Friday, July 22, 2011

ಅತ್ಯುತ್ತಮ ಸಂಘಟನಾಕಾರ ಕೆ.ಟಿ.ರವೀಂದ್ರಕುಮಾರ್



‘ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ!
ಕನ್ನಡಕ್ಕಾಗಿ ಕಿರುಬೆರಳೆತ್ತಿಯಾದರೂ ಸಾಕು...
ಇಂದು ಅದೇ ಗೋವರ್ಧನಗಿರಿಯಾಗುತ್ತದೆ...’
-ಹೀಗೆ ಜಗದ ಕವಿ, ಯುಗದ ಕವಿ ಕುವೆಂಪು ಅವರ ಕನ್ನಡ ಕರೆಗೆ ಓಗೊಟ್ಟು, ಕನ್ನಡವೇ ಜಾತಿ, ಕನ್ನಡವೇ ಧರ್ಮ ಮತ್ತು ಕನ್ನಡವೇ ದೇವರು ಅಂತ ನಂಬಿ, ಕನ್ನಡವನ್ನೇ ಉಸಿರಾಗಿಸಿಕೊಂಡವರು ಅಸಂಖ್ಯಾತ. ಈ ಪೈಕಿ ಕನ್ನಡಪರ ಹೋರಾಟಗಾರ ಕೆ.ಟಿ.ರವೀಂದ್ರಕುಮಾರ್ ಕೂಡ ಒಬ್ಬರು.
ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಹೋರಾಟಗಳಲ್ಲಿ ಇಂದಿಗೂ ಸಕ್ರಿಯರಾಗಿರುವ ರವೀಂದ್ರಕುಮಾರ್ ಅವರದ್ದು ತನು ಕನ್ನಡ, ಮನ್ನ ಕನ್ನಡ ಎಂಬಂತೆ ಕನ್ನಡಕ್ಕಾಗೇ ತುಡಿಯುವ ಜೀವ. ಇದೀಗ ಕರವೇ ಹಾಸನ ಜಿಲ್ಲಾ ಅಧ್ಯಕ್ಷರಾಗಿ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಅರಕಲಗೂಡು ತಾಲೂಕಿನ ಕತ್ತಿಮಲ್ಲೇನಹಳ್ಳಿ ಗ್ರಾಮದಲ್ಲಿ ೧೯೭೯ರ ಆ.೨೭ ರಂದು ಜನಿಸಿದ ರವೀಂದ್ರಕುಮಾರ್ ತಂದೆ ತಿಮ್ಮೇಗೌಡ ತಾಯಿ ವೆಂಕಟಲಕ್ಷ್ಮಮ್ಮ. ಪಿಯುಸಿ ನಂತರ ಹಾಸನದಲ್ಲಿ ಐಟಿಐ ವಿದ್ಯಾಭ್ಯಾಸ ಪೂರೈಸಿದ ರವೀಂದ್ರಕುಮಾರ್ ವಿದ್ಯಾರ್ಥಿದೆಸೆಯಿಂದಲೇ ಹಲವು ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು.
ಕುಗ್ಗದಿರು...ಬಗ್ಗದಿರು...
ಹೋರಾಟಗಳ ವಿಷಯದಲ್ಲಿ ರವೀಂದ್ರಕುಮಾರ್ ಅವರದ್ದು ಎಂದಿಗೂ ಕುಗ್ಗದಿರು, ಬಗ್ಗದಿರು ಎಂಬಂಥ ದೃಢ ಮನಸ್ಸು. ಯಾವುದೇ ಕಾರಣಕ್ಕೂ, ಯಾವ ಸಂದರ್ಭದಲ್ಲೂ ಅವರು ಹೋರಾಟದಿಂದ ವಿಮುಖರಾದವರಲ್ಲ. ಸಾಕಷ್ಟು ಸಂಕಷ್ಟ, ಸಂಘರ್ಷ ಎದುರಾದರೂ ಪರಿಸ್ಥಿತಿಗೆ ರಾಜಿಯಾಗದ ಸ್ಥೈರ‍್ಯ ಅವರದ್ದು.
ಕಾವೇರಿ ನದಿ ನೀರಿನ ವಿವಾದ ಸಂಬಂಧ ಭುಗಿಲೆದ್ದ ಕಾವೇರಿ ಚಳವಳಿ ಹಲವು ಹೋರಾಟಗಾರರನ್ನು ಸೃಷ್ಟಿಸಿದೆ. ರವೀಂದ್ರಕುಮಾರ್ ಕೂಡ ಕಾವೇರಿ ಚಳವಳಿಯಿಂದಲೇ ರೂಪುಗೊಂಡ ಹೋರಾಟಗಾರ. ಕಾವೇರಿ ಚಳವಳಿ ಸಂದರ್ಭದಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರ ಸವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಟಿ.ಎ.ನಾರಾಯಣಗೌಡರಿಂದ ಪ್ರಭಾವಕ್ಕೊಳಗಾದ ರವೀಂದ್ರಕುಮಾರ್ ಬೆಂಗಳೂರಿನ ಬಸ್ ಹತ್ತಿಯೇ ಬಿಟ್ಟರು.
೨೦೦೦ ರಂದು ಚಿಕ್ಕಪೇಟೆಯ ಕರವೇ ಕಚೇರಿಯಲ್ಲಿ ನಾರಾಯಣಗೌಡ ಅವರನ್ನು ಭೇಟಿ ಮಾಡಿದ ರವೀಂದ್ರ ಕುಮಾರ್ ಗೌಡರ ಕನ್ನಡ ಚಳವಳಿ, ಸ್ವಾಭಿಮಾನದ ಹೋರಾಟಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. ರವೀಂದ್ರ ಅವರ ಕನ್ನಡಪ್ರೇಮಕ್ಕೆ ಮಾರುಹೋದ ನಾರಾಯಣಗೌಡರು ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ, ಹೋರಾಟದ ವಿವಿಧ ಮಜಲುಗಳನ್ನು ಹೇಳಿಕೊಟ್ಟರು.
ರವೀಂದ್ರಕುಮಾರ್ ಕರವೇಯ ಮುಖಂಡರಾಗಿ ಇದುವರೆಗೆ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ.
ಟಿ.ಎ.ನಾರಾಯಣ ಗೌಡರು ಕಾವೇರಿ ಹೋರಾಟದಲ್ಲಿ ಬಂಧನಕ್ಕೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಅವರ ಜೊತೆಯಲ್ಲೇ ಉಳಿದರು ರವೀಂದ್ರನಾಥ್. ನಂತರದ ದಿನಗಳಲ್ಲಿ ನಾರಾಯಣ ಗೌಡರ ಅಣತಿಯಂತೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕರವೇಯ ಶಾಖೆ ತೆರೆದು ತಾಲೂಕು ಅಧ್ಯಕ್ಷರಾದರು. ನಂತರ ಜಿಲ್ಲಾಧ್ಯಕ್ಷರಾಗಿ ಭಡ್ತಿ ಪಡೆದರು. ಆಸಂದರ್ಭದಲ್ಲೇ ರವೀಂದ್ರಕುಮಾರ್ ಜಿಲ್ಲೆಯಾದ್ಯಂತ ಕನ್ನಡ ಪರವಾದ ಹೋರಾಟಗಳನ್ನು ಸಂಘಟಿಸಿದರು, ಸಾವಿರಾರು ಕಾರ‍್ಯಕರ್ತರನ್ನು ಸಂಘಟಿಸಿ, ಸಂಘಟನೆಗೆ ಬಲ ತಂದರು. ಯುವ ಮನಸ್ಸುಗಳಲ್ಲಿ ಕನ್ನಡಪರ ವ್ಯಾಮೋಹ ತುಂಬುವ ಮೂಲಕ ಅವರನ್ನು ಹುರಿದುಂಬಿಸಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ವಿವಿಧ ಸಂಧರ್ಭಗಳಲ್ಲಿ ಕರೆ ನೀಡಿದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಹಾಸನ ಜಿಲ್ಲೆಯಲ್ಲಿ ಕರವೇ ಯನ್ನು ಅತ್ಯಂತ ಬಲಾಢ್ಯ ಸಂಘಟನೆಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ರವೀಂದ್ರಕುಮಾರ್. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಒತ್ತಾಯಿಸಿ ದೆಹಲಿಯಲ್ಲಿ ಗೌಡರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ರೈಲ್ವೇಯಲ್ಲಿ ಕನ್ನಡಿಗರ ಕಡೆಗಣನೆ ವಿರುದ್ಧ ಹೋರಾಟ, ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂದರ್ಭ ನಾರಾಯಣಗೌಡರ ಬಂಧನ ಖಂಡಿಸಿ ನಡೆಸಿದ ತೀವ್ರ ಸ್ವರೂಪದ ಚಳವಳಿ, ಐಟಿಬಿಟಿಯಲ್ಲಿ ಕನ್ನಡಿಗರ ಕಡೆಗಣನೆ, ಆನ್ ಲೈನ್ ಮತ್ತು ಒಂದಂಕಿ, ಲಾಟರಿ ನಿಷೇಧ, ಆಂಗ್ಲ ನಾಮಫಲಕಗಳ ವಿರುದ್ಧದ ಹೋರಾಟ, ಬಿಡಿಎ ಚಿತ್ರಾವತಿ ಅಣೆಕಟ್ಟೆ ವಿರುದ್ಧದ ಹೋರಾಟ... ಹೀಗೆ ಹಲವು ಹೋರಾಟಗಳಲ್ಲಿ ರವಿಂದ್ರಕುಮಾರ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡವಿಲ್ಲದ ಬದುಕಿಲ್ಲ...
‘ಕನ್ನಡದ ಸೇವೆಯಲಿ ನುರುಗಿ ಹಣ್ಣಾದವರೇ, ಹಿರಿಯ ಕನ್ನಡ ಧೀರರೆ, ಕನ್ನಡದ ಮೇಲ್ಮೆಯಾ ಕನಸ ನನಸಾಗಿಸುವ ತರುಣ ಕನ್ನಡ ವೀರರೇ...’ ಎಂಬ ಕವಿ ವಾಣಿಯಂತೆ ಹಾಸನದಂತ ಹಾಸನದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಿರುವ ರವೀಂದ್ರನಾಥ್, ಅದರೊಟ್ಟಿಗೆ ಅಲ್ಲಿನ ತರುಣ ಪೀಳೆಗೆಯನ್ನು ಕನ್ನಡದ ಕೆಲಸಕ್ಕೆ ಸಂಘಟಿಸುತ್ತಾ, ಕರವೇ ಎಂಬ ವಿಶಾಲವಾದ ಆಲದಮರದ
ಬೇರುಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

No comments:

Post a Comment