನಮ್ಮ ನಾಡಿನ ಚರಿತ್ರೆಯಲ್ಲಿ ಯಾವೊತ್ತೂ ಇಷ್ಟೊಂದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮ ವರ್ಗದ ಅವಕಾಶವಾದೀ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳವಳಿಗಾರರ ದಮನ-ಇವೆಲ್ಲವೂ ನಮ್ಮ ಓದು ಮತ್ತು ಬರಹಗಳ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ. ಮರೆಯದೆ ಬರೆದರೆ, ಬರೆದ ಬರಹ ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರುನಿಂತು ಕಾಡುತ್ತದೆ. ಇದನ್ನೇ ಕತ್ತಿಯಂಚಿನ ದಾರಿಯಲ್ಲಿ ನಡೆಯುವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯ ಅಲಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ. ಅದನ್ನು ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ. ಅದನ್ನು ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ ನಮ್ಮ ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ.... ಯಾವೊತ್ತೂ ಇಷ್ಟೊಂದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲವೆನ್ನುವಲ್ಲಂತೂ ಅವರ ಅಂತಃಕರಣ ಬಾಯ್ದೆರೆದು ಮಿಡಿದಿದೆ, ಜೀವಪರ ದನಿಯಾಗಿ ನುಡಿದಿದೆ.
ಇಂಥ ಮಾತುಗಳ ನಿವೇದನೆಯೊಡನೆ ಪ್ರಕಟಗೊಂಡಿರುವ ಡಾ|| ರಹಮತ್ ತರೀಕೆರೆ ಅವರ ಈ ಕತ್ತಿಯಂಚಿನ ದಾರಿ ಕೃತಿಗೆ ಈಗ ೨೦೧೦ ನೇ ಸಾಲಿನ ಪ್ರತಿಷ್ಟಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಒಂದು ಲಕ್ಷ ರೂ.ಗಳ ಗೌರವಧನ ಮತ್ತು ತಾಮ್ರ ಫಲಕದ ಚೆಂದದ ಸ್ಮರಣಿಕೆಯನ್ನು ಒಳಗೊಂಡಿರುವ ದೇಶದ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಬರುವ ೨೦೧೧ ಫೆಬ್ರವರಿ ೧೫ ರಂದು ದೆಹಲಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಡಾ|| ತರೀಕೆರೆ ಅವರಿಗೆ ನೀಡಿ ಗೌರವಿಸಲಾಗಿದೆ. ರಸಋಷಿ ಮಹಾಕವಿ ಕುವೆಂಪು ಮೊದಲ್ಗೊಂಡು (೧೯೫೫) ಲೇಖಕಿ ವೈದೇಹಿ ತನಕ (೨೦೦೯) ಇದುವರೆಗೆ ೫೩ ಮಂದಿ ಕನ್ನಡದ ಮಹತ್ವದ ಸಾಹಿತಿಗಳಿಗೆ ಅವರ ಶ್ರೇಷ್ಟ ಕೃತಿಗಳ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದು, ಈಗ ಡಾ|| ತರೀಕೆರೆಯವರು ತಮ್ಮ ಕತ್ತಿಯಂಚಿನ ದಾರಿ ಮೂಲಕ ರಾಷ್ಟ್ರಮಟ್ಟದ ಇಂಥ ಉನ್ನತ ಗೌರವವನ್ನು ಕನ್ನಡಕ್ಕೆ ತಂದು ಕೊಟ್ಟವರಲ್ಲಿ ೫೪ನೆಯವರೆನಿಸಿದ್ದಾರೆ. ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ಮುಸ್ಲಿಂ ಕನ್ನಡ ಲೇಖಕರೆಂಬ ಹೆಗ್ಗಳಿಕೆ ಕೂಡ!
ಕನ್ನಡ ಸಾರಸ್ವತ ಲೋಕ ಬಹುವಾಗಿ ಮೆಚ್ಚಿಕೊಂಡಿರುವ ಬಹಳ ಕಾಲ ಬಾಳಿಕೆ ಬರುವಂತಹ ಸತ್ವಯುತ ಕೃತಿಗಳನ್ನು ಕೊಟ್ಟಿರುವ ಡಾ|| ತರೀಕೆರೆ ಅವರ ಮಹತ್ವದ ಕೃತಿಯೆಂದೇ ಹೆಸರಾಗಿರುವ ಕತ್ತಿಯಂಚಿದ ದಾರಿ ಹೆಸರೇ ಹೇಳುವಂತೆ ಬಹಳ ಹರಿತವಾದ ಕೃತಿ. ಪ್ರಕಾರದಲ್ಲಿದು ಸಾಹಿತ್ಯ ವಿಮರ್ಶಾ ಸಂಕಲನವಾಗಿದ್ದು, ಬೆಂಗಳೂರಿನ ಅಭಿನವ ಪ್ರಕಾಶನ ಇದನ್ನು ಪ್ರಕಟಿಸಿದೆ. ತಮ್ಮ ಸಾಹಿತ್ಯ ಕೃಷಿಗೆ ಪ್ರೇರಣಾಶಕ್ತಿಯಾದ ಮಡದಿ ಭಾನು ಅವರಿಗೆ ಇದನ್ನು ಅರ್ಪಿಸಲಾಗಿದೆ. ನೋಡಿದೊಡನೆಯೇ ಓದುಗನನ್ನು ತನ್ನತ್ತ ಸೆಳೆದುಕೊಳ್ಳುವಂಥ ಆಕರ್ಷಣೆಯುಳ್ಳ ಈ ಪುಸ್ತಕ ತನ್ನೊಳಗೂ ಅಷ್ಟೇ ಆಕರ್ಷಣೆಯ ಮಹತ್ವದ ಬರಹಗಳನ್ನು ಹೊಂದಿದ್ದು ಹೊಸತಲೆಮಾರಿನ ಸಂಸ್ಕೃತಿ ಚಿಂತಕರಾದ ಡಾ|| ತರೀಕೆರೆ ಅವರ ಲೇಖನಿಯಲ್ಲಿ ಹೊಸ ಹೊಸ ಆಲೋಚನಾ ಕ್ರಮದಿಂದ ಅರಿವಿನ ವ್ಯಾಪ್ತಿಯನ್ನು ಅಗಾಧವಾಗಿ ಹಿಗ್ಗಿಸಿಕೊಂಡು ಬಂದು ಅಪೂರ್ವ ಕೃತಿಯಾಗಿ ರೂಪುಗೊಂಡಿದೆ. ಇಲ್ಲಿ ಕುವೆಂಪು, ಶಿವರಾಮಕಾರಂತ, ಶಾಂತಿನಾಥದೇಸಾಯಿ, ರಾಚಚಂದ್ರಶರ್ಮ, ಪೂರ್ಣಚಂದ್ರತೇಜಸ್ವಿ, ಕೆ.ಎಸ್.ನಿಸಾರ್‌ಅಹಮದ್, ಡಿ.ಆರ್.ನಾಗರಾಜ್, ಮುಂತಾದ ಆಧುನಿಕ ಸಾಹಿತಿಗಳನ್ನು ಕುರಿತು ಹಾಗೂ ದೇವಚಂದ್ರ, ಬಸವಣ್ಣ, ರಾಘವಾಂಕ, ಶಿವಕೋಟ್ಯಾಚಾರ್ಯ, ವಡ್ಡಾರಾಧನೆ, ಶೂನ್ಯಸಂಪಾದನೆ ಮುಂತಾದ ಆಧುನಿಕಪೂರ್ವ ಸಾಹಿತಿಗಳು ಮತ್ತು ಕೃತಿಗಳ ಮೇಲೆ ಕ್ಷ-ಕಿರಣ ಬೀರುವ ಲೇಖನಗಳಿವೆ. ಹಾಗೆಯೇ ಶಂಕರಮೊಕಾಶಿಪುಣೇಕರ, ಪಿ.ಲಂಕೇಶ್, ಕೆ.ವಿ.ಸುಬ್ಬಣ್ಣ, ಎಚ್.ಎಂ.ಚೆನ್ನಯ್ಯ, ಕುಂ.ವೀರಭದ್ರಪ್ಪ ಮುಂತಾದ ವ್ಯಕ್ತಿಗಳ ವಿಶ್ಲೇಷಣಾ ಚಿತ್ರಗಳಿವೆ. ಇಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ನುಡಿಗೋಪುರವನ್ನು ನಿರ್ಮಿಸಿದ ಮನಸ್ಸುಗಳೊಡನೆ ಮುಖಾಮುಖಿಯಾಗಿ ಡಾ|| ತರೀಕೆರೆ ಅವರು ಚರ್ಚಿಸಿರುವ ಪರಿಯಂತೂ ಅದ್ಭುತವಾಗಿದೆ. ಅಂತೆಯೇ ಕನ್ನಡ ಮುಸ್ಲಿಂ ತತ್ವಪದಕಾರರ ಮೇಲೆ ಬೆಳಕು ಚೆಲ್ಲುವ ಎರಡು ಲೇಖನಗಳಿವೆ. ಇದಿಷ್ಟು ಕತ್ತಿಯಂಚಿನ ದಾರಿಯಲ್ಲಿರುವ ಹೂರಣ. ನಿಜಕ್ಕೂ ಇದು ಕನ್ನಡ ಸಾಹಿತ್ಯ ದೇವಿಗೆ ಹೊಸಬಗೆಯ ತೋರಣ.
ಇಂಥ ಪ್ರತಿಭಾವಂತ ಲೇಖಕ ಡಾ|| ರಹಮತ್ ತರೀಕೆರೆ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಡುಗೆ ಎಂಬುದೇ ವಿಶೇಷ. ಈ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಪುಟ್ಟ ಗ್ರಾಮವಾದ ಸಮತಳ ಎಂಬಲ್ಲಿ ೧೯೫೯ ಆಗಸ್ಟ್ ೨೬ ರಂದು ಜನಿಸಿದ ಅವರ ಸ್ವಂತ ಊರು ತರೀಕೆರೆ. ತಂದೆ ಮಹಮದ್‌ದಸ್ತಗೀರ್‌ಸಾಬ್, ತಾಯಿ ಜುಲೇಖಾಬಿ. ವೃತ್ತಿಯಲ್ಲಿ ಕಮ್ಮಾರರು. ಕಿತ್ತುತಿನ್ನುವ ಬಡತನವೇ ಇವರ ಆಸ್ತಿ. ಅನಕ್ಷರತೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ಇಂಥ ಕುಟುಂಬದ ಕೂಸು ರಹಮತ್‌ಗೆ ಅಕ್ಷರ ಕಲಿಯುವ ಹಂಬಲ. ಇದಕ್ಕೆ ಒತ್ತಾಸೆಯಾಗಿ ಓದಿನ ದೀಕ್ಷೆ ಕೊಟ್ಟದ್ದು ಜನ್ಮದಾತೆ ಜುಲೇಖಾಬಿಯೇ! ಪ್ರಾಥಮಿಕ ಶಿಕ್ಷಣವನ್ನು ತರೀಕೆರೆಯಲ್ಲೇ ಆರಂಭಿಸಿದ್ದ ಅವರು ಎಸ್.ಎಸ್.ಎಲ್.ಸಿ. ತನಕ ಅಲ್ಲಿಯೇ ಕಲಿತು ಮುಂದಿನ ಶಿಕ್ಷಣವನ್ನು ಜೋಗದ ಸಿರಿ ಬೆಳಕಿನ ನಾಡಾದ ಶಿವಮೊಗ್ಗ ಮತ್ತು ಅರಮನೆಗಳ ನಾಡು ಮೈಸೂರಿನಲ್ಲಿ ಪಡೆದು ಅಲ್ಲಿನ ಪರಿಸರದಲ್ಲೇ ಶಿಕ್ಷಣದ ಬದುಕನ್ನು ಕಟ್ಟಿಕೊಂಡವರು. ಬಂಗಾರದ ಪದಕದೊಡನೆ ಬಿ.ಎ. ಪದವಿ ಗಳಿಸಿದ ಅವರು ಎಂ.ಎ. ಪದವಿಯಲ್ಲಂತೂ ರ‍್ಯಾಂಕುಗಳ ರಾಶಿಯೊಡನೆ ಚಿನ್ನದ ಪದಕಗಳ ಗೊಂಚಲನ್ನೇ ಪಡೆದು ಮೈಸೂರು ವಿ.ವಿ.ಯಲ್ಲಿ ಮಿರಮಿರನೆ ಮಿಂಚಿದ್ದರು. ನಂತರ ತಾವು ಕಲಿತ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಭಾಷಾನಿಕಾಯದ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಹಂಪಿ ಕನ್ನಡ ವಿ.ವಿ. ಎಂದರೆ ಪಂಚಪ್ರಾಣ. ಅದಕ್ಕೇನೆ ಅವರು ತಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿ ಅದು ಕಿವಿಗೆ ತಾಗುತ್ತಲೇ ನನ್ನ ಬೌದ್ಧಿಕ ಹಸಿವನ್ನು ನೀಗಿಸಿ ನನ್ನನ್ನು ಸಾಹಿತ್ಯಿಕವಾಗಿ ಬೆಳಸಿ ಪ್ರಬುದ್ಧಗೊಳಿಸಿದ ನನ್ನ ತಾಯಿ ಸಮಾನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದಿರುವುದು. ಹಂಪಿ ಕನ್ನಡ ವಿ.ವಿ. ಬಗ್ಗೆ ಅವರು ಇಟ್ಟುಕೊಂಡಿರುವ ಅಗಾಧ ಅಭಿಮಾನವಿದು. ಇದೇ ಹಂಪಿ ವಿ.ವಿ.ಗೆ ಸೇರಿದ ೮೦ ಎಕರೆ ಜಮೀನನ್ನು ವಿಜಯನಗರ ಪುನಶ್ಚೇತನ ಪ್ರತಿಷ್ಟಾನ ಟ್ರಸ್ಟ್‌ಗೆ ವಹಿಸುವತ್ತ ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಅವರು ತಮ್ಮ ಡೀನ್‌ಶೀಪ್‌ಗೆ ರಾಜೀನಾಮೆ ನೀಡಿ ಪ್ರತಿಭಟಿಸಿದ್ದರು. ಇದು ಹಂಪಿ ಕನ್ನಡ ವಿ.ವಿ. ಮೇಲೆ ಅವರಿಟ್ಟಿರುವ ಕಾಳಜಿಗೊಂದು ನಿದರ್ಶನ. ಇದವರ ಸಾಮಾಜಿಕ ಕಾಳಜಿ ಕೂಡ ಹೌದು.
ಹರಿವ ನೀರಿನಂತಹ ವ್ಯಕ್ತಿತ್ವದ ಡಾ|| ತರೀಕೆರೆ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದಾದ್ಯಂತ ಒಂದು ರೀತಿ ಜಂಗಮನಂತೆ ಸಂಚರಿಸಿ ಜನಜೀವನದ ಒಳ-ಹೊರಗನ್ನೆಲ್ಲಾ ತಮ್ಮ ಒಳಗಣ್ಣಿನಿಂದ ಗುರುತಿಸಿ ಅವರೊಡಲಾಳದ ನೋವು-ನಲಿವುಗಳನ್ನೆಲ್ಲಾ ಬಹು ಹತ್ತಿರಕ್ಕೆ ತಂದುಕೊಂಡು ಸಾಹಿತ್ಯಕೃಷಿ ಮಾಡುತ್ತಿರುವವರು. ಸಾಹಿತ್ಯ ವಿಮರ್ಶೆಯನ್ನು ತಮ್ಮ ಮೊದಲ ಆಯ್ಕೆ ಮಾಡಿಕೊಂಡವರಂತೆ ಬಂದ ಅವರು ಪ್ರತಿ ಸಂಸ್ಕೃತಿ ಎಂಬ ಸಾಹಿತ್ಯ ವಿಮರ್ಶೆಯ ಕೃತಿಯ ಮೂಲಕವೇ ಪ್ರಥಮವಾಗಿ ಸಾರಸ್ವತ ಲೋಕ ಪ್ರವೇಶ ಮಾಡಿದವರು. ತಮ್ಮ ಸೂಕ್ಷ್ಮಸಂವೇದನೆಯ ಚಿಂತನಶೀಲ ಬರಹದಿಂದ ಪ್ರತಿ ಸಂಸ್ಕೃತಿಯಲ್ಲಿ ಭರವಸೆಯ ಬೆಳಕನ್ನು ಮೂಡಿಸಿದ್ದ ಅವರು ತಮ್ಮ ಮರದೊಳಗಣ ಕಿಚ್ಚು ಕೃತಿಯಲ್ಲಿ ಅದನ್ನು ಮತ್ತಷ್ಟು ಪ್ರಜ್ವಲಿಸಿದ್ದಾರೆ. ಈ ಬೃಹತ್ ಕೃತಿ ಅವರ ಮಹಾಪ್ರಬಂಧವೂ ಹೌದು. ಹೀಗೆ ಶುರುವಾದ ಅವರ ಬರಹದ ದಾರಿ ಬರಬರುತ್ತಾ ಮತ್ತಷ್ಟು ಮಗದಷ್ಟು ದುಪ್ಪಟ್ಟು ಗಟ್ಟಿಯಾಗುತ್ತಾ ಬಹಳ ಗಟ್ಟಿ ಕೃತಿಗಳನ್ನು ಕನ್ನಡ ಸಾಹಿತ್ಯ ಭಂಡಾರಕ್ಕೆ ನೀಡುತ್ತಾ ಬಂದಿರುವ ಹಿರಿಮೆ ಅವರದು. ಅಪ್ಪ ಹಾಕಿದ ಆಲದ ಮರವೆಂಬಂತೆ ಒಂದಕ್ಕೇ ಅಂಟಿಕೊಳ್ಳದ ವೈವಿಧ್ಯಮಯ ಆಸಕ್ತಿಯ ತರೀಕೆರೆ ಅವರ ಸಾಹಿತ್ಯ ಸಹ ವೈವಿಧ್ಯಮಯವಾದದ್ದೇ. ತಮ್ಮ ಆಲೋಚನೆಗಿಂತ ಭಿನ್ನವಾಗಿ ಜನರ ಆಲೋಚನಾಕ್ರಮವನ್ನು ಅನುಸರಿಸಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರಿತ ಒಂದು ವಿಶಿಷ್ಟ ಮಾದರಿ ಅವರದ್ದಾಗಿದೆ.
ಡಾ|| ತರೀಕೆರೆ ಅವರು ನೈಜೀರಿಯಾದ ಲೇಖಕ ಗೂಗಿ ಥಿಯೋಂಗ್‌ನ ಕೃತಿಯನ್ನು ವಸಾಹತುಶಾಹಿ ಮತ್ತು ವಿಮೋಚನಾ ಪ್ರಜ್ಞೆ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದಿರುವ ಬಗೆಯಾಗಲಿ, ಕನ್ನಡವು ಸಂಸ್ಕೃತ ಕಾವ್ಯ ಮೀಮಾಂಸೆಯನ್ನು ಅನುಕರಣೆ ಮಾಡುತ್ತಿರುವುದನ್ನು ಪ್ರಶ್ನಿಸಿ ನಾಡಿನ ಗಮನ ಸೆಳೆದ ಅವರು ಕನ್ನಡದ ಪರಂಪರೆಯ ನೆಲೆಯಿಂದಲೇ ಕನ್ನಡ ಸಾಹಿತ್ಯ ಮೀಮಾಂಸೆಯನ್ನು ಕಟ್ಟುವತ್ತ ಸಂಪಾದಿಸಿರುವ ಕನ್ನಡ ಮಾತು ತಲೆಯೆತ್ತುವ ಬಗೆ ಹಾಗೂ ಅವರೇ ಬರೆದಿರುವ ಇಲ್ಲಿ ಯಾರೂ ಅಮುಖ್ಯರಲ್ಲ ಕೃತಿಗಳು ರಚನೆಯಾಗಿರುವ ಪರಿ ಇದೆಯಲ್ಲ ಅದು ಜ್ಞಾನಕೋಶದ ವಿಸ್ತಾರದ ದೃಷ್ಟಿಯಿಂದ ಬಹಳ ವಿಶಿಷ್ಟವೆನಿಸುವಂತಾದ್ದು. ಹಾಗೆಯೇ ನಾಥಪಂಥ ಮತ್ತು ಸೂಫಿ ಪರಂಪರೆಗಳಲ್ಲಿ ಅತೀವ ಆಸಕ್ತಿಯುಳ್ಳ ಅವರ ಕರ್ನಾಟಕದ ಸೂಫಿಗಳು ಮತ್ತು ಕರ್ನಾಟಕದ ನಾಥಪಂಥ ಕೃತಿಗಳೆರಡೂ ಕನ್ನಡ ನಾಡಿನ ಸಂಸ್ಕೃತಿ ಪರಂಪರೆಯನ್ನು ವಿಭಿನ್ನ ದೃಷ್ಟಿಕೋನದಲ್ಲಿ ತಿಳಿಸುವ ಕರ್ನಾಟಕದ ಸಾಂಸ್ಕೃತಿಕ ಅಧ್ಯಯನದ ಅದ್ಭುತ ಕೃತಿಗಳೇ ಆಗಿವೆ. ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲಿ ಬರೆದದ್ದೆಂದು ಹೇಳಲಾಗುವ ಕಿತಾಬ್‌ನವರಸ್ ಸಂಗೀತ ಕೃತಿ ಕುರಿತು ಮತ್ತು ಅಜ್ಞಾತಳಾಗಿಯೇ ಅಮರಳಾಗಿರುವ ಹಿಂದೂಸ್ಥಾನಿ ಸಂಪ್ರದಾಯದ ಖ್ಯಾತಗಾಯಕಿ ಅಮೀರಬಾಯಿ ಕರ್ನಾಟಕಿ ಅವರ ಬಗ್ಗೆ ಹಾಗೂ ಬಾಬಾಬುಡನ್‌ಗಿರಿ ಕುರಿತು ಅವರು ಬರೆದಿರುವ ಸಂಶೋಧನಾ ಲೇಖನಗಳಂತೂ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದಂತಹವು. ತಮಗೆ ಬೇಕೆನಿಸಿದ್ದನ್ನು ಬೇಕಾದಷ್ಟು ತನ್ನ ಸುತ್ತಲ ಪರಿಸರದಲ್ಲಿ ಹೀರಿಕೊಳ್ಳುವ ತಾಯಿ ಬೇರುಗಳುಳ್ಳಂತಹ ಸೂಕ್ಷ್ಮ ಸಂವೇದನೆ, ಸೂಕ್ಷ್ಮ ಮನಸ್ಸಿನ ಡಾ|| ತರೀಕೆರೆ ಅವರು ತಮ್ಮ ಮುಸ್ಲಿಂ ಹಿನ್ನೆಲೆಯನ್ನು ದುಡಿಸಿಕೊಂಡೇ ವಿಶೇಷವಾಗಿ ಕನ್ನಡ ಗದ್ಯ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಅಪ್ಪಟ ಕನ್ನಡಾಭಿಮಾನಿ. ಡಾ|| ತರೀಕೆರೆಯವರ ಮತ್ತೊಂದು ವಿಶಿಷ್ಟ ಗುಣವೆಂದರೆ ಕನ್ನಡದ ಯುವ ಲೇಖಕ-ಲೇಖಕಿಯರು ಬರೆದಿದ್ದನ್ನೆಲ್ಲಾ ಆಳವಾಗಿ ಅಧ್ಯಯನ ಮಾಡಿ ಅವರುಗಳ ಬಗ್ಗೆ ವ್ಯಾಪಕವಾಗಿ ಬರೆಯುವುದು. ಹಾಗೆಯೇ ಸಂಸ್ಕೃತಿ ವಿಮರ್ಶೆ ಹಾಗೂ ತಿರುಗಾಟ ಅವರ ಪ್ರೀತಿಯ ವಿಷಯಗಳಾಗಿದ್ದು, ದೇಸಿ ಚಿಂತನೆಯ ಆಲೋಚನೆಯ ಕ್ರಮವನ್ನು ತಳಮಟ್ಟದಿಂದಲೇ ರೂಪಿಸುವತ್ತ ಅವರದು ವಿಶೇಷ ಆಸಕ್ತಿ. ಹಾಗಾಗಿ ಈ ವಿಷಯದಲ್ಲಿ ಅವರು ಪ್ರಮುಖ ದೇಸಿ ಚಿಂತಕರೆನಿಸಿದ್ದಾರೆ. ಅಂತೆಯೇ ಧಾರ್ಮಿಕ ಮೂಲಭೂತವಾದದ ವಿರುದ್ಧ ದನಿಯೆತ್ತುವಲ್ಲಿಯೂ ಅವರದು ದಿಟ್ಟ ನಡೆಯಾಗಿದ್ದು ಈ ದಿಶೆಯಲ್ಲಿ ಅನೇಕ ಚರ್ಚೆಗಳಿಗೆ ಅವರು ಕಾರಣಕರ್ತರೂ ಆಗಿದ್ದಾರೆ.
ಪ್ರಮುಖ ಕೃತಿಗಳು : ಪ್ರತಿ ಸಂಸ್ಕೃತಿ (ಸಾಹಿತ್ಯ ವಿಮರ್ಶೆ) ಐವರು ಹೇಳಿದ ಜನಪದ ಕಥೆಗಳು (ಜನಪದ) ೧೯೯೩, ಮರದೊಳಗಣ ಕಿಚ್ಚು (ಸಂಸ್ಕೃತಿ ಚಿಂತನೆ) ೧೯೯೭, ಕರ್ನಾಟಕದ ಸೂಫಿಗಳು (ಸಂಶೋಧನೆ) ೧೯೯೭, ವಸಾಹತು ಪ್ರಜ್ಞೆ ಮತ್ತು ವಿಮೋಚನೆ (ಅನುವಾದ) ೧೯೯೮, ಕವಿರಾಜಮಾರ್ಗ: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೦, ಅಂಡಮಾನ್ ಕನಸು (ಪ್ರವಾಸ ಕಥನ) ೨೦೦೧, ಕುಮಾರವ್ಯಾಸ ಭಾರತ: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೩, ಸಾಂಸ್ಕೃತಿಕ ಅಧ್ಯಯನ (ವಿಶ್ಲೇಷಣೆ) ೨೦೦೪, ಅಕ್ಕನ ವಚನಗಳು: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೫, ಇಲ್ಲಿ ಯಾರೂ ಅಮುಖ್ಯರಲ್ಲ (ಕನ್ನಡ ಸಾಹಿತ್ಯ ಮೀಮಾಂಸೆ ೨) ೨೦೦೫, ಕನ್ನಡಮಾತು ತಲೆಯೆತ್ತುವ ಬಗೆ (ಕನ್ನಡ ಸಾಹಿತ್ಯ ಮೀಮಾಂಸೆ ೧) ೨೦೦೦, ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ), ಕರ್ನಾಟಕದ ನಾಥಪಂಥ (ಸಂಶೋಧನೆ) ೨೦೦೬, ಹೊಸತಲೆಮಾರಿನ ತಲ್ಲಣ (ಸಂಪಾದನೆ), ಧರ್ಮಪರೀಕ್ಷೆ (ವೈಚಾರಿಕ ಬರಹಗಳು), ಕನ್ನಡ ಸಂಶೋಧನೆ ತಾತ್ವಿಕ ವಿಚಾರ (ಚಿಂತನೆ), ಇಂಗ್ಲೀಷ್ ಗೀತಗಳು: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೭, ಲೋಕವಿರೋಧಿಗಳ ಜತೆಯಲ್ಲಿ (ಸಂದರ್ಶನಗಳು) ೨೦೦೮, ಚಿಂತನೆಯ ಪಾಡು, ಮಲೆಗಳಲ್ಲಿ ಮದುಮಗಳು (ಸಾಂಸ್ಕೃತಿಕ
ಮುಖಾಮುಖಿ) ೨೦೧೦ ಮುಂತಾದವು ಡಾ|| ತರೀಕೆರೆ ತರೀಕೆರೆ ಅವರ ಮುಖ್ಯ ಕೃತಿಗಳು. ಅವರು ಕನ್ನಡ ಅಧ್ಯಯನ ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ.
ಪ್ರಮುಖ ಪ್ರಶಸ್ತಿ ಪುರಸ್ಕಾರಗಳು : ಪ್ರತಿಸಂಸ್ಕೃತಿ, ಕರ್ನಾಟಕದ ಸೂಫಿಗಳು, ಅಂಡಮಾನ್ ಕನಸು ಕೃತಿಗಳಿಗೆ ೧೯೯೩ ಮತ್ತು ೧೯೯೮ ಹಾಗೂ ೨೦೦೦ ನೇ ವರ್ಷಳಲ್ಲಿ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೮ ನೇ ಸಾಲಿನ ಶಿವಮೊಗ್ಗ ಕರ್ನಾಟಕ ಸಂಘದ ಪಿ. ಲಂಕೇಶ್ ಪ್ರಶಸ್ತಿ, ಒಟ್ಟಾರೆ ಸಾಹಿತ್ಯ ಸೇವೆಗಾಗಿ ೨೦೦೮ ನೇ ಸಾಲಿನ ಜಿ.ಎಸ್.ಎಸ್. ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಹಾ.ಮಾ. ನಾಯಕ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳಿಗೆ ಡಾ|| ತರೀಕೆರೆ ಅವರು ಭಾಜನರಾಗಿದ್ದು, ಇವೆಲ್ಲಕ್ಕೂ ತಿಲಕವಿಟ್ಟಂತೆ ಇದೀಗ ಇವರ ಕತ್ತಿಯಂಚಿನ ದಾರಿ ಕೃತಿಗೆ ಪ್ರತಿಷ್ಟಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಮಾನವತಾವಾದಿ ಸರ್ವಜ್ಞ



"ಅವನ ಜಾತಿ ಮಾನವ, ಅವನ ಮತ ದೇವ ಮತ, ಅವನ ಕಾಲ ಸರ್ವಕಾಲ" ಸರ್ವಜ್ಞನ ಬಗ್ಗೆ ಕವಿವರ ಡಾ||ಬೇಂದ್ರೆಯವರ ಅಭಿಪ್ರಾಯ. ಈ ಮಾತು ಅಂತಿಮ ಸತ್ಯ.
ಜನತೆಯ ಕವಿ ಸರ್ವಜ್ಞ ಒಬ್ಬ ಸಂತ ಮತ್ತು ಪರಿವಾಜಕ. ಸಾಹಿತ್ಯ-ಸಂಸ್ಕೃತಿ ದೃಷ್ಟಿಯಿಂದ ಒಂದು ರತ್ನ. ತನ್ನ ಚಿಕಿತ್ಸಕ ದೃಷ್ಟಿಯಿಂದ ಮಾನವ ಜೀವನದ ಒಳ ಹೊರಗನ್ನು ವಿಶ್ಲೇಷಿಸಿದ. ಅವನ ಮಾತುಗಳು ಜನಮನವನ್ನು ನೇರವಾಗಿ ತಟ್ಟಿದವು. ತಟ್ಟಿ ಎಚ್ಚರಿಸಿದವು. ತನ್ನ ಆಳವಾದ ಅನುಭವಗಳನ್ನು ತ್ರಿಪದಿಗಳ ಮುಖಾಂತರ ಹೊರಹೊಮ್ಮಿಸಿದನು. ಸರ್ವಜ್ಞನಿಗೆ ಸಮಾಜದ ಹಾಗೂ ಭಯ ಇರಲಿಲ್ಲ. ಅದರಿಂದಲೇ ಕಂಡದ್ದನ್ನೂ ಕಂಡ ಹಾಗೆ ಹೇಳಿದನು. ಮುಚ್ಚಿ ಹೇಳುವುದರಲ್ಲಿ ಅವನಿಗೆ ಆಸಕ್ತಿ ಇರಲಿಲ್ಲ.
ಸರ್ವಜ್ಞನ ಕಾಲ, ಜೀವನದ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಾಗಿಲ್ಲ. ಬಹಳ ಶ್ರಮಪಟ್ಟು ಸರ್ವಜ್ಞನ ವಚನಗಳನ್ನು ಸಂಪಾದಿಸಿದ ಉತ್ತಂಗಿ ಚನ್ನಪ್ಪನವರು ಈತನ ಕಾಲ ಸು.೧೬ನೇ ಶತಮಾನ ಎಂದಿದ್ದಾರೆ. ಇದರ ಬಗ್ಗೆ ವಿದ್ವಾಂಸರ ಅಭಿಪ್ರಾಯಗಳು ವ್ಯತಿರಿಕ್ತವಾಗಿದೆ. ಕರ್ನಾಟಕ ಕವಿ ಚರಿತೆಕಾರರು ಈತನ ಕಾಲವನ್ನು ೧೭೦೦ ಇದ್ದಿರಬಹುದು ಎಂದಿದ್ದಾರೆ.
ಅವನ ತ್ರಿಪದಿಗಳನ್ನು ಆಧರಿಸಿ ೧೩೪೭ರಿಂದ ೧೭೬೦ರ ಅವಧಿ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಶಿವಶರಣರನ್ನು ವಿನೀತ ಭಾವದಿಂದ ಸೇರಿಸಿದ್ದರಿಂದ ೧೩ನೇ ಶತಮಾನದಲ್ಲಿದ್ದನೆಂದೂ, ೧೪೫೦ರಲ್ಲಿ ಬಾಳಿದ ತೆಲುಗು ಕವಿ ವೇಮನನ ಸಮಕಾಲೀನನೆಂದೂ, ಅಭಿಪ್ರಾಯ ಪಡುತ್ತಾರೆ. ೧೬೦೦ರಲ್ಲಿದ್ದ ಸಿದ್ಧ ವೀರಣಾಚಾರ್ಯರು ಸರ್ವಜ್ಞ ವಚನಗಳ ಪ್ರಸ್ತುತ ಮಾಡಿರುವುದರಿಂದ ಅವರಿಗಿಂತ ಹಿಂದಿನವರು ಎನ್ನುತ್ತಾರೆ.
೧೫೭೫ರಲ್ಲಿ ಮೃತ್ಯು ಹೊಂದಿದ ಕಬೀರನ ಪ್ರಭಾವ ಸರ್ವಜ್ಞನ ಮೇಲೆ ಆಗಿದೆ ಎಂದು ಕೆಲವರ ಅಭಿಪ್ರಾಯ. ಸರ್ವಜ್ಞನ ಮೇಲೆ ಆಗಿದೆ ಎಂದು ಕೆಲವರ ಅಭಿಪ್ರಾಯ. ಕಿಟೆಲ್ ಅವರ ಪ್ರಕಾರ ೧೮೦೦. ಏಕೆಂದರೆ ಉಗಿಬಂಡಿ ತಂತಿ ಪ್ರಸ್ತಾಪ ಇರುವುದರಿಂದ ೧೭೯೭ ಎನ್ನುತ್ತಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಬಿಜ್ಜಾವರ (ಈಗ ಗ್ರಾಮ)ದ ರಾಣಿ ಚೆನ್ನಮ್ಮನಿಗೆ (ಇಮ್ಮಡಿ ಚಿಕ್ಕ ಭೂಪಾಲನ ಪಟ್ಟದ ರಾಣಿ)ಗೆ ಪ್ಲವಂಗ ಸಂವತ್ಸರದ ಮಾಘಶುದ್ಧ ೧೫ರಲ್ಲಿ ಚಿಕ್ಕನಾಯಕನಹಳ್ಳಿ ಲಿಂಗಪ್ಪ ಕವಿಯು ಸರ್ವಜ್ಞನ ವಚನಗಳನ್ನು ಪ್ರತಿ ಮಾಡಿಕೊಟ್ಟನು ಎಂಬ ವಿಷಯ ಮಲ್ಲಿಕಾರ್ಜುನ ಕವಿ ಬರೆದ ಇಮ್ಮಡಿ ಚಿಕ್ಕಭೂಪಾಲ ಸಾಂಗತ್ಯ ಕೃತಿಯಲ್ಲಿ ಉಲ್ಲೇಖವಾಗಿದೆ. ಸಿದ್ಧಾಪುರ ಶಾಸನದ ಕಾಲದ ಪ್ರಕಾರ ಭೂಪಾಲನ ಕಡೆಯ ಕಾಲ ಕ್ರಿ.ಶ.೧೫೯೪ ಅಥವಾ ೧೬೦೪. ಪ್ಲವಂಗ ಸಂವತ್ಸರದ ಮಾಘ ಶುದ್ಧ ೧೫ ಎಂದರೆ ೨೧-೦೧. ೧೬೦೮ (ಗುರುವಾರ) ಸಿದ್ಧವೀರಣ್ಣ ಚಾರ್ಯರರಿಗಿಂತ ಹಿಂದೆ ಇದ್ದ ಹಸ್ತಪ್ರತಿ ಇದು. ಹೀಗಾಗಿ ಸರ್ವಜ್ಞನ ಕಾಲವನ್ನು ೧೫೫೦-೧೫೭೦ರ ಮಧ್ಯ ಎಂದು ಗುರುತಿಸಿ ಹಾಗೆ ೧೬ನೇ ಶತಮಾನದ ಪೂರ್ವಾರ್ಧ ಎನ್ನಬಹುದು.
ಜೀವನ
ಸರ್ವಜ್ಞನ ಜೀವನ ಸಹಕಾಲದಂತೆ ನಿಗೂಢವಾಗಿದೆ. ಈ ವಿಷಯದಲ್ಲಿ ಪೌರಾಣಿಕ ಹಿನ್ನಲೆ ಮತ್ತು ಜನಜನಿತವಾದ ಕಥೆ ಎರಡನ್ನು ಲಭ್ಯವಿರುವ ವಚನಗಳ ಪ್ರಕಾರ ಮೊದಲು ಪರಾವಿಮರ್ಶಿಸುವುದು ಸೂಕ್ತ. ಸರ್ವಜ್ಞ ತನ್ನ ಜನ್ಮಾಂತರದ ವಿಚಾರವನ್ನು ಈ ರೀತಿ ಹೇಳಿದ್ದಾನೆ.
ಮುನ್ನನಾ ಪೂರ್ವದಲಿ ಪನ್ನಗಧರ ನಾಳು
ಎನ್ನಯಾ ಪೆಸರು ಪುಷ್ಪದತ್ತನು ಎಂದು
ಎನ್ನಿಪರುದಯದಿ ಸರ್ವಜ್ಞ||
ಅಂದಿನಾ ಪುಷ್ಪದತ್ತ ಬಂದ ವರರುಚಿಯಾಗಿ
ಮುಂದೆ ತಾ ಸರ್ವಜ್ಞನೆಂದೆನಿಸಿ
ನಿಂದವನು ನಾನೇ ಸರ್ವಜ್ಞ||

ಈ ವಚನಗಳ ಆಧಾರದಿಂದ ಪರಶಿವನ ಆಸ್ಥಾನದಲ್ಲಿದ್ದ ಪುಷ್ಪದತ್ತ ಎಂಬ ಗಣೇಶ್ವರ ವರರುಚಿಯಾಗಿ ಜನ್ಮತಾಳಿ ಸರ್ವಜ್ಞನಾದನೆಂದು ಹೇಳುತ್ತಾನೆ. (ಮೇಲಿನ ಎರಡು ವಚನ ಸೇರ್ಪಡೆ ಎಂದು ಕೆಲವರ ವಿಚಾರ)
ಜನಜನಿತವಾದ ಕಥೆಯ ಪ್ರಕಾರ ಧಾರವಾಡ ಜಿಲ್ಲೆಯ ಮಾಸೂರು (ಹಿರೇಕೆರೂರು ತಾಲೂಕು) ಗ್ರಾಮದಲ್ಲಿದ್ದ ಬಸವರಸ ಎಂಬ ಶೈವ ಬ್ರಾಹ್ಮಣನು ತನ್ನ ಪತ್ನಿ ಅಕ್ಕಮಲ್ಲಮ್ಮ ಮಕ್ಕಳಿಲ್ಲದೇ ದುಃಖಿಸುತ್ತಿರಲು, ಬಸವರಸ ಪುತ್ರಾಪೇಕ್ಷೆಯಿಂದ ಕಾಶಿ ವಿಶ್ವನಾಥನ ಸನ್ನಿಧಿಗೆ ಹೋಗಿ ಅನುಗ್ರಹಿತನಾಗಿ ಊರಿಗೆ ಬರುವಾಗ ವಿಪರೀತವಾದ ಮಳೆಗೆ ಸಿಲುಕಿ ದಾರಿಯಲ್ಲಿದ್ದ ಅಬಲೂರಿನ ಕುಂಬಾರನ ಮನೆಯಲ್ಲಿ ವಾಸ್ತವ್ಯ ಮಾಡಿದಾಗ, ಕರ್ಮ-ಧರ್ಮ ಸಂಯೋಗದಿಂದ ಆ ಮನೆಯಲ್ಲಿ ’ಮಾಳಿ’ ಎಂಬ ಸ್ತ್ರೀಯೊಂದಿಗೆ ಕೂಡಿದ.
ತಂದೆ ಹಾರುವ ಮಲ್ಲ ತಾಯಿ ಕುಂಬಾರ ಮಾಳಿ
ಇಂದು ಶೇಖರನ ವರದಿಂದ ಜನಿಸಿದವಗೆ
ಕಂದನೆಂದಾರು ಸರ್ವಜ್ಞ
ತಂದೆ ಮಲ್ಲನು ಅಲ್ಲ ತಾಯಿ ಮಾಳಿಯದಲ್ಲ
ಚಂದ್ರಶೇಖರನ ವರದಿಂದ ಪುಟ್ಟಿದಾ
ಕಂದ ತಾನೆಂದ ಸರ್ವಜ್ಞ
ತಾ ಎಂದೆನಲ್ಲದೆ ತಾಯಿ ನಾನೆಂದೆನೇ?
ತಾಯಿ ನಾನೆಂದು ನುಡಿದೇನು ಪರಸ್ತ್ರೀಯ
ತಾಯಿ ಎಂದೆಂನೆ ಸರ್ವಜ್ಞ

ಈ ಮೂರು ವಚನಗಳು ಸರ್ವಜ್ಞನು ಶಿವನ ಪ್ರಸಾದದಿಂದ ಹುಟ್ಟಿದವನು. ಆತನ ಜನನಕ್ಕೆ ನಿಮಿತ್ತ ಮಾತ್ರರು ಬಸವರಸ ಮತ್ತು ಮಾಳಿ ಲೋಕಮಾತೆಯಾದ ಪಾರ್ವತಿ ತನಗೆ ತಾಯಿ ಎಂದೂ, ಮಾಳಿ ಜನ್ಮಕೊಟ್ಟದ್ದಕ್ಕಾಗಿ ತಾಯಿ ಎಂದು ಕರೆಯುವುದಿಲ್ಲ. ಒಂದು ವೇಳೆ ಹೀಗೆ ಕರೆಯುವುದಾದರೆ ಪರಸ್ತ್ರೀಯರೆಲ್ಲರೂ ತನಗೆ ತಾಯಿ ಎಂದು ಹೇಳಿದನು.
ನೂಕಿದವರವ ರಾಗ ಕೂಕಟಿಯವನನು
ಲೋಕದೊಳಗೆಲ್ಲ ಕಡುವನುಡಿವ್ರತ
ಏಕವಾಗಿಹೆನು ಸರ್ವಜ್ಞ
ಡಾ|| ಜಿ.ಎಸ್.ಶಿವರುದ್ರಪ್ಪನವರು ’ಕುಂಬಾರ ಮಾಳಿಯಲ್ಲಿ ದ್ವಿಜೋತ್ತಮನೊಬ್ಬನಿಗೆ ಹುಟ್ಟದವನು ಸರ್ವಜ್ಞನೆಂಬ ಕಥೆಯಲ್ಲಿ ಈ ದೇಶದ ಪ್ರತಿಭೆ ಎಲ್ಲವೂ ಪ್ರತಿಷ್ಠಿತ ವರ್ಣದ ಬೀಜದ ಬೆಳೆಸು ಎಂಬ ಪರಂಪರಾಗತವಾದ ವರ್ಣಪ್ರತಿಷ್ಠೆಯ ಪ್ರಕ್ಷೇಪ ಯಾಕಾಗಿರಬಾರದು?" ಎನ್ನುತ್ತಾರೆ.
ಮೈಸೂರು ಪ್ರಾಚ್ಯ ವಸ್ತು ಸಂಶೋಧನಾಲಯದ ಕೈ ಬರೆಹದ ಪ್ರಕಾರ
ತಂದೆ ಕುಂಬಾರ ಮಲ್ಲ ತಾಯಿ ಮಳಲಾದೇವಿ
ಇಂದು ಶೇಖರನ ವರಪುತ್ರ
ಧರಣಿಗೆ ಬಂದು ಜನಿಸಿದ ಸರ್ವಜ್ಞ.
ಇದರಿಂದ ಸರ್ವಜ್ಞ ಕುಂಬಾರನೆಂದು ಇದಕ್ಕೆ ಆಧಾರವಾಗಿರುವ ಅಬಲೂರಿನಲ್ಲಿರುವ ಬ್ರಹ್ಮೇಶ್ವರ ದೇವಾಲಯ ಕುಂಬಾರರ ಆರಾಧ್ಯದೈವ ಎನ್ನುತ್ತಾರೆ.
ಕೆಳದಿ ಪ್ರಾಚ್ಯವಸ್ತು ಮತ್ತು ಇತಿಹಾಸ ಸಂಶೋಧನಾ ಸಂಸ್ಥೆ ಪ್ರಕಾರ ತಾಳೆಗರಿ ಬುಡದಲ್ಲಿ (೧೮ನೇ ಶತಮಾನ) ತಂದೆ ಶಂಕರಭಟ್ಟ ತಾಯಿ ಕುಂಬಾರಮಲ್ಲಿ ಚಂದ್ರಶೇಖರನ ವರಪುತ್ರ ನಾ ನಿನ್ನ ಕಾಣಯ್ಯ ಸರ್ವಜ್ಞ ಎಂದಿದೆ. ಹೀಗೆ ಜನನದ ಬಗ್ಗೆ ನಿಜವಾದ ಮಾಹಿತಿ ಲಭ್ಯವಾಗಿರುವುದಿಲ್ಲ. ಬೆಳೆಯುತ್ತ ತನ್ನ ಜನ್ಮದ ವಿಷಯವನ್ನು ತಿಳಿದುಕೊಂಡ ಸರ್ವಜ್ಞ ವಿರಕ್ತನಾಗಿ ಮನೆಯನ್ನು ತ್ಯಜಿಸಿರಬೇಕು. ತಂದೆ-ತಾಯಿ ಅಧೀನತೆ ಒಲ್ಲದೇ ಖಂಡಿತವಾಗಿ ಸರ್ವಜ್ಞನನ್ನು ಮನೆ ಬಿಟ್ಟು ಓಡಿಸಿರಬಹುದು. ಸರ್ವಜ್ಞ ಹುಟ್ಟಿನಿಂದ ಪ್ರಾಪ್ತವಾಗುತ್ತಿದ್ದ ಜಾತಿಯನ್ನು ಖಂಡಿಸಿದ.
"ಕರದಿ ಕಪ್ಪರವುಂಟು ಹಿರಿದೊಂದು ನಾಡುಂಟು
ಹರನೆಂಬ ದೈವ ನಮಗುಂಟು ತಿರಿವರಿಂ
ಸಿರಿವಂತರಾರು ಸರ್ವಜ್ಞ"
ಎಂದು ಸಂಸಾರಿಯಾಗಿ ನಿಲ್ಲದೇ ಸಂಸಾರಿಗಳ ಸಮಾಜದ ಉದ್ಧಾರಕ್ಕಾಗಿ ಸದಾ ಸಂಚಾರ ಕೈಗೊಂಡ "ಅಪ್ರತಿಮ ಜಂಗಮ" ಸಂಸಾರಕ್ಕೆ ಅತೀತನಾಗಿ, ವಿಶ್ವವ್ಯಕ್ತಿಯಾಗಿ ಬೆಳೆದು ಜನತೆಯ ಉದ್ಧಾರಕ್ಕಾಗಿ ಜೀವನ ಸವೆಯಿಸಿದ. "ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ" ಸಮಾಜವನ್ನು ಎದುರಿಸಿದ. ಬಹುಶಃ ಸರ್ವಜ್ಞನ ಜನನ ಪ್ರೇಮ ಪ್ರಕರಣದಿಂದ ಆಗಿರಬಹುದು.
ಯಾರು ಈ ಸರ್ವಜ್ಞ ?
ವರರುಚಿಯೇ ಸರ್ವಜ್ಞನಾದನೆಂದು ಹೇಳಿಕೊಳ್ಳುತ್ತಾನೆ. ಸರ್ವಜ್ಞ ಇದು ಅಂಕಿತವಾದರೆ ಅವನ ಹೆಸರೇನು ಎಂಬ ಪ್ರಶ್ನೆಗೆ ಉತ್ತಂಗಿ ಚನ್ನಪ್ಪನವರು ಎರಡೂ ಒಂದೇ ಎನ್ನುತ್ತಾರೆ. ’ಸರ್ವರೊಳಗೊಂದು ನುಡಿಗಲಿತು ವಿದ್ಯದ ಪರ್ವತವೇ ತಾನಾದ’ ಎನ್ನುವಲ್ಲಿ ಅವನ ನಿರಹಂಕಾರ ವ್ಯಕ್ತವಾಗುವುದು. ಪರಶಿವನ ಅನುಗ್ರಹದಿಂದ ಜನಿಸಿದ್ದರಿಂದ ’ಸರ್ವಜ್ಞ’ ಎಂದು ತನ್ನನ್ನು ತಾನು ಕರೆದುಕೊಂಡಿರಬಹುದು.
ತಂದೆ ಶೈವ ಬ್ರಾಹ್ಮಣ, ತಾಯಿ ವೀರಶೈವ ಕುಂಬಾರತಿ ಆಗಿದ್ದರಿಂದ ಸರ್ವಜ್ಞ ವೀರಶೈವ ಧರ್ಮವನ್ನು ಅನುಸರಿದ್ದನೆಂದು ಅವನ ವಚನಗಳಿಂದ ತಿಳಿದುಬರುತ್ತದೆ. ಷಟ್ಥಲ ಅಷ್ಟಾವರಣ ವೀರಶೈವ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅವನ ವಚನಗಳನ್ನು ಕಂಡುಬರುತ್ತವೆ ಎಂಬ ಅಭಿಪ್ರಾಯವನ್ನು ಡಾ|| ತಿಪ್ಪೇರುದ್ರಸ್ವಾಮಿ ಮತ್ತು ಪ್ರೊ|| ಎ.ಆರ್.ಕೃಷ್ಣಶಾಸ್ತ್ರಿಗಳು ಅಭಿಪ್ರಾಯ ಪಡುತ್ತಾರೆ.
ಸರ್ವಜ್ಞ ಸಂಸಾರಿಯಲ್ಲ ವಿರಾಗಿ
ಸುಂದರಾಂಗನೆಂಬುದು ಮುಂದೆ ನಿಂದಿರಲು
ಸೌಂದರ‍್ಯನರಿದ ಜ್ಞಾನಿಯು ಎಲುಬಿನಾ
ಹಂದರವ ಕಾಂಬ ಸರ್ವಜ್ಞ
ಕಚ್ಚೆ ಕೈ ಬಾಯಿಗಳು ಇಚ್ಛೆಯಲಿದ್ದರೆ
ಅಚ್ಯುತನಪ್ಪ ಅಜನಪ್ಪ ಲೋಕದಲಿ
ನಿಶ್ಚಿಂತನಪ್ಪ ಸರ್ವಜ್ಞ
ಎಂದಿದ್ದಾನೆ. ತನ್ನ ವಚನಗಳಲ್ಲಿ ಶೃಂಗಾರದ ಬಗ್ಗೆ ಸಂಭೋಗದ ಬಗ್ಗೆ ವೇಶ್ಯೆಯರ ಬಗ್ಗೆ, ಸ್ತ್ರೀ ಜಾತಿಗಳ ಬಗ್ಗೆ ಬರೆದಿದ್ದಾನೆಂದರೆ ಅನುಭವಿಸಿ ಬರೆದದ್ದಲ್ಲ, ಶಾಸ್ತ್ರಾಭ್ಯಾಸ ಅಥವಾ ಲೋಕಾನುಭವದಿಂದ ಹೇಳಿರುವನು.
ಸರ್ವಜ್ಞನ ತ್ರಿಪದಿಗಳು ಮತ್ತು ಶೈಲಿ
ಸರ್ವಜ್ಞ ಅಲೆಮಾರಿ ಸ್ವಭಾವದವನಾಗಿದ್ದರಿಂದ ಒಂದೆಡೆ ಕುಳಿತು ವಚನಗಳನ್ನು ರಚಿಸದೇ ಲೋಕ ಸಂಚಾರ ಮಾಡುತ್ತ ಅನುಭವ ಹೊಂದುತ್ತ ಅಲ್ಲಲ್ಲಿ ಬಂದ ಭಾವನೆಗಳನ್ನು ಅಲ್ಲಿಯೇ ಅಭಿವ್ಯಕ್ತಿಪಡಿಸುತ್ತ ತನ್ನ ಆಶು ಕವಿತ್ವದಿಂದ ವಚನಗಳನ್ನು ರಚಿಸಿದ. ಸರ್ವಜ್ಞನ ವಚನಗಳು ಹಲವಾರು ಮುದ್ರಣಗಳನ್ನು ಕಂಡರೂ ವಚನಗಳ ನಿಖರತೆಯ ಸಂಖ್ಯೆ ಇನ್ನೂ ತಿಳಿದಿಲ್ಲ. ಸಮಾಜದಲ್ಲಿ ಅನುಭವ ಉಳ್ಳವರು ವಚನ ಮಾದರಿಯಲ್ಲಿಯೇ ತಾವೇ ಬರೆದು ಸೇರಿಸಿರಬಹುದು. ಉತ್ತಂಗಿ ಚನ್ನಪ್ಪನವರು ಸಂಗ್ರಹಿಸಿದಕ್ಕಿಂತ ಹೆಚ್ಚು ವಚನಗಳು ಜನಪ್ರಿಯವಾಗಿವೆ. ಸರ್ವಜ್ಞ ಬರೆದಿಟ್ಟಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಅವನ ಅಂಕಿತದಲ್ಲಿರುವ ಕೆಲವು ವಚನಗಳು ಅವನದೇ ಶೈಲಿ ಹೊಂದಿರುವುದಿಲ್ಲ. ಅವನ ಭಾಷೆ ಸರಳ, ತನ್ನ ಯೋಚನೆಗಳನ್ನು ರೂಪಕ ಉಪಮೆಗಳಿಂದ ಸಮರ್ಥಿಸಿಕೊಳ್ಳುವನು. ಶಬ್ದಾಲಂಕಾರಗಳು ತ್ರಿಪದಿಯಲ್ಲಿ ಹಾಸುಹೊಕ್ಕಾಗಿವೆ. ದ್ವಿಯಾಕ್ಷರ ಪ್ರಾಸವು ಎಲ್ಲ ತ್ರಿಪದಿಗಳಲ್ಲಿ ಕಂಡುಬರುತ್ತದೆ. ಶೃಂಗಾರ ಹಾಸ್ಯರಸಗಳನ್ನು ಬಳಸಿದ್ದಾನೆ. ಬಸವಣ್ಣನವರ ಪ್ರಭಾವವೂ ಉಂಟಾಗಿದೆ.
ನುಡಿಯಲ್ಲಿ ಎಚ್ಚೆತ್ತು ನಡೆಯ ತಪ್ಪಿದರೆ
ಹಿಡಿದಿರ್ದ ಲಿಂಗ ಹೊಡಮರಳಿ ಕಚ್ಚುವ
ಹೆಡೆನಾಗ ನೋಡಾ ಸರ್ವಜ್ಞ

ಜನಸಾಮಾನ್ಯರು ವಚನಗಳನ್ನು ಪ್ರೀತಿಸಿದ್ದರಿಂದ ಅವು ಜನ-ಜನಿತವಾದವು.
ತ್ರಿಪದಿಗಳ ಗುಣ
ಸು.೧೦ನೇ ಶತಮಾನದಲ್ಲಿ ಶಾಸನಗಳಲ್ಲಿ ಕಂಡುಬಂದ ತಿವದಿ, ತಿವಳಿ, ನಾಮಾಂತರ ಹೊಂದಿ ತ್ರಿಪದಿಯಾಯಿತು. ಇದು ಅಚ್ಚ ಕನ್ನಡ ಛಂದಸ್ಸಿನ ಹಾಡುಗಬ್ಬ. ಈ ಪ್ರಕಾರದಲ್ಲಿ ಜನಪದ ಗೀತೆಗಳು ಇವೆ. ಜೀವನದ ಸಮಸ್ಯೆಗಳ ನೇರವಾದ, ಅಪಾರವಾದ ಅನುಭವ, ಉದಾರವಾದ ಮಾನವೀಯ ಅನುಕಂಪ, ಉನ್ನತವಾದ ಅಧ್ಯಾತ್ಮಿಕ ನಿಲುವು ಇವುಗಳಿಂದ ಮುಪ್ಪರಿಗೊಂಡ ಸರ್ವಜ್ಞನ ವಚನಗಳು ತ್ರಿಪದಿ ರೂಪದಲಿ ಹೊರಹೊಮ್ಮಿದ ಕಾವ್ಯಪ್ರತಿಭೆ ಎಂದಿದ್ದಾರೆ. ಡಾ||ಎಚ್.ತಿಪ್ಪೇರುದ್ರಸ್ವಾಮಿಯವರು, ಡಾ|| ರಂಶ್ರೀ ಮುಗಳಿಯವರು ಸರ್ವಜ್ಞನ ತ್ರಿಪದಿಗಳಲ್ಲಿ ಕಥೆಯಿಲ್ಲ, ವರ್ಣನೆ ಇಲ್ಲ ಆದರೆ ಸಮಗ್ರ ಜೀವನ ಕಥೆ ಜೀವನ ಧರ್ಮ ರೂಪುಗೊಂಡಿದೆ. ಜೀವನ ರಸಕ್ಕೆ ಪೋಷಕವಾಗಿದೆ. ಅವು ನೀತಿ ಬೋಧಕವಲ್ಲ ಅನುಭವ ವೇದ ವಿವೇಕದ ವಾಣಿ ಅವುಗಳಲ್ಲಿದೆ. ಯಾವ ಭಿಡೆ ಮುರವತ್ತುಗಳಿಲ್ಲದೇ ಅವನು ಕಂಡದ್ದನ್ನಾಡಿದ್ದಾನೆ ಅವನ ತ್ರಿಪದಿಗಳ ತ್ರಿವಿಕ್ರಮ ಶಕ್ತಿ ಅಚ್ಚ ಕನ್ನಡದ ಸೊಬಗನ್ನು ಎಷ್ಟು ಹೊಗಳಿದರೂ ಸಾಲದು. ಅವನ ವಚನಗಳು ಜನತೆಯ ಜ್ಞಾನಕೋಶವಾಗಿವೆ. ಸ್ಫೂರ್ತಿವಾಕ್ಯಗಳಾಗಿವೆ. ಸರ್ವಜ್ಞನ ವಚನಗಳು ಕನ್ನಡ ಪ್ರಜ್ಞೆಯ ಪ್ರತೀಕ. ಅವು ಕನ್ನಡಗರಿಗೆ ತಿಳಿವಳಿಕೆ ಕೊಡುವವು.
ಸರ್ವಜ್ಞನ ಕೆಲವು ವಿಚಾರಗಳು
ಪ್ರಕೃತಿ ಸಹಜವಾದ ಕ್ರಿಯೆಗಳ ಮೂಲಕ ಕುಲದ ಭೇದದ ಬಗ್ಗೆ ಸರ್ವಜ್ಞ ಪ್ರಶ್ನಿಸುವನು.
ಎಲುಕೊರಳು ನರತೊಗಲು ಬಿಲರಂಧ್ರ ಮಾಂಸದೊಳು
ಹಲತೆರದ ಮಲವು ಸುರಿದಿರಲು ಕುಲಕ್ಕಿನ್ನು
ಬಲವುಂಟೇ ಹೇಳು ಸರ್ವಜ್ಞ
ಹಸಿವು ತೃಷೆ ನಿದ್ರೆಗಳು ವಿಷಮ ಮೈಥುನ ಬಯಕೆ
ಪಶುಪಕ್ಷಿ ನರಗೆ ಸಮನಿರಲು ಕುಲವೆಂಬ
ಘರ್ಷಣೆ ಎತ್ತಣದು ಸರ್ವಜ್ಞ
ಜಾತಿ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಕೊಡುತ್ತ
ನಡೆವುದೊಂದೆ ಭೂಮಿ ಕುಡಿಯುವುದೊಂದೇ ನೀರು
ಸುಡುವಗ್ನಿಯೊಂದೆ ಇರುತಿರಲು
ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ
ಯಾತರ ಹೂವದು ನಾತರದೆ ಸಾಲದೇ
ಜಾತಿ-ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ
ಸತ್ತದನ ತಿಂಬಾತ ಎತ್ತಣದ ಹೊಲೆಯನು
ಒತ್ತೊತ್ತಿ ಜೀವಿಯ ಕೊರಳಿರಿದು ತಿಂಬಾತ
ಉತ್ತಮ ಹೊಲೆಯ ಸರ್ವಜ್ಞ
ಸರ್ವಜ್ಞ ಆತ್ಮಜ್ಞಾನದ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದಾನೆ. ತಾನಾರೆಂಬುದನ್ನು ತಿಳಿದುಕೊಂಡು ಪರತತ್ವದೊಡನೆ ತನ್ನ ಸಂಬಂಧ ಎಂಥದೆನ್ನುವುದನ್ನು ತಿಳಿದುಕೊಳ್ಳುವುದು ತತ್ವಜ್ಞಾನದ ಗುರಿ.
ಏನಾದೊಡೇನಯ್ಯ ತಾನಾಗದನಕ
ತಾನಾಗಿ ತನ್ನನಾದೊಡೆ ಲೋಕ ತಾ
ನೇನಾದೊಡೆನು ಸರ್ವಜ್ಞ
ತಾನೊಂದನೆಯ್ದಿದೆನು ಏನೊಂದು ಪಿಡಿದಿರನು
ತನ್ನಂತೆ ಪರರ ಕಾಂಬವನು ಜಗವೆಲ್ಲ
ತಾನಾದ ಬಳಿಕ ಸರ್ವಜ್ಞ
ಜಗತ್ತೆಲ್ಲ ತಾನು ಎಂದು ತಿಳಿದುಕೊಂಡು ತನ್ನಂತೆ ಪರರನ್ನು ಕಾಣುವುದೇ ಸರ್ವಜ್ಞನ ಸ್ವಂತ ಸಾಧನೆ.
ದೇವರು-ಧರ್ಮದ ಬಗ್ಗೆ ಸರ್ವಜ್ಞನ ಅಭಿಪ್ರಾಯ ನಿಚ್ಚ್ಚಳವಾದದ್ದು
ಕಾಯ-ಕಮಲವೆ ಸಜ್ಜೆ ಜೀವರತುನವೇ ಲಿಂಗ
ಭಾವ ಪುಷ್ಪದಿ ಶಿವಪೂಜೆ ಮಾಡುವನ
ದೇವನೆಂದೆಂಬೆ ಸರ್ವಜ್ಞ
ಒಬ್ಬನಲ್ಲದೇ ಜಗಕೆ ಇಬ್ಬರುಂಟೇ ಮತ್ತೆ
ಒಬ್ಬ ಸರ್ವಜ್ಞ ಕರ್ತನೀ ಜಗಕ್ಕೆಲ್ಲ
ಒಬ್ಬನೇ ದೈವ ಸರ್ವಜ್ಞ
ಕಲ್ಲಿನಲ್ಲಿ ದೇವರ ಮೂರ್ತಿ ಕಾಣುವ ಬಗ್ಗೆ
ಕಲ್ಲುಗುಂಡಿಗ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದೆ ಹಣೆಯ ಬಡಿವರ್ಗೆ ಬುಗುಡಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ
ಭಕ್ತ ತನ್ನಲ್ಲಿಯೇ ದೇವನನ್ನು ಕಂಡುಕೊಳ್ಳುವ ಮಟ್ಟಕ್ಕೆ ಬರಬೇಕು
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸುತ ಬರೆದ ಪಟ್ಟಿದೊಳಗೆ ಇರುವಾತ
ತನ್ನೊಳಗೆ ಇರನೆ ಸರ್ವಜ್ಞ
ದೇವರಲ್ಲಿ ಏಕನಿಷ್ಠೆಯ ಬಗ್ಗೆ
ಅಷ್ಠವಿಧದರ್ಚನೆಯ ನೆಷ್ಟು ಮಾಡಿದರೇನು
ನಿಷ್ಠೆ ನೆಲಗೊಳಗೆ ಭಜಿಸುವ ಪೂಜೆಯದು
ನಷ್ಟ ಕಾಣಯ್ಯ ಸರ್ವಜ್ಞ
ಅಹಂಕಾರ ನಿರಸನದಿಂದ ಅಂತರಂಗ ಪರಿಶುದ್ಧತೆ ಸಾಧ್ಯ ಎಂಬುದನ್ನು
ಬೊಮ್ಮ ತಾನೆಂಬುದು ಸುಮ್ಮನೆ ಬಹುದಲ್ಲ
ಹಮ್ಮಿನ ಪಥವನಳಿದರೆ ಪರಬೊಮ್ಮ
ಗಮ್ಮನೆ ಅಕ್ಕು ಸರ್ವಜ್ಞ
ಗುರುವಿನ ಶಕ್ತಿಯ ಮಹತ್ವವನ್ನು
ಹರಗೆ ಕರ ಮುಗಿದೊಡೆ ವರ ನೀಡಲೊಲ್ಲನು
ನರ ರೂಪಧರಿಸಿ ಗುರುವಾಗಿ ಬೋಧಿಪಗೆ
ಸರಿಯೆ ಹರ ಕಾಗೆ ಸರ್ವಜ್ಞ
ಗುರುವಿನ ಉಪದೇಶದಿಂದ ಕಷ್ಟ ಪರಿಹಾರ ಎಂಬುದನ್ನು
ಬೆಳ್ಳುಳ್ಳಿ ಉಸಿಲಂಗೆ ಪೊಳ್ಳಯಿಸಿ ಹರಿದಂತೆ
ಒಳ್ಳೆಯ ಗುರುವಿನುಪದೇಶದಿಂ ಭವದ
ಬಳ್ಳಿ ಹರಿದಿಹುದು ಸರ್ವಜ್ಞ
ಗುರುವಚನುಪದೇಶ ಗುರುವಚನ ಪರಭಕ್ತಿ
ಗುರುವಚನ ಪದವದುವೆ ಗುರುವಚನವೆ
ಪರಮಾರ್ಥವಯ್ಯ ಸರ್ವಜ್ಞ
ಸರ್ವಜ್ಞ ವಚನಕಾರರ ಆದರ್ಶಗಳನ್ನು ಪಾಲಿಸಿದ್ದಾನೆ. ಹಲವು ವಚನಕಾರರ ಪ್ರಭಾವ ಆತನ ಮೇಲಿದೆ. ಹಲವು ವಚನಗಳಲ್ಲಿ ಲಿಂಗ ಪದ್ಧತಿ ಅಷ್ಟಾವರಣ ಇಷ್ಟಲಿಂಗ ಷಟ್‌ಸ್ಥಲಗಳ ಮಹತ್ವವನ್ನು ವಿವೇಚಿಸಿದ್ದಾನೆ. ಲಿಂಗಾಂಗ ಸಾಮರಸ್ಯವೇ ಷಟ್‌ಸ್ಥಲಾಚರಣೆಯ ಗುರಿ ಎನ್ನುವುದನ್ನು
ಷಟ್ಸ್ಥ ಮರ್ಮವನು ಸ್ಫುಟವಾಗಿ ತಾನರಿದು
ದಿಟವಾಗಿ ನಂಬಿ ನಡೆದಿಹರೆ ಇಹದಲ್ಲಿ
ಘಟಿಸುವುದು ಮುಕ್ತಿ ಸರ್ವಜ್ಞ
ಭಕ್ತನ ನಿಷ್ಠಾ ಭಕ್ತಿಯನ್ನು ಕುರಿತು (ಭಾವಶುದ್ಧಿ)
ಒಮ್ಮನದಲ್ಲಿ ಶಿವಪೂಜೆಯ ಗಮ್ಮನೆ ಮಾಡುವುದು
ಇರ್ಮನವಿಡಿದು ಕೆಡಬೇಡ ವಿಧಿವಶವು
ಸುಮ್ಮನೆ ಕೆಡಗು ಸರ್ವಜ್ಞ
ಲಿಂಗಾರ್ಪಿತವಲ್ಲದ ಅನರ್ಪಿತ ವಸ್ತುಗಳನ್ನು ದೂರಿಕರಿಸುವುದೇ ಪ್ರಸಾದ ಸ್ಥಲ
ಲಿಂಗಕ್ಕೆ ತೋರದಲೆ ನುಂಗಿದಡೆ ಏನಹುದು
ಭಂಗಬಂಧನವು ಘನವಹುದು
ಆಲಿಂಗ ಹಿಂಗಿವುದು ಸರ್ವಜ್ಞ
ಪ್ರಾಣಲಿಂಗಿ ಸ್ಥಲದ ಬಗ್ಗೆ
ಅಣುವಾದಿಯೊಳಿರಲು ಹೂಣಿ ಲಿಂಗದಿಮನವ
ಕೇಣವಿಡಿದಿಹನು ವಿರತಿಯಲಿ ದೇಹದಿಹ
ಪ್ರಾಣಲಿಂಗಿಯು ತಾ ಸರ್ವಜ್ಞ
ಲಿಂಗಾಂಗ ಸಾಮರಸ್ಯದ ಬಗ್ಗೆ
ನಾನು ನೀನುಗಳಳಿದು ತಾನು ಲಿಂಗದಿ ಉಳಿದು
ನಾನು ಭ್ರಮೆಗಳ ಹರಿಪಿಂಗಿ ನಿಂದವನ
ತಾನೈಕ್ಯ ನೋಡ ಸರ್ವಜ್ಞ
ಸರ್ವಜ್ಞ ಜೀವ-ಶಿವರ ಐಕ್ಯದ ಸಾರವನ್ನು ಹೇಳಿದ್ದಾನೆ. ಅಲ್ಲಲ್ಲಿ ವ್ಯಂಗ್ಯವಾಗಿ ಸಮಾಜವನ್ನು ಎಚ್ಚರಿಸಿದ್ದಾನೆ
ನೆಲವನ್ನು ಮುಗಿಲನ್ನು ಹೊಲಿವರುಂಟೆದರವ
ಹೊಲಿವರು ಹೊಲಿವರೆನಬೇಕು| ಮೂರ್ಖನಲಿ
ಕಲಹ ಬೇಡವೆಂದ ಸರ್ವಜ್ಞ
ಗವುಡನೊಳು ಹಗೆತನವು ಕಿವುಡನೊಳು ಏಕಾಂತ
ಪ್ರವುಢನೊಳು ಮೂಢನುಪದೇಶ| ಹಸಿದೆದ್ದು
ತವುಡ ತಿಂದಂತೆ ಸರ್ವಜ್ಞ
ಸರ್ವಜ್ಞ ತನ್ನ ಕೆಲವು ವಿಚಾರಗಳನ್ನು ಈ ರೀತಿ ವ್ಯಕ್ತ
ಪಡಿಸಿದ್ದಾನೆ.
ನಿಜವಾದ ತೀರ್ಥವೆಂದರೆ
ಸತ್ಯರ ನುಡಿ ತೀರ್ಥ ನಿತ್ಯರ ನಡೆ ತೀರ್ಥ
ಉತ್ತಮರ ಸಂಗವದು ತೀರ್ಥ ಹರಿವನೀ
ಹೆತ್ತಣದು ತೀರ್ಥ ಸರ್ವಜ್ಞ
ಸ್ವಾರ್ಥಿಗಳ ಬಗ್ಗೆ
ಇಂದು ನಾಳೆಗೆ ಎಂದು ತಂದು ಕೂಡಿಡಬೇಡ
ಬಂದುದನೆ ಕೊಂಡು ಸುಖಿಸುತ ಬೋನೆಯದು
ಬಂದಾಗ ನರಳು ಸರ್ವಜ್ಞ
ಅಹಿಂಸೆ ಬಗ್ಗೆ
ಕೋಲುವ ಧರ್ಮದ ನೊಯ್ದು ಒಲೆಯೊಳಗಿಕ್ಕೂ
ಕೊಲಲಾಗದೆಂಬ ಜೈನರಾ ಮತವೆನ್ನ
ತಲೆಯ ಮೇಲಿರಲಿ ಸರ್ವಜ್ಞ
ಜ್ಞಾನಿಯ ಬಗ್ಗೆ
ತನ್ನ ನೋಡಲು ಎಂದು ಕನ್ನಡಿಯು ಕರೆಯುವುದೇ
ತನ್ನಲ್ಲಿ ಭಾವ ಉದಿಸಿದ ಮಹಾತ್ಮನು
ಕನ್ನಡಿಯು ಜಗಕೆ ಸರ್ವಜ್ಞ
ವಿದ್ವಾಂಸರ ಅಭಿಪ್ರಾಯ
ಬೇಂದ್ರೆಯವರ ಪ್ರಕಾರ ಸರ್ವಜ್ಞನಿಗೆ ವೈಯಕ್ತಿಕ ಹಿತಾಸಕ್ತಿಗಳು ಇರಲಿಲ್ಲ. ಆತನಿಗೆ ಇದ್ದುದು ಸಾಮಾಜಿಕ ಹಿತಾಸಕ್ತಿ, ಅವನ ವಚನಗಳ ಉದ್ದಕ್ಕೂ ಚಿತ್ರಿತವಾಗಿರುವುದು ಸಮಾಜದ ಅತೃಪ್ತ ಜೀವನ. ಅದು ಇದ್ದ ಸ್ಥಿತಿಯನ್ನೂ ಇರಬೇಕಾದ ಸ್ಥಿತಿಯನ್ನೂ ತುಲನೆ ಮಾಡಿ ವಿಶ್ಲೇಷಿಸಿದ್ದು ಮಹತ್ವದ ವಿಚಾರವೆನ್ನಬೇಕು. ದಾರಿತಪ್ಪುತ್ತಿದ್ದ ಸಮಾಜವನ್ನು ಸರಿದಾರಿಗೆ ತಂದು ನೇರ್ಪುಗೊಳಿಸುವುದು ಈ ಎಲ್ಲದರ ಹಿನ್ನೆಲೆಯಾಗಿತ್ತು. ಹೀಗಾಗಿ ಅವನದು ಕಲೆಯಲ್ಲ ಕಲೆಗಿಂತ ಮಿಗಿಲಾದದ್ದು. ಸರ್ವಜ್ಞ ತನ್ನ ಕಾವ್ಯವನ್ನು ಸಾಮಾಜಿಕ ಅಸ್ತ್ರವಾಗಿ ಬಳಸಿದ್ದಾನೆ.
ರಾಷ್ಟ್ರಕವಿ ಡಾ||ಶಿವರುದ್ರಪ್ಪನವರ ಪ್ರಕಾರ "ಸರ್ವಜ್ಞನ ವಚನಗಳು ನೀತಿಕಾವ್ಯದ ಸಮಸ್ತ ಲಕ್ಷಣಗಳನ್ನು ಒಳಗೊಂಡಿವೆ. ಇವುಗಳಿಗೆ ಧರ್ಮಪ್ರಸಾರದ ಉದ್ದೇಶವಿಲ್ಲ. ಅತ್ಯಂತ ನಿರ್ಲಿಪ್ತವಾಗಿ ನಿಂತರೂ ಜೀವನ ಪ್ರೀತಿಯನ್ನು ಕಳೆದುಕೊಳ್ಳುವ ಹಂಗಿಗೂ ಒಳಗಾಗದ ವಿಮರ್ಶಕನ ಕಣ್ಣಿನಿಂದ ಲೋಕವನ್ನು ನೋಡಿದ ವ್ಯಕ್ತಿತ್ವವೊಂದರ ಅನುಭವ ಅಭಿವ್ಯಕ್ತಿಗಳನ್ನು ಇವುಗಳಲ್ಲಿ ಕಾಣಬಹುದು. ಕಾವ್ಯದಲ್ಲಿ ನೀತಿ ತಾನೆ ತಾನಾಗಿ ಎದ್ದು ಕಂಡು, ನೀರಸವಾಗದೇ ತುಂಬ ಆತ್ಮೀಯವಾದ ರೀತಿಯಲ್ಲಿ ಅರಿವಿಗೆ ಬರುತ್ತದೆ."
ಮಲ್ಲೇಪುರಂ ವೆಂಕಟೇಶ್ ಪ್ರಕಾರ "ಸರ್ವಜ್ಞ ಎಂಬ ಹೆಸರು ಕನ್ನಡ ಸಂಸ್ಕೃತಿಯ ಒಂದು ಮುಖ್ಯಭಾಗ. ಆಂಧ್ರದ ವೇಮನ, ತಮಿಳಿನ ತಿರುವಳ್ಳುವರ್, ಕನ್ನಡದ ಸರ್ವಜ್ಞ, ದಕ್ಷಿಣ ಅನುಭಾವ ಸಾಹಿತ್ಯದ ಚರಿತ್ರೆಯ ತ್ರಿಮೂರ್ತಿಗಳು. ಕಳೆದ ೫೦೦ ವರ್ಷಗಳಿಂದ ಸರ್ವಜ್ಞನರ ಮನಸ್ಸನ್ನು ಒಂದೆಡೆ ಕೂಡಿಸುವ ಕೆಲಸ ಮಾಡಿದವನು. ಸರ್ವಜ್ಞ ಓದಿದವರೂ, ಓದದವರೂ; ಕಲಿತವರೂ, ಕಲಿಯದವರೂ ತಿಳಿದವರು, ತಿಳಿಯದವರೂ, ಭೇದಭಾವವಿಲ್ಲದೆ ಎಲ್ಲರ ಮನಸ್ಸಿನ ಆಳದಲ್ಲಿ ಅವನು ಕುಳಿತುಬಿಟ್ಟಿದ್ದಾನೆ" ಸರ್ವಜ್ಞ ಮಾನವತಾವಾದಿ ಮತ್ತು ಕನ್ನಡ ಪ್ರಜ್ಞೆಯ ಪ್ರತೀಕ. ತನ್ನ ಅನುಭವವನ್ನು ಭಾಷೆಯ ಜೊತೆಗೆ ತರುವನು. ಸಾಮಾನ್ಯ ಜೀವನ ಕಥನವೇ ಅವನ ವಚನಗಳ ವಸ್ತುವಾದ್ದರಿಂದ ಸಾಮಾನ್ಯರ ಕನ್ನಡ ಅವನ ವಚನಗಳಲ್ಲಿ ಕಾಣುತ್ತದೆ. ಹೀಗಾಗಿ ಕನ್ನಡ ನಾಡು ನುಡಿ ಪ್ರೇಮವೇ ಮೂರ್ತಿವೆತ್ತಂತಿದೆ.
ಪ್ರೊ.ಸಂಗನಾಳಮಠ ಯು.ಎನ್.
ವಿಶ್ರಾಂತ ಉಪನ್ಯಾಸಕರು.

ಜಗದ ಕವಿಯ ನಾನು



‘ನಾನು
ವಿಶ್ವಮಾತೆಯ ಗರ್ಭ ಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು!
ಭೂಮಿ ತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು!
ಭರತ ಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು!
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು!
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು!
ಈ ಐದು ಐದೆಯರ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು!
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು!
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನುಇಲ್ಲಿ
ಅಂಬಿಕಾತನಯನಿವನು!

-ಅಂಬಿಕಾತನಯದತ್ತ

ಕಾವ್ಯಸಿದ್ಧಿಸುತ್ತದೆ ಎಂಬ ಮಾತಿಗೆ ಬೇಂದ್ರೆಯವರೇ ಸಾಕ್ಷಿ. ಅವರ ಕಾವ್ಯದ ವಿಸ್ತೃತತೆ ಮತ್ತೆ ಮತ್ತೆ ಇದನ್ನು ಸಾಬೀತು ಮಾಡುತ್ತಲೇ ಇರುತ್ತದೆ. ಕವಿತೆಯೊಂದರ ಓದು ಅದು ತೆರೆದುಕೊಳ್ಳುವ ಬಗೆಯಲ್ಲಿಯೇ ಅನನ್ಯವಾಗುತ್ತದೆ. ಇದು ಬೇಂದ್ರೆಯವರಂಥ ಕವಿಗಳಿಗೆ ಮಾತ್ರ ಸಾಧ್ಯ. ಪ್ರತಿ ಪದ್ಯದ ವಸ್ತು ವೈವಿಧ್ಯತೆ ಮತ್ತು ಅದು ಆ ಮೂಲಕ ಚಾಚಿಕೊಳ್ಳುವ ಅರ್ಥಬಾಹುಳ್ಯತೆ ಸ್ಪಷ್ಟವಾಗಬೇಕಾದರೆ ಬೇಂದ್ರೆಯವರನ್ನು ಓದಿಯೇ ಅನುಭವಿಸಬೇಕು.
ಬೇಂದ್ರೆಯಂತಹ ಕವಿಗಳನ್ನು ಓದುವಾಗ ಕವಿಯನ್ನು ವಿಶ್ವ ಸಂಸ್ಕೃತಿಯ ವಕ್ತಾರ ಎನ್ನಬೇಕೆನಿಸುತ್ತದೆ. ಅವರ ಈ ನಾನು ಎಂಬ ಪುಟ್ಟ ಕವಿತೆ ತನ್ನೊಳಗೆ ಕಾಪಿಟ್ಟುಕೊಂಡು ಕೂತ ಅರ್ಥ ಸಾಧ್ಯತೆ ಹೀಗೆ ಅನಿಸುವಂತೆ ಮಾಡುತ್ತದೆ. ನಾನು ಎಂಬ ಪರಿಕಲ್ಪನೆಯ ಅಸ್ತಿತ್ವ, ಅಹಂ, ಸ್ವಾರ್ಥ, ಅನನ್ಯತೆ... ಏನೆಲ್ಲ ನೋಟಕ್ಕೆ ಅನುವು ಮಾಡಿಕೊಡುತ್ತದೆ. ಕುಟುಂಬವೊಂದರ ಸದಸ್ಯನಾಗಿ ಬೆಳೆಯುವ ಕ್ರಿಯೆ ಮುಂದೆ ಸಾಮಾಜಿಕೀಕರಣಗೊಳ್ಳುವ ಚಲನೆಯನ್ನು ಈ ಪದ್ಯ ಸೂಚ್ಯವಾಗಿ ದನಿಸಿದೆ. ನಾನು ಎಂಬ ಅಣುವಿನ ಸ್ವರೂಪ ಮುಂದೆ ಹೇಗೆ ವ್ಯಾಪಕ ವಿಶ್ವಾತ್ಮಕತೆ ಪಡೆಯುವುದೆಂಬುದರ ರೂಪಕವಿದು. ಈ ಕವಿತೆಯ ಗುಣವೇ ಅದರ ಸಾಂದ್ರತೆ. ನಾನು ಎಂಬುದನ್ನು ಸಂಕುಚಿತ, ಕುಬ್ಜತೆ, ಸಣ್ಣತನದಿಂದ ಬಿಡುಗಡೆಗೊಳಿಸುವ ಮಹತ್ವಾಕಾಂಕ್ಷೆ ಕವಿಯದು.
ಒಬ್ಬ ಶ್ರೇಷ್ಠ ಕವಿಯನ್ನು ವಿಶ್ವ ಸಂಸ್ಕೃತಿಯ ವಕ್ತಾರ ಎಂದು ಕರೆಯುವುದರ ಜತೆಜತೆಗೆ ಆ ಕವಿಯ ಪ್ರತಿಕವನಗಳೂ ಅವನದೇ ಆದ ತಾತ್ವಿಕ ಟಿಪ್ಪಣಿಗಳ ಮುಂದುವರಿಕೆ ಎನ್ನಬಹುದು. ಕವಿಯ ಪ್ರತಿ ರಚನೆಗಳು ಪ್ರಣಾಳಿಕೆಯೊಂದರ ಸ್ಪಷ್ಟ ಸ್ವರೂಪದೆಡೆಗಿನ ನಡೆಯೇ ಆಗಿರುತ್ತದೆ. ಹಾಗಾಗಿ ಬೇಂದ್ರೆಯವರ ನಾನು ಕವಿತೆ ಅವರ ವಿಶ್ವಾತ್ಮಕ ಚಿಂತನೆಯ ಪರಿಕ್ರಮವೇ ಆಗಿದೆ.
ಈ ಕವಿತೆಯನ್ನು ದಯವಿಟ್ಟು ಗಮನಿಸಿ! ಒಳಮನದಲ್ಲಿ ಓದಿಕೊಂಡು, ಅರ್ಥದ ಜೊತೆ ಮಾತಿಗೆ ಕೂತಾಗ ಅದರ ಅರ್ಥ ಬಿಳಲುಗಳ ಬಾಚುವಿಕೆಗೆ ಮೇರೆಯಿಲ್ಲ! ಕವಿಗೆ ಐವರು ತಾಯಂದಿರು! ಜನ್ಮ ನೀಡಿದಾಕೆ, ಕನ್ನಡ ತಾಯಿ, ಭರತ ಮಾತೆ, ಭೂಮಾತೆ ಮತ್ತು ವಿಶ್ವಮಾತೆ... ಕವನದಲ್ಲಿ ಹೀಗೆ ನನ್ನತನ ಬೆಳೆಯುತ್ತಾ ಹೋಗುವ ಪರಿಯಿದು. ವಿಸ್ತರಿಸಿಕೊಳ್ಳುವ ಜಾಡಿದು. ವಿಶ್ವದ ಅಸಂಖ್ಯ ಜೀವವೈವಿಧ್ಯತೆಯ ಮಧ್ಯೆ ತಾನು ಎಂಬುದು ಪುಟ್ಟ ಕಣವೇ ಎಂದು ಪರಿಭಾವಿಸುತ್ತಲೇ ಈ ಜನ್ಮವನ್ನೂ ಕೀರ್ತಿಯೆಂದು ಕರೆವ ಉದಾತ್ತ ಗುಣ ಇದರ ಮೂಲ. ಜೀವನಿಷ್ಟ ವಾತಾವರಣದಲ್ಲಿ ಪ್ರತಿ ಮನುಷ್ಯನೂ ಒಂದು ಬೆಳಕು, ಪ್ರತಿ ಬದುಕೂ ಒಂದೊಂದು ಕಾರ್ತಿಕೋತ್ಸವ, ಯಾರ ಜೀವವೂ ಕತ್ತಲೆಯಲ್ಲ ಎಂಬ ಮಾತೇ ಜಗದ ಭ್ರಾತೃತ್ವದ ಸಾಂತ್ವನದ ನಯ ನುಡಿಯಾಗಿದೆ. ಕವಿ ತನ್ನನ್ನು ತಾನು ಮಣ್ಣು ಗಾಳಿ ಪರಿಮಳಗಳ ಜೊತೆ ಕಂಡುಕೊಳ್ಳುವ ಬಗೆಯೇ ಇಂತಹ ಚಿಂತನೆಯನ್ನು ಎತ್ತರಿಸಬಲ್ಲುದು. ಇವುಗಳ ಜೊತೆಗಿನ ಸಂಬಂಧ ಕಾಯ್ದುಕೊಳ್ಳುವ ತವಕವೇ ವ್ಯಕ್ತಿತ್ವದ ಘನತೆಯನ್ನು ಸಾಬೀತುಪಡಿಸಬಲ್ಲದು. ಸಾರಬಲ್ಲದು.
ವೈಯಕ್ತಿಕ ಅಭಿವ್ಯಕ್ತಿಯ ಸಾರ್ವತ್ರೀಕರಣಗೊಳ್ಳುವ ಮಹತ್ತು ಬೇಂದ್ರೆಯವರು ಚೆನ್ನಾಗಿ ಬಲ್ಲರು. ವಿಶ್ವಮಾತೆಯ ಗರ್ಭ ಕಮಲ ಜಾತ ಎಂಬ ಕಲ್ಪನೆಯೇ ನೇರವಾಗಿ ತನ್ನನ್ನು ತಾನು ವಿಸ್ತರಿಸಿಕೊಳ್ಳುವ ಜಿಗಿತವಾಗಿಬಿಡುತ್ತದೆ. ಗರ್ಭ, ಪರಾಗ, ಮೈಮಣ್ಣು ಇಂಥ ಪದಗಳ ಮೂಲಕ ಸೃಷ್ಟಿಯ ಸಾರ್ವತ್ರಿಕ ನಿಯಮವನ್ನು ವಿವರಿಸುತ್ತ ಸಾಮಾನ್ಯಿಕರಿಸಿಕೊಳ್ಳುತ್ತಾರೆ. ಹಾಗಾಗಿ ಜೀವ ಪಂಚಭೂತಗಳಿಂದ ಹೊರತಲ್ಲ! ನಾನು ಎಂಬ ಎಳೆತನ ಗಟ್ಟಿಗೊಳ್ಳುವುದೇ ಇಂತಹ ಸಾಂಗತ್ಯದಿಂದ. ಐದು ಐದೆಯರು, ಐದು ತಾಯಂದಿರು, ಪಂಚಭೂತ ಹೀಗೆ ನಂಟು ಬೆಳೆಯುತ್ತಾ ಹೋಗಬಲ್ಲದು. ಈ ಬಗೆಯ ಸರಿದೂಗಿಸುತ್ತಾ ಹೋಗುವ ಕ್ರಿಯೆಯೇ ನಾನು ಎಂಬುದನ್ನು ಸಶಕ್ತಗೊಳಿಸಿಬಿಡುತ್ತದೆ. ಗರ್ಭವೊಂದರಲ್ಲಿ ಅಣುವಾಗಿ, ಬರಿ ಮೂರ್ತಿಯಾಗಿ, ಜೀವಿಯಾಗಿ, ಕೊನೆಗೆ ವಿಶ್ವದ ನುಡಿಯಾಗಿ ಮಾಗುವ ನಡೆ ಇದೆಯಲ್ಲ, ಅದು ಕವಿಯನ್ನು ಗೆಲ್ಲಿಸಿಬಿಡುತ್ತದೆ! ಕವಿತೆಯನ್ನೂ.
ಕೊನೆಗೆ ಈ ಕವಿತೆ ವಿರಮಿಸುವ (?) ಬಗೆಯನ್ನು ನೋಡಿ! ವಿಶ್ವಾತ್ಮಕ ಚಿಂತನೆಯ ಅಭಿವ್ಯಕ್ತಿಗೆ ತಾನು ಹುಡುಕಿಕೊಂಡದ್ದೂ ಮತ್ತೆ ತನ್ನ ನೆಲದ ಭಾಷೆಯನ್ನೆ! ಅದು ಮಾತು ಕಲಿಸಿದ ತಾಯಿ ಭಾಷೆಯ ಅದಮ್ಯ ಪ್ರೀತಿಯ ಸೆಲೆಗೆ ಕರೆದೊಯ್ದು ಬಿಡುತ್ತದೆ. ಕನ್ನಡಿಸುವ ಕಾಳಜಿ ತಹತಹಿಸುತ್ತದೆ. ನೆಲೆಯಿಂದ ನೆಲೆಗೆ ಜಿಗಿಯುವ ಈ ಆಲೋಚನಾ ಕ್ರಮದ ಮಧ್ಯೆ ನಾನು ಎಂಬ ಪರಿಕಲ್ಪನೆ ತನ್ನ ಅರ್ಥದ ಬಾಹುಗಳಲ್ಲಿ ಹೆಗಲುಗಳನ್ನು ಹೆಣೆಯುತ್ತದೆ! ಇದು ಜಗದ ಕವಿಗೆ ಮಾತ್ರ ಒಲಿದ ಸಿದ್ಧಿ. ಮತ್ತೆ ಮತ್ತೆ ಓದಿಸಿಕೊಳ್ಳುವ ಸಾರ್ಥಕತೆ ಇಂತಹ ಕವಿಗೆ ಮಾತ್ರ ಸಾಧ್ಯ.
-ವಾಸುದೇವ ನಾಡಿಗ್

ಕಾವ್ಯನಂದರ ವಚನಗಳ ಪ್ರಸ್ತುತತೆ



ಪೀಠಿಕೆ
"ವಚನ" ಎನ್ನುವ ಪದ ಬಹುಮುಖಿಯಾದುದಾಗಿದೆ. ಈ ಪದದ ಅರ್ಥಗಳು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತವೆ. ವಚನವೆಂದರೆ ಮಾತು, ನುಡಿ. ಆದರೆ ಹನ್ನೆರಡನೇ ಶತಮಾನದ ಶರಣರ ಅವಧಿಯಲ್ಲಿ "ವಚನ" ಬರಿ ಮಾತಾಗಿರದೆ, ಅದು ಕೊಟ್ಟ ಮಾತಾಗಿತ್ತು. ವಚನವೆಂದರೆ Pಡಿomise. ವಚನಕಾರರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು, ನಡೆ-ನುಡಿ ಒಂದಾಗಿಸಲು ಪ್ರಯತ್ನಿಸುವುದು ಸಾತ್ವಿಕ ಸಂಸ್ಕೃತಿಯ ಲಕ್ಷಣ. ಹೀಗಾಗಿ "ವಚನ"ವೆಂಬುದು ಸಂಸ್ಕೃತಿಯಾಯಿತು. ಶರಣರು ಹನ್ನೆರಡನೇ ಶತಮಾನದಲ್ಲಿ ಅಸಮಾನತೆಯ ವ್ಯವಸ್ಥೆಯ ಬಗೆಗೆ, ಅನ್ಯಾಯದ ವಿರುದ್ಧ ಚಳವಳಿ ಮಾಡಿದರು. ಹೀಗಾಗಿ "ವಚನ"ವೆಂಬುದು ಚಳವಳಿಯಾಯಿತು. ಆ ಕಾಲ ಘಟ್ಟದಲ್ಲಿಯೇ ಶರಣರು ವಚನಗಳ ಮೂಲಕ ಅನೇಕ ವೈಜ್ಞಾನಿಕ ವಿಷಯಗಳನ್ನು ತಿಳಿಸಿದರು; ಹೀಗಾಗಿ ವಚನ ವಿಜ್ಞಾನವಾಯಿತು. ಹೀಗೆ ಹನ್ನೆರಡನೇ ಶತಮಾನದಲ್ಲಿ "ವಚನ"ವೆಂಬ ಪದವು ವಚನ ಸಾಹಿತ್ಯ ರೂಪವಾಗಿ, ವಚನ ಸಂಸ್ಕೃತಿಯಾಗಿ, ವಚನ ಚಳವಳಿಯಾಗಿ, ವಚನ ವಿಜ್ಞಾನವಾಗಿ ಅರ್ಥೈಸಲ್ಪಟ್ಟಿದೆ. ವಚನಕ್ಕೆ ಅನೇಕ ಅರ್ಥಗಳಿರುವಂತೆ, ಅನೇಕ ಆಶಯಗಳೂ ಇವೆ.
ವಚನ ಸಾಹಿತ್ಯ ಪರಂಪರೆಯನ್ನು ಬಸವಪೂರ್ವಯುಗ, ಬಸವಯುಗ, ಬಸವೋತ್ತರ ಯುಗ ಹಾಗೂ ಆಧುನಿಕ ಯುಗವೆಂದು ವಿದ್ವಾಂಸರು ಗುರುತಿಸಿದ್ದಾರೆ. ಆದರೆ ಬಸವ ಪೂರ್ವ ಯುಗದ ಪ್ರಸ್ತಾಪ ಅನಗತ್ಯವೆನಿಸುತ್ತದೆ. ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ ಮೊದಲಾದ ವಚನಕಾರರು ಬಸವಣ್ಣನವರಿಗಿಂತ ಬಹಳ ಹಿಂದಿನ ಕಾಲಘಟ್ಟದಲ್ಲಿರದೆ, ಅವರೆಲ್ಲ ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದರೆಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಹೀಗಾಗಿ ವಚನ ಸಾಹಿತ್ಯ ಪರಂಪರೆಯನ್ನು ಬಸವಯುಗ-ಬಸವೋತ್ತರಯುಗ ಮತ್ತು ಆಧುನಿಕ ಯುಗ ಎಂದು ವರ್ಗೀಕರಿಸುವುದು ಸೂಕ್ತವೆನಿಸುತ್ತದೆ. ಯುಗಧರ್ಮಕ್ಕೆ ತಕ್ಕಂತೆ ಬಸವಯುಗದ ಸಾಮಾಜಿಕ ವ್ಯವಸ್ಥೆಗೂ, ಬಸವೋತ್ತರ ಯುಗದ ಸಾಮಾಜಿಕ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಅದೇ ರೀತಿ ಇವೆರಡೂ ಯುಗಗಳಿಗಿಂತ ಆಧುನಿಕ ಯುಗ ತುಂಬ ಭಿನ್ನವಾಗಿ ಕಾಣಿಸುತ್ತದೆ. ಈ ಎಲ್ಲ ಕಾಲಘಟ್ಟಗಳಲ್ಲಿಯೂ "ವಚನ" ಸಾಹಿತ್ಯ ರೂಪವಾಗಿ ಬಳಕೆಯಾಗಿದೆ.
ಹನ್ನೆರಡನೇ ಶತಮಾನದ ವಚನ ಚಳವಳಿ, ಹದಿನೈದು ಹದಿನಾರನೇ ಶತಮಾನದ ಹೊತ್ತಿಗೆ ತಣ್ಣಗಾಯಿತು. ಈ ಕಾಲಘಟ್ಟ ಧಾರ್ಮಿಕ ಪುನರುತ್ಥಾನದ ಕಾಲ. ಹೀಗಾಗಿ ಇಲ್ಲಿ ವಚನ ಕ್ರಾಂತಿ, ವಚನ ಚಳವಳಿ, ವಚನ ವಿಜ್ಞಾನ, ಮಹಿಳಾ ಸಮಾನತೆ, ದಲಿತ ಚಿಂತನೆ ಕಾಣಸಿಗುವುದಿಲ್ಲ. ಈ ಕಾಲಘಟ್ಟದಲ್ಲಿ ಸಾಮಾಜಿಕ-ಹೋರಾಟದ ಬದಲು ಅಧ್ಯಾತ್ಮಿಕ ಸಾಧನೆ ಮುಖ್ಯವಾಯಿತು. ಹೀಗಾಗಿ ಬಸವೋತ್ತರ ಯುಗದ ವಚನಕಾರರ ಆಶಯಗಳು ಬೇರೆ ರೀತಿಯಲ್ಲಿಯೇ ವಿಕಾಸ ಹೊಂದಿದವು.
ಆಧುನಿಕ ಯುಗದಲ್ಲಿ "ವಚನ"ವೆಂಬುದು ಕೇವಲ ಒಂದು ಸಾಹಿತ್ಯ ರೂಪವಾಗಿ ಮಾತ್ರ ಉಳಿದುಕೊಂಡಿತು. ಭಾವಗೀತ, ಸುನೀತದ ಹಾಗೆ ’ವಚನ’ ಬಳಕೆಯಾಯಿತು. ಬಸವಯುಗದ ಕ್ರಾಂತಿಯಾಗಲಿ, ಬಸವೋತ್ತರ ಯುಗದ ಅಧ್ಯಾತ್ಮಿಕ ಚಿಂತನೆಯಾಗಲಿ ಇಲ್ಲಿ ಮುಖ್ಯವಾಗದೆ, ಸಾಮಾಜಿಕ ವಿಡಂಬನೆ-ಆದರ್ಶ ಬದುಕು ಮುಖ್ಯವಾದುದನ್ನು ಕಾಣಬಹುದಾಗಿದೆ. ಇದು ಯುಗಧರ್ಮ ಹಾಗೂ ಸಾಹಿತ್ಯ ಧರ್ಮಗಳಲ್ಲಿರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ.
ಆಧುನಿಕ ಸಂದರ್ಭದಲ್ಲಿ ಎಸ್.ವಿ.ರಂಗಣ್ಣನವರು ವಚನ ರಚನೆಗೆ ಮೊದಲು ಪ್ರಯತ್ನಿಸಿದವರಾಗಿದ್ದಾರೆ. ಇವರನ್ನು ಆಧುನಿಕ ವಚನ ಸಾಹಿತ್ಯದ ಆದ್ಯ ಪ್ರವರ್ತಕರೆಂದು ವಿಮರ್ಶಕರು ಗುರುತಿಸಿದ್ದಾರೆ. ಇವರೊಂದಿಗೆ ಜಚನಿ, ಎಸ್.ವಿ.ಪರಮೇಶ್ವರಭಟ್ಟ, ಜೋಳದ ರಾಶಿ ದೊಡ್ಡನಗೌಡ, ಜೀರಿಗಿ ಕಟ್ಟಿ ಬಸವಪ್ಪ, ಮಹಾದೇವ ಬಣಕಾರ, ಮೂಜಗಂ ಮೊದಲಾದವರು ವಚನ ರಚನೆ ಮಾಡಿದವರಾಗಿದ್ದಾರೆ. ಈ ವಚನಕಾರರಲ್ಲಿ ಸಿದ್ಧಯ್ಯ ಪುರಾಣಿಕ ಹೆಸರು ತುಂಬ ವಿಶಿಷ್ಟವಾದುದು. ಸಿದ್ಧಯ್ಯ ಪುರಾಣಿಕರು ಕಾವ್ಯ-ಕಥೆ-ಕಾದಂಬರಿ-ನಾಟಕಗಳನ್ನು ರಚಿಸಿದ್ದರೂ, ವಿಮರ್ಶಕರು ಅವರನ್ನು ಗುರುತಿಸಿರುವುದು ಪ್ರಮುಖ ವಚನಕಾರರನ್ನಾಗಿ ಎಂಬ ವಿಷಯ ಬಹಳ ಮುಖ್ಯವಾದುದಾಗಿದೆ.
ವಚನೋಧ್ಯಾನ, ವಚನನಂದನ, ವಚನರಾಮ ಹೀಗೆ ಮೂರು ಬೃಹತ್ ವಚನ ಸಂಪುಟಗಳನ್ನು ಪ್ರಕಟಿಸಿರುವ ಕಾವ್ಯಾನಂದರ ವಿಶಿಷ್ಟ ಕೊಡುಗೆ ಇರುವುದೇ ವಚನಗಳಲ್ಲಿ. ಇವರು ಸುಮಾರು ೧೫೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರದು ಸಮನ್ವಯ ದೃಷ್ಟಿ. ಪರಂಪರೆಯನ್ನು ಸಂಪೂರ್ಣವಾಗಿ ವಿರೋಧಿಸದೆ, ಆಧುನಿಕತೆಯನ್ನೂ ಯಥಾವತ್ತಾಗಿ ಸ್ವೀಕರಿಸದೆ ಎರಡರಲ್ಲಿರುವ ಉತ್ತಮಾಂಶಗಳನ್ನು ಹೀರಿಕೊಂಡು ಬದುಕುವ ಬರೆಯುವ ಆಶಯ ಕಾವ್ಯಾನಂದರದಾಗಿದೆ.
ಪುರಾಣಿಕರ ವಚನಗಳಲ್ಲಿ ವಸ್ತು ವೈವಿಧ್ಯತೆಯಿದೆ. ಲೌಕಿಕ-ಪಾರಮಾರ್ಥಿಕ, ಇಹ-ಪರ ಎರಡೂ ವಿಷಯಗಳು ಸಮನ್ವಯಗೊಂಡಿವೆ. ಅವರ ವಚನಗಳನ್ನು ವಿಷಯಾನುಕ್ರಮಣಿಕೆಯಲ್ಲಿ ಜೋಡಿಸುವುದಾದರೆ ಹೀಗೆ ಜೋಡಿಸಬಹುದಾಗಿದೆ. ೧. ಜೀವ-ದೇವ ಸಂಬಂಧ ೨. ಪ್ರಕೃತಿ ೩. ಚಿಂತನ-ಮಂಥನ ೪. ಸಾಮಾಜಿಕ ಪ್ರಜ್ಞೆ ೫. ಸಂಪ್ರದಾಯ-ಮೂಢನಂಬಿಕೆ ೬. ಸತಿ-ಪತಿಭಾವ ೭. ಪ್ರೀತಿಯ ಅನಂತತೆ ೮. ಮಹಿಳೆ, ಈ ವಿಷಯಗಳಲ್ಲದೆ ಇನ್ನೂ ಅನೇಕ ವಿಷಯಗಳನ್ನು ಅವರ ವಚನಗಳು ವಸ್ತುವನ್ನಾಗಿಸಿಕೊಂಡಿದೆ.
ಜೀವ-ದೇವ ಸಂಬಂಧ
ಜೀವ-ದೇವ ಪರಿಕಲ್ಪನೆ ಕೇವಲ ಆಸ್ತಿಕರಲ್ಲಿ ಮಾತ್ರ ಸಾಧ್ಯ. ಪುರಾಣಿಕರು ಆಸ್ತಿಕರು. ಆದರೆ ಸಂಪ್ರದಾಯ ವಿರೋಧಿಗಳು. ಈ ವಿಷಯದಲ್ಲಿ ಪುರಾಣಿಕರ ಮೇಲೆ ಹನ್ನೆರಡನೇ ಶತಮಾನದ ಶರಣರ ಪ್ರಭಾವ ದಟ್ಟವಾಗಿದೆ. ಜೀವ-ದೇವ ಸಂಬಂಧಗಳ ವಿಷಯ ಕುರಿತು ಮಾತನಾಡುವಾಗಲೆಲ್ಲ, ಆತ್ಮ ನಿವೇದನೆ ಪ್ರಮುಖ ಪಾತ್ರ ವಹಿಸುತ್ತದೆ. ಪುರಾಣಿಕರ ದೇವ ಎಲ್ಲಿಯೋ ಇರುವಂತವನಲ್ಲ, ಆತ ಅವರೊಳಗಡೆಯೇ ಇದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತುಂಬ ಕುತೂಹಲಕಾರಿಯಾದ ಸಂಗತಿಗಳನ್ನವರು ತಿಳಿಸಿದ್ದಾರೆ.
"ಶಬ್ದ ಹುಟ್ಟದ ಮುನ್ನಿನ ಅರ್ಥದಂತೆ
ವಾದ್ಯ ಹುಟ್ಟದ ಮುನ್ನಿನ ನಾದದಂತೆ
ಕುಂಚಹುಟ್ಟದ ಮುನ್ನಿನ ಚಿತ್ರದಂತೆ
ಉಳಿ ಹುಟ್ಟದ ಮುನ್ನಿನ ಪ್ರಾಣದಂತೆ ಇದ್ದೆಯಯ್ಯಾ!..."

ಅವರ ವಚನವೊಂದರ ಈ ಸಾಲುಗಳಲ್ಲಿ ಬರುವ ಉಪಮೆಗಳು, ಒಂದರ ನಂತರ ಒಂದು ಸೇರಿಕೊಂಡು ಸರಮಾಲೆಯಂತೆ ಕಾಣಿಸುತ್ತವೆ. ವಚನದ ಪ್ರಾರಂಭದಲ್ಲಿಯೇ "ನಾನು ಹುಟ್ಟುವ ಮುನ್ನ ನೀನು ಹೇಗಿದ್ದೆಯಯ್ಯಾ?" ಎಂದು ದೇವನನ್ನೇ ಪ್ರಶ್ನಿಸುತ್ತಾರೆ. ಅದಕ್ಕೆ ದೇವನಿಂದ ಉತ್ತರ ದೊರೆಯದೇ ಹೋದಾಗ ತಾವೇ ಆ ಉತ್ತರವನ್ನೂ ಹುಡುಕಿಕೊಳ್ಳುತ್ತಾರೆ. ಶಬ್ದ-ಅರ್ಥ, ವಾದ್ಯ-ನಾದ, ಕುಂಚ-ಚಿತ್ರ ಇಂತಹ ಜೋಡಿ ಪದಗಳನ್ನು ಜೋಡಿಸುತ್ತ ಅವಕ್ಕೆ ಜೀವ ತುಂಬುತ್ತಾರೆ.
ಶಬ್ದ ಹುಟ್ಟಿದ ನಂತರವಲ್ಲವೆ ಅರ್ಥ ಹುಟ್ಟುವುದು! ವಾದ್ಯ ಹುಟ್ಟಿದ ನಂತರವಲ್ಲವೆ ನಾದ ಕೇಳಿಸುವುದು! ಕುಂಚ ಹುಟ್ಟಿದ ನಂತರವಲ್ಲವೆ ಚಿತ್ರ ಕಾಣಿಸುವುದು! ಹೀಗೆ ಈ ಉಪಮಾಮಾಲೆಯನ್ನು ಬೆಳೆಸುತ್ತಾರೆ. ವಚನದ ಕೊನೆಯಲ್ಲಿ ಕೇಳುವ ಪ್ರಶ್ನೆ ಬಹಳ ಮುಖ್ಯವಾದುದಾಗಿದೆ.
"ನಾನು ಹುಟ್ಟಿದ ಮೇಲೆ ತಾನೆ
ಅರ್ಥಕ್ಕೆ ಶಬ್ದ, ನಾದಕ್ಕೆ ವಾದ್ಯ
ಚಿತ್ರಕ್ಕೆ ಕುಂಚ, ಶಿಲ್ಪಕ್ಕೆ ಉಳಿ
ನಿನಗೆ ಭಕ್ತ ದೊರೆತುದು?"

"ತಮ್ಮ ಹುಟ್ಟಿಗೆ ದೇವನೇ ಕಾರಣ"ವೆಂದು ಉಳಿದ ಆಸ್ತಿಕರೆಲ್ಲ ಭಾವಿಸಿದರೆ, "ನಾನು ಹುಟ್ಟಿದ ನಂತರವೇ ದೇವನ ಅಸ್ತಿತ್ವವೆಂದು ಪುರಾಣಿಕರು ಹೇಳುತ್ತಾರೆ. ಉಳಿದ ಆಸ್ತಿಕರಿಗೂ ಪುರಾಣಿಕರಿಗೂ ಇರುವ ವ್ಯತ್ಯಾಸ ಇಲ್ಲಿಯೇ; ’ಶಿವನಿಗಿಂತ ಶಿವಶರಣ ಮುಖ್ಯ ಎನ್ನುವ ಶರಣರ ಆಶಯ ಇಲ್ಲಿ ವ್ಯಕ್ತವಾಗಿದೆ. ಹಾಗೆ ನೋಡಿದರೆ ಇದು ನಾಸ್ತಿಕವಾದದ ಪ್ರಾರಂಭದ ಪರಿಕಲ್ಪನೆಯೇ ಆಗಿದೆ. ’ನಾನಿದ್ದರೆ ಜಗತ್ತು’ ಎಂದು ನಾಸ್ತಿಕರು ಹೇಳುತ್ತಾರೆ. ಅದನ್ನೇ ಪುರಾಣಿಕರು ಉಪಮೆಗಳ ಮೂಲಕ ಇಲ್ಲಿ ಹೇಳಿದ್ದಾರೆ. ಅಂದರೆ ಪುರಾಣಿಕರು ಆಸ್ತಿಕನೆಂದು ಹೇಳಿಕೊಳ್ಳುತ್ತಲೇ ನಾಸ್ತಿಕ ವಿಚಾರಗಳನ್ನೂ ಪ್ರತಿಪಾದಿಸುತ್ತಾರೆ. ಇವರ ವಚನದ ಅರ್ಥವ್ಯಾಪ್ತಿ ಆಸ್ತಿಕ-ನಾಸ್ತಿಕ ಚರ್ಚೆಯನ್ನು ದಾಟಿ ಮುಂದೆ ಹೋಗುತ್ತದೆ. ಮನುಷ್ಯ ಹುಟ್ಟಿದ ಮೇಲೆ ತಾನೆ ಅರ್ಥಕ್ಕೆ-ಶಬ್ದ, ನಾದಕ್ಕೆ-ವಾದ್ಯ, ಚಿತ್ರಕ್ಕೆ-ಕುಂಚ, ಶಿಲ್ಪಕ್ಕೆ-ಉಳಿ ದೊರೆತದ್ದು ಎಂದು ಹೇಳುವಲ್ಲಿ ವೈಜ್ಞಾನಿಕ ಚಿಂತನೆಯಿದೆ. ಮನುಷ್ಯ ಸಾಮರ್ಥ್ಯವನ್ನು ಅಲ್ಲಗಳೆಯುವ, ಕಾಣದ ದೇವನನ್ನು ವೈಭವೀಕರಿಸುವ ಆಸ್ತಿಕರೇ ತುಂಬಿರುವ ಸಮಾಜ ವ್ಯವಸ್ಥೆಯಲ್ಲಿ, ಪುರಾಣಿಕರು ದೇವನ ಪರಿಕಲ್ಪನೆಯನ್ನು ನಿರಾಕರಿಸದೆ, ಮನುಷ್ಯನ ಮಹತ್ವವನ್ನು ಕಟ್ಟಿಕೊಡುತ್ತಾರೆ.
ಪ್ರಕೃತಿ
ನವೋದಯ ಸಂದರ್ಭದಲ್ಲಿ ಬರವಣಿಗೆ ಪ್ರಾರಂಭಿಸಿದ ಸಿದ್ಧಯ್ಯ ಪುರಾಣಿಕರ ವಚನಗಳಲ್ಲಿ ಸಹಜವಾಗಿಯೇ ಪ್ರಕೃತಿಯ ಬಗೆಗೆ ಪ್ರಸ್ತಾಪವಿದೆ. ಶರಣರು ಸಕಲಜೀವಿಗಳಿಗೂ ಪ್ರಾಮುಖ್ಯತೆ ನೀಡಿದರು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮನುಷ್ಯ ಜೀವಕ್ಕೆ ಮಾತ್ರ ಪ್ರಾಧಾನ್ಯತೆಯಿದೆ. ಮನುಷ್ಯನ ಸಲುವಾಗಿ ಸಸ್ಯ-ಪ್ರಾಣಿ-ಪಕ್ಷಿ ಸಂಕುಲಗಳು ನಾಶವಾಗುತ್ತಲಿವೆ. ಆದರೆ ಶರಣ ಸಂಸ್ಕೃತಿಯಲ್ಲಿ ಮನುಷ್ಯನಷ್ಟೇ ಇತರ ಜೀವಿಗಳಿಗೂ ಪ್ರಾಧಾನ್ಯತೆ ಇದೆ. ಹೀಗಾಗಿ ಪಾಶ್ಚಾತ್ಯರದು ಮನುಷ್ಯ ಕೇಂದ್ರಿತ, ಅಹಂ ಪ್ರಧಾನವಿರುವ ಸಂಸ್ಕೃತಿಯಾದರೆ, ಶರಣರದು ಜೀವ ಕೇಂದ್ರಿತ, ಅಂತಃಕರಣದ ಸಂಸ್ಕೃತಿಯಾಗಿದೆ. ಕಾವ್ಯಾನಂದರು ಶರಣ ಸಂಸ್ಕೃತಿಯ ಪ್ರಭಾವಕ್ಕೊಳಗಾದವರು. ಹೀಗಾಗಿ ಅವರಲ್ಲಿ ಪ್ರಕೃತಿಯನ್ನು ಕುರಿತು ನಿಸರ್ಗವನ್ನು ಕುರಿತು, ಪಶು-ಪಕ್ಷಿ-ಪ್ರಾಣಿ ಸಂಕುಲವನ್ನು ಕುರಿತು ಆಸಕ್ತಿಯಿದೆ. ಅವರ ಅನೇಕ ವಚನಗಳಲ್ಲಿ ಈ ಪ್ರಕೃತಿ ಪ್ರೇಮ ಪರಿಸರ ಕಾಳಜಿ ಪ್ರಕಟವಾಗಿದೆ.
"ಹೂವು ತಮ್ಮದೆಯ ತೆರೆದರೆ
ಅಂದ, ಸುಗಂಧ, ಮಕರಂದಗಳ ಸುಗ್ಗಿ,
ಸಿಂಪುಗಳು ತಮ್ಮೆದೆಯ ತೆರೆದರೆ
ಮುತ್ತುಗಳು ಬರುವವು ನುಗ್ಗಿ,
ಹನುಮ ತನ್ನೆದೆಯ ತೆರೆದರೆ
ಸೀತಾ-ರಾಮರ ಚಿತ್ರ
ಇರುಳು ತನ್ನೆದೆಯ ತೆರೆದರೆ
ಕೋಟಿ ಕೋಟಿ ನಕ್ಷತ್ರ!...."

ಹೀಗೆ ಈ ವಚನ ದ್ವಿತೀಯ ಸಾಲಿನ ಅಂತ್ಯಾಕ್ಷರ ಪ್ರಾಸದ ಮೂಲಕ ಬೆಳೆದು ಕೊಂಡು ಹೋಗುತ್ತದೆ. ಹೂವಿನಿಂದ ಸುಗಂಧ, ಸಿಂಪುಗಳಿಂದ ಮುತ್ತುಗಳು, ಹನುಮನಿಂದ ಸೀತಾ-ರಾಮರು, ಇರುಳಿನಿಂದ ನಕ್ಷತ್ರಗಳು ಬಿಚ್ಚಿಕೊಳ್ಳುವ ಬಗೆಯನ್ನು ಕಾವ್ಯಾತ್ಮಕವಾಗಿ ಕಾವ್ಯಾನಂದರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಹನುಮನ ಮೂಲಕ ಸೀತಾ-ರಾಮರನ್ನು ಪರಿಚಯಿಸುವ, ಇರುಳಿನ ಮೂಲಕ ನಕ್ಷತ್ರಗಳನ್ನು ತೋರಿಸುವ ಕಾವ್ಯಾನಂದರ ಕಾವ್ಯಧೋರಣೆ ಜನಪರವಾಗಿದೆ, ಜೀವಪರವಾಗಿದೆ. ಇಂತಹ ಅನೇಕ ಸೂಕ್ಷ್ಮಗಳನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ.
"ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು ಹಕ್ಕಿಗಳ ಹಾಡು" ಎಂದು ಬೇಂದ್ರೆಯವರು ಗಿಡಗಂಟೆಗಳಿಗೆ ವ್ಯಕ್ತಿಯ ರೂಪಧಾರಣೆ ಮಾಡಿದರೆ, ಪುರಾಣಿಕರು ಬಳ್ಳಿಯ ಬಾಣಂತಿತನದ ಬಗೆಗೆ ತಮ್ಮ ವಚನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. "ಹೂಹೆತ್ತ ಬಳ್ಳಿಯ ಬಾಣಂತಿತನ ಮಾಡುವವರಾಯ್ಯ!" ಎಂದು ಪ್ರಶ್ನಿಸಿದ್ದಾರೆ. ಕೊಯ್ಯುವರೆಂದು ಭತ್ತ ತೆನೆ ಬಿಡುವುದನ್ನು ನಿಲ್ಲಿಸುವುದಿಲ್ಲ. ಬಾಳೆಗೊನೆ ಬಿಡುವುದನ್ನು ನಿಲ್ಲಿಸುವುದಿಲ್ಲ. ಬಳ್ಳಿ ಹೂ ಬಿಡುವುದನ್ನು ನಿಲ್ಲಿಸುವುದಿಲ್ಲವೆಂದು ತಿಳಿಸುತ್ತಾರೆ. ಅದೇ ರೀತಿ ಮನುಷ್ಯರು ಕಲ್ಲಿನಿಂದ ಹೊಡೆಯುತ್ತಾರೆಂದು ಮರಫಲಬಿಡುವುದನ್ನು, ಜೇನುಹುಳ ಗೂಡಿಡುವುದನ್ನು ಹಕ್ಕಿ ಬಚ್ಚು ಕಟ್ಟುವುದನ್ನು ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಕಾವ್ಯಾನಂದರು, ನಿಸರ್ಗ ಮಾತೆಯನ್ನು ಕುರಿತು, ಆಕೆಯ ಅಂತಃಕರಣವನ್ನು ಕುರಿತು ತಮ್ಮ ಅನೇಕ ವಚನಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. ಮನುಷ್ಯ ಕೆಡಿಸುತ್ತ ಹೋದುದನ್ನು ನಿಸರ್ಗ ಮಾತೆ- ಸರಿಪಡಿಸುತ್ತ ಹೋಗುತ್ತಾಳೆ. ಆತ ಕಡಿಯುತ್ತ ಹೋದರೆ ಈಕೆ ಕೊನರುತ್ತಾ ನಿಲ್ಲುತ್ತಾಳೆ. ಆತ ಸುಟ್ಟು ಹಾಳು ಮಾಡಿದರೆ ಈಕೆ ಹುಟ್ಟಿಸಿ ಸಲಹುತ್ತಾಳೆ. ಆತ ತುಳಿಯುತ್ತಾ ಹೋದಲೆಲ್ಲ ಈಕೆ ಮೊಳೆಯುತ್ತ, ನಳನಳಿಸುತ್ತಾಳೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹೇಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಡೆದಿದ್ದಾನೆಂದು ಅನೇಕ ಉಪಮೆಗಳ ಮೂಲಕ ತಿಳಿಸಿದ್ದಾರೆ. ಪ್ರಕೃತಿ ಕುರಿತ ಪುರಾಣಿಕರ ಧೋರಣೆಗಳು ಅಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ.
ಇಂದು ಮನುಷ್ಯ ಹಸಿರು ಕಾಡು ಕಡಿದು, ಕಾಂಕ್ರೀಟು ಕಾಡು ನಿರ್ಮಿಸುತ್ತಿದ್ದಾನೆ. ಇದನ್ನು ಪುರಾಣಿಕರು ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮನುಷ್ಯ ನಿಸರ್ಗವನ್ನು ಕೆಡಿಸುತ್ತಾ ಹೋದಂತೆ ಅದು ಹೇಗೆ ಮತ್ತೆ ಮತ್ತೆ ಬೆಳೆದು ನಿಲ್ಲುತ್ತದೆಂಬುದನ್ನು ತಿಳಿಸಿದ್ದಾರೆ.
"ಎಲೆಯದುರಿ ಬರಿ ಮೈಯಾಗಿದ್ದರೂ
ಮತ್ತೆ ಚಿಗುರುವ ವಿಶ್ವಾಸ ಬೋಳು ಮರಗಳಿಗೆ,
ಬಿಸಿಲಿನ ಬೇಗೆಯಿಂದ ಬತ್ತಿ ಹೋಗಿದ್ದರೂ
ಮತ್ತೆ ತುಂಬಿ ಹರಿವಾಸೆ ತೊರೆಗಳಿಗೆ
ರೆಕ್ಕೆಗಳು ಉದುರುತ್ತಿದ್ದರೂ
ಮತ್ತೆ ಪಕ್ಕೆ ಪಡೆವ ನಂಬಿಕೆ ಪಕ್ಷಿಗಳಿಗೆ...!

ಚಿಂತನ-ಮಂಥನ
ಪುರಾಣಿಕ ವಚನಗಳಲ್ಲಿ ಚಿಂತನೆಗೆ ತೊಡಗಿಸುವ ಅನೇಕ ವಿಷಯಗಳು ಪ್ರಸ್ತಾಪವಾಗಿವೆ. ಆದರೆ ಈ ಚಿಂತನೆಗಳು ಯಾವುದೋ ಒಂದು ಪ್ರಗತಿಪರ ವಾದದ ಮಂಡನೆಯಾಗಿ ಅಭಿವ್ಯಕ್ತಗೊಳ್ಳದೆ, ಸಹಜವಾಗಿ ಮೂಡಿಬಂದವುಗಳಾಗಿವೆ. ಹೀಗಾಗಿ ಇಲ್ಲಿ ಹೊಸ ಸಿದ್ಧಾಂತದ, ಹೊಸ ಚಿಂತನೆಯ ಒಳ ನೋಟಗಳಿರದೆ, ಸಾಮಾನ್ಯ ಮನುಷ್ಯರ ಚಿಂತನೆಯ ಫಲಗಳು ವಚನ ರೂಪದಲ್ಲಿ ಪ್ರಕಟವಾಗಿದೆ. ಕವಿ ಆಧ್ಯಾತ್ಮದತ್ತ ಆಸಕ್ತಿವುಳ್ಳವರಾದುದರಿಂದ ಆ ಕ್ಷೇತ್ರದತ್ತ ಆಲೋಚನೆಗಳು ಗಟ್ಟಿಗೊಂಡಿವೆ.
ಆಧುನಿಕ ಬಂದಂತೆಲ್ಲ, ವೈಜ್ಞಾನಿಕ ಆವಿಷ್ಕಾರಗಳು ನಡೆದಂತೆಲ್ಲ ಸಮಾಜ ವ್ಯವಸ್ಥೆಯಲ್ಲಿ ಸಹಜವಾಗಿಯೇ ಬದಲಾವಣೆಯ ಗಾಳಿ ಬೀರುತ್ತದೆ. ಹೀಗೆ ಬದಲಾವಣೆಗೊಳ್ಳುವ ಪ್ರಕ್ರಿಯೆಯಲ್ಲಿ ಒಂದರ ಸ್ಥಾನದಲ್ಲಿ ಮತ್ತೊಂದು ಆಕ್ರಮಿಸಿಕೊಳ್ಳುತ್ತದೆ. ಬದಲಾವಣೆ ಅನಿವಾರ್ಯವೆಂದೂ ಒಪ್ಪಿಕೊಂಡರೂ ಹೊಸದನ್ನು ಅಪ್ಪಿಕೊಂಡರೂ ಕಳೆದುಹೋಗುತ್ತಿರುವ ಹಳೆಯದರ ಬಗೆಗೆ ಹಳಹಳಿಯೆನಿಸುತ್ತದೆ. ಅದನ್ನು ಕವಿ, ತರ್ಕಬದ್ಧವಾಗಿ ಹೇಳಿದ್ದಾರೆ.
"ವಿದ್ಯೆ ಬಂತು, ವಿನಯ ಹೋಯ್ತು
ಬುದ್ಧಿ ಬಂತು, ಶ್ರದ್ಧೆ ಹೋಯ್ತು
ಸಮೃದ್ಧಿ ಬಂತು, ಸಂಸ್ಕೃತಿ ಹೋಯ್ತು
ವಿಜ್ಞಾನ ಬಂತು, ಸಮಾಧಾನ ಹೋಯ್ತು
ಶರೀರ ಸ್ವಾಸ್ಥ್ಯ ಬಂತು, ಚಿತ್ತ ಸ್ವಾಸ್ಥ್ಯ ಹೋಯ್ತು
ದೀರ್ಘಾಯುಷ್ಯ ಬಂತು, ಜೀವನ ಸ್ವಾರಸ್ಯ ಹೋಯ್ತು
ಬೋಧನೆ ಬಂತು, ಸಾಧನೆ ಹೋಯ್ತು
ಮಾತು ಬಂತು, ಕೃತಿ ಹೋಯ್ತು
ಸ್ವಾತಂತ್ರ್ಯ ಬಂತು, ಸೌಜನ್ಯ ಹೋಯ್ತು
ಸಿದ್ಧಯ್ಯ ಪುರಾಣಿಕ ಬಂದ
ಸ್ವತಂತ್ರಧೀರ ಸಿದ್ಧೇಶ್ವರ ಹೋದ!

ತೀವ್ರ ಬದಲಾವಣೆಯಾಗುತ್ತಿರುವ ಜಾಗತೀಕರಣದ ಈ ಸಂದರ್ಭದಲ್ಲಿ ಈ ವಚನದ ಆಶಯ ಹೆಚ್ಚು ಪ್ರಸ್ತುತವೆನಿಸುತ್ತದೆ.
ವಿದ್ಯಾವಂತರಾಗುವುದು, ಬುದ್ಧಿವಂತರಾಗುವುದು, ವಿಜ್ಞಾನಿಗಳಾಗುವುದು ಒಳ್ಳೆಯ ಬೆಳವಣಿಗೆ. ಆದರೆ ವಿದ್ಯಾವಂತರಾದಾಕ್ಷಣ ವಿನಯವಂತಿಕೆಯನ್ನು ಕಳೆದುಕೊಳ್ಳುವುದು ತಪ್ಪು. ಇದರಿಂದ ಪಾಂಡಿತ್ಯದ ಅಹಂಭಾವ ಬೆಳೆಯುತ್ತದೆ. ಅದೇ ರೀತಿ ಬುದ್ಧಿವಂತರಾದ ತಕ್ಷಣ ಶ್ರದ್ಧೆ-ನಂಬಿಕೆಗಳನ್ನು ಬಿಟ್ಟು ಬಿಡುವುದು ಸೂಕ್ತವಾದುದಲ್ಲ. ವಿಜ್ಞಾನಿಯಾದ ತಕ್ಷಣ ಯಂತ್ರ ಜೀವನ ಸಾಗಿಸಬೇಕಾಗಿಲ್ಲ. ನಮ್ಮ ಸಂಸ್ಕೃತಿಯಲ್ಲಿರುವ ಮೌಲ್ಯಗಳನ್ನು ಬಿಟ್ಟುಕೊಟ್ಟು, ಇನ್ನೊಂದನ್ನು ಪಡೆದುಕೊಳ್ಳುವುದು ಸೂಕ್ತ ಮಾರ್ಗವಲ್ಲವೆಂದು ಕವಿ ಹೇಳಿದ್ದಾರೆ. ನಮ್ಮಲ್ಲಿರುವ ಒಳ್ಳೆಯ ಸಂಗತಿಗಳನ್ನುಳಿಸಿಕೊಂಡೇ ಹೊಸದನ್ನು ಬೆಳೆಸಿಕೊಳ್ಳುವಂತಾಗಬೇಕೆಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ವಚನಕಾರ ಪ್ರಭಾವವನ್ನೂ ಕಾಣಬಹುದಾಗಿದೆ. "ಸಿದ್ಧಯ್ಯ ಪುರಾಣಿಕ ಬಂದ, ಸ್ವತಂತ್ರಧೀರ ಸಿದ್ಧೇಶ್ವರ ಹೋದ" ಎನ್ನುವ ಸಾಲಿನ ಮೂಲಕ ವಚನ ಮುಕ್ತಾಯವಾಗುತ್ತದೆ. ಇಲ್ಲಿ ಸಿದ್ಧಯ್ಯ ಪುರಾಣಿಕ ವ್ಯಕ್ತಿಯಾಗಿ, ಸ್ವತಂತ್ರಧೀರ ಸಿದ್ಧೇಶ್ವರ ಚೇತನವಾಗಿ-ಸಮಾಜವಾಗಿ ಕಾಣುತ್ತದೆ. ವ್ಯಕ್ತಿಗಿಂತ, ಸಮಾಜ ಅಥವಾ ಸಮುದಾಯ ಮುಖ್ಯ. ಸಮಾಜದ ಏಳ್ಗೆಗಾಗಿ, ಚೇತನದ ಚಲನಶೀಲತೆಗಾಗಿ ಎಲ್ಲ ವ್ಯಕ್ತಿಗಳು ಶ್ರಮಿಸಬೇಕಲ್ಲದೆ, ಸಮಾಜವನ್ನೇ ಕಡೆಗಣಿಸಿ ವ್ಯಕ್ತಿ ಬೆಳೆಯುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬ ಆಶಯ ಇಲ್ಲಿ ವ್ಯಕ್ತವಾಗಿದೆ.
ಪ್ರಕೃತಿಯಲ್ಲಿ ಎಲ್ಲವೂ ಇದೆ. ಆಕೃತಿಗಿಂತ ಪ್ರಕೃತಿ ದೊಡ್ಡದು, ವ್ಯಕ್ತಿಗಿಂತ ಸಮಾಜ ಮಹತ್ವದ್ದು. ಫಲ ಬಿಟ್ಟಿರುವ ರೆಂಬೆ ಬಾಗುತ್ತದೆ, ಗೊನೆ ಹೊತ್ತಿರುವ ಬಾಳೆ ಬಾಗುತ್ತದೆ. ತೆನೆ ಹೊತ್ತಿರುವ ದಂಟು ಬಾಗುತ್ತದೆ. ಏನೂ ಇಲ್ಲದ ಮನುಷ್ಯ ಬೀಗುತ್ತಾನೆಂದು ಹೇಳುವ ಮೂಲಕ ಪುರಾಣಿಕರು ಇಲ್ಲಿ ಸಮಷ್ಟೀ ಪ್ರಜ್ಞೆಯ ಮಹತ್ವವನ್ನು ಹೇಳಿದ್ದಾರೆ. ಏನೂ ಇಲ್ಲದ, ಏನೂ ಸಾಧಿಸದ ಮನುಷ್ಯ ಪ್ರಕೃತಿಯಿಂದ ಕಲಿಯುವುದು ಸಾಕಷ್ಟಿದೆ. ಇಲ್ಲಿ ಸಮಾಜವೇ ಜಂಗಮ, ಪ್ರಕೃತಿಯೇ ಚೇತನ. ಇಂತಹ ಚೇತನ ಶೀಲ ಜಂಗಮ ಪರಿಕಲ್ಪನೆಯನ್ನು ಬೆಳೆಸುತ್ತಲೇ ಸ್ಥಾವರಗಳನ್ನು ಪುರಾಣಿಕರು ವಿರೋಧಿಸಿದ್ದಾರೆ.
ಸಾಮಾಜಿಕ ವಿಡಂಬನೆ
ಪುರಾಣಿಕರಿಗೆ ಸಮಾಜದ ಬಗೆಗೆ ಜನಸಮುದಾಯದ ಬಗೆಗೆ ಅಪಾರ ಕಾಳಜಿಯಿದೆ. ಆಧುನಿಕ ವಚನಕಾರರಲ್ಲಿ ಕೆಲವರು ಬರೀ ಅಧ್ಯಾತ್ಮವನ್ನು ಹೇಳಿದರೆ, ಕೆಲವರು ಬರೀ ಸಾಮಾಜಿಕವನ್ನು ಕುರಿತು ಮಾತನಾಡಿದ್ದಾರೆ. ಆದರೆ ಪುರಾಣಿಕರು ಸಾಮಾಜಿಕ ಮೂಲಕ ಆಧ್ಯಾತ್ಮವನ್ನು ಹೇಳಿದ್ದಾರೆ. ಇದು ಈ ಕವಿಯ ವಿಶಿಷ್ಟತೆಯಾಗಿದೆ.
ಚಳವಳಿ, ಕ್ರಾಂತಿಯ ಮೂಲಕ ಈ ಸಮಾಜ ವ್ಯವಸ್ಥೆಯನ್ನೂ ಬದಲಾವಣೆ ಮಾಡಬೇಕೆಂಬ ಉದ್ದೇಶ ಈ ವಚನಕಾರನದಲ್ಲ. ಇವರು ಒಬ್ಬ ಐ.ಎ.ಎಸ್. ಅಧಿಕಾರಿಯಾಗಿದ್ದವರು. ಇಂತವರು ಸಮಾಜ ಪರಿವರ್ತನೆಯ ಬಗೆಗೆ, ಸಾಮಾಜಿಕ ಕ್ರಾಂತಿಯ ಬಗೆಗೆ ಸೈದ್ಧಾಂತಿಕವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ. ಆದರೆ ಪುರಾಣಿಕರಲ್ಲಿರುವ ಸಾಮಾಜಿಕ ಕಳಕಳಿಯ ತೀವ್ರತೆಯನ್ನು ಗಮನಿಸಲೇಬೇಕು. ಇವರು ಹೈಸ್ಕೂಲು ಓದುತ್ತಿದ್ದ ಕುಕನೂರಿನ ವಿದ್ಯಾನಂದ ಗುರುಕುಲ ಹೈಸ್ಕೂಲದಲ್ಲಿಯೇ ಆಗ ಅಸ್ಪೃಶ್ಯತಾ ನಿವಾರಣೆಯ ಬಗೆಗೆ ಕಳಕಳಿ ತೋರಿಸಿದವರು. ಇವರ ಮೇಲೆ ವಚನಕಾರರ ಜತೆಗೆ ಗಾಂಧೀಜಿ ಮತ್ತು ಹರ್ಡೇಕರ ಮಂಜಪ್ಪನಂತವರ ಪ್ರಭಾವವಾಗಿದೆ. ಹೀಗಾಗಿ ಇವರೊಬ್ಬ ದೊಡ್ಡ ಅಧಿಕಾರಿಯಾಗಿ ಎಲ್ಲ ಸವಲತ್ತುಗಳನ್ನು ಪಡೆದು ಸುಖೀಜೀವನ ನಡೆಸಿದರೂ ಇವರಿಗೆ ಬಡವರ ಬಗೆಗೆ, ಅಸ್ಪೃಶ್ಯರ ಬಗೆಗೆ, ದುಡಿದವರ ಬಗೆಗೆ ಅಪಾರವಾದ ಕಳಕಳಿಯಿದೆ, ಅಂತಃಕರಣದ ಮನಸ್ಸಿದೆ. ಹೀಗಾಗಿ ಇವರು ಸಾಮಾಜಿಕದ ಬಗೆಗೆ ಅಧಿಕೃತವಾಗಿ ಮಾತನಾಡಬಲ್ಲವರಗಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಹರಿಜನರಿಗೆ ಅನೇಕ ಮನೆಗಳನ್ನು ಸರಕಾರದ ಯೋಜನೆಗಳಿಂದ ಕಟ್ಟಿಸಿಕೊಟ್ಟಿದ್ದಾರೆ. ನಿಜಾಮರ ಆಡಳಿತದಲ್ಲಿ ಇವರು ಅಧಿಕಾರಿಗಳಾಗಿದ್ದರು. ಆಗ ಲೇವಿ ವಸೂಲಿ ಮಾಡುವ ಕಾರ್ಯ ಅಧಿಕಾರಿಗಳದಾಗಿತ್ತು. ಅಂತಹ ಸಂದರ್ಭದಲ್ಲಿ ಬಡವರ ಮನೆಗಳನ್ನು ಜಪ್ತ ಮಾಡದಂತೆ, ಬಡವರ ಪರವಾಗಿ ನಿಂತ ಅಧಿಕಾರಿಗಳಲ್ಲಿ ಪುರಾಣಿಕರೂ ಒಬ್ಬರು. ಹೀಗಾಗಿ ಈ ಕವಿಗೆ ಸಮಾಜದ ಬಗೆಗೆ ಕಳಕಳಿಯಿದೆ.
ಈ ಸಮಾಜ ವ್ಯವಸ್ಥೆಯಲ್ಲಿ ಮೂಢನಂಬಿಕೆಗಳಿರಬಾರದು. ಅಂಧ ಶ್ರದ್ಧೆಗಳಿರಬಾರದೆಂಬ ನಿಲುವು ಈ ವಚನಕಾರರದು. ಆದರೆ ಈ ಮೌಢ್ಯತೆಗೆ, ಇಲ್ಲಿಯ ಅನಕ್ಷರತೆಗೆ ಹಾಗೂ ಅಸಮಾನತೆಗೆ ಕಾರಣಗಳೇನೆಂಬುದನ್ನು ಕುರಿತು ಅವರು ಚಿಂತಿಸುವುದಿಲ್ಲ. ಹೀಗಾಗಿ ಅವರ ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ವಿಡಂಬನೆ, ಸುಧಾರಣಾವಾದದ ಹಂತಕ್ಕೆ ನಿಂತುಬಿಡುತ್ತದೆ. ಆದರೂ ಸಮಾಜ ವ್ಯವಸ್ಥೆಯ ಮೇಲ್ವರ್ಗದ ಶಾಸ್ತ್ರಿ-ಪೂಜಾರಿಗಳ ಕಪಟತನವನ್ನು ಕುರಿತು ವಿಡಂಬಿಸಿರುವುದು, ಆ ಕಾಲದಲ್ಲಿ ಸ್ವಾಗತಾರ್ಹ ವಿಚಾರವೇ ಆಗಿದೆ.
"ಸಾಯುವವರೆಗೂ ಶಾಸ್ತ್ರ ಹೇಳಿದರೇನು
ಸುಳ್ಳು ಹೇಳುವುದ ಬಿಡಲಿಲ್ಲ ಶಾಸ್ತ್ರಿಗಳ ಬಾಯಿ,
ಸಾಯುವವರೆಗೆ ಪೂಜೆ ಮಾಡಿದರೇನು
ಭಕ್ತರ ಬೋಳಿಸುವುದ ಬಿಡಲಿಲ್ಲ ಪೂಜಾರಿಯ ಕೈ,
ಹಲವು ಅರಸೊತ್ತಿಗಳು ಬಂದು ಹೋದರೇನು
ಹಳ್ಳಿಗರ ಕೂಗ ಕೇಳಿರಲಿಲ್ಲ ಡಿಳ್ಳಿಯ ಕಿವಿ....."

ಇಂತಹ ವಚನಗಳ ಮೂಲಕ ಪುರಾಣಿಕರು ಸಾಮಾಜಿಕ ವಿಡಂಬನೆಗೆ ತೊಡಗುತ್ತಾರೆ. ಅವರು ಆಳುವ ವ್ಯವಸ್ಥೆಯನ್ನು ನೇರವಾಗಿ ವಿರೋಧಿಸುವುದಿಲ್ಲ. ಏಕೆಂದರೆ ಅದರಲ್ಲಿ ಅವರೂ ಒಬ್ಬ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು; ಹೀಗಾಗಿ ಅವರು ವೈದಿಕ ವ್ಯವಸ್ಥೆಯನ್ನು ಕುರಿತು ವಿಡಂಬನೆಗೆ ತೊಡುಗುತ್ತಾರೆ. ಇಂತಹ ಸಾಮಾಜಿಕ ಸುಧಾರಣೆಯ ತೇಪೆ ಕೆಲಸಗಳೂ ಕೂಡ ಆ ಕಾಲಘಟ್ಟದಲ್ಲಿ ಮುಖ್ಯವಾಗಿದ್ದವೆಂಬುದನ್ನು ಮರೆಯುವಂತಿಲ್ಲ. ಪುರಾಣಿಕರಿಂದ, ಸಮಾಜ ವ್ಯವಸ್ಥೆಯ ಬಗೆಗೆ ಪೂರ್ಣಪ್ರಮಾಣದ ಹೋರಾಟವನ್ನು ನಿರೀಕ್ಷೆ ಮಾಡದಿದ್ದರೂ ಕೂಡ, ಅವರಲ್ಲಿ ತೀವ್ರವಾಗಿದ್ದ ಸಾಮಾಜಿಕ ಕಳಕಳಿಯನ್ನು ಅಲ್ಲಗಳೆಯುವಂತಿಲ್ಲ. ಆ ಸಂದರ್ಭದಲ್ಲಿಯೇ ಅವರು ಮಠ-ಮಾನ್ಯಗಳನ್ನು ವಿರೋಧಿಸುವುದು ಇಂದಿಗೂ ಕೂಡ ಪ್ರಸ್ತುತವಾಗುತ್ತದೆ.
ಸಂಪ್ರದಾಯ-ಮೂಢನಂಬಿಕೆ
ಪುರಾಣಿಕರು ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವರು, ಪುರಾಣಿಕರಾದುದರಿಂದ ಇವರ ಮನೆತನದಲ್ಲಿಯೇ ಅನೇಕ ಮೂಢನಂಬಿಕೆಗಳು ಮನೆಮಾಡಿದ್ದವು. ಆದರೆ ಪುರಾಣಿಕರು ಕಾವ್ಯಾನಂದರಾದ ಮೇಲೆ ತೀವ್ರತರವಾದ ಬದಲಾವಣೆಯಾಯಿತು. ಬಸವಣ್ಣನವರ ವಚನಗಳ ಓದಿನಿಂದ ಪ್ರಭಾವಿತರಾದ ಇವರು ಮೂಢನಂಬಿಕೆ-ಅಂಧಸಂಪ್ರದಾಯಗಳ ವಿರುದ್ಧ ದನಿಯೆತ್ತಿದರು. ಇದು ಪುರಾಣಿಕರ ಮನೆತನದಲ್ಲಾದ ಬಹು ಮಹತ್ವದ ಬೆಳವಣಿಗೆಯೆನ್ನಬಹುದಾಗಿದೆ. ಇವರ ಮನೆತನದ ಹಿರಿಯರೆಲ್ಲ ಮಡಿ-ಮೈಲಿಗೆ ಆಚರಿಸಿದವರೇ ಆಗಿದ್ದರು. ಜಂಗಮರ ಮನೆತನದಲ್ಲಿ ಹುಟ್ಟಿ ಮಂತ್ರ-ತಂತ್ರಗಳ ಪರಿಸರದಲ್ಲಿಯೇ ಪುರಾಣಿಕರು ಬೆಳೆದಿದ್ದರು. ಉದಗಿರಿಯ (ಮಹಾರಾಷ್ಟ್ರ) ಹಾವಗಿಸ್ವಾಮಿ ಮಠಕ್ಕೆ ಸ್ವಾಮಿಯಾಗುವಂತೆ ಪುರಾಣಿಕರಿಗೆ ಆಹ್ವಾನವೂ ಬಂದಿತ್ತು. ಇವರ ತಂದೆಯವರೂ ಕೂಡ ನಿರ್ಣಯ ತೆಗೆದುಕೊಳ್ಳುವುದನ್ನು ಪುರಾಣಿಕರ ಮೇಲೆ ಬಿಟ್ಟಿದ್ದರು. ಆಗ ಪುರಾಣಿಕರು ಸ್ವಾಮಿ ಸ್ಥಾನವನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಅಂದು ಸಿದ್ಧಯ್ಯ, ಮಠದ ಸ್ವಾಮಿಯಾಗಿ ಹೋಗಿದ್ದರೆ, ಸಾಮಾಜಿಕ-ಕಳಕಳಿಯ ಕಾವ್ಯಾನಂದ ಹುಟ್ಟುತ್ತಿರಲಿಲ್ಲವೇನೊ ಅನಿಸುತ್ತದೆ.
ಅಂತಹ ಸಂಪ್ರದಾಯಸ್ಥ ಕುಟುಂಬದಿಂದ ಬೆಳೆದು ಬಂದ ಸಿದ್ಧಯ್ಯ ಪುರಾಣಿಕ, ಪ್ರಖರ ವಿಚಾರವಾದಿಯಾಗಿ ಬೆಳೆದು ನಿಂತರು. ಮಡಿ-ಮೈಲಿಗೆಯನ್ನು ವಿರೋಧಿಸಿದರು. ಮೂಢನಂಬಿಕೆಗಳನ್ನು ಅಲ್ಲಗಳೆದರು. ಮಠ-ಮಾನ್ಯಗಳಲ್ಲಿ ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯತೆಗಳನ್ನು ಕಿತ್ತೊಗೆಯುವಂತೆ ಕರೆ ನೀಡಿದರು. ಮಡಿ ಯಾವುದಯ್ಯಾ? ಮೈಲಿಗೆಯಾವುದಯ್ಯ? ತಿಳಿದು ನೋಡಿರಯ್ಯ ಎಂದು ತಿಳಿ ಹೇಳಿದರು. ಗೋವಿನ ಪೂಜೆ ಮಾಡುವುದಕ್ಕಿಂತ ಹಾವಿಗೆ ಹಾಲನ್ನೆರುವುದಕ್ಕಿಂತ ಹಸಿದ ಜೀವಿಗಳಿಗೆ ಆಶಯವೀಯಿರಯ್ಯ ಎಂದು ಸಾರಿ ಹೇಳಿದರು. ಹೀಗೆ ಮೌಢ್ಯತೆ- ಸಂಪ್ರದಾಯ ವಿರೋಧದ ಅನೇಕ ವಚನಗಳನ್ನು ಪುರಾಣಿಕರು ರಚಿಸಿದರು.
ಸತಿ-ಪತಿಭಾವ
ಸತಿ-ಪತಿ ಭಾವ ಹನ್ನೆರಡನೇ ಶತಮಾನದ ಶರಣರ ಮಹತ್ವದ ಪರಿಕಲ್ಪನೆ. ಲೌಕಿಕದ ಮೂಲಕ ಅಲೌಕಿಕವನ್ನೂ ಗುರುತಿಸುವ ಪ್ರಯತ್ನಗಳನ್ನವರು ಮಾಡಿದರು. ಇದೇ ಆದರ್ಶವನ್ನು ಒಪ್ಪಿಕೊಂಡ ಪುರಾಣಿಕರ ವಚನಗಳಲ್ಲಿ ಸತಿ-ಪತಿ ಭಾವದ ಆಶಯವಿರುವ ಅನೇಕ ರಚನೆಗಳಿವೆ. ಪುರಾಣಿಕರು ಪ್ರೇಮ-ವಿರಹದ ಭಾವನೆಗಳನ್ನು ಈ ಸತಿಪತಿ ಭಾವದ ಚೌಕಟ್ಟಿನಲ್ಲಿಯೇ ವಿಸ್ತರಿದ್ದಾರೆ. ಸ್ವತಂತ್ರಧೀರ ಸಿದ್ಧೇಶ್ವರ ಈ ಕವಿಯ ಪ್ರಿಯಕರ. ಬಸವಣ್ಣನವರ ಸತಿಪತಿ ಭಾವದ ವಚನಗಳ ನೇರ ಪ್ರಭಾವವನ್ನು ಇಲ್ಲಿ ಕಾಣಬಹುದಾಗಿದೆ.
"ನಲ್ಲ ಬರುವನೆಂಬ ಸಿಹಿ ಸುದ್ದಿ ಬಂದಿದೆ ಗೆಳತಿ, ನಂಬಲೆ ನಂಬದಿರಲೆ?" ಎಂಬಂತಹ ಸಾಲುಗಳಲ್ಲಿರುವ ತೀವ್ರತೆ ಹಾಗೂ ಕುತೂಹಲ ಗಮನಿಸುವಂತಿವೆ. "ಯಾರಿಗಾಗಿ ಮಿಂದು ಮುಡಿಯಲಿ? ಯಾರಿಗಾಗಿ ಸಿರಿಗಂಧವನ್ನು ಸವರಿಕೊಳ್ಳಲಿ?" ಎಂಬಂತಹ ನುಡಿಗಳು ಅಕ್ಕಮಹಾದೇವಿಯ ರಚನೆಗಳನ್ನು ನೆನಪಿಸುತ್ತವೆ. ಪುರಾಣಿಕರ ಕಾವ್ಯದ ಅನನ್ಯತೆಯನ್ನು ಇಂತಹ ವಚನಗಳು ಹಿಡಿದಿಟ್ಟಿವೆ.
"ಶರಣಸತಿ" ಎನ್ನುವ ಪದ ಅರ್ಥಪೂರ್ಣವಾದುದು. ಶರಣನಾಗಬೇಕಾದರೆ ತಪಸ್ಸು ಮಾಡಬೇಕಾಗಿಲ್ಲ, ಉಪವಾಸ ಇರಬೇಕಾಗಿಲ್ಲ. ಶರಣನಾಗಬೇಕಾದರೆ ಮೊದಲು ಸತಿಯಾಗಬೇಕು. ಸತಿಯೆಂದರೆ ಹೆಣ್ಣು, ಹೆಣ್ಣೆಂದರೆ ತಾಯಿ, ತಾಯಿಯೆಂದರೆ ಅಂತಃಕರಣ. ಅಂದರೆ ಸಂಪೂರ್ಣ ಅಂತಃಕರಣಿಯಾಗುವವರೆಗೆ ಶರಣ ಪಟ್ಟ ಸಿಗಲಾರದು. ಹೆಣ್ಣನ್ನೂ-ಸತಿಯನ್ನು ಆಧ್ಯಾತ್ಮ ಕ್ಷೇತ್ರದಿಂದ ಅತಿದೂರ ಇಟ್ಟಂತಹ ಕಾಲದಲ್ಲಿ ಹನ್ನೆರಡನೇ ಶತಮಾನದ ಶರಣರು ಹೊಸಕ್ರಾಂತಿಕಾರಕವಾದ ವಿಚಾರವನ್ನು ಮಂಡಿಸಿದರು. ಗಂಡಾಗಿ ಹುಟ್ಟಿದಾಗಲೇ ಮುಕ್ತಿಯೆಂದು ವೈದಿಕ ವ್ಯವಸ್ಥೆ ಸಾರಿದರೆ ಸತಿಯಾದಾಗಲೇ ಶರಣನಾಗಲು ಸಾಧ್ಯವೆಂದು ಬಸವಣ್ಣನವರು ಪ್ರತಿಪಾದಿಸಿದರು. ಬಸವಣ್ಣನವರ ನೇರ ಪ್ರಭಾವಕ್ಕೊಳಗಾಗಿರುವ ಪುರಾಣಿಕರೂ ಕೂಡ ಇದೇ ಆಶಯವನ್ನೂ ತಮ್ಮ ವಚನಗಳಲ್ಲಿ ವಿಸ್ತರಿಸಿದ್ದಾರೆ. ಅವರ ಸತಿ-ಪತಿ ಭಾವದ ವಚನಗಳು ಗಮನಿಸುವಂತಿದೆ.
ಪ್ರೀತಿಯ ಅನಂತತೆ
"ಪ್ರೀತಿ ಅನಂತವಾದುದು; ಅದರ ಅನಂತತೆಯನ್ನು ಗುರುತಿಸುವಲ್ಲಿ ಪುರಾಣಿಕರು ಯಶಸ್ವಿಯಾಗಿದ್ದಾರೆ. ಪ್ರೀತಿಯೆಂಬುದು ನಲ್ಲ-ನಲ್ಲೆಯರ, ಪ್ರಿಯಕರ-ಪ್ರೇಯಸಿಯರ ವಿಷಯಕ್ಕೆ ತಿರುಗಿದಾಗ, ಪ್ರಣಯವಾಗುತ್ತದೆ. ಅದೇ ಜೀವ-ದೇವರ ಸಂಬಂಧದಲ್ಲಿ ಅದು ಭಕ್ತಿಯಾಗುತ್ತದೆ. ಪುರಾಣಿಕರ ಪ್ರೀತಿಯ ಪರಿಕಲ್ಪನೆಯು ಪ್ರಣಯಕ್ಕೂ ಸಂಬಂಧಿಸಿದ್ದಲ್ಲ, ಭಕ್ತಿಗೂ ಸಂಬಂಧಿಸಿದ್ದಲ್ಲ. ಅವರ ಪ್ರೀತಿ ಸಮಾಜಕ್ಕೆ ಸಂಬಂಧಿಸಿದ್ದು, ಮಾನವೀಯತೆಯ ಬೆಳವಣಿಗೆಗೆ ಸಂಬಂಧಿಸಿದ್ದು, ಅದು ಅಂತಃಕರಣಕ್ಕೆ ಸಂಬಂಧಿಸಿದ್ದು, ಅಂತೆಯೇ ಪುರಾಣಿಕರ ಪ್ರೀತಿಯ ಪರಿಕಲ್ಪನೆ ಅನಂತವಾಗಿದೆ ಅದು ಅನನ್ಯವಾಗಿದೆ.
ಪ್ರೀತಿ ಮತ್ತು ನೀತಿಯನ್ನು ಅವರು ಕಸಿ ಮಾಡಿ ಕಟ್ಟುತ್ತಾರೆ. ಅವರ ದೃಷ್ಟಿಯಲ್ಲಿ ನಾಲ್ಕಾಕ್ಷರಗಳು "ಚತುರಕ್ಷರೀ ಮಂತ್ರವಾಗಿ ಕಾಣಿಸುತ್ತವೆ. ನೀತಿಯೆಂಬುದು ನಿಯಮಗಳ ಭಾರದಿಂದ, ಅವಾಸ್ತವಗಳ ಅಸಹಜತೆಯಿಂದ ಕೂಡಿರಬಾರದು ಅದು ಪ್ರೀತಿಯ ರಸದಲ್ಲಿ ಬೆಳೆದು ನಿಲ್ಲಬೇಕೆಂದವರು ಹೇಳುತ್ತಾರೆ. "ಪ್ರೀತಿಸುವ ಹೃದಯವೊಂದಿದ್ದರೆ ಎಲ್ಲ ಇದ್ದ ಹಾಗೆ, ಅದಿಲ್ಲದಿದ್ದರೆ ಎಲ್ಲ ಇದ್ದೂ ಇಲ್ಲದಂತಯ್ಯಾ! ಎಂಬ ಅವರ ವಚನಗಳ ಸಾಲುಗಳಲ್ಲಿ ಪ್ರೀತಿಯ ಮಹತ್ವವೆಂತಹದೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪ್ರೀತಿ ಬಹುಮುಖಿಯಾದುದು, ಅದೊಂದು ಮಹತ್ವದ ಮೌಲ್ಯ. ಆ ಮೌಲ್ಯ ಬೆಳೆದಂತೆಲ್ಲ ಸಮಾಜ ಬೆಳೆಯುತ್ತದೆ. ಮಾತಿನ ಶಕ್ತಿ-ರೀತಿಯ ಶಕ್ತಿ ಎಲ್ಲ ಶಕ್ತಿಗಳಿಗಿಂತ ಪ್ರೀತಿಯ ಶಕ್ತಿ ದೊಡ್ಡದು.
ಪ್ರೀತಿಸುವವರನ್ನು ಪ್ರೀತಿಸುವವ ಮಾನವ, ಪ್ರೀತಿಸದವರನ್ನೂ ಪ್ರೀತಿಸುವವ ಮಹಾ ಮಾನವ, ದ್ವೇಷಿಸುವವರನ್ನೂ ಪ್ರೀತಿಸುವವ ದೇವ ಮಾನವ ನೋಡಯ್ಯಾ! ಎಂದು ಹೇಳುವ ಪುರಾಣಿಕರ ವಚನಗಳಲ್ಲಿ ಪ್ರೀತಿಯ ಆಳ-ಅಗಲ-ವಿಸ್ತಾರಗಳು ಸ್ಪಷ್ಟವಾಗುತ್ತವೆ. ಪ್ರೀತಿ ವಿಷಯದ ಅನಂತ ಸಾಧ್ಯತೆಗಳನ್ನು ಅವರು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಪ್ರಣಯ-ಪ್ರೇಮಗಳಿಗಿಂತ ಭಿನ್ನವಾದ ಸಾಧ್ಯತೆಗಳನ್ನು ಅವರು ತಮ್ಮ ’ಪ್ರೀತಿಯ’ ಹೊಸ ಪರಿಕಲ್ಪನೆಗಳನ್ನಾಗಿ ಕಟ್ಟಿಕೊಂಡಿದ್ದಾರೆ.
ಮಹಿಳೆ
’ಮಹಿಳೆ’ಯನ್ನು ಕುರಿತು ಅನೇಕ ವ್ಯಾಖ್ಯಾನಗಳಿವೆ. ಮಹಿಳೆಯನ್ನು ದೇವತೆಯೆಂದು ಪೂಜಿಸಿದವರಿದ್ದಾರೆ. ರಾಕ್ಷಸಿಯೆಂದು ದ್ವೇಷಿಸಿದವರಿದ್ದಾರೆ. ಹೆಣ್ಣು ತಾಯಿ, ಆಕೆ ಜೀವಕೊಟ್ಟವಳೆಂದು ಸಮೀಪ ಹೋದವರಿದ್ದಾರೆ. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂದು ಹೇಳಿದವರೇ "... ಸ್ವಾತಂತ್ರಮರ್ಹತಿ" ಎಂದು ಆದೇಶ ಹೊರಡಿಸಿದವರೂ ಇದ್ದಾರೆ. ಆದರೆ ಶರಣರು ಹೆಣ್ಣಿನ ಬಗೆಗೆ ತಾಳಿದ್ದ ನಿಲುವು ಹೆಚ್ಚು ವೈಜ್ಞಾನಿಕವಾಗಿದೆ, ಮಾನವೀಯತೆಯಿಂದ ಕೂಡಿದೆ. ಶರಣರ ಪ್ರಭಾವಕ್ಕೊಳಗಾಗಿರುವ ಸಿದ್ಧಯ್ಯ ಪುರಾಣಿಕರು, ಮಹಿಳೆಯ ಬಗೆಗೆ ಅಪಾರ ಗೌರವ ಹೊಂದಿದವರಾಗಿದ್ದಾರೆ. "ಹೆಣ್ಣು ಸಹನೆಯಲ್ಲಿ ಪೃಥ್ವಿ, ಕ್ಷಮೆಯಲ್ಲಿ ಜಲ, ಕರುಣೆಯಲ್ಲಿ ಆಕಾಶ" ಎಂದು ಹೆಣ್ಣನ್ನು ವರ್ಣನಾತ್ಮಕ ರೀತಿಯಲ್ಲಿ ವ್ಯಾಖ್ಯಾನಿಸಿದ ಪುರಾಣಿಕರು ’ಸತಿ’ ತಪ್ಪಿದರೂ ಚಿತೆ ತಪ್ಪಲಿಲ್ಲ. ಈ ದೇಶದ ಸತಿಗೆ!" ಎಂದು ಕಟು ವಾಸ್ತವವನ್ನೂ ಬಿಚ್ಚಿಟ್ಟಿದ್ದಾರೆ. ಪುರಾಣಿಕರು ಹೆಣ್ಣಿನ ಬಗೆಗೆ ಪರ-ವಿರೋಧ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಸಮಾಜ ವ್ಯವಸ್ಥೆಯಲ್ಲಿ ಅವಳ ಅಸ್ಥಿತ್ವವೆಂತಹದೆಂಬುದನ್ನು ತಿಳಿಸುತ್ತ ಹೋಗುತ್ತಾರೆ.
ತಾಯಿ ದೇವರೆಂದು ನಮಿಸುವ ಗಂಡಸರೇ ಸತಿ, ಶೂದ್ರಗಳೆನ್ನುತ್ತಾರೆ. ಹೆಣ್ಣು ಮಾಯೆಯೆನ್ನುವವರು, ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟುವುದಿಲ್ಲವೆ? ಎಂದು ಪುರಾಣಿಕರು ಪ್ರಶ್ನಿಸಿದ್ದಾರೆ. ಹೆಣ್ಣಿನ ಮಹಿಮೆಯನ್ನು, ಅವಳ ಸಾಧ್ಯತೆಗಳನ್ನು ಗಂಡು ಅರ್ಥಮಾಡಿಕೊಳ್ಳಬೇಕು. ಅವಳ ವಿಮೋಚನೆಯಾಗಬೇಕು, ಮಹಿಳೆಯೂ ಕೂಡ ಪುರುಷನಿಗೆ ಸಮಸಾಟಿಯಾಗಿ ಬೆಳೆದು ನಿಲ್ಲಬೇಕೆಂದು ಪುರಾಣಿಕರು ಬಯಸುತ್ತಾರೆ. ಹೆಣ್ಣಿನ ಈ ಅಸಮಾನತೆಗೆ, ಅವರ ಶೋಷಣೆಗೆ ಕಾರಣವಾದ ಸಮಾಜ ವ್ಯವಸ್ಥೆಯ ಬಗೆಗೆ ಪುರಾಣಿಕರಲ್ಲಿ ಸಿಟ್ಟಿಲ್ಲ. ಹೀಗಾಗಿ ಅದು ಬಂಡಾಯದ ರೂಪ ಪಡೆಯುವುದಿಲ್ಲ. ಹೆಣ್ಣಿನ ಬಗೆಗೆ ಅವರಲ್ಲಿ ಅಪಾರ ಅಂತಃಕರಣವಿರುವುದರಿಂದ ಅವರು ಮಹಿಳೆಯನ್ನು ಕುರಿತು ಹೇಳಿರುವ ಮಾತುಗಳು ಗಮನಾರ್ಹವಾಗಿದೆ.
ಸಮಾರೋಪ
ಹನ್ನೆರಡನೇ ಶತಮಾನ-ಹದಿನಾರನೇ ಶತಮಾನ ಹಾಗೂ ಇಪ್ಪತ್ತನೇ ಶತಮಾನಗಳಲ್ಲಿ ರಚನೆಯಾದ ವಚನಗಳಿಗೆ ಸಂಬಂಧಿಸಿದಂತೆ ತೌಲನಿಕ ಅಧ್ಯಯನ ನಡೆಯಬೇಕಾಗಿದೆ. ಆಧುನಿಕ ವಚನಕಾರರಲ್ಲಿ ಸಿದ್ಧಯ್ಯ ಪುರಾಣಿಕರು ಮಹತ್ವದ ವಚನಕಾರರಾಗಿ ಕಾಣಿಸುತ್ತಾರೆ. ಹದಿನೈದುನೂರು ವಚನಗಳನ್ನು ರಚಿಸಿರುವ ಪುರಾಣಿಕರು ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರ ಗಮನ ಸೆಳೆಯದೆ ಸತ್ವದ ದೃಷ್ಟಿಯಿಂದಲೂ ಮುಖ್ಯರಾಗುತ್ತಾರೆ. ಹದಿನಾರನೇ ಶತಮಾನದ ಜೇವರ್ಗಿ ಷಣ್ಮುಖ ಶಿವಯೋಗಿಯ ವಚನಗಳಿಗೂ, ಪುರಾಣಿಕರ ವಚನಗಳಿಗೂ ಅನೇಕ-ವಿಷಯಗಳಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ. ಜೇವರ್ಗಿ ಷಣ್ಮುಖ ಶಿವಯೋಗಿಗಳು ಮತ್ತು ಸಿದ್ಧಯ್ಯ ಪುರಾಣಿಕರು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದವರು. ಈ ಪ್ರದೇಶದ ಧಾರ್ಮಿಕ ಆಶಯಗಳು ಇವರ ವಚನಗಳಲ್ಲಿ ಮರು ಹುಟ್ಟು ಪಡೆದಿವೆ.
ಆಧುನಿಕ ಸಂದರ್ಭದಲ್ಲಿ ವಚನಕಾರರೆಂದರೆ ಸಿದ್ಧಯ್ಯ ಪುರಾಣಿಕರು ಎಂಬುವಷ್ಟರ ಮಟ್ಟಿಗೆ ಇವರು ಗುರುತಿಸಿಕೊಂಡಿದ್ದಾರೆ. ಹೀಗೆಂದಾಕ್ಷಣ ಪುರಾಣಿಕರ ವಚನಗಳಲ್ಲಿ ಮಿತಿಗಳಿಲ್ಲವೆಂದರ್ಥವಲ್ಲ. ಅವರ ವಚನಗಳಲ್ಲಿಯೂ ಅನೇಕ ಮಿತಿಗಳಿವೆ. ಪ್ರಾಸವನ್ನು ಕಾಯ್ದುಕೊಳ್ಳುವ ಸಲುವಾಗಿಯೇ ಅನೇಕ ಪದಗಳು ವ್ಯರ್ಥವಾಗಿ ಬಂದು ಸೇರಿವೆ. ಅನೇಕ ವಚನಗಳಲ್ಲಿ ವಿಷಯ ಪುನರಾವರ್ತನೆಯಿದೆ. ಇವರ ವಚನಗಳಲ್ಲಿ ಧ್ವನಿಗಿಂತಲೂ ವಿವರಣೆ ಹೆಚ್ಚೆನಿಸುತ್ತದೆ. ಜೀವನಾನುಭವದಲ್ಲಿ ವೈವಿಧ್ಯತೆಯಿಲ್ಲ. ಒಬ್ಬ ಅಧಿಕಾರಿಯಾಗಿದ್ದ ಪುರಾಣಿಕರು ತಮ್ಮ ಸೀಮೀತ ಜೀವನಾನುಭವದ ಹಿನ್ನೆಲೆಯಲ್ಲಿಯೇ ಇಷ್ಟೊಂದು ವಚನಗಳನ್ನು ರಚಿಸಿದ್ದಾರೆ. ವಚನೋಧ್ಯಾನ, ವಚನನಂದನ, ವಚನರಾಮ-ಹೀಗೆ ಮೂರು ವಚನ ಸಂಕಲನಗಳು ಪ್ರಕಟವಾದರೂ, ಒಂದರಿಂದ ಮತ್ತೊಂದರಲ್ಲಿ ಕುತೂಹಲಕಾರಿಯಾದ ಬೆಳವಣಿಗೆಗಳು ಕಾಣಿಸುವುದಿಲ್ಲ. ಒಂದೇ ಅನುಭವವೇ ಬೇರೆ ಬೇರೆ ಸಂದರ್ಭಗಳ ಮೂಲಕ ಪ್ರಕಟವಾದುದನ್ನು ಕಾಣಬಹುದಾಗಿದೆ. ಇಂತಹ ಮಿತಿಗಳನ್ನು ಗಮನಿಸಿಯೂ ಇವರ ವಚನಗಳನ್ನು ಅಧ್ಯಯನ ಮಾಡಬೇಕಾದ ಅಗತ್ಯತೆಯಿದೆ.
ಪುರಾಣಿಕರ ವಚನಗಳಲ್ಲಿ ತೀವ್ರ ವಿಡಂಬನೆಗಿಂತ ವಿನಮ್ರವಾದ ಆತ್ಮನಿವೇದನೆಯಿದೆ. ಇವರ ಹೆಚ್ಚಿನ ವಚನಗಳಲ್ಲಿ ಈ ಆತ್ಮವಿಮರ್ಶೆಯ ವಿಚಾರ ಪ್ರಕಟವಾಗಿದೆ. ಕ್ರಾಂತಿಕಾರಿ ವಿಚಾರಗಳಿಗಿಂತ ಅಂತಃಕರಣದ ಮಾತುಗಳು ಹೆಚ್ಚಾಗಿವೆ. ಮಹಾತ್ವಾಕಾಂಕ್ಷೆಗಿಂತ ಮನಃಪರಿವರ್ತನೆಯ ಮಾರ್ಗವಿದೆ. ಮಹಾಕವಿಯ ಸಂಕೀರ್ಣ ಶೈಲಿಗಿಂತ, ಆಪ್ತಮಿತ್ರನಂತೆ ಕೈ ಹಿಡಿಯುವ ನಲ್ಮೆಯ ನುಡಿಯಿದೆ. ತನ್ನ ಬದುಕಿನ ಪುಟಗಳನ್ನು ವಿನಯದಿಂದ ತೆರೆದಿಡುವ ಸೌಜನ್ಯವಿದೆ. ಅಬ್ಬರಿಸಿ ಆರಿಹೋಗುವುದಕ್ಕಿಂತ, ಸಣ್ಣ ಮೇಣಬತ್ತಿಯ ತರಹ ತಣ್ಣಗೆ ಬೆಳಕು ನೀಡುವ ಗುಣವಿದೆ. ಈ ಎಲ್ಲ ಕಾರಣಗಳಿಂದ ಪುರಾಣಿಕರ ವಚನಗಳನ್ನು ಮತ್ತೆ ಮತ್ತೆ ಅಧ್ಯಯನ ಮಾಡಬೇಕೆನಿಸುತ್ತದೆ.
ಬದುಕಿನಲ್ಲಿ ಏನೂ ಇಲ್ಲ ಎಲ್ಲಾ ಮುಗಿದು ಹೋಯಿತು ಎಂಬ ಭಾವ ಬರುವಷ್ಟರಲ್ಲಿಯೇ, ಪ್ರಕೃತಿ ಮೈತುಂಬ ಹಸಿರುಟ್ಟು ಮೇಲೇಳುವ ಹಾಗೆ ಪುರಾಣಿಕರ ವಚನಗಳು ಅತ್ಯಂತ ಭರವಸೆಗಳ ಮೂಲಕ ಬದುಕಿನ ವಿಸ್ತಾರವನ್ನು ಹೆಚ್ಚಿಸತೊಡಗುತ್ತವೆ. ಅಲ್ಲಮನ ಅನುಭಾವ, ಬಸವಣ್ಣನ ಕಳಕಳಿ, ಅಕ್ಕನ ಅನನ್ಯತೆ-ಪುರಾಣಿಕರ ಅನೇಕ ವಚನಗಳಲ್ಲಿ ಕೂಡಿಕೊಂಡು ಬೆಳೆದಿವೆ.
ಪುರಾಣಿಕರ ವಚನಗಳ ಭಾಷೆಯಲ್ಲಿ ಹೈದ್ರಾಬಾದ ಕರ್ನಾಟಕದ ಅಸಲುತನ ಕಾಣಿಸುವುದಿಲ್ಲ. ಈ ನೆಲದ ಗಂಡು ಮೆಟ್ಟಿನ ಭಾಷೆ ಇಲ್ಲಿ ಕಾಣಸಿಗುವುದಿಲ್ಲ. ಗ್ರಾಂಥಿಕ ಭಾಷೆಯನ್ನವರು ಅನುಸರಿಸಿದ್ದಾರೆ. ಅಯ್ಯ, ಅಯ್ಯ ಎನ್ನುವಂತಹ ಪದಗಳು, ಹನ್ನೆರಡನೇ ಶತಮಾನದ ವಚನಕಾರ ಪ್ರಭಾವದ ಬೆಳವಣಿಗೆಯಾಗಿದೆ. ಧಿಮೀಗುಡುವ ಈ ಪ್ರದೇಶದ ಭಾಷೆ ಅಲ್ಲಿ ಕಾಣಿಸುವುದಿಲ್ಲ. ಆದರೆ ಅವರ ಕಾವ್ಯ ಭಾಷೆ ಸರಳವಾಗಿದೆ, ಸುಲಲಿತವಾಗಿದೆ. ಕರ್ನಾಟಕದ ಯಾವುದೇ ಪ್ರದೇಶದ ಸಾಮಾನ್ಯ ಓದುಗನೂ ಅವರ ವಚನಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ. ಅಷ್ಟೊಂದು ಸರಳತೆ, ಲಾಲಿತ್ಯ, ಅಂತ್ಯಪ್ರಾಸ ಅವರ ಭಾಷಾಶೈಲಿಯ ಆಕರ್ಷಣೆಗಳಾಗಿವೆ. ಈ ಪ್ರದೇಶದ ಹಿರಿಯ ಕವಿಗಳ ಕೃತಿಗಳನ್ನು ಹೊಸ ಬೆಳಕಿನಲ್ಲಿ ಚರ್ಚಿಸುವುದರ ಮೂಲಕ ಇಲ್ಲಿಯ ಸಾಧ್ಯತೆಗಳನ್ನು ಗುರುತಿಸಬಹುದಾಗಿದೆ.
-ಡಾ.ಬಸವರಾಜ ಸಬರದ, ಪ್ರಾಧ್ಯಾಪಕರು, ಗುಲ್ಬರ್ಗಾ

ಕನ್ನಡ ಎನೆ ನಡುಗುವುದೆನ್ನೆದೆ!

ಎಷ್ಟೇ ಠುಸ್‌ಪುಸ್ ಎಂದು ಇಂಗ್ಲೀಷಿನಲ್ಲಿ, ಅಥವಾ ಇಂಗ್ಲೀಷಿಗೆ ಸ್ವಲ್ಪವೇ ಕನ್ನಡ ಬೆರೆಸಿ ಮಾತಾಡುವುದೇ ಇಂದು, ನಾಗರಿಕತೆಯ, ಆಧುನಿಕತೆಯ ಲಕ್ಷಣವಾಗಿದ್ದರೂ, ಕೆಲವು ಕ್ಷೇತ್ರಗಳಲ್ಲಾದರೂ, ನಾವು ಕನ್ನಡದಲ್ಲೇ ವ್ಯವಹರಿಸಬೇಕಾದುದು ಅನಿವಾರ್ಯವಾಗಿ ಉಳಿದುಕೊಂಡಿರುವುದು, ನಮ್ಮ ಕನ್ನಡಮ್ಮನ ಪುಣ್ಯವೇ ಸರಿ!
ಪೌರಾಣಿಕ ನಾಟಕಗಳಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ, ಹರಿಕೀರ್ತನಕಾರರು, ದೊಡ್ಡಾಟದವರು, ಕನ್ನಡ ಅಧ್ಯಾಪಕರು, ಹೀಗೆ ಕನ್ನಡ ಮಾತ್ರವನ್ನೇ ಬಳಸಬೇಕಾದವರ ಪಟ್ಟಿಯಲ್ಲೇ ನಾನೂ ಇದ್ದೇನೆನ್ನುವುದು, ನನಗೊಂದು ಹೆಮ್ಮೆಯ ವಿಚಾರವೇ! ಆದರೆ, ನಾನು ಈ ಯಾವ ವೃತ್ತಿಯಲ್ಲೂ ಇಲ್ಲ. ಹಾಗಿದ್ದೂ ಅವರ ಸಾಲಿನಲ್ಲಿ ನಿಂತಿದ್ದೇನೆ. ಏಕೆಂದರೆ.......... ನಾನು ಕರ್ನಾಟಕ ಶೈಲಿಯ ಸಂಗೀತಗಾರ್ತಿ ಮತ್ತು ಇತರರಿಗೂ ಅದನ್ನು ಕಲಿಸುತ್ತೇನೆ. ಅಷ್ಟೇ! ನನ್ನ ಅನುಭವಾಧಾರಿತ, ಕೆಲವು ಕನ್ನಡದ ಮೋಜಿನ ಸನ್ನಿವೇಶಗಳು ಇಲ್ಲಿವೆ.
ವಿಶೇಷವೆಂದರೆ, ಒಂದು ಅಂತರಾಷ್ಟ್ರೀಯ ವಿದ್ಯಾಸಂಸ್ಥೆ ಇರುವ ಊರಿನ ಪಕ್ಕದಲ್ಲೇ ನಮ್ಮ ತರಬೇತಿ ಸಂಸ್ಥೆಯೂ ಇರುವುದರಿಂದ, ನನ್ನ ಸಂಗೀತದ ತರಗತಿಗೆ ಹಲವಾರು ಪರಭಾಷಿಗರು ಬರುತ್ತಾರೆ. ಮಾತ್ರವಲ್ಲ, ಇಂದು ನಮ್ಮೂರಿನದೇ ಮಕ್ಕಳು ಸಹ, ಪ್ಲೇಕ್ಲಾಸ್ನಿಂದಲೇ ಕನ್ನಡವನ್ನು ಮಾತಾಡಲೂ ಮರೆಯತೊಡಗಿ, ಮುಂದೆ ಎಲ್.ಕೆ.ಜಿ-ಯು.ಕೆ.ಜಿಗಳಲ್ಲಿ ಮತ್ತೆ ಇನ್ನೂ ಮರೆತು, ಆ ಬಳಿಕ, ಕೇವಲ ಮೂರನೇ ನಾಲ್ಕನೇ ತರಗತಿಯವರೆಗೆ ಒಂದು ಸಬ್ಜೆಕ್ಟ್ ಎಂದು ಮಾತ್ರ, ಕನ್ನಡವನ್ನು ಕಲಿತದನ್ನು, ಆರೇಳಕ್ಕೆ ಬರುವ ವೇಳೆಗೆ ಮತ್ತೆ ಸಂಪರ್ಕವೇ ಇಲ್ಲದೇ ಸಂಪೂರ್ಣವಾಗಿ ಮರೆತುಬಿಟ್ಟಿರುತ್ತಾರೆ! ಮಾತೃಭಾಷೆ ಕನ್ನಡವೇ ಆಗಿದ್ದರೂ, ವಿದ್ಯಾರ್ಜನೆಗೆ ಸುಲಭವಾಗಲೆಂಬ ಉದ್ದೇಶದಿಂದ ಮಗುವಿನೊಡನೆ ಆಂಗ್ಲಭಾಷೆಯಲ್ಲೇ ಮಾತಾಡುವ ಮಾತಾಪಿತೃಗಳು! ಇನ್ನು ಎಂದೋ ಕಲಿತಿದ್ದ ಆ ಮುದ್ದುಕನ್ನಡದ ಅಕ್ಷರಗಳನ್ನು ಹೇಗೆ ನೆನಪಿಸಿಯಾರು ಹೇಳಿ! ಹಾಗಾಗಿ, ಕನ್ನಡವೇ ಪ್ರಧಾನವಾಗಿರುವ ನಮ್ಮ ಈ ಕಲಾತರಬೇತಿ ಸಂಸ್ಥೆಯ ತರಗತಿಯೊಳಗೆ, ದಿನದಿನವೂ ಹಲವಾರು ಗಮ್ಮತ್ತಿನ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.....
ತಮಿಳುನಾಡಿನಿಂದ ಉನ್ನತ ಶಿಕ್ಷಣಕ್ಕಾಗಿ ನಮ್ಮೂರಿಗೆ ಬಂದಿದ್ದ ಆಕೆ, ಅಲ್ಲಿದ್ದಾಗ ಅರ್ಧಕ್ಕೆ ಬಿಟ್ಟಿದ್ದ ಕಲೆಯ ಮುಂದರಿಕೆಗಾಗಿ, ನಮ್ಮ ತರಬೇತಿ ಕೇಂದ್ರಕ್ಕೆ ಬಂದಿದ್ದಳು. ನಾನು ಹೇಳುವುದನ್ನೆಲ್ಲ, ಆಕೆ ತನ್ನ ಪುಸ್ತಕದಲ್ಲಿ ತಮಿಳಿನಲ್ಲೇ ಬರೆದುಕೊಳ್ಳುವಳು. ಸ್ವರಗಳನ್ನೇನೋ ಸಂಗಮದನಿ ಎಂದು ಸರಿಯಾಗಿಯೇ ಉಚ್ಚರಿಸುವ ಆಕೆ, ಆಗೀಗ ಕನ್ನಡದ ಸಾಹಿತ್ಯವನ್ನು ತಪ್ಪಾಗಿ ಹೇಳುವುದಿತ್ತು. ನಾನು ಸರಿಪಡಿಸುವುದಿತ್ತು. ಪಾಪ! ಆಕೆಯದೇನೂ ತಪ್ಪಿಲ್ಲ ಬಿಡಿ, ತಮಿಳಿನಲ್ಲಿ ಕ-ಗ ಗಳ ಅಕ್ಷರ ಒಂದೇ ಮತ್ತು ಚ-ಜ ಗಳು, ಪ-ಬ ಗಳು ಒಂದೇ ಅಂತೆ. ಹಾಗಾಗಿ ವಿಷಯವನ್ನು ಅರ್ಥಮಾಡಿಕೊಂಡೇ ಆಯಾ ಶಬ್ದವನ್ನು ಗ್ರಹಿಸಬೇಕಂತೆ. ಆದ್ದರಿಂದ, ನಾನು ಆಕೆಗೆ, ಕನ್ನಡದ ಶಬ್ದಾರ್ಥಗಳನ್ನೂ ವಿವರಿಸುತ್ತಾ ಸಂಗೀತ ಶಿಕ್ಷಕಿ ಮತ್ತು ಪರೋಕ್ಷವಾಗಿ ಕನ್ನಡ ಭಾಷಾ ಶಿಕ್ಷಕಿಯೂ ಆಗಿದ್ದೆ! ಒಮ್ಮೆ, ನಾನು ವಿನಾಯಕಾ ನಿನ್ನ ಪಾಡಿ ಪೊಗಳುವೆ ಎನ್ನುವ ದೇವರ ನಾಮವನ್ನು ಕಲಿಸುವವಳಿದ್ದೆ. ಆಕೆ ಎಂದಿನಂತೆ ತಮಿಳಿನಲ್ಲಿ ಬರೆದುಕೊಂಡಿದ್ದಾಯ್ತು. ನಾನು ಹಾಡುತ್ತಿದ್ದಂತೆ ಆಕೆ ಪುನಃ ಹಾಡಬೇಕಲ್ಲ? ನಾನು ಪಲ್ಲವಿಯ ಮೊದಲ ಸಾಲನ್ನು ಹಾಡಿದ್ದೇ ತಡ, ಆಕೆ ನಿರಾಳವಾಗಿ ವಿನಾಯಗಾ ನಿನ್ನ ಬಾಡಿ ಬೊಗಳುವೆ ಎಂದು ತಾನೇ ಕೈಯ್ಯಾರೆ ಬರೆದುಕೊಂಡಿದ್ದನ್ನು ನೋಡುತ್ತ, ಏರು ಶೃತಿಯಲ್ಲಿ ಹಾಡಿದಳು. ನಮ್ಮ ವಿನಾಯಕನನ್ನು ನೀನು ವಿನಾಯಗಾ ಎಂದರೆ, ಅವನದೂ ತಕರಾರು ಇರಲಿಕ್ಕಿಲ್ಲ. ನನ್ನದೂ ಅಭ್ಯಂತರ ಇಲ್ಲ. ಹಾಗೇ, ನೀನು ಪಾಡುವ ಬದಲು ಬಾಡಿದ್ರೂ, ನನ್ಗೇನೂ ನಷ್ಟ ಇಲ್ಲ. ಆ ದೇವ್ರದೂ ಆಕ್ಷೇಪ ಇಲ್ಲ. ಆದ್ರೆ, ಅವನನ್ನು ಪೊಗಳುವ ಬದಲು ನೀನೇ ಬೊಗಳಿದ್ರೆ, ನಮ್ಮೂರ ನಾಯಿಗಳೇ ತಮ್ಮ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ, ಚಳವಳಿ ಮಾಡಿದ್ರೇನು ಗತಿ ಮಾರಾಯ್ತಿ?! ಸದ್ಯ! ಆಕೆಗೆ, ಇಂತಹ ಶುದ್ಧ ಕನ್ನಡ ಆರ್ಥವಾಗುತ್ತಿರಲಿಲ್ಲ! ಹೀಗೆ, ಕೇರಳದ ಮತ್ತೊಬ್ಬಾಕೆ, ಚಿಂತೆ ಯಾತಕೋ ಬಯಲು ಭ್ರಾಂತಿ ಯಾತಕೋ ಎನ್ನುವ ದಾಸರ ಪದವನ್ನು ಚಿಂತೆಯಾ-ತಕೋ ಬಯಲ ಭ್ರಾಂದಿಯಾ-ತಕೊ ಎಂದು ನನಗೆ ಚಿಂತೆಯ ಜತೆಗೆ ವಿದೇಶಿ ಮದವನ್ನೂ ನೀಡಬಂದಂತಿತ್ತು! ನಾನು ಚಿಂತೆಯನ್ನಾದರೂ ತಕೊಂಡೇನು, ಬ್ರಾಂದಿಯನ್ನು ಕೈಯಲ್ಲೂ ಮುಟ್ಟಿದವಳಲ್ಲವೆಂದು ಆಕೆಗೆ ಹೇಳಿದ್ದೆ!
ಇನ್ನು ನಮ್ಮದೇ ಕನ್ನಡಮ್ಮನ ಮಡಿಲಲ್ಲೇ ಹುಟ್ಟಿ ಬೆಳೆದ! ಇಂಗ್ಲೀಷ್ ಮೀಡಿಯಂನವರೂ ಈ ವಿಷಯದಲ್ಲಿ ಕಡಿಮೆಯೇನಿಲ್ಲ! ಕನಕದಾಸರ ಕೃತಿಯಲ್ಲಿ ಚರಣಕಮಲ ನೆನೆ ಎಂದು ನಾನು ಹೇಳಿಕೊಟ್ಟರೆ, ಚರಣಕ......ಮಲ ನೆನೆ ಎಂದು ನಿರ್ಭಿಡೆಯಿಂದ ಹಾಡಿ, ನಾನು ಯಾವ್ಯಾವುದನ್ನೋ ನೆನಪಿಸಿಕೊಳ್ಳುವಂತೆ ಆಜ್ಞಾಪಿಸುತ್ತಾರೆ. ಆದಿಕೇಶವರಾಯ ಎಂದು ನಾನು ಹಾಡಿದ್ದನ್ನು ಆದಿಕೇ-ಶವರಾಯ ಎಂದು ತಮ್ಮ ಉಸಿರನ್ನು ವಿಭಾಗಿಸಿ ಉಚ್ಚರಿಸಿ, ಆ ಕೇಶವನನ್ನೇ ಉಸಿರುಗಟ್ಟಿಸಿ ಶವರಾಯನಾಗಿಸಿದರೂ, ಹಾಯಾಗಿರುತ್ತಾರೆ! ಇಂಥವು ಇನ್ನೆಷ್ಟೋ!
ಆಗೀಗ, ವ್ಯಾಕರಣ ಶಾಸ್ತ್ರಕ್ಕೂ ಇವರು ಲಗ್ಗೆ ಇಟ್ಟ ಪ್ರಕರಣಗಳೂ ಇವೆ. ಒಮ್ಮೆ ನಾನು ಮೋರೆ ಕಪ್ಪಿನ ಭಾವ ಎನ್ನುವ ಚರಣದ ಸಾಲನ್ನು ಹೇಳಿಕೊಡುತ್ತ, ಭಾವ ಎನ್ನುವುದು ಮಹಾಪ್ರಾಣ. ಅಂದರೆ ಭಾವನೆ. ಭಾವ ಎಂದು ಅಲ್ಪಪ್ರಾಣವನ್ನಾಗಿ ಉಚ್ಚರಿಸಿದರೆ, ಅದು ಅಕ್ಕನಗಂಡ-ಬಾವ ಎಂದಾಗುತ್ತದೆ. ಹಾಗಾಗಿ ಇಲ್ಲಿ ಭಾವ ಅಂದರೆ ಬಕೆ ಬಾಲ ಉಂಟು. ಹಾಗೆ ಹಾಡಬೇಕು. ಇಲ್ಲವಾದರೆ, ನಿಮ್ಮ ಅಕ್ಕನ ಗಂಡ (ಬಾವನ) ಮೋರೆ ಕಪ್ಪು ಎಂದಾಗುತ್ತದೆ ವಿವರಿಸಿದೆ. ಪ್ರಾಯಶಃ ನಮ್ಮಲ್ಲಿ ಹಲವಾರು ಕನ್ನಡಿಗರಿಗೂ ಈ ವ್ಯತ್ಯಾಸ ಗೊತ್ತಿಲ್ಲವೇನೋ? ಅಂತಿರುವಾಗ ಈ ಆಂಗ್ಲಮಾಧ್ಯಮದಲ್ಲಿ ಓದಿದ, ಈಗ ಆಗೇ ಆ-ಆ-ಇ-ಈಯನ್ನೂ ಬರೆಯಲು ಮರೆಯಲಾರಂಭಿಸಿರುವ, ಏನಿದ್ದರೂ ಅತ್ಯಗತ್ಯವಾದಾಗ ಕಂಪ್ಯೂಟರ್‌ನಲ್ಲೇ ಕನ್ನಡವನ್ನು ಕುಟ್ಟುವ ಈ ಸಾಫ್ಟ್‌ವೇರ್ ತಜ್ಞೆಗೆ, ಅವೆಲ್ಲ ಹೇಗೆ ಗೊತ್ತಿದ್ದಿರಬೇಕು ಹೇಳಿ? ಹಾಗಾಗಿ ಆಕೆ ಕುತೂಹಲದಿಂದ ನನ್ನನ್ನು ಕೇಳಿದ್ದೇನು? ಹಾಗಾದ್ರೆ ಮೇಡಂ.... ಅಕ್ಕನ ಗಂಡನಿಗೆ ಬಾಲ ಇರೋದಿಲ್ವಾ?! (ನಮ್ಮಲ್ಲಿ, ಬ ಗೆ ಬಾಲ ಕೊಟ್ರೆ ಭ ಎಂದೇ ಕಲಿಸಲಾಗುತ್ತದೆ) ಅಕ್ಕನ ಗಂಡ ಅಲ್ಪ ಪ್ರಾಣವಾ?! ನಾನಂದೆ ನನ್ನ ಅಕ್ಕನ ಗಂಡನಿಗೂ ಖಂಡಿತಾ ಬಾಲ ಇಲ್ಲ, ನಿನ್ನ ಅಕ್ಕನ ಗಂಡನಿಗೇನಾದ್ರೂ ಇದ್ದಿದ್ರೆ, ಮುಂದಾದರೂ ಆ ಬಾಲವನ್ನು ಪೂರ್ತಿಯಾಗಿ ತುಂಡು ಮಾಡು. ಅದೇ ಸರಿ ಆಯ್ತಾ?! ಮತ್ತೇ ಜಗತ್ತಿನ ಎಲ್ಲ ಬಾವಂದಿರೂ ಅಲ್ಪ ಪ್ರಾಣರಲ್ಲ. ಯಾಕೆಂದರೆ ಅವರಿಗೆ ಭಾವನೆಗಳಿವೆ. ಇಲ್ಲಿ ಮಹಾಪ್ರಾಣವೇ ಉಂಟಲ್ಲ?!
ಒಟ್ಟಾರೆ, ಶುದ್ಧ ಕನ್ನಡವಿದ್ದಲ್ಲೆಲ್ಲ ಎಂತಹ ಮನೋರಂಜನೆಗಳೂ ಇರುತ್ತವೆ ಎನ್ನುವುದಕ್ಕೆ ಇವೆಲ್ಲ ಸಹಜ ಉದಾಹರಣೆಗಳು ಅಷ್ಟೆ. ಒಮ್ಮೆ, ಅತಿ ಚಿಕ್ಕ ಕತೆ ಬರೆದವರಿಗೆ ಬಹುಮಾನ ಎನ್ನುವ ಘೋಷಣೆಯೊಂದಿಗೆ, ಸ್ಪರ್ಧೆ ನಡೆಯುತಂತೆ. ಪ್ರಥಮ ಬಹುಮಾನ ಪಡೆದ ಕತೆ ಇದಾಗಿತ್ತು... ನನ್ನ ಮದುವೆ ಆಯಿತು. ಇಲ್ಲಿಗೆ ನನ್ನ ಕತೆ ಮುಗಿಯಿತು! ಆಹಾ! ಎಂಥಾ ಸೊಬಗಿನ ಕತೆ! ಬರೆದವರು, ಹೆಣ್ಣೋ, ಗಂಡೋ?! ಬ್ರಿಟಿಷ್ ಅಧಿಕಾರಿಯೊಬ್ಬರು ಕನ್ನಡದವರೊಬ್ಬರ ಮನೆಗೆ ಊಟಕ್ಕೆ ಬಂದನಂತೆ. ಒಳ್ಳೇ, ಸುಕ್ರುಂಡೆ-ಪಾಯಸ-ವಡೆಗಳ ಊಟ. ಪಟ್ಟಾಗಿ ಉಂಡ ಅಧಿಕಾರಿ ಖುಷಿಯಿಂದ, ಇಂಗ್ಲೀಷ್‌ನಲ್ಲೇ ಕೇಳಿದ ಊಟ ಬಹಳ ಚೆನ್ನಾಗಿತ್ತು. ಅಂದಹಾಗೆ ಏನಿತ್ತು ಇವತ್ತು ನಿಮ್ಮನೆಯಲ್ಲಿ? ಅತಿಥೇಯರು ಇಂಗ್ಲೀಷಿನಲ್ಲೇ ಉತ್ತರಿಸಿದರು. ಇವತ್ತು ನಮ್ಮ ತಂದೆ ತಿಥಿ ಅದಕ್ಕೇ......... ಕೂಡಲೇ, ಆ ಕನ್ನಡ ಬಾರದ ಪರದೇಶಿ ಹೇಳಿದ್ದೇನು? ಹೌದಾ? ನಾಳೆಗೆ ನಾನು ಮತ್ತೆ ಊಟಕ್ಕೆ ಬರ‍್ತೇನೆ. ನೀವು ಈ ಹಣ ತಗೊಳ್ಳಿ, ಮತ್ತು ನಾಳೆ ನನ್ನ ತಿಥಿ ಮಾಡಿ ಆಯ್ತಾ?! ಅಂತೂ ಅಚ್ಚ ಕನ್ನಡವೇ ಅಪರೂಪವಾದ ಇಂದಿನ ವಾತಾವರಣದಲ್ಲಿ, ಕನ್ನಡ ಎಂದರೆ, ಇನ್ನೂ ಎಂತೆಂಥ ಘಟನೆಗಳು ನಡೆದಾವೋ, ಎಂದು ನನ್ನ ಎದೆ ನಡುಗುತ್ತಲೇ ಇರುತ್ತದೆ!
-ಟಿ.ಎಸ್. ಅಂಬುಜಾ, ಶಿಕ್ಷಕರು, ಉಡುಪಿ

ದಂಡು ಪ್ರದೇಶದಲ್ಲಿ ಮೊಳಗಿದ ಕನ್ನಡದ ಕೂಗು



ಕನ್ನಡ ಚಳವಳಿಗೆ ಇತಿಹಾಸದಲ್ಲಿ ವಿಶಿಷ್ಠವಾದ ಹೆಸರು ದಿವಂಗತ ಬಸವರಾಜು ಅವರು. ಕನ್ನಡ ಚಳವಳಿಗಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಅಪರೂಪದ ಜೀವ. ಕನ್ನಡ ಪಕ್ಷದ ಮೂಲಕ ನಾಡಿನಲ್ಲಿ ಕನ್ನಡದ ಸರ್ಕಾರವೊಂದು ಅಸ್ತಿತ್ವಕ್ಕೆ ಬರಬೇಕೆಂದು ಕನಸು ಕಟ್ಟಿದ್ದವರು ಬಸವರಾಜು.
ವಿಶೇಷವೆಂದರೆ, ಬಸವರಾಜು ಹಣವಂತರೇನು ಆಗಿರಲಿಲ್ಲ. ಸಿವಿಲ್ ಕೋರ್ಟಿನಲ್ಲಿ ನಾಲ್ಕನೇ ದರ್ಜೆ ನೌಕರರಾಗಿದ್ದ ಬಸವರಾಜು ಅವರಿಗೆ ಕನ್ನಡ ಚಳವಳಿಯ ಪ್ರಚಂಡ ಉತ್ಸಾಹವಿತ್ತು. ತನಗೆ ಅನಿಸಿದ್ದನ್ನು ನೇರವಾಗಿ ಯಾರ ಮುಂದಾದರೂ ಮುಲಾಜಿಲ್ಲದೇ ಹೇಳುವ ಎದೆಗಾರಿಕೆ ಇತ್ತು. ಹೀಗಾಗಿ ಬಸವರಾಜು ಅವರಿಗೆ ಎಂಟೆದೆ ಇರಬೇಕು ಎನ್ನುತ್ತಿದ್ದವರೂ ಉಂಟು.
ಯಾವುದೇ ಸಮಾರಂಭದಲ್ಲಿ ಎಷ್ಟೇ ದೊಡ್ಡ ಗಣ್ಯವ್ಯಕ್ತಿಯಾಗಲಿ ಜನವಿರೋಧಿ ಹೇಳಿಕೆಯನ್ನು ನೀಡಿದರೆ ಬಸವರಾಜು ಸಿಡಿಮಿಡಿಗೊಳ್ಳುತ್ತಿದ್ದರು. ಅದನ್ನು ಕೇಳಿಯೂ ಸುಮ್ಮನಿರುವ ಜಾಯಮಾನವೂ ಅವರದಾಗಿರಲಿಲ್ಲ. ನಿಂತ ಜಾಗದಲ್ಲೇ ಪ್ರತಿಭಟಿಸುವ ಧೀಮಂತಿಕೆ ಅವರಿಗಿತ್ತು. ಬಸವರಾಜು ಅವರ ವಾದಸರಣಿ ಇಡೀ ಸಭೆಯಲ್ಲಿ ಗುಡುಗು ಮಿಂಚುಗಳನ್ನು ಸೃಷ್ಟಿಸುತ್ತಿತ್ತು. ನಿಜವಾದ ಸತ್ಯನಿಷ್ಠುರತೆಗೆ ಬಸವರಾಜು ಅತ್ಯುತ್ತಮ ಮಾದರಿಯಾಗಿದ್ದರು.
ಕನ್ನಡಿಗರೇ ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣ ಆಗಿರುವ ಬೆಂಗಳೂರಿನ ದಂಡುಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಚಳವಳಿಯ ಕೂಗನ್ನು ಮೊಳಗಿಸಿದವರು ಬಸವರಾಜು.
ಹಲಸೂರು, ಜೋಗುಪಾಳ್ಯ, ಬಯ್ಯಪ್ಪನಹಳ್ಳಿ, ಶಿವನಶೆಟ್ಟಿ ಗಾರ್ಡನ್, ಕಾಕ್ಸ್‌ಟೌನ್, ಶಿವಾಜಿನಗರ ಮುಂತಾದ ಕನ್ನಡೇತರರೇ ಹೆಚ್ಚಿರುವ ಭಾಗಗಳಲ್ಲಿ ಕನ್ನಡ ಜಾಗೃತಿ ಸಭೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದ ಬಸವರಾಜು ಎಂದಿಗೂ, ಯಾತಕ್ಕೂ ಅಂಜದ ಧೀರರು.
ಬಯ್ಯಪ್ಪನಹಳ್ಳಿಯಲ್ಲಿ ಕನ್ನಡ ಪಕ್ಷದ ಶಾಖೆಯನ್ನು ಖ್ಯಾತ ಸಾಹಿತಿ ತಾ.ರಾ.ಸುಬ್ಬರಾಯರಿಂದ ಉದ್ಘಾಟನೆ ಮಾಡಿಸಿದ ಬಸವರಾಜು ಈ ಭಾಗದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದರು. ಆಗ ಬಯ್ಯಪ್ಪನಹಳ್ಳಿ ಶಾಖೆಯ ಅಧ್ಯಕ್ಷರಾಗಿದ್ದವರು ಮು.ಜಯದೇವ್. ನಂತರ ಎಪ್ಪತ್ತರ ದಶಕದಲ್ಲಿ ಶಿವಾಜಿನಗರದ ರಸೆಲ್ ಮಾರ್ಕೆಟ್‌ನಲ್ಲಿ ನಡೆಸಿದ ಕನ್ನಡ ಜಾಗೃತಿ ಸಭೆ ಬಹಳ ಮಹತ್ವಪೂರ್ಣವಾಗಿತ್ತು.
ಖ್ಯಾತ ಪತ್ರಕರ್ತ ಪಿ.ಲಂಕೇಶ್, ಸಾಹಿತಿ ಪೂರ್ಣಚಂದ್ರ ತೇಜಸ್ವಿ, ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಶಾಸಕ ಕೆ.ಎಚ್.ರಂಗನಾಥ್ ಮುಂತಾದವರನ್ನು ಕರೆಯಿಸಿ ಈ ಸಭೆಯನ್ನು ಏರ್ಪಾಡು ಮಾಡಲಾಗಿತ್ತು. ಈ ಭಾಗದಲ್ಲಿ ನಡೆದ ಮೊದಲ ಕನ್ನಡ ಜಾಗೃತಿ ಸಭೆ ಇದಾಗಿತ್ತು.
ನಾನು ನೋಡಿದ ಹಾಗೆ ಬಸವರಾಜು ಅವರ ಬಳಿ ಒಂದು ಹಳೆಯ ಸೈಕಲ್ ಇತ್ತು. ಕಾರ್ಯಕ್ರಮಗಳನ್ನು ಸಂಘಟಿಸಲು ಅವರು ಬಳಸುತ್ತಿದ್ದುದು ಇದೇ ಸೈಕಲ್ ಅನ್ನು. ತಮ್ಮ ಸೈಕಲ್ ಏರಿ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಕನ್ನಡ ಸಂಘಟನೆಗಳ ಕಾರ್ಯಕರ್ತರನ್ನು ತಮ್ಮ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದರು. ಹೀಗೆ ಅವರು ಶ್ರೀರಾಮಪುರಕ್ಕೆ ಬಂದು ನಮ್ಮ ಬಳಗದ ಗೆಳೆಯರನ್ನು ಮಾತನಾಡಿಸುತ್ತಿದ್ದರು. ನನ್ನೊಂದಿಗೆ ಅವರು ಆತ್ಮೀಯವಾಗಿದ್ದರು. ಅದೇ ರೀತಿ ಕನ್ನಡದ ಕ್ರಾಂತಿಕಾರಿ ಹೋರಾಟಗಾರ ದಿವಂಗತ ರೆಹಮಾನ್ ಖಾನ್ ಕೂಡ ಪರಮಾತ್ಮರು. ಹಲವು ಚಳವಳಿಗಳ ಸಂದರ್ಭದಲ್ಲಿ ನಾವು ಮೂವರು ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೆವು.
ಅರವತ್ತರ ದಶಕದ ಅಂತ್ಯದ ದಿನಗಳು. ಆಗ ಬೆಂಗಳೂರಿನಲ್ಲಿ ತಮಿಳು ಮೂಲಭೂತವಾದಿಗಳ ಆರ್ಭಟ ಎಲ್ಲೆ ಮೀರಿತ್ತು. ಹಲಸೂರು ಪಲ್ಲಕ್ಕಿ ಉತ್ಸವದಲ್ಲಿ ಒಂದು ಕಡೆ ಎಂ.ಜಿ.ರಾಮಚಂದ್ರನ್ ಮತ್ತೊಂದು ಕಡೆ ಶಿವಾಜಿಗಣೇಶನ್ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಗುತ್ತಿತ್ತು.
ತಮಿಳುವಾದ್ಯಗೋಷ್ಠಿಗಳೇ ಅಲ್ಲಿ ಮೊಳಗುತ್ತಿದ್ದವು. ಹಲಸೂರಿನಲ್ಲಿ ಡಿ.ಎಂ.ಕೆ. ಪಕ್ಷದ ಧ್ವಜಗಳು ಹಾರಾಡುತ್ತಿದ್ದವು. ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಇದರಿಂದ ನೊಂದಿದ್ದ ಬಸವರಾಜು ಹೋರಾಟವೊಂದನ್ನು ರೂಪಿಸಿದ್ದರು. ಈ ಕುರಿತು ಬಸವರಾಜು ನೇತೃತ್ವದಲ್ಲಿ ರಾಚಯ್ಯ, ದಿ.ರುದ್ರಪ್ಪ, ಮ.ನಾರಾಯಣ, ಬಿ.ಎಚ್.ಶಂಕರನಾರಾಯಣ (ಐ.ಟಿ.ಐ), ಮಂಚಯ್ಯ (ಬಿ.ಇ.ಎಲ್) ಮೊದಲಾದವರು ಸೇರಿ ಸಭೆ ನಡೆಸಿದೆವು. ನಂತರ, ಹಲಸೂರಿನಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವಕ್ಕೆ ನುಗ್ಗಿ ತಮಿಳು ವಾದ್ಯಗೋಷ್ಠಿ ನಿಲ್ಲಿಸುವಂತೆ ಪ್ರತಿಭಟಿಸಿದೆವು. ಪೊಲೀಸರು ನಮ್ಮನ್ನು ಬಂಧಿಸಿದರು. ಈ ಪ್ರಕರಣದ ನಂತರ ಈ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳು ಆರಂಭವಾದವು. ತಮಿಳು ಮೂಲಭೂತವಾದಿಗಳು ಹಿನ್ನೆಲೆಗೆ ಸರಿದರು.
ದಂಡು ಪ್ರದೇಶದ ಶಿವನಶೆಟ್ಟಿ ಗಾರ್ಡನ್‌ನಲ್ಲಿ ಬಸವರಾಜು ನೇತೃತ್ವದಲ್ಲಿ ಸಂಘಟಿತಗೊಂಡ ಕನ್ನಡ ಪಕ್ಷದ ಜಾಗೃತಿ ಸಭೆ ಐತಿಹಾಸಿಕವಾಗಿತ್ತು. ಆಗ ಕನ್ನಡ ಪಕ್ಷದ ಅಧ್ಯಕ್ಷರಾದ ತ.ರಾ.ಸು. ಅವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಕಾ.ಮು.ಸಂಪಂಗಿರಾಮಯ್ಯ, ದಿ.ಮು.ಗೋವಿಂದರಾಜು ಹಾಗೂ ಬಸವರಾಜು ರೂಪಿಸಿದ ಸಭೆ ಅದು. ನಾವು ಕನ್ನಡ ಚಳವಳಿಗಾರರು ಇದ್ದದ್ದೇ ಇಪ್ಪತ್ತೈದು ಮಂದಿ. ಬಸವರಾಜು ಎಂದಿನಂತೆ ಕ್ರಾಂತಿಕಾರಿ ಭಾಷಣ ಮಾಡಿದರು. ಅದು ಆ ಭಾಗದ ಜನರನ್ನು ತಲುಪಿತ್ತು. ಸಭೆಯ ಸಂದರ್ಭದಲ್ಲಿ ಭಾಷಾಂಧ ತಮಿಳರು ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿದ್ದರಿಂದ ಪೊಲೀಸರು ಎಲ್ಲ ನಾಯಕರನ್ನು ಬಂಧಿಸಿ ಹಲಸೂರಿನ ಕೆರೆಯ ಬಳಿ ಬಿಟ್ಟು ಹೋದರು.
ಬಸವರಾಜು ಒಳ್ಳೆಯ ಭಾಷಣಕಾರರು. ಬಸವಣ್ಣನವರ ವಿಚಾರಗಳಿಂದ ಪ್ರೇರಿತರಾಗಿದ್ದರು. ಕುವೆಂಪುರವರನ್ನು ಆದರ್ಶವನ್ನಾಗಿ ಸ್ವೀಕರಿಸಿದ್ದರು.
ಶಾಂತವೆರಿ ಗೋಪಾಲಗೌಡರು ಆ ಕಾಲದಲ್ಲಿ ಪ್ರತಿಪಾದಿಸುತ್ತಿದ್ದ ಸಮಾಜವಾದದಿಂದ ಪ್ರೇರಿತರಾಗಿದ್ದರು.
ಗೋಪಾಲಕೃಷ್ಣ ಅಡಿಗರು ಬರೆದ ‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’ ಎಂಬ ಗೀತೆ ಬಸವರಾಜು ಅವರಿಗೆ ಅಚ್ಚುಮೆಚ್ಚಾಗಿತ್ತು. ಆದರೆ, ಅಡಿಗರು ಜನಸಂಘದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದಾಗ ನೊಂದುಕೊಂಡಿದ್ದರು. ಮಾತ್ರವಲ್ಲ, ಕವಿತೆಯೊಂದನ್ನು ಬರೆದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು.
ಸಾರಾಯಿ ಅಂಗಡಿಗಳ ವಿರುದ್ಧ ಬಸವರಾಜು ಪ್ರತಿಭಟನೆ ನಡೆಸುತ್ತಿದ್ದರು. ಸಾರಾಯಿ ಮಾರಾಟ ಮತ್ತು ಅದರ ವಿವಿಧ ಪರಿಣಾಮಗಳಿಂದ ಜನಸಾಮಾನ್ಯರು ನೋವು ಅನುಭವಿಸುತ್ತಿರುವುದನ್ನು ಅವರು ಸಹಿಸುತ್ತಿರಲಿಲ್ಲ. ಸಾರಾಯಿ ಅಂಗಡಿಗಳಲ್ಲಿ ಸತ್ತ ಕೊಳೆತ ಮಾಂಸವನ್ನು ಮಾರಲಾಗುತ್ತಿದೆ. ಇದರಿಂದ ದೀನದಲಿತರು, ಕೂಲಿಕಾರ್ಮಿಕರು, ಬಡವರು ಕಾಯಿಲೆಗೆ ಬೀಳುತ್ತಾರೆ ಎಂದು ಅವರು ಸಮಸ್ಯೆಯ ಬೇರೆ ಬೇರೆ ಮುಖಗಳನ್ನು ಪರಿಚಯಿಸಿದ್ದರು. ಕೊಳಚೆ ಪ್ರದೇಶದಲ್ಲೇ ಏಕೆ ಸಾರಾಯಿ ಅಂಗಡಿಗಳನ್ನು ತೆರೆಯುತ್ತೀರಿ? ಶ್ರೀಮಂತರು ವಾಸಿಸುವ ಸದಾಶಿವನಗರ, ಜಯನಗರ, ಬಸವನಗುಡಿ ಮುಂತಾದ ಪ್ರದೇಶಗಳಲ್ಲಿ ಅಂಗಡಿ ತೆರೆಯಿರೆಂದು ಸರ್ಕಾರಕ್ಕೆ ಆಗ್ರಹಿಸುವ ಮೂಲಕ ತಮ್ಮ ಬಡವರ ಪರ ಕಾಳಜಿಯನ್ನು ಮೆರೆದಿದ್ದರು.
ಹೋಟೆಲ್‌ಗಳಲ್ಲಿ ಗಲ್ಲಪಟ್ಟಿಯ ಬಳಿಯೇ ರಾಘವೇಂದ್ರಸ್ವಾಮಿಗಳ ಭಾವಚಿತ್ರದ ಮುಂದೆ ಬೆಳ್ಳಿಯ ದೀಪಕ್ಕೆ ತುಪ್ಪ ಹಾಕಿ ಬೆಳಗಿಸಲಾಗುತ್ತಿತ್ತು. ಇದನ್ನು ಬಸವರಾಜು ವಿರೋಧಿಸಿದ್ದರು. ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ ಹುಡುಗರಿಗೆ ಕೈ ಕಾಲುಗಳು ಸೆಲೆತು ಸವೆದುಹೋಗಿದ್ದರೂ ಒಂದು ಮುಲಾಮು (ಆಯಿಂಟ್‌ಮೆಂಟ್) ಕೊಡಿಸದ ಮಾಲೀಕರು ತುಪ್ಪದ ದೀಪ ಹಚ್ಚುವುದೇಕೆ ಎನ್ನುವುದು ಅವರ ಪ್ರಶ್ನೆಯಾಗಿತ್ತು.
ಕನ್ನಡ ಚಳವಳಿಯಲ್ಲಿ ವೈಚಾರಿಕತೆಯನ್ನು ಪ್ರತಿಪಾದಿಸಿದ್ದವರು ಬಸವರಾಜು ಅವರು. ಕನ್ನಡ ಕಾರ್ಯಕರ್ತರು ವಿಚಾರವಂತರಾಗಬೇಕು, ಸಮಾಜಮುಖಿಗಳಾಗಬೇಕು ಎಂಬುದು ಅವರ ಬಯಕೆಯಾಗಿತ್ತು.
ಕನ್ನಡ ಪಕ್ಷವೆಂಬ ಕೋಟೆಯನ್ನು ಕಟ್ಟಿ ಕನ್ನಡವೆಂಬ ಗರ್ಭಗುಡಿಯಲ್ಲಿ ವಿಚಾರವೆಂಬ ಜ್ಯೋತಿಯನ್ನು ಬೆಳಗಿಸಬೇಕು ಎಂದು ಅವರು ಆಗಾಗ ಹೇಳುತ್ತಿದ್ದರು.
ಲಟಕ್‌ಪಟಕ್ ಎನ್ನುವ ಹಳೆಯ ಸೈಕಲ್, ಮಾಸಿದ ಪ್ಯಾಂಟು-ಜುಬ್ಬ, ಕುರುಚಲು ಗಡ್ಡ, ಎಣ್ಣೆ ಕಾಣದ ಕ್ರಾಪು, ಬೆಂಕಿ ಕಾರುವ ಕಣ್ಣುಗಳು... ಇದು ಬಸವರಾಜು ಚಹರೆ. ಅವರಿಗೆ ಸಾಹಿತಿಗಳ ಒಡನಾಟವಿತ್ತು. ಪಿ.ಲಂಕೇಶ್, ಸಿದ್ಧಲಿಂಗಯ್ಯ, ತೇಜಸ್ವಿ, ಡಿ.ಆರ್.ನಾಗರಾಜ್, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ ಮುಂತಾದವರ ಜೊತೆ ಆಗಾಗ ಸೇರುತ್ತಿದ್ದರು. ವೈಚಾರಿಕ ವಿಷಯಗಳನ್ನು ಮನನ ಮಾಡಿಕೊಳ್ಳುತ್ತಿದ್ದರು. ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ ಅವರಿಗೆ ಬಲುಪ್ರಿಯವಾಗಿತ್ತು. ಯುವಕ-ಯುವತಿಯರು ಈ ಕೃತಿಯನ್ನು ಓದಬೇಕು ಎಂದು ಪ್ರೇರೇಪಿಸುತ್ತಿದ್ದರು.
ಕ್ರಾಂತಿಕಾರಿಗಳು ಸಾಯುತ್ತಾರೆ, ಆದರೆ ಅವರು ನಡೆಸಿದ ಪ್ರತಿಪಾದಿಸಿದ ಕ್ರಾಂತಿ ಸಾಯುವುದಿಲ್ಲ. ಬಸವರಾಜು ಅವರ ಭಾವಚಿತ್ರ ಯಾವ ಪತ್ರಿಕೆಯ ಮುಖಪುಟದಲ್ಲೂ ಎಂದೂ ಕಾಣಿಸಿಕೊಳ್ಳಲಿಲ್ಲ. ಆದರೆ, ಕನ್ನಡ ಹೋರಾಟಗಾರರ ಎದೆಗಳಲ್ಲಿ ಅವರು ಸದಾ ಇರುತ್ತಾರೆ. ಅಸಮಾನತೆ, ಅನ್ಯಾಯಗಳ ವಿರುದ್ಧ ಬುಸುಗುಟ್ಟುವ ಜ್ವಾಲಾಮುಖಿಯಂತಿದ್ದ ಬಸವರಾಜು ಸಿಡಿಯುತ್ತಿದ್ದ ರಭಸಕ್ಕೆ ಅಂದಿನ ಸಾರ್ವಜನಿಕ ಜೀವನದ ವ್ಯಕ್ತಿಗಳು ಕಟ್ಟಿಕೊಂಡಿದ್ದ ಬಣ್ಣದ ತಡಿಕೆಗಳು ಚೂರಾಗುತ್ತಿದ್ದವು.
ಕಡೆಗೊಂದು ದಿನ ಅವರ ಮೃತದೇಹ ರೈಲುಕಂಬಿಗಳ ಮೇಲೆ ದೊರೆಯಿತು. ಅಲ್ಲಿಗೆ ಒಂದು ಕ್ರಾಂತಿಯ ಯುಗ ಮುಕ್ತಾಯಗೊಂಡಿತು.
‘ಮುಕ್ತ’ ಎಂಬ ಪತ್ರಿಕೆಯ ೧೯೭೫ರ ನವೆಂಬರ್ ಸಂಚಿಕೆಯಲ್ಲಿ ಕವಿ ಸಿದ್ಧಲಿಂಗಯ್ಯ ಅವರು ಬಸವರಾಜು ಅವರನ್ನು ನೆನಪಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಿದರು. ‘ಕನ್ನಡಪ್ರಭ’ ಸಂಪಾದಕ ಖಾದ್ರಿ ಶಾಮಣ್ಣನವರು ‘ಪ್ರಾಮಾಣಿಕ ಕನ್ನಡ ಚಳವಳಿಗಾರ’ ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಬರೆದು ಬಸವರಾಜು ಕುಟುಂಬಕ್ಕೆ ನಿಧಿಯೊಂದನ್ನು ಸಂಗ್ರಹಿಸಿಕೊಟ್ಟರು.
ಬಸವರಾಜು ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಹೊತ್ತಿಸಿದ ಕ್ರಾಂತಿಯ ಕಿಡಿ ಹಾಗೆಯೇ ಇರುತ್ತದೆ.

ವೆ,ಶ್ರೀನಿವಾಸ್