Wednesday, August 11, 2010

ಮಹಾರಾಷ್ಟ್ರದ ರಣಹೇಡಿ




ನ.ನಾಗೇಶ್

ಇದೊಂದು ಬೆದರುಗೊಂಬೆ!
ಉದ್ದನೆಯದೊಂದು ನಾಮ, ಹೋತದ ಗಡ್ಡ, ಕಣ್ಣಿಗೆ ಬೂತು ಗಾಜು, ಕಾವಿ ನಿಲುವಂಗಿ, ಕೊರಳಲ್ಲಿ ಗೋಲಿ ಗಾತ್ರದ ರುದ್ರಾಕ್ಷಿ, ಬಾಯಲ್ಲಿ ಸದಾ ಹೊಗೆಯುಗುಳುವ ಚುಟ್ಟ...ಥೇಟು ಬೆದರುಗೊಂಬೆಯೇ. ಹಿಂದುತ್ವದ ಹೆಬ್ಬುಲಿ, ಮರಾಠಿಗರ ಕಣ್ಮಣಿ..ಅಂತೆಲ್ಲಾ ಮುಖವಾಡಗಳು. ಇಂತಹ ಬೆದರು ಗೊಂಬೆಗೆ ಹೆದರಲು ಕನ್ನಡದ ಕಲಿಗಳೇನು ಹಸುಳೆಗಳೇ?
ನಿಜ. ಈ ಬೆದರುಗೊಂಬೆಯ ಹೆಸರು ಬಾಳಾ ಠಾಕ್ರೆ. ಶಿವಸೇನೆ ಮುಖ್ಯಸ್ಥ.
ಬೆಳಗಾವಿ ವಿಚಾರದಲ್ಲಿ ಕನ್ನಡಿಗರ ಕೈ ಮೇಲಾಗಿರುವುದನ್ನು ಸಹಿಸದ ಠಾಕ್ರೆ ಅಕ್ಷರಶ; ಅಂಡು ಸುಟ್ಟ ಬೆಂಕಿನಂತಾಡುತ್ತಿದ್ದಾನೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಪ್ರತೀಕಾರವಾಗಿ ಮುಂಬಯಿಯಲ್ಲಿ ಕನ್ನಡಿಗರ ಮೇಲೆ ದಾಳಿ ನಡೆಸುವ ಬೆದರಿಕೆಯೊಡ್ಡಿದ್ದಾನೆ.
ಕರ್ನಾಟಕದಲ್ಲಿ ಮರಾಠಿ ಭಾಷಿಗರನ್ನು ಗುರಿ ಮಾಡಲಾಗುತ್ತಿದೆ. ಆದರೆ, ಮಹಾರಾಷ್ಟ್ರ ಮತ್ತು ಮುಂಬಯಿಗಳಲ್ಲಿ ಉಡುಪಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳ ಕನ್ನಡಿಗರು ನೆಲೆಸಿದ್ದಾರೆ ಎಂಬುದನ್ನು ಮರೆಯದಿರಲಿ. ನಾವು ಎಲ್ಲಾದರೂ ಅವರಂತೆ ಬೀದಿಗಿಳಿದಲ್ಲಿ, ತೀವ್ರ ಸಂಕಷ್ಟ ಎದುರಿಸಬೇಕಾದೀತು ಎಂದೂ ಠಾಕ್ರೆ ಬೊಬ್ಬಿರಿದಿದ್ದಾನೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ಸುಗಳು ಬರುತ್ತಿವೆ. ನಾನೆಲ್ಲಾದರೂ ತಾಳ್ಮೆಯನ್ನು ಕಳೆದುಕೊಂಡಲ್ಲಿ ಶಾಂತಿ ಪ್ರಿಯರಾಗಿರುವ ಮರಾಠಿ ಮಾನೂಗಳು ಸುಮ್ಮನಿರಲಾರರು ಅಂತೆಲ್ಲಾ ಕೀರಲುಕೊಂಡಿದ್ದಾನೆ. ಇಷ್ಟಕ್ಕೂ ಈ ಬೆದರುಗೊಂಬೆಯ ಕಿರುಚಾಟಕ್ಕೆ ಕಾರಣವಾದರೂ ಏನು ಎಂದರೆ ಅದೇ ‘ಬೆಳಗಾವಿ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಕ್ಕೆ ಅಫಿಡವಿಟ್ ಸಲ್ಲಿಸಿದೆ. ಈ ಮೂಲಕ ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸುವಂತೆಯೂ ಮನವಿ ಮಾಡಿದೆ. ಇದು ಈ ಬೆದರುಗೊಂಬೆ ಠಾಕ್ರೆಗೆ ನುಂಗಲಾರದ ತುಪ್ಪವಾಗಿದೆ.
೨೦೦೪ರಲ್ಲಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದ ಮಹಾರಾಷ್ಟ್ರ, ಕರ್ನಾಟಕ ಗಡಿ ಪ್ರದೇಶದಲ್ಲಿನ ಬೆಳಗಾವಿ, ಕಾರವಾರ, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿನ ೮೧೪ಕ್ಕೂ ಹೆಚ್ಚು ಗ್ರಾಮಗಳು ತನ್ನ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಬಹುತೇಕ ಜನರು ಮರಾಠಿ ಭಾಷಿಕರಾಗಿದ್ದಾರೆ. ಹಾಗಾಗಿ ರಾಜ್ಯದ ಮರು ವಿಂಗಡಣೆ ನಡೆಸಿ ಅವುಗಳನ್ನು ತನಗೆ ನೀಡಬೇಕೆಂದು ಕೇಳಿತ್ತು.
ಮಹಾರಾಷ್ಟ್ರ ಸರಕಾರದ ಪ್ರಕಾರ, ಬಾಂಬೆ ಮತ್ತು ಹೈದರಾಬಾದ್ ರಾಜ್ಯಗಳಿಗೆ ಸೇರಿದ್ದ ಮರಾಠಿ ಪ್ರಾಂತ್ಯಗಳ ಜನತೆಯ ಭಾರೀ ಪ್ರತಿಭಟನೆ ಮತ್ತು ಹರತಾಳದ ನಡುವೆಯೂ ಭಾರತದ ಕೇಂದ್ರ ಸರ್ಕಾರವು ಇವುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಿತ್ತು ಎಂದು ಅಲವತ್ತುಕೊಂಡಿದೆ.
೨೦೦೪ರ ಅರ್ಜಿ ಸರ್ವೋಚ್ಛ ನ್ಯಾಯಾಲಯದಲ್ಲಿರುವಂತೆ ಮಹಾರಾಷ್ಟ್ರ ಮತ್ತೆ ೨೦೦೯ರ ಫೆಬ್ರವರಿಯಲ್ಲಿ ಮತ್ತೊಂದು ಅರ್ಜಿಯನ್ನು ನೀಡಿತ್ತು. ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯಲ್ಲಿ ಕೈಗೊಂಡ ಅಸಾಂವಿಧಾನಿಕ ಕ್ರಮಗಳಿಂದಾಗಿ ಮಹಾರಾಷ್ಟ್ರಕ್ಕೆ ಸೇರಬೇಕಾಗಿದ್ದ ಹಲವು ಪ್ರದೇಶಗಳು ಕರ್ನಾಟಕಕ್ಕೆ ಸೇರಿದವು ಎಂದು ಅದು ವಾದಿಸಿತ್ತು.
ಆಗಿನ ಮೈಸೂರು ರಾಜ್ಯಕ್ಕೆ(ಕರ್ನಾಟಕ) ನಿರ್ದಿಷ್ಟ ಪ್ರದೇಶಗಳನ್ನು ವರ್ಗಾಯಿಸಿರುವುದು ನಿರಂಕುಶ ಪ್ರವೃತ್ತಿಯದ್ದು ಎಂದು ಮಹಾರಾಷ್ಟ್ರ ಹೇಳಿತ್ತು ಎಂದು ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕ ಡಾ.ಪ್ರವೀಣ್ ಕುಮಾರಿ ಸಿಂಗ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಅದು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು. ಅಲ್ಲದೆ ಇಂತಹ ದಾವೆಯನ್ನು ಹೂಡಿರುವುದಕ್ಕಾಗಿ ಮಹಾರಾಷ್ಟ್ರ ರಾಜ್ಯದ ಮೇಲೆ ದಂಡವನ್ನೂ ಹೇರಬೇಕು ಎಂದು ಕೇಂದ್ರ ಶಿಫಾರಸು ಮಾಡಿದೆ.
ಯಾವುದೇ ರಾಜ್ಯದ ಪ್ರದೇಶವನ್ನು ಸೇರ್ಪಡೆಗೊಳಿಸಲು ಭಾಷೆಯೂ ಒಂದು ಮಾನದಂಡ ಹೌದು. ಆದರೆ, ಅದೇ ಒಟ್ಟಾರೆ ಮಾನದಂಡವಲ್ಲ. ಕೇವಲ ಭಾಷೆಯನ್ನೇ ಮುಂದಿಟ್ಟುಕೊಂಡು ಆ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವಿಲ್ಲ. ೧೯೫೬ರ ರಾಜ್ಯ ಏಕೀಕರಣ ಕಾಯ್ದೆ ಮತ್ತು ೧೯೬೦ರ ಬಾಂಬೆ ಏಕೀಕರಣ ಕಾಯ್ದೆಗಳನ್ನು ಪರಿಗಣಿಸುವಾಗ ಸಂಸತ್ ಮತ್ತು ಕೇಂದ್ರ ಸರಕಾರ ಅಗತ್ಯ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿತ್ತು ಎಂದು ಕೇಂದ್ರ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಹಾಗಾಗಿ ಮೇಲೆ ಹೇಳಿದ ಪ್ರದೇಶಗಳ ಮೇಲಿನ ವ್ಯಾಪ್ತಿಯು ಕರ್ನಾಟಕದಲ್ಲೇ ಅಬಾಧಿತವಾಗಿ ಮುಂದುವರಿಯಬೇಕು. ಇಲ್ಲಿ ಮಹಾರಾಷ್ಟ್ರಕ್ಕೆ ಯಾವುದೇ ರೀತಿಯ ಅಧಿಕಾರವಿಲ್ಲ. ರಾಜ್ಯ ಮರು ವಿಂಗಡಣೆಯತ್ತ ಗಮನ ಹರಿಸುವ ಅಗತ್ಯವಿಲ್ಲ ಎಂದೂ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಬೆಳಗಾವಿ ಕುರಿತಾದ ಈ ಬೆಳವಣಿಗೆ ಬೆದರುಗೊಂಬೆ ಒಡಲಲ್ಲಿ ಬೆಂಕಿ ಹೊತ್ತಿಸಿದೆ. ಇದನ್ನು ತಾಳಲಾರದೆ ಮುದಿ ಜೀವ ತತ್ತರಿಸುತ್ತಿದೆ. ಅಧಿಕಾರಕ್ಕೆ ಹಿಂದುತ್ವವನ್ನು, ಅಸ್ತಿತ್ವಕ್ಕೆ ಮಹಾರಾಷ್ಟ್ರವನ್ನು ಬಗಲಲ್ಲಿರಿಸಿಕೊಂಡು ಪುಂಡಾಟಿಕೆಗೆ, ಲಂಪಟತನಕ್ಕೆ, ಅವಕಾಶವಾದಿತನಕ್ಕೆ ಹೆಸರುವಾಸಿಯಾಗಿರುವ ಮುದಿ ಹುಲಿಯ ಗರ್ಜನೆಗೆ ಹೆದರುವವರಾರೂ ಇಲ್ಲದಂತಾಗಿದೆ.
ಹಿಂದುತ್ವವೇ ಉಸಿರು, ಹಿಂದುತ್ವದ ಉಳಿವೊಂದೇ ಜೀವನದ ಧ್ಯೇಯ ಎಂದೆಲ್ಲಾ ಬಡಬಡಿಸುತ್ತಾ ಹಿಂದೂ ಉದ್ಧಾರಕನಂತೆ ಪೋಷಾಕು ಧರಿಸಿರುವ ಗೋಮುಖ ‘ವ್ಯಾಘ್ರಕ್ಕೆ ನಿಜಕ್ಕೂ ಹಿಂದುತ್ವ ಪರಿಕಲ್ಪನೆಯಾಗಲಿ, ಹಿಂದೂಗಳನ್ನು ಉದ್ದರಿಸಬೇಕೆಂಬ ಹಪಹಪಿಯಾಗಲಿ ಇಲ್ಲ.
‘ವಸುಧೈವ ಕುಟುಂಕಂ ಅಂದರೆ ವಿಶ್ವವೇ ಒಂದು ಕುಟುಂಬ. ಇದು ಹಿಂದುತ್ವದ ಆಶಯ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ....ಹೀಗೆ ಈ ಧ್ಯೇಯ ವಾಕ್ಯಕ್ಕೆ ಗಡಿಗಳ ಎಲ್ಲೆಯಿಲ್ಲ. ಭಾಷೆಗಳ ಗೊಡವೆಯಿಲ್ಲ. ಹಿಂದೂಸ್ತಾನದಲ್ಲಿರುವವರೆಲ್ಲರೂ ಹಿಂದೂಗಳೇ. ಹಾಗಾಗಿ ಕನ್ನಡಿಗರು ಹಿಂದೂಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದೂ ರಕ್ಷಕನೆಂದೇ ಹಣೆಪಟ್ಟಿ ಅಂಟಿಸಿಕೊಂಡಿರುವ ಠಾಕ್ರೆಗೆ ಇದು ಗೊತ್ತಿಲ್ಲವೇ? ಇವರುಗಳ ರಕ್ಷಣೆ ಮಾಡಬೇಕಾದುದು ಕರ್ತವ್ಯವಲ್ಲವೇ? ನಿಜವಾದ ಹಿಂದೂತ್ವವನ್ನು ಬಲ್ಲವನಿಗೆ ಇದು ಖಂಡಿತಾ ಅರ್ಥವಾಗುತ್ತದೆ. ಆದರೆ ಠಾಕ್ರೆಯಂತಹ ಬೆದರುಗೊಂಬೆಯಂತಹವರಿಗೆ ಇದು ಗೊತ್ತಾಗುವುದಿಲ್ಲ. ಏಕೆಂದರೆ ಈತ ಹಿಂದೂತ್ವ ಆರಾಧಕನೂ ಅಲ್ಲ; ರಕ್ಷಕನಂತೂ ಮೊದಲೇ ಅಲ್ಲ. ಕೇವಲ ಅವಕಾಶವಾದಿಯಷ್ಟೆ. ಈ ಮಾತು ಆತನ ಬದುಕಿನ ಪುಟಗಳನ್ನೊಮ್ಮೆ ತಿರುವುತ್ತಾ ಹೋದರೆ ಹೆಜ್ಜೆ-ಹೆಜ್ಜೆಗೂ ಇಣುಕುತ್ತವೆ.
ಮೂಲತ: ಕೊಂಕಣಪ್ರದೇಶದ ಸಮಾಜ ಸುಧಾರಕರ ಕುಟುಂಬದಿಂದ ಬಂದ ಈ ಠಾಕ್ರೆ ಒಬ್ಬ ಕೋಮುವಾದಿ. ಇದನ್ನೂ ಮೀರಿ ಒಬ್ಬ ಉನ್ಮತ್ತ ಭಾಷಾಂಧ. ಅನ್ನದ ದಾರಿ ಹುಡುಕುತ್ತಾ ದಾದರ್ ಪ್ರದೇಶಕ್ಕೆ ವಲಸೆ ಬಂದಿದ್ದ ಈತನ ಮುತ್ತಜ್ಜಿ ಸುತ್ತಲಿನ ಮಾಟುಂಗಾ, ಮಾಹಿಮ್, ವರ್ಲಿಗಳಲ್ಲಿ ಮುಂಬಯಿಯ ಮೂಲ ನಿವಾಸಿಗಳಾದ ಕೋಲಿ ಹಾಗೂ ಕ್ರಿಶ್ಚಿಯನ್-ಮುಸ್ಲಿಮರ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದಾಕೆ.
ದಾದರ್‌ನ ಸುತ್ತಲಿನ ಪ್ರದೇಶದಲ್ಲಿ ಠಾಕ್ರೆ ಕುಟುಂಬದ ಹೆಸರನ್ನು ಜನಪ್ರಿಯಗೊಳಿಸಿದ್ದೇ ಈ ಹಿರಿಯ ಜೀವ. ಈ ಹಿರಿಯ ಜೀವದ ಮೊಮ್ಮಗ ಕೇಶವ ಸೀತಾರಾಮ್ ಠಾಕ್ರೆ. ಈತ ಕೂಡ ಸಮಾಜ ಸುಧಾರಕನಾಗಿದ್ದಂತಹ ಮನುಷ್ಯ. ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದಾತ. ಮುಂಬೈಯನ್ನು ಬದಿಗಿಟ್ಟು ಮಹಾರಾಷ್ಟ್ರವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಹೋರಾಟದಲ್ಲೂ ತೊಡಗಿಸಿಕೊಂಡಿದ್ದ. ಈ ಕೇಶವ ಠಾಕ್ರೆಯ ಮಗನೇ ಬಾಳಾ ಠಾಕ್ರೆ.
ಬಾಳಾ ಠಾಕ್ರೆ ಮುತ್ತಜ್ಜಿ ಹಾಗೂ ತಂದೆಯ ಗುಣಗಳನ್ನು ಮೈಗೂಡಿಸಿಕೊಳ್ಳದೇ ಒಬ್ಬ ಬೀದಿ ಬದಿಯ ಪುಂಡನಾಗಿಯೇ ಬೆಳೆದ. ತಾನೇ ಹೊರಡಿಸುತ್ತಿದ್ದ ‘ಮಾರ್ಮಿಕ್ ಎಂಬ ಹಾಸ್ಯ ಪತ್ರಿಕೆಯನ್ನು ಮರಾಠಿಯೇತರರ ವಿರುದ್ಧ ಮರಾಠಿಗರನ್ನು ಎತ್ತಿಕಟ್ಟಲು ಬಳಸಿಕೊಂಡ. ಆರ್ಥಿಕ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ಇಲ್ಲದೇ ಒದ್ದಾಡುತ್ತಿದ್ದ ಅಮಾಯಕ ಜೀವಗಳ ಮನಸ್ಸುಗಳಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯದಿಂದ ಬಂದ ಉದ್ಯಮಶೀಲ ವಲಸಿಗರನ್ನು ಖಳನಾಯಕರಂತೆ ಬಿಂಬಿಸಿ ಭಾಷಾ ಪುಂಡಾಟಿಕೆಗೆ ನಾಂದಿ ಹಾಡಿದ ಕೀರ್ತಿಯೂ ಠಾಕ್ರೆಗೇ ಸಲ್ಲಬೇಕು.
‘ಪುಂಗಿ ಬಜಾವೋ, ಲುಂಗಿ ಉಟಾವೋ ಎಂಬ ಘೋಷಣೆ ಅರವತ್ತರ ದಶಕದ ಕೊನೆಯ ಭಾಗದಲ್ಲಿ ಠಾಕ್ರೆಗೆ ಮರಾಠಿಗರ ಅಪಾರ ಬೆಂಬಲ ತಂದುಕೊಟ್ಟಿತು. ಪರಿಣಾಮವಾಗಿ ೧೯೬೭ರಲ್ಲಿ ಶಿವಸೇನೆ ಚಿಗುರೊಡೆಯಿತು.
ಬರೀಯ ಪುಂಡಾಟಿಕೆಯನ್ನೇ ಕಾಯಕವಾಗಿಸಿಕೊಂಡಿದ್ದ ಶಿವಸೇನೆಗೆ ಅಧಿಕೃತ ರಾಜಕೀಯ ಪಕ್ಷದ ರೂಪ ನೀಡಿದ್ದು ಆ ಕಾಲದ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ.ಪಾಟೀಲ್. ೧೯೬೭ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತೀಯ ಕೃಷ್ಣ ಮೆನನ್ ಅವರನ್ನು ಮಣಿಸಲು ಪಾಟೀಲ್ ಠಾಕ್ರೆಯ ಪುಂಡ ಪಡೆಯನ್ನು ಬಳಸಿಕೊಂಡರು. ಈ ಮೂಲಕ ಶಿವಸೇನೆಯ ದಕ್ಷಿಣ ಭಾರತೀಯರನ್ನು ವಿರೋಧಿಸುವ ನಿಲುವಿಗೆ ರಾಜಕೀಯ ವೇದಿಕೆಯೊಂದನ್ನು ಒದಸಿಕೊಟ್ಟರು.
ಆಗಿನ್ನೂ ಮುಂಬೈನಲ್ಲಿ ಮುಖ್ಯವಾಗಿ ಕಾರ್ಮಿಕ ವಲಯದಲ್ಲಿ ಕಮ್ಯುನಿಸ್ಟರು ಬೇರು ಬಿಟ್ಟಿದ್ದರು. ಇದರಿಂದ ಅಭದ್ರತೆಗೀಡಾಗಿದ್ದ ಕಾಂಗ್ರೆಸ್ ಸರ್ಕಾರ ಕಮ್ಯುನಿಸ್ಟ್ ವಿರೋಧಿ ನಿಲುವಿನ ಶಿವಸೇನೆಗೆ ಮುಕ್ತ ಮೈದಾನ ನೀಡಿತು. ಕಮ್ಯುನಿಸ್ಟರ ಸಭೆ, ರ‍್ಯಾಲಿಗಳ ಮೇಲೆ ಶಿವಸೇನೆ ಗೂಂಡಾಗಳು ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಕಣ್ಣ್ಮುಚ್ಚಿ ಕೂತಿತ್ತು. ೧೯೬೮ರಲ್ಲಿ ಪ್ರಜಾಸೋಷಲಿಸ್ಟ್ ಪಕ್ಷದ ಜತೆ ಸೇರಿ ಮುಂಬೈ ನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿವಸೇನೆ ೪೨ ಸ್ಥಾನಗಳನ್ನು ಗೆದ್ದಿತ್ತು. ಮರಾಠಿಗರಲ್ಲಿ ಶಿವಸೇನೆಯನ್ನು ಇನ್ನಷ್ಟು ಜನಪ್ರಿಯಗೊಳಿಸಿದ್ದು, ಬೆಳಗಾವಿ ವಿವಾದ. ಆಗ ನಡೆದ ಹಿಂಸಾಚಾರದ ಸಮಯದಲ್ಲಿಯೂ ಕಾಂಗ್ರೆಸ್ ಮೌನ ವಹಿಸಿತ್ತು. ಯಾವಾಗ ತುರ್ತು ಪರಿಸ್ಥಿತಿ ಸಮಯದಲ್ಲಿ ಶಿವಸೇನೆ ನಿಷೇಧಿಸಬೇಕೆಂಬು ಕೂಗೆಬ್ಬಿತೋ ಆಗ ಗೋಸುಂಬೆ ಠಾಕ್ರೆ ಸಂಜಯಗಾಂಧಿಗೆ ಬೆಂಬಲ ಘೋಷಿಸಿಬಿಟ್ಟ. ಆಗಲೇ ಶಿವಸೇನೆಯಲ್ಲಿ ಬಿರುಕು ಬಿಟ್ಟುಕೊಂಡಿತು. ಠಾಕ್ರೆಯ ಮೇಲೆ ಆತನದೇ ಪಕ್ಷದ ನಿಷ್ಠಾವಂತ ನಾಯಕರು ಭ್ರಷ್ಟಾಚಾರದ ಆರೋಪ ಹೊರಿಸಿ ಹೊರನಡೆದರು.
ಕಾಂಗ್ರೆಸ್‌ನೊಂದಿಗಿನ ಶಿವಸೇನೆಯ ಸಖ್ಯ ಬಹಳ ದಿನ ನಡೆಯಲಿಲ್ಲ. ಕಾಂಗ್ರೆಸ್ ಜತೆಗಿದ್ದು ತನ್ನ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವುದು ಅಸಾಧ್ಯ ಎಂದು ಠಾಕ್ರೆಯೊಳಗಿನ ರಾಜಕಾರಣಿಗೆ ಅದಾಗಲೇ ಅರಿವಾಗಿತ್ತು. ಆಗ ಠಾಕ್ರೆ ಎತ್ತಿದ ಅವತಾರವೇ ‘ಹಿಂದೂ ರಕ್ಷಕ. ಆರ್‌ಎಸ್‌ಎಸ್‌ನ ಪ್ರಧಾನ ಕಛೇರಿ ನಾಗಪುರದಲ್ಲಿದ್ದರೂ ಮೂಲತ: ದಲಿತ, ಹಿಂದುಳಿದ, ಕೃಷಿಕ ಸಮುದಾಯವನ್ನೊಳಗೊಂಡ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕಾಲೂರಲು ಆಗಿರಲೇ ಇಲ್ಲ. ಆದರೆ ಅದು ಕಣ್ಣಿಟ್ಟ ಜಾಗವನ್ನು ಶಿವಸೇನೆ ಆಕ್ರಮಿಸಿಕೊಳ್ಳುತ್ತಿದ್ದುದನ್ನು ಕಂಡ ಬಿಜೆಪಿ ಅದರ ಜತೆಯಲ್ಲಿಯೇ ಸಖ್ಯ ಬೆಳೆಸುವ ನಿರ್ಧಾರ ಕೈಗೊಂಡಿತು. ಎಪ್ಪತ್ತರ ದಶಕದಿಂದಲೂ ಮುಂಬೈ ಮಹಾನಗರ ಪಾಲಿಕೆಯನ್ನು ಕೈಯಲ್ಲಿಟ್ಟುಕೊಂಡಿದ್ದರೂ, ಸಚಿವಾಲಯ ಪ್ರವೇಶಿಸಲು ಶಿವಸೇನೆಗೆ ಸಾಧ್ಯವಾಗಿರಲಿಲ್ಲ. ೧೯೯೫ರಲ್ಲಿ ಬಿಜೆಪಿ ಜತೆಗಿನ ಮೈತ್ರಿ ಆ ಅವಕಾಶವನ್ನು ಒದಗಿಸಿಕೊಟ್ಟಿತು.
ಅಧಿಕಾರ ಮತ್ತು ಸಂಪತ್ತಿನ ಒಂದೊಂದೇ ಮೆಟ್ಟಿಲೇರುತ್ತಾ ಹೋದ ಬಾಳ ಠಾಕ್ರೆ ಶಿವಸೇನೆಯ ಮೂಲ ಉದ್ದೇಶವನ್ನು ಎಂದೋ ಗಾಳಿಗೆ ತೂರಿಬಿಟ್ಟಿದ್ದ. ಶಿವಸೇನೆ ಆರಂಭವಾದಾಗಿನಿಂದಲೂ ಮರಾಠಿ ಮಾನೂಸ್‌ಗಳಿಗೆ ಕೊಟ್ಟಿದ್ದೇನು ಎಂದು ಯಾರಾದರೂ ಕೇಳಿದರೆ ಮುದಿ ಹುಲಿಯ ಬಾಯಲ್ಲಿ ಪದಗಳೇ ಹೊರಬರುವುದಿಲ್ಲ.
ಶಾಲೆಗಳನ್ನಾಗಲಿ, ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಟ್ಟದ್ದಾಗಲಿ, ಮರಾಠಿ ಸಾಹಿತ್ಯ, ಕಲೆ, ರಂಗಭೂಮಿಗೆ ಠಾಕ್ರೆ ಕೊಟ್ಟ ಬಳುವಳಿಗಳಾಗಲಿ ಏನೂ ಇಲ್ಲ. ಬರೀಯ ಪುಂಡಾಟಿಕೆ, ಗಲಭೆ, ಸ್ವಾರ್ಥಸಾಧನೆ, ಸ್ವಪ್ರತಿಷ್ಠೆಯನ್ನೇ ಮೈಗೂಡಿಸಿಕೊಂಡು ಇವುಗಳನ್ನು ಸಾಧಿಸಲು ಮರಾಠಿ ಮನಸುಗಳನ್ನು ಉಪಯೋಗಿಸಿಕೊಂಡ ಚಾಣಾಕ್ಷ ಠಾಕ್ರೆ.
ಮರಾಠಿಗರ, ಮಹಾರಾಷ್ಟ್ರದ ಪರ ಉದ್ದುದ್ದ ಆವೇಶದ ಮಾತುಗಳನ್ನಾಡುವ ಈ ಬೆದರುಗೊಂಬೆಯಾದರೂ ವೈಯಕ್ತಿಕವಾಗಿ ಭಾಷೆಗೆ ನಿಷ್ಠೆಯಿಂದ ಇದೆಯೇ ಎಂದರೆ ಖಂಡಿತಾ ಇಲ್ಲ.
ಪಾಕಿಸ್ತಾನದಿಂದ ಬಂದ ಕಸಬ್ ಒಂದೆಡೆ ಭಾರತೀಯರನ್ನು ಕೊಂದರೆ ಭಾರತದಲ್ಲೇ ಇರುವ ಠಾಕ್ರೆ ಭಾರತೀಯರನ್ನೇ ನಾಶಮಾಡಲು ಹೊರಟಿದ್ದಾನೆ. ಈತನಿಗೂ ಕಸಬ್‌ಗೂ ವ್ಯತ್ಯಾಸವಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಅತ್ತ ಹಿಂದೂ ರಕ್ಷಕನೂ ಆಗದೆ, ಇತ್ತ ಮರಾಠಿಗರ ಕಣ್ಮಣಿ ಆಗದೆ ತನ್ನ ಇಬ್ಬಗೆ ನೀತಿಯಿಂದ, ಅವಕಾಶವಾದಿತನದಿಂದ, ಮಹಾರಾಷ್ಟ್ರದಲ್ಲಿ ಹಿಡಿತ ಸಾಧಿಸಬೇಕೆಂದು ದುರುದ್ದೇಶದಿಂದ ಬೆಳಗಾವಿಯನ್ನು ಅಸ್ತ್ರವಾಗಿಸಿಕೊಂಡಿರುವ ಠಾಕ್ರೆಯಂತಹ ಮುದಿ ಹುಲಿಯ ಪೊಳ್ಳು ಘರ್ಜನೆಗೆ ಮರಾಠಿ ಮನಸುಗಳು ಪಿಗ್ಗಿಬಿದ್ದಿರುವುದು ನಿಜಕ್ಕೂ ದುರಂತ.
ಈಗ ಈ ಮುದಿ ಜೀವದ ಗರ್ಜನೆಗೆ ಬೆಲೆ ಕೊಡುವವರು ಯಾರೂ ಇಲ್ಲ. ತನ್ನ ಪಕ್ಷದ ಐಕ್ಯವನ್ನೇ ಸಾಧಿಸಲಾಗದ ಈ ಬೆದರುಗೊಂಬೆಗೆ ಮಹಾರಾಷ್ಟ್ರದ ಹಿತ ಕಾಯಲು ಸಾಧ್ಯವೇ. ಭಾಷೆಯೊಂದನ್ನೇ ಮಾನದಂಡವಾಗಿಸಿ ನೆಲವನ್ನು ಬಿಟ್ಟುಕೊಡುವುದಾದರೆ, ಮಹಾರಾಷ್ಟ್ರದಲ್ಲಿ ಕನ್ನಡಿಗರೇ ಹೆಚ್ಚಿರುವ ನೆಲವನ್ನು ಬಿಟ್ಟು ಕೊಡಲು ಇವರು ಸಿದ್ದರೇ? ಇವೆಲ್ಲವೂ ಮೂರ್ಖ, ಹತಾಶ ಮುದಿ ಮನಸಿನ ಪ್ರಲಾಪವಷ್ಟೇ.
‘ಕೇಂದ್ರವು ಮಹಾರಾಷ್ಟ್ರಿಗರಿಗೆ ಅನ್ಯಾಯ ಮಾಡುವ ಧೈರ್ಯ ತೋರಿಸಿದೆ ಎಂದು ಅಲವತ್ತುಕೊಳ್ಳುವ ಬೆದರುಗೊಂಬೆ ಠಾಕ್ರೆಯ ಒಡಲಲ್ಲಿ ಇನ್ನೂ ನೈತಿಕ ತಾಕತ್ತಿದೆಯೇ?
ನ್ಯಾಯವಾಗಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು. ಇದರಲ್ಲಿ ಚರ್ಚೆಗೆ ಅವಕಾಶವೇ ಇಲ್ಲ. ಇದನ್ನು ಕೇಂದ್ರವೂ ಸ್ಪಷ್ಟಪಡಿಸಿದೆ. ಆದರೂ ಠಾಕ್ರೆಯ ಇದಕ್ಕೆ ರಾಜಿಯಾಗಲೊಲ್ಲ. ಆತನಿಗೆ ಸಮಸ್ಯೆ ಪರಿಹಾರವಾಗುವುದು ಬೇಕಿಲ್ಲ. ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಜೀವಂತವಾಗಿಸಿ ಆ ಮೂಲಕ ತನ್ನ ಬೇಳೆ, ಅಸ್ತಿತ್ವ ಕಾಯ್ದಕೊಳ್ಳಬೇಕೆಂಬ ಹಪಹಪಿಯಷ್ಟೆ. ಅದಕ್ಕೆಂದೇ ಎಲ್ಲರ ಮೇಲೆ ಚೀರಾಡುತ್ತಾ, ಪ್ರತಿಭಟಿಸುತ್ತಾ, ಸ್ವರವೇ ಹೊರಡಿಸದಷ್ಟು ನಿಶ್ಯಕ್ತಗೊಂಡಿರುವ ಕಂಠದಿಂದ ಬಲವಂತದಿಂದಲೇ ಘರ್ಜಿಸುತ್ತಿದೆ.
ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಇದು ಬೆದರುಗೊಂಬೆಯೊಂದರ ಅರಣ್ಯರೋಧನವಷ್ಟೇ.

No comments:

Post a Comment

ಹಿಂದಿನ ಬರೆಹಗಳು