Saturday, July 3, 2010

ಹೊಗೇನಕಲ್ ಪರರ ಪಾಲಾದರೆ ನಿಮಗೇನು ಅಲ್ವೆ?


ಯಡಿಯೂರಪ್ಪಾಜಿ,ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳುವುದಕ್ಕೂ ಮುನ್ನ ನೀವು ಹೊಗೇನಕಲ್‌ನಲ್ಲಿ ನಡೆಸಿದ ಬೋಟಿಂಗ್ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಯಾವುದೇ ಕಾರಣಕ್ಕೂ ಈ ನೆಲದ ಒಂದಿಂಚು ಜಮೀನು ಬೇರೆಯವರ ಪಾಲಾಗಲು ಬಿಡುವುದಿಲ್ಲ ಎಂದು ಎಷ್ಟು ವೀರಾವೇಶದಲ್ಲಿ ಗುಡುಗಿದ್ದಿರಿ ನೀವು. ಈಗೇನಾಯ್ತು ಯಡಿಯೂರಪ್ಪನವರೆ?
ಅಲ್ಲಿ, ಹೊಗೇನಕಲ್‌ನಲ್ಲಿ ೨.೧ ಟಿಎಂಸಿ ಕುಡಿಯುವ ನೀರು ಯೋಜನೆಯನ್ನು ತಮಿಳುನಾಡಿನವರು ಆರಂಭಿಸಿ, ಈಗಾಗಲೇ ಶೇ.೩೦ ರಷ್ಟು ಕೆಲಸ ಮುಗಿಸಿದ್ದಾರೆ. ನೀವು, ನಿಮ್ಮ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿರುವ ಮರ್ಮವಾದರೂ ಏನು? ಕಡೆ ಪಕ್ಷ ಉತ್ತರವನ್ನಾದರೂ ಕೊಡಿ. ಸತ್ಯವನ್ನಾದರೂ ಹೇಳಿ.
ನಮಗಿರುವ ಗುಮಾನಿಯೇನು ಗೊತ್ತೇ ಯಡಿಯೂರಪ್ಪನವರೆ? ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೂ ಮುನ್ನ ಚೆನ್ನೈಗೆ ಹೋಗಿ ನೀವು ಕರುಣಾನಿಧಿಯವರಿಗೆ ವೀಳ್ಯ ಕೊಟ್ಟು ಬಂದರಲ್ಲ. ಆಗಲೇ ಹೊಗೇನಕಲ್‌ನಲ್ಲಿ ಕಾಮಗಾರಿ ಮಾಡಿಕೊಂಡರೆ ನಾವು ಸುಮ್ಮನಿರುತ್ತೇವೆ ಎಂದು ನೀವು ಹೇಳಿಬಂದಿರುತ್ತೀರೇನೋ ಅಂತ ಅನ್ನಿಸುತ್ತಿದೆ. ಈ ತರಹದ ಒಪ್ಪಂದವೇನಾದರೂ ಆಗಿದ್ದರೆ ಅದನ್ನಾದರೂ ಹೇಳಿ.
ನಿಮ್ಮ ಸರ್ಕಾರದ ನಂ.೨ ಸ್ಥಾನದಲ್ಲಿರುವ ಗೃಹ ಸಚಿವ ವಿ.ಎಸ್.ಆಚಾರ್ಯ ಅವರಿಗೆ ಪೆದ್ದುಪೆದ್ದಾಗಿ ಮಾತಾಡಿ ಅಭ್ಯಾಸ. ಅವರು ಅಲ್ಲಿ ಕುಡಿಯುವ ನೀರು ಯೋಜನೆ ಮಾಡಿಕೊಳ್ಳಲಿ, ನಾವು ಇಲ್ಲಿ ವಿದ್ಯುತ್ ಯೋಜನೆ ಮಾಡುತ್ತೇವೆ ಎಂದು ಹೇಳಿಕೆ ಕೊಟ್ಟರು. ಅಸಲಿಗೆ ಹೊಗೇನಕಲ್‌ನ ಪ್ರದೇಶದಲ್ಲಿ ಎಷ್ಟು ಭಾಗ ಕರ್ನಾಟಕಕ್ಕೆ, ಎಷ್ಟು ಭಾಗ ತಮಿಳುನಾಡಿಗೆ ಸೇರುತ್ತದೆ ಎಂಬ ಕಾಮನ್‌ಸೆನ್ಸ್ ಆದರೂ ನಿಮ್ಮ ಸಚಿವರಿಗೆ ಇರಬೇಕು ಅಲ್ಲವೇ. ಗಡಿ ಗುರುತಿಸುವಿಕೆಗಾಗಿಯೇ ೨೦೦೫ರಲ್ಲಿ ಜಂಟಿ ಸರ್ವೆ ಆರಂಭವಾಗಿತ್ತು ಎಂಬುದು ಸರ್ಕಾರಿ ಕಡತಗಳಲ್ಲೇ ಇದೆ ಎಂಬುದನ್ನು ನಿಮ್ಮ ಗೃಹ ಸಚಿವರಿಗೆ ಹೇಳುವವರ‍್ಯಾರು. ಈ ಸರ್ವೆ ಕಾರ್ಯ ತಮಿಳುನಾಡು ಸರ್ಕಾರದ ಅಸಹಕಾರದಿಂದಲೇ ನಿಂತು ಹೋಗಿದೆ ಎಂಬುದು ಉಭಯ ಸರ್ಕಾರಗಳ ನಡುವೆ ನಡೆದ ಪತ್ರವ್ಯವಹಾರದಲ್ಲೇ ಗೊತ್ತಾಗುತ್ತದೆ ಎಂಬುದನ್ನು ಸಚಿವರಿಗೆ ಅರ್ಥ ಮಾಡಿಸುವುದು ಹೇಗೆ?
ಜಂಟಿ ಸರ್ವೆಯೇ ನಡೆಯದೆ, ಗಡಿ ಗುರುತಿಸುವಿಕೆಯೇ ಆಗದೆ, ಯಾರ ಭಾಗ ಎಷ್ಟು ಎಂದು ಸ್ಪಷ್ಟವಾಗಿ ಗೊತ್ತಿಲ್ಲದೆ ಅವರು ಅಲ್ಲಿ ಕುಡಿಯುವ ನೀರು ಯೋಜನೆ ಮಾಡಿಕೊಳ್ಳಲಿ ಎಂದು ಹೇಳಲು ಕರ್ನಾಟಕದ ಭೂಮಿಯೇನು ಪುಗಸಟ್ಟೆ ಪುನುಗೇ; ಸಿಕ್ಕಿದವರಿಗೆ ಹಂಚಿಕೊಂಡು ಬರಲು? ನಾಳೆ ಬೆಂಗಳೂರಿನಲ್ಲಿ ತಮಿಳುನಾಡಿನವರು ಬಂದು ಏನೋ ಮಾಡ್ತೀವಿ, ನಮಗೇ ಬಿಟ್ಟುಕೊಡಿ ಅಂದರೆ, ಆಯ್ತು ನೀವಿಲ್ಲಿ ಏನಾದ್ರೂ ಮಾಡಿಕೊಳ್ಳಿ ನಾವು ತುಮಕೂರಿಗೋ, ಹಾಸನಕ್ಕೋ ಹೋಗ್ತಿವಿ ಅನ್ನುತ್ತಾರೆಯೇ ಗೃಹಸಚಿವರು?
ಹೊಗೇನಕಲ್ ವಿಷಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ಮಾಡುತ್ತಿದ್ದರೂ ನಿಮ್ಮ ಸರ್ಕಾರಕ್ಕೆ ಜಾಣ ಕಿವುಡು, ಕುರುಡು. ಹೋರಾಟ ಮಾಡೋದ್ರಿಂದ ಏನೂ ಆಗೋಲ್ಲರೀ, ಮಾತುಕತೆ ಮಾಡಬೇಕು ಎಂಬುದು ನಿಮ್ಮ ಎಂದಿನ ಉಡಾಫೆಯ ಉತ್ತರ. ಹೋಗಲಿ ಅದನ್ನಾದರೂ ಮಾಡಿದಿರಾ? ತಮಿಳುನಾಡು ಮುಖ್ಯಮಂತ್ರಿ, ನಿಮ್ಮ ಹಿರಿಯಣ್ಣ ಕರುಣಾನಿಧಿ ಜತೆ ಮಾತನಾಡಿ ಜಂಟಿ ಸಮೀಕ್ಷೆ ಮಾಡೋಣ ಎಂದು ಹೇಳುವ ಧೈರ್ಯ ನಿಮಗಿಲ್ಲವೆ?
ಕರ್ನಾಟಕದ ಗಡಿಯನ್ನೇ ತಮಿಳುನಾಡು ಆವರಿಸಿಕೊಳ್ಳುತ್ತಿದ್ದರೂ, ನಾಡರಕ್ಷಣೆಯ ಹೊಣೆ ಹೊತ್ತ ನೀವು ಹೀಗೆ ಮೌನವ್ರತ ತಾಳುವುದೂ ಒಂದು ಸಾಧನೆಯೇ? ಇದೂ ಯಶಸ್ಸಿನ ಒಂದು ಭಾಗವೇ?

No comments:

Post a Comment

ಹಿಂದಿನ ಬರೆಹಗಳು