Saturday, December 11, 2010

ಸಾರ್ಥಕ ದಶಕ ಒಂದು ನೋಟ




ಕರ್ನಾಟಕ ರಕ್ಷಣಾ ವೇದಿಕೆಗೆ ಈಗ ಹತ್ತು ವರ್ಷ. ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿದ್ದನ್ನು ವಿರೋಧಿಸಿ ಕನ್ನಡ ಕಟ್ಟಾಳುಗಳು ನಡೆಸಿದ ಹೋರಾಟವೇ ಕರವೇ ಉದಯಕ್ಕೆ ಮುನ್ನುಡಿಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಾರ್ಥಕ ಹತ್ತು ವರ್ಷಗಳನ್ನು ಪೂರೈಸಿದ ಹೆಮ್ಮೆ ಕರ್ನಾಟಕ ರಕ್ಷಣಾ ವೇದಿಕೆಯದ್ದು.
ಹತ್ತು ವರ್ಷಗಳ ಹಿಂದೆ ಕನ್ನಡಪರ ಚಳವಳಿ ದಿಕ್ಕಿಲ್ಲದಂತಾಗಿತ್ತು. ಕನ್ನಡದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡುವ ನೂರಾರು ಸಂಘಟನೆಗಳು ಇದ್ದವು ಎಂಬುದೇನೋ ನಿಜ. ಆದರೆ ಬಿಡಿಬಿಡಿಯಾದ ಹೋರಾಟಗಳು ಪರಿಣಾಮದ ದೃಷ್ಟಿಯಿಂದ ಸೋಲುತ್ತಿದ್ದವು. ಹೀಗಾಗಿ ಒಗ್ಗಟ್ಟಾದ ಹೋರಾಟ ಅನಿವಾರ್ಯತೆಯಿತ್ತು. ಇಂಥ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿ ರೂಪುಗೊಂಡಿದ್ದು ಕರ್ನಾಟಕ ರಕ್ಷಣಾ ವೇದಿಕೆ.
ಕನ್ನಡತನವೇ ಸಿದ್ಧಾಂತ
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಘೋಷವಾಕ್ಯದೊಂದಿಗೆ ಚಳವಳಿಯ ಕಣಕ್ಕೆ ಇಳಿಯಿತು. ‘ಕನ್ನಡವಿಲ್ಲದ ಸ್ವರ್ಗ ನನಗೆ ನರಕ ಸಮಾನ, ಕನ್ನಡವಿರುವ ನರಕ ನನಗೆ ಸ್ವರ್ಗ ಸಮಾನ’ ಎಂದು ಹೇಳಿದ ಮಹಾಕವಿ ಕುವೆಂಪು ಅವರೇ ಸಂಘಟನೆಗೆ ಆದರ್ಶ ಪುರುಷ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬುದು ವೇದಿಕೆಯ ಪ್ರಬಲ ಘೋಷಣೆಯಾಗಿ ಮೊಳಗಿತು. ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು ಎಂಬಂತೆ ಕರವೇ ಸಮರಾಂಗಣಕ್ಕೆ ಇಳಿಯಿತು. ಅದರ ಪರಿಣಾಮವಾಗಿ ಕನ್ನಡ ಚಳವಳಿಯ ಕ್ಷೇತ್ರದಲ್ಲಿ ಹೊಸ ಅಲೆಯೇ ಸೃಷ್ಟಿಯಾಯಿತು. ಕರ್ನಾಟಕದಲ್ಲಿ ಕನ್ನಡಿಗನೇ ಅಸಹಾಯಕನಾಗಿದ್ದ ಸನ್ನಿವೇಶದಲ್ಲಿ ತಮ್ಮ ನೆಲದಲ್ಲಿ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಜೀವದ ಹಂಗು ತೊರೆದು ಹೋರಾಡಲು ವೀರ ಕನ್ನಡಿಗರ ಪಡೆಯೇ ಸೃಷ್ಟಿಯಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಟಿ.ಎ.ನಾರಾಯಣಗೌಡರು ಅಧಿಕಾರ ವಹಿಸಿಕೊಂಡ ನಂತರ ಇಡೀ ರಾಜ್ಯಾದ್ಯಂತ ಹೊಸ ಸಂಚಲನವೇ ಮೂಡಿತು. ಹಳೆ ಮೈಸೂರು ಪ್ರಾಂತ್ಯದಲ್ಲಿ ಆಗಷ್ಟೆ ಬೇರುಬಿಡುತ್ತಿದ್ದ ಸಂಘಟನೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿದ್ದು ನಾರಾಯಣಗೌಡರು. ಅವರ ಚುಂಬಕ ವ್ಯಕ್ತಿತ್ವಕ್ಕೆ ಮನಸೋತು ನಾಡಿನ ಲಕ್ಷಾಂತರ ಕಾರ್ಯಕರ್ತರು ರಕ್ಷಣಾ ವೇದಿಕೆಯೆಡೆಗೆ ಆಕರ್ಷಿತರಾದರು. ಪರಿಣಾಮವಾಗಿ ರಾಜ್ಯದಲ್ಲಿ ಹೊಸ ಕನ್ನಡ ಶಕ್ತಿ ಉದಯವಾಯಿತು. ಕನ್ನಡಿಗರ ಹತ್ತು ಹಲವು ಸಮಸ್ಯೆಗಳಿಗೆ ಉತ್ತರಗಳು ದಕ್ಕಿದವು. ಕನ್ನಡ ವಿರೋಧಿಗಳ ಅಟ್ಟಹಾಸ ತಕ್ಕಮಟ್ಟಿಗೆ ಅಡಗಿತು. ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ದೌರ್ಜನ್ಯವನ್ನು ಮಟ್ಟಹಾಕಲಾಯಿತು. ಕನ್ನಡದ ಜನತೆ ನಾರಾಯಣಗೌಡರಲ್ಲಿ ಹೊಸ ನಾಯಕನನ್ನು ಗುರುತಿಸಿತು.
ಉದ್ಯೋಗದ ಹೋರಾಟ
ಕನ್ನಡ ಚಳವಳಿ ಬಹುತೇಕ ಸಂದರ್ಭಗಳಲ್ಲಿ ಭಾವನಾತ್ಮಕ ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬದುಕಿನ ಸಮಸ್ಯೆಗಳನ್ನು ಕೈಗೆತ್ತಿಕೊಂಡಿತು. ಕನ್ನಡಿಗರಿಗೆ ಸರ್ಕಾರಿ, ಅರೆಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯಬೇಕು ಎಂಬುದು ರಕ್ಷಣಾ ವೇದಿಕೆಯ ಪ್ರಧಾನ ಉದ್ದೇಶವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು, ಕಛೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ತೀವ್ರ ಸ್ವರೂಪದ ಹೋರಾಟಗಳನ್ನು ಸಂಘಟಿಸಿತು.
ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ದೊರೆಯದಂಥ ಸಂದರ್ಭ ಸೃಷ್ಟಿಯಾಗಿದ್ದಾಗ ಅದರ ವಿರುದ್ಧ ಕರವೇ ಸೆಟೆದು ನಿಂತಿತು. ಕರ್ನಾಟಕಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಅರಸಿಕೊಂಡು ಬಂದಿದ್ದರ ಪರಿಣಾಮವಾಗಿ ಕನ್ನಡಿಗರಿಗೆ ಉದ್ಯೋಗ ದೊರೆಯಲು ಕಷ್ಟಸಾಧ್ಯವಾಯಿತು. ಈ ಅನಿಯಂತ್ರಿತ ವಲಸೆಗೆ ರಾಜಕಾರಣಿಗಳು ಪ್ರಮುಖ ಕಾರಣ. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ನಮ್ಮ ಜನಪ್ರತಿನಿಧಿಗಳು ವಲಸಿಗರನ್ನು ಓಲೈಸತೊಡಗಿದ್ದರು (ಈಗಲೂ ಓಲೈಸುತ್ತಾರೆ). ಇಂಥ ಸನ್ನಿವೇಶದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕದ ಹೊರತು ಕನ್ನಡಿಗರ ಸಮಸ್ಯೆಗಳು ಪರಿಹಾರವಾಗದು ಎಂಬುದನ್ನು ಕರ್ನಾಟಕ ರಕ್ಷಣಾ ವೇದಿಕೆ ಮನಗಂಡಿತ್ತು. ಹೀಗಾಗಿ ಉದ್ಯೋಗದ ಹೋರಾಟವನ್ನು ಕರವೇ ತನ್ನ ಬಹುಮುಖ್ಯ ಆದ್ಯತೆಯನ್ನಾಗಿ ಗುರುತಿಸಿತ್ತು. ಎಜಿ ಕಛೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸುತ್ತಿದ್ದ ರೀತಿಯನ್ನು ವಿರೋಧಿಸಿ ನಡೆದದ್ದೇ ಕರ್ನಾಟಕ ರಕ್ಷಣಾ ವೇದಿಕೆಯ ಮೊದಲ ಹೋರಾಟ. ಈ ಮೊದಲ ಹೋರಾಟದಲ್ಲೇ ವೇದಿಕೆಗೆ ಜಯ ಲಭಿಸಿತು. ಕಳೆದ ಹತ್ತು ವರ್ಷಗಳಲ್ಲಿ ಇಂಥ ನೂರಾರು ಹೋರಾಟಗಳನ್ನು ವೇದಿಕೆ ಸಮರ್ಥವಾಗಿ ಮುನ್ನಡೆಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಟ್ಟಿದೆ.
ರೈಲ್ವೆ ಹೋರಾಟ
ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ಹೋರಾಟಗಳಲ್ಲಿ ಬಹುಮುಖ್ಯವಾದುದು ರೈಲ್ವೆ ಹೋರಾಟ. ಕಳೆದ ಆರು ದಶಕಕ್ಕೂ ಹೆಚ್ಚು ಕಾಲ ಕೇಂದ್ರದ ರೈಲ್ವೆ ಇಲಾಖೆ ಕನ್ನಡಿಗರನ್ನು ವಂಚಿಸಿಕೊಂಡೇ ಬಂದಿದೆ. ರೈಲ್ವೆ ಇಲಾಖೆಯಲ್ಲಿ ಇಷ್ಟು ವರ್ಷಗಳ ಕಾಲ ಕನ್ನಡಿಗರಿಗೆ ಆದ್ಯತೆಯ ಮೇರೆ ಉದ್ಯೋಗ ಕೊಡುವಂತಹ ವಾತಾವರಣವೇ ಇರಲಿಲ್ಲ. ಸಿ.ಕೆ.ಜಾಫರ್ ಷರೀಫ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡಿಗರಿಗೆ ಉದ್ಯೋಗ ದೊರಕಿದ್ದನ್ನು ಹೊರತುಪಡಿಸಿದರೆ ಆರು ದಶಕಗಳಲ್ಲಿ ಇಲಾಖೆಗೆ ಕನ್ನಡಿಗರ ಸೇರ್ಪಡೆ ನಗಣ್ಯವಾಗಿತ್ತು. ಕರ್ನಾಟಕದ ರೈಲ್ವೆ ಸ್ಟೇಷನ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸ್ಟೇಷನ್ ಮಾಸ್ಟರ್ ಹುದ್ದೆಯಿಂದ ಹಿಡಿದು ಗ್ಯಾಂಗ್‌ಮನ್ ಗಳವರೆಗೆ ಎಲ್ಲರೂ ಪರಭಾಷಿಕರೇ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಂದ ಬಂದವರೇ ಕರ್ನಾಟಕದಲ್ಲಿ ಉದ್ಯೋಗ ಹಿಡಿದಿದ್ದಾರೆ.
ದುರಂತವೆಂದರೆ, ಕರ್ನಾಟಕವನ್ನಾಳಿದ ಯಾವ ಸರ್ಕಾರಕ್ಕೂ, ಯಾವ ರಾಜಕೀಯ ಪಕ್ಷಕ್ಕೂ ಈ ಅನ್ಯಾಯದ ಅರಿವೇ ಇರಲಿಲ್ಲ (ಈಗಲೂ ಇಲ್ಲ). ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗುವ ಜನಪ್ರತಿನಿಧಿಗಳಿಗೂ "ಇದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ" ಎಂಬ ಕನಿಷ್ಠ ತಿಳಿವಳಿಕೆಯೂ ಇರಲಿಲ್ಲ.
ರೈಲ್ವೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆಯನ್ನು ಗುರುತಿಸಿದ ಟಿ.ಎ.ನಾರಾಯಣಗೌಡರು ನಿರ್ಣಾಯಕ ಹೋರಾಟಕ್ಕೆ ವೇದಿಕೆಯ ಕಾರ್ಯಕರ್ತರನ್ನು ಸಜ್ಜುಗೊಳಿಸಿದರು. ಅದರ ಪರಿಣಾಮವಾಗಿ ನಡೆದದ್ದೇ ಐತಿಹಾಸಿಕ ರೈಲ್ವೆ ಚಳವಳಿ.
ಮೊದಲ ಬಾರಿ ದೇಶದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಿಹಾರದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದರು. ಹಿಂದೆ ನಡೆದ ಸಂಪ್ರದಾಯಗಳ ಹಾಗೆಯೇ ಲಾಲೂ ಯಾದವ್ ಸಹ ತನ್ನ ರಾಜ್ಯದ ನಿರುದ್ಯೋಗಿ ಯುವಕರಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸಲು ಮುಂದಾದರು. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕ ರಾಜ್ಯವನ್ನು. ಇತರ ರಾಜ್ಯಗಳಲ್ಲಿ ಹಿಂಡುಗಟ್ಟಲೆ ಬಿಹಾರಿಗಳನ್ನು ತುಂಬಲು ಮುಂದಾದರೆ ಪ್ರತಿರೋಧ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಕರ್ನಾಟಕವೇ ಸೂಕ್ತ ಎಂಬ ಕಾರಣಕ್ಕೆ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕರ್ನಾಟಕದ ರೈಲ್ವೆಯಲ್ಲಿ ಸಾವಿರಾರು ಬಿಹಾರಿ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಕಳ್ಳ ಮಾರ್ಗಗಳನ್ನು ಹಿಡಿದರು.
ನೈಋತ್ಯ ರೈಲ್ವೆ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕಾರ್ಯ ಆರಂಭವಾಯಿತು. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗಳಲ್ಲಿ ಏಕಕಾಲಕ್ಕೆ ಪರೀಕ್ಷೆಗಳು ಆರಂಭವಾದವು. ವಿಶೇಷವೆಂದರೆ, ಈ ಪರೀಕ್ಷೆಗಳಿಗೆ ಸಾವಿರಾರು ಬಿಹಾರಿ ಯುವಕರು ಆಗಮಿಸಿದ್ದರು. ಇವರನ್ನು ವಿಶೇಷ ರೈಲುಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗೆ ಕರೆ ತರಲಾಗಿತ್ತು. ಇವರ ವಾಸ್ತವ್ಯ ಮತ್ತು ಊಟೋಪಚಾರದ ವ್ಯವಸ್ಥೆಗಳನ್ನು ಸಹ ಲಾಲೂ ಯಾದವ್ ಅವರ ಅಣತಿಯ ಮೇರೆಗೆ ರೈಲ್ವೆ ಇಲಾಖೆಯೇ ವಹಿಸಿಕೊಂಡಿತ್ತು. ಈ ವಿಷಯ ಟಿ.ಎ.ನಾರಾಯಣಗೌಡರಿಗೆ ಗೊತ್ತಾಗುತ್ತಿದ್ದಂತೆ ಹೋರಾಟದ ರಣಕಹಳೆಯನ್ನೇ ಮೊಳಗಿಸಿದರು.
ರೈಲ್ವೆ ಪರೀಕ್ಷೆಗಳ ನಡೆಯುತ್ತಿದ್ದ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಪರೀಕ್ಷಾ ಕೇಂದ್ರಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಏಕಕಾಲಕ್ಕೆ ದಾಳಿ ನಡೆಸಿದರು. ಪರೀಕ್ಷೆಗಳು ನಡೆಯದಂತೆ ತಡೆದರು. ಹೆಚ್ಚು ರಕ್ಷಣಾ ಸಿಬ್ಬಂದಿಗಳನ್ನು ಇಟ್ಟುಕೊಂಡು ಪುನಃ ಪರೀಕ್ಷೆಗಳನ್ನು ನಡೆಸಲು ಇಲಾಖೆ ಪ್ರಯತ್ನಿಸಿತು. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಈ ಎಲ್ಲಾ ಕುತಂತ್ರಗಳನ್ನು ಕರವೇ ಕಾರ್ಯಕರ್ತರು ವಿಫಲಗೊಳಿಸಿದರು. ಈ ಹೋರಾಟದ ಸಂದರ್ಭದಲ್ಲಿ ಪೊಲೀಸರ ಲಾಠಿಗೆ ಗುರಿಯಾದ ಕಾರ್ಯಕರ್ತರು ಜೀವದ ಹಂಗು ತೊರೆದು ಚಳವಳಿ ನಡೆಸಿದರು. ಎಲ್ಲೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕನ್ನಡಿಗರ ಪ್ರತಿರೋಧದ ನಡುವೆಯೂ ಬಿಹಾರಿ ಯುವಕರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ನೇಮಕ ಮಾಡಲು ಯತ್ನಿಸುತ್ತಿದ್ದ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಹಾಗೂ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಛೇರಿಗಳ ಮೇಲೂ ದಾಳಿಗಳು ನಡೆದವು. ಪರಿಣಾಮವಾಗಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನಡೆಯುತ್ತಿದ್ದ ಪರೀಕ್ಷೆಗಳು ಸ್ಥಗಿತಗೊಂಡವು. ಬಿಹಾರಿ ಯುವಕರು ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿದರು.
ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ವಿಶೇಷ ಅರ್ಹತೆಗಳ ಅಗತ್ಯವಿಲ್ಲದೇ ಇರುವುದರಿಂದ, ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಈ ಹುದ್ದೆಗಳನ್ನು ಸ್ಥಳೀಯರಿಗೆ ಅರ್ಥಾತ್ ಕನ್ನಡಿಗರಿಗೆ ಕೊಡಬೇಕು ಎಂಬ ಕಾನೂನು ಇರುವುದರಿಂದ ಈ ಹುದ್ದೆಗಳಿಗೆ ಅನ್ಯ ಭಾಷಿಕರನ್ನು ನೇಮಕ ಮಾಡಬಾರದು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಬೇಡಿಕೆಯಾಗಿತ್ತು. ಈ ಹುದ್ದೆಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದ ನಿರುದ್ಯೋಗಿ ಕನ್ನಡದ ಯುವಕರು ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಕನ್ನಡ ಪ್ರಶ್ನೆಪತ್ರಿಕೆಗಳನ್ನು ನೀಡಬೇಕು ಎಂಬುದು ಕರವೇ ಬೇಡಿಕೆಯಾಗಿತ್ತು.
ಲಾಲೂ ಪ್ರಸಾದ್‌ಯಾದವ್ ಅವರ ಷಡ್ಯಂತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆ ವಿಫಲಗೊಳಿಸಿತ್ತು. ಇದರಿಂದಾಗಿ ಲಾಲೂ ಯಾದವ್ ವ್ಯಗ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಚಳವಳಿಗಾರರನ್ನು ತನ್ನ ಹೊಲಸು ಬಾಯಿಂದ ನಿಂದಿಸಿದರು. ಇದರಿಂದ ಕರ್ನಾಟಕದ ಜನತೆ ಕೆರಳಿತು. ರಾಜ್ಯಾದ್ಯಂತ ಲಾಲೂ ವಿರುದ್ಧ ಹೋರಾಟಗಳು ತೀವ್ರಗೊಂಡವು. ಚಿತ್ರದುರ್ಗಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರೈಲಿನಲ್ಲಿ ಆಗಮಿಸಿದ್ದ ಲಾಲೂಗೆ ತುಮಕೂರು ಸೇರಿದಂತೆ ಪ್ರತಿ ನಿಲ್ದಾಣಗಳಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು.
ಚಳವಳಿಗೆ ಜಯ
ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯ ಪರೀಕ್ಷೆಗಳೇನೋ ಸ್ಥಗಿತಗೊಂಡವು. ಆದರೆ, ಇದು ತಾತ್ಕಾಲಿಕ ವಿಜಯವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದು ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ, ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ, ಮುಂದೆ ಕಳ್ಳ ಮಾರ್ಗದಲ್ಲಿ ಪರೀಕ್ಷೆಗಳನ್ನು ಇಲಾಖೆ ನಡೆಸುವುದಿಲ್ಲವೆಂಬ ಖಾತರಿ ಏನೂ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ತನ್ನ ಹೋರಾಟವನ್ನು ಸ್ಥಗಿತಗೊಳಿಸದೆ ಇಲಾಖೆಯ ಎಲ್ಲಾ ಚಟುವಟಿಕೆಗಳಿಗೂ ಒಂದು ಕಣ್ಣಿಟ್ಟುಕೊಂಡೇ ಬಂದಿತು. ಕರ್ನಾಟಕದಲ್ಲಿ ಮತ್ತೆ ಪರೀಕ್ಷೆ ನಡೆಸದಂತೆ ಒತ್ತಡ ಹೇರಿಕೊಂಡೇ ಬಂತು.
ಕರ್ನಾಟಕ ರಕ್ಷಣಾ ವೇದಿಕೆಯ ರೈಲ್ವೆ ಚಳವಳಿ ಇತರ ರಾಜ್ಯಗಳಿಗೂ ಸ್ಫೂರ್ತಿಯನ್ನು, ಪ್ರೇರಣೆಯನ್ನು ನೀಡಿತು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ರೈಲ್ವೆ ಇಲಾಖೆಗೆ ಬಿಹಾರಿಗಳನ್ನು ತುಂಬುವ ಯತ್ನದ ವಿರುದ್ಧ ಪ್ರತಿಭಟನೆಗಳಾದವು.
ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿತ್ತು. ಕೇಂದ್ರದಲ್ಲಿ ಎರಡನೇ ಅವಧಿಗೆ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದಲ್ಲೇ ಧೂಳಿಪಟವಾಗಿದ್ದರು. ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಹೊಸ ರೈಲ್ವೆ ಮಂತ್ರಿಯಾದರು. ಪ್ರಾದೇಶಿಕ ಪಕ್ಷವೊಂದರ ನೇತಾರರಾದ ಮಮತಾ ಪ್ರಾದೇಶಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು. ಹೀಗಾಗಿ ತಮ್ಮ ಪ್ರಥಮ ಬಜೆಟ್‌ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ಬೇಡಿಕೆಯನ್ನು ಈಡೇರಿಸಿದರು. ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ದೇಶಾದ್ಯಂತ ಏಕಕಾಲಕ್ಕೆ ನಡೆಸುವುದಾಗಿ ಅವರು ಘೋಷಿಸಿದರು. ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸುವುದರಿಂದಾಗಿ ಒಂದು ರಾಜ್ಯದ ಅಭ್ಯರ್ಥಿ ಇನ್ನೊಂದು ರಾಜ್ಯದಲ್ಲಿ ಉದ್ಯೋಗ ಗಿಟ್ಟಿಸುವುದನ್ನು ತಪ್ಪಿಸುವುದು ಈ ಘೋಷಣೆಯ ಉದ್ದೇಶವಾಗಿತ್ತು. ಇದಲ್ಲದೇ, ಕರ್ನಾಟಕ ರಕ್ಷಣಾ ವೇದಿಕೆಯ ಬಹುಮುಖ್ಯ ಬೇಡಿಕೆಯಾಗಿದ್ದ ಪ್ರಶ್ನೆಪತ್ರಿಕೆಗಳನ್ನು ಸ್ಥಳೀಯ ಭಾಷೆಯಲ್ಲೇ ನೀಡುವ ಕುರಿತು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದರು.
ಇದರಿಂದಾಗಿ ಆರು ದಶಕಗಳಿಂದ ಕನ್ನಡಿಗರ ಮೇಲೆ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿದ್ದ ನಿರಂತರ ಶೋಷಣೆ ನಿಂತಂತಾಗಿದೆ. ಕನ್ನಡದ ಮಕ್ಕಳು ಮುಂಬರುವ ದಿನಗಳಲ್ಲಿ ನೈಋತ್ಯ ರೈಲ್ವೆಯಲ್ಲಿ ಹೆಚ್ಚುಹೆಚ್ಚು ನೌಕರಿಗಳನ್ನು ಪಡೆಯಲಿದ್ದಾರೆ. ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕನ್ನಡಿಗರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ನೂರಾರು ಯುವಕರು ರೈಲ್ವೆಯಲ್ಲಿ ಉದ್ಯೋಗ ಪಡೆದು ಟಿ.ಎ.ನಾರಾಯಣಗೌಡರ ಬಳಿ ಬಂದು "ನಿಮ್ಮಿಂದಾಗಿಯೇ ನಮಗೆ ಉದ್ಯೋಗ ದೊರಕಿದೆ" ಎಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು?
ಕಾವೇರಿ ಹೋರಾಟ
ಶತಮಾನಗಳ ವಿವಾದವಾಗಿರುವ ಕಾವೇರಿ ನದಿ ನೀರಿನ ಹಕ್ಕಿನ ವಿಷಯದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭಗೊಂಡ ಕಾಲದಿಂದಲೂ ಕಾವೇರಿ ಚಳವಳಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿದೆ. ಈ ಹೋರಾಟದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಸೇರಿದಂತೆ ಪ್ರಮುಖ ಮುಖಂಡರು, ಕಾರ್ಯಕರ್ತರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾರೆ, ಹಲವಾರು ಬಾರಿ ಜೈಲು ಸೇರಿದ್ದಾರೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿತು. ಈ ಸಂದರ್ಭದಲ್ಲಿ ನಾರಾಯಣಗೌಡರು ಸೇರಿದಂತೆ ವೇದಿಕೆಯ ನೂರಾರು ಹೋರಾಟಗಾರರು ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು.
ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿ ಹೊರಬಂದಾಗ ಅದು ಕನ್ನಡಿಗರ ಪಾಲಿಗೆ ಮರಣಶಾಸನ ಎಂಬುದನ್ನು ಸರಿಯಾಗಿಯೇ ಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಈ ಸಂಬಂಧ ಪ್ರಬಲ ಹೋರಾಟಕ್ಕೆ ಸಿದ್ಧವಾಯಿತು. ನಾರಾಯಣಗೌಡರು ರಾಜ್ಯಾದ್ಯಂತ ಸಂಚರಿಸಿ ಕನ್ನಡ ಕಾರ್ಯಕರ್ತರನ್ನು ಸಂಘಟಿಸಿದರು. ಕನ್ನಡಿಗರ ಪಾಲಿಗೆ ಅಕ್ಷರಶಃ ಮರಣ ಶಾಸನದಂತೆ ಹೊರಬಿದ್ದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಇಡೀ ರಾಜ್ಯಾದ್ಯಂತ ಮೊದಲು ಬೀದಿಗಿಳಿದು ಕಾವೇರಿ ಚಳವಳಿಗೊಂದು ಮೂರ್ತ ರೂಪ ನೀಡಿದ್ದೇ ರಕ್ಷಣಾ ವೇದಿಕೆ. ನ್ಯಾಯಮಂಡಳಿಯ ಅನ್ಯಾಯದ ತೀರ್ಪಿನ ವಿರುದ್ಧ ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಕ ಮತ್ತು ಸಂಘಟಿತ ಆಂದೋಲನ ನಡೆಸಿದ ರಕ್ಷಣಾ ವೇದಿಕೆ ‘ದಿಲ್ಲಿ ದೊರೆ’ಗಳಿಗೆ ಬಿಸಿ ಮುಟ್ಟಿಸುವಲ್ಲಿಯೂ ಹಿಂದೆ ಬೀಳಲಿಲ್ಲ.
ಸುಮಾರು ೨ ಸಾವಿರಕ್ಕೂ ಹೆಚ್ಚು ವೇದಿಕೆಯ ಕಾರ್ಯಕರ್ತರು ದಿಲ್ಲಿಗೆ ತೆರಳಿ ಜಂತರ್ ಮಂತರ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಕಾವೇರಿ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ನೀಡಲೇಬೇಕೆಂದು ನಿರ್ಧರಿಸಿದ್ದ ನಾರಾಯಣಗೌಡರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ಇನ್ನೇನು ಎಲ್ಲವೂ ಮುಗೀತು’ ಅಂತ ಈ ನೆಲದ ಜನನಾಯಕರು ಕೈ ಕಟ್ಟಿ ಕೂತ ಹೊತ್ತಲ್ಲೇ ಗೌಡರು ರಾಜ್ಯಾದ್ಯಂತ ಕಾವೇರಿ ಯಾತ್ರೆ ಹೊರಟರು. ಲಕ್ಷಾಂತರ ಕನ್ನಡಿಗರು ಕಾವೇರಿ ಯಾತ್ರೆಗೆ ಬೆಂಬಲ ಸೂಚಿಸಿದರು. ಅದರ ನಡುವೆಯೇ ಚಳವಳಿಯ ತೀವ್ರತೆಗೆ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಇನ್ನಿತರೆ ಸಂಘಟನೆಗಳ ಜತೆಗೂಡಿ ‘ಕೃಷ್ಣ-ಕಾವೇರಿ ಹೋರಾಟ ಸಮನ್ವಯ ಸಮಿತಿ’ ಅಡಿಯಲ್ಲಿ ಬೃಹತ್ ಹೋರಾಟಕ್ಕೆ ಸಜ್ಜುಗೊಂಡರು.
ಸುಮಾರು ಇಪ್ಪತ್ತು ಸಾವಿರ ಕಾರ್ಯಕರ್ತರೊಂದಿಗೆ ದೆಹಲಿ ಮುತ್ತಿಗೆ ನಡೆಯಿತು. ದೆಹಲಿಯ ಇತಿಹಾಸದಲ್ಲಿ ಹೀಗೆ ರಾಜ್ಯವೊಂದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರು ಬಂದು ರಣಕಹಳೆ ಮೊಳಗಿಸಿರಲಿಲ್ಲ. ಕನ್ನಡಿಗರ ಬೃಹತ್ ಪ್ರದರ್ಶನವನ್ನು ನೋಡಿ ದಿಲ್ಲಿ ದೊರೆಗಳೇ ದಂಗಾಗಿ ಹೋದರು. ನಾರಾಯಣಗೌಡರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಾವೇರಿ ನ್ಯಾಯಾಧೀಕರಣ ನೀಡಿರುವ ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಕಾರಣದಿಂದ ಯಾವುದೇ ಕಾರಣಕ್ಕೂ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಡಿ. ಹಾಗೊಂದು ವೇಳೆ ಪ್ರಕಟಿಸಿದ್ದೇ ಆದಲ್ಲಿ ಅದರಿಂದ ಕರ್ನಾಟಕದಲ್ಲಿ ಪ್ರತಿಕೂಲ ಪರಿಣಾಮಗಳಾಗುತ್ತದೆ ಎಂದು ಮನವಿ ಮಾಡಲಾಯಿತು.
ಇದರ ಪರಿಣಾಮ; ಕೇಂದ್ರ ಸರ್ಕಾರ ಅಂತಿಮ ತೀರ್ಪನ್ನು ಗೆಝೆಟ್‌ನಲ್ಲಿ ಪ್ರಕಟಿಸಲಿಲ್ಲ. ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.
ಕಾವೇರಿ ವಿವಾದ ಸದ್ಯ ನ್ಯಾಯಾಲದಲ್ಲಿದೆ. ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆದರೆ ಕರ್ನಾಟಕಕ್ಕೆ ಮಾರಣಾಂತಿಕವೇ ಆಗಿದ್ದ ನ್ಯಾಯಾಧೀಕರಣ ತೀರ್ಪು ಗೆಜೆಟ್‌ನಲ್ಲಿ ಪ್ರಕಟವಾಗದಂತೆ ಕೇಂದ್ರದ ಮೇಲೆ ತನ್ನ ‘ಕನ್ನಡ ಶಕ್ತಿ’ಯಿಂದ ಒತ್ತಡ ಹೇರಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಈ ಮೂಲಕ ವಾದರೂ ದಿಲ್ಲಿಯಲ್ಲಿ ಕನ್ನಡಿಗರು ‘ಒಂದು ಹಂತದ ಜಯ’ ಸಾಧಿಸಿದರೆಂದರೆ ಅದಕ್ಕೆ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.
ಆಂಧ್ರ ಹಾಲಿಗೆ ಕೊಡಲಿಪೆಟ್ಟು:
ರಕ್ಷಣಾ ವೇದಿಕೆ ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಂಡರೂ ಅದಕ್ಕೊಂದು ತಾರ್ಕಿಕ ಅಂತ್ಯ ನೀಡದೇ ವಿಶ್ರಮಿಸಿದ ಉದಾಹರಣೆಗಳಿಲ್ಲ. ಚಳವಳಿಯ ಬದ್ಧತೆ ಆ ಮಟ್ಟದ್ದು. ಹೋರಾಟದ ಆಳಕ್ಕಿಳಿದು, ಅದಕ್ಕೊಂದು ಸಂಘಟಿತ ವ್ಯಾಪಕತೆ ನೀಡುವ ಪರಿ ಸಾಮಾನ್ಯವಲ್ಲ.
ಇಂಥ ಹೋರಾಟದ ಹಲವು ಮಜಲುಗಳ ಪೈಕಿ ಆಂಧ್ರಪ್ರದೇಶದ ಹಾಲಿನ ವಿರುದ್ಧ ನಡೆದ ಚಳವಳಿಯೂ ಒಂದು;
ಆಂಧ್ರದ ಪ್ರಭಾವಿ ರಾಜಕಾರಣಿಯೊಬ್ಬರ ಒಡೆತನಕ್ಕೆ ಸೇರಿದ ಹಾಲು ಕರ್ನಾಟಕಕ್ಕೆ ಧಾಗುಂಡಿ ಇಟ್ಟಿತ್ತು. ಬೆಂಗಳೂರು, ಕೋಲಾರ ಇಲ್ಲೆಲ್ಲಾ ಈ ಕಲಬೆರಕೆ ಹಾಲಿನದ್ದೇ ಹಾಲಾಹಲ. ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟುತ್ತಿರುವ ಈ ನೆಲದ ಅಸಂಖ್ಯಾತ ರೈತ ಸಮೂಹದ ‘ಹೊಟ್ಟೆ ಮೇಲೆ ಹೊಡೆಯುವ’ ಆಂಧ್ರ ಹಾಲಿನ ವಿರುದ್ಧ ರಕ್ಷಣಾ ವೇದಿಕೆ ದಿಟ್ಟ ಹೋರಾಟವನ್ನೇ ರೂಪಿಸಿತ್ತು. ನೆರೆಯ ಕೋಲಾರದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದ ಆಂಧ್ರ ಹಾಲಿನ ವಿರುದ್ಧ ಅಲ್ಲಿನ ವೇದಿಕೆಯ ಕಾರ‍್ಯಕರ್ತರು ಸೆಟೆದು ನಿಂತರು. ಆರೋಗ್ಯಕ್ಕೂ ಮಾರಕವಾಗಿರುವ ಆಂಧ್ರ ಹಾಲು ಪೂರೈಕೆ ಸ್ಥಗಿತಗೊಳ್ಳಬೇಕು. ಆ ಮೂಲಕ ಸ್ಥಳೀಯ ರೈತರ ಬದುಕು ಹಸನಾಗಬೇಕು ಎಂಬುದು ವೇದಿಕೆ ಕಾರ‍್ಯಕರ್ತರ ಒಕ್ಕೊರೊಲ ದನಿಯಾಗಿತ್ತು. ಈ ಸಂಬಂಧ ವ್ಯಾಪಕ ಮತ್ತು ಉಗ್ರ ಪ್ರತಿಭಟನೆಗಳೇ ನಡೆದವು. ಕಾರ್ಯಕರ್ತರ ವಿರುದ್ಧ ಪೊಲೀಸ್ ಕೇಸುಗಳು ದಾಖಲಾದವು, ದೌರ್ಜನ್ಯ, ಹಲ್ಲೆಗಳು ಎಗ್ಗಿಲ್ಲದೇ ನಡೆಯಿತು. ಅಷ್ಟಾದರೂ ರಕ್ಷಣಾ ವೇದಿಕೆ ಬಗ್ಗಲಿಲ್ಲ. ಆಂಧ್ರ ರಾಜಕಾರಣಿಯ ಏನೆಲ್ಲಾ ಪ್ರಭಾವ, ಪ್ರಾಬಲ್ಯಗಳು ಕಾರ‍್ಯಕರ್ತರ ಕಾಠಿಣ್ಯದ ಮುಂದೆ ಕೆಲಸ ಮಾಡಲಿಲ್ಲ.
ಇದರ ಪರಿಣಾಮ; ಯಥೇಚ್ಛವಾಗಿ ಸರಬರಾಜಾಗುತ್ತಿದ್ದ ಆಂಧ್ರದ ಹಾಲು ಸ್ಥಗಿತಗೊಂಡಿತು. ಸ್ಥಳೀಯ ರೈತರು ನೆಮ್ಮದಿಯ ನಿಟ್ಟುಸಿರಿಟ್ಟರು.
ಕರವೇಯ ಹೋರಾಟದ ದಿಕ್ಕು ಕೇವಲ ಕರ್ನಾಟಕ, ಕನ್ನಡಿಗರಷ್ಟೇ ಅಲ್ಲ, ಈ ನೆಲದ ದುಡಿಯುವ ಮಂದಿ, ಬೆವರಿಳಿಸುವ ರೈತ, ಅನ್ಯಾಯಕ್ಕೊಳಗಾದ ಅಸಹಾಯಕ ಎಂಬುದಕ್ಕೆ ಈ ಹೋರಾಟ ಉದಾಹರಣೆಯಷ್ಟೆ.
ಬೆಂಗಳೂರು ವಿಮಾನ ನಿಲ್ದಾಣ
ದೇವನಹಳ್ಳಿಯಲ್ಲಿ ನಿರ್ಮಾಣಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ನಡೆದ ಹೋರಾಟ ಅವಿಸ್ಮರಣೀಯವಾದುದು.
ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಾನು ಈ ಹಿಂದೆ ನೀಡಿದ್ದ ವಾಗ್ದಾನವನ್ನು ಮರೆಯಿತು. ಸೂಕ್ತ ಪರಿಹಾರ ನೀಡದೆ ರೈತರನ್ನು ವಂಚಿಸಿತ್ತು. ಅಷ್ಟಲ್ಲದೇ ಹಳೇ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕಟ್ಟಿಕೊಂಡಿದ್ದ ಕನ್ನಡಿಗರನ್ನು ಬೀದಿಪಾಲು ಮಾಡುವ ಹುನ್ನಾರವನ್ನೂ ಅದು ನಡೆಸಿತ್ತು.
ಇದೆಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಮನಗಂಡ ರಕ್ಷಣಾ ವೇದಿಕೆ ರೈತ ಪರ ಹೋರಾಟಕ್ಕೆ ಸಿದ್ಧಗೊಂಡಿತು. ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಮಕ್ಕಳಿಗೆ ವಿಮಾನ ನಿಲ್ದಾಣದಲ್ಲಿ ಕೆಲಸ ನೀಡಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ವೇದಿಕೆಯ ಬೇಡಿಕೆಯಾಗಿತ್ತು.
ಹೋರಾಟಕ್ಕೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಆಳುವ ಸರ್ಕಾರದಿಂದಲೇ ಚಳವಳಿಯನ್ನು ನಿಯಂತ್ರಿಸುವ, ನಿಗ್ರಹಿಸುವ ಚಟುವಟಿಕೆಗಳೂ ನಡೆದವು. ಆದರೆ ವೇದಿಕೆಯ ಹೋರಾಟದ ಮುಂದೆ ಸರ್ಕಾರವೇ ಮಂಡಿಯೂರಿ ಕೂರಬೇಕಾಯಿತು.
ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆಯಿತು. ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆಯನ್ನು ಬೇರೆ ರಾಜ್ಯದ ಯುವಕರಿಗೆ ಒದಗಿಸುವ ನಿಲುವಿನಿಂದ ಸರ್ಕಾರ ಹಿಂದೆ ಸರಿಯಬೇಕಾಯಿತು. ಕನ್ನಡಿಗ ಯುವಕರಿಗೆ ಸೂಕ್ತ ಉದ್ಯೋಗಾವಕಾಶವೂ ದೊರೆಯಿತು. ಬಹುಮುಖ್ಯವಾಗಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂಬ ವೇದಿಕೆಯ ಮತ್ತೊಂದು ಬೇಡಿಕೆಗೆ ಜಂಟಿ ಸದನ ಸಮಿತಿ ಪೂರಕವಾಗಿಯೇ ಸ್ಪಂದಿಸಿತ್ತು.
ಕನ್ನಡ ಉದ್ದಿಮೆದಾರರ ಪರ
ರಾಜ್ಯದಲ್ಲಿ ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಹೊರರಾಜ್ಯ, ವಿದೇಶಿ ಬಂಡವಾಳಿಗರಿಗೇ ಹೆಚ್ಚಿ ಆದ್ಯತೆ ನೀಡುತ್ತಿತ್ತು ಸರ್ಕಾರ. ಹಾಗೊಂದು ವೇಳೆ ಇದ್ದ ಒಂದಿಷ್ಟು ಕನ್ನಡಿಗ ಉದ್ದಿಮೆದಾರರ ಮೇಲೆ ಇನ್ನಿಲ್ಲದ ದಬ್ಬಾಳಿಕೆ, ನಿರ್ಲಕ್ಷ್ಯ, ದೌರ್ಜನ್ಯ ವ್ಯಾಪಕವಾಗಿಯೇ ಇತ್ತು. ಈ ಸಂದರ್ಭದಲ್ಲಿ ಸ್ಥಳೀಯ ಉದ್ದಿಮೆದಾರರ ಪರ ಮೊಟ್ಟಮೊದಲ ಬಾರಿಗೆ ದನಿ ಎತ್ತಿದ್ದು ರಕ್ಷಣಾ ವೇದಿಕೆ.
ಬೃಹತ್ ಅಥವಾ ಸಣ್ಣ ಉದ್ಯಮಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸುವುದಷ್ಟೇ ಅಲ್ಲದೆ, ಸ್ಥಳೀಯರ ಜೀವನಮಟ್ಟವನ್ನು ಸುಧಾರಿಸುತ್ತದೆ. ಕರ್ನಾಟಕದಲ್ಲಿ ಉದ್ದಿಮೆ ನಡೆಸಲು ಕನ್ನಡಿಗರಿಗೆ ಬೇಕಾದ ಸೂಕ್ತ ವಾತಾವರಣ ಕಲ್ಪಿಸಿ, ಅವರಿಗೆ ನೈತಿಕ ಬೆಂಬಲ ನೀಡುವುದು ಮತ್ತು ಅಂತಹ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಂತೆ ನೋಡಿಕೊಳ್ಳುವುದು ವೇದಿಕೆಯ ಮುಖ್ಯ ನಿಲುವಾಗಿತ್ತು.
ಈ ನಿಟ್ಟಿನಲ್ಲಿ ಕನ್ನಡಿಗರ ಉದ್ದಿಮೆದಾರರು, ಅನಿವಾಸಿ ಕನ್ನಡಿಗರಿಗೆ ಹೆಚ್ಚಿನ ಬಂಡವಾಳ ಹೂಡಲು ಅವಕಾಶ ಕಲ್ಪಿಸುವಂತೆ ವೇದಿಕೆ ಹೋರಾಟ ನಡೆಸಿತು. ಅಷ್ಟಲ್ಲದೆ, ಉದ್ದಿಮೆದಾರರಿಗೆ ಅನ್ಯಾಯವಾದಾಗಲೆಲ್ಲಾ ಅವರ ಪರ ನಿಂತಿತು. ಸರ್ಕಾರದ ಮಟ್ಟದಿಂದಲೂ ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಯಿತು.
ಶಾಸ್ತ್ರೀಯ ಸ್ಥಾನಮಾನ
ರಕ್ಷಣಾ ವೇದಿಕೆಯ ಹೋರಾಟದ ಮಜಲುಗಳಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ನಡೆಸಿದ ಹೋರಾಟವೂ ಒಂದು. ಕನ್ನಡ ಭಾಷೆಗೆ ೨೦೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಅತೀ ಹೆಚ್ಚು ಜ್ಞಾನಪೀಠ ಪುರಸ್ಕಾರದ ಹೆಗ್ಗಳಿಕೆ ಸಿಕ್ಕಿದ್ದು ಕನ್ನಡ ಸಾಹಿತ್ಯಕ್ಕೆ. ಅತೀ ಪ್ರಾಚೀನ ಮತ್ತು ಶ್ರೀಮಂತ ಹಿನ್ನೆಲೆಯುಳ್ಲ ಕನ್ನಡಕ್ಕೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡದೆ ಪೂರ್ವಾಗ್ರಹಪೀಡಿತವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ರಕ್ಷಣಾ ವೇದಿಕೆ ಕಾಲದಿಂದಲೂ ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿರುವ ಕೇಂದ್ರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿತು. ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ನಾಡೋಜ ಡಾ.ದೇ.ಜವರೇಗೌಡರು ಮೈಸೂರಿನಲ್ಲಿ ಉಪವಾಸ ನಿರತರಾದರು. ನಾರಾಯಣಗೌಡರು ದೇಜಗೌ ಉಪವಾಸಕ್ಕೆ ಬೆಂಬಲ ಸೂಚಿಸಿದರಲ್ಲದೆ, ರಾಜ್ಯವ್ಯಾಪಿ ಹೋರಾಟದ ಮುಂಚೂಣಿ ವಹಿಸಿದರು.
ಮತ್ತೆ ದೂರದ ದಿಲ್ಲಿಯಲ್ಲಿ ಕನ್ನಡದ ಘೋಷಣೆಗಳು ಮೊಳಗಿದವು. ಈ ಬಾರಿ ಸಾವಿರಾರು ಕನ್ನಡದ ಕಾರ‍್ಯಕರ್ತರು ದಿಲ್ಲಿಯಲ್ಲಿ ಕಾಣಿಸಿಕೊಂಡರು. ದಿಲ್ಲಿಯ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಕಾರ‍್ಯಕರ್ತರು ಬಂದಿಳಿದು, ಕನ್ನಡದ ಹಕ್ಕಿಗಾಗಿ ಅಬ್ಬರಿಸಿದ್ದು ಅದೇ ಪ್ರಥಮ. ದಿಲ್ಲಿಯ ಜಂತರ್ ಮಂತರ್‌ನಲ್ಲಂತೂ ಕನ್ನಡಿಗರದ್ದೇ ಕಲರವ....
ಗೌಡರ ನೇತೃತ್ವದಲ್ಲಿ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು. ದಿಲ್ಲ್ಲಿಯ ರಾಜಕಾರಣಿಗಳು ಕನ್ನಡಿಗರ ಹಿಂಡು ಕಂಡು ಬೆಚ್ಚಿಬಿದ್ದರು. ಕನ್ನಡದ ಬದ್ಧತೆ ಇಲ್ಲೂ ಹುಸಿಯಾಗಲಿಲ್ಲ. ನವೆಂಬರ್ ಹೊತ್ತಿಗೆ ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆಯಿತು. ಸಮಸ್ತ ಕನ್ನಡಿಗರು ಸಂಭ್ರಮಿಸಿದರು.
ಕನ್ನಡಿಗರ ಸವಾಲು...
ವೇದಿಕೆ ಸಾಗಿ ಬಂದ ಹಾದಿ ತುಂಬಾ ಹೋರಾಟಗಳೇ ಹೋರಾಟಗಳು. ಹೋರಾಟದ ಮೂಲ ಉದ್ದೇಶ ಮಾತ್ರ
ಒಂದೇ ಕನ್ನಡ ಮತ್ತು ಕರ್ನಾಟಕ. ಬೆಂಗಳೂರಿನಲ್ಲಿ ರೇಡಿಯೋ ಸಿಟಿ ಎಂಬ ಎಫ್ ಎಂ ವಾಹಿನಿ ಅಕ್ಷರಶಃ ಕನ್ನಡ ವಿರೋಧಿ ಧೋರಣೆ ಅನುಸರಿಸಿತ್ತು. ಕನ್ನಡ ಹಾಡುಗಳನ್ನು ಕೇಳುವವರೇ ಇಲ್ಲ, ಅಂಥ ಹಾಡಿಗೆ ಮಾರುಕಟ್ಟೆಯೂ ಇಲ್ಲ ಎಂದು ಕಣ್ಣಿಗೆ ಬಟ್ಟೆ ಕಂಡ ಎಫ್‌ಎಂ ವಾಹಿನಿ ಬರೇ ಹಿಂದಿ ಹಾಡುಗಳನ್ನೇ ಕನ್ನಡದ ಕೇಳುಗರಿಗೆ ಬಲವಂತವಾಗಿ ತುರುಕುವ ಕೃತ್ಯಕ್ಕೆ ಕೈಹಾಕಿತ್ತು. ಇದರ ವಿರುದ್ಧ ಹರಿಹಾಯ್ದ ರಕ್ಷಣಾ ವೇದಿಕೆ ಮೊದಲ ಬಾರಿಗೆ ರೇಡಿಯೋ ಸಿಟಿ ವಾಹಿನಿ ವಿರುದ್ಧ ಪ್ರತಿಭಟನೆ ನಡೆಸಿತು. ಇದರ ಪರಿಣಾಮ ವಾಹಿನಿ ಕನ್ನಡ ಚಿತ್ರಗೀತೆಗಳನ್ನು ಬಿತ್ತರಿಸಿತು. ಕನ್ನಡದ ಕೇಳುಗರು ಸಂಭ್ರಮಿಸಿದರು...ಮಾರುಕಟ್ಟೆ ವಿಸ್ತರಿಸಿತು. ನೋಡನೋಡುತ್ತಿದ್ದಂತೆ ಒಂದೊರ ಹಿಂದೊಂದರಂತೆ ಎಫ್ ಎಂ ವಾಹಿನಿಗಳು ಬರತೊಡಗಿದವು. ಎಲ್ಲೆಡೆ ಕನ್ನಡದ ಹಾಡುಗಳು...ಕನ್ನಡ ಕೇಳುಗರ ಸಂಖ್ಯೆಯೂ ನಿರೀಕ್ಷೆಗೂ ಮೀರಿ ಬೆಳೆಯಿತು, ಮಾರುಕಟ್ಟೆ ವ್ಯಾಪಕವಾಯಿತು....ಹೀಗೆ ಎಫ್‌ಎಂ ವಾಹಿನಿಗಳಲ್ಲಿ ಕನ್ನಡಕ್ಕೆ, ಕನ್ನಡ ಚಿತ್ರಗೀತೆಗಳಿಗೆ ಭದ್ರ ಬುನಾದಿ ಕಲ್ಪಿಸಿದ ಹೆಗ್ಗಳಿಕೆ ರಕ್ಷಣಾ ವೇದಿಕೆಯದ್ದು.
ಅಷ್ಟಲ್ಲದೆ, ವಿಜಾಪುರ ವಿವಿಯ ಸಿಂಡಿಕೇಟ್‌ಗೆ ಆಂಧ್ರ ಮೂಲದ ಮಹಿಳೆಯನ್ನು ಸದಸ್ಯೆಯಾಗಿ ಸರ್ಕಾರ ನೇಮಕ ಮಾಡಿತ್ತು. ಕನ್ನಡದ ವಿವಿಯಲ್ಲಿ ಸದಸ್ಯೆಯಾಗಿ ನೇಮಕಗೊಳ್ಳಲು ಕನ್ನಡಿಗರ‍್ಯಾರೂ ಇಲ್ಲವೇ ಅಥವಾ ಕನ್ನಡಿಗರಿಗೆ ಅರ್ಹತೆಯೇ ಇಲ್ಲವೇ ಎಂಬುದು ವೇದಿಕೆ ಪ್ರಶ್ನೆಯಾಗಿತ್ತು. ಕರವೇ ಚಳವಳಿಯ ತೀವ್ರತೆಗೆ ಬೆದರಿದ ಸರ್ಕಾರ ನೇಮಕಾತಿಯನ್ನು ರದ್ದುಗೊಳಿಸಿತು.
ರಾಜ್ಯ ಸರ್ಕಾರ ಆನ್ ಲೈನ್ ಲಾಟರಿಯನ್ನು ಆರಂಭಿಸಿತು. ಪ್ಲೇವಿನ್ ಹೆಸರಿನಲ್ಲಿ ಆರಂಭಗೊಂಡ ಆನ್‌ಲೈನ್ ಲಾಟರಿ ಬೇರೆ ಬೇರೆ ಹೆಸರುಗಳೊಂದಿಗೆ ರಾಜ್ಯವನ್ನೇ ವ್ಯಾಪಿಸಿಕೊಂಡಿತು. ಇದರ ಪ್ರಭಾವ ಎಷ್ಟಿತ್ತೆಂದರೆ ರಾಜ್ಯಾದ್ಯಂತ ಶ್ರಮಿಕ ಜನವರ್ಗ ಇದರಿಂದಾಗಿ ದುಡಿದ ಹಣವನ್ನೆಲ್ಲ ಆನ್‌ಲೈನ್ ಜೂಜಿಗೆ ತೊಡಗಿಸಿ ದರಿದ್ರರಾಗತೊಡಗಿದರು. ಹಲವು ಸಂಸಾರಗಳು ಒಡೆದು ಹೋದವು. ಸಾಕಷ್ಟು ಮಂದಿ ತಮ್ಮೆಲ್ಲ ಗಳಿಕೆ, ಆಸ್ತಿಯನ್ನೆಲ್ಲ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದರು.
ಈ ಆನ್‌ಲೈನ್ ಲಾಟರಿ ವಿರುದ್ಧ ಅಕ್ಷರಶಃ ಸಮರವನ್ನೇ ಕರವೇ ಘೋಷಿಸಿತು. ಎಲ್ಲೆಡೆ ಕರವೇ ಕಾರ್ಯಕರ್ತರು ಆನ್‌ಲೈನ್ ಲಾಟರಿ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಲಾಟರಿಗೆ ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ರಸ್ತೆಗೆ ಎಸೆದರು. ಹೋರಾಟದ ತೀವ್ರತೆಯಿಂದ ಬೆಚ್ಚಿ ಬಿದ್ದ ಸರ್ಕಾರ ಆನ್‌ಲೈನ್ ಲಾಟರಿಯನ್ನು ಸಂಪೂರ್ಣ ನಿಷೇಧಿಸಿತು.
ಶಾಸಕರ ವಿರುದ್ಧ ಕಿಡಿ
ಡೆರಿಕ್ ಫುಲಿನ್ ಫಾ ಎಂಬುವವರನ್ನು ಬಿಜೆಪಿ ಸರ್ಕಾರ ಆಂಗ್ಲೋ ಇಂಡಿಯನ್ ಕೋಟಾದಡಿ ವಿಧಾನ ಪರಿಷತ್‌ಗೆ ನೇಮಕ ಮಾಡಿತ್ತು. ದುರಂತವೆಂದರೆ ಈ ಪುಣ್ಯಾತ್ಮನಿಗೆ ಕನ್ನಡವೇ ಬಾರದು! ಕನ್ನಡ ಬಾರದ ಈ ಶಾಸಕ ವಿಧಾನಸಭೆಯಲ್ಲಿ ಇಂಗ್ಲೀಷಿನಲ್ಲಿ ಭಾಷಣ ಮಾಡತೊಡಗಿದರು. ‘ದಯಮಾಡಿ ಕನ್ನಡದಲ್ಲಿ ಮಾತನಾಡಿ’ ಅಂತ ಖುದ್ದು ವಿದಾನಸಭಾಧ್ಯಕ್ಷರೇ ಕೋರಿದರೂ ಡೆರಿಕ್ ಫುಲಿನ್ ಫಾ ಉದ್ಧಟತನದಿಂದ ವರ್ತಿಸಿದರು. ನನಗೆ ಕನ್ನಡ ಬಾರದು...ನಾನು ಇಂಗ್ಲೀಷಿನಲ್ಲಿಯೇ ಮಾತನಾಡುವುದು ಎಂದು ಉತ್ತರಿಸಿದ್ದರು.
ಇಷ್ಟಾದರೂ ಡೆರಿಕ್ ಫುಲಿನ್ ಫಾ ಅವರ ಕನ್ನಡ ವಿರೋಧಿ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ ಗಂಭೀರವಾಗಿ ಪರಿಗಣಿಸಿದ್ದು ರಕ್ಷಣಾ ವೇದಿಕೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದ್ದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಡೆರಿಕ್ ಫುಲಿನ್ ಫಾ ಅವರಿಗೆ ವೇದಿಕೆಯ ಕಾರ‍್ಯಕರ್ತರು ಘೇರಾವ್ ಹಾಕಿದರು. ಕನ್ನಡ ಕಲಿಯುವಂತೆ ತಾಕೀತು ಮಾಡಿದರು. ರಕ್ಷಣಾ ವೇದಿಕೆ ಕಾರ‍್ಯಕರ್ತರ ಅದಮ್ಯ ಕನ್ನಡ ಪ್ರೇಮ ಕಂಡು ಖುದ್ದು ಡೆರಿಕ್ ಫುಲಿನ್ ಫಾ ಬೆಕ್ಕಸಬೆರಗಾದರು.
ಈ ಘಟನೆ ನಡೆದ ಮಾರನೇ ದಿನವೇ ಖುದ್ದು ಡೆರಿಕ್ ಫುಲಿನ್ ಫಾ ತಮ್ಮ ಪತ್ನಿಯ ಜತೆ ಗಾಂಧಿನಗರದಲ್ಲಿರುವ ರಕ್ಷಣಾ ವೇದಿಕೆಯ ಕಚೇರಿಗೆ ಭೇಟಿ ನೀಡಿ, ನಾರಾಯಣ ಗೌಡರನ್ನು ಭೇಟಿಯಾದರು. ತಮ್ಮ ನಡವಳಿಕೆಗೆ ಕ್ಷಮೆ ಕೋರಿದ್ದಲ್ಲದೆ ತಾವು ಖಂಡಿತಾ ಕನ್ನಡ ಕಲಿಯುವುದಾಗಿ ಭರವಸೆ ನೀಡಿದರು!
ಇದನ್ನೇ ಹೋಲುವ ಮತ್ತೊಂದು ಪ್ರಕರಣವೂ ರಕ್ಷಣಾ ವೇದಿಕೆಯ ಇತಿಹಾಸದ ಪುಟಗಳಲ್ಲಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿಧಾನಸಭೆ ಪ್ರವೇಶಿಸಿದ್ದರು. ಸಚಿವ ಸ್ಥಾನ ಒಲಿದು ಬಂದಾಗ ಕನ್ನಡ ಬಾರದು ಎಂಬ ಕಾರಣಕ್ಕೆ ಇಂಗ್ಲೀಷಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರ ವಿರುದ್ಧ ಪ್ರತಿಭಟಿಸಿದ ಕಾರ‍್ಯಕರ್ತರು ಸದನ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಕರಪತ್ರಗಳನ್ನು ಎಸೆದು ಗಟ್ಟಿದನಿಯಲ್ಲಿ ಪ್ರತಿಭಟಿಸಿ, ಬಿಸಿಮುಟ್ಟಿಸಿದ್ದರು.
ಮೇರು ನಟ ಡಾ.ರಾಜ್ ವೀರಪ್ಪನ್ ಕಪಿಮುಷ್ಠಿಯಿಂದ ಬಿಡುಗಡೆಯಾದ ನಂತರ ರಾಜ್ಯದಲ್ಲಿದ್ದ ಕೆಲವು ತಮಿಳು ವ್ಯಾಮೋಹಿಗಳು ಬೆಂಗಳೂರಿನಲ್ಲಿ ಸಮಾವೇಶವೊಂದಕ್ಕೆ ಸಿದ್ಧತೆ ನಡೆಸಿದ್ದರು. ಈ ಸಮಾವೇಶದಲ್ಲಿ ಎಲ್‌ಟಿಟಿಇ ಬೆಂಬಲಿಗ ನೆಡುಮಾರನ್‌ಗೆ ಸನ್ಮಾನಿಸುವ ಉದ್ದೇಶವಿತ್ತು. ಅದಕ್ಕಾಗಿ ಭರದ ಸಿದ್ಧತೆಯೇ ನಡೆಯಿತು. ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು ರಕ್ಷಣಾ ವೇದಿಕೆ. ಒಂದು ವೇಳೆ ಬೆಂಗಳೂರಿನಲ್ಲಿ ತಮಿಳು ಸಮಾವೇಶ ನಡೆದರೆ ರಕ್ತಪಾತವೇ ಆದೀತು ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಸಂಘಟಕರಿಗೆ ರವಾನಿಸಿತು. ಇರದ ಪರಿಣಾಮ ನೆಡುಮಾರನ್‌ಗೆ ಸತ್ಕಾರ ರದ್ದಾಯಿತು.
ಬೆಳಗಾವಿಯಲ್ಲಿ ಕನ್ನಡದ ಕಂಪು...
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿಯನ್ನು ಕಾಲದಿಂದಲೂ ಆಳುವ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದವು. ಇದರ ಪರಿಣಾಮ ಬೆಳಗಾವಿ ಕರ್ನಾಟಕದಲ್ಲಿದ್ದರೂ ಅಲ್ಲಿ ಮರಾಠಿ ಭಾಷಿಕರ ಆಟೋಟಾಪ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ದ್ದೇ ಆಧಿಪತ್ಯ.
ಇದನ್ನೇ ದುರ್ಬಳಕೆ ಮಾಡಿಕೊಂಡ ಎಂಇಎಸ್‌ನ ಕಿಡಿಗೇಡಿಗಳು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದರು. ಬೆಳಗಾವಿ ಪಾಲಿಕೆಯೂ ಇದನ್ನೇ ನಿರ್ಣಯಿಸಿತು. ಆಗ ಕಾಂಗ್ರೆಸ್‌ನ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದರು.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಪಾಲಿಕೆ ತೀರ್ಮಾನದ ವಿರುದ್ಧ ಸೆಟೆದು ನಿಂತಿದ್ದು ರಕ್ಷಣಾ ವೇದಿಕೆ. ಈ ಸಂಬಂಧ ಉಗ್ರ ಹೋರಾಟಕ್ಕೆ ಕಾರ‍್ಯಕರ್ತರು ಸಜ್ಜಾದರು. ಬೆಂಗಳೂರಿನ ಶಾಸಕರ ಭವನಕ್ಕೆ ಬೆಳಗಾವಿ ಪಾಲಿಕೆ ಮೇಯರ್ ವಿಜಯ್ ಮೋರೆ ಬಂದಿರುವ ಮಾಹಿತಿ ಪಡೆದ ಕಾರ‍್ಯಕರ್ತರು ಆತನ ಮುಖಕ್ಕೆ ಮಸಿ ಬಳಿದರು. ಈ ಪ್ರಕರಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಟೀಕೆ, ಬೆಂಬಲ ಎರಡೂ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ಕಾರ‍್ಯಕರ್ತರ ಬೆಂಬಲಕ್ಕೆ ನಿಂತಿದ್ದು ಡಾ.ಪೂರ್ಣಚಂದ್ರ ತೇಜಸ್ವಿ. ‘ನಾಡದ್ರೋಹದ ಕೆಲಸ ಮಾಡಿರುವಾತನ ಮುಖಕ್ಕೆ ಮಸಿ ಬಳಿಯದೆ ಫೇರ್ ಅಂಡ್ ಲವ್ಲಿ ಹಚ್ಬೇಕಿತ್ತೇ?’ ಅಂತ ಕುಟುಕಿದ್ದರು. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧರಂಸಿಂಗ್ ಸರ್ಕಾರ ಬೆಳಗಾವಿ ಪಾಲಿಕೆಯ ಚುನಾಯಿತ ಮಂಡಳಿಯನ್ನು ವಜಾಗೊಳಿಸಿತು.
ಹೀಗೆ ಎಂಇಎಸ್‌ನ ಆಟೋಟಾಪ, ದಬ್ಬಾಳಿಕೆಯನ್ನು ನಿಯಂತ್ರಿಸಿ, ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಬಾವುಟ ಹಾರಿಸುವ ಐತಿಹಾಸಿಕ ನಿರ್ಧಾರಕ್ಕೆ ಬಂದ ನಾರಾಯಣಗೌಡರು ಇಡೀ ಬೆಳಗಾವಿಯನ್ನು ಸುತ್ತಿದ್ದರು. ಸಮಸ್ತ ಕನ್ನಡಿಗರನ್ನೂ ಒಗ್ಗೂಡಿಸಿದರು. ಕನ್ನಡೇತರರ ವಿಶ್ವಾಸ ಗಳಿಸಿದರು. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಕನ್ನಡ ಅಭ್ಯರ್ಥಿಗಳ ಪ್ರಚಾರ ನಡೆಸಿ, ಅವರಿಗೆ ನೈತಿಕ ಬೆಂಬಲ ನೀಡಿದರು. ಸರ್ವ ಪಕ್ಷಗಳ ಮುಖಂಡರನ್ನೂ ಒಗ್ಗೂಡಿಸಿದರು. ಇದೆಲ್ಲದರ ಪರಿಣಾಮ ಕನ್ನಡ ಅಭ್ಯರ್ಥಿಗಳೇ ಚುನಾವಣೆಯಲ್ಲಿ ಆಯ್ಕೆಯಾದರು. ರಕ್ಷಣಾ ವೇದಿಕೆಯ ಸಾಮಾನ್ಯ ಕಾರ‍್ಯಕರ್ತೆಯಾಗಿದ್ದ ಪ್ರಶಾಂತ ಬುಡವಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದರು!
ಬರೋಬ್ಬರಿ ೧೯ ವರ್ಷಗಳ ನಂತರ ಬೆಳಗಾವಿ ಪಾಲಿಕೆ ಕನ್ನಡಿಗರ ಕೈಗೆ!!
ಇಷ್ಟೆಲ್ಲಾ ಘಟನೆ ನಂತರವೂ ಎಂಇಎಸ್ ತನ್ ಪುಂಡಾಟಿಕೆ ಬಿಡಲಿಲ್ಲ. ಮರಾಠಿ ಮಹಾಮೇಳಾವ ಮತ್ತಿತರೆ ಚಟುವಟಿಕೆ ನಡೆಸುವ ಮೂಲಕ ಅದು ಇನ್ನಲ್ಲದ ತಗಾದೆ ತೆಗೆಯುತ್ತಲೇ ಬಂತು. ಮಹಾರಾಷ್ಟ್ರದ ಬುದ್ಧಿಗೇಡಿ ರಾಜಕಾರಣಿಗಳು, ಶಿವಸೇನೆ, ಎಂಎನ್‌ಎಸ್ ನಾಯಕರು ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಜಗಳಕ್ಕೂ ಯತ್ನಿಸಿತ್ತು. ಆದರೆ ಅವೆಲ್ಲದ್ದಕ್ಕೂ ರಕ್ಷಣಾ ವೇದಿಕೆ ಕಾಲಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ.
ಹಿಂದಿ ಸಪ್ತಾಹ ಏಕೆ?
ನಮ್ಮದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡದಷ್ಟೇ ಸ್ಥಾನಮಾನವನ್ನು ಹಿಂದಿ ಭಾಷೆ ಹೊಂದಿದ್ದರೂ ಅದನ್ನು ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳುತ್ತಾ ಹಿಂದಿ ಹೇರಿಕೆ ಮಾಡುವ ವ್ಯವಸ್ಥಿತ ಪಿತೂರಿ ವಿರುದ್ಧ ದನಿ ಎತ್ತಿದ್ದು ರಕ್ಷಣಾ ವೇದಿಕೆ. ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಹಿಂದಿ ಮೇಲ್ದರ್ಜೆ ಭಾಷೆ ಇತರ ಭಾಷೆಗಳು ಕೆಳದರ್ಜೆ ಭಾಷೆ ಎಂಬ ಹುನ್ನಾರವನ್ನು ಮಟ್ಟಹಾಕಿದ್ದು ನಾರಾಯಣಗೌಡರು.
ಬಲವಂತವಾಗಿ ಹಿಂದಿ ಹೇರುವಂಥ ಈ ಬೆಳವಣಿಗೆಗಳು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಕನ್ನಡದ ಅಸ್ತಿತ್ವವೇ ಇರುವುದಿಲ್ಲ ಎಂಬ ಮುನ್ಸೂಚನೆ ಅರಿತ ವೇದಿಕೆ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಹೋರಾಟವನ್ನು ನಡೆಸುತ್ತಾ ಬಂದಿದೆ.
ಕರವೇಯ ಹೋರಾಟದ ಹಾದಿಗಳಾವುದೂ ಸುಗುಮವಾಗಿರಲಿಲ್ಲ. ಪೊಲೀಸರ ಲಾಠಿ ಏಟು, ಸಾವಿರಾರು ಕೇಸುಗಳು...ಸರ್ಕಾರದ ಕೆಂಗಣ್ಣು..ಹೀಗೆ ಎಲ್ಲವನ್ನೂ ಅನುಭವಿಸುತ್ತಲೇ ಬಂದಿದೆ. ಪ್ರತೀ ಹೋರಾಟಕ್ಕೆ ಸಿದ್ಧಗೊಂಡಾಗಲೆಲ್ಲಾ ಇಲ್ಲಿನ ಕಾರ‍್ಯಕರ್ತರು ಜೀವಭಯ ಎದುರಿಸುವ ಪರಿಸ್ಥಿತಿಯೂ ಸೃಷ್ಟಿಯಾಗಿದೆ. ಮನೆ, ಮಠ, ಬಂಧು, ಬಳಗ ಎಲ್ಲವನ್ನೂ ಮರೆತು ಎಷ್ಟೋ ದಿನಗಳ ಕಾಲ ಜೈಲಿನಲ್ಲಿ ರಬೇಕಾದ ಸ್ಥಿತಿಯನ್ನೂ ಅನುಭವಿಸಿದ್ದಾರೆ.
ಅಂಥವುಗಳ ಪೈಕಿ ಕಾರವಾರವನ್ನು ಗೋವಾಗೆ ಸೇರಿಸಬೇಕೆಂಬ ಕುತಂತ್ರದ ವಿರುದ್ಧ ಕರವೇ ನಡೆಸಿದ ಹೋರಾಟವೂ ಒಂದು. ಇನ್ನು ಪರಭಾಷೆ ಹಾವಳಿಯಿಂದ ಕನ್ನಡ ಚಿತ್ರರಂಗz ಕಂಗೆಟ್ಟು ಕುಳಿತಿದ್ದಾಗ ನಡೆಸಿದ ಹೋರಾಟವೂ ಐತಿಹಾಸಿಕ. ಹೋರಾಟದ ಫವಾಗಿ ಕನ್ನಡ ಚಿತ್ರಗಳಿಗೆ ಪೂರಕವಾತಾವರಣ ನಿರ್ಮಾಣವಾಯಿತಲ್ಲದೆ, ಮಲ್ಟಿಪ್ಲೆಕ್ಸ್‌ಗಳಲ್ಲೂ ಕನ್ನಡ ಚಿತ್ರಗಳು ಪ್ರದರ್ಶಿತಗೊಳ್ಳಲು ಅವಕಾಶ ದೊರೆಯಿತು. ಅಷ್ಟಲ್ಲದೆ, ಕನ್ನಡಿಗರ ಜೀವನದಿಯಾಗಿದ್ದ ಮಹಾದಾಯಿ ನದಿ ನೀರಿನಲ್ಲಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ನಡೆಸಿದ ಬೃಹತ್ ಜಾಥಾ ಕೂಡ ಐತಿಹಾಸಿಕ. ನವೆಂಬರ್ ೧ ರಂದು ಕನ್ನಡ ಬಾವುಟ ಹಾರಿಸುವಂತಿಲ್ಲ ಎಂಬ ಸರ್ಕಾರದ ಎಡಬಿಡಂಗಿ ಆದೇಶದ ವಿರುದ್ಧ ಚಳವಳಿ ನಡೆಸಿ, ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಇದೇ ಕರ್ನಾಟಕ ರಕ್ಷಣಾ ವೇದಿಕೆ
ತಿರುವಳ್ಳುವರ್ ವಿವಾದ
ಇನ್ನು ತಿರುವಳ್ಳುವರ್ ಪ್ರತಿಮೆ ವಿವಾದ ಕರ್ನಾಟಕ ರಕ್ಷಣಾ ವೇದಿಕೆ ಪಾಲಿಗೆ ಅತ್ಯಂತ ಮಹತ್ವದ್ದು. ಕೆಲವು ಎಲ್‌ಟಿಟಿಇ ಬೆಂಬಲಿಗರು ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಅದನ್ನು ಗಟ್ಟಿ ದನಿಯಲ್ಲಿ ವಿರೋಧಿಸಿ, ಭದ್ರ ಹೋರಾಟಕ್ಕೆ ಬುನಾದಿ ಹಾಕಿದ್ದು ಕನ್ನಡಪರ ಕಾರ್ಯಕರ್ತರು. ತಮಿಳು ಶಕ್ತಿಗಳು ತಮ್ಮ ಇನ್ನಿಲ್ಲದ ಪ್ರಾಬಲ್ಯ, ಪ್ರಭಾವ ಬಳಸಿ ಏನೆಲ್ಲಾ ಹುನ್ನಾರಗಳನ್ನು ನಡೆಸಿದರೂ ಅದಕ್ಕೆ ಜಗ್ಗದ ಕನ್ನಡ ಹೋರಾಟಗಾರರು ರಾಜ್ಯವ್ಯಾಪಿ ಹೋರಾಟಕ್ಕೆ ಮುನ್ನುಡಿ ಬರೆದದ್ದೂ ಆಯಿತು.
ಆದರೆ ಕನ್ನಡಿಗರ ಸ್ವಾಭಿಮಾನದ ಹೋರಾಟದ ಪರವಾಗಿ ನಿಲ್ಲಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಲವಾರು ವರ್ಷಗಳಿಂದ ಹಲಸೂರು ಕೆರೆ ಆವರಣದಲ್ಲಿ ಮುಸುಕು ಹೊತ್ತು ನಿಂತಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸುವ ನಿರ್ಧಾರಕ್ಕೆ ಬಂದರು. ತನ್ಮೂಲಕ ಕನ್ನಡಿಗರ ಬೆನ್ನಿಗೆ ಇರಿದರು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಹೂರ್ತವನ್ನೂ ನಿಗದಿಗೊಳಿಸಿದರು. ಪ್ರತಿಮೆ ಅನಾವರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಕ್ಷಣಾ ವೇದಿಕೆಯ ನಾರಾಯಣಗೌಡರೂ ಸೇರಿದಂತೆ ಸಾವಿರಾರು ಕಾರ‍್ಯಕರ್ತರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ತಳ್ಳಿದರು. ತಮಿಳುನಾಡಿನಿಂದ ದೌಡಾಯಿಸಿ ಬಂದ ಮುಖ್ಯಮಂತ್ರಿ ಕರುಣಾನಿಧಿ ಯಡಿಯೂರಪ್ಪ ಅವರನ್ನು ‘ಚಿನ್ನತಂಬಿ’ ಅಂತ ಬಾಯ್ತುಂಬಾ ಕರೆದು, ನೆಟಿಕೆ ಮುರಿದು, ಪ್ರತಿಮೆ ಅನಾವರಣಗೊಳಿಸಿ ನೆಟ್ಟಗೆ ಎದ್ದುಹೋದರು.
ಕನ್ನಡಿಗರ ಆಕ್ರೋಶವನ್ನು, ಸ್ವಾಭಿಮಾನವನ್ನು ಪೊಲೀಸ್ ಬಲದ ಮೂಲಕ ನಿಯಂತ್ರಿಸಿ ಸಂಭ್ರಮಿಸಿದ ಯಡಿಯೂರಪ್ಪನವರ ದರ್ಪ, ದವಲತ್ತಿಗೆ ಕನ್ನಡಿಗರು ಮೌನ ಪ್ರತಿಭಟನೆ ವ್ಯಕ್ತಪಡಿಸಬೇಕಾಯಿತು. ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುವ ಕನ್ನಡಿಗರ ಸಾತ್ವಿಕ ಸಿಟ್ಟಿನಿಂದ ಯಡಿಯೂರಪ್ಪ ಖಂಡಿತಾ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕುತಂತ್ರದಿಂದ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿದ ಯಡಿಯೂರಪ್ಪ ಅದಕ್ಕೆ ತಕ್ಕ ಪಾಠವನ್ನು ಕಲಿತೇ ಕಲಿಯುತ್ತಾರೆ.
ಹೊಗೇನಕಲ್ ಗಡಿ ವಿವಾದ
ಕಾಲದಿಂದಲೂ ನೆರೆಯ ತಮಿಳು ನಾಡು ಕರ್ನಾಟಕದ ಜತೆ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಲೇ ಇದೆ. ಅದು ಕಾವೇರಿ ವಿವಾದವಾಗಿರಬಹುದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡುವ ಬಗ್ಗೆಯಾದರೂ ಆಗಬಹುದು ಅಥವಾ ಹೊಗೇನಕಲ್ ವಿವಾದವಾದರೂ ಆಗಿರಬಹುದು. ಆಳುವ
ಸರ್ಕಾರಗಳ ಬೇಜವಾಬ್ದಾರಿ ನಡವಳಿಕೆ, ದಿವ್ಯ ನಿರ್ಲಕ್ಷ್ಯದಿಂದ ಏನೆಲ್ಲಾ ಯಡವಟ್ಟುಗಳು ಆಗಬಹುದೋ ಅವೆಲ್ಲಕ್ಕೆ ಸೂಕ್ತ ಉದಾಹರಣೆ ಅಂದ್ರೆ ಹೊಗೇನಕಲ್ ವಿವಾದ.
ಏನೆಲ್ಲಾ ಕಾಯ್ದೆ, ಕಾನೂನು, ಇತಿಹಾಸ ಕೆದಕಿದರೂ ಹೊಗೇನಕಲ್ ಕರ್ನಾಟಕಕ್ಕೇ ಸೇರಿದ್ದು ಎಂಬ ಪುರಾವೆ ದೊರೆಯುತ್ತದೆ. ಆದರೆ ಅವೆಲ್ಲವನ್ನೂ ಉಲ್ಲಂಘಿಸುವ ಉದ್ಧಟತನ ತಮಿಳುನಾಡು ಸರ್ಕಾರದ್ದು. ಹೊಗೇನಕಲ್‌ನಲ್ಲಿ ಕಾಮಗಾರಿ ನಡೆಸುವ ಮೂಲಕ ಕರ್ನಾಟಕ್ಕೆ ಮಂಕು ಬೂದಿ ಎರಚುವ ದುಸ್ಸಾಹಸಕ್ಕೆ ರಕ್ಷಣಾ ವೇದಿಕೆ ಚಳವಳಿಗಳ ಮೂಲಕ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ. ಶಿವನಸಮುದ್ರ ಯೋಜನೆಗೆ ಕಿತಾಪತಿ ಮಾಡಿದ ತಮಿಳುನಾಡಿನ ಕಿಡಿಗೇಡಿ ರಾಜಕಾರಣಿಗಳು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ಹೂಡಿದ್ದನ್ನೂ ವೇದಿಕೆ ಬೆತ್ತಲುಗೊಳಿಸಿದೆ. ಕರ್ನಾಟಕದಲ್ಲಿ ತಮಿಳನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಧಾರ್ಷ್ಟ್ಯತನಕ್ಕೂ ಬಲವಾದ ಪೆಟ್ಟು ನೀಡಿದೆ.
ಹಾಗೆ ನೋಡಿದರೆ, ಹೊಗೇನಕಲ್ ವಿವಾದ ಅತ್ಯಂತ ಗಂಭೀರವಾದದ್ದು. ರಾತ್ರೋರಾತ್ರಿ ಹೊಗೇನಕಲ್‌ನಲ್ಲಿ ಯೋಜನೆ ಆರಂಭಿಸುವ ದುಸ್ಸಾಹಸಕ್ಕೆ ಇಳಿದ ತಮಿಳುನಾಡು ಸರ್ಕಾರದ ಕೃತ್ಯದ ಮೇಲೆ ಚಾಮರಾಜನಗರದ ರಕ್ಷಣಾ ವೇದಿಕೆ ಕಾರ‍್ಯಕರ್ತರು ಪ್ರತಿಭಟಿಸುತ್ತಲೇ ಇದ್ದಾರೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಲೇ ಇದೆ.
ಹೊಗೇನಕಲ್ ಯೋಜನೆಯ ವಿವಾದ ಭುಗಿಲೆಬ್ಬಿಸಿ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುವುದು ಸಲ್ಲದು ಅಂತ ಖುದ್ದು ಹೈಕೋರ್ಟ್ ‘ಬುದ್ಧಿ’ ಮಾತು ಹೇಳಿದೆ. ವಿವಾದವನ್ನು ಸರ್ಕಾರದ ಮಟ್ಟದಲ್ಲಿಯೇ ಬಗೆಹರಿಸಿ ಅಂತಲೂ ಅದು ಸೂಚಿಸಿದೆ. ಅಷ್ಟಾದರೂ ತಮಿಳುನಾಡು ತನ್ನ ಕ್ಯಾತೆ ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ. ಕರ್ನಾಟಕ ಸರ್ಕಾರಕ್ಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಮನಸ್ಸು ಇದ್ದಂತಿಲ್ಲ.
ಜೀವ ಹೋದರೂ ಸರಿ ಕರ್ನಾಟಕದ ಒಂದಿಂಚು ನೆಲವೂ ತಮಿಳುನಾಡಿನ ಪಾಲಾಗಲು ಬಿಡೆವು ಎನ್ನುವ ವೇದಿಕೆ ಧ್ಯೇಯ ವಾಕ್ಯವನ್ನ ನಮ್ಮ ಸರ್ಕಾರಗಳು, ಜನನಾಯಕರು ಅರ್ಥ ಮಾಡಿಕೊಳ್ಳಬೇಕಷ್ಟೇ.
ದಿಕ್ಕು ಬದಲಾಗದು...
ಕರ್ನಾಟಕ ರಕ್ಷಣಾ ವೇದಿಕೆಗೆ ಕನ್ನಡವೇ ಧರ್ಮ, ಕನ್ನಡವೇ ದೇವರು ಮತ್ತು ಕನ್ನಡವೇ ಜಾತಿ. ಇಲ್ಲಿ ಜಾತಿ, ಧರ್ಮದ ಗೊಡವೆಯಿಲ್ಲ. ಹಮ್ಮು ಬಿಮ್ಮು, ಬಿಗುಮಾನವಿಲ್ಲ. ಇಲ್ಲೇನಿದ್ದರೂ ಸರ್ವೋದಯ ತತ್ವ. ವಿಶ್ವಮಾನವ ಸಂದೇಶ.
‘ರೂಪರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವ ದೀಂಟಿ...
ಓ ನನ್ನ ಚೇತನ
ಆಗು ನೀ ಅನಿಕೇತನ....’
-ಎಂಬಂತೆ ಮಹಾನ್ ಕವಿ ಕುವೆಂಪು ಅವರ ಚಿಂತನೆಗಳ ಒಂದಿಷ್ಟಾದರೂ ಪಸರಿಸುವ ಅದಮ್ಯ ಕನಸು ನಾರಾಯಣಗೌಡರದ್ದು.
ಇಲ್ಲಿ ಯಾರನ್ನೂ ದೂಷಿಸುವುದಿಲ್ಲ, ದೂರೀಕರಿಸುವುದೂ ಇಲ್ಲ. ಇಲ್ಲೇನಿದ್ದರೂ ಒಕ್ಕೊರೊಲ ಕನ್ನಡ ಮಂತ್ರ. ಕನ್ನಡ...ಕನ್ನಡ...ಮತ್ತು ಕನ್ನಡ. ಕಾರ‍್ಯಕರ್ತರೇ ಇಲ್ಲಿ ಸೇವಕರು ಮತ್ತು ಅವರೇ ಯಜಮಾನರು. ಪ್ರತಿಯೊಬ್ಬ ಕಾರ‍್ಯಕರ್ತನೊಳಗೂ ಒಬ್ಬ ಅದಮ್ಯ ಸಂಘಟಕ ಇದ್ದೇ ಇರ‍್ತಾನೆ ಅಂತ ನಂಬಿದವರು ನಾರಾಯಣಗೌಡರು. ಆ ಕಾರಣಕ್ಕಾಗೇ ಸರ್ವರಿಗೂ ಮನ್ನಣೆ, ಸರ್ವರಿಗೂ ವಂದನೆ.
ಯಾವುದೇ ಕಾರಣಕ್ಕೂ ರಕ್ಷಣಾ ವೇದಿಕೆಯಲ್ಲಿ ಜಾತಿ, ಮತ, ಧರ್ಮ, ಭಾಷೆಗಳ ಗೋಡೆ ಇಲ್ಲವೇ ಇಲ್ಲ. ಕನ್ನಡತನಕ್ಕೆ ಬದ್ಧರಾಗಿ ಯಾರೇ ಬಂದರೂ ಅವರಿಗೆ ಸ್ವಾಗತ. ವಿಶೇಷವೆಂದರೆ, ಬೇರೆ ಮಾತೃಭಾಷೆಗಳನ್ನು ಹೊಂದಿದವರೂ ವೇದಿಕೆಯ ಹಲವು ಘಟಕಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡ ಕಟ್ಟುವ ಕೆಲಸಕ್ಕೆ ಹೃದಯಪೂರ್ವಕವಾಗಿ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ.
‘ಇವನಾರವ ಇವನಾರವ ಎನ್ನದಿರು
ಇವ ನಮ್ಮವ ಇವ ನಮ್ಮವ ಎನ್ನು’

-ಎಂದು ಶುದ್ಧ ಮನಸ್ಸುಗಳನ್ನು, ವಿಶಾಲ ಹೃದಯಿಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಒಪ್ಪಿಕೊಳ್ಳುವ ಔದಾರ‍್ಯ ಗೌಡರದ್ದು.
ಇನ್ನು ಕಪ್ಪೆ ಆರಭಟ್ಟ ಹೇಳಿದಂತೆ ಕನ್ನಡಿಗರು ‘ಸಾಧುಂಗೆ ಸಾಧು ಮಾಧುರ‍್ಯಂಗೆ ಮಾಧುರ‍್ಯ...ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್...’ ಎನ್ನುವಂತೆ ವೇದಿಕೆಯ ಕಾರ‍್ಯಕರ್ತರು ಸಾಧುಗಳಿಗೆ ಸಾಧು ಮತ್ತು ಬಾಧಿಸುವವರಿಗೆ, ಸುಖಾಸಮ್ಮನೆ ದಬ್ಬಾಳಿಕೆ ನಡೆಸುವವರಿಗೆ ಅಕ್ಷರಶಃ ಕಲಿಗಳೇ.
ರಕ್ಷಣಾ ವೇದಿಕೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ಇಲ್ಲೇನಿದ್ದರೂ ವಿಚಾರಗಳಿಗಷ್ಟೇ ಆದ್ಯತೆ. ಕನ್ನಡ ವಿಚಾರ, ಕನ್ನಡ ಆಲೋಚನೆ ಮತ್ತು ಕನ್ನಡದ ಅಭಿವೃದ್ಧಿಗಷ್ಟೇ ಕಾರ‍್ಯಕರ್ತರು ಬದ್ಧ. ವೇದಿಕೆಯ ದಶಕದ ಹೋರಾಟ, ಚಳವಳಿಗಳನ್ನು ಸೂಕ್ಷ್ಮವಾಗಿ ಬಲ್ಲವರಿಗಷ್ಟೇ ಇದು ಅರ್ಥವಾದೀತು. ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಆಲೋಚನೆಯ ದಿಕ್ಕು, ಹೋರಾಟದ ಶೈಲಿ, ಚಳವಳಿಯ ತೀವ್ರತೆ ಬದಲಾಗದು.
ಬೆಂಗಳೂರು ಕೇಂದ್ರಿತವಾಗಿದ್ದ ಕನ್ನಡ ಚಳವಳಿಯನ್ನು ದಶದಿಕ್ಕುಗಳಿಗೆ ವ್ಯಾಪಿಸುವಂತೆ ಮಾಡಿದ್ದು ನಾರಾಯಣಗೌಡರು. ಹಾಗೆ ನೋಡಿದರೆ ಚಳವಳಿಯ ಮೂಲಕವೇ ಇಡೀ ರಾಜ್ಯವನ್ನು ಭಾವನಾತ್ಮಕವಾಗಿ ಬೆಸೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಹಿಂದೆಲ್ಲ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಹಳೇ ಮೈಸೂರು ಭಾಗದ ಚಳವಳಿಗಾರರು ಸ್ಪಂದಿಸಿದ್ದು ಕಡಿಮೆ. ಆದರೆ ಕೃಷ್ಣಾ, ಮಹದಾಯಿ ನದಿ ವಿವಾದಗಳೂ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಉತ್ತರ ಕರ್ನಾಟಕದ ಸುತ್ತಗಲಕ್ಕೂ ಪ್ರವಾಸ ಮಾಡಿ, ಅಲ್ಲಿನ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ನಾರಾಯಣಗೌಡರ ಹೆಗ್ಗಳಿಕೆ. ಬೆಳಗಾವಿಯಲ್ಲಿ ಮತ್ತೆ ಕನ್ನಡಿಗರು ಸ್ವಾಭಿಮಾನದಿಂದ ತಲೆ ಎತ್ತಿ ಬಾಳುವಂತೆ ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಹೀಗಾಗಿ ಬೆಳಗಾವಿ ಕನ್ನಡಿಗರು ನಾರಾಯಣಗೌಡರನ್ನು, ಕರ್ನಾಟಕ ರಕ್ಷಣಾ ವೇದಿಕೆಯನ್ನು ವಿಶೇಷ ಅಭಿಮಾನದಿಂದ ನೋಡುತ್ತಾರೆ.
ಕನ್ನಡಿಗರ ಮುಖವಾಣಿ....
ಕನ್ನಡಿಗರ ಸ್ವಾಭಿಮಾನದ ಸಂಕೇತದಂತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ನಡಿಗೆಯಲ್ಲಿ ಕರವೇ ನಲ್ನುಡಿ ಮಾಸ ಪತ್ರಿಕೆಯದ್ದು ಮಹತ್ವದ ಹೆಜ್ಜೆ ಗುರುತು. ಕರವೇ ನಲ್ನಡಿ ಕನ್ನಡಿಗರ ಧೀಶಕ್ತಿಯ ಅನಾವರಣ. ಇದು ಕೇವಲ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಷ್ಟೇ ಅಲ್ಲ ಸಮಸ್ತ ಕನ್ನಡಿಗರ ಮುಖವಾಣಿ, ಎದೆಯ ದನಿ.
ನಲ್ನುಡಿ ನಡಿಗೆ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಅದರ ವ್ಯಾಪಕತೆ ಬೆರಗು ಮೂಡಿಸಿದೆ. ಇದು ಕನ್ನಡ ಮತ್ತು ಕನ್ನಡಿಗರಿಗಾಗಿಯೇ ರೂಪುಗೊಂಡ ಅಪರೂಪದ ಪತ್ರಿಕೆ. ಕನ್ನಡ ಪತ್ರಿಕೋದ್ಯಮದ ಮಟ್ಟಿಗಂತೂ ವಿಶಿಷ್ಟ ಪ್ರಯೋಗ. ‘ಹೀಗೂ ಮಾಡಬಹುದೇ’ ಎಂಬ ಬೆರಗುಗಣ್ಣುಗಳ ನಡುವೆಯೇ ರಕ್ಷಣಾ ವೇದಿಕೆ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿದೆ.
ಟೀಕೆಗಳು-ಟಿಪ್ಪಣಿಗಳು
ಕಳೆದ ಹತ್ತು ವರ್ಷಗಳಿಂದ ಸಮರೋಪಾದಿಯಲ್ಲಿ ಕನ್ನಡ ಕಾಯಕದಲ್ಲಿ ತೊಡಗಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಟೀಕೆ-ಟಿಪ್ಪಣಿಗಳನ್ನೂ ಎದುರಿಸುತ್ತ ಬಂದಿದೆ. ಆರೋಗ್ಯಕರ ಟೀಕೆಗಳಿಗೆ ವೇದಿಕೆ ಸ್ಪಂದಿಸುತ್ತದೆ. ಮುಕ್ತ ಸಲಹೆಗಳಿಗೆ ವೇದಿಕೆ ಯಾವತ್ತಿಗೂ ತೆರೆದುಕೊಂಡೇ ಇದೆ. ಕೆಲವರಿರುತ್ತಾರೆ; ಟೀಕೆಗಳಿಗಾಗಿ ಟೀಕಿಸುತ್ತಾರೆ. ಅಂಥವರನ್ನು ವೇದಿಕೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಮತ್ತೆ ಕೆಲವರು ಜಾಣ ಜಾಣೆಯರೆಂದು ಬೋರ್ಡು ತಗುಲಿಸಿಕೊಂಡವರು, ಅವರಿಂದ ಹೊರಡುವುದು ಕೇವಲ ಅಮೇಧ್ಯದ ವಾಸನೆ. ಮೀರ್ ಸಾಧಕ್, ಮಲ್ಲಪ್ಪಶೆಟ್ಟಿಗಳಂಥ ಕೊಳಕುಪಿಂಡಗಳಿಂದ ಭಕ್ಷೀಸು ಪಡೆದು ರಕ್ಷಣಾ ವೇದಿಕೆಯ ಮೇಲೆ ಕಲ್ಲು ಒಗೆದು ಹೊಲಸು ಕಾರುವ ಇಂಥ ಕ್ರಿಮಿಗಳು ಎಲ್ಲ ಕಾಲದಲ್ಲೂ ಇರುತ್ತಾರೆ. ‘ಕೊಚ್ಚೆಗೆ ಕಲ್ಲು ಎಸೆಯಬೇಡಿ; ಅದು ನಿಮಗೇ ಸಿಡಿಯುತ್ತದೆ’ ಎಂದು ಹಿರಿಯರು ಎಚ್ಚರಿಸಿದ್ದಾರೆ. ಹೀಗಾಗಿ ಅಂಥವರಿಗೂ ಪ್ರತಿಕ್ರಿಯಿಸುವುದನ್ನು ವೇದಿಕೆ ಇತ್ತೀಚಿಗೆ ಬಿಟ್ಟಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು ಎಂದರು ರಾಷ್ಟ್ರಕವಿ ಕುವೆಂಪು. ನಾರಾಯಣಗೌಡರ ಮೂಲಮಂತ್ರವೂ ಇದೆ. ಕನ್ನಡಕ್ಕೆ, ಕನ್ನಡಿಗನಿಗೆ, ಕರ್ನಾಟಕಕ್ಕೆ ಧಕ್ಕೆ ತರುವ ಯಾರೇ ಆದರೂ ಮೊದಲು ನಮ್ಮನ್ನು ಎದುರಿಸಿ ಎಂದು ರಣವೀಳ್ಯ ಕೊಟ್ಟವರು ನಾರಾಯಣಗೌಡರು. ಕನ್ನಡದ ಶತ್ರುಗಳನ್ನು ಯಾವ ಬೆಲೆ ತೆತ್ತಾದರೂ ಮಣಿಸುವ ಧೈರ್ಯ, ಶಕ್ತಿ, ಲಕ್ಷಾಂತರ ಕಾರ್ಯಕರ್ತರ ಬೆಂಬಲ ಅವರಿಗಿದೆ. ಈ ಕ್ಷಾತ್ರ ತೇಜಸ್ಸೇ ಸಂಘಟನೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು, ಈ ನೆಲದ ಸುಖ, ಸಂಪತ್ತು ಎಲ್ಲವೂ ಕನ್ನಡಿಗನಿಗೇ ದೊರೆಯಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಗುರಿ. ಈ ಗುರಿಯ ಮಾರ್ಗದಲ್ಲೇ ವೇದಿಕೆ ಮುನ್ನಡೆಯುತ್ತದೆ.

No comments:

Post a Comment

ಹಿಂದಿನ ಬರೆಹಗಳು