Tuesday, February 8, 2011

ನಾನು ಕಂಡ ತೇಜಸ್ವಿ...



(ಹಿಂದಿನ ಸಂಚಿಕೆಯಿಂದ)

ಪ್ರಸಾದ್ ರಕ್ಷಿದಿ

ನಾವು ಇಷ್ಟೆಲ್ಲ ಮಾತನಾಡಿದರೂ ನಾರಾಯಣ ಮಾತ್ರ ಮೈಯೆಲ್ಲ ಮುಳ್ಳಾಗಿಸಿಕೊಂಡು ಹಲಸಿನಕಾಯಿಯಂತೆ ಕೂತಿದ್ದ.
ಆಗ ನಾನು ನಿರ್ವಾಹವಿಲ್ಲದೆ ನಾನು ಇವತ್ತು ಇಲ್ಲಿಗೆ ಬರುವ ಉದ್ದೇಶವಿರಲಿಲ್ಲವೆಂದೂ, ಈ ನಾರಾಯಣ ನನ್ನನ್ನು ಕರೆದುಕೊಂಡು ಬಂದನೆಂದೂ ಹೇಳಿದೆ.
ಆಗ ನಾರಾಯಣ ಅನಿವಾರ್ಯವೆಂಬಂತೆ ಬಾಯಿ ತೆರೆದ "ಅಣ್ಣಾ ನಿಮ್ಮಂತೋರೆಲ್ಲ ಕಷ್ಟಪಟ್ಟು ನಮ್ಮ ಈ ಹಾಳುಬಿದ್ದ ಮೂಡಿಗೆರೆಗೆ ಒಂದು ಕೃಷಿ ಬ್ಯಾಂಕು ತಂದ್ರಿ, ಅದ್ರಿಂದ ಇದು ಒಂದು ಊರು ಅಂತ ಆಯ್ತು. ಇಂದ್ರಾಗಾಂಧಿ ಬ್ಯಾಂಕನ್ನೆಲ್ಲ ರಾಷ್ಟ್ರೀಕರಣ ಮಾಡಿದ್ರಂದ ನಮ್ಮಂತೋರೆಲ್ಲ ಬ್ಯಾಂಕೊಳಗೆ ಕಾಲಿಡೋಹಂಗಾಯ್ತು, ಇಲ್ಲಾಂದ್ರೆ ಮೂಡಿಗೆರೇಲಿ ಬರೀ ಹತ್ತು ಹನ್ನೆರಡು ಜನರಿಗೆ ಮಾತ್ರ ಬ್ಯಾಂಕೊಳಗೆ ನುಗ್ಗೋಕೆ ಅವಕಾಶ ಇತ್ತು. ಆದ್ರೆ ಈಗ ನೀವೆಲ್ಲ ಇತ್ತೀಚೆಗೆ ಆ ಕಡೆಗೆ ಬರೋದು ಕಡಿಮೆ ಮಾಡಿದ್ರಿ. ಇವ್ರುನೆಲ್ಲಾ ವಿಚಾರಿಸ್ಕೊಳಣಾ ಅಂದ್ರೆ ರೈತಸಂಘನೂ ಇಲ್ಲ ಅದ್ಕೇ ಈ ಬ್ಯಾಂಕಿನೋರೆಲ್ಲ ಹಿಂಗ್ ಹೆಚ್ಚಿಕೊಂಡಿದ್ದಾರೆ. ನಾನೇನೋ ನ್ಯಾಯ ಮಾತಾಡಕ್ಕೋದ್ರೆ ಬ್ಯಾಂಕ್ ಮೇನೇಜರ್ ನಿನ್ ಮ್ಯಾಲೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅಂದ. ಅಲ್ಲೇ ಇದ್ದ ಚಂದ್ರೇಗೌಡ್ರು ಮತ್ ಆ ಮಕಾನಳ್ಳಿ ಕಡೆಯೋರೆಲ್ಲಾ ಬ್ಯಾಂಕಿನ ಪರನೇ ಮಾತಾಡಿದ್ರು, ನೀವಿಲ್ದೇ ಹೋಗಿದ್ರೆ ಈ ಮೂಡಿಗೆರೆಗೆ ಕೃಷಿ ಬ್ಯಾಂಕೆಲ್ಲಿ ಬರ‍್ತಿತ್ತಣ್ಣ ಎಂದು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಹಲವು ವಿಷಯಗಳನ್ನೆಲ್ಲಾ ಜೋಡಿಸಿ ಹೇಳುತ್ತಾ, ತೇಜಸ್ವಿಯವರನ್ನು ಯದ್ವಾತದ್ವಾ ಹೊಗಳತೊಡಗಿದ.
"ಅದೇನು ಹೇಳ್ಬೇಕೋ ಹೇಳು ಸುಮ್ನೆ ಸುತ್ತಿ ಬಳಸಿ ಮಾತಾಡ್ಬೇಡ" ಎಂದರು ತೇಜಸ್ವಿ. ಧ್ವನಿಯಲ್ಲಿ ಸಣ್ಣ ಅಸಹನೆಯಿತ್ತು.
"ಅದೇ ಅಣ್ಣ ಬ್ಯಾಂಕಲ್ಲಿ ಸ್ವಲ್ಪ ಲೋನ್ ಬಾಕಿ ಆಗಿತ್ತು. ಹಂಗಂತ ಇಡೀ ಬ್ಯಾಂಕಿಗೆ ನಾನೊಬ್ನೇ ಸುಸ್ತಿದಾರ ಅನ್ನೋತರ ಎಲ್ರ ಎದ್ರಿಗೆ, ಮ್ಯಾನೇಜರು, ಕೋರ್ಟು ಕಛೇರಿ, ಜಪ್ತಿ, ಅಂದ್ರೆ, ಹೆಂಗ್ಹೇಳಿ?. ನಂಗೂ ಸಿಟ್ಬಂತು. ನಾನೂ ಒಂದ್‌ಸೊಲ್ಪ ರಾಂಗಾದೆ. ಅಷ್ಟಕ್ಕೇ ಪೋಲಿಸಿಗೆ ಫೋನ್ ಮಾಡ್ತೀನಿ ಅಂದ್ರು. ನಾನೂ ’ಹಂಗಾದ್ರೆ ನನ್ ಮನೆ ಜಪ್ತಿ ಮಾಡೇ ತಗಳಿ ನಿಮ್ ಹಣವ’ ಅಂದೆ. ಅಲ್ಲಾ ಅಲ್ಲಿದ್ದೋರೆಲ್ಲಾ ನನ್ನಂಗೆ ಸುಸ್ತಿದಾರ್ರೇ, ಅವ್ರೆಲ್ಲಾ ನಂದೇ ತಪ್ಪು ಅನ್ನೋತರ ಮಾತಾಡದ, ಅದ್ಕೇ ನೀವೊಂಸೊಲ್ಪ ಬುದ್ದಿ ಹೇಳಿ ಆ ಮ್ಯಾನೇಜರಿಗೆ ಅವುಂದ್ಯಾಕೋ ಅತಿಯಾಯ್ತು" ಎಂದ. ಮ್ಯಾನೇಜರ್ ಬಗ್ಗೆ ಹೇಳುವಾಗ ನಾರಾಯಣನ ಮಾತು ಅವನ ಸಿಟ್ಟಿಗೆ ಅನುಗುಣವಾಗಿ ಏಕವಚನ ಬಹುವಚನಗಳ ಮಧ್ಯೆ ಹೊಯ್ದಾಡುತ್ತಿತ್ತು.
"ಅಲ್ಲ ಕಣಯ್ಯ ನಂಗೀಗ ಅರ್ಥ ಆಯ್ತು ಆ ಮೇನೇಜರ್ ನಂಗೂ ಫೋನ್ ಮಾಡಿದ್ರು, ನೀನು ಅವ್ರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಅಂದ್ಯಂತೆ, ’ತೇಜಸ್ವಿ ನಂ ನೆಂಟ್ರು ಗೊತ್ತಾ’ ಅಂತ ಹೆದರ‍್ಸೋತರ ಹೇಳಿದಿಯಂತೆ. ನಾನೇ ಹೇಳ್ದೆ ನನ್ನ ಹೆಸರು ಹೇಳ್ಕೊಂಡು ಏನಾದರೂ ಬೇಡದ್ದು ಮಾಡಿದ್ರೆ ಪೊಲೀಸಿಗೆ ಕೊಡಿ ಅಂತ, ನಿಂಗೇನಾದ್ರು ತಲೆಗಿಲೆಕೆಟ್ಟಿದಿಯೇನಯ್ಯ, ಬ್ಯಾಂಕಿನೋರು ಸಾಲ ಕೊಡಬೇಕಾದ್ರೆ ನಿನ್ನತ್ರ ಎಲ್ಲಾದಕ್ಕೂ ಸೈನ್ ತಗೊಂಡೇ ಅಲ್ವಾ ಕೊಟ್ಟಿರೋದು ಸುಮ್ನೆ ಗಲಾಟೆಮಾಡಿ ಒಂದೆರಡು ಕೇಸು ಮೈಮೇಲೆ ಎಳ್ಕೊಳ್ತೀಯಾ ಅಷ್ಟೆ, ಏನಾದ್ರೂ ಮಾಡಿ ಸಾಲ ತಿರ‍್ಸೋಕ್ಕಾಗುತ್ತೋ ನೋಡು" ಎಂದು ಹೇಳಿ, ಸ್ವಲ್ಪ ಯೋಚಿಸಿ, "ಈ ದೇಶದಲ್ಲಿ ರೈತ ಒಂದುಸಾರಿ ಸಾಲಮಾಡಿದ್ರೆ ಅದು ತೀರಿದ್ದೇ ಕಾಣೆ, ಅದ್ಯಾಕಯ್ಯ ಅಷ್ಟೊಂದು ಸಾಲ ಮಾಡಿದ್ದೀಯಂತೆ" ಎಂದರು.
"ಅಣ್ಣಾ ಅದೊಂದು ಕತೆ. ಈಗ ಮೂರನೇ ವರ್ಷದಲ್ಲಿ ಒಂದೂವರೆ ಲಕ್ಷ ಲೋನ್ ಮಾಡಿ ಹೊಳೆಪಕ್ಕದ ನಾಕೆಕರೆಗೆ ಪಚ್ಚಬಾಳೆ ಹಾಕಿದ್ದೆ, ಎಂತಾ ಚನ್ನಾಗಿ ಬಂದಿತ್ತೂ ಅಂತೀರಿ, ಹಂಗೇ ಮೈನ್ ರೋಡಿಗೆ ಕಾಣದಲ್ಲ, ಎಲ್ಲಾರೂ ಕೇಳೋರೆ ’ಅದುಯಾರ‍್ದು ಮಾರಾಯ್ರೆ ಪಚ್ಚಬಾಳೆ, ಒಂದೊಂದು ಗೊನೆ ಏನಿಲ್ಲ ಅಂದ್ರೂ ಇಪ್ಪತೈದ್ ಕೇಜಿ ಮೇಲೆ ಬೀಳುತ್ತೆ’ ಅನ್ನೋರು. ಹಂಗ್ ಬಂದಿತ್ತು ಬಾಳೆ. ನೋಡೀ ನೋಡೀ ಜನಗಳ್ದೇ ಕಣ್ಣಾಯ್ತೋ ಏನೋ, ಆ ವರ್ಷ ಡಿಸೆಂಬರಲ್ಲಿ ಬಿತ್ತಲ್ಲ ಚಳಿ, ಒಂದೇವಾರದ ಚಳೀಗೆ ಬಾಳೆ ಎಲ್ಲಾ ಕೆಂಪಾಗಿ ಬತ್ತಿದಂಗಾಯ್ತು, ಆ ಮೇಲೆ ಏನೆಲ್ಲಾ ಮಾಡ್ದೆ, ಕೊನೀಗ್ ನೋಡಿದ್ರೆ ಗೊನೆಗಳೆಲ್ಲ ಪೀಚಾಗಿ ಏಳ್ ಕೇಜಿ ಎಂಟು ಕೇಜಿ ಮೇಲ್ ಬರ‍್ಲೇ ಇಲ್ಲ. ಪೂರಾ ಲಾಸಾಯ್ತು. ಇನ್ನು ಬ್ಯಾಂಕಿನ ಕಂತೆಲ್ಲಿ ಕಟ್ಟಲಿ" ಎಂದ.
ಚಳಿ ತೀರಾ ಹೆಚ್ಚಾದರೆ ನಮ್ಮಲ್ಲಿರುವ ಅನೇಕ ಜಾತಿಯ ಸಸ್ಯಗಳ ಬೇರುಗಳು ಕೆಲಸವನ್ನೇ ನಿಲ್ಲಿಸಿಬಿಡುವುದರಿಂದ ಈ ರೀತಿ ಆಗುತ್ತದೆಂದೂ, ಇದು ಯಾರ ಕಣ್ಣಿನ ಪ್ರಭಾವವೂ ಅಲ್ಲವೆಂದೂ ತೇಜಸ್ವಿ ವಿವರಿಸಿದರು.
ಆ ವರ್ಷ ನಾನೂ ಕೂಡಾ ಸ್ವಲ್ಪ ಪಚ್ಚಬಾಳೆ ಬೆಳೆದಿದ್ದೆನೆಂದೂ, ಆ ಸಂದರ್ಭದಲ್ಲಿ ಬಾಳೆಗೆ ಚೆನ್ನಾಗಿ ನೀರು ಹಾಯಿಸಿದರೆ ಚಳಿಯ ಪ್ರಭಾವ ಕಮ್ಮಿಯಾಗುತ್ತದೆಂದೂ ನನಗೆ ಹಿರಿಯರೊಬ್ಬರು ಹೇಳಿದ್ದರು. ಅದರಂತೆ ನಾನೂ ಬಾಳೆಗೆ ಏಳೆಂಟು ದಿನಗಳ ಕಾಲ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡಿಸಿದ್ದೆ. ಇದರಿಂದ ಬಾಳೆಗೆ ಆದಹಾನಿ ಬಹಳಷ್ಟು ಕಡಿಮೆಯಾಗಿತ್ತು. ಈ ವಿಚಾರವನ್ನು ನಾನು ಅವರಿಗೆ ತಿಳಿಸಿದೆ.
ಹೌದು ಅದೂ ಒಂದು ಪರಿಣಾಮಕಾರಿ ವಿಧಾನವೇ ಎಂದರು.
"ಅಣ್ಣ ಅಲ್ಲಿಗೇ ನಿಂತಿಲ್ಲ ನನ್ ಕತೆ, ಹೆಂಗೂ ಇನ್ನು ಈ ಬಾಳೆಕಾಯಿ ಮಾರಿ ಬ್ಯಾಂಕ್ ಸಾಲ ತೀರ‍್ಸದು ಕನಸು ಅಂದ್ಕಂಡು ಇನ್ನೂ ಒಂದು ಲಕ್ಷ ಸಾಲ ತಗಂಡು, ಸಕಲೇಶಪುರದಲ್ಲಿ ಕೃಷ್ಣ ಅಂತಿದ್ದಾನೆ ನನ್ ಫ್ರೆಂಡು, ಚಕ್ಕೆ ವ್ಯಾಪಾರ ಮಾಡ್ತಾನೆ. ಅವುನು ಜೊತೆ ಪಾರ್ಟನರ್ ಆಗಿ ಸುಂಡೆಕೆರೆ ಹತ್ರ ಒಂದು ಸಾಬರ ಎಸ್ಟೇಟಿನ ಚಕ್ಕೆ ಕಂಟ್ರಾಕ್ಟ್ ಮಾಡುದ್ವು, ಎಲ್ಲಾ ಸರಿಯಾಗಿದ್ರೆ ನಾಕ್-ನಾಕ್ ಲಕ್ಷ ಲಾಭ ಉಳ್ದಿರೋದು. ಚಕ್ಕೆ ಎಲ್ಲಾ ಕೆತ್ತಿ ಇನ್ನೇನು ಪರ್ಮಿಟ್ ಸಿಕ್ಕೋ ಹೊತ್ತಿಗೆ ಅದೇನೋ ಕಾಂಪ್ಲಿಕೇಷನ್ ಆಗಿ ಚಕ್ಕೆ ಎಲ್ಲಾ ಪಾರೆಸ್ಟ್‌ನೋರು ಸೀಜ್ ಮಾಡಿದ್ರು. ಅದೆಲ್ಲಾ ಸರಿಮಾಡಿ ನಾವು ಬಚಾವಾಗಿ ಚಕ್ಕೆ ಮಾರೋಹೊತ್ತಿಗೆ ಅಲ್ಲಿಗಲ್ಲಿಗೆ ಸರಿಯಾಗಿ, ಕೈ ಕಾಲಿಯಾಯ್ತಣ್ಣ. ಅಲ್ಲಾ ಆ ಬ್ಯಾಂಕ್ ಮ್ಯಾನೇಜರು ಎಲ್ರ ಎದುರಿಗೆ ನನ್ ಮರ‍್ಯಾದಿ ಕಳುದ್ರೆ ಸಿಟ್ ಬರಲ್ವಣ್ಣ, ಅದ್ಕೇ ನಿಮ್ ಹೆಸರು ಹೇಳ್ದೆ, ಅವಾಗ ಸ್ವಲ್ಪ ಸುಮ್ನಾದ" ಎಂದು ಕರುಣಾಜನಕವಾಗಿ ತನ್ನ ಕತೆಯನ್ನು ಹೇಳಿದ.
"ಸರಿ ಮಾರಾಯ ಮತ್ತೀಗ ಸಾಲಕ್ಕೆಂತ ಮಾಡ್ತೀಯಾ" ಎಂದು ತೇಜಸ್ವಿ.
"ಇನ್ನೆಂತದು ಮಾಡ್ಳಿ, ನನ್ನ ಹೊಳೆ ಸಾಲು ಗದ್ದೆ ಮೇಲೆ ತುಂಬಾ ಜನಕ್ಕೆಕಣ್ಣಿರಾದು, ಅದರಲ್ಲೇ ಎರಡು ಎಕರೆ ಮಾರ‍್ಬೇಕು ಅಂತಿದ್ದೀನಿ. ಅಲ್ಲಿವರ‍್ಗೂ ಸ್ವಲ್ಪ ಸುಮ್ನಿರೋಕೇ ಆ ಮ್ಯಾನೇಜರಿಗೆ ಹೇಳಿ" ಎಂದ.
"ಸರಿ ಆದ್ರೆ ಪದೇ ಪದೇ ನನ್ನ ಹೆಸರು ಹೇಳಕೊಂಡು ತಿರುಗ್ಬೇಡಾ, ನೀವೆಲ್ಲ ಒಂದು ಶಿಸ್ತು ಕಲೀಬೇಕು ಕಣ್ರಯ್ಯ ಇಲ್ಲಾಂದರೆ ಯಾರೂ ನಮ್ಮ ಸಹಾಯಕ್ಕೆ ಬರೋದೇ ಇಲ್ಲ, ಸರ್ಕಾರವಂತೋ ಬರೋದೇ ಇಲ್ಲ, ತಿಳ್ಕಳಿ" ಎಂದರು.
ನಂತರ ಅವರೇ ಒಂದಷ್ಟು ಕಾಫಿ ಮಾಡಿ ತಂದು ಕೊಟ್ಟರು. ಕಾಫಿ ಕುಡಿದು ನಾವು ಹೊರಡುವಾಗ ನಾರಾಯಣನಿಗೆ. "ಹೆಂಗಾದ್ರು ಒಂದ್ಸಾರಿ ಬಚಾವಾಗೋ ದಾರಿ ಹುಡ್ಕು" ಎಂದರು.
ಆಗಲೇ ಗಂಟೆ ಆರಾಗುತ್ತ ಬಂದಿತ್ತು. ನಾರಾಯಣ ನನಗೆ ಕೊಟ್ಟ ಮಾತಿನಂತೆ ನನ್ನನ್ನು ಬೈಕಿನಲ್ಲಿ ಹೇರಿಕೊಂಡು ಸಕಲೇಶಪುರದ ಹಾದಿ ಹಿಡಿದ. ಹಾನುಬಾಳಿಗೆ ಬರುತ್ತಿದ್ದಂತೆ ಇಲ್ಲೇ ’ಸಾಯಂಕಾಲದ ಕಾರ್ಯಕ್ರಮ’ ಮುಗಿಸೋಣವೆಂದೂ, ನಿನ್ನನ್ನು ಊರಿಗೆಬಿಟ್ಟು ತಾನು ಸಕಲೇಶಪುರಕ್ಕೆ ಬದಲಾಗಿ ಹೆಗ್ಗದ್ದೆಗೆ ನೆಂಟರಮನೆಗೆ ಹೋಗುವುದಾಗಿಯೂ ತಿಳಿಸಿದ. ಸಾಯಂಕಾಲದ ಕಾರ್ಯಕ್ರಮಕ್ಕೆ ಕುಳಿತಿದ್ದಾಗ ನಾರಾಯಣನಿಂದ ತಿಳಿದ ಸತ್ಯವೆಂದರೆ ಚಕ್ಕೆ ವ್ಯಾಪಾರದಲ್ಲಿ ಆದನಷ್ಟವನ್ನು ತುಂಬಿಕೊಳ್ಳಲು ಅವನು ಇಸ್ಪೀಟಾಡಲು ಪ್ರಾರಂಭಿಸಿ ಈಗ ಅದೇ ಚಟವಾಗಿ ಬಿಟ್ಟಿತ್ತು. ಎಲ್ಲೆಲ್ಲಿ ’ರಮ್ಮಿ ನಾಕೌಟ್ ಜಾತ್ರೆಗಳಾಗಲೀ ಅಲ್ಲೆಲ್ಲ ಹೋಗಿ ಇಸ್ಪೀಟಾಡುತ್ತಿದ್ದ. ಮತ್ತಷ್ಟು ಹಣವನ್ನು ಕಳೆದುಕೊಂಡಿದ್ದ. ಇದರಿಂದ ಅವನ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟು ಹೋಗಿತ್ತು. ಅವನು ಹತಾಶನಾದಂತಿದ್ದ. ಏನೇನೋ ಸುಳ್ಳುಗಳನ್ನು ಹೇಳುತ್ತಾ ಎಲ್ಲರನ್ನೂ ನಂಬಿಸಲು ಪ್ರಯತ್ನಿಸುತ್ತಿದ್ದ.
ಇದನ್ನು ಊಹಿಸಿಯೇ ತೇಜಸ್ವಿಯವರು "ಶಿಸ್ತು ಕಲೀಬೇಕು ಕಣ್ರಯ್ಯ ಎಂದಿರಬೇಕು.
*****
೨೦೦೨ ನೇ ಇಸವಿಯಲ್ಲಿ ’ಮಹಾವೀರರ ೨೦೦೦ವರ್ಷದ ಜನ್ಮ ಕಲ್ಯಾಣ ಮಹೋತ್ಸವ’ ವೆಂದು ಘೋಷಿಸಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಂತೆ ಮೈಸೂರಿನ ರಂಗಾಯಣ ಆ ವರ್ಷ ಅಹಿಂಸೆಯನ್ನು ಪ್ರತಿಪಾದಿಸುವ ನಾಟಕವೊಂದನ್ನು ಆರಿಸಿಕೊಂಡು ಅದನ್ನು ಎರಡು ಬೇರೆ ಬೇರೆ ತಂಡಗಳಿಂದ ಸಿದ್ಧ ಪಡಿಸಿ ಅನೇಕ ಕಡೆಗಳಲ್ಲಿ ಪ್ರದರ್ಶನ ಮಾಡುವ ಯೋಜನೆ ಮಾಡಿಕೊಂಡಿತ್ತು. ಎರಡು ಹವ್ಯಾಸಿ ತಂಡಗಳಲ್ಲಿ ಒಂದನ್ನು ಚಾಮರಾಜನಗರದಲ್ಲಿ ಅವರು ಈಗಾಗಲೇ ಆರಿಸಿದ್ದರು. ಇನ್ನೊಂದು ತಂಡವನ್ನಾಗಿ ನಮ್ಮನ್ನು ಆಯ್ಕೆಮಾಡಿದ್ದರು.
ನಾಟಕದ ನಿರ್ದೇಶಕರು ಮತ್ತು ಇನ್ನಿತರ ತಾಂತ್ರಿಕ ವರ್ಗವನ್ನು ರಂಗಾಯಣ ಕಳುಹಿಸಿಕೊಡಲಿತ್ತು. ಈ ಕಾರ್ಯಕ್ರಮಕ್ಕಾಗಿಯೇ ರಂಗಾಯಣದ ರಾಮನಾಥ್- ’ಅರಹಂತ’ ಎನ್ನುವ ನಾಟಕವನ್ನು ಬರೆದಿದ್ದರು. ಹುಲುಗಪ್ಪ ಕಟ್ಟೀಮನಿಯವರು ನಿರ್ದೇಶಕರಾಗಿ ನಮ್ಮಲ್ಲಿಗೆ ಬಂದರು. ಕಾರ್ಯಕ್ರಮದಲ್ಲಿನ ಒಪ್ಪಂದದಂತೆ ನಾವು ನಾಟಕವನ್ನು ಬೇರೆ ಬೇರೆ ಕಡೆಗಳಲ್ಲಿ ಕನಿಷ್ಠ ಎಂಟು ಪ್ರದರ್ಶನಗಳನ್ನು ಮಾಡಬೇಕಿತ್ತು. ನಮ್ಮಲ್ಲೂ ರಂಗ ಶಿಬಿರಗಳಾಗದೆ ಸ್ವಲ್ಪ ಸಮಯವಾಗಿತ್ತು. ಹೊಸಬರಿಗೆ ತರಬೇತಿಯ ಅಗತ್ಯವಿತ್ತು.
ಸುಮಾರು ಒಂದು ತಿಂಗಳ ತರಬೇತಿಯ ನಂತರ ಅರಹಂತ ಪ್ರದರ್ಶನಕ್ಕೆ ಸಿದ್ಧವಾಯಿತು. ಈ ನಾಟಕವನ್ನು ಹಾಸನಜಿಲ್ಲೆಯೊಳಗಲ್ಲದೆ, ಮೈಸೂರು, ಬೆಂಗಳೂರು, ಹೂವಿನಹಡಗಲಿ, ಮುಂತಾದ ಕಡೆಗಳಲ್ಲೂ ಪ್ರದರ್ಶಿಸಿದೆವು. ಈ ನಾಟಕಕ್ಕೆ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಬಂತು. ಮೂಡಿಗೆರೆಯಲ್ಲೂ ಈ ನಾಟಕದ ಪ್ರದರ್ಶನವಾಯಿತು. ಮೂಡಿಗೆರೆಯ ನೇಚರ್ ಕ್ಲಬ್‌ನ ಧನಂಜಯ ಮತ್ತು ಗೆಳೆಯರು ನಾಟಕ ಪ್ರದರ್ಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಾಟಕ ನೋಡಲು ತೇಜಸ್ವಿಯವರೂ ಬಂದಿದ್ದರು. ನಾಟಕ ಮುಗಿದನಂತರ ಮಾತನಾಡುತ್ತಾ, ನಾಟಕದ ಅಭಿನಯವೇನೋ ಚೆನ್ನಾಗಿತ್ತು ಎಂದು, "ಅಲ್ಲ ಕಣ್ರಯ್ಯ ಎಲ್ಲಾ ವಿಚಾರವನ್ನೂ ಚರಿತ್ರೆಯ ಘಟನೆಗಳ ಮೂಲಕವೇ ಹೇಳ್ಬೇಕು ಅನ್ನೋ ಹುಚ್ಚು ನಿಮಗೆ-ನಾಟಕದವ್ರಿಗೆ ಈ ಹುಚ್ಚು ಯಾವಾಗ ಬಿಡುತ್ತೋ ಗೊತ್ತಿಲ್ಲ ಎಂದು ಛೇಡಿಸಿದರು.
ನಮ್ಮ ರಂಗ ಚಟುವಟಿಕೆಗಳ ಬೆಳ್ಳಿಹಬ್ಬದ ಸಮಯದಲ್ಲಿ ನಾಟಕೋತ್ಸವ ಏರ್ಪಡಿಸಿದ್ದೆವು. ನಾಲ್ಕು ದಿನಗಳಕಾಲ ನಮ್ಮ ತಂಡದ ಮಕ್ಕಳ-ದೊಡ್ಡವರ ನಾಟಕಗಳಲ್ಲದೆ, ಮುದ್ರಾಡಿ, ಬೆಂಗಳೂರು(ಪ್ರಯೋಗರಂಗ) ತಂಡಗಳ ನಾಟಕವೂ ನಮ್ಮಲ್ಲಿ ಪ್ರದರ್ಶಿತವಾಯಿತು. ಆಗ ತೇಜಸ್ವಿಯವರನ್ನು ಆಹ್ವಾನಿದ್ದೆವು. ಆದರೆ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ನಂತರ ನಮ್ಮೂರಲ್ಲಿ ರಂಗ ಮಂದಿರ ಕಟ್ಟಬೇಕೆನ್ನುವವವರ ಸಂಖ್ಯೆ ಹೆಚ್ಚಾಗಿ ಅದರ ಕೆಲಸವನ್ನು ಪ್ರಾರಂಭಿಸಿದೆವು. ಆ ಸಮಯದಲ್ಲಿ ಒಮ್ಮೆ ಮೂಡಿಗೆರೆಯಲ್ಲಿ ತೇಜಸ್ವಿಯವರನ್ನು ಭೇಟಿಯಾದಾಗ ನಮ್ಮಲ್ಲಿ ರಂಗ ಮಂದಿರವನ್ನು ಕಟ್ಟುವ ವಿಚಾರವನ್ನು ತಿಳಿಸಿದೆವು. ಅದಕ್ಕವರು "ಸೆಕೆಂಡ್ ಲೈನ್ ಲೀಡರ್‌ಶಿಪ್ ಇದಿಯೇನ್ರಯ್ಯ ನಿಮ್ಮೂರಲ್ಲಿ, ನಿಮ್ಮ ನಂತರ ಅದು ಹಾಳು ಬೀಳೋ ಹಂಗಿದ್ರೆ ಮಾಡ್ಬೇಡಿ. ಎಷ್ಟೋ ಕಡೆಗಳಲ್ಲಿ ಹಂಗೇ ಆಗಿದೆ. ಅದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ಬೇಕು. ಆ ನೀನಾಸಂನವರನ್ನು ನೋಡು, ಆ ಥರ ಮುಂದುವರ‍್ಸಿಕೊಂಡು ಹೋಗೋಕೆ ಏನಾದ್ರು ವ್ಯವಸ್ಥೆ ಇರ‍್ಬೇಕು" ಎಂದರು.
*****
೨೦೦೪ ನೇ ಇಸವಿಯ ವೇಳೆಗೆ ಮಲೆನಾಡಿನ ಕಾಫಿವಲಯ ತತ್ತರಿಸಿಹೋಗಿತ್ತು. ಒಂದು ಕಡೆ ಅನೇಕ ವರ್ಷಗಳಿಂದ ಇದ್ದ ಕಾಫೀಬೋರ್ಡಿನ ಏಕಸ್ವಾಮ್ಯದಿಂದ ಕಳಚಿಕೊಂಡು ಮುಕ್ತವಾದ ಕಾಫಿ ಉದ್ಯಮ, ಸ್ವಾತಂತ್ರ್ಯ ದೊರೆತ ಹುಮ್ಮಸ್ಸಿನಲ್ಲಿದ್ದರೆ, ಇನ್ನೊಂದು ಕಡೆ ಕಾಫಿಗೆ ದೊರೆತ-ಅದುವರೆಗೆ ಯಾರೂ ಕನಸಿನಲ್ಲೂ ಊಹಿಸದಿದ್ದಂತಹ ಹೆಚ್ಚಿನ ಬೆಲೆ ದಿಢೀರನೆ ಕುಸಿದು ನೆಲಕಚ್ಚಿತ್ತು. ಅದರೊಂದಿಗೆ ಕಳೆದೆರಡು ವರ್ಷಗಳಿಂದ ಮಳೆಯೂ ಅತ್ಯಂತ ಕಡಿಮೆಯಾಗಿ ನೀರಿನಮೂಲಗಳೆಲ್ಲ ಒಣಗಿಹೋಗಿ ಕಾಫಿತೋಟಗಳೆಲ್ಲ ನಾಶವಾಗುವ ಸ್ಥಿತಿಗೆ ಬಂದಿದ್ದವು. ಪ್ರಥಮಬಾರಿಗೆ ಕಾಫಿತೋಟಗಳ ಮಾಲೀಕರು ಮತ್ತು ಕಾರ್ಮಿಕರು ಒಟ್ಟಾಗಿ ತಮ್ಮ ಉಳಿವಿಗಾಗಿ ಹೋರಾಡಲು ಬೀದಿಗಿಳಿದಿದ್ದರು.
ಬೆಂಗಳೂರು ದೂರದರ್ಶನದಿಂದ ಗೆಳೆಯ ಸುಬ್ಬುಹೊಲೆಯಾರ್ ಫೋನ್ ಮಾಡಿದರು "ಕಾಫಿ ಉದ್ಯಮದ ಸಮಸ್ಯೆಗಳ ಬಗ್ಗೆ ದೂರದರ್ಶನದಲ್ಲಿ ಒಂದು ಕಾರ್ಯಕ್ರಮ ಮಾಡೋಣ. ಕಾಫೀ ಬೆಳೆಗಾರರ, ತೋಟಕಾರ್ಮಿಕರ, ವ್ಯಾಪಾರಿಗಳ ಹೀಗೆ ಕಾಫಿ ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲರ ಸಂದರ್ಶನಗಳೂ ಇರಲಿ, ಜನರ ಆಯ್ಕೆ ಮತ್ತು ಸಂದರ್ಶನಗಳ ಜವಾಬ್ದಾರಿ ನಿಮ್ಮದು" ಎಂದು ಎಲ್ಲವನ್ನೂ ನನ್ನ ತಲೆಗೆ ಕಟ್ಟಿದರು.
ಸಾಧ್ಯವಿದ್ದರೆ ತೇಜಸ್ವಿಯವರ ಸಂದರ್ಶನ ಮಾಡಬೇಕೆಂದು ಆಗಲೇ ಅಂದುಕೊಂಡೆ. (ಅವರು ಕೂಡಾ ಕಾಫಿ ಬೆಳೆಗಾರರೇ). ದೂರದರ್ಶನದ ಕ್ಯಾಮರಾ ತಂಡ ನಮ್ಮೂರಿಗೆ ಬಂದಿಳಿಯಿತು. ಮೊದಲನೇ ದಿನ ಸಕಲೇಶಪುರದ ಸುತ್ತಮುತ್ತ ಬೆಳೆಗಾರರಿಂದ ಹಿಡಿದು ಕೂಲಿ ಕಾರ್ಮಿಕರತನಕ, ಕಾಫಿಕೃಷಿ ಮತ್ತು ಉಧ್ಯಮಕ್ಕೆ ಸಂಬಂಧಿಸಿದ ಅನೇಕರ ಸಂದರ್ಶನ ಮಾಡಿದೆವು. ಮಾರನೇ ದಿನ ಬೆಳಗ್ಗೆ ತೇಜಸ್ವಿಯವರನ್ನು ಕಾಣಲು ಹೋಗುವ ಯೋಜನೆಯಿತ್ತು. ಫೋನ್ ಮಾಡಿ ತೇಜಸ್ವಿಯವರ ಸಂದರ್ಶನಕ್ಕೆ ಅನುಮತಿಯನ್ನು ಪಡೆದುಕೊಳ್ಳಲು ನಮಗೆ ಕೆಲವರು ಸಲಹೆ ನೀಡಿದರು. ಆದರೆ ಅವರ ಸ್ವಭಾವದ ಸ್ವಲ್ಪ ಪರಿಚಯವಿದ್ದ ನಾನು, ಫೋನ್ ಮಾಡಿ ಅವರಿಗೆ ತಿಳಿಸುವುದು ಬೇಡವೆಂದು ವಾದ ಮಾಡಿದೆ.
ನಾವೇನಾದರೂ ಪೋನ್ ಮಾಡಿದಾಗ ಅವರು ಸಂದರ್ಶನ ನೀಡಲು ನಿರಾಕರಿಸಿದ್ದರೆ ನಾವು ಅವರಲ್ಲಿಗೆ ಹೋಗುವ ಆಸೆಯನ್ನೇ ಕೈಬಿಡಬೇಕಾಗುತ್ತಿತ್ತು!. (ಅವರು ಯಾವುದೇ ಟಿ.ವಿ.ಗೆ ಸಂದರ್ಶನ ನೀಡದೇ ಕೆಲವು ವರ್ಷಗಳಾಗಿದ್ದವೆಂಬ ವಿಚಾರ ನನಗೆ ತಿಳಿದಿದ್ದುದರಿಂದ ಸಮ್ಮತಿಸುತ್ತಾರೋ ಇಲ್ಲೋ ಎಂಬ ಸಣ್ಣ ಅಳುಕಿತ್ತು)
ಮಾರನೇದಿನ ಬೆಳಗ್ಗೆ, ನಮ್ಮ ತಂಡ ನೇರವಾಗಿ ತೇಜಸ್ವಿಯವರ ಮನೆಗೆ ಹೋಯಿತು. ಉಳಿದವರನ್ನೆಲ್ಲ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಾನೊಬ್ಬನೇ ಅವರ ಮನೆಗೆ ಹೋದೆ. ರಾಜೇಶ್ವರಿಯವರು ಮನೆಯಲ್ಲಿದ್ದರು. ಅವರಿಗೆ ನಾವು ಬಂದ ಉದ್ದೇಶವನ್ನು ತಿಳಿಸಿದೆ. ಅದಕ್ಕವರು "ನೀವೇ ಹೋಗಿ ಕೇಳಿ, ತೋಟದಲ್ಲಿ ಏನೋ ಕೆಲಸ ಮಾಡುತ್ತಿದ್ದಾರೆ" ಎಂದರು.
ತೋಟದಲ್ಲಿ ತೇಜಸ್ವಿಯವರು ಸಣ್ಣ ಕವಲಿಯೊಂದರಲ್ಲಿ ಇಳಿದು ನಿಂತಿದ್ದರು. ಜೊತೆಯಲ್ಲಿ ಒಬ್ಬ ಗಾರೆಯವನಿದ್ದ. ಕವಲಿಯಲ್ಲಿ ನೀರು ಸಣ್ಣದಾಗಿ ಹರಿಯುತ್ತಿತ್ತು. ಅವರಿಬ್ಬರೂ ಸೇರಿ ಕವಲಿಗೆ ಕಟ್ಟುಹಾಕಿ ನೀರುನಿಲ್ಲಿಸುವ ಪ್ರಯತ್ನದಲ್ಲಿದ್ದರು.
"ನಮಸ್ಕಾರ ಸಾರ್ ಎಂದೆ. ಅಲ್ಲಿಂದಲೇ ತಲೆಯೆತ್ತಿನೋಡಿ
"ಓಹೋ ಬಾರಯ್ಯ, ನೋಡು ನಮ್ಮ ಮೂಡಿಗೆರೆಲೂ ನೀರಿಗೆ ಈ ಗತಿ ಬಂತು. ಇದನ್ನೇ ಕಟ್ಟಿನಿಲ್ಸೋಕೆ ಒದ್ದಾಡ್ತಾ ಇದ್ದೀನಿ. ಬಾ ಅಂತ ಹೇಳಿಕಳ್ಸಿದ್ರೆ, ಈ ಗಾರೆಯವ್ನು ಹದಿನೈದು ದಿನ ತಡಮಾಡ್ದ, ಅಷ್ಟರಲ್ಲಿ ನೀರೇ ಅರ್ಧ ಕಮ್ಮಿಯಾಗಿಹೋಯ್ತು" ಎಂದರು. ಅದಕ್ಕೆ ಗಾರೆಯವನು "ಅವತ್ತು ನೀರು ಜಾಸ್ತಿ ಇತ್ತು ಕಟ್ಟಂಗಿರ‍್ಲಿಲ್ಲಎಂದು ತನ್ನನ್ನು ಸಮರ್ಥಿಸಿಕೊಂಡ.
ನಾವು ಕಳೆದ ವರ್ಷ ’ಶ್ರೀ ಪಡ್ರೆ ಯವರನ್ನು ಕರೆಸಿ ಹಾನಬಾಳು, ಸಕಲೇಶಪುರ, ಬೆಳ್ಳೇಕೆರೆಗಳಲ್ಲಿ ನೀರಿಂಗಿಸುವ ಬಗ್ಗೆ ಜಾಗ್ರತಿ ಮೂಡಿಸುವ ಒಂದು ಕಾರ್ಯಕ್ರಮ ಮಾಡಿದ್ದೆವೆಂದೂ, ಅದರಿಂದ ಈಗ ಕೆಲವರು ತಮ್ಮ ಜಮೀನಿನಲ್ಲಿ ನೀರಿಂಗಿಸುವ ಕೆಲಸ ಮಾಡುತ್ತಿದ್ದಾರೆಂದೂ, ನಾನೂ ನಮ್ಮ ತೋಟದಲ್ಲಿ ನೀರಿಂಗಿಸಲು ಪ್ರಾರಂಭಮಾಡಿ ನನಗೆ ಸ್ವಲ್ಪ ಅನುಕೂಲವಾಗಿದೆಯೆಂದೂ ಹೇಳಿದೆ.
" ಈ ನಮ್ಮ ಮೂಡಿಗೆರೆಲೂ ಅಂಥಾದ್ದೇನಾದ್ರೂ ಮಾಡ್ಬೇಕಪ್ಪಎಂದರು.
"ಸಾರ್ ಇಲ್ಲೂ ಒಂದು ಕಾರ್ಯಕ್ರಮ ಮಾಡೋಣ ಜನರಿಗೆ ಸ್ವಲ್ಪ ಮಾಹಿತಿನಾದ್ರೂ ಸಿಗುತ್ತೆ"ಎಂದೆ.
"ಯಾರಿಗೆ ಹೇಳೋದು, ನಂಗಂತೂ ಸಾಕಾಗಿಹೋಗಿದೆ ಕಣಯ್ಯ, ಬಾ ಒಂದು ಕಾಫಿ ಕುಡ್ದು ಬರೋಣ" ಎಂದು ಕವಲಿಯಿಂದ ಮೇಲೆಹತ್ತಿ ಮನೆಯ ಕಡೆ ಹೊರಟರು.
ನಾವು ಮನೆಯತ್ತ ತಿರುಗುತ್ತಿದ್ದಂತೆ "ನಂಗೆ ಇಲ್ಲೇ ಕಳ್ಸ್‌ಬುಡಿ ಕಾಫಿ ಕವಲಿಯಿಂದ ಧ್ವನಿ ಕೇಳಿಬಂತು. ಪಕ್ಕನೆ ತೇಜಸ್ವಿಯವರ ಗೆಳೆಯ ರಾಮದಾಸರ ಧ್ವನಿಯಂತಿತ್ತು. ಮತ್ತೊಮ್ಮೆ ಹೊರಳಿ ಯಾರೆಂದು ನೋಡಿದೆ. ಇಲ್ಲ, ಹಾಗೆಂದವನು ಗಾರೆಯವನೇ!.
"ಸರಿ ಹಾಗಾದ್ರೆ ನೀನಿಲ್ಲೇ ಇರ‍್ತೀಯ?" ಎಂದು ಗಾರೆಯವನಿಗೆ ಹೇಳಿ ತೇಜಸ್ವಿ ಮನೆಯತ್ತ ಹೆಜ್ಜೆ ಹಾಕಿದರು. ನಾನು ಹಿಂಬಾಲಿಸಿದೆ. ಮಾತು ಕಾಫಿಯತ್ತ ತಿರುಗಿದ್ದರಿಂದ, ಇದೇ ತಕ್ಕ ಸಮಯವೆಂದುಕೊಂಡು "ಕಾಫಿ ಸಮಸ್ಯೆಯ ಬಗ್ಗೆ ದೂರದರ್ಶನಕ್ಕೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ. ಅದಕ್ಕೆ ಸಂಬಂಧಪಟ್ಟಂತೆ ಹಲವರ ಸಂದರ್ಶನ ಮಾಡಿದ್ದೀವಿ ಈಗ ನಿಮ್ದೊಂದು ಸಂದರ್ಶನ ಬೇಕಿತ್ತು" ಎಂದೆ.
"ನನಗೆ ಅದಕ್ಕೆಲ್ಲ ಬರೋಕಾಗಲ್ಲ ಕಣಯ್ಯ, ಪುರುಸೊತ್ತಿಲ್ಲಎಂದರು.
"ನೀವು ಬರ‍್ಬೇಡಿ ಸಾರ್ ಇಲ್ಲೇ ಮಾಡೋಣ"
"ಎಂದೋ ಮಾರಾಯ"
"ಇವತ್ತೇ ಸಾರ್ ಈಗಲೇ"
"ಎಲ್ಲಿದ್ದಾರೆ ಅವರೆಲ್ಲ ಸಂಚಿನ ವಾಸನೆ ಹಿಡಿದವರಂತೆ ಕೇಳಿದರು.
"ಇಲ್ಲೇ ಮೇಲೆ ಕಾಯ್ತಾ ಇದ್ದಾರೆ" ಕದ್ದು ದಕ್ಕಿಸಿಕೊಂಡವನಂತೆ ಹೇಳಿದೆ!
"ನೀವೆಲ್ಲ ಒಳ್ಳೆ ಕಿರಾತಕರು-ಕರಿ ಅವರನ್ನೂ ಕಾಫಿಗೆ!"
ಎಲ್ಲರನ್ನೂ ಮನೆಗೆ ಕರೆದು ಕಾಫಿ ಸಮಾರಾಧನೆ ಆಯಿತು. ಆಮೇಲೆ ದೂರದರ್ಶನದವರ ಕ್ಯಾಮರಾ, ಕ್ಯಾಮರಾ ಸ್ಟಾಂಡ್, ಇತ್ಯಾದಿಗಳ ಬೆಲೆ ಅದರ ಸೂಕ್ಷ್ಮತೆ ಇವುಗಳನ್ನೆಲ್ಲ ವಿವರವಾಗಿ ಕೇಳಿ ತಿಳಿದುಕೊಂಡರು. ಎಲ್ಲವನ್ನೂ ನೋಡಿ "ಈ ಕ್ಯಾಮರಾ ಇರ‍್ಲಿ ಅದರ ಸ್ಟಾಂಡನ್ನು ಕೊಳ್ಳೋಕ್ಕಗಾಲ್ಲ ಎಂದವರೇ "ನಂಗಂತೂ ನಿಮ್ಮ ದೂರದರ್ಶನ ಒಂಚೂರೂ ಇಷ್ಟ ಇಲ್ಲ. ಇಷ್ಟೊಳ್ಳೆ ಕ್ಯಾಮರ ಇಟ್ಕೊಂಡಿದ್ದೀರ ಟಿ.ವಿ.ಲಿ ಚಿತ್ರ ನೋಡಿದ್ರೆ ಸರಿಯಾಗಿ ಬರೋದೆ ಇಲ್ಲಎಂದರು.
ಆ ಮೇಲೆ ಅವರ ತೋಟದ ಮಧ್ಯದಲ್ಲೇ ನಿಂತು, ಸಂದರ್ಶನವೂ ನಡೆಯಿತು. ತೇಜಸ್ವಿ ಕಾಫಿ ಬೆಳೆಗಾರರ ಬಗ್ಗೆ ಮಾತನಾಡುತ್ತಾ ’ನಾವು ಕಳೆದ ನಲುವತ್ತು ವರ್ಷಗಳಿಂದ ಕಾಫಿ ಮಾರಾಟದ ಸಂಪೂರ್ಣ ಜವಾಬ್ದಾರಿಯನ್ನು ಕಾಫಿಬೋರ್ಡನ ಕೈಗೊಪ್ಪಿಸಿ ಕುಳಿತುಬಿಟ್ಟಿದ್ದೆವು. ಕಾಫಿಗೆ ತಕ್ಕಮಟ್ಟಿನ ಒಳ್ಳೆಯಬೆಲೆ ದೊರಕುತ್ತಿದ್ದುದರಿಂದ ಈ ಸ್ಥಿತಿ ಶಾಶ್ವತ ಎಂಬಂತೆ ನಿರಾಳವಾಗಿದ್ದೆವು. ಈಗ ನಮ್ಮ ಉತ್ಪನ್ನದ ಮಾರಾಟದ ಜವಾಬ್ದಾರಿಯನ್ನು ಸಮರ್ಥವಾಗಿ ನಾವೇ ನಿರ್ವಹಿಸಲು ಕಲಿಯಬೇಕಾಗಿದೆ.’ ಕೃಷಿಯಲ್ಲಿನ ಅನಿಶ್ಚಿತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅದಕ್ಕೆ ಹೊಂದಿಕೊಂಡು ಬದುಕಲು ಅಗತ್ಯವಾದ ಆರ್ಥಿಕ ಶಿಸ್ತನ್ನು ಕಲಿಯುವ ಬಗ್ಗೆ ಮಾತ್ರವಲ್ಲ ಸಮಗ್ರವಾಗಿ ರೈತರ ಬಗ್ಗೆ, ಅದರಲ್ಲೂ ಕಾಫಿ ಬೆಳೆಗಾರರಿಗಿಂತಲೂ ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಬದುಕುವ-ಹಣ್ಣು ತರಕಾರಿ ಬೆಳೆಯುವ ರೈತರ ಬಗ್ಗೆಯೂ ಮಾತನಾಡಿದರು. ಆ ರೈತರಿಗೆ ಹೋಲಿಸಿದರೆ ಕಾಫಿ ಬೆಳೆಗಾರರ ಸ್ಥಿತಿ ಅವರಷ್ಟು ಚಿಂತಾಜನಕವಲ್ಲವೆಂದು ನನ್ನ ಅಭಿಪ್ರಾಯ ಎಂದರು. ನಂತರ "ಯಾವ ಸರ್ಕಾರನೂ ರೈತನ ನೆರವಿಗೆ ಬರೋದಿಲ್ಲ, ಹೆಚ್ಚೆಂದರೆ ಸಾಲ ವಸೂಲಿಯನ್ನು ಮುಂದೂಡೋದೋ ಇಲ್ಲಾ ಬಡ್ಡಿ ಒಂದ್ಸೊಲ್ಪ ಕಡಿಮೆ ಮಾಡೋದೋ ಇಂಥಾ ಸಣ್ಣಪುಟ್ಟ ರಿಯಾಯಿತಿ ಕೊಡಬಹುದಷ್ಟೆ ನಮ್ಮನ್ನು ನಾವೇ ನೋಡಿಕೊಳ್ಳಲು ಕಲೀಬೇಕು" ಎಂದರು. ಇವೆಲ್ಲ ದೂರದರ್ಶನದಲ್ಲಿ ಪ್ರಸಾರವೂ ಆಯಿತು.
ಕಾರ್ಯಕ್ರಮವನ್ನು ಟಿ.ವಿ.ಯಲ್ಲಿ ನೋಡಿದ ಕೆಲವರು ಕಾಫಿ ಬೆಳೆಗಾರರು, ನನ್ನಲ್ಲಿ "ನೀನು ನಮ್ಮೆಲ್ಲರ ಸಂದರ್ಶನ ಮಾಡಬೇಕಿತ್ತು. ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿಯವರನ್ನು ಸಂದರ್ಶನ ಮಾಡಿದ್ದೀಯ ಅವರು ನಮ್ಮ ವಿರುದ್ದವೇ ಮಾತಾಡಿದರು" ಎಂದು ಜಗಳಕ್ಕೆ ಬಂದರು! ಅವರೆಲ್ಲರಿಗೆ ನಿಜವನ್ನು ಒಪ್ಪಿಕೊಳ್ಳುವುದು ಕಷ್ಟವಾಗಿ ಕಂಡಿರಬೇಕು.
*****
ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಉದ್ಘಾಟನಾ ಸಮಾರಂಭಕ್ಕೆಂದು ಕುವೆಂಪು ಅವರ ನಾಟಕವೊಂದನ್ನು ಪ್ರದರ್ಶಿಸಲು ನಮ್ಮ ರಂಗತಂಡಕ್ಕೆ ಆಹ್ವಾನ ನೀಡಿತ್ತು. ಕುವೆಂಪು ಅವರ ಸಣ್ಣ ಕಥೆ ’ಧನ್ವಂತರಿಯಚಿಕಿತ್ಸೆಯನ್ನು ರಂಗಕ್ಕೆ ಆಳವಡಿಸಿ ನಾಟಕವೊಂದನ್ನು ಸಿದ್ಧಪಡಿಸಿಕೊಂಡಿದ್ದೆವು. ನಾಟಕದಲ್ಲಿ ಕುವೆಂಪು ಅವರೇ ಒಂದು ಪಾತ್ರವಾಗಿ ಬರುವಂತೆ, ಆ ಮೂಲಕ ಕುವೆಂಪು ಅವರ ವಿಚಾರಗಳು ಮತ್ತು ಕಾಳಜಿಗಳು ಸ್ವಲ್ಪಮಟ್ಟಿಗೆ ನಾಟಕದಲ್ಲಿ ಚರ್ಚಿತವಾಗುವಂತೆ ರಂಗಪಠ್ಯವೊಂದನ್ನು ತಯಾರಿಸಲಾಗಿತ್ತು. ಆ ಸಂದರ್ಭದಲ್ಲೇ ಒಮ್ಮೆ ಮೂಡಿಗೆರೆಗೆ ಹೋದಾಗ, ತೇಜಸ್ವಿಯವರನ್ನು ಕಂಡು ನಾಟಕದ ವಿಚಾರವನ್ನೂ, ಹಾಗೇ ತಾಲೀಮಿನ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ತೋರಿಸಿದೆ. ’ಧನ್ವಂತರಿಯಚಿಕಿತ್ಸೆಗೆ ಕುವೆಂಪು ಪಾತ್ರ ಅಗತ್ಯ ಇತ್ತೇನ್ರಿ? ಎಂದರು.
ಸಾಧ್ಯವಾದರೆ ಮೂಡಿಗೆರೆಯಲ್ಲಿ ಒಂದು ಪ್ರದರ್ಶನ ಮಾಡಬೇಕೆಂದಿದ್ದೇವೆ. ಆಗ ತಿಳಿಸುತ್ತೇನೆ ಬನ್ನಿ ಎಂದೆ.. ಕೆಲವು ದಿನಗಳ ನಂತರ ಮೂಡಿಗೆರೆಯ ನೇಚರ್ ಕ್ಲಬ್‌ನವರು ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರು. ಆಗಲೇ ಈ ನಾಟಕ ಒಂದೆರಡು ಕಡೆ ಪ್ರದರ್ಶನಗಳಾಗಿತ್ತು. ಪ್ರದರ್ಶನಕ್ಕೆ ತೇಜಸ್ವಿಯವರು ಬಂದಿದ್ದರು. ಅಂದು ಪ್ರದರ್ಶನ ಅನೇಕ ಕಾರಣಗಳಿಂದ ಚೆನ್ನಾಗಿರಲಿಲ್ಲ.
ಕೆಲವು ದಿನಗಳನಂತರ ಅವರನ್ನು ಭೇಟಿಯಾದಾಗ ಸ್ವಲ್ಪ ಆಳುಕುತ್ತಲೇ ನಾಟಕದ ಬಗ್ಗೆ ಕೇಳಿದೆ. "ಯಾಕೆ ಏನಾಯ್ತು ನಿಮಗೆ ಅವತ್ತು" ಎಂದರು. ಅಂದು ಬಾಡಿಗೆಗೆ ತಂದಿದ್ದ ಜನರೇಟರ್‌ನ ತೊಂದರೆಯಿಂದಾಗಿ ನಮ್ಮ ಡಿಮ್ಮರ್ ಒಂದು ಸುಟ್ಟು ಹೋಯಿತು, ಧ್ವನಿ ವ್ಯವಸ್ಥೆಯೂ ಹಾಳಾಯಿತು. ಜೊತೆಗೆ ಒಂದಿಬ್ಬರು ನಟರೂ ಬದಲಿಯಿದ್ದರು ಎಂದು ವಿವರಿಸಿದೆ. "ಅವೆಲ್ಲ ಸಬೂಬು ಕಣ್ರಿ ಜನರ ಮುಂದೆ ಬರಬೇಕಾದ್ರೆ ಎಲ್ಲ ಸಿದ್ಧತೆ ಮಾಡಿಕೊಂಡೇ ಬರಬೇಕು, ಏನನ್ನಾದರೂ ಬರೀಬೇಕಾದ್ರೂ ಅಷ್ಟೇ, ಸರಿಯಾಗಿ ಯೋಚ್ನೆಮಾಡಿ ಕೂತ್ಕೊಂಡು ಬರೀಬೇಕು, ಅರೆಬರೆ ಕೆಲಸ ನಡಿಯೋಲ್ಲ ಎಂದರು.
"ಹೋರಾಟಗಳಂತೇ ನಮಗೆ ಇದೊಂದು ತರಾ ಅಭ್ಯಾಸ ಆಗ್ಬಿಟ್ಟಿದೆ ಸಾರ್, ಮಧ್ಯದಲ್ಲಿ ಯಾರೋ ಕೈಕೊಡೋದು, ಇನ್ನೇನೋ ತೊಂದ್ರೆ ಆಗೋದು, ಹೀಗೆ ಮುಂದುವರಿತಾ ಇದ್ದೀವಿ" ಎಂದೆ.
"ಅದ್ಕೇ ಕಣ್ರಿ ನನಗೆ ಜನರ ಗುಂಪು ಕಟ್ಟಿಕೊಂಡು ಮಾಡೋಕೆಲಸನೇ ಬೇಡಾ ಅನ್ನಿಸಿಬಿಟ್ಟಿದೆ ಏನಿದ್ರೂ ನಾನೊಬ್ನೇ ಮಾಡ್ಬೇಕು ಅಷ್ಟೆ" (ಇದೇ ಮಾತನ್ನು ಬೇರೊಂದು ಸಂದರ್ಭದಲ್ಲಿ ಕವಿ ಸುಬ್ರಾಯ ಚೊಕ್ಕಾಡಿಯವರೂ ಹೇಳಿದ್ದರು)
"ಸಾರ್ ನಾಟಕದಲ್ಲಿನ ಕುವೆಂಪು ಪಾತ್ರ........." ರಾಗವೆಳೆದೆ
" ಹೇಗೂ ಮಾಡ್ತಾ ಇದ್ದೀರಲ, ಇರ‍್ಲಿ ಬಿಡಿ" ಎಂದರು.
"ಸಾರ್ ಆಕಡೆ ಬಂದಾಗ ನೋಡಿ ದಾರಿ ಪಕ್ಕದಲ್ಲೇ, ಕಾಣ್ಸುತ್ತೆ ಗುಡ್ದ ಮೇಲೆ ನಾವು ಕಟ್ತಾಇರೋ ರಂಗಮಂದಿರ" ಎಂದೆ.
"ತುಂಬಾ ಹೆವಿಯಾಗಿ ಮಾಡ್ಕೋಬೇಡಿ, ಕೆಲವು ಸಾರಿ ಕಾರ್ಯಕ್ರಮಗಳಿಗಿಂತ ಕಟ್ಟಡಗಳೇ ಭಾರವಾಗಿಬಿಡ್ತವೆ" ಎಂದು ಕಿವಿಮಾತು ಹೇಳಿದರು.
*****
ಹಾಸನದಿಂದ ಕೆಲವರು ಗೆಳೆಯರು ನಮ್ಮೂರಿನ ಪಕ್ಕದ ’ಮೂರುಕಣ್ಣುಗುಡ್ಡ’ದಲ್ಲಿ ಚಾರಣಕ್ಕೆಂದು ಬಂದಿದ್ದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ನೌಕರರರಿದ್ದುದರಿಂದ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಸಿಕೊಂಡು ಅವರು ಕಾರ್ಯಕ್ರಮ ಹಾಕಿಕೊಂಡಿದ್ದರು. ಚಾರಣ ಮುಗಿಸಿ ಭಾನುವಾರ ಮಧ್ಯಾಹ್ನ ನಮ್ಮೂರಿಗೆ ಬಂದರು. ಇನ್ನೂ ಅರ್ಧದಿನ ಸಮಯ ಉಳಿದಿರುವುದರಿಂದ ಮೂಡಿಗೆರೆಗೆ ಹೋಗಿ ತೇಜಸ್ವಿಯವರಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸುವ ಯೋಜನೆ ಹಾಕಿ ಜೊತೆಯಲ್ಲಿ ಬರುವಂತೆ ನನ್ನನ್ನು ಆಹ್ವಾನಿಸಿದರು. ನನಗೂ ಅಂದು ಬೇರೇನು ಕೆಲಸವಿಲ್ಲದ್ದರಿಂದ ಅವರೊಂದಿಗೆ ಹೊರಟೆ. ಅವರಲ್ಲಿ ಒಂದಿಬ್ಬರು ರೈತಸಂಘದ ಹಾಗೂ ಸಾಕ್ಷರತಾ ಆಂದೋಲನದ ಕಾಲದ ನನ್ನ ಮಿತ್ರರಿದ್ದುದೂ ಇದಕ್ಕೆ ಕಾರಣವಾಗಿತ್ತು.
ನಾವೆಲ್ಲರೂ ’ನಿರುತ್ತರ’ವನ್ನು ತಲಪುವಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆದರೆ ಅವರ ಹಲವು ವರ್ಷಗಳ ಸಂಗಾತಿಯಾಗಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ರಾಘವೇಂದ್ರ ಇದ್ದರು. ನಮ್ಮ ಗೆಳೆಯರು ಮನೆಯ ಸುತ್ತ ತಿರುಗಿ ಫೋಟೋಗಳನ್ನು ತೆಗೆದುಕೊಂಡು, ನಂತರ ಪುಸ್ತಕಗಳನ್ನು ನೋಡಿ ಹಲವು ಪುಸ್ತಕಗಳನ್ನು ಕೊಂಡುಕೊಂಡರು. ಆವೇಳೆಗೆ ಮೂಡಿಗೆರೆಗೆ ಹೋಗಿದ್ದ ತೇಜಸ್ವಿಯವರೂ ಮನೆಗೆ ಬಂದರು. ಆಗಷ್ಟೇ ಅವರ ತೆಗೆದ ಛಾಯಾಚಿತ್ರಗಳನ್ನು ಒಳಗೊಂಡ ಶುಭಾಶಯ ಪತ್ರಗಳು ಬಂದಿದ್ದವು. ಅವುಗಳನ್ನು ನೋಡಿ ಚೆನ್ನಾಗಿರುವ ಕೆಲವನ್ನು ಆರಿಸಿಕೊಡುವಂತೆ ಹಾಸನದ ಗೆಳೆಯರೊಬ್ಬರು ನನ್ನಲ್ಲಿ ಕೇಳಿದರು. ನಾನು ಆರಿಸತೊಡಗಿದೆ ಅಷ್ಟರಲ್ಲಿ ರಾಘವೇಂದ್ರ ಇನ್ನೊಂದಿಷ್ಟನ್ನು ತಂದುಕೊಟ್ಟರು. ಅದರಲ್ಲಿ ನಾನಾಬಗೆಯ ಹಕ್ಕಿಗಳ ಚಿತ್ರಗಳಿದ್ದವು. ಕೆಲವರಿಗೆ ಯಾವುದನ್ನು ಆರಿಸಿಕೊಳ್ಳುವುದೆಂದು ತಿಳಿಯದಾಯಿತು. ಆಗ ತೇಜಸ್ವಿ "ಅದು ಹಂಗೇ ಕಣ್ರೀ ಒಂದು ನೋಡುವಾಗ ಇನ್ನೊಂದು ಚೆನ್ನಾಗಿ ಕಾಣುತ್ತೆ ನಿಮಗೆ ಬೇಕಾದಷ್ಟು ಸುಮ್ನೆ ಆರಿಸಿಕೊಳ್ಬೇಕಷ್ಟೆ" ಎಂದರು.
ಎಲ್ಲರ ಪರಿಚಯ ಮಾಡಿಕೊಂಡ ನಂತರ ಮಾತು ಮತ್ತೊಮ್ಮೆ ರೈತ ಚಳವಳಿ, ಸಾಕ್ಷರತಾ ಆಂದೋಲನ, ಇವುಗಳತ್ತವೂ ಸಾಗಿತು. ಇವರೆಲ್ಲರೂ ಚಾರಣಕ್ಕೆ ಬಂದವರೆಂದು ತಿಳಿದಾಗ ನೀವು ಮೂರುಕಣ್ಣು ಗುಡ್ಡಕ್ಕಿಂತ ಇನ್ನೂ ಜೇನುಕಲ್ಲು ಗುಡ್ಡ, ಅಥವಾ ಚಾರ್ಮಾಡಿ ಇಲ್ಲವೇ ಕಬ್ಬಿನಾಲೆ -ಬಿಸಲೆ ಇಂಥ ಕಡೆ ಹೋಗ್ಬೇಕು, ಅಲ್ಲ ಮೂರುಕಣ್ಣು ಗುಡ್ಡಕ್ಕೆ ಹೋಗ್ಬಾರ‍್ದು ಅಂತೇನೂ ಅಲ್ಲ," ಎಂದರು.
ಆಗ ಹಾಸನದವರೊಬ್ಬರು "ಸಾರ್ ಅಲ್ಲಿಗೇ ಹೋಗ್ಬೋದಾಗಿತ್ತು (ನನ್ನನ್ನು ತೋರಿಸಿ) ಇವ್ರಜೊತೇಲಿ ಹೋದ್ರೆ ನಮ್ಮನ್ನ ನಕ್ಸಲೈಟರು ಅಂದ್ಕೊಂಡಬಿಟ್ಟಾರು ಅಂತ ನಾವು ಅಲ್ಲಿಗೆಲ್ಲ ಹೋಗಲಿಲ್ಲ ಎಂದರು. ಉಳಿದವರೆಲ್ಲ ಜೋರಾಗಿ ನಕ್ಕರು. ತೇಜಸ್ವಿ ನಗಲಿಲ್ಲ.
ಆ ಸಮಯದಲ್ಲಿ ಪ್ರತಿದಿನವೆಂಬಂತೆ ಪತ್ರಿಕೆಗಳಲ್ಲಿ ನಕ್ಸಲೀಯರ ಚಟುವಟಿಕೆಗಳು ವರದಿಯಾಗುತ್ತಿದ್ದವು. ಒಂದೆರಡು ಎನ್‌ಕೌಂಟರುಗಳೂ ಆಗಿದ್ದವು. ತೀರ್ಥಹಳ್ಳಿ, ಉಡುಪಿ, ಮೂಡಿಗೆರೆಯ ಕೆಲವು ಭಾಗಗಳಲ್ಲಿ ಅವರ ಚಟುವಟಿಕೆ ವಿಸ್ತರಿಸಿದೆಯೆಂದು ಆ ವರದಿಗಳು ತಿಳಿಸಿದ್ದವು.
ಅಷ್ಟರಲ್ಲಿ ಹಳೆಯ ರೈತ ಸಂಗಾತಿಗಳೊಬ್ಬರು "ಇವತ್ತಿನ ಪರಿಸ್ಥಿತಿ ನೋಡಿದ್ರೆ ಅವ್ರು ಮಾಡೋದೇ ಸರಿ ಅನ್ಸುತ್ತೆ, ಬೇರೆ ದಾರೀಲಿ ಈ ಸರ್ಕಾರಗಳನ್ನ ಎಚ್ಚರಿಸೋಕೇ ಆಗೋಲ್ವೇನೋ" ಎಂದರು.
ಆ ಮಾತಿನಿಂದ ತೇಜಸ್ವಿಯವರು ಸ್ವಲ್ಪ ಸಿಟ್ಟಿಗೆದ್ದಂತೆ ಕಂಡರು. "ರೀ ನಾವೆಲ್ಲ ಸ್ವಲ್ಪ ಜವಾಬ್ದಾರಿಯಿಂದ ಮಾತಾಡ್ಬೇಕ್ರಿ, ಅಲ್ಲಾ ಬೇರೆ ದಾರೀನೇ ಇಲ್ಲಾ ಅಂದರೆ ಏನಾದ್ರೂ ದಾರಿ ಕಂಡ್ಕೋಬೇಕಪ್ಪ, ಈತರ ಹೇಳಿ ಹೇಳಿ ಪಾಪ ಆ ಸಣ್ಣವಯಸ್ಸಿನ ಹುಡುಗ್ರು ಅಲ್ಲಿ ಕಾಡಲ್ಲಿ ಕೂತ್ಕೊಂಡು ಹುಚ್ಚುಚ್ಚಾಗಿ ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ, ಅವ್ರಿಗೆಲ್ಲಾ ನೀವು ಕಾಡುಬಿಟ್ಟು ಈಚೆಗೆ ಬನ್ನಿ ಹೋರಾಟಕ್ಕೆ ಬೇರೆ ದಾರಿಗಳಿವೆ ಅಂತ ಹೇಳೋರ‍್ಯಾರು." ಎಂದರು. ನಮ್ಮ ಗೆಳೆಯರೆಲ್ಲ ಎರಡು ನಿಮಿಷ ಮೌನವಾಗಿಬಿಟ್ಟರು.
ಮತ್ತೆ ಅವರೇ ಮುಂದುವರಿದು "ನಾನ್ಹೀಗೆ ಅಂದೆ ಅಂತ ಬೇಜಾರು ಮಾಡ್ಕೋಬೇಡಿ ಇದ್ರಲ್ಲಿ ನಮ್ಮೆಲ್ರ ಜವಾಬ್ದಾರಿ ಇದೆ ನಾವು ಆಡುವ ಮಾತು, ನಮ್ಮ ನಡವಳಿಕೆಗಳು ಅಂತಾ ಹುಡುಗರನ್ನು ಇನ್ನಷ್ಟು ಹುಚ್ಚು ಸಾಹಸಕ್ಕೆ ಉತ್ತೇಜಿಸುವಂತೆ ಇರಬಾರದು. ಈ ಆಧುನಿಕ ಕಾಲದ ರಾಜ್ಯ ಶಕ್ತಿಯ ವಿರುದ್ಧ ಇಂತಾ ಹೋರಾಟಗಳು ಪ್ರತಿಹಿಂಸೆಯನ್ನ ಹುಟ್ಟುಹಾಕ್ತವೆ ಅಷ್ಟೆ. ಬೇರೆ ಶಾಂತಿಯುತ ದಾರಿಗಳನ್ನು ಹುಡುಕ್ಬೇಕು" ಎಂದರು.
*****
೨೦೦೭ ರ ಜನವರಿಯಲ್ಲಿ ಒಂದು ಕಲಾಶಿಬಿರ, ಸಂಸ್ಕೃತಿಶಿಬಿರ ಮತ್ತು ನಾಟಕೋತ್ಸವವನ್ನು ಜೊತೆಯಾಗಿ ಮಾಡಿದ್ದೆವು. ಕಲಾವಿದ ಮೋಹನಸೋನ ಅವರ ನೇತೃತ್ವದಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಅನೇಕ ಯುವಕಲಾವಿದರು ನಮ್ಮೂರಿನ ಹಲವು ಆಸಕ್ತ ಮಕ್ಕಳನ್ನೂ ದೊಡ್ಡವರನ್ನೂ ಜೊತೆಗೂಡಿಸಿಕೊಂಡು ಊರತುಂಬೆಲ್ಲ ಚಿತ್ರಗಳನ್ನು ರಚಿಸುವುದರೊಂದಿಗೆ ತರಬೇತಿಯನ್ನೂ ನೀಡಿದ್ದರು. ಸಾವಯವ ಕೃಷಿ, ಪರಿಸರ ರಕ್ಷಣೆ, ನಕ್ಷತ್ರವೀಕ್ಷಣೆ, ಚಲನಚಿತ್ರ ಪ್ರದರ್ಶನಗಳಲ್ಲದೆ, ಮಕ್ಕಳಿಗೆ ಮತ್ತು ದೊಡ್ಡವರಿಗೆ ರಂಗತರಬೇತಿ, ನಾಟಕ ಪ್ರದರ್ಶನಗಳೂ ಇದ್ದವು.
ಮುಕ್ತಾಯ ಸಮಾರಂಭಕ್ಕೆ ಅತಿಥಿಯಾಗಿ ಬರುವಂತೆ ತೇಜಸ್ವಿಯವರನ್ನು ಆಹ್ವಾನಿಸಲು ನಾವು ಕೆಲವರು ಮೂಡಿಗೆರೆಗೆ ಹೋದೆವು, ಜೊತೆಯಲ್ಲಿ ಖ್ಯಾತ ಮಕ್ಕಳ ರಂಗನಿರ್ದೇಶಕ ಮೂರ್ತಿ ದೇರಾಜೆಯವರೂ ಇದ್ದರು. ತೇಜಸ್ವಿಯವರು ಅನಾರೋಗ್ಯಕ್ಕೊಳಗಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆದು ಬಂದು ಕೆಲವು ದಿನಗಳಾಗಿದ್ದುವಷ್ಟೆ. ನಾವು ಹೋದಾಗ ಅವರಿನ್ನೂ ಜ್ವರದಿಂದ ನರಳುತ್ತಿದ್ದರು.
ಮನೆಯಂಗಳಕ್ಕೆ ನಾವು ತಲಪಿದಾಗ ಹೊರಗೆ ಬಂದು ನಮ್ಮನ್ನು ನೋಡಿ "ಯಾಕ್ರಯ್ಯ ಈಗ ಬಂದ್ರಿ ಬೇರೆ ಕೆಲ್ಸ ಇಲ್ಲ ನಿಮ್ಗೆ" ಎಂದು ಗದರುತ್ತಾ ಮನೆಯೊಳಗೆ ಹೋದರು.
ನಾನು ಮೂರ್ತಿಯವರಿಗೆ ನನ್ನನ್ನು ಹಿಂಬಾಲಿಸುವಂತೆ ಕಣ್ಣಿನಲ್ಲೇ ಸೂಚಿಸಿ ಅವರ ಹಿಂದೆಯೇ ಮನೆಯೊಳಕ್ಕೆ ಹೋದೆ.
ಅವರು ಮೆಲ್ಲನೆ ಕುರ್ಚಿಯಲ್ಲಿ ಕುಳಿತು. "ಅಲ್ಲಾ ಇದು ವೈರಲ್ ಫಿವರ್ ಕಣ್ರಯ್ಯ, ನಿಮ್ಗೆ ಅಂಟಿಕೊಂಡ್ರೆ ಏನ್ಮಾಡ್ತೀರಾ? ಸಿಕ್ಕಾಬಟ್ಟೆ ಮೈಕೈ ನೋವು ಬರುತ್ತೆ ಈಗ ನಾನು ಅನುಭವಿಸ್ತಾ ಇದ್ದೀನಿ, ಆಮೇಲ್ ನೀವೂ ಅನುಭವಿಸ್ಬೇಕಾ?" ಎಂದರು!.
ಹೀಗೇ ಮಾತು ಮುಂದುವರಿಯಿತು. ಮಾತು ಕಂಪ್ಯೂಟರ್‌ನತ್ತ ಹೊರಳಿತು.
"ನಾವಿನ್ನೂ ಕಂಪ್ಯೂಟರ್‌ನ ಸರಿಯಾಗಿ ಉಪಯೋಗ ಮಾಡೋದೇ ಕಲ್ತಿಲ್ಲ ಕಣ್ರಿ. ನೋಡಿ ಈ ಮಕ್ಕಳ ಕಥೆಗಳನ್ನೂ ಅಷ್ಟೂ ಚಿತ್ರ ಕಥೆಗಳನ್ನಾಗಿ ಮಾಡಿ ಪುಸ್ತಕ ತರ‍್ಬೋದು, ಹಾಗೇ ಎನಿಮೇಷನ್‌ನಲ್ಲಿ ಎಂತಾ ಕೆಲ್ಸ ಮಾಡ್ಬೋದು, ಇವೆಲ್ಲ ಮಾಡ್ಬೇಕು. ಇಂಗ್ಲಿಷ್‌ನಲ್ಲಿ ಏನೇನ್ ಮಾಡಿದ್ದಾರೆ ಆ ಥರಾ ನಾವೂ ಮಾಡದೇ ಹೋದ್ರೆ ಉಳಿಯೋಲ್ಲ ಕಣ್ರಿ..." ಎಂದು ಮುಂದುವರೆದು... "ಕವಿಶೈಲದಲ್ಲೊಂದು ನಾಟ್ಕ ಮಾಡ್ರೀ" ಎಂದರು. ಮಾತುಕಥೆ ಹೀಗೇ ಅರ್ಧಗಂಟೆ ಮುಂದುವರಿಯಿತು. "ಜ್ವರ ಕಮ್ಮಿಯಾದ್ರೆ ಖಂಡಿತ ಕಾರ್ಯಕ್ರಮಕ್ಕೆ ಬರ‍್ತೀನಿ" ಎಂದರು.
ಅಲ್ಲಿಂದ ಹೊರಡುವಾಗ "ಅಂತೂ ಒಟ್ಟೂ ನಿಮ್ಮ ಆರೋಗ್ಯ ಹೇಗಿದೆ ಸಾರ್ ಈಗ, ಪರವಾಗಿಲ್ವೆ?’ಎಂದೆ.
"ಹೋಗೋಕೊಂದು ಕಾರಣ ಬೇಕಲ್ಲಪ್ಪಾ ಏನೇನೋ ಬರ‍್ತಾ ಇದೆ" ಎಂದರು ನಗುತ್ತಾ.
ನಮ್ಮ ಕಾರ್ಯಕ್ರಮಗಳ ಮುಕ್ತಾಯದ ದಿನ ತೇಜಸ್ವಿಯವರ ಹಲವು ವರ್ಷಗಳ ಒಡನಾಡಿ ರಾಘವೇಂದ್ರರಿಗೆ ಫೋನ್ ಮಾಡಿ ನೆನಪಿಸಿದೆ. ಕಾರ್ಯಕ್ರಮಕ್ಕೆ ಅವರೂ ಬರುವವರಿದ್ದರು. ಆದರೆ ತೇಜಸ್ವಿಯವರ ಆರೋಗ್ಯ ಸ್ವಲ್ಪ ಮಾತ್ರವೇ ಸುಧಾರಿಸಿದೆಯೆಂದೂ ಅಲ್ಲದೆ ಅಂದು ಅವರ ಮಗಳು ಮನೆಗೆ ಬರುವವಳಿದ್ದಾಳೆಂದೂ ಆ ಕಾರಣದಿಂದ ಇಂದು ಬರಲಾಗುತ್ತಿಲ್ಲವೆಂದು ರಾಘವೇಂದ್ರ ತಿಳಿಸಿದರು.
ತೇಜಸ್ವಿಯವರು ಹೋದರೆಂದು ನಮ್ಮ ತಂಡದ ನಟ ಸತೀಶ್ ಬೆಳ್ಳೇಕೆರೆ ಫೋನ್ ಮಾಡಿ ತಿಳಿಸಿದಾಗ ಟಿ.ವಿ. ನೋಡಲು ನಮ್ಮಲ್ಲಿ ಕರೆಂಟಿರಲಿಲ್ಲ. ಮಾರನೇದಿನ ಬೆಳಗ್ಗೆ ಸಕಲೇಶಪುರದಲ್ಲಿ ನಾವೊಂದಷ್ಟು ಜನರು ಹೊರಟು ಮೊದಲು ಮೂಡಿಗೆರೆಗೆ ನಂತರ ಕುಪ್ಪಳ್ಳಿಗೆ ಹೋಗುವ ಯೋಜನೆ ಹಾಕಿದೆವು. ಎಲ್ಲರೂ ಹೊರಟು ಸಿದ್ಧರಾದಾಗ ಸಕಲೇಶಪುರದ ಗೆಳೆಯರೊಬ್ಬರು "ನಾವು ಹೋಗೋದು ಬೇಡ ತೇಜಸ್ವಿಯವರನ್ನು ಇದುವರೆಗೆ ಹೇಗೆ ನೋಡಿದ್ದೆವೋ ಆ ನೆನಪು ನಮ್ಮಲ್ಲಿ ಹಾಗೇ ಉಳೀಲಿ" ಎಂದರು. ಹೆಚ್ಚಿನವರೆಲ್ಲರ ಮನಸ್ಸಿನಲ್ಲೂ ಅದೇ ಭಾವನೆ ಇತ್ತು. ಪ್ರಯಾಣ ರದ್ದು ಮಾಡಿದೆವು.
"ಕವಿಶೈಲದಲ್ಲಿ ಒಂದು ನಾಟಕ ಮಾಡಿ" ಎಂದಿದ್ದರು ತೇಜಸ್ವಿ.
ನಮ್ಮ ನಾಟಕ ತಂಡ ಅಲ್ಲಿಗೆ ತಲಪುವ ಮೊದಲೇ ಕವಿಶೈಲದಲ್ಲಿ ಲೀನವಾಗಿ ಹೋಗಿದ್ದರು.
ಇದರೊಂದಿಗೆ ಒಂದೆರಡು ವಿಷಯಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವೆಂದು ನನ್ನ ಭಾವನೆ.
೨೦೦೯ ರಲ್ಲಿ ತೇಜಸ್ವಿಯವರ ನೆನಪಿನಲ್ಲಿ ಒಂದು ನಾಟಕೋತ್ಸವವನ್ನು ಮಾಡಿದೆವು. ನಾಲ್ಕುದಿನಗಳ ಕಾಲ ನಡೆದ ನಾಟಕೋತ್ಸವದಲ್ಲಿ, ತೇಜಸ್ವಿಯವರ ’ಪಾಕಕ್ರಾಂತಿ’ಯನ್ನು ರಂಗ ಅಳವಡಿಸಿ ಪ್ರದರ್ಶನವನ್ನು ನೀಡಿದ್ದೆವು. ನಾಲ್ಕು ದಿನಗಳ ಅಡಿಗೆ ಮತ್ತು ಊಟದ ವ್ಯವಸ್ಥೆಯನ್ನು ಬಿರಿಯಾನಿ ಕರಿಯಪ್ಪ ವಹಿಸಿಕೊಂಡಿದ್ದರು. ನಾಟಕೋತ್ಸವದ ಕೊನೆಯ ದಿನ ವೇದಿಕೆಯಲ್ಲಿ ಕರಿಯಪ್ಪನವರನ್ನು ಸನ್ಮಾನಿಸಲಾಯಿತು.
ನಮ್ಮೂರಲ್ಲಿ ಕಟ್ಟುತ್ತಿರುವ ರಂಗಮಂದಿರ, ಗ್ರಂಥಾಲಯ, ವಾಚನಾಲಯ, ಮತ್ತು ಅತಿಥಿಗೃಹಗಳ ಸಂಕೀರ್ಣಕ್ಕೆ "ಪೂರ್ಣಚಂದ್ರ ತೇಜಸ್ವಿ ರಂಗಮಂದಿರ ಸಂಕೀರ್ಣವೆಂದು ಹೆಸರಿಡಲಾಗಿದೆ.
(ಮುಗಿಯಿತು)

1 comment:

  1. ಪ್ರಸಾದ್ ತುಂಬಾ ಚೆನ್ನಾಗಿ ಬರೆದಿದ್ದೀರಿ. ತೇಜಸ್ವಿಯವರ ಮೂಲಕವೇ ನಿಮ್ಮ ಪರಿಚಯವಾಗಿದ್ದು ನನಗೆ ಸಂತೋಷ. ಸಾಧ್ಯವಾದರೆ ನನಗೆ ಈ ಮೇಲ್ ಮಾಡಿ. satya_nbr@yahoo.com ತೇಜಸ್ವಿಯವರ ಬಗ್ಗೆ ಇನ್ನೇನಾದರೂ ಬರೆದಿದ್ದೀರಾ? ನನಗೆ ಅವರ ೊಡನಾಟ ಇರಲಿಲ್ಲ. ಆದರೆ ಒಂದೆರಡು ಬಾರಿ ಐದಾರು ನಿಮಿಷಗಳ ಭೇಟಿ ಮಾಡಿ ಮಾತನಾಡಿದ್ದಿದೆ. ಆದರೆ ಅವರ ಸಾಹಿತ್ಯ ನನ್ನನ್ನು ಕ್ರಿಯಾಶೀಲನನ್ನಾಗಿ ಇಟ್ಟಿದೆ. ಅವರ ಸಾಹಿತ್ಯ ಕುರಿತಂತೆ ನಾನೂ ಒಂದು ಅವಲೋಕನವನ್ನು ಮಾಡಿದ್ದೆ. ಸುದೀರ್ಘ ಲೇಖನವನ್ನು ಬರೆದಿದ್ದೆ. ನನ್ನ ತೇಜಸ್ವಿಯವರ ಬರಹದ ಬಗೆಗಿನ ಲೇಖನಕ್ಕೆ ಮೊದಲು ಅವರ ಬದುಕನ್ನು ಕಟ್ಟಿಕೊಡುವ ನಿಮ್ಮ ಲೇಖನ ೋದಬೇಕು. ಅವರೆಡೂ ಸೇರಿದರೆ ತೇಜಸ್ವಿ ಸ್ವಲ್ಪ ಮಟ್ಟಿಗಾದರೂ ದಕ್ಕುತ್ತಾರೆ ಎನ್ನಿಸುತ್ತದೆ. ಅವರನ್ನು ದಕ್ಕಿಸಿ ಕೊಳ್ಳುವುದೆಂದರೆ ಅಣ್ಣನ ನೆನಪು ಪುಸ್ತಕದಲ್ಲಿ ಅವರೇ ಹೇಳಿರುವಂತೆ ಸಂಶ್ಲೇಷಣೆ-ವಿಶ್ಳೇಷಣೆ ವಿಧಾನವೊಂದೇ ಮಾರ್ಗ. ಅವರೊಂದು ಅದ್ಭುತ! ವಿಸ್ಮಯ!! ಅಭಿನಂದನೆಗಳು ಪ್ರಸಾದ್.

    ReplyDelete

ಹಿಂದಿನ ಬರೆಹಗಳು