Saturday, July 3, 2010

ಚರ್ಚ್‌ದಾಳಿ ಇತ್ಯಾದಿ...


ಯಡಿಯೂರಪ್ಪನವರೆ,


ನೀವು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಏನು ಹೇಳುತ್ತೀರಿ ಎಂಬುದನ್ನು ಗಮನಿಸಿದ್ದೀರಾ?
‘...ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ ಅಥವಾ ದ್ವೇಷವಿಲ್ಲದೆ ಎಲ್ಲ ಬಗೆಯ ಜನರಿಗೂ ಸಂವಿಧಾನ ಮತ್ತು ವಿಧಿಗೆ ಅನುಸಾರವಾಗಿ ನ್ಯಾಯವನ್ನು ಮಾಡುತ್ತೇನೆಂದು ಪ್ರಮಾಣ ಮಾಡುತ್ತೇನೆ.
ನಿಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲದಿನಗಳಲ್ಲೇ ಆಗಿದ್ದೇನು? ಚರ್ಚ್‌ಗಳ ಮೇಲೆ ಸರಣಿ ದಾಳಿಗಳು ನಡೆದವು. ಕ್ರೈಸ್ತರ ಪ್ರಾರ್ಥನಾ ಮಂದಿರಗಳಿಗೆ ನುಗ್ಗಿ ಮೂರ್ತಿಗಳನ್ನು ಕೆಡವಲಾಯಿತು. ಪ್ರತಿಭಟಿಸಿದ ಜನರ ಮೇಲೆ ಪೊಲೀಸರು ದಾಳಿ ನಡೆಸಿದರು.
ನಿಮ್ಮದೇ ಸಂಘಪರಿವಾರದರಾದ ಆಗಿನ ಭಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್ ‘ನಾವೇ ಇದನ್ನು ಮಾಡ್ತಾ ಇರೋದು ಅಂತ ಹೇಳಿದರೂ ನಿಮ್ಮ ಗೃಹಸಚಿವರು ತರಾತುರಿಯಲ್ಲಿ ಹೇಳಿಕೆ ನೀಡಿ, ಸಂಘಪರಿವಾರದ ಕೈವಾಡವಿಲ್ಲ ಎಂದು ಕ್ಲೀನ್ ಚಿಟ್ ನೀಡಿದರು. ನಾವು ಇದನ್ನು ಮಾಡ್ತಾ ಇರೋದು ಪ್ರೊಟೆಸ್ಟೆಂಟರು, ಇವಾಂಜಲಿಸ್ಟರ ವಿರುದ್ಧ, ಕ್ಯಾಥೋಲಿಕರು ಸುಮ್ಮನಿರಬೇಕು. ಅವರು ಮೈ ಮೇಲೆ ಎಳೆದುಕೊಂಡರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಮಹೇಂದ್ರ ಕುಮಾರ್ ಬಹಿರಂಗವಾಗಿ ಧಮಕಿ ಹಾಕಿದರೂ ನೀವು ಸುಮ್ಮನಿದ್ದಿರಿ.
ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಜನರನ್ನು ಕಾಟಾಚಾರಕ್ಕೆ ಬಂಧಿಸಿ, ಬಿಡುಗಡೆ ಮಾಡಲಾಯಿತು. ಮತ್ತೆ ಮತ್ತೆ ದಾಳಿಗಳು ನಡೆದವು. ‘ಪಕ್ಷಪಾತವಿಲ್ಲದೆ ಎಲ್ಲ ಜನರಿಗೆ ನ್ಯಾಯ ಮಾಡುತ್ತೇನೆ ಎಂದು ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ಮಾಡಿದ ನಿಮ್ಮ ಪ್ರಮಾಣ ಸುಳ್ಳಾಯಿತು.
ಇದಾದ ನಂತರ ಮತಾಂತರ ನಿಷೇಧ, ಗೋಹತ್ಯೆ ನಿಷೇಧದಂಥ ವಿವಾದಾಸ್ಪದ ವಿಷಯಗಳಿಗೆ ಕೈ ಹಾಕಿದಿರಿ. ಪಠ್ಯ ಪುಸ್ತಕಗಳಲ್ಲಿ ನಿಮ್ಮ ಸಿದ್ಧಾಂತಗಳನ್ನು ಹೇರುವ ಪ್ರಯತ್ನಗಳನ್ನು ಯಶಸ್ವಿಯಾಗಿ ನಡೆಸಿದಿರಿ. ಕನ್ನಡದ ಮಹಾನ್ ಸಾಹಿತಿಗಳ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡಬೇಕಾದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮೂಲಕ ನಿಮ್ಮ (ಜನಸಂಘ) ಪಕ್ಷದ ಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಅವರ ಕೃತಿಗಳನ್ನು ೪೦ ಲಕ್ಷ ರೂ.ಗಳ ಖರ್ಚಿನಲ್ಲಿ ಕನ್ನಡಕ್ಕೆ ತರುವಂಥ ನಿರುಪಯೋಗಿ ಕೆಲಸಗಳನ್ನು ಮಾಡಿದಿರಿ. ಮಹಾನಗರ ಪಾಲಿಕೆ ಶಾಲೆಗಳನ್ನು ಉದ್ಧಾರ ಮಾಡುವ ಸೋಗಿನಲ್ಲಿ ಅವುಗಳ ಬೆಲೆಬಾಳುವ ಜಾಗವನ್ನು ಭಾರತೀಯ ವಿದ್ಯಾಭವನಕ್ಕೆ ‘ದಾನ ಮಾಡುವ ಪ್ರಯತ್ನಕ್ಕೂ ಕೈ ಹಾಕಿದಿರಿ. ಹಂಪಿ ವಿಶ್ವವಿದ್ಯಾಲಯದ ಭೂಮಿಯನ್ನು ನಿಮ್ಮ ಪಕ್ಷದ ಪ್ರಚಂಡರ ಟ್ರಸ್ಟ್ ಒಂದಕ್ಕೆ ಉದ್ರಿಯಾಗಿ ಕೊಡಲು ಯತ್ನಿಸಿ ಸಾಹಿತಿ-ಕಲಾವಿದರಿಂದ ಛೀಮಾರಿ ಹಾಕಿಸಿಕೊಂಡಿರಿ. ಎಲ್ಲ ವಿಭಾಗಗಳಲ್ಲೂ ನಿಮ್ಮ ಜನವಿರೋಧಿ ಹಿಡನ್ ಅಜೆಂಡಾಗಳನ್ನು ಹೇರಲು ಯತ್ನಿಸಿದಿರಿ.
ಇದೆಲ್ಲವೂ ನಿಮ್ಮ ಎರಡು ವರ್ಷದ ಸಾಧನೆ ಅಂತೀರಾ ಯಡಿಯೂರಪ್ಪನವರೇ? ಇದನ್ನು ಯಶಸ್ಸಿನ ಎರಡು ವರ್ಷ ಎಂದು ಕರೆಯುತ್ತೀರಾ?

No comments:

Post a Comment

ಹಿಂದಿನ ಬರೆಹಗಳು