Tuesday, October 5, 2010

ಭಾರತಕ್ಕೆ ಬೇಕಾಗಿರುವ ಭಾಷಾನೀತಿ

ಆನಂದ್, ಬನವಾಸಿ ಬಳಗ


ಸೆಪ್ಟೆಂಬರ್ ಎಂದ ಕೂಡಲೇ ಹಿಂದಿ ದಿನಾಚರಣೆ ನೆನಪಾಗುತ್ತದೆ. ಈ ಹಿಂದೆಲ್ಲಾ ಸೆಪ್ಟೆಂಬರ್ ೧೪ನ್ನು ಭಾರತದ ಕೇಂದ್ರಸರ್ಕಾರಿ ಕಛೇರಿಗಳ ತುಂಬಾ ಹಿಂದೀ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಭಾರತ ಕೇಂದ್ರಸರ್ಕಾರದ ಭಾಷಾನೀತಿಗಳಿಂದಾಗಿಯೂ, ಬೊಕ್ಕಸದ ನೆರವಿನಿಂದಾಗಿಯೂ ಇತ್ತೀಚಿಗೆ ಈ ದಿನಾಚರಣೆಯು - ಹಿಂದಿ ಸಪ್ತಾಹ, ಹಿಂದೀ ಪಕ್ಷಾಚರಣೆಯಾಗಿದ್ದು, ಮುಂಬರುವ ದಿನಗಳಲ್ಲಿ ಹಿಂದೀ ಮಾಸಾಚರಣೆ, ವರ್ಷಾಚರಣೆಗಳಾಗಿ ಬದಲಾದರೂ ಅಚ್ಚರಿಯಿಲ್ಲ. ಭಾರತದ ಕೇಂದ್ರಸರ್ಕಾರವೇನೋ ಹಿಂದಿಯನ್ನು ಇಡೀ ಭಾರತದ ಮೂಲೆಮೂಲೆಗೆ ಮುಟ್ಟಿಸುವ ರಣೋತ್ಸಾಹದಲ್ಲಿದೆ. ನಮಗೆ ಹಿಂದಿ ಬೇಕೋ? ಬೇಡವೋ? ಕನ್ನಡಿಗರ ಬದುಕಲ್ಲಿ ಹಿಂದೀ ಎನ್ನುವ ನಮ್ಮದಲ್ಲದ ನುಡಿಯನ್ನು ಭಾರತ ಸರ್ಕಾರ ನುಗ್ಗಿಸುವುದು ಸರಿಯೇ? ಬಹುಭಾಷಿಕ ಸಮುದಾಯಗಳು ಸೇರಿ ಆಗಿರುವ ಭಾರತಂತಹ ದೇಶದಲ್ಲಿ ಎಂಥಾ ವ್ಯವಸ್ಥೆ ಇರಬೇಕು? ಇಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಎಂತಹ ನಿಲುವನ್ನು ಹೊಂದಿದೆ? ಎಂದು ನೋಡಿದಾಗ, ಭಾರತದ ಸದರಿ ಭಾಷಾನೀತಿಯ ತಪ್ಪುಒಪ್ಪುಗಳು ಮನದಟ್ಟಾಗುತ್ತವೆ.
ವಿಶ್ವಸಂಸ್ಥೆಯು ಭಾಷೆಗೆ ನೀಡಿರುವ ಮಹತ್ವ
ವಿಶ್ವಸಂಸ್ಥೆಯು ವಿಶೇಷವಾಗಿ ಗಮನ ಹರಿಸಿರುವ ಕ್ಷೇತ್ರಗಳಲ್ಲಿ ಪ್ರಮುಖವಾದ ಒಂದು ಕ್ಷೇತ್ರ ಮಾನವ ಹಕ್ಕುಗಳು. ಇದರೊಳಗೇ ಭಾಷಾ ಸಮುದಾಯದ ಹಕ್ಕುಗಳನ್ನು ಅಡಕಗೊಳಿಸಿದ್ದಾರೆ. ಇದರ ಮೂಲ ಉದ್ದೇಶ ಪ್ರಪಂಚದ ಎಲ್ಲಾ ಭಾಷಿಕ ಸಮುದಾಯಗಳೂ ಕೂಡಾ ಉಳಿಯಬೇಕು. ಪ್ರತಿಯೊಂದು ಸಮುದಾಯವೂ ಕೂಡಾ ಮನುಕುಲದ ಪ್ರಗತಿಯಲ್ಲಿ ತಾನೂ ಭಾಗವಾಗಿರುವುದರ ಜೊತೆಯಲ್ಲೇ, ಇದಕ್ಕಾಗಿ ಕೊಡುಗೆ ನೀಡುತ್ತಾ ತನ್ನನ್ನು ತೊಡಗಿಸಿಕೊಳ್ಳಬೇಕು. ಇಂತಹ ಪಾಲುದಾರಿಕೆ ಸಾಧ್ಯವಾಗುವುದು ಪ್ರತಿಯೊಂದು ಸಮುದಾಯದ ಭಾಷೆ ಉಳಿದಾಗ, ಬೆಳೆದಾಗ ಮಾತ್ರಾ. ಕೆಲವು ಸಮುದಾಯಗಳ ಭಾಷೆಗಳು ಹಲವಾರು ಕಾರಣಗಳಿಂದಾಗಿ ಇಂದು ಆತಂಕ ಎದುರಿಸುತ್ತಿದೆ. ಹಾಗಾಗಿ ಇಂತಹ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ, ಒಟ್ಟಾರೆ ಮನುಕುಲದ ಅಭಿವೃದ್ಧಿಯ ದೃಷ್ಟಿಯಿಂದ ಈ ಭಾಷಾಹಕ್ಕುಗಳನ್ನು ಗುರುತಿಸಿ ಘೋಷಿಸಲಾಗಿದೆ. ಇದು ಇಡೀ ಜಗತ್ತಿಗೆ ಅನ್ವಯಿಸುವಂತದ್ದು. ಭಾರತದೇಶದಲ್ಲಿ ಇದೀಗ ಅನುಸರಿಸಲಾಗುತ್ತಿರುವ ಭಾಷಾನೀತಿಯು, ಹೇಗೆ ಇಂತಹ ಒಂದು ಸದುದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಈ ಹಿಂದೀ ಉತ್ಸವಗಳ ಸಂದರ್ಭದಲ್ಲಿ ತಿಳಿದುಕೊಳ್ಳೋಣ. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಲ್ಲೊಂದಾದ UಓಇSಅಔ, ಜಗತ್ತಿನ ಭಾಷಾ ಸಮುದಾಯಗಳ ಕುರಿತು ಹೊರಡಿಸಿರೋ ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯಲ್ಲಿ ಪ್ರತಿಯೊಂದು ಭಾಷಾ ಸಮುದಾಯದ ಹಕ್ಕುಗಳ ಬಗ್ಗೆ ಹೀಗೆ ಹೇಳಿದೆ.
ಭಾಷಾ ಹಕ್ಕು ಘೋಷಣೆಯ ಉದ್ದೇಶ
ಯುನೆಸ್ಕೋ ಹೊರತಂದಿರುವ ಈ ಭಾಷಾಹಕ್ಕುಗಳು: ಬಾರ್ಸಿಲೋನಾ ಘೋಷಣೆಯ ಉದ್ದೇಶಗಳು ಇಂತಿವೆ
ಸ್ವಯಂ ಆಡಳಿತದ ಕೊರತೆ, ಜನಸಂಖ್ಯೆಯ ಕೊರತೆ, ಸಮುದಾಯದ ಕೆಲಭಾಗ ಅಥವಾ ಇಡೀ ಸಮುದಾಯವೇ ಚದರಿ ಹೋಗಿರುವುದು, ಬಲಹೀನ ಆರ್ಥಿಕಮಟ್ಟ, ಸುಧಾರಿಸಿಲ್ಲದ ಭಾಷಾಮಟ್ಟ, ಬಲಶಾಲಿ ಸಮೂಹದ ನಂಬಿಕೆ/ ಸಂಸ್ಕೃತಿಗಳಿಗೆ ಮುಖಾಮುಖಿಯಾಗಿರುವಿಕೆಗಳು ಒಂದು ಭಾಷಾ ಸಮುದಾಯದ ಉಳಿವಿಗೆ ಎದುರಾಗಿರುವ ಆತಂಕಗಳಾಗಿದ್ದು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಗುರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸವಾಲುಗಳನ್ನೆದುರಿಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಉಂಟಾಗಿದೆ.
ರಾಜಕೀಯ ಗುರಿಗಳು: ಏಳಿಗೆಯ ದಿಕ್ಕಿನೆಡೆಗಿನ ಪ್ರಗತಿಯ ಪಯಣದಲ್ಲಿ ಎಲ್ಲಾ ಸಮುದಾಯಗಳೂ ಒಂದಾಗಿ ಸಾಗಲು ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ ವ್ಯವಸ್ಥೆಯನ್ನು ರೂಪಿಸುವುದು.
ಸಾಂಸ್ಕೃತಿಕ ಗುರಿಗಳು: ಪ್ರಗತಿಯ ಹಾದಿಯಲ್ಲಿ ಜಗತ್ತಿನಾದ್ಯಂತ ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ ವ್ಯವಸ್ಥೆಯನ್ನು ರೂಪಿಸುವುದು.
ಆರ್ಥಿಕ ಗುರಿಗಳು: ಪ್ರಗತಿಗೆ ಪೂರಕವಾಗುವಂತಹ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಮಾದರಿಯನ್ನು ರೂಪಿಸುವುದು. ಈ ಮೂರು ಗುರಿಗಳ ಕಾರಣದಿಂದಾಗಿ ಇಲ್ಲಿ ಯಾವೊಂದು ರಾಷ್ಟ್ರವನ್ನಾಗಲೀ, ರಾಜಕೀಯ ಸಾರ್ವಭೌಮತ್ವವನ್ನಾಗಲೀ ಮಾನದಂಡವಾಗಿ ಪರಿಗಣಿಸದೆ ಭಾಷಿಕ ಸಮುದಾಯವನ್ನು ಪರಿಗಣಿಸಿ, ಸಮುದಾಯಗಳ ಭಾಷಿಕ ಹಕ್ಕಿನ ಬಗ್ಗೆ ಪ್ರತಿಪಾದಿಸಲಾಗಿದೆ. ಇಡೀ ಮನುಕುಲ ತನ್ನ ಭಾಷಾವೈವಿಧ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಉಳಿಸಿಕೊಂಡು ಸೌಹಾರ್ದಯುತವಾದ ಸಹಬಾಳ್ವೆಯನ್ನು ನಡೆಸುತ್ತಾ, ಇಡೀ ಮನುಕುಲವು ಏಳಿಗೆಯತ್ತ ಸಾಗಲು ಇದು ಅತ್ಯಗತ್ಯವೆಂದು ಭಾವಿಸಲಾಗಿದೆ.
ಇದರಲ್ಲಿರೋ ಮಹತ್ವದ ಅಂಶಗಳು
ವೈಯುಕ್ತಿಕ ಮಟ್ಟದಲ್ಲಿ ವ್ಯಕ್ತಿಯೊಬ್ಬನಿಗೆ ತನ್ನತನವನ್ನು ಉಳಿಸಿಕೊಳ್ಳಲು ಇರುವ ಹಕ್ಕುಗಳ ಬಗ್ಗೆ ತಿಳಿಸುತ್ತಾ, ತಾನಿರುವ ನೆಲದ ಮುಖ್ಯವಾಹಿನಿಗೆ ಪೂರಕವಾಗಿರಬೇಕೆಂಬ ಸಣ್ಣ ಎಚ್ಚರಿಕೆಯನ್ನೂ ಇದು ನೀಡುತ್ತದೆ. ಇದರೊಟ್ಟಿಗೆ ಒಂದು ಭಾಷಾ ಸಮುದಾಯಕ್ಕೆ ತನ್ನದೇ ನೆಲದಲ್ಲಿ ಇರುವ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಕನ್ನಡವನ್ನು ಎಷ್ಟರಮಟ್ಟಿಗೆ ಬಳಸುವ ಹಕ್ಕು ಇದೆ ಎಂಬುದನ್ನು ಇದು ತಿಳಿಸಿಕೊಡುತ್ತದೆ. ಇಡೀ ವರದಿಯು ಇಂಗ್ಲೀಷಿನಲ್ಲಿ hಣಣಠಿ://ತಿತಿತಿ.uಟಿesಛಿo.oಡಿg/ಛಿಠಿಠಿ/uಞ/ಜeಛಿಟಚಿಡಿಚಿಣioಟಿs/ಟiಟಿguisಣiಛಿ.ಠಿಜಜಿ ಕೊಂಡಿಯಲ್ಲಿ ಸಿಗುತ್ತದೆ. ಈ ವರದಿಯ ಪ್ರಮುಖವಾದ ಕೆಲವು ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದ್ದೇವೆ.
ಪರಿಚ್ಛೇದ ೮.೨: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನುಡಿಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಇರುತ್ತದೆ.
ಪರಿಚ್ಛೇದ ೧೧: ಎಲ್ಲಾ ಭಾಷಾ ಸಮುದಾಯಗಳಿಗೂ ಈ ಘೋಷಣೆಯ ಪ್ರತಿಯೊಂದು ಹಕ್ಕನ್ನೂ ಸಾಧಿಸಿಕೊಳ್ಳುವ ಅಧಿಕಾರವಿರುತ್ತದೆ.
ಪರಿಚ್ಛೇದ ೧೪: ಈ ಹಕ್ಕುಗಳನ್ನು ತನ್ನ ವ್ಯಾಪ್ತಿಯ ಪ್ರದೇಶದಲ್ಲಿನ ನುಡಿಯ ಸ್ವಾಭಾವಿಕವಾದ ಹಕ್ಕುಗಳಿಗೆ ಧಕ್ಕೆ ತರುವಂತೆ ಅರ್ಥೈಸಲಾಗದು.
ಪರಿಚ್ಛೇದ ೧೬: ಎಲ್ಲಾ ಭಾಷಿಕ ಸಮುದಾಯಕ್ಕೂ ತನ್ನ ಪರಿಧಿಯೊಳಗಿನ ಎಲ್ಲಾ ಸ್ಥಳೀಯ ಹಾಗೂ ಕೇಂದ್ರಗಳ ಸಾರ್ವಜನಿಕ ಕಛೇರಿಯಲ್ಲಿ ತನ್ನದೇ ನುಡಿಯಲ್ಲಿ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ.
ಪರಿಚ್ಛೇದ ೧೮: ಎಲ್ಲಾ ಭಾಷಾ ಸಮುದಾಯಗಳಿಗೂ ತಮ್ಮದೇ ನುಡಿಯಲ್ಲಿ ನೆಲದ ಕಾನೂನು, ನೀತಿ ನಿಯಮಗಳನ್ನು ಆಯಾಪ್ರದೇಶದ ಭಾಷೆಯಲ್ಲೇ ದೊರಕಿಸಿಕೊಡಬೇಕು.
ಪರಿಚ್ಛೇದ ೨೨: ಎಲ್ಲಾ ಭಾಷಾ ಸಮುದಾಯಗಳಿಗೆ ಪ್ರಮಾಣಪತ್ರಗಳನ್ನು ನೋಟರಿಯಿಂದಾಗಲೀ, ಇನ್ಯಾವುದೇ ಅಧಿಕೃತ ಸಂಸ್ಥೆಗಳಿಂದ ಪಡೆಯುವಾಗಲಾಗಲೀ, ಆಯಾಪ್ರದೇಶದ ಭಾಷೆಯಲ್ಲಿ ಪಡೆಯುವ ಹಕ್ಕಿರುತ್ತದೆ. ಇದನ್ನು ಮಾನ್ಯ ಮಾಡದೇ ಇರುವ ಹಾಗಿಲ್ಲ.
ಪರಿಚ್ಛೇದ ೨೪: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನಾಡಿನ ಕಲಿಕೆಯ ವ್ಯವಸ್ಥೆಯಲ್ಲಿ ಯಾವ ಹಂತದವರೆಗೂ ತಾಯ್ನುಡಿಯಿರಬೇಕೆಂದು ನಿರ್ಣಯಿಸುವ ಹಕ್ಕಿರುತ್ತದೆ.
ಪರಿಚ್ಛೇದ ೨೮: ತನ್ನ ನೆಲದ ಇತಿಹಾಸ, ಸಂಸ್ಕೃತಿಗಳನ್ನು ಕಲಿಕೆಯಲ್ಲಿ ತಮಗೆ ಬೇಕಾದ ಪ್ರಮಾಣದಲ್ಲಿ ಅಳವಡಿಸುವ ಹಕ್ಕು ಪ್ರತಿಯೊಂದು ಭಾಷಾ ಸಮೂಹಕ್ಕೂ ಇರುತ್ತದೆ.
ಪರಿಚ್ಛೇದ ೩೨: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದ, ಊರಿನ, ಜಾಗದ ಹೆಸರನ್ನು ತನಗೆ ಬೇಕಾದಂತೆ ಉಚ್ಚರಿಸುವ, ಬಳಸುವ ಹಾಗೂ ಬದಲಾಯಿಸುವ ಅಧಿಕಾರವಿರುತ್ತದೆ.
ಪರಿಚ್ಛೇದ ೩೫: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿನ ಮಾಧ್ಯಮಗಳಲ್ಲಿ ಆ ನೆಲದ ಭಾಷೆ ಯಾವ ಪ್ರಮಾಣದಲ್ಲಿರಬೇಕು ಎಂದು ನಿರ್ಣಯಿಸಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ ೪೫: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ ಗ್ರಂಥಾಲಯ, ಚಲನಚಿತ್ರ, ರಂಗಭೂಮಿ, ಮ್ಯೂಸಿಯಂಗಳೂ ಸೇರಿದಂತೆ ಎಲ್ಲಾ ತೆರನಾದ ಸಾಂಸ್ಕೃತಿಕ ಪ್ರಾಕಾರಗಳಲ್ಲಿ ಆ ನೆಲದ ಭಾಷೆಗಿರಬೇಕಾದ ಪ್ರಮುಖವಾದ ಸ್ಥಾನವನ್ನು (ಸಾರ್ವಭೌಮತ್ವವನ್ನು) ಕಾಪಾಡಿಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ ೪೮.೧: ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ನೆಲದಲ್ಲಿ, ತನ್ನ ನುಡಿಯಲ್ಲೇ ಎಲ್ಲಾ ತೆರನಾದ ಗ್ರಾಹಕ ಸೇವೆಯನ್ನು ಪಡೆಯುವ ಹಕ್ಕಿರುತ್ತದೆ. ಬ್ಯಾಂಕಿಂಗ್, ಇನ್ಶುರೆನ್ಸ್, ಸರಕು, ಸಾಮಾನು ಸರಂಜಾಮುಗಳು ಇತ್ಯಾದಿ ಎಲ್ಲವನ್ನೂ ಆ ಪ್ರದೇಶದ ಭಾಷೆಯಲ್ಲಿ ಪಡೆದುಕೊಳ್ಳುವ ಹಕ್ಕಿರುತ್ತದೆ.
ಪರಿಚ್ಛೇದ ೪೮.೨: ಯಾವುದೇ ಸಂಸ್ಥೆ ಆಂತರಿಕವಾಗಿ ಹೊಂದಿರುವ ಅಥವಾ ಹೊಂದಿಲ್ಲದ, ಯಾವುದೇ ಕಾನೂನು ಈ ಚೌಕಟ್ಟನ್ನು ಮೀರಲಾಗುವುದಿಲ್ಲ.
ಪರಿಚ್ಛೇದ ೫೧: ಪ್ರತಿಯೊಂದು ಭಾಷಿಕ ಸಮುದಾಯಕ್ಕೂ ತನ್ನ ನೆಲದಲ್ಲಿನ ಎಲ್ಲಾ ವ್ಯಾಪಾರಿ ವಹಿವಾಟಿನ ಜಾಹೀರಾತುಗಳು, ಸೈನ್‌ಬೋರ್ಡುಗಳು ಇತ್ಯಾದಿಗಳಲ್ಲಿ ಆ ನೆಲದ ಭಾಷೆಗೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಹಕ್ಕಿರುತ್ತದೆ.
ಎಷ್ಟೊಂದು ವಿಸ್ತಾರವಾಗಿ ನಮ್ಮ ಹಕ್ಕುಗಳ ಬಗ್ಗೆ UಓಇSಅಔ ವಿಶ್ವಸಂಸ್ಥೆಯ ಎಲ್ಲಾ ದೇಶಗಳಿಗೂ ಅನ್ವಯವಾಗುವಂತೆ, ಭಾಷಾ ಸಮುದಾಯಗಳ ಹಕ್ಕಿಗೆ ಸಂಬಂಧಿಸಿದಂತೆ ಘೋಷಣೆ ಹೊರಡಿಸಿದೆಯಲ್ಲವೇ? ಆದರೆ ಭಾರತದೇಶವು ತನ್ನ ನೆಲದಲ್ಲಿ ಎಂತಹ ಭಾಷಾನೀತಿಯನ್ನು ಅಳವಡಿಸಿಕೊಂಡಿದೆ? ಭಾರತದ ಸಂವಿಧಾನ, ಸಂಸತ್ತು, ಆಡಳಿತ ವ್ಯವಸ್ಥೆ ಈ ನಾಡಿನಲ್ಲಿರುವ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಅಗತ್ಯವಿರುವ ನಿಯಮಾವಳಿಗಳನ್ನು ಹೊಂದಿವೆಯೇ? ಬಹುಭಾಷಿಕ ಭಾರತದ ವೈವಿಧ್ಯತೆಯನ್ನು, ಭಾರತದೇಶವು ಶಾಪವೆಂದು ಪರಿಗಣಿಸಿದೆಯೇ? ಎಂಬುದನ್ನೆಲ್ಲಾ ಅರಿಯಲು ಭಾರತ ಸರ್ಕಾರದ ಭಾಷಾನೀತಿಯ ಬಗ್ಗೆ ಕಣ್ಣು ಹಾಯಿಸೋಣ.
ಭಾರತದ ಭಾಷಾನೀತಿ
ವಿಶ್ವಸಂಸ್ಥೆಯು ಜಗತ್ತಿನ ನಾನಾ ಭಾಷಾ ಸಮುದಾಯಗಳ ಭಾಷಿಕ ಹಕ್ಕನ್ನು ಉಳಿಸಿಕೊಳ್ಳುವುದರ ಬಗ್ಗೆ ಹೊಂದಿರುವ ನಿಲುವು, ತೋರಿಸಿರುವ ಕಾಳಜಿಗಳ ಬಗ್ಗೆ ನೋಡಿದೆವು. ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರೋ ಭಾರತದಲ್ಲಿ ಪರಿಸ್ಥಿತಿ ಹೀಗೆಯೇ ಇದೆಯಾ ಎಂದು ನೋಡೋಣ. ಭಾರತ ದೇಶ ಅನೇಕ ಭಾಷಾ ಜನಾಂಗಗಳಿರುವ ನಾನಾ ಸಂಸ್ಕೃತಿಗಳ, ಆಚರಣೆಗಳ, ನಂಬಿಕೆಗಳ ಒಂದು ದೊಡ್ಡ ದೇಶ. ರಾಜಕೀಯವಾಗಿ ೧೯೪೭ರಲ್ಲಿ ಸ್ವಾತಂತ್ರ್ಯ ದಕ್ಕಿಸಿಕೊಂಡ ಸಂದರ್ಭದಲ್ಲಿ ನಮ್ಮೆದುರು ಇದ್ದ ಮುಖ್ಯವಾದ ಸವಾಲುಗಳು ಈ ವೈವಿಧ್ಯತೆಗಳ ನಾಡನ್ನು ಹೇಗೆ ಆಳಿಕೊಳ್ಳೋದು? ಹೇಗೆ ಒಗ್ಗಟ್ಟಿನಲ್ಲಿಟ್ಟುಕೊಳ್ಳೋದು?... ಇತ್ಯಾದಿಗಳು.
ಮೊದಲ ಹೆಜ್ಜೆಯಲ್ಲೇ ಎಡವಿದ ಭಾರತ
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಗಳಲ್ಲಿ ಸ್ವಾತಂತ್ರ್ಯದ ನಂತರದ ಭಾರತದ ಸ್ವರೂಪದ ಬಗ್ಗೆ ಚರ್ಚಿಸಿದ್ದರು. ಆಗಲೇ ಹಿಂದಿಯನ್ನು ಭಾರತದ ರಾಷ್ಟ್ರಭಾಷೆಯಾಗಿ ಹೊಂದುವ ಬಗ್ಗೆ ಚರ್ಚೆಯಾಯಿತು. ಸ್ವಾತಂತ್ರ್ಯದ ನಂತರ ಅಂತಹ ಪ್ರಯತ್ನಗಳೂ ನಡೆದವು. ಹಿಂದಿಯೇತರ ಪ್ರದೇಶಗಳ ವಿರೋಧದ ಕಾರಣದಿಂದಾಗಿ ಅದು ಫಲಿಸಲಿಲ್ಲ. ಶ್ರೀ.ಧುಲೇಕರ್ ಎಂಬ ಒಬ್ಬ ಸಂಸದರಂತೂ ಹಿಂದಿ ಬಾರದವರು ಭಾರತದಲ್ಲಿರಲು ನಾಲಾಯಕ್ಕು ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಉತ್ತರವಾಗಿ ಶ್ರೀ.ಕೃಷ್ಣಮಾಚಾರಿಯವರು ನಿಮಗೆ ಒಡೆದಿರುವ ಹಿಂದೀ ಭಾರತ ಬೇಕೆ? ಅಥವಾ ಇಡೀ ಭಾರತ ಬೇಕೇ? ಎಂದು ಖಾರವಾಗಿ ಪ್ರತಿಕ್ರಿಯಿಸಿ, ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸಿದರೆ ಭಾರತ ಒಡೆದು ಹೋದೀತು ಎಂಬ ಎಚ್ಚರಿಕೆ ನೀಡಿದ್ದರು. ಮೂರು ವರ್ಷಗಳ ತೀವ್ರವಾದ ಚರ್ಚೆಯ ನಂತರ ೧೯೫೦ರಲ್ಲಿ ಭಾರತದ ಸಂವಿಧಾನವು ರೂಪುಗೊಂಡು ಜಾರಿಯಾಯಿತು.
ಸಂವಿಧಾನ ನೀಡಿರುವ ಹಿಂದಿಪ್ರಚಾರದ ಪರವಾನಗಿ
ಸದರಿ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಲಿಲ್ಲವಾದರೂ ಭಾರತಕ್ಕೆ ರಾಜ್‌ಭಾಷಾ ಎಂಬ ಹೊಸ ಪಟ್ಟವನ್ನು ಕಟ್ಟಿ ಅದನ್ನು ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿ, ಜೊತೆಗೆ ೧೫ ವರ್ಷಗಳ ಕಾಲಕ್ಕಾಗಿ ಇಂಗ್ಲೀಷನ್ನು ಸೇರಿಸಿ ಘೋಷಿಸಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡದಂತೆ ತಡೆಯಲು ಯತ್ನಿಸಿದ ಹಿಂದಿಯೇತರ ನಾಡಿನವರಿಗೆ ಭಾರತೀಯ ಸಂವಿಧಾನದಲ್ಲಿ ರಾಷ್ಟ್ರಭಾಷೆ ಎಂಬ ಪದದ ಬಳಕೆ ಆಗಿಲ್ಲದಿರುವುದು ಸಮಾಧಾನ ತಂದಿತು. ಆದರೆ ಸಂವಿಧಾನದ ೩೫೧ನೇ ಕಲಮಿನಲ್ಲಿ ಹಿಂದಿಯ ಪ್ರಸಾರವನ್ನು ಮಾಡುವುದು ಕೇಂದ್ರದ ಕರ್ತವ್ಯವೆಂದು ಬರೆಯಲಾಗಿರುವುದು, ಒಟ್ಟಾರೆ ಭಾರತದೇಶದ ಭಾಷಾನೀತಿಗೆ ಹಿಡಿದ ಕನ್ನಡಿಯಾಗಿದ್ದು, ವಾಸ್ತವವಾಗಿ ಅಂದಿನಿಂದಲೇ ಹಿಂದೀ ಭಾಷೆಯನ್ನು ಭಾರತದ ಮನೆಮನೆಗಳಲ್ಲಿ ಪ್ರತಿಷ್ಠಾಪಿಸುವ ಕ್ರಮಕ್ಕೆ ಭಾರತದ ಕೇಂದ್ರಸರ್ಕಾರವೇ ಮುನ್ನುಡಿ ಹಾಡಿತು. ಹೀಗಾಗಿ ಆ ಸಮಾಧಾನವೆಂಬುದು ಹಿಂದೀಭಾಷೆಗೆ ರಾಷ್ಟ್ರಭಾಷೆ ಎಂಬ ಹೆಸರು ದಕ್ಕಿಲ್ಲ ಎಂಬುದಕ್ಕೇ ಮಾತ್ರಾ ಸೀಮಿತವಾಯಿತು.
ಸಂವಿಧಾನದ ಪುಟಗಳಲ್ಲಿ ಭಾರತದಲ್ಲಿ ಹಿಂದಿಯ ಬಳಕೆಯನ್ನು ಕ್ರಮೇಣ ಹೆಚ್ಚಿಸಲು ಭಾರತವು ಬದ್ಧವಾಗಿರುತ್ತದೆ (ಆರ್ಟಿಕಲ್ ೩೫೧) ಎಂದು ಬರೆಯಲಾಯಿತು. ಭಾರತದಲ್ಲಿ ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿಸುವ ಗುರಿಯಿಂದ, ಹಿಂದಿಯನ್ನು ಪಸರಿಸಲು ಐದು ವರ್ಷಗಳಲ್ಲಿ ಒಂದು ಇಲಾಖೆಯನ್ನು ತೆಗೆಯಬೇಕು ಮತ್ತು ಕ್ರಮೇಣ ಇಂಗ್ಲಿಷ್ ಬಳಕೆಗೆ ಕಡಿವಾಣ ಹಾಕಲು ಶ್ರಮಿಸಬೇಕು (ಆರ್ಟಿಕಲ್ ೩೪೪) ಎನ್ನಲಾಯಿತು. ರಾಜ್ಯ ರಾಜ್ಯಗಳ ನಡುವೆ, ರಾಜ್ಯ ಕೇಂದ್ರಸರ್ಕಾರಗಳ ನಡುವಿನ ಎಲ್ಲಾ ವಹಿವಾಟುಗಳು ಹಿಂದಿ/ ಇಂಗ್ಲೀಷಿನಲ್ಲಿ ಮಾತ್ರವೇ ಇರತಕ್ಕದು (ಆರ್ಟಿಕಲ್ ೩೪೫) ಎಂದೆಲ್ಲಾ ಬರೆಯಲಾಯಿತು.
ಹಿಂದಿ ಹರಡುವಿಕೆಯ ಯೋಜನೆಗಳು
ಸಾಧ್ಯವಾದಾಗಲೆಲ್ಲಾ ಹಿಂದಿಯ ಸಾರ್ವಭೌಮತ್ವ ಸ್ಥಾಪಿಸಲು ಪ್ರಯತ್ನಗಳು ನಡೆದವು. ಭಾಷಾ ಸಮಿತಿಯನ್ನು ನೇಮಿಸಿ ೧೯೬೩ರಲ್ಲಿ ಅಧಿಕೃತ ಭಾಷಾ ಸ್ಥಾನದಿಂದ ಇಂಗ್ಲಿಷನ್ನು ಕಿತ್ತೆಸೆದು, ಹಿಂದಿಯೊಂದನ್ನೇ ಉಳಿಸಿಕೊಳ್ಳುವ ಪ್ರಯತ್ನಗಳು ನಡೆದವು. ತಮಿಳುನಾಡಿನಲ್ಲಿ ಪ್ರತಿರೋಧ ಹುಟ್ಟಿಕೊಂಡಾಗ, ೧೯೬೫ರಲ್ಲಿ ಇಂಗ್ಲೀಷನ್ನೂ ಅದೇ ಸ್ಥಾನದಲ್ಲಿ ಮುಂದುವರೆಸುವ ಒಂದು ತಿದ್ದುಪಡಿಯನ್ನು ತರಲಾಯಿತು. ಆದರೇನು? ಯಾವುದೇ ಇತರ ಭಾರತೀಯ ಭಾಷೆಗಿಲ್ಲದ ಸೌಕರ್ಯ ಹಿಂದಿ ಪ್ರಚಾರಕ್ಕೆ ನೀಡಲಾಯಿತು. ಸಾರ್ವಜನಿಕರ ತೆರಿಗೆಯ ಹಣದಿಂದ ನೂರಾರು ಕೋಟಿ ರೂಪಾಯಿಗಳನ್ನು ಕೇವಲ ಹಿಂದೀ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಮತ್ತೊಂದು ಕಡೆ ಭಾರತದ ತುಂಬೆಲ್ಲಾ ಹಿಂದೀ ಪ್ರಚಾರ ಸಭೆಗಳನ್ನು ಆರಂಭಿಸಲಾಯಿತು. ವಿಶ್ವಾಸ, ಉತ್ತೇಜನ ಮತ್ತು ಒಲಿಸುವಿಕೆಯ ಮೂಲಕ ಹಿಂದಿಯನ್ನು ಹರಡಬೇಕೆಂಬುದು ಭಾರತ ದೇಶದ ನೀತಿಯಾಯಿತು.
ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್
ಇಂತಹ ಗುರಿ ಈಡೇರಿಕೆಗಾಗಿಯೇ ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್ ಅನ್ನೋ ಇಲಾಖೆಯನ್ನು ತೆರೆಯಲಾಯಿತು. ಅದರ ಮೂಲಕ ಕೇಂದ್ರಸರ್ಕಾರಿ/ ಕೇಂದ್ರದ ಅಧೀನದ ಕಛೇರಿಗಳಲ್ಲಿ ಹಿಂದಿಯನ್ನು ಅನುಷ್ಠಾನಗೊಳಿಸಲು ರೂಪುರೇಶೆಗಳನ್ನು ರೂಪಿಸಿ ಭಾರತದ ಅಧಿಕೃತ ಸಂಪರ್ಕ ಭಾಷಾ ಕಾಯ್ದೆಯನ್ನು ರೂಪಿಸಲಾಯ್ತು. ೧೯೭೬ರಲ್ಲಿ ಜಾರಿಗೆ ತರಲಾದ ಭಾರತದ ಅಫಿಷಿಯಲ್ ಲಾಂಗ್ವೇಜ್ ರೂಲ್ಸ್‌ನ ನಿಯಮಾವಳಿಗಳಂತೂ ಹಿಂದಿಯನ್ನು ಪ್ರತಿಷ್ಠಾಪಿಸುವ ಕೆಲಸಕ್ಕೆ ಮತ್ತಷ್ಟು ವೇಗ ತಂದುಕೊಡುವಂತಿದ್ದವು. ಈ ಕಾನೂನು ಜಾರಿಯಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. ಏಕೆಂದರೆ ಈ ಕಾಯ್ದೆ ತಮಿಳುನಾಡಿಗೆ ಅನ್ವಯವಾಗುವುದಿಲ್ಲ ಎಂದು ಮೊದಲ ಪ್ಯಾರಾದಲ್ಲೇ ಬರೆಯಲಾಗಿದೆ. ದೇಶದ ಯಾವುದೇ ಮೂಲೆಯ ಕೇಂದ್ರಸರ್ಕಾರಿ ಕಛೇರಿಯಲ್ಲೂ ಹಿಂದಿಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದಿಯಲ್ಲೇ ಉತ್ತರ ನೀಡಬೇಕು ಎಂದು ಇದರಲ್ಲಿರುವುದು ಹಿಂದೀ ಸಾಮ್ರಾಜ್ಯಶಾಹಿಯ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ
ಹಿಂದಿಯೊಂದಕ್ಕೆ ಮಾತ್ರಾ ಮಾನ್ಯತೆ
ಒಟ್ಟಾರೆ ಭಾರತದ ಭಾಷಾನೀತಿಯು ಸ್ಪಷ್ಟವಾಗಿ ಹಿಂದಿಯೆನ್ನುವ ಒಂದು ಭಾಷೆಗೆ ಮಾತ್ರಾ ಪ್ರೋತ್ಸಾಹ ಕೊಡುವಂತಿದೆ. ಈ ಪ್ರೋತ್ಸಾಹ, ಹಿಂದಿ ಭಾಷಿಕ ಪ್ರದೇಶಗಳಿಗೆ ಮಾತ್ರಾ ಸೀಮಿತವಾಗಿದ್ದಿದ್ದರೆ ನಮ್ಮ ನುಡಿಗೂ ಹೀಗೆ ಪ್ರೋತ್ಸಾಹ ಕೊಡಿ ಅನ್ನಬಹುದಿತ್ತು. ಆದರೆ ಭಾರತ ಸರ್ಕಾರದ ಈ ಕ್ರಮಗಳು ಹಿಂದಿಯನ್ನು ನಮ್ಮ ನಾಡೊಳಗೆ ಪ್ರತಿಷ್ಠಾಪಿಸಲು ನೀಡುತ್ತಿರುವ ಪ್ರೋತ್ಸಾಹವಾಗಿದೆ. ತಾರತಮ್ಯದ ಭಾಷಾನೀತಿ, ವಿಶ್ವಸಂಸ್ಥೆಯ ಭಾಷಾನೀತಿಗೆ ವಿರುದ್ಧವಾಗಿರುವಂತೆ ಎದ್ದು ಕಾಣುತ್ತಿದೆ. ಹಾಗಾದರೆ ಭಾರತದ ಭಾಷಾನೀತಿ ಹೇಗಿರಬೇಕು ಎಂದರೆ...
ಭಾರತಕ್ಕೊಪ್ಪೋ ಭಾಷಾನೀತಿ
ಅನೇಕ ವೈವಿಧ್ಯತೆಗಳನ್ನು ಹೊಂದಿರುವ ಭಾರತವನ್ನು ಅವುಗಳ ವೈವಿಧ್ಯತೆ/ ಅನನ್ಯತೆಗಳನ್ನು ಉಳಿಸಿಕೊಳ್ಳಲು ಪೂರಕವಾಗುವಂತೆ ನಮ್ಮ ಭಾಷಾನೀತಿ ಇರಬೇಕಾಗಿದೆ. ವಿಶ್ವಸಂಸ್ಥೆಯು ಘೋಷಿಸಿರುವ ಭಾಷಾ ಹಕ್ಕುಗಳು ಭಾರತದ ಪ್ರತಿಯೊಂದು ಭಾಷಾ ಸಮುದಾಯಕ್ಕೆ ದೊರಕಿಸಿಕೊಡುವಂತಹ ಭಾಷಾನೀತಿ ರೂಪುಗೊಳ್ಳಬೇಕಾಗಿದೆ. ಭಾರತದ ಪ್ರತಿಯೊಂದು ಭಾಷೆಗೂ ರಾಜ್‌ಭಾಷೆಯ ಪಟ್ಟ ಸಿಗಲಿ. ರಾಜ್ಯರಾಜ್ಯಗಳ ನಡುವಿನ ವಹಿವಾಟು ಆಯಾ ರಾಜ್ಯಗಳ ನುಡಿಗಳಲ್ಲಾಗಲಿ. ಪ್ರತಿರಾಜ್ಯಕ್ಕೂ ತನ್ನ ನುಡಿಯಲ್ಲಿ ತನ್ನ ಆಡಳಿತ, ಶಿಕ್ಷಣ, ಬದುಕುಗಳನ್ನು ಕಟ್ಟಿಕೊಳ್ಳಲು ಪೂರಕವಾಗುವಂತಹ ಭಾಷಾನೀತಿ ಭಾರತದ್ದಾಗಲಿ. ಹೀಗೆ ಪ್ರತಿಯೊಂದು ಪ್ರದೇಶದಲ್ಲೂ ಆಯಾ ಪ್ರದೇಶದ ಭಾಷೆಗೆ ಸಾರ್ವಭೌಮತ್ವವನ್ನು ನಿಜವಾಗಿಯೂ ತಂದುಕೊಡಬಲ್ಲಂತೆ ಭಾರತದ ಭಾಷಾನೀತಿಯನ್ನು ಮರು ರೂಪಿಸಬೇಕಾಗಿದೆ. ಒಟ್ಟಾರೆ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕಾಗಿದೆ.
ಪ್ರಗತಿಯ ಪಯಣದಲ್ಲಿ ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ, ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ, ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಭಾಷನೀತಿಯನ್ನು ರೂಪಿಸಲಿ.
ಕೊನೆಹನಿ: ಇಂತಹ ಭಾಷಾನೀತಿಯನ್ನು ರೂಪಿಸಲು ಭಾರತ ದೇಶದಲ್ಲಿ ಸಂವಿಧಾನಕ್ಕೆ ಅಗತ್ಯವಿರುವ ತಿದ್ದುಪಡಿ ಮಾಡುವುದರಲ್ಲಿ ತಪ್ಪೇನೂ ಇಲ್ಲ.

No comments:

Post a Comment