Saturday, August 13, 2011

ವಚನಕಾರ್ತಿಯರ ಧ್ವನಿಗಳು


ಸಮಾನವಾದ ಸಾತ್ವಿಕ ಪ್ರೇರಣೆ ಹೊಂದಿದ. ಸಂಕಲ್ಪ ಹೊಂದಿದ ಶರಣ ಸಮುದಾಯದಿಂದ, ಜನತೆಗೆ ಹತ್ತಿರವಾದ ದೇಶಿ ಭಾಷೆಯಲ್ಲಿ ಸೃಷ್ಟಿಯಾದದ್ದು ವಚನ ಸಾಹಿತ್ಯ. ಈ ಸಾಹಿತ್ಯ ಮೂಡಿ ಬಂದ ಕಾಲ ಬದಲಾವಣೆಯ ಕಾಲ ಎನ್ನುವುದಕ್ಕಿಂತ ಪರಿವರ್ತನೆಯ ಕಾಲ ಎನ್ನಬಹುದು. ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಬದಲಾವಣೆ ಆದವು. ಪರಂಪರಾನುಗತವಾಗಿ ಬಂದಿದ್ದ ಜಾತಿ-ಮತ, ವರ್ಣ-ವೃತ್ತಿ ಭೇದಗಳಂಥ ಭಾಷೆಗಳನ್ನು ಕಿತ್ತೊಗೆದು ಐಕ್ಯತೆಯನ್ನು ಸ್ಥಾಪಿಸಲು ಶರಣರು ಪ್ರಯತ್ನಿಸಿದರು. ಅವರಲ್ಲಿ ಸ್ತ್ರೀಯು ಸಹ ಸಮಾನ ಅವಕಾಶ ಹೊಂದಿದಳು. ತನ್ನನ್ನು ಸುತ್ತಿಕೊಂಡಿದ್ದ ಸಂಕೋಲೆಗಳಿಂದ ಮುಕ್ತವಾಗಿ ಹೊರಬಂದಳು. ತನ್ನ ವೈಚಾರಿಕ ಶಕ್ತಿಯಿಂದ ಬೆಳೆಯಲು ಪ್ರಯತ್ನಿಸಿದಳು. ಏಕಕಾಲಕ್ಕೆ ಪುರುಷಾಧಿಪತ್ಯ ಮತ್ತು ಪುರೋಹಿತಶಾಹಿಯನ್ನು ವಿರೋಧಿಸಿದಳು. ಸುಮಾರು ೩೫ ಜನ ವಚನಕಾರ್ತಿಯರು ಸು.೧೩೫೦ ವಚನಗಳನ್ನು ರಚಿಸಿದ್ದರೆ. ಇದರಲ್ಲಿ ಶೂದ್ರಾತಿಶೂದ್ರ ವಚನಕಾರ್ತಿಯರೂ ಇದ್ದಾರೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಗಂಗಾಂಬಿಕೆ ದಲಿತ ವಚನಕಾರ್ತಿಯರಾದ ಕಾಳವ್ವ, ಕೇತಲದೇವಿ, ಕಾಮಮ್ಮ, ರೆಮ್ಮವ್ವೆ, ಲಿಂಗಮ್ಮ, ಗೋಗವ್ವೆ ಪ್ರಮುಖರು.
ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಪುರುಷನೊಂದಿಗೆ ಸಮಾನ ನೆಲೆಯಲ್ಲಿ ಪ್ರವೇಶ ಇದ್ದಿತಲ್ಲದೇ, ಅನುಭಾವ ಗೋಷ್ಠಿಯಲ್ಲಿ ವಾದ ಮಂಡನೆಗೆ ಅವಕಾಶ ನೀಡಲಾಗಿತ್ತು. ತಮ್ಮ ವಚನಗಳ ಮುಖಾಂತರ ಕೆಲವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಿದರು. ಸಂಪ್ರದಾಯ ಬಂಧನವಾಗಿದ್ದ ಸ್ತ್ರೀ ಪುರುಷನಂತೆ ಸ್ವತಂತ್ರವಾಗಿ ದೇವರನ್ನು ಪೂಜಿಸಬಲ್ಲಳು, ಧರ್ಮ ಗ್ರಂಥವನ್ನು ಓದಬಲ್ಲಳು, ಮೋಕ್ಷ ಪಡೆಯಬಲ್ಲಳು, ಪುರುಷನಂತೆ ದೀಕ್ಷೆ ಹೊಂದುವ ಅಧಿಕಾರ ಇದೆ ಎಂದು ಬಸವಣ್ಣನವರು ಸಾರಿದರು. ಉಪನಯನ ಸಂದರ್ಭದಲ್ಲಿ ತನ್ನ ಅಕ್ಕನಿಗೆ ಇಲ್ಲದ ಜನಿವಾರ ನನಗೂ ಬೇಡ ಎಂದು ಉಪನಯನ ಸಂಸ್ಕಾರವನ್ನೇ ಧಿಕ್ಕರಿಸಿದ ಬಸವಣ್ಣ ಮೊದಲ ಮಹಿಳಾವಾದಿ. ಮಹಿಳೆಯ ಕೈಗೆ ಇಷ್ಟಲಿಂಗ ಕೊಟ್ಟು ಅಧ್ಯಾತ್ಮ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದರು. ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಜ್ಞಾನದಾಸೋಹ ನೀಡಿದರು.
ವಚನಕಾರ್ತಿಯರ ಕೆಲವು ವಿಚಾರಗಳನ್ನು ಅವರ ವಚನಗಳ ಮುಖಾಂತರ ನೋಡಬಹುದು.
ಕಾಯಕ:- ವಚನಕಾರ್ತಿಯರು ಕಾಯಕ ತತ್ವದ ಮೂಲಕ ಆರ್ಥಿಕ ಸ್ವಾತಂತ್ರ್ಯ ಅನುಭವಿಸಿದರು. ಆಯ್ದಕ್ಕಿ ಲಕ್ಕಮ್ಮ ಕಾಯಕ ತತ್ವದಂತೆ ಅಕ್ಕಿ ಆಯ್ದು ತಂದು ಜೀವನ ಸಾಗಿಸುತ್ತಾಳೆ. ’ಆವ ಕಾಯಕ ಮಾಡಿದೊಡೆ ಒಂದೇ ಕಾಯಕ’ ಎಂದು ಗಂಗಮ್ಮ ಹೇಳಿದಂತೆ ಕಾಯಕದಲ್ಲಿ ಮೇಲು-ಕೀಳಿಲ್ಲ. ಗಂಗೇಶ ಮಸಣಯ್ಯನ ಪುಣ್ಯಸ್ತ್ರೀ ಅಕ್ಕಮ್ಮ "ಖಂಡಿತ ಕಾಯಕದ ವ್ರತಾಂಗಿಯ ಮಾಡಿದ ಇರವೆಂತಂದಡೆ ಕೃತ್ಯದ ನೇಮವೆ ಸುಯಿಧಾನವೆ ಅಚ್ಚೊತ್ತಿದಂತೆ ತಂದು ಒಡೆಯರು ಭಕ್ತರು ತನ್ನ ಮಡದಿ ಮಕ್ಕಳ ಸಹಿತ ಒಡಗೂಡಿ ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ ಈಡಿಲ್ಲದಂತೆ" ಭಕ್ತಿ-ಶ್ರದ್ಧೆಯಿಂದ ಕಾಯಕ ಮಾಡಿ ಬಂದ ಆದಾಯವನ್ನು ಸದ್ವಿನಿಯೋಗ ಮಾಡುವ ಪರಿಯನ್ನು ಅಕ್ಕಮ್ಮ ಹೇಳಿದ್ದಾಳೆ. ಅದೇ ರೀತಿ ಲಕ್ಕಮ್ಮನ ಪತಿ ಮಾರಯ್ಯ ಪ್ರತಿ ದಿನ ತರುವುದಕ್ಕಿಂತ ಹೆಚ್ಚು ಅಕ್ಕಿ ತಂದಾಗ ’ನಮಗೆ ಎಂದಿನಂದವೆ ಸಾಕು ಮತ್ತೆ ಕೊಂಡು ಹೋಗಿ ಅಲ್ಲಿಯೇ ಸುರಿ’ ಎಂದು ಪತಿಗೆ ಹೇಳುತ್ತಾಳೆ. ಈ ತತ್ವದ ಹಿನ್ನೆಲೆ ಅಸಂಗ್ರಹ. ಅಂದಿನ ಕಾಯಕ ಅಂದಿಗೆ ಬೇಕಾದಷ್ಟು ಅದರಲ್ಲಿ ಕೆಲಭಾಗ ಗುರು-ಲಿಂಗ-ಜಂಗಮಕ್ಕೆ ವಿನಿಯೋಗವಾಗಬೇಕು. ಕಾಳವ್ವೆ. ಕನ್ನಡಿಕಾಯಕ ರೇವಮ್ಮೆ, ಕೊಟ್ಟಣದ ಸೋಮಮ್ಮ ಇವರೆಲ್ಲ ಕಾಯಕ ಶರಣೆಯರು.
"ಎಮ್ಮತಾಯಿ ನಿಂಬಿಯವ್ವೆ ನೀರನೆರೆದುಂಬುವಳು.
ಎಮ್ಮಕ್ಕ ಕಂಚಿಯಲ್ಲಿ ಬಾಣಸವೆ ಮಾಡುವಳು" ಎಂಬ ವಚನದಲ್ಲಿ ಆತ್ಮಗೌರವದ ಕಾಯಕ ಮಹತ್ವ ಕಂಡುಬರುವುದು.
ಸ್ತ್ರೀ ಪುರುಷ ಭೇದ:- ಸ್ತ್ರೀ ವಚನಕಾರರು ತಮ್ಮನ್ನು ತಾವು ಮೊದಲು ಗುರುತಿಸಿಕೊಂಡರು. ಇದು ಅವರು ಮಾಡಿದ ಮೊದಲ ಕ್ರಾಂತಿ. ಸಮಾನತೆಯ ವಾದವನ್ನು ಎತ್ತಿಹಿಡಿದರು. "ಮೊಲೆ ಮೂಡಿ ಇದ್ದದ್ದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಮೀಸೆ ಕಠಾರವಿದ್ದಡೆ ಗಂಡೆಂದು ಪ್ರಮಾಣಿಸಲಿಲ್ಲ ಅದು ಜಗದ ಹಾಗೆ ಬಲ್ಲವರ ನೀತಿಯಲ್ಲ ಎಂದು ಸತ್ಯಕ್ಕ ’ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಡಲುಂಟೇ’ ಎಂದು ಆಯ್ದಕ್ಕಿ ಲಕ್ಕಮ್ಮ, "ನಿಮ್ಮ ಭಕ್ತಿ ಸೂತ್ರದಿಂದ ಎನ್ನ ಸ್ತ್ರೀತ್ವ ನಿಮ್ಮ ಪಾಠದಲ್ಲಿ ಅಡಗಿತ್ತು ಎನಗೆ ಬೇಧ ಮಾತಿಲ್ಲ ಎಂದು ಮೋಶಿಗೆಯ ಮಹಾದೇವಿ, ಭಕ್ತಿಜ್ಞಾನ ಆಧ್ಯಾತ್ಮ ವಷಿಯಗಳ ಬಗ್ಗೆ ಸ್ತ್ರೀಪುರುಷರೆಂಬ ಭೇದ ಅರ್ಥಹೀನ ಎಂದರು. ಗಣೇಶ ಮಸಣಯ್ಯನ ನಿಜಪತ್ನಿ ಹೆಣ್ಣನ್ನು ಹೀನಾಯವಾಗಿ ಕಾಣುವವರಿಗೆ
"ಹೊನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಮಣ್ಣಬಿಟ್ಟು ಲಿಂಗವನೊಲಿಸಬೇಕೆಂಬರು
ಮಣ್ಣಿಂಗೂ ಲಿಂಗಕ್ಕೂ ವಿರುದ್ಧವೇ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಹೆಣ್ಣನ್ನು ಸಂಸಾರವನ್ನು ಬಿಟ್ಟರೆ ಮುಕ್ತಿ ಸಾಧ್ಯ ಅನ್ನುವುದು ಮೂರ್ಖತನ. ಧಾರ್ಮಿಕ ವಿಧಿವಿಧಾನಗಳಲ್ಲಿ ಹೆಣ್ಣಿಗೂ ಸಮಪಾಲು ಇದೆ. ದೇವರಿಗೆ ವಿರುದ್ಧವಲ್ಲದ ಅವಳು ಮನುಷ್ಯರಿಗೆ ಹೇಗೆ ವಿರುದ್ಧಳಾಗುವಳು? ಈ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಾಳೆ.
ಸ್ತ್ರೀವಾದ
ಅಕ್ಕಮಹಾದೇವಿ ಸ್ತ್ರೀಪರ ಹೋರಾಟಕ್ಕೆ ನಾಂದಿ ಹಾಕಿದಳು. ಭದ್ರಬುನಾದಿ ಹಾಕಿದಳು. ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಗಂಡ ಕೌಶಿಕನನ್ನೇ ಧಿಕ್ಕರಿಸಿ, ಸಮಾಜಮುಖಿಯಾದ ಶರಣ ಸಮುದಾಯ ಸೇರುತ್ತಾಳೆ. ಅವಳ ಬದುಕೇ ಬಂಡಾಯ. ಸಮಾಜದ ಕಟ್ಟಳೆ ಮೀರಿ ಬದುಕಿದಳು. ಶರಣೆಯರ ವಚನ ಕ್ರಾಂತಿ ಸ್ತ್ರೀ ಸ್ವಾತಂತ್ರ್ಯದ ಪ್ರಥಮ ಚಳವಳಿ ಎನ್ನಬಹುದು. ಅಕ್ಕ ಮನೆ ಬಿಟ್ಟು ಹೊರಡುವಾಗ ತಂದೆ-ತಾಯಿ ಮನೆಗೆ ಹಿಂದಿರುಗಿ ಬಾ ಎಂದಾಗ-
ಮನ-ಮನ ತಾರ್ಕಣೆಗೊಂಡು ಅನುಭವಿಸಲು
ನೆನಹೆ ಘನವಹುದಲ್ಲದೆ ಅದು ಹವಣದಲ್ಲಿ ನಿಲುವದೇ ನಿನ್ನ ತಾಯಿ ತವರನೊಲ್ಲೆ ಹೋಗಾ?’ ಎಂದು ಅಧೀನತೆಯನ್ನೂ ನಿರಾಕರಿಸಿದ ದಿಟ್ಟ ಸ್ತ್ರೀ ಅಕ್ಕ ಯಾವುದಕ್ಕೂ ಚಿಂತಿಸದೇ-
ಹಸಿವಾದೊಡೆ ಭಿಕ್ಷಾನ್ನಗಳುಂಟು ತೃಷೆಯಾದೊಡೆ ಕೆರೆಭಾವಿಗಳುಂಟು, ಶಯನಕೆ ಹಾಳು ದೇಗುಲಗಳುಂಟು ಆತ್ಮ ಸಂಗಾತಕ್ಕೆ ಚೆನ್ನ ಮಲ್ಲಿಕಾರ್ಜುನನುಂಟು’ ಎನ್ನುತ್ತಾಳೆ. ರಾಜತ್ವವನ್ನು ಐಹಿತ ಸುಖಭೋಗಗಳನ್ನು ತ್ಯಜಿಸಿ ಹೊರಡುತ್ತಾಳೆ. ಪುರುಷ ಪ್ರಧಾನ ಮೌಲ್ಯಗಳನ್ನು ತಿರಸ್ಕರಿಸಿದ್ದಾಳೆ.
ಶರಣೆ ಗೊಗೆವ್ವೆ ಪುರುಷ ಪ್ರಧಾನ ವ್ಯವಸ್ಥೆಗೆ ಈ ರೀತಿ ಸವಾಲು ಹಾಕುತ್ತಾಳೆ.
"ಗಂಡು ಮೋಹಿಸಿ ಹೆಣ್ಣ ಹಿಡಿದಡೆ
ಅದು ಒಬ್ಬರ ಒಡವೆ ಎಂದರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದಡೆ
ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲದೆ ನಾಸ್ತಿನಾಥನು ಪರಿಪೂರ್ಣನೆಂಬೆ."
ಗಂಡು ಹೆಣ್ಣನ್ನು ಮೋಹಿಸಿದಾಗ ಹೆಣ್ಣು ಆತನ ಒಡವೆ. ಆದರೆ ಹೆಣ್ಣು ಗಂಡನ್ನು ಮೋಹಿಸಿದಾಗ ಅವನು ಅವಳ ಒಡವೆಯೇ ಎಂದು ಪ್ರಶ್ನಿಸುತ್ತಾಳೆ. ಈ ಪ್ರಶ್ನೆ ಒಡೆತನ ಜಿಜ್ಞಾಸೆಯ ಮೌಲ್ಯದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಪಡೆಯಲು ಅಸಮರ್ಥವಾಗಿದೆ ಸಮಾಜ.
ಉರಿಲಿಂಗಪೆದ್ದಿಗಳ ನಿಜ ಸ್ತ್ರೀ ಕಾಳವ್ವೆ ಸ್ತ್ರೀ ವಾದದ ಮೊದಲ ಕಾಳು. ಜಾತಿ ಭೇದವ ಕಿತ್ತು ಶೂದ್ರ ಸ್ತ್ರೀ ಶಿವಶರಣೆಯಾದದ್ದು ಒಂದು ಸಾಧನೆ. ಆಯ್ದಕ್ಕಿ ಲಕ್ಕಮ್ಮ ಪತಿ ತಪ್ಪು ಮಾಡಿದಾಗ ತಿದ್ದಿ ಹೇಳಿದಳು. "ಆಸೆ ಎಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ ಎಂದು ಕಾಯಕದ ಮಹತ್ವ ಹೇಳಿದಳು. ಅನೇಕ ವಚನಕಾರ‍್ತಿಯರು, ಜಾತಿ, ಧರ್ಮ ಹೆಣ್ಣು ಗಂಡು ತಾರತಮ್ಯಗಳನ್ನು ಖಂಡಿಸಿ, ತಾವು ಅನುಭವಿಸಿದ ನೋವು ದೌರ್ಜನ್ಯಗಳನ್ನು ಮೆಟ್ಟಿ ನಿಂತು ಆತ್ಮಬಲದಿಂದ ಬಯಲನ್ನು ಸಾಧಿಸಿದರು.
ಜಾತಿ ವ್ಯವಸ್ಥೆ
ಕಾಳವ್ವೆ ಜಾತಿ ವ್ಯವಸ್ಥೆಯ ಬಗ್ಗೆ ಹೇಳುತ್ತ, "ಕುರಿಕೋಳಿ ತಿರಿಮೀನು ತಿಂಬವರಿಗೆಲ್ಲ ಕುಲಜರೆಂಬವರು ಶಿವಗೆ ಪಂಚಾಮೃತವೆ ಕರೆವ ಪಶುವ ತಿಂಬ ಮಾದಿಗ ಕೀಳು ಎಂಬುವರು. ಅವರೆಂತು ಕೀಳು ಜಾತಿಯಾದರೂ ಜಾತಿಗಳು ನೀವೇಕೆ ಕೀಳಾಗಿರೋ ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು. ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಂಗೆ ಶೋಭಿತವಾಯಿತು. ಅದೆಂತೆಂದಡೆ ಸಿದ್ಧಲಿಕೆಯಾಯಿತು ಸಗ್ಗಳೆಯಾಯಿತು. ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ
ಇಲ್ಲಿ ಮೇಲ್ವರ್ಗದವರಿಂದ ತನ್ನ ಜನಕ್ಕೆ ಆದ ಅನ್ಯಾಯವನ್ನೂ ನೇರವಾಗಿ ಪ್ರತಿಬಿಂಬಿಸುತ್ತಾಳೆ. ಶರಣೆ ಬೊಂತಾದೇವಿಯ ಮಾತುಗಳನ್ನು ಕೇಳಿ
"ಊರ ಒಳಗಣ ಬಯಲು ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು ಊರ ಹೊರಗೆ ಹೊಲೆ ಬಯಲೆಂದುಂಟೇ?
ಎಲ್ಲಿ ನೋಡಿದಡೆ ಬಯಲೊಂದೇ"
ಎಂದು ಪ್ರಶ್ನಿಸಿ ಬಯಲಿಗೆ ಇಲ್ಲದ ಜಾತಿ ಬಯಲಾಗುವ ಮನುಷ್ಯನಿಗೆ ಹೇಗೆ ಬಂದಿತು ಎಂದು ಪ್ರಶ್ನಿಸುವಳು. ಕದಿರೆಯ ರೆಮ್ಮವ್ವೆ ಕೂಡ
"ನಾ ತಿರುಗುವ ರಾಟೆಯ ಕುಲಜಾತಿ ಕೇಳಿರಣ್ಣಾ?" ಎಂದು ಸಹ ಪ್ರಶ್ನಿಸುವಳು.
ಡಾಂಭಿಕತೆ:- ಅಕ್ಕಮ್ಮ ಶರಣೆ ಉದರ ಪೋಷಣೆಗೆ ವೇಷ ಹಾಕುವವರನ್ನು ಕುರಿತು "ವೇಷ ಎಲ್ಲಿಯದು? ಸೂಳೆಯಲ್ಲಿ ಡೊಂಬನಲ್ಲಿ ಬೈರೂಪನಲ್ಲಿರದೆ? ವೇಷವ ತೋರಿ ಒಡಲ ಹೊರೆವ, ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೋ? ಅಡಾರವೇ ಪ್ರಾಣವಾದ ರಾಮೇಶ್ವರ ಲಿಂಗದಲ್ಲಿ?" ಎಂದು ಢಂಬಾಚಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೇ ರೀತಿ ಹೊರವೇಷದ ಸ್ವಾಮಿಯನ್ನು ಕಂಡು
’ಬತ್ತಲೆ ಇದ್ದವರೆಲ್ಲ ಕತ್ತೆಯ ಮರಿಗಳು
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ
ಆವ ಪ್ರಕಾರವಾದಡೇನು ಅರಿವೆ ಮುಖ್ಯವಲ್ಲ
ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ಆಚಾರ ಮುಖ್ಯ ಹೊರತು ಬಾಹ್ಯ ಆವರಣವಲ್ಲ ಎನ್ನುತ್ತಾಳೆ.
ಇನ್ನೊಬ್ಬ ಶರಣೆ ಗುಡ್ಡಕ್ಕ ’ತನು ಬತ್ತಲೆಯಾದಡೇನು ಮನ ಬತ್ತಲೆಯಾಗದನ್ನಕ್ಕ’ ಎಂದು ಅಕ್ಕಮ್ಮ ’ಜಗವ ಮೆಚ್ಚಬೇಕೆಂಬ ಶೀಲವ ನಾನರಿಯೆ’ ಎಂದು, ರಾಯಮ್ಮ ’ದೇಶದೇಶವ ತಿರುಗಿ ಮಾತುಗಳ ಕಲಿತು ಗ್ರಾಸಕ್ಕೆ ತಿರುಗುವ ದಾಸಿವೇಸಿಯ ಮಕ್ಕಳ ವಿರಕ್ತರೆಂಬೆನೇ" ಎಂದು ಹೇಳುತ್ತಾಳೆ. ಹೀಗೆ ಉದರಕ್ಕಾಗಿ ವೇಷ ಧರಿಸಿದವರನ್ನು ನಂಬಲಿಲ್ಲ. ಅಮುಗೆ ರಾಯಮ್ಮ, ಕಾವಿಯ ಹಿಂದಿರುವ ಅನೈತಿಕ ಕಾರ್ಯ ಮಾಡುವವರ ಕುರಿತು"
ಕಾವಿ ಕಾಷಾಂಬರವ ಹೊಯ್ದ ಕಾಮವಿಕಾರಕ್ಕೆ ತಿರುಗುವ
ಕರ್ಮಿಗಳ ಮುಖವ ನೋಡಲಾಗದು
ಜಂಗಮವಾಗಿ ಜಗದಿಚ್ಛೆಯ ನುಡಿವ
ಜಂಗುಳಿಗಳ ಮುಖವ ನೋಡಲಾಗದು
ಲಿಂಗೈಕ್ಯರೆನಿಸಿಕೊಂಡು ಅಂಗ ವಿಕಾರಕ್ಕೆ ತಿರುಗುವ
ಲಿಂಗದ್ರೋಹಿಗಳ ಮುಖವ ನೋಡಲಾಗದು
ಕಾಣಾ ಅಮುಗೇಶ್ವರ ಲಿಂಗವೆ"- ಎನ್ನುತ್ತಾರೆ.
ವ್ರತಭಷ್ಟರಿಂದ ವ್ರತಹೀನರಿಂದ ಸಾಮಾಜಿಕ ಧಾರ್ಮಿಕ ವಾತಾವರಣ ಹದಗೆಡುತ್ತದೆ ಅಂಥ ಕಂಟಕರನ್ನು ನಾಶ ಮಾಡುವೆ ಎಂದು ಕಾಲಕಣ್ಣಿಯ ಕಾಮಮ್ಮ ಈ ರೀತಿ ಹೇಳುತ್ತಾಳೆ.
ಎನ್ನ ಕರಣಂಗಳ ಲಿಂಗದಲಿ ಕಟ್ಟುವೆ
ಗುರು-ಲಿಂಗ-ಜಂಗಮದ ಕಾಲಕಟ್ಟುವೆ
ವ್ರತಭ್ರಷ್ಟನಿಟ್ಟೊರೆಸುವೆ ಸುಟ್ಟು ತುರುತುರುನೆ
ತೂರುವೆ ನಿರ್ಭೀತಿ ನಿಜಲಿಂಗದಲ್ಲಿ ಎಂದಿದ್ದಾಳೆ
ಹಾಗೆ ಕಾಲಕೂಟಯ್ಯಗಳ ನಿಜಸ್ತ್ರೀ ರೇಚವ್ವೆ
ಬಂಜೆಯಾವಿಂಗೆ ಕ್ಷೀರವುಂಟೆ
ವ್ರತಹೀನರ ಬೆರೆಯಲುಂಟೆ
ನೀ ಬೆರೆದಡೂ ಬೆರೆ ನಾನೊಲ್ಲೆ
ನಾ ಶಾಂತೇಶ್ವರ ಎಂದರೆ
ಕೇತಲದೇವಿ-ಹದ ಮಣ್ಣಲ್ಲದೆ ಮಡಿಕೆಯಾಗಲಾರದು ವ್ರತಹೀನರ ಬೆರೆಯಲಾಗದು; ವ್ರತಹೀನನ ನೆರೆಯ ನರಕವಲ್ಲದೆ ಮುಕ್ತಿಯಿಲ್ಲ ಎಂದು ಕಾಳವ್ವೆ
"ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತಹೀನನ ನೆರೆಯಲು ನರಕಕ್ಕೆ ಮೂಲ" ಎನ್ನುತ್ತಾಳೆ ಮಸಣಮ್ಮ. ಹಾಗೆ ಸೂಳೆ ಸಂಕವ್ವ ಕೂಡ.
"ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯ
ವ್ರತಹೀನನೆ ಬೆರೆದಡೆ ಕಾವ ಕತ್ತಿಯಲ್ಲ
ಕಿವಿ ಮೂಗ ಕೊಯ್ಯರಯ್ಯಾ ಎಂದಿದ್ದಾಳೆ.
ವ್ರತಹೀನ ಎಂದರೆ ನೀತಿವಿಹೀನ. ಬಹಿಷ್ಕೃತಳಾದ ವೇಶ್ಯೆಯು ಸಹ ದುಡ್ಡಿಗಾಗಿ ಹಂಬಲಿಸದೇ ತಮ್ಮ ವೃತ್ತಿ-ನಿಷ್ಠೆ ಹೊಂದಿದ್ದಳು. ಅವಳಿಗೂ ಸಮಾಜದ ಕಾಳಜಿ ಇದ್ದು ವ್ರತಹೀನನನ್ನು ಖಂಡಿಸುತ್ತಾಳೆ.
ಪೂಜೆ
ಪೂಜೆಯ ಬಗ್ಗೆ ಸತ್ಯಕ್ಕ-
"ಅರ್ಚನೆ ಪೂಜನೆ ನೇಮವಲ್ಲ ಮಂತ್ರ ತಂತ್ರ ನೇಮವಲ್ಲ ಧೂಪದೀಪಾರತಿ ನೇಮವಲ್ಲ. ಪರಧನ ಪರಸ್ತ್ರೀ ಪರದೈವಂಗಳಿಗೆ ಎರಗದಿಪ್ಪುದೇ ನೇಮ" ಎನ್ನುತ್ತ ಬಾಹ್ಯಾಂಡಬರ ಪೂಜೆಯನ್ನು ಖಂಡಿಸಿದರು. ಇಲ್ಲಿ ಎರಗದಿರುವುದು ಎಂದರೆ ಮೇಲೆ ಬೀಳದಿರುವುದು, ಪರದೈವಕ್ಕೆ ಎರಗದಿರುವುದು ಎಂದರೆ ನಮಸ್ಕರಿಸದಿರುವುದು. ಒಂದೇ ಶಬ್ದ ಎರಡು ಅರ್ಥದಲ್ಲಿ ಉಪಯೋಗಿಸಿದೆ ಪೂಜೆ ಆತ್ಮವಿಕಾಸಕ್ಕೆ ಸಾಧನೆ ಅದು ಸಿದ್ಧಿಯಲ್ಲ ಎಂಬುದನ್ನು ಅಕ್ಕಮ್ಮ_ "ವ್ರತವೆಂಬುದೇನು ಲಿಂಗ ಎಂಬುದಕ್ಕೆ ನಿಚ್ಚಣಿಕೆ ವ್ರತವೆಂಬುದೇನು ಇಂದ್ರಿಯಂಗಳ ಸಂದು ಮುರಿವ ಕುಲಕಠಾರ" ಎಂದಿದ್ದಾಳೆ.
ವ್ರತದ ಮಹತ್ವವನ್ನು ಹೇಳುತ್ತ ಮೂಢ ಸಂಪ್ರದಾಯಗಳನ್ನು ಖಂಡಿಸಿದರು.
ದಲಿತ ವಚನಕಾರ‍್ತಿಯರು
ಮೊದಲ ದಲಿತ ವಚನಕಾರ‍್ತಿ ಉರಿಲಿಂಗ ಪೆದ್ದಿಯ ಪತ್ನಿ ಕಾಳವ್ವೆ. ಇವಳ ೧೩ ವಚನಗಳು ದೊರೆತಿದ್ದು ಭಕ್ತನ ಬಗ್ಗೆ ಈ ರೀತಿ ಹೇಳುತ್ತಾಳೆ.
ಭಕ್ತರ ಕುಲವೆತ್ತಿ ನಿಂದಿಸುವಾಗ ಭಕ್ತನೇ?
ತೂಬುರದ ಕೊಳ್ಳಿಯಂತೆ ಉರಿವಾತ ಭಕ್ತನೇ? ಎಂದು ಪ್ರಶ್ನಿಸಿದಳು. ತನ್ನ ಒಂದು ವಚನದಲ್ಲಿ
’ನಿಂದಯಾ ಶಿವಭಕ್ತನಾರಿ ಕೋಟಿ ಜನ್ಮನಿ ಸೂಖರ:
ಸತ್ತ ಜನ್ಮನೀ ಭವೇತ್ ಕುಷ್ಠಿದಾಸೀ ಗರ್ಭೇಷಿ ಜಾಯಿತೇ’ (ಜಾತಿಯ ಹೆಸರಿನಿಂದ ಶಿವಭಕ್ತ ನಿಂದಿಸಿದರೆ ಕೋಟಿ ಜನ್ಮದಲ್ಲಿ ಹಂದಿಯಾಗುವರು. ಕುಷ್ಠರೋಗಿ ದಾಸಿ ಗರ್ಭದಿಂದ ಜನಿಸುವರು.
ಕಾಳವ್ವೆ ಸಂಸ್ಕೃತವನ್ನು ಅಭ್ಯಾಸ ಮಾಡಿರುವರು.
ಕುಂಬಾರ ಗುಂಡಯ್ಯನ ಪತ್ನಿ ಕೇತಲದೇವಿಯ ಒಂದು ವಚನ ಲಭ್ಯವಿದೆ. ಅದು ವ್ರತಹೀನರ ವಿಚಾರದ ಬಗ್ಗೆ
"ಹದಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಬೇಶ್ವರ" ಎಂದಿದ್ದಾಳೆ.
ತೊನ್ನು ರೋಗ ಪೀಡಿತೆ ಹೊಲತಿಯಾದ ಗುಡವ್ವೆ ಒಂದು ಸಲ ಅಗ್ರಹಾರದಲ್ಲಿ ಹೋಗುತ್ತಿರುವಾಗ ಬ್ರಾಹ್ಮಣರ ನಿಂದನೆಗೆ ಒಳಗಾಗಿ ದೂರ ಹೋಗು ಮೈಗೆಟ್ಟ ಹೊಲತಿ’ ಎಂದಾಗ, ಶಿವನನ್ನು ಸಾಕ್ಷಾತ್ಕರಿಸಿಕೊಂಡು ತನ್ನ ರೋಗ ನಿವಾರಣೆ ಮಾಡಿಕೊಂಡು ಕಾಲಿಡುವೆನೆಂದು ಪ್ರತಿಜ್ಞೆ ಮಾಡುವಳು ಎಂಬ ಪ್ರಸ್ತಾಪ ಬಸವಪುರಾಣ (ಭೀಮಕವಿ) ದಲ್ಲಿ ಬರುತ್ತದೆ. ಅಂತರಂಗ ಶುದ್ಧಿ ಇಲ್ಲದ ತೋರಿಕೆ ವ್ರತಾಚರಣೆ ಮೂಲಕ ಮೇಲು ಜಾತಿ ಎನಿಸಿಕೊಂಡವರ ಕುರಿತು
’ತನು ಬೆತ್ತಲಾದಡೇನು ಮನ ಬೆತ್ತಲೆಯಾಗದನ್ನಕ್ಕ
ವ್ರತವಿದ್ದಡೆಯು ವ್ರತಹೀನರಾದ ಬಳಿಕ
ನೆರೆದಡೆ ನರಕವಯ್ಯ ನಿಂಬೇಶ್ವರ’ ಎನ್ನುತ್ತಾಳೆ
ಕೊರವಂಜಿಯ ಶಿವಶರಣೆ ಕಾಲಕಣ್ಣಿಯ ಕಾಮಮ್ಮ ಸಹ ವ್ರತಭ್ರಷ್ಟರನ್ನು ಖಂಡಿಸುವ ರೀತಿ, ಕದಿರೆ ರೆಮ್ಮವ್ವೆ ತನ್ನ ಜಾತಿಯ ಬಗ್ಗೆ ಸವಾಲು ಹಾಕಿರುವುದನ್ನು ಈಗಾಗಲೇ ಪ್ರಸ್ತಾಪಿಸಿದೆ. ಹಾಗೆ ಗೊಗ್ಗವ್ವೆಯ ಆರು ವಚನಗಳು ಲಭ್ಯವಿದ್ದು ಭಕ್ತಿಗೆ ಲಿಂಗತಾರತಮ್ಯ ಇಲ್ಲ ಎಂಬುದನ್ನು ಸ್ತ್ರೀ ಸಮಾನತೆಯಲ್ಲಿ ಪ್ರಸ್ತಾಪಿಸಿದೆ.
ಕಸಗುಡಿಸುವ ಸತ್ಯಕ್ಕ ಶರಭುಜಕ್ಕೇಶ್ವರ ಅಂಕಿತದೊಂದಿಗೆ ೨೯ ವಚನಗಳನ್ನೂ ರಚಿಸಿದ್ದಾರೆ.
ತನ್ನ ಕಾಯಕದ ಮೂಲಕ ಶಿವನಿಷ್ಠ ಪ್ರತಿಪಾದಿಸಿದಳು ತಾನು ನಂಬಿರುವ ಶಿವನನ್ನೇ ನಿಷ್ಠುರವಾಗಿ ಈ ರೀತಿ ಪ್ರಶ್ನಿಸುವಳು.
ಏಕೆನ್ನ ಬಾರದ ಭಯಗಳಲ್ಲಿ ಭರಿಸಿದೆ
ಏಕೆನ್ನ ಘೋರ ಸಂಸಾರದಲ್ಲಿರಿಸಿದೆ
ಏಕೆನಗೆ ಕರುಣಿಸಲ್ಲೊಲ್ಲದೆ ಕಾಡಿಹೆ?
ಏಕೆ ಹೇಳಾ ನನ್ನ ಲಿಂಗವೇ? ನಾನು ಮಾಡಿದ ತಪ್ಪೇನು?
ಹಡಪದ ಅಪ್ಪಣ್ಣನ ಪತ್ನಿ ಲಿಂಗಮ್ಮ ತನ್ನ ಜೀವನದ ಅನುಭವಗಳನ್ನೇ ವಚನಗಳಲ್ಲಿ ಪ್ರತಿಪಾದಿಸಿದ್ದಾಳೆ. "ಕನಿಷ್ಠದಲ್ಲಿ ಹುಟ್ಟಿದೆ ಉತ್ತಮದಲ್ಲಿ ಬೆಳೆದೆ ಸತ್ಯಶರಣರ ಪಾದ ಹಿಡಿದೆ" ಎಂದಿದ್ದಾಳೆ. ಇನ್ನೊಂದು ವಚನದಲ್ಲಿ
"ತನ್ನ ತಾನರಿಯದೇ ಅನ್ಯರ ಭೋಧೆಯ ಹೇಳುವವರ ಬಾಳುವೆ
ಕುರುಡ ಕನ್ನಡಿಯ ಹಿಡಿದಂತೆ
ತನ್ನ ಒಳಗೆ ಮೆರೆದು ಇದಿರಿಂಗೆ ಬೋಧೆಯ ಹೇಳಿ
ಉದರವ ಹೊರೆವ ಚದುರರೆಲ್ಲರೂ ಹಿರಿಯರೇ? ಅಲ್ಲಲ್ಲ ಎಂದು ಕಠಿಣವಾಗಿ ಹೇಳಿದ್ದಾಳೆ.
ವಚನಕಾರ‍್ತಿಯರಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಭಟನೆಯು, ಅವರ ವಚನಗಳಲ್ಲಿ ಕಂಡುಬರುತ್ತದೆ.
ಹೆಣ್ಣಿನ ವ್ಯಕ್ತಿತ್ವಕ್ಕೆ ಘನತೆ ತಂದು ವೈದಿಕ ಆಶಯಗಳನ್ನು ನಿರಾಕರಿಸಿದ್ದು, ’ಮಾಯೆ’ ಕುರಿತು ವ್ಯಾಖ್ಯಾನಮಾಡಿದ್ದು ಅಕ್ಕನ ವಿಶೇಷ; ತನ್ನ ಚಿಂತನೆಗಳ ಮೂಲಕ ಧರ್ಮಲಿಂಗ ಆಚಾರ ವ್ಯವಸ್ಥೆ ಮೀರಿ ನಿಂತ ಅಮುಗೆ ರಾಯಮ್ಮ; ವ್ರತಾಚರಣೆಯಲ್ಲಿನ ದೋಷ ಖಂಡಿಸುವ ಅಕ್ಕಮ್ಮ; ಕಾಯಕ ಪ್ರೀತಿಸಿ, ಆತ್ಮವಿಶ್ವಾಸ ಪ್ರಾಮಾಣಿಕತೆ ಮೆರೆಸಿದ ಸತ್ಯಕ್ಕ; ವೈದಿಕರ ಆಚರಣೆಗಳನ್ನು ಖಂಡಿಸಿದ ಕಾಳವ್ವೆ; ಅರಿಷಡ್ವರ್ಗ ಗೆದ್ದು ಶರಣತ್ವ ಪಡೆವ ಬಗೆಯನ್ನು ಹೇಳಿದ ಲಿಂಗಮ್ಮ; ಮಡಿಮುಟ್ಟು ಮೈಲಿಗೆ ಮುಂತಾದ ವಿಷಯಗಳನ್ನು ದೂರವಿಟ್ಟು ತಾತ್ವಿಕ ನೆಲೆಯ ಮೂಲಕ ಹೆಣ್ಣಿನ ನೈಜ ಅಸ್ತಿತ್ವವನ್ನು ಪ್ರಕಟಿಸಿದ ಬಸವಣ್ನನ ಪತ್ನಿ ನೀಲಾಂಬಿಕೆ; ವೈಚಾರಿಕ, ಬೌದ್ಧಿಕ ಸಂವಾದದ, ಅನುಭಾವಜ್ಞಾನ ತಾತ್ವಿಕ ವಚನಗಳ ಮುಕ್ತಾಯಕ್ಕ ಇವರೆಲ್ಲ ವೈಚಾರಿಕ ಪ್ರಜ್ಞೆ ಹೊಂದಿದ ವಚನಕಾರ‍್ತಿಯರು ಸಮಾನತೆ, ಸೋದರತೆ, ಆವರಣದಲ್ಲಿ ಪ್ರಶ್ನಿಸುವ ಮನೋಭಾವ, ಚಿಂತನೆಗಳಿಂದ ಕೂಡಿದ ವಚನಗಳು. ವಚನಕಾರ‍್ತಿಯರ ಅಂದಿನ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಯು.ಎನ್.ಸಂಗನಾಳಮಠ
ವಿಶ್ರಾಂತ ಉಪನ್ಯಾಸಕರು-ಲೇಖಕರು, "ಜ್ಯೋತಿರ್ಲಿಂಗ", ೧ನೇ ತಿರುವು, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ,
ಹೊನ್ನಾಳಿ- ೫೭೭ ೨೧೭, ದಾವಣಗೆರೆ ಜಿಲ್ಲೆ.

3 comments:

  1. ಕನ್ನಡ ವಚನಕಾರ್ತಿಯರ ಬಗ್ಗೆ ಉತ್ತಮ ಮಾಹಿತಿ ಕೊಡುವ ಲೇಖನ; ಹಲವೆಡೆ ವಾಕ್ಯಗಳು ಸ್ವಲ್ಪ ಗೋಜಲು ಗೋಜಲಾಗಿವೆ ಅವನ್ನು ಸರಿಪಡಿಸಿದರೆ ಲೇಖನ ಇನ್ನೂ ಉತ್ತಮವಾಗುತ್ತಿತ್ತು.

    ReplyDelete
  2. Good info,,i like it
    give me more updates
    shivrajkoti@gmail.com

    ReplyDelete
  3. Very good articles about 12th century Female writers (Vachanakartiyaru) Vachana movement and Akkamahadevi is clearly a major figure in the social empowerment of women.
    To know about Akkamahadevi please visit : http://lingayatreligion.com/Sharanaru/Akkamahadevi.htm

    ReplyDelete