Saturday, July 3, 2010

ಕನ್ನಡ ಹೋರಾಟದ ಕಾನೂನಿನ ಶಕ್ತಿ ಪ್ರೊ. ಬಿ. ಬಸವರಾಜ್


ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬ ಕನ್ನಡಿಗ ಜವಾಬ್ದಾರಿ. ಅದಕ್ಕೆ ಬಡವ, ಬಲ್ಲಿದ, ವಿದ್ಯಾವಂತ, ಅವಿದ್ಯಾವಂತ ಎಂಬ ಭೇದವಿಲ್ಲ. ವೈದ್ಯ, ಆರಕ್ಷಕ, ವಕೀಲ, ರಾಜಕಾರಣಿ, ಉದ್ಯಮಿ ಎಂಬ ಘನತೆಗಳ ಗೋಜಲುಗಳು ಇಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಈ ಬದ್ಧತೆ ಇರಲೇಬೇಕು.
ಇಂತಹದೊಂದು ಬದ್ಧತೆಯನ್ನು ಮೈಗೂಡಿಸಿಕೊಂಡು ಕನ್ನಡದ ಕೈಂಕರ್ಯಕ್ಕೆ ನಿಂತವರಲ್ಲಿ ಪ್ರೊ. ಬಿ.ಬಸವರಾಜು ಪ್ರಮುಖರು. ಮಳವಳ್ಳಿ ತಾಲೂಕಿನ ದಬ್ಬಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ ಬಸವರಾಜು ಅವರು ತಮ್ಮ ಬಾಲ್ಯ ದಿನಗಳನ್ನು ಹಳ್ಳಿಯಲ್ಲೇ ಕಳೆದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರು ಮತ್ತು ಸುತ್ತ-ಮುತ್ತಲ ಹಳ್ಳಿಗಳ ಶಾಲೆಗಳಲ್ಲಿ ಪೂರೈಸಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ತದನಂತರದ ದಿನಗಳಲ್ಲಿ ಕಾನೂನು ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ತಮ್ಮದಾಗಿಸಿಕೊಂಡರು.
ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕೆಲ ಕಾಲ ಸೇವೆ ಸಲ್ಲಿಸಿದ ಬಸವರಾಜು ಅವರು ಹೋರಾಟದ ಮನೋಭಾವದವರಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಕನ್ನಡವನ್ನು, ಕನ್ನಡತನವನ್ನು ಮೈಗೂಡಿಸಿಕೊಂಡು ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಸವರಾಜು ಅವರು ವ್ಯಾಸಂಗ ಮಾಡುತ್ತಿರುವಾಗಲೇ ಕನ್ನಡ ಪರ ಸಂಘಟನೆಗಳಲ್ಲಿ ಪ್ರಬಲವಾಗಿದ್ದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ನಾಡಿನ ನೆಲ, ಜಲ, ಭಾಷೆಗಳ ವಿಚಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ಅನೇಕ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಕನ್ನಡಮ್ಮನ ಸೇವೆಗೆ ನಿಂತವರು.
ನಾಯಕತ್ವ ಗುಣಗಳನ್ನು ಬಾಲ್ಯದಿಂದಲೇ ರೂಢಿಸಿಕೊಂಡಿದ್ದ ಬಸವರಾಜು ಅವರು, ವಿದ್ಯಾರ್ಥಿ ನಾಯಕರಾಗಿ ತದನಂತರ ವಕೀಲರಾದ ಮೇಲೆ ವಕೀಲರ ಸಂಘ ಹಾಗೂ ವಕೀಲರ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು ಹನ್ನೆರಡು ವರ್ಷಗಳ ಕಾಲ ಯಶಸ್ವಿಯಾಗಿ ನಿರ್ವಹಿಸಿದರು.
ಸಾಧ್ಯವಾದಡೆಯಲ್ಲೆಲ್ಲಾ ಕನ್ನಡ ವಾತಾವರಣವನ್ನು ನಿರ್ಮಿಸಲು ಸದಾ ಜಾಗೃತರಾಗಿರುವ ಬಸವರಾಜು ಅವರು, ಸಹಜವಾಗಿಯೇ ನಾಡು, ನುಡಿ ಸೇವೆಗೆ ರೂಪುಗೊಂಡಿದ್ದ ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಗೆ ಪಾದಾರ್ಪಣೆಗೈದರು.
ಕನ್ನಡ ಪರ ಹೋರಾಟಗಾರರಿಗೆ ಕಾನೂನು ರಕ್ಷಣೆ ನೀಡಲು ಮುಂದಾದರು. ಎಲ್ಲೇ ಆಗಲಿ, ಯಾರಿಗೇ ಆಗಲಿ ಅಲ್ಲಿ ಬಸವರಾಜು ಅವರು ಪ್ರತ್ಯಕ್ಷ. ಹೋರಾಟಗಾರರಿಗೆ ಕಾನೂನು ರಕ್ಷಣೆ ನೀಡಿ ಅವರುಗಳ ಹೋರಾಟಕ್ಕೆ ಇಂಬು ನೀಡುತ್ತಾ ಬಂದಿದ್ದಾರೆ.
ಕನ್ನಡ ಪರ ಹೋರಾಟಗಾರರ ಜತೆ ಜತೆಗೆ ರೈತ ಪರ ಹೋರಾಟಗಾರರ ಬಗೆಗೂ ಅಭಿಮಾನ ಹೊಂದಿರುವ ಬಸವರಾಜು ಅವರು ಸಂಕಷ್ಟದಲ್ಲಿರುವ ರೈತರಿಗೆ, ಕೂಲಿ-ಕಾರ್ಮಿಕರಿಗೆ, ಹೋರಾಟಗಾರರಿಗೆ ಸದಾ ಸೇವೆಗೆ ಸಿದ್ದರಾಗಿರುತ್ತಾರೆ.
ಮಾನವೀಯ ಅನುಕಂಪವಿರುವ ಬಸವರಾಜು ಅವರು ಸದಾ ಬಡವರ ಪರ ಮಿಡಿಯುವ ಅಪರೂದ ವ್ಯಕ್ತಿ.
ಇದೀಗ ಕರ್ನಾಟಕ ರಕ್ಷಣಾ ವೇದಿಕೆಯ ಕಾನೂನು ಘಟಕದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜು ಅವರು ಅತ್ಯುತ್ತಮ ಸಂಘಟಕರೂ ಹೌದು. ಇವರು ಆತ್ಮೀಯರ ಪಾಲಿಗೆ ಪ್ರೊಫೆಸರ್ ಎಂದೇ ಹೆಸರುವಾಸಿಯಾದವರು.
ಅಪ್ಪಟ ಹೋರಾಟಗಾರರಾಗಿ, ಸಂಘಟಕರಾಗಿ, ಬಡವರ, ಹೋರಾಟಗಾರರ ರಕ್ಷಕರಾಗಿ, ತಮ್ಮ ಸಾಮಾಜಿಕ, ನಾಡಿನ ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಬಸವರಾಜು ಅವರು ಸಾಮಾಜಿಕ ಬದ್ಧತೆಯುಳ್ಳ ವ್ಯಕ್ತಿ.
ಇದೀಗ ಬಸವರಾಜು ಅವರು, ಕರ್ನಾಟಕ ರಕ್ಷಣಾ ವೇದಿಕೆ ಮುಖವಾಣಿಯಾದ ‘ಕರವೇ ನಲ್ನುಡಿ ಪತ್ರಿಕೆಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಸವರಾಜು ಅವರ ಸೇವೆ ಕನ್ನಡಪರ ಹೋರಾಟಗಾರರಿಗೆ, ರೈತರಿಗೆ ಹಾಗೂ ಹಿಂದುಳಿದವರಿಗೆ ನಿರಂತರವಾಗಿ ಸಿಗಲಿ.

No comments:

Post a Comment

ಹಿಂದಿನ ಬರೆಹಗಳು