Friday, June 4, 2010

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳ ವಾಪಸಾತಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ



ದಿನೇಶ್ ಕುಮಾರ್ ಎಸ್.ಸಿ.

ಅಶೋಕ್ ಮೇಲಿಂದ ಮೇಲೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತ ಹೆಚ್ಚು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಅಶೋಕ್ ಅವರನ್ನು ನಲ್ನುಡಿಗೆಂದು ಸಂದರ್ಶಿಸಿದಾಗ ಅವರು ತಮಗನ್ನಿಸಿದ್ದನ್ನು ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ.

ಸದಾ ಉತ್ಸಾಹ ಪುಟಿಯುವ ಮುಗುಳ್ನಗೆಯೊಂದಿಗೆ ಕ್ರಿಯಾಶೀಲರಾಗಿರುವ ಸಾರಿಗೆ ಸಚಿವ ಆರ್.ಅಶೋಕ್ ಬಿಜೆಪಿ ಸರ್ಕಾರ ಮಂತ್ರಿಗಳ ಪೈಕಿ ಹೆಚ್ಚು ಕೆಲಸ ಮಾಡುವ ಸಚಿವ ಎಂದು ಹೆಸರು ಪಡೆದವರು. ಇದೀಗ ಅವರ ಹೆಗಲಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೂ ಸೇರಿಕೊಂಡಿದೆ. ಬೆಂಗಳೂರು ದಕ್ಷಿಣ ಉಸ್ತುವಾರಿಯೊಂದಿಗೆ, ಮಂಡ್ಯ ಜಿಲ್ಲಾ ಉಸ್ತುವಾರಿಯೂ ಅವರದೇ. ಇದೆಲ್ಲಕ್ಕಿಂತ ಮಿಗಿಲಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಳಿ ತಪ್ಪದಂತೆ ಎಚ್ಚರ ವಹಿಸುವ ಜವಾಬ್ದಾರಿಯೂ ಅವರ ಮೇಲಿದೆ.
ಹಾಗೆ ನೋಡಿದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾರಣರಾದವರು ಆರ್.ಅಶೋಕ್ ಮತ್ತು ವಿ.ಸೋಮಣ್ಣ. ಇಬ್ಬರೂ ಸಾಕಷ್ಟು ಪ್ರತಿರೋಧಗಳನ್ನು ಎದುರಿಸಿಯೇ ರಾಜಕೀಯವಾಗಿ ಎತ್ತರಕ್ಕೇರಿದವರು. ತಮ್ಮ ವಿರುದ್ಧದ ಪಿತೂರಿಗಳನ್ನೆಲ್ಲ ಮೆಟ್ಟಿ ನಿಂತವರು. ವಿ.ಸೋಮಣ್ಣ ಇನ್ನೇನು ಮತ್ತೆ ಸಚಿವರಾಗುತ್ತಿದ್ದಾರೆ. ಅಶೋಕ್ ಮೇಲಿಂದ ಮೇಲೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತ ಹೆಚ್ಚು ಹೆಚ್ಚು ಕ್ರಿಯಾಶೀಲರಾಗುತ್ತಿದ್ದಾರೆ. ಅಶೋಕ್ ಅವರನ್ನು ನಲ್ನುಡಿಗೆಂದು ಸಂದರ್ಶಿಸಿದಾಗ ಅವರು ತಮಗನ್ನಿಸಿದ್ದನ್ನು ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ.
ನಲ್ನುಡಿ: ಇಷ್ಟೊಂದು ಜವಾಬ್ದಾರಿಗಳು, ಹೊರೆಯೆನ್ನಿಸುವುದಿಲ್ಲವೆ?
ಅಶೋಕ್: ಹಾಗೇನೂ ಇಲ್ಲ. ಕೆಲಸ ಹೆಚ್ಚು ಮಾಡುವವರಿಗೆ ಹೆಚ್ಚು ಕೆಲಸ ಕೊಡೋದು ಸಹಜ. ನನ್ನಲ್ಲಿ ಆ ಶಕ್ತಿ ಇದೆ ಎಂಬ ಕಾರಣಕ್ಕೆ ಜವಾಬ್ದಾರಿ ಹೊರೆಸಿದ್ದಾರೆ. ಅದನ್ನು ನಿಭಾಯಿಸುವ ಶಕ್ತಿ ಸಾಮರ್ಥ್ಯವೂ ನನ್ನಲ್ಲಿದೆ. ಜವಾಬ್ದಾರಿಯಿಂದ ನುಣುಚಿಕೊಂಡು ಓಡಿಹೋಗುವ ಪ್ರಶ್ನೆಯೇ ಇಲ್ಲ.
ನಲ್ನುಡಿ: ಸಾರಿಗೆ ಇಲಾಖೆಗೆ ಬಂದಾಗಿನಿಂದ ನಿಮ್ಮ ಪ್ರಮುಖ ಸಾಧನೆಗಳೇನು?
ಅಶೋಕ್: ನರ್ಮ್ ಯೋಜನೆಯಡಿ ನೂರಾರು ಬಸ್‌ಗಳನ್ನು ಆರಂಭಿಸಿದ್ದು, ಸುಮಾರು ೨೦,೦೦೦ಕ್ಕೂ ಹೆಚ್ಚು ಉದ್ಯೋಗಗಳನ್ನು ನಿಡಿದ್ದು. ಅದರಲ್ಲೂ ವಿಶೇಷವಾಗಿ ಶೇ.೯೯ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಿದ್ದು. ಹೈಟೆಕ್ ಬಸ್‌ಗಳ ಓಡಾಟವನ್ನು ಆರಂಭಿಸಿದ್ದು, ಸಾರಿಗೆ ಇಲಾಖೆಯನ್ನು ಜನಸ್ನೇಹಿಯಾಗಿ ಮಾರ್ಪಡಿಸಿದ್ದು, ಪ್ರತಿ ತಿಂಗಳು ಬಸ್ ದಿನಾಚರಣೆ ಆರಂಭಿಸಿ ಎಲ್ಲ ವರ್ಗದ ಜನರೂ ಬಸ್‌ನಲ್ಲಿ ಓಡಾಡುವಂತೆ ಮಾಡಿದ್ದು...
ನಲ್ನುಡಿ: ಬೆಂಗಳೂರು ಕನ್ನಡೀಕರಣವಾಗಬೇಕು. ಜಾಹೀರಾತು ಫಲಕಗಳು, ನಾಮಫಲಕಗಳು ಕನ್ನಡದಲ್ಲೇ ಇರಬೇಕು ಎಂಬುದು ರಾಜ್ಯ ಸರ್ಕಾರವೇ ರೂಪಿಸಿದ ಕಾನೂನು. ನಾಮಫಲಕಗಳಲ್ಲಿ ಕನ್ನಡವೇ ಪ್ರಧಾನವಾಗಿರಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ ಅನುಷ್ಠಾನವಾಗುತ್ತಿಲ್ಲವೇಕೆ? ವಿಶೇಷವಾಗಿ ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕಗಳು, ಜಾಹೀರಾತು ಫಲಕಗಳು ರಾರಾಜಿಸುತ್ತಿವೆಯಲ್ಲಾ?
ಅಶೋಕ್: ಈಗ ಪರಿಸ್ಥಿತಿ ಸುಧಾರಿಸಿದೆ. ಈಗ ತಕ್ಕಮಟ್ಟಿಗೆ ಕನ್ನಡ ನಾಮಫಲಕಗಳು ಕಾಣಿಸುತ್ತವೆ. ಮುಂದೆ ಸಂಪೂರ್ಣ ಕನ್ನಡಮಯ ಮಾಡುವತ್ತ ನಾವು ಗಮನ ಹರಿಸುತ್ತೇವೆ.
ನಲ್ನುಡಿ: ಸಾರಿಗೆ ಇಲಾಖೆಯಲ್ಲಿ ಕೆಲವು ವಲಯಗಳ ಸಂಸ್ಥೆಗಳು ಇನ್ನೂ ನಷ್ಟದಲ್ಲಿವೆ? ಏನು ಕಾರಣ?
ಅಶೋಕ್: ನಷ್ಟದಲ್ಲಿರುವುದು ನಿಜ. ಆದರೆ ಅವು ನಾನು ಬರುವುದಕ್ಕಿಂತ ಮೊದಲೇ ನಷ್ಟದಲ್ಲಿದ್ದವು. ಪರಿಸ್ಥಿತಿ ಸುಧಾರಿಸಲು ಪ್ರಯತ್ನ ಪಡುತ್ತಿದ್ದೇವೆ.
ನಲ್ನುಡಿ: ಬೃಹತ್ ಬೆಂಗಳೂರು ಪಾಲಿಕೆಯಲ್ಲಿ ಈಗ ನಿಮ್ಮದೇ ಅಧಿಕಾರ. ನಿಮ್ಮ ಪ್ರಮುಖ ಆದ್ಯತೆಗಳೇನು?
ಅಶೋಕ್: ಕೆರೆಗಳನ್ನು ಅಭಿವೃದ್ಧಿಪಡಿಸೋದು. ೧೬೫ ಕೆರೆಗಳನ್ನು ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸುತ್ತಾ ಇದ್ದೇವೆ.
ನಲ್ನುಡಿ: ಕೆರೆಗಳನ್ನು ಒತ್ತುವರಿ ಮಾಡಿಕೊಂಡವರೆಲ್ಲ ಪ್ರಭಾವಿಗಳು, ಹಣವುಳ್ಳವರು,
ರಾಜಕೀಯ ಶಕ್ತಿಯುಳ್ಳವರು. ಕಷ್ಟ ಅಲ್ವಾ?
ಅಶೋಕ್: ಹಾಗೇನಿಲ್ಲ, ಈಗಾಗಲೇ ೪೦ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದ್ದೇವೆ. ಅಭಿವೃದ್ಧಿಗಾಗಿ ಟೆಂಡರ್ ಕರೆದಿದ್ದೇವೆ. ಗಟ್ಟಿ ನಿರ್ಧಾರ ಮಾಡಿದ್ದೇವೆ. ಹಾಗಾಗಿ ಕೆರೆಗಳ ಅಭಿವೃದ್ಧಿ ಮಾಡೇ ಮಾಡ್ತೀವಿ.
ನಲ್ನುಡಿ: ಕೆಂಪೇಗೌಡರ ಜಯಂತಿ ಆಚರಣೆ ಮಾಡ್ತೀವಿ ಅಂತ ಹೇಳಿಕೆ ನೀಡಿದ್ದಿರಿ..
ಅಶೋಕ್: ಹೌದು, ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ಬೆಂಗಳೂರು ಮತ್ತು ಹಳೆ ಮೈಸೂರು ಭಾಗದ ಎಲ್ಲ ನಗರಗಳಲ್ಲೂ ಆಚರಿಸುತ್ತೇವೆ. ಈ ಬಾರಿ ಜುಲೈನಲ್ಲಿ ಉತ್ಸವ ನಡೆಯುತ್ತದೆ. ಮುಂದೆ ಪ್ರತಿ ವರ್ಷವೂ ಕರಗದ ಸಂದರ್ಭದಲ್ಲೇ ಉತ್ಸವ ನಡೆಸುತ್ತೇವೆ. ಈ ಬಾರಿ ಐದು ಮಂದಿ ಸಾಧಕರಿಗೆ ತಲಾ ಐದು ಲಕ್ಷ ರೂ. ನಗದು ಪುರಸ್ಕಾರವಿರುವ ಪ್ರಶಸ್ತಿಗಳನ್ನು ನೀಡುತ್ತೇವೆ. ಮೂರು ದಿನಗಳ ಕಾಲ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಜೃಂಬಣೆಯ ಕಾರ್ಯಕ್ರಮಗಳಿರುತ್ತವೆ. ಈ ಸಂದರ್ಭದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ, ಸಾಧನೆಗಳನ್ನು ಬಿಂಬಿಸುವ ಹೊತ್ತಿಗೆಗಳ ಬಿಡುಗಡೆಯೂ ನಡೆಯುತ್ತದೆ.
ನಲ್ನುಡಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕನ್ನಡೇತರ ಅಭ್ಯರ್ಥಿಗಳನ್ನು ನಿಲ್ಲಿಸುವ ಕೆಟ್ಟ ಪರಂಪರೆ ಇತ್ತೀಚಿಗೆ ಆರಂಭಗೊಂಡಿದೆ. ನಿಮ್ಮ ಪಕ್ಷವೂ ಸೇರಿದಂತೆ ಎಲ್ಲ ಪಕ್ಷಗಳು ಎಲ್ಲಿಂದಲೋ ಬಂದವರಿಗೆ ಮಣೆ ಹಾಸುತ್ತಿವೆ.
ಅಶೋಕ್: ಈ ಬಾರಿ ಪರವಾಗಿಲ್ಲ. ಗೆದ್ದಿರುವವರನ್ನು ಗಮನಿಸಿ. ಈ ಬಾರಿ ಅತಿ ಹೆಚ್ಚು ಕನ್ನಡಿಗರೇ ಗೆದ್ದುಬಂದಿದ್ದಾರೆ. ನಾವು ಸ್ಥಳೀಯರಿಗೇ ಹೆಚ್ಚು ಟಿಕೆಟ್‌ಗಳನ್ನು ನೀಡಿದ್ದೇವೆ.
ನಲ್ನುಡಿ: ಚುನಾವಣೆಗೂ ಮುನ್ನ ಯಡಿಯೂರಪ್ಪನವರು ಹೊಗೇನಕಲ್‌ಗೆ ತೆರಳಿ, ಕರ್ನಾಟಕದ ಭೂಭಾಗವನ್ನು ಯಾರಿಗೂ ಕಬಳಿಸಲು ಬಿಡುವುದಿಲ್ಲ ಎಂದಿದ್ದರು. ಈಗ ಅಲ್ಲಿ ತಮಿಳುನಾಡಿನವರು ಯೋಜನೆ ಆರಂಭಿಸಿದ್ದಾರೆ. ನಿಮ್ಮ ಸರ್ಕಾರದ ನಿಲುವೇನು ಹೇಳ್ತೀರಾ?
ಅಶೋಕ್: ಚರ್ಚೆ ಶುರುವಾಗಿದೆ. ಈಗಾಗಲೇ ನಮ್ಮ ಜಲಸಂಪನ್ಮೂಲ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸರ್ಕಾರದ ನಡೆ ಏನಾಗಿರಬೇಕು ಎಂಬುದರ ಕುರಿತು ವಿಚಾರ ವಿನಿಮಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ನೆಲದ ಇಂಚು ಭೂಮಿಯನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸರ್ಕಾರ ತಮಿಳುನಾಡಿನ ಯೋಜನೆಗೆ ವಿರೋಧಿಸುತ್ತಲೇ ಇದೆ. ಹೊಗೇನಕಲ್ ಅನ್ನು ನಮ್ಮದಾಗೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ.
ನಲ್ನುಡಿ: ನಿಮ್ಮ ಸರ್ಕಾರಕ್ಕೆ ಕನ್ನಡ ಹೋರಾಟಗಾರರ ಮೇಲೇಕೆ ಮುನಿಸು? ರೈತ ಸಂಘಟನೆಗಳ ಮೇಲಿದ್ದ ಹೋರಾಟದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿರಿ, ಭಜರಂಗದಳ-ಶ್ರೀರಾಮಸೇನೆಗಳ ಮೇಲಿದ್ದ ಗಲಾಟೆ-ದೊಂಬಿ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರಿ. ರಾಜಕೀಯ ನಾಯಕರ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿರಿ. ಕನ್ನಡ ಹೋರಾಟಗಾರರ ಮೇಲಿನ ಚಳವಳಿಯ ಪ್ರಕರಣಗಳನ್ನು ಯಾಕೆ ಹಿಂದಕ್ಕೆ ಪಡೆಯುತ್ತಿಲ್ಲ?
ಅಶೋಕ್: ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಸಹಿಯನ್ನೂ ಕೂಡ ಅವರು ಕನ್ನಡದಲೇ ಮಾಡುತ್ತಾರೆ. ಇಂಗ್ಲಿಷ್ ವ್ಯಾಮೋಹ ಅವರಿಗಿಲ್ಲ. ಅವರಿಗೆ ಬೇರೆ ಭಾಷೆಗಳನ್ನು ಮಾತನಾಡಲು ಬರೋದೂ ಇಲ್ಲ. ಬೇರೆ ಮುಖ್ಯಮಂತ್ರಿಗಳು ಸಂದರ್ಭ ಬಂದಾಗ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಆದರೆ ನಮ್ಮ ಮುಖ್ಯಮಂತ್ರಿಗಳು ಕನ್ನಡದಲ್ಲೇ ಮಾತನಾಡುತ್ತಾರೆ. ಹೀಗಿರುವಾಗ ಅವರು ಕನ್ನಡ ವಿರೋಧಿ ಹೇಗಾಗುತ್ತಾರೆ?
ನಲ್ನುಡಿ: ‘ಕನ್ನಡ ವಿರೋಧಿ ಅಂತಲ್ಲ ಹೇಳಿದ್ದು, ಕನ್ನಡ ಸಂಘಟನೆಗಳ ಮೇಲೆ ಯಾಕೆ ಮುನಿಸು ಅಂತ?
ಅಶೋಕ್: (ಸ್ವಲ್ಪ ಹೊತ್ತು ಸುಮ್ಮನಿದ್ದು) ಕನ್ನಡ ಸಂಘಟನೆಗಳ ಮೇಲಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಿರಿ ಅಂತ ಮುಖ್ಯಮಂತ್ರಿಗಳನ್ನು ಮನವಿ ಮಾಡುತ್ತೇನೆ.
ನಲ್ನುಡಿ: ಕಡೆಯದಾಗಿ ಒಂದು ಪ್ರಶ್ನೆ, ನಿಮಗೆ ಮುಖ್ಯಮಂತ್ರಿಯಾಗುವ ಆಸೆಯಿದೆಯೇ?
ಅಶೋಕ್: (ನಕ್ಕು) ಈ ಪ್ರಶ್ನೆಯನ್ನು ಕೇಳೇ ಇಲ್ಲ ಅಂದುಕೊಂಡುಬಿಡಿ!!! (ಮತ್ತೆ ನಗು)
(ಅಶೋಕ್ ಅವರ ನಗು ನೂರಾರು ಅರ್ಥಗಳನ್ನು ಧ್ವನಿಸುತ್ತಿತ್ತು.)

No comments:

Post a Comment

ಹಿಂದಿನ ಬರೆಹಗಳು