Saturday, July 3, 2010

ನಾಡದ್ರೋಹಿಗಳೊಂದಿಗೆ ಚಕ್ಕಂದ ಬೇಕೆ?


ಮುಖ್ಯಮಂತ್ರಿಗಳೇ,ನೀವು ಅಧಿಕಾರ ವಹಿಸಿಕೊಂಡ ಮೊದಲ ವರ್ಷ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಿದಿರಿ. ಕುಮಾರಸ್ವಾಮಿ ಸರ್ಕಾರ ಆರಂಭಿಸಿದ್ದ ಸತ್ ಸಂಪ್ರದಾಯವನ್ನು ನೀವು ಅನುಸರಿಸಿದಿರಿ. ಅದಕ್ಕೆ ನಿಮ್ಮನ್ನು ಮೆಚ್ಚಬೇಕು.
ಆದರೆ ಎರಡನೇ ವರ್ಷ ಏನಾಗಿ ಹೋಯ್ತು? ಯಾಕಾಗಿ ನೀವು ಬೆಳಗಾವಿ ಅಧಿವೇಶನ ನಡೆಸಲಿಲ್ಲ? ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸಬೇಕು. ಅದಕ್ಕೆ ಸಿದ್ಧತೆ ನಡೆಯಬೇಕು. ಹೀಗಾಗಿ ಈ ಬಾರಿ ಅಧಿವೇಶನ ಇಲ್ಲ ಎಂದು ನೀವು ಹೇಳಿದ ನೆನಪು.
ಆದರೆ ಸತ್ಯ ಮುಚ್ಚಿಟ್ಟಿರಿ ನೀವು. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಲ್ಲಿತ್ತು. ಸೋತು ಹೈರಾಣಾಗಿರುವ ಅಲ್ಲಿನ ನಿಮ್ಮ ಬಿಜೆಪಿ ಘಟಕಕ್ಕೆ ಗೆಲುವಿನ ದಾಹ. ಒಂದು ವೇಳೆ ಬೆಳಗಾವಿಯಲ್ಲಿ ನೀವು ಅಧಿವೇಶನ ನಡೆಸಿದರೆ ಮಹಾರಾಷ್ಟ್ರದ ಬಿಜೆಪಿ ಘಟಕಕ್ಕೆ ಕಿರಿಕಿರಿ. ಬೀಳುವ ಮತಗಳೂ ಬೀಳಲಾರವು ಎಂಬ ಭೀತಿ. ಅದಕ್ಕಾಗಿ ಬೆಳಗಾವಿ ಅಧಿವೇಶನವನ್ನೇ ರದ್ದು ಮಾಡಿದಿರಿ. ನಿಜ ತಾನೇ?
ಇದನ್ನು ನಾವು ನಾಡದ್ರೋಹ ಅಂತಲೇ ಕರೆಯುತ್ತೇವೆ. ಬೇಸರ ಪಟ್ಟುಕೊಳ್ಳಬೇಡಿ. ನಿಮ್ಮ ಪಕ್ಷ ಮಹಾರಾಷ್ಟ್ರದಲ್ಲೋ, ಇನ್ನೆಲ್ಲೋ ಗೆದ್ದು ನಮಗೇನೂ ಆಗಬೇಕಿಲ್ಲ. ನಮಗೆ, ಕನ್ನಡಿಗರಿಗೆ ನಮ್ಮ ಬೆಳಗಾವಿ ಉಳಿಯಬೇಕು, ಅಲ್ಲಿ ಕಿತಾಪತಿ ಮಾಡಿಕೊಂಡೇ ಬಂದಿರುವ ಎಂಇಎಸ್ ಗೂಂಡಾಗಳ ಸೊಕ್ಕು ಅಡಗಬೇಕು. ಆದರೆ ನೀವು ನಿಮ್ಮ ಪಕ್ಷದ ತೀಟೆಗೆ ನಮ್ಮ ಸ್ವಾಭಿಮಾನವನ್ನು ಬಲಿ ಕೊಟ್ಟಿರಿ.
ಮೊದಲ ಬಾರಿ ಅಧಿವೇಶನ ನಡೆಸುವ ಸಂದರ್ಭದಲ್ಲಿ ಮರಾಠಿ ಮಹಾಮೇಳಾವ ಎಂಬ ಕನ್ನಡ ದ್ರೋಹದ ಎಂಇಎಸ್ ಕಾರ್ಯಕ್ರಮ ನಡೆಯಕೂಡದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು. ನೀವು ಆ ಕಾರ್ಯಕ್ರಮಕ್ಕೆ ನಿಷೇಧವನ್ನೂ ಹೇರಿದಿರಿ. ಆದರೆ ಇತ್ತೀಚಿಗೆ ಮತ್ತೆ ಮರಾಠಿ ಸೀಮಾ ಪರಿಷತ್ ಹೆಸರಿನಲ್ಲಿ ಮತ್ತೆ ಅವರು ಸಮಾವೇಶ ಮಾಡಿದರು. ನೀವು ಅನುಮತಿ ಕೊಟ್ಟಿರಿ. ಅದನ್ನು ತಡೆಯಲು ಹೋದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಮರಾಠಿ ಗೂಂಡಾಗಳು ದಾಳಿ ನಡೆಸಿದರು. ದೌರ್ಜನ್ಯವೆಸಗಿದ ಗೂಂಡಾಗಳನ್ನು ಹಾಗೇ ಬಿಟ್ಟು, ಪ್ರತಿಭಟಿಸಿದ ಕರವೇ ಕಾರ್ಯಕರ್ತರನ್ನು ನೀವು ಬಂಧಿಸಿದಿರಿ.
ಮಹಾರಾಷ್ಟ್ರದಲ್ಲಿ ಕನ್ನಡಿಗರನ್ನು ಹಿಡಿದು ಥಳಿಸಲಾಯಿತು, ಕರ್ನಾಟಕದ (ನಿಮ್ಮದೇ ಸರ್ಕಾರದ) ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಅದನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕರವೇ ಕಾರ್ಯಕರ್ತರ ಮೇಲೆ ಬೆಂಗಳೂರಿನಲ್ಲಿ ನಿಮ್ಮ ಪೊಲೀಸರು ನಿರ್ದಯವಾಗಿ ಹಲ್ಲೆ ನಡೆಸಿದರು. ಯಾಕೆ ಈ ತರಹದ ನಡವಳಿಕೆ? ಬೆಳಗಾವಿ ನಮ್ಮದು ಎಂದು ಮಹಾಜನ್ ವರದಿ ಹೇಳಿ ಎಷ್ಟೋ ವರ್ಷಗಳಾಗಿ ಹೋಗಿವೆ. ವಿಧಾನಮಂಡಲದಲ್ಲಿ ಎಷ್ಟೋ ಬಾರಿ ನಿರ್ಣಯ ಅಂಗೀಕರಿಸಿ ನೀವೇ ಆಳುವ ಪ್ರಭುಗಳು ಬೆಳಗಾವಿ ಕರ್ನಾಟಕದ್ದು ಎಂದು ಘೋಷಿಸಿದ್ದೀರಿ. ಹಾಗಿದ್ದ ಮೇಲೆ ಕಣ್ಣಾಮುಚ್ಚಾಲೆ ಆಟವೆಲ್ಲ ಏಕೆ?
ನಿಮ್ಮ ಪಕ್ಷದ ಸಂಸದರು, ಕೆಲ ಶಾಸಕರು ಎಂಇಎಸ್ ಜತೆ ಚಕ್ಕಂದ ಆಡುತ್ತಿರುವುದು ನಿಮಗೆ ಗೊತ್ತಲ್ಲವೆ? ಎಂಇಎಸ್‌ನ ಭಗವಾಧ್ವಜವನ್ನು ಹಿಡಿದು ನಿಮ್ಮದೇ ಪಕ್ಷದ ಮುಖಂಡರು ಆ ಗೂಂಡಾ ಸಂಘಟನೆಗಳ ಕಾರ್ಯಕರ್ತರ ಜತೆ ಮೆರವಣಿಗೆ ಮಾಡಿದ್ದು ನಿಮಗೆ ಗೊತ್ತಲ್ಲವೆ? ಎಂಇಎಸ್ ಜತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ನಿಮ್ಮ ಪಕ್ಷ ಒಳಒಪ್ಪಂದ, ಗುಪ್ತ ಮೈತ್ರಿ ಮಾಡಿಕೊಂಡಿರುವುದೂ ಸಹ ನಿಮಗೆ ಗೊತ್ತಲ್ಲವೆ?
ಹೌದು, ಎಲ್ಲವೂ ನಿಮಗೆ ಗೊತ್ತಿದೆ. ಹಾಗಾಗಿಯೇ ಯಾವುದನ್ನೂ ಮೈಮೇಲೆ ಹಾಕಿಕೊಳ್ಳಲು ನೀವು ಸಿದ್ಧರಿಲ್ಲ. ನಿಮಗೆ ಎಲ್‌ಟಿಟಿಇನೂ ಬೇಕು, ಎಂಇಎಸ್ಸೂ ಬೇಕು. ನಿಮ್ಮ ಪಾಲಿಗೆ ಅವು ಕೇವಲ ಭಯೋತ್ಪಾದಕ, ಗೂಂಡಾ ಸಂಘಟನೆಗಳಲ್ಲ; ಬದಲಿಗೆ ತಮಿಳು, ಮರಾಠಿ ಮತಗಳನ್ನು ಕೊಡುವ ಅಕ್ಷಯ ಪಾತ್ರೆಗಳು.
ಹಾಗಾಗಿ ನೀವು ಹಾವನ್ನೂ ಸಾಯಿಸೋಲ್ಲ, ಕೋಲನ್ನೂ ಮುರಿಯಗೊಡುವುದಿಲ್ಲ.

No comments:

Post a Comment

ಹಿಂದಿನ ಬರೆಹಗಳು