Saturday, August 13, 2011

ವೀರವನಿತೆ ಝಾನ್ಸಿರಾಣಿ ಲಕ್ಷ್ಮೀಬಾಯಿ


ಭಾರತ ಇತಿಹಾಸದಲ್ಲಿ ವೀರ ವನಿತೆಯರು ಬೆರಳೆಣಿಕೆಯಷ್ಟಿದ್ದರೂ ತಮ್ಮದೇ ಅನನ್ಯತೆಯ ರಾಷ್ಟ್ರಪ್ರೇಮ, ಸಾಹಸದಲ್ಲಿ ಕೆಚ್ಚೆದೆಯಿಂದ ಬಲಿದಾನಗೈದು ದೇಶವೇ ಹೆಮ್ಮೆ ಪಡುವಂತಹ ದಿಟ್ಟತನ ಮೆರೆದಿದ್ದಾರೆ. ಅಂಥವರ ಸಾಲಿನಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅನುಪಮ ಧೀರ ಮಹಿಳಾಮಣಿ.
ಮಹಾರಾಷ್ಟ್ರದ ಎರಡನೆಯ ಪೇಶ್ವೆ ಬಾಜಿರಾಯ್ ಕೊನೆಯವನಾಗಿ ಆ ನಾಡನ್ನು ಆಳಿದವನು. ೧೮೧೮ರಲ್ಲಿ ಇಂಗ್ಲೀಷರು ಈತನನ್ನು ಪೇಶ್ವೆಯ ಪದವಿಯಿಂದ ಕಿತ್ತು ಹಾಕಿ ವರ್ಷಕ್ಕೆ ಎಂಟು ಪಕ್ಷ ರೂಪಾಯಿ ಉಂಬಳಿ ನೀಡಿ, ಗ್ರಾಮವೊಂದನ್ನು ಜಹಗೀರಾಗಿ ಇತ್ತರು.
ಈತನ ತಮ್ಮ ಚಿಮಾಜಿ ಅಪ್ಪಾ ಕಾಶಿಗೆ ಹೋಗುವಾಗ ಚಿಮಾಜಿ ಧೋರೋಪಂತ ಎಂಬ ಸಹಾಯಕನನ್ನು ಸಂಸಾರ ಸಹಿತ ಜತೆಗೆ ಕರೆದೊಯ್ದರು. ಈ ಧೋರೋಪಂತನ ಪತ್ನಿ ಭಾಗೀರಥಿಬಾಯಿ ೧೮೩೫ರ ನವೆಂಬರ್ ೧೯ರಂದು. ಒಂದು ಸುಂದರ ಹೆಣ್ಣುಮಗುವಿಗೆ ಜನ್ಮವಿತ್ತಳು. ಮಗುವಿಗೆ ಮನೂಬಾಯಿ ಎಂದು ಹೆಸರಿಟ್ಟರು. ಮಗುವಿಗೆ ನಾಲ್ಕು ವರ್ಷ ತುಂಬುವ ವೇಳೆಗೆ ಬಾಗೀರಥಿಬಾಯಿ ಮರಣ ಹೊಂದಿದಳು. ಚಿಮಾಜಿ ಅಪ್ಪಾ ಕೂಡ ಸ್ವರ್ಗಸ್ಥನಾದ. ಧೋರೋಪಂತನ ಅಸಹಾಯಕ ಸ್ಥಿತಿಯಲ್ಲಿ ಬಾಜೀರಾಯ ಆತನನ್ನು ಹಿಂದಿರುಗಿ ಬಿಡೋರಿಗೆ ಕರೆಸಿಕೊಂಡ.
ಬಾಜಿರಾಯನಿಗೆ ಮಕ್ಕಳಿರದ ಕಾರಣ ನಾನಾ ದೊಂಡೊಪಂತ್ ಎಂಬ ಬಾಲಕನನ್ನು ದತ್ತು ಪಡೆದ. ನಾನು ತಮ್ಮಂದಿರೊಡನೆ ಬೆಳೆಯುತ್ತಿರಲು ಮನೂಬಾಯಿ ಸಹ ಅವರೊಡನೆ ಬೆಳೆದಳು. ಶಿಕ್ಷಣದ ಜೊತೆಗೆ ಯುದ್ಧ, ವಿದ್ಯೆ, ಕುಸ್ತಿ, ಕತ್ತಿವರಸೆ, ಕುದುರೆ ಸವಾರಿ, ಬಂದೂಕಿನ ಗುರಿ ಸಾಧಿಸುವುದನ್ನು ಎಲ್ಲರೂ ಒಟ್ಟಿಗೆ ಕಲಿತರು.
ಮನೂಭಾಯಿ ಛಲಗಾತಿ, ಬುದ್ಧಿವಂತೆ, ಕುದುರೆ ಸವಾರಿ ಅವಳ ಪ್ರೀತಿಯ ಹವ್ಯಾಸ. ಗುರುಗಳು ಯುದ್ಧ ಕಲೆಯ ಜೊತೆಗೆ ಎರಡೂ ಕೈಗಳಲ್ಲಿ ಕತ್ತಿ ಹಿಡಿದು ಹೋರಾಡುವುದನ್ನು ಕಲಿಸಿದರು. ವೀರವನಿತೆಯಾಗಿ ರೂಪುಗೊಂಡ ದಿಟ್ಟ ಹುಡುಗಿ. ಚೆಲುವೆ, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಪರಿಣತಿ ಪಡೆದಳು. ವೀರಶೂರ ಶಿವಾಜಿ, ರಾಣಾ ಪ್ರತಾಪ ಸಿಂಹ, ಅರ್ಜುನ, ಭೀಮ, ಮುಂತಾದ ಪೌರಾಣಿಕ ವೀರರ ಕಥೆಗಳನ್ನು ಓದಿ ಸ್ಪೂರ್ತಿ ಪಡೆದಳು.
ಹನ್ನೆರಡರ ಬಾಲೆಗೆ ವಿವಾಹ ಮಾಡುವ ಚಿಂತೆ ಧೋರೋಪಂತನಿಗೆ ಹೆಚ್ಚಿತ್ತು. ಬ್ರಾಹ್ಮಣ ಹೆಣ್ಣು ಮಕ್ಕಳಿಗೆ ಹನ್ನೆರಡು ತುಂಬುವ ವೇಳೆಗೆ ವಿವಾಹ ಮಾಡದಿದ್ದರೆ ಬಹಿಷ್ಕಾರ ಹಾಕುತ್ತಿದ್ದ ವ್ಯವಸ್ಥೆಯಿತ್ತು. ಇದೇ ವೇಳೆಗೆ ಝಾನ್ಸಿಯಿಂದ ದೀಕ್ಷಿತಶಾಸ್ತ್ರ ಎಂಬ ಬ್ರಾಹ್ಮಣ ಜ್ಯೋತಿಷ್ಯ ಬಿಡೋರಿಗೆ ಬಂದರು. ಮನುವಿನ ಜಾತಕ ನೋಡಿ ಈಕೆಗೆ ಮಹಾರಾಣಿಯಾಗುವ ಯೋಗವಿದೆ ಎಂದು ಭವಿಷ್ಯ ನುಡಿದರು. ಅವರು ಝಾನ್ಸಿಯ ರಾಜ ಗಂಗಾಧರರಾವ್‌ಗೆ ಮೊದಲ ಪತ್ನಿ ತೀರಿಕೊಂಡ ಕಾರಣ ಮರುಮದುವೆಗೆ ಕನ್ಯೆ ನೋಡಲು ಬಂದಿದ್ದ ವಿಷಯವನ್ನು ಏಕಾಂತದಲ್ಲಿ ಬಾಜಿರಾಯ ಹಾಗೂ ಧೋರೋಪಂತರಿಗೆ ತಿಳಿಸಿ, ಮನುವಿನ ಹೆಸರು ಪ್ರಸ್ತಾಪಿಸಲು ಅನುಮತಿ ಪಡೆದು ಹಿಂದಿರುಗಿ ಝಾನ್ಸಿಗೆ ಬಂದು ವಿಷಯ ತಿಳಿಸಿದರು. ಪರಿಣಾಮ ಹದಿಮೂರರ ಬಾಲೆ ಝಾನ್ಸಿಯ ನಲವತ್ತೇಳು ವರ್ಷದ ಗಂಗಾಧರರಾವ್‌ನ ಪತ್ನಿಯೇ ’ಲಕ್ಷ್ಮೀಬಾಯಿ’ ಎಂಬ ಹೆಸರು ಪಡೆದಳು.
ಝಾನ್ಸಿ ಸಂಸ್ಥಾನವು ಬುಂದೇಲ್‌ಖಂಡ ಎಂಬ ಹೆಸರಿನ ಪ್ರದೇಶಗಳಿಂದ ಕೂಡಿ ಝಾನ್ಸಿ ರಾಜಧಾನಿಯಾಗಿತ್ತು. ಝಾನ್ಸಿ ಸಿಂಹಾಸನಕ್ಕಾಗಿ ವಿವಾದ ಉಂಟಾದಾಗ ಇಂಗ್ಲೀಷರು ನವಾಬ ಆಲಿಗೆ ದೊಡ್ಡ ಜಹಗೀರು ನೀಡಿ ಸಮಾಧಾನ ಪಡಿಸಿ ಗಂಗಾಧರರಾಯನಿಗೆ ಝಾನ್ಸಿ ರಾಜ್ಯ ದೊರಕಿಸಿ ಕೊಟ್ಟ ಫಲವಾಗಿ ಮೂರು ಲಕ್ಷ ರೂಪಾಯಿ, ಒಂದಷ್ಟು ಜಮೀನು ಪಡೆದು ಝಾನ್ಸಿಯಲ್ಲಿ ತಮ್ಮ ಸೈನ್ಯ ಇರಿಸಿದ್ದರು. ಲಕ್ಷ್ಮೀಬಾಯಿ ರಾಣಿಯಾದ ಮೇಲೆ ಕೋಟೆಯೊಳಗೆ ಸ್ತ್ರೀಸೈನ್ಯ ಕಟ್ಟಿದಳು. ಆನೆ, ಕುದುರೆಗಳ ಸಂಗ್ರಹ ಮಾಡಿ ಸೇನಾಬಲ ಹೆಚ್ಚಿಸಿಕೊಂಡು ಸಶಕ್ತರಾಗಿ ರಾಜ್ಯ ನಡೆಸಿದರು. ಲಕ್ಷ್ಮೀಯ ಹದಿನಾರನೇ ವಯಸ್ಸಿಗೆ ಪುತ್ರನನ್ನು ಪಡೆದರೂ ಅಕಾಲ ಮರಣಕ್ಕಾಗಿ ಪುತ್ರಶೋಕ ಅನುಭವಿಸಬೇಕಾಯಿತು. ಗಂಗಾಧರರಾವ್ ಶೋಕಗ್ರಸ್ತನಾಗಿ ಅನಾರೋಗ್ಯ ಹೊಂದಲು ಬಂಧುಗಳ ಪುತ್ರ ಆನಂದರಾವ್ ಎಂಬ ಬಾಲಕನನ್ನು ದತ್ತು ಪಡೆಯಲು ಇಚ್ಚಿಸಿ ೧೮೫೩ರಲ್ಲಿ ದತ್ತು ಸ್ವೀಕಾರ ಮಾಡಿ ’ದಾಮೋದರರಾವ್ ಎಂದು ಹೆಸರಿಟ್ಟರು. ಈಸ್ಟ್ ಇಂಡಿಯಾ ಕಂಪೆನಿಗೆ ಪತ್ರ ಬರೆದು ದತ್ತು ವಿಷಯ ತಿಳಿಸಿ ತನ್ನ ಸಾವಿನ ನಂತರ ಲಕ್ಷ್ಮೀಬಾಯಿ ರಾಜ್ಯಕ್ಕೆ ಪಾಲಕಳಾಗಿ, ದಾಮೋದರರಾಯನು ದೊಡ್ಡವನಾದಾಗ ರಾಜನಾಗಲು ವ್ಯವಸ್ಥೆ ಮಾಡಬೇಕೆಂದು ಪ್ರಾರ್ಥಿಸಿದ್ದನು. ಉತ್ತರ ಬರುವ ವೇಳೆಗೆ ಇಹಲೋಕ ತ್ಯಜಿಸಿದ್ದನು.
ಆ ವೇಳೆಗಾಗಲೇ ಈಸ್ಟ್ ಇಂಡಿಯಾ ಕಂಪೆನಿ ಭಾರತದ ಹಲವಾರು ರಾಜ್ಯಗಳನ್ನು ಮೋಸದಿಂದ ತನ್ನ ವಶಪಡಿಸಿಕೊಂಡು ರಾಜ್ಯ ವಿಸ್ತರಿಸಿ ಮತ ಪ್ರಚಾರ ಮಾಡತೊಡಗಿತ್ತು. ಇಂಗ್ಲೀಷರ ವರ್ತನೆಯಿಂದ ಅಲ್ಲಿನ ಜನರು ರೋಸಿಹೋಗಿದ್ದರು. ಮಹಾರಾಷ್ಟ್ರದ ನಾನಾ ಢೋಂಢೋಪಂತ, ಆತನ ಸ್ನೇಹಿತ ತಾಂತ್ಯಾಟೋಪ್ ಸಹ ಇಂಗ್ಲೀಷರ ವಿರುದ್ಧ ಬಂಡೇಳಲು ಹವಣಿಸಿದ್ದರು. ಬ್ರಿಟಿಷರ ಪ್ರಧಾನ ಅಧಿಕಾರಿ ಡಾಲ್‌ಹೌಸಿ ಕೈಕೆಳಗಿನ ಅಧಿಕಾರಿಯ ಕುಟುಬುದ್ಧಿಯಿಂದ ಮನವಿ ಪತ್ರವನ್ನು ತಿರಸ್ಕರಿಸಿ ರಾಣಿ ಲಕ್ಷ್ಮೀಬಾಯಿ ಕೋಟೆ ಹೊರಗೆ ಅರಮನೆಯಲ್ಲಿರಬೇಕು. ಇಂಗ್ಲೀಷರು ಐದು ಸಾವಿರ ರಾಜಧನ ಕೊಡುವುದನ್ನು ಪಡೆದು ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಬೇಕು ಎಂದು ಆದೇಶ ಉತ್ತರ ಕಳುಹಿಸಿ ತಡಮಾಡದೆ ವಶಪಡಿಸಿಕೊಂಡು ಇಂಗ್ಲೀಷರ ಅಧೀನದಲ್ಲಿದೆ ಎಂದು ಘೋಷಿಸುತ್ತಾನೆ.
ಸ್ವಾತಂತ್ರ್ಯ ಕಳೆದುಕೊಂಡ ರಾಣಿ ಕೋಟೆಯ ಹೊರಗೆ ಉಳಿಯಬೇಕಾಯಿತು. ಇಂಗ್ಲೀಷರ ಅಧಿಕಾರದಲ್ಲಿ ಕೋರ್ಟುಗಳು, ಜಮೀನುಗಳನ್ನು ವಶಪಡಿಸಿಕೊಳ್ಳುವುದು. ಗೋಹತ್ಯೆ ಆರಂಭವಾಗಿ ಜನರು ಉಸಿರು ಕಟ್ಟುವ ವಾತಾವರಣದ ಹಿಂಸೆಗೆ ಒಳಗಾದರು. ರಾಣಿಯ ಮೊರೆ ಹೋದರು. ರಾಣಿ ಅವಸರ ಮಾಡದೆ ಸೈನ್ಯಬಲ ಹೆಚ್ಚಿಸಿಕೊಂಡು ಎದುರುಬೀಳೋಣ. ಅಲ್ಲಿಯವರೆಗೆ ತಾಳ್ಮೆಯಿಂದಿರಿ ಎಂದು ಸಮಾಧಾನ ಪಡಿಸಿದಳು. ರಾಣಿಯ ಪರವಾಗಿ ಹೋರಾಡಲು ರಜಪೂತ ವೀರರು, ಬೆಂಬಲ ಸೂಚಿಸಿದರು. ರಾಣಿ ಸ್ತ್ರೀ ಸೈನ್ಯ ಜಮಾಯಿಸಿ ತರಬೇತಿ ನೀಡತೊಡಗಿದರು. ಹೆಂಗಸರಿಗೆ ಕತ್ತಿವರಸೆ, ಕುದುರೆಸವಾರಿ, ಬಂದೂಕು ಪ್ರಯೋಗ ಕಲಿಸಿದರು. ತನ್ನ ಪೋಷಾಕನ್ನು ವೀರಯೋಧರಂತೆ ತರಿಸಿ ತಲೆಗೆ ಉಕ್ಕಾನ ಶಿರಸ್ತ್ರಾಣ, ಕುಪ್ಪಸದ ಮೇಲೆ ಬಿಗಿ ಕವಚ, ಪೈಜಾಮ ಧರಿಸಿ, ಸೊಂಟಕ್ಕೆ ಬಿಗಿಯಾದ ಪಟ್ಟಿ ಎರಡೂ ಪಕ್ಕಗಳಲ್ಲಿ ಪಿಸ್ತೂಲುಗಳನ್ನು ಸಿಕ್ಕಿಸಿ, ಸೊಂಟದ ಎಡ-ಬಲಗಳಲ್ಲಿ ಎರಡು ಕತ್ತಿಗಳನ್ನು ನೇತು ಹಾಕಿಕೊಂಡು ಕುದುರೆ ಏರಿ ವೇಗವಾಗಿ ಓಡಿಸುತ್ತಾ ಎರಡೂ ಕೈಗಳಲ್ಲಿ ಭಲ್ಲೆ, ಕತ್ತಿಗಳನ್ನು ಹಿಡಿದು ವಿವಿಧ ರೀತಿ ಖಡ್ಗಚಾಲನೆ ಮಾಡುವ ಪರಿಣತಿ ಸಾಧಿಸಿದ್ದಳು. ಇಂಗ್ಲೀಷರ ಬಳಿ ಗುಪ್ತಚಾರರನ್ನು ಅಲ್ಲಿಗೆ ಕಳುಹಿಸಿ ಕೋಟೆಯೊಳಗಿನ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದರು.
ರಾಣಿಗೆ ಕಾಶಿಗೆ ಹೋಗಲು ಬ್ರಿಟಿಷರು ಅನುಮತಿ ನೀಡಲಿಲ್ಲ. ದತ್ತು ಪುತ್ರ ದಾಮೋದರನಿಗೆ ಏಳನೇ ವರ್ಷಕ್ಕೆ ಉಪನಯನ ಮಾಡಲು ಆರು ಲಕ್ಷ ರೂ.ಗಳಲ್ಲಿ ಒಂದು ಲಕ್ಷ ರೂ.ಗಳನ್ನು ಖರ್ಚಿಗಾಗಿ ಕೊಡಲು ಡಾಲ್ ಹೌಸ್‌ಗೆ ರಾಣಿ ಮನವಿ ಕಳುಹಿಸಿದಾಗ, ಝಾನ್ಸಿಯ ನಾಲ್ವರು ಪ್ರತಿಷ್ಠಿತರು ಜಾಮೀನು ನೀಡಬೇಕೆಂದು ಷರತ್ತು ಇಟ್ಟಿದ್ದರು. ರಾಣಿ ಸಿಟ್ಟಾದರೂ ವಿಧಿಯಿಲ್ಲದೆ ಅದರಂತೆ ಹಣ ಪಡೆಯಬೇಕಾಯಿತು. ಉಪನಯನದ ನೆಪದಲ್ಲಿ ಪ್ರಮುಖ ನಾಯಕರೊಂದಿಗೆ ಸಮಾಲೋಚಿಸಿದರು. ಸಂತಾನವಿಲ್ಲದ ಸಂಸ್ಥಾನಗಳನ್ನು ಆಡಳಿತಕ್ಕೆ ವಿಲೀನಗೊಳಿಸಿಕೊಳ್ಳುವ ಬ್ರಿಟಿಷರ ಬಗ್ಗೆ ಹಲವು ಸಂಸ್ಥಾನಗಳು ಅಸಮಾಧಾನ, ಬಂದೂಕುಗಳಿಗೆ ಹಸುವಿನ, ಹಂದಿಯ ಮಾಂಸದ ಕೊಬ್ಬನ್ನು ಸವರಿ ಅದನ್ನು ಬಾಯಿಂದ ಕಚ್ಚಿ ತೆಗೆದು ಉಪಯೋಗಿಸುವ ಬಲವಂತದ ರೀತಿ ಹಿಂದೂ ಸಿಪಾಯಿಗಳಿಗೆ ಮತಭ್ರಷ್ಠರನ್ನಾಗಿಸುವ ತಂತ್ರವೆಂದು ಹಿಂದು, ಮುಸ್ಲಿಂ ಸಿಪಾಯಿಗಳು ರೊಚ್ಚಿಗೆದ್ದರು.
೧೮೫೭ರಲ್ಲಿ ಇಂಗ್ಲೀಷರ ವಿರುದ್ಧ ಪ್ರತಿಭಟನೆ ನಡೆಸಿ ಸೈನ್ಯದ ತುಕಡಿಗಳಲ್ಲಿ ತಾವಾಗಿಯೇ ದಂಗೆಗೆ ಜನರೊಡನೆ ಸೇರಿ ಬ್ರಿಟಿಷರನ್ನು ದೇಶದಿಂದ ಹೊಡೆದಟ್ಟಲು, ಸ್ವರಾಜ್ಯ ಸ್ಥಾಪಿಸಲು ಸಮರ ಸಾರಿದರು. ೧೮೫೭ ಜೂನ್ ೪ರಂದು ಝಾನ್ಸಿಯಲ್ಲಿ ಸಿಪಾಯಿ ದಂಗೆ ಪ್ರತಿಭಟನೆ ಆರಂಭವಾಯಿತು. ಕೋಟೆಯ ಖಜಾನೆ ಸಿಪಾಯಿಗಳ ವಶದಲ್ಲಿತ್ತು. ಇಂಗ್ಲೀಷ್ ಅಧಿಕಾರಿಗಳು ಕೊಲ್ಲಲ್ಪಟ್ಟರು. ಇಂಗ್ಲೀಷರು ತಲೆಮರೆಸಿಕೊಳ್ಳಲು ವಿಧಿಯಿಲ್ಲದೆ ಸಿಕ್ಕಿದೆಡೆ ಓಡಿದರೂ ಬಿಡದೆ ಗುಂಡು ಮಳೆಗೆರೆದರು. ರಾಣಿಯ ನೆರವು ಕೋರಲು ಬ್ರಿಟಿಷರು ಯತ್ನಿಸಿದರೂ ಆಕ್ರಮಣಕಾರರು ಅವಕಾಶ ನೀಡಲಿಲ್ಲ. ಕಡೆಗೆ ಬ್ರಿಟಿಷರ ಹೆಂಗಸರು, ಮಕ್ಕಳಿಗೆ ರಾಣಿ ಮಾನವೀಯ ದೃಷ್ಟಿಯಿಂದ ಆಶ್ರಯ ನೀಡಿದ ಉದಾರತೆ ಹಿರಿದು.
ಝಾನ್ಸಿಯಲ್ಲಿದ್ದ ಎಲ್ಲಾ ಇಂಗ್ಲೀಷ್ ಅಧಿಕಾರಿಗಳು ಕೊಲ್ಲಲ್ಪಟ್ಟರು. ಬ್ರಿಟಿಷರು ರಾಣಿ ಸಹಕರಿಸಲಿಲ್ಲ ಎಂದು ಆಕೆಯಿಂದ ಒತ್ತಾಯಪಡಿಸಿ ಮೂರು ಲಕ್ಷ ರೂಪಾಯಿಗಳನ್ನು ಪಡೆಯಲು ಬೆಲೆಬಾಳುವ ಒಡವೆಗಳನ್ನಿತ್ತಳು. ಝಾನ್ಸಿಯಲ್ಲಿ ಆಂಗ್ಲರ ಆಡಳಿತ ಕೊನೆಗೊಂಡಿತು. ಲಕ್ಷ್ಮೀಬಾಯಿ ತಾನೇ ಅದರ ಪಾಲಕಳೆಂದು ಘೋಷಿಸಿ, ಬ್ರಿಟಿಷರಿಗೆ ತಿಳಿಸಿ ರಾಜ್ಯಭಾರ ಕೈಗೆತ್ತಿಕೊಂಡಳು. ಧೈರ್ಯ ಸಾಹಸದಿಂದ ರಾಜ್ಯ ರಕ್ಷಿಸುತ್ತಾ, ಇಂಗ್ಲೀಷರಿಗೆ ಆ ಬಗ್ಗೆ ತಿಳಿಸಿ ಸ್ನೇಹದಿಂದಲೇ ಇರತೊಡಗಿದಳು. ಸೈನ್ಯಬಲ ಹೆಚ್ಚಿಸಿ ತರಬೇತಿ ವ್ಯವಸ್ಥೆ ಮಾಡಿದಳು.
ಝಾನ್ಸಿ ಕೋಟೆ ಕಬಳಿಸಲು ಶತ್ರುಗಳು ದಾಳಿಗೆ ಸಿದ್ಧರಾದರು. ೧೮೫೭ರ ಜೂನ್ ೧೩ರಂದು ಕಠೋರ. ಕೋಟೆಗೆ ಸದಾಶಿವರಾಯನೆಂಬ ಮರಾಠ ಸಂಸ್ಥಾನಿಕ ಮುತ್ತಿಗೆ ಹಾಕಿ ವಶಪಡಿಸಿಕೊಂಡು ತಾನೇ ಝಾನ್ಸಿಗೆ ಒಡೆಯನೆಂದು ಪ್ರಚಾರ ಮಾಡಿದಾಗ ರಾಣಿ ಸಿಟ್ಟಾದಳು. ಬ್ರಿಟಿಷರ ನೆರವು ನಿರೀಕ್ಷೆ ಸುಳ್ಳಾಯಿತು. ಕಡೆಗೆ ತನ್ನ ಸೈನ್ಯದಿಂದಲೇ ಆಕ್ರಮಣ ನಡೆಸಿ ಸದಾಶಿವರಾಯನನ್ನು ಸದೆಬಡಿದು ಸೆರೆಯಲ್ಲಿಟ್ಟಳು. ಆ ನಂತರ ಓಚಾರ ಸಂಸ್ಥಾನದ ದಂಡನಾಯಕ ಸಥೇಬಾನ್ ಸಮರ ಸಾರಲು ರಾಣಿಯ ಸೈನ್ಯ ಕ್ಷೀಣಿಸಿತ್ತು. ಸೈನಿಕರೂ ಸಲಹೆಗಾರರು ಖಾನನ ಸೈನ್ಯ ಸಂಖ್ಯೆಗೆ ಹೆದರಿ ರಾಣಿಗೆ ಸಲಹೆ ನೀಡಿದರೂ, ಸಥೇಖಾನ್ ಸಂದೇಶದಲ್ಲಿ ’ಜೀವನಕ್ಕೆ ಹಣ ಕೊಡಲು’ ಸೂಚಿಸಿದಾಗ ಹೆಡೆ ತುಳಿದ ಸರ್ಪಿಣಿಯಂತಾದಳು.
ಲಕ್ಷ್ಮೀಬಾಯಿ ಆಪ್ತರನ್ನೂ, ಸೈನಿಕರನ್ನು ಕರೆಸಿ ಧೈರ್ಯ ತುಂಬಿದಳು. ತಾಯ್ನಾಡಿಗಾಗಿ ಕಡೇವರೆಗೂ ಹೋರಾಡಲು ಶಪಥ ತೊಟ್ಟರು. ಹೆಣ್ಣು ಹುಲಿಯಂತೆ ಎರಗಿದ ಲಕ್ಷ್ಮೀಬಾಯಿಯ ಶೌರ್ಯದಿಂದ ಸಥೇಖಾನನ ಸೇನೆ ತತ್ತರಿಸಿ ಹೋಯಿತು. ಖಾನ್ ಪಲಾಯನಗೈದ. ಸೈನ್ಯಬಲ ಎಲ್ಲಾ ದಿಕ್ಕಿನಲ್ಲೂ ಧೈರ್ಯದಿಂದ ಹೋರಾಡಿ ಜಯಗಳಿಸಿದ ರಾಣಿಯ ಸಾಹಸ, ಅವಳಿಗೆ ಪ್ರಜೆಗಳ ಬಗೆಗಿದ್ದ ಗೌರವ ಇಮ್ಮಡಿಸಿ ಉತ್ಸಾಹಗೊಂಡರು. ಸೇನೆಯ ಬಲ ಹೆಚ್ಚತೊಡಗಿತು. ರಾಣಿಯ ದಕ್ಷತೆ, ಎಲ್ಲರ ಮೆಚ್ಚುಗೆಗಳಿಸಿತು.
ಉತ್ತ ಭಾರತದ ರಾಜ್ಯಗಳಲ್ಲಿ ಬ್ರಿಟಿಷರು ಜಗಳವಾಡಿ ಯುದ್ಧಮಾಡಿ ರಾಜ್ಯಗಳನ್ನು ಕಬಳಿಸಿದ್ದರು. ಸರ್ ಹ್ಯೂರೋನ್ ಎಂಬ ಅಧಿಕಾರಿ ಝಾನ್ಸಿಯತ್ತ ಕಣ್ಣು ಹಾಕಿ, ರಾಣಿಗೆ ಬಂದು ಪತ್ರ ಕಳುಹಿಸಿ ’ಯಾವ ಶಸ್ತ್ರಗಳು ಇಲ್ಲದೆ ಬಂದು ಕಾಣಲು’ ತಿಳಿಸಿದ. ರಾಣಿ ಪತ್ರ ಓದಿ ಸಿಡಿದೆದ್ದಳು. ಲಕ್ಷ್ಮೀಬಾಯಿ ರಾಜ್ಯದ ಆತ್ಮೀಯರು ನಂಬಿಕಸ್ತ ಅಧಿಕಾರಿಗಳನ್ನು ಸೇರಿಸಿ ಧೃಢವಾಗಿ "ಏನೇ ಆದರೂ ಝಾನ್ಸಿ ನಮ್ಮದೆ’ ಎಂದು ಬ್ರಿಟಿಷರ ನಾಟಕಕ್ಕೆ ತೆರೆ ಎಳೆಯಲು ಪಣ ತೊಡಬೇಕೆಂದು ಹುರಿದುಂಬಿಸಿದಳು. ’ಪ್ರಾಣವಿರುವವರೆಗೂ ಹೋರಾಡಿ ನಾಡಿನ ಋಣ ತೀರಿಸಲು ಹೇಳಿದ ವೀರರಾಣಿಗೆ ಸೈನಿಕರು, ಜನರು ಜೈಕಾರ ಹಾಕಿದರು. ರಾಣಿ ಕೋಟೆಯನ್ನು ಭದ್ರಪಡಿಸಿದಳು. ಇಡೀ ಸೈನ್ಯಕ್ಕೆ ತಾನೇ ನಾಯಕಳಾಗಿ ಸಾವಿರಾರು ಸ್ತ್ರೀ ಸೈನಿಕರನ್ನು ಸೇರಿಸಿಕೊಂಡರು.
ಇಂಗ್ಲೀಷರು ೧೮೫೮ರ ಮಾರ್ಚ್ ೨೩ರಂದು ಝಾನ್ಸಿಗೆ ಮುತ್ತಿಗೆ ಹಾಕಿದರು. ಇಂಗ್ಲೀಷರು ಫಿರಂಗಿಗಳನ್ನು ಸಿದ್ಧಪಡಿಸಿ ಗುಂಡಿನ ಮಳೆಗೆರೆದಾಗ ಪ್ರತಿಯಾಗಿ ಝಾನ್ಸಿ ಕೋಟೆಯಿಂದ ಗುಂಡಿನ ಸುರಿಮಳೆ ಆಗಿ ಬ್ರಿಟಿಷರ ಸೈನ್ಯ ತತ್ತರಿಸಿತು. ಆದರೆ ಬೆಟ್ಟಗಳ ಸಂಧಿಯಲ್ಲಿ ಶಿಥಿಲವಾಗಿ ಬುರುಜುಗಳು ಮುರಿದು ಬಿದ್ದವು. ಝಾನ್ಸಿ ಸೈನಿಕ ಇಂಗ್ಲೀಷರ ಮತಿಗೆ ಮರುಳಾಗಿ ಒಳಹೋಗುವ ದಾರಿ ತಿಳಿಸಿಬಿಟ್ಟ. ಇದರಿಂದ ಅಸಂಖ್ಯಾತ ಫಿರಂಗಿಗಳನ್ನು ಹಾರಿಸಿದಾಗ ಸೈನಿಕರು ಗಾಯಗೊಂಡರು. ಮಾರ್ಚ್ ೩೧ರವರೆಗೆ ನಡೆದ ಹೋರಾಟದಲ್ಲಿ ರಾಣಿಯ ಬಹುಪಾಲು ಪಣಕ್ರಮಗಳು ಹಾನಿಗೀಡಾದರು. ಲಕ್ಷ್ಮೀಬಾಯಿ ಧೈರ್ಯಗೆಡದೆ ಎರಡೂ ಕೈಗಳಲ್ಲಿ ಕತ್ತಿ ಝಳಪಿಸುತ್ತ ಶತ್ರುಗಳ ರುಂಡಗಳನ್ನು ಚೆಂಡಾಡಿದಳು. ಹದಿನೆಂಟು ದಿನಗಳ ಯುದ್ಧದಲ್ಲಿ ಝಾನ್ಸಿ ನಗರದ ಸೈನ್ಯಬಲ ಕುಗ್ಗಿತು. ತಾಂತ್ಯಾಟೋಪಿಯ ನೆರವು ದೊರೆತು ಬ್ರಿಟಿಷರು ಅವರನ್ನು ಸೆರೆ ಹಿಡಿದಾಗ ರಾಣಿ ಧೈರ್ಯಗೆಡದೆ ಸೈನಿಕರಿಗೆ ಹುರುಪು ತುಂಬಿದಳು. ಹ್ಯೂರೋಸನ ರಣತಂತ್ರ ಫಲಿಸಿತ್ತು. ಕೋಟೆ ಗೋಡೆಗಳು ಕುಸರು ಕೋಟೆಯ ಒಂದು ಭಾಗವನ್ನು ವಶಪಡಿಸಿಕೊಂಡರು. ವಿಷಯ ತಿಳಿದ ರಾಣಿ ಸಿಂಹಿಣಿಯಂತೆ ವೈರಿಗಳನ್ನು ಕೊಚ್ಚಿಹಾಕುತ್ತಾ ಯುದ್ಧ ಮುನ್ನಡೆಸಿದಳು. ಆದರೆ ಬ್ರಿಟಿಷರ ಸೈನ್ಯ ವ್ಯವಸ್ಥೆ ಕಂಡು ರಾಣಿ ಯುದ್ಧ ಮಾಡುವುದು ಪ್ರಮಾದಕರವೆಂದು ಹಿಂದಿರುಗಿದಾಗ ಬ್ರಿಟಿಷ್ ಸೈನ್ಯ ಉತ್ಸಾಹದಿಂದ ಒಳನುಗ್ಗಿ ಬೆಂಕಿ ಹಚ್ಚಿ ಆನಂದ ಪಟ್ಟಿತು. ಅರಮನೆ ವೈರಿಗಳ ವಶವಾಯಿತು. ರಾಣಿಗೆ ಪ್ರಜೆಗಳ ಅಸಹಾಯಕತೆ ಕಂಡು ಕರುಳು ಕಿತ್ತು ಬಂದಂತಾಯಿತು. ತನ್ನ ಅಧಿಕಾರಿಗಳಿಗೆ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳಲು ಹೇಳಿದಳು. ಆಕೆಯನ್ನು ಬಿಟ್ಟು ಹೋಗಲು ಅವರು ಹಿಂಜರಿದರು. ಪೇಶ್ವೆ ಸೇನೆಯೊಂದಿಗೆ ಸೇರಿಕೊಳ್ಳಲು ಒಪ್ಪಿದರು. ರಾಣಿ ಪುರುಷ ವೇಷಧರಿಸಿ, ಬಾಲಕ ದಾಮೋದರನನ್ನು ಬೆನ್ನಿಗೆ ಕಟ್ಟಿಕೊಂಡು ಕತ್ತಲ ರಾತ್ರಿಯಲ್ಲಿ ಕುದುರೆಯೇರಿ ಪಾರಾದಳು. ಝಾನ್ಸಿ ಕೋಟೆ ಬ್ರಿಟಿಷರ ವಶವಾಯಿತು.
ರಾಣಿ ಖಾಂತೇರಾ ಗ್ರಾಮ ತಲುಪಿದಾಗ ಥ್ಯಾಕರೆ ಎದುರಾದ. ಅವಳ ಬಳಿ ಆಯುಧವಿರಲಿಲ್ಲ. ಆದರೂ ಆತ ತಕ್ಷಣ ಕತ್ತಿಯನ್ನು ಎಳೆದು ಬೀಸಲು ಅಲ್ಲಿನ ವಾಯುವೇಗದಿಂದ ಪಾರಾದಳು. ಪೇಶ್ವೆಯು ಸ್ಥಳಕ್ಕೆ ಬಂದು ರಾಣಿಗೆ ಸಮಾಧಾನ ಪಡಿಸಿದನು. ಆದರೆ ಝಾನ್ಸಿಗೆ ಮುತ್ತಿಗೆ ಹಾಕಲು ನಿಶ್ಚಯವಾದಾಗ ಸಹಕರಿಸಿದ. ಎಷ್ಟೇ ಹೋರಾಡಿದರೂ ಬ್ರಿಟಿಷರನ್ನು ಗೆಲ್ಲಲಾಗಲಿಲ್ಲ. ರಾಣಿ ಮಗನನ್ನು ಕಟ್ಟಿಕೊಂಡು ಯುದ್ಧರಂಗಕ್ಕೆ ಧುಮುಕಿದರು. ಅವಳ ಧೈರ್ಯ ಸಾಹಸದಿಂದ ತಾಂತ್ಯಾ, ಪೇಶ್ವೆ, ನವಾಬ, ಗ್ವಾಲಿಯರ್‌ನ ರಾಜರೊಡನೆ ಸೇರಿ ಹೋರಾಟದ ಸಿದ್ಧತೆ ನಡೆಸಿದಳು. ಗ್ವಾಲಿಯರ್‌ನ ರಾಜ ಇಂಗ್ಲೀಷರ ಪರವಾಗಿದ್ದು ಸಹಕರಿಸಲಿಲ್ಲ. ಯುದ್ಧ ಅನಿವಾರ್ಯವಾಗಿ ಲಕ್ಷ್ಮೀಬಾಯಿ ಹಾಗೂ ಅವಳ ಸಂಗಡಿಗರು ಹೋರಾಡಿ ಗ್ವಾಲಿಯರ್ ಕೋಟೆ ವಶಪಡಿಸಿಕೊಂಡರು. ಆದರೆ ಹ್ಯೂರೋಸ್ ಗ್ವಾಲಿಯರ್ ಕೋಟೆಗೆ ಮುತ್ತಿಗೆ ಹಾಕಲು ಸಿದ್ಧನಾದ ಬಗ್ಗೆ ತಿಳಿದು ಯುದ್ಧ ಸಿದ್ಧತೆ ನಡೆಸಿದಳು.
೧೮೫೮ರ ಜೂನ್ ತಿಂಗಳ ೧೮ರಂದು ವೀರಯೋಧನ ವೇಷ ಧರಿಸಿ ಉತ್ತಮ ಕುದುರೆ ಏರಿ ಆಪ್ತರೊಡನೆ ಹೊರಟಾಗ ’ದಾಮೋದರನನ್ನು ರಕ್ಷಿಸುವ ಹೋಣೆ ನಿಮ್ಮದು. ಅವನನ್ನು ನಿಮ್ಮ ಬೆನ್ನಿಗೆ ಕಟ್ಟಿಕೊಳ್ಳಿ. ಪ್ರತಿಯೊಬ್ಬರೂ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ, ವಿದೇಶಿಯರು ನನ್ನ ಶವವನ್ನು ಮುಟ್ಟಕೂಡದು." ಎಂದು ಹೇಳಿ ಯುದ್ಧರಂಗಕ್ಕೆ ಹೊರಟಳು. ಹ್ಯೂರೋಸನ ತುಕಡಿ ಫಿರಂಗಿಗಳ ಗುಂಡು ಭೋರ್ಗರೆಯಿತು. ರಾಣಿ ಅಡ್ಡಬಂದವರನ್ನು ಚೆಂಡಾಡುತ್ತಾ ಒಳನುಗ್ಗಿದಳು. ಇಂಗ್ಲೀಷರು ರಾಣಿಯ ಆಪ್ತ ರಕ್ಷಕರನ್ನು ಕೊಂದರು. ಸೈನಿಕನು ಗುರಿಯಿಟ್ಟ ಕತ್ತಿ ರಾಣಿಯ ಹೊಟ್ಟೆಗೆ ಚುಚ್ಚಿತು. ರಾಣಿ ಯುದ್ಧ ನಿಲ್ಲಿಸದೆ ಮನ್ನಡೆದರೂ ಅವಳ ತೊಡೆಗೆ ಬಿದ್ದ ಗುಂಡಿನಿಂದ ಕುದುರೆ ಬೆಚ್ಚಿ ನೆಗೆದಾಗ ರಾಣಿ ಜಾರಿ ಬಿದ್ದಳು. ವೈರಿಗಳು ದಾಳಿ ನಡೆಸಿದರು. ಆಗ ಅವಳ ಆಪ್ತರು ಅಲ್ಲಿಗೆ ಬಂದು ರಾಣಿಯನ್ನು ಒಯ್ದು ಮಲಗಿಸಿ ಗಂಗಾಜಲ ಕುಡಿಸಿದರು. ’ಹರ ಹರ ಮಹಾದೇವ’ ಎಂದು ನೀರು ಕುಡಿದು ಭಗವನ್ನಾಮ ಸ್ಮರಿಸುತ್ತಾ ಪ್ರಾಣ ತ್ಯಜಿಸಿದಳು. ಹ್ಯೂರೋಸ್ ಸಹ ಬಂದು ಅವಳಿಗೆ ಗೌರವ ಸೂಚಿಸಿ ಹೋದನು. ಅಂದು ೧೮೫೮ರ ಜೂನ್ ೧೮ರಂದು ಲಕ್ಷ್ಮೀಬಾಯಿಗೆ ೨೨ ವರ್ಷ ಏಳು ತಿಂಗಳು.
ಚಿಕ್ಕವಯಸ್ಸಿಗೆ ಅಸಾಧಾರಣ ಧೈರ್ಯದಿಂದ ಸಾರ್ವಜನಿಕ ಜೀವನಕ್ಕೆ ಕಾಲಿರಿಸಿದ ಲಕ್ಷ್ಮೀಬಾಯಿ ಹದಿಮೂರು ವರ್ಷದಲ್ಲಿ ೪೭ರ ಗಂಡನೊಡನೆ ಐದು ವರ್ಷ ಬಾಳ್ವೆ ನಡೆಸಿದಳು. ಹದಿಮೂರನೇ ವಯಸ್ಸಿನಿಂದ ಇಪ್ಪತ್ತೆರಡರ ಒಳಗೆ ಒಂಭತ್ತು ವರ್ಷ ನಿರಂತರ ಬಾಳ ಹೋರಾಟದಲ್ಲಿ ಹೆಂಡತಿಯಾಗಿ, ತಾಯಿಯಾಗಿ, ರಾಣಿಯಾಗಿ, ಸಾವಿರಾರು ಪ್ರಜೆಗಳ ತಾಯಿಯಾದಳು. ಪುರುಷ ಆಡಳಿತಗಾರರಿಗೆ ಮಾದರಿಯಾದಳು. ೧೮-೨೦ರ ವಯಸ್ಸಿನ ಹುಡುಗಿಯ ಪ್ರಬುದ್ಧತೆಯ ಯುದ್ಧ, ಆಡಳಿತ, ಸಣ್ಣ ರಾಜ್ಯದ ರಾಣಿಯಾಗಿ ರಾಷ್ಟ್ರಕ್ಕೆ ಗೌರವ ತರುವ ಸ್ವಾತಂತ್ರ್ಯ ಪ್ರೇಮ ಎಂದೆಂದಿಗೂ ಭಾರತೀಯರಿಗೆ ಸ್ಪೂರ್ತಿದಾಯಕ.
ಡಾ.ಕೆ.ಎಸ್.ರತ್ನಮ್ಮ
೨೮೮೪, ಕೋರ್ಟ್ ಹಿಂಭಾಗ
ಪಂಪಾಪತಿ ರಸ್ತೆ, ೨ನೇ ಕ್ರಾಸ್,
ಸರಸ್ವತಿಪುರಂ, ಮೈಸೂರು-೯
ದೂ: ೨೫೪೫೧೦೯-೦೮೨೧

No comments:

Post a Comment