Tuesday, October 5, 2010

ಕರ್ನಾಟಕದಲ್ಲಿ ಗಾಂಧೀಜಿಯವರ ಸ್ವಾರಸ್ಯ-ಪ್ರಸಂಗ






ಸಂಗನಾಳಮಠ ಯು.ಎನ್.

ಕರ್ನಾಟಕಕ್ಕೆ ಗಾಂಧೀಜಿಯವರು ಹನ್ನೆರಡು ಸಲ ಭೇಟಿಕೊಟ್ಟರು. ಆ ದಿನಗಳಲ್ಲಿ ಗಾಂಧೀಜಿಯವರ ರಸ ಪ್ರಸಂಗಗಳನ್ನು ಮೆಲುಕು ಹಾಕಿ ಗಾಂಧೀಜಿಯವರನ್ನು ಸ್ಮರಿಸೋಣ.
ಗಾಂಧಿಯವರ ಪ್ರಥಮ ಭೇಟಿ ೧೯೧೫ರ ಮೇ ೧೮ ಬೆಂಗಳೂರಿಗೆ ಬಂದರು. ಕಾಠೆವಾಡಿ ಅಂಗಿ, ಧೋತರ ಪೇಟಾ ತೊಟ್ಟಿದ್ದ ಗಾಂಧಿಯವರೊಂದಿಗೆ, ಕೆಂಪು ಅಂಚಿನ ಬಿಳಿ ಸೀರೆ ಉಟ್ಟ ಪತ್ನಿ ಕಸ್ತೂರಬಾ ಇದ್ದರು. ಒಂದು ಕೈಯಲ್ಲಿ ಒಂದು ನೀರಿನ ಹೂಜಿ ಹಿಡಿದುಕೊಂಡು ರೈಲಿನಿಂದ ಇಳಿದರು.
ವಿದ್ಯಾರ್ಥಿಗಳು ಸಾರೋಟನ್ನು ನಾವೇ ಎಳೆಯುತ್ತೇವೆ ಎಂದಾಗ ನರವಾಹನರಾಗಲು ಒಪ್ಪದೇ ಗಾಂಧಿ ನಡೆದೇ ಬಿಡಾರಕ್ಕೆ ಮೆರವಣಿಗೆಯೊಂದಿಗೆ ಹೋದರು. ಬಿಡಾರ ಇದ್ದದ್ದು ಆನಂದರಾವ್ ಸರ್ಕಲ್ ಹತ್ತಿರ ಶೇಷಾದ್ರಿ ರಸ್ತೆಯಲ್ಲಿದ್ದ ಹೊಸ ಬಂಗಲೆ ಬಿ.ಕೆ.ಶ್ರೀನಿವಾಸ್ ಅಯ್ಯಂಗಾರ್ ಅವರದು. ಅವರ ಊಟ ಶೇಂಗಾಬೀಜ, ಹಣ್ಣುಗಳು. ಈಗಿನ ಆರ್ಟ್ಸ್ ಸೈನ್ಸ್ ಕಾಲೇಜ್ ಸಭಾಭವನದಲ್ಲಿ ಸಾರ್ವಜನಿಕ ಸಭೆ. ಗಾಂಧಿ ಗೋಖಲೆಯವರ ಭಾವಚಿತ್ರ ಅನಾವರಣ ಮಾಡಿದರು. ಈ ಚಿತ್ರ ಈಗ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿದೆ.
ನಂತರ ಸಂಜೆ ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ಸಾರ್ವಜನಿಕ ಸಭೆ. ಅಲ್ಲಿ ಗಾಂಧೀಜಿ ಮಾತನಾಡಿದರು.
ಎರಡನೆಯ ಭೇಟಿ ೧೯೨೪ರಲ್ಲಿ ಬೆಳಗಾಂ ಕಾಂಗ್ರೆಸ್ ಅಧಿವೇಶನ. ಪ್ರಸಿದ್ಧ ಆಸ್ಥಾನ ವಿದ್ವಾಂಸ ವೀಣೆ ಶೇಷಣ್ಣನವರು ಗಾಂಧಿಯವರ ಎದುರಿಗೆ ಕಾಲು ಘಂಟೆ ಕಾಪಿ ರಾಗ ನುಡಿಸಿದರು. ಗಾಂಧೀಜಿ ಆನಂದದಿಂದ ಏಕಚಿತ್ತರಾಗಿ ಆಲಿಸಿದರು. ಸಂಗೀತದ ಸಮಯ ಮುಗಿಯಿತು. ಗಾಂಧಿ ಅಂದು ಮೌನ. ಒಂದು ಚೀಟಿ ಬರೆದು ಕಾರ್ಯದರ್ಶಿ ಮಹಾದೇವ ದೇಸಾಯಿಗೆ ಕೊಟ್ಟರು. ’ಸಂಗೀತ ಮುಂದುವರಿಯಲಿ’ ಎಂದಷ್ಟೇ ಇದ್ದಿತು. ಮಹದೇವ ಅವರು ಈಗ ನಿಮಗೆ ಮೀಟಿಂಗ್ ಇದೆ ಎಂದಾಗ ಗಾಂಧಿ ಮತ್ತೆ ಬರೆದರು. meeಣiಟಿg ಛಿಚಿಟಿ ತಿಚಿಟಿಣ ಮತ್ತೆ ಕಾಲು ಘಂಟೆ ಸಂಗೀತ. ಆ ಮೇಲೆ ಇನ್ನೊಂದು ಚೀಟಿ ಬರದರು. "ಅವರಿಗೆ ತಿಳಿಸು. ಮನಸ್ಸಿಗೆ ಬಹಳ ಶಾಂತಿ ಕೊಟ್ಟಿದ್ದಾರೆ" ಶೇಷಣ್ಣನವರ ಸಂತೋಷಕ್ಕೆ ಪಾರವೇ ಇಲ್ಲ.
೧೯೨೭ರಲ್ಲಿ ಗಾಂಧೀಜಿ ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರಕ್ಕೆ ಭೇಟಿ ಕೊಟ್ಟಾಗ, ವಿಜ್ಞಾನಿಗಳಿಗೆ ಹೇಳಿದರು- "ವಿಜ್ಞಾನಿಗಳ ಪ್ರಯೋಗ ಶಾಲೆ ಸೈತಾನನ ವರ್ಕ್‌ಶಾಪ್ ಎಂದು ರಾಜಾಜಿ ಹಾಸ್ಯ ಮಾಡುತ್ತಾರೆ. ನಿಮ್ಮ ಸಂಶೋಧನೆಗಳು ಬಡವರ ಯೋಗಕ್ಷೇಮವನ್ನೇ ಗುರಿಯಾಗಿ ಹೊಂದಿರದಿದ್ದರೆ ನಿಮ್ಮ ಪ್ರಯೋಗಶಾಲೆ ಸೈತಾನನ ಕರ್ಮಾಗಾರವೇ ಸರಿ’.
೧೯೨೭ ಆಗಸ್ಟ್ ೨೭ ಬೆಂಗಳೂರಿನ ದೇಶಿ ವಿದ್ಯಾಶಾಲೆಯಲ್ಲಿ ವ್ಯಾಯಾಮ ಘಟಕ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಶ್ರೀಮತಿ ತಿರುಮಲೆ ರಾಜಮ್ಮನವರು ಗಾಂಧೀಜಿಗೆ ಪ್ರಿಯವಾದ ’ವೈಷ್ಣವ ಜನತೋ’ ಗೀತೆಯನ್ನು ’ಮಾಯಾಮಾಳವಗೌಳ’ ರಾಗದಲ್ಲಿ ಹಾಡಿದರು. ಗಾಂಧಿ ಸಂತೋಷ ಹೊಂದಿದರು. ಮರುದಿನ ಗಾಂಧಿ ಮೌನ. ಆದರೆ ರಾಜಮ್ಮನವರಿಗೆ ತಮ್ಮ ಬೀಡಾರಕ್ಕೆ ಬಂದು ಹಾಡಲು ಹೇಳಿದರು. ಮರುದಿನ ರಾಜಮ್ಮನವರು ಬಂದಾಗ ಹರೀಂದ್ರನಾಥ ಚಟ್ಟೋಪಾಧ್ಯಾಯರು ತಮ್ಮ ಪತ್ನಿ ಕಮಲಾದೇವಿಯೊಡನೆ ಬಂದಿದ್ದರು. ಕೈಯಲ್ಲಿ ತಂಬೂರಿ.
ರಾಜಮ್ಮನವರು ಹಾಡಿದರು. ನಂತರ ಹರೀಂದ್ರನಾಥರು ಹಾಡಿದರು. ಪುನಃ ರಾಜಮ್ಮನವರು ವೈಷ್ಣವಜನತೋ ಶ್ರೀರಾಗದಲ್ಲಿ ಹಾಡಿದರು. ಮತ್ತೆ ಹರೀಂದ್ರನಾಥರು. ಗಾಂಧಿ ಮುಖದಲ್ಲಿ ಸಂತೃಪ್ತಿ. ಗಾಂಧೀಜಿ ಒಂದು ಚೀಟಿಯಲ್ಲಿ ಈ ರೀತಿ ಬರೆದು ಕಮಲಾದೇವಿಗೆ ಕೊಟ್ಟರು "ಇಬ್ಬರು ನಿಪುಣರು ಕಲಾ ಕೌಶಲ್ಯ ತೋರಿಸಿದ್ದಾರೆ. ಪತಿ (ಹರೀಂದ್ರನಾಥ)ಯ ಕೌಶಲ್ಯ ಕಂಡು ಸತಿ ಹಿಗ್ಗುತ್ತಿದ್ದಾಳೆ ಸತಿ (ರಾಜಮ್ಮ)ಯ ಕೌಶಲ್ಯ ಕಂಡು ಪತಿ (ತಿತಾಶರ್ಮ) ಹಿಗ್ಗುತ್ತಿದ್ದಾರೆ".
ಗಾಂಧೀಜಿ ನಂದಿ ಬೆಟ್ಟದ ಮೇಲೆ ವಿಶ್ರಾಂತಿ ಹೊಂದುತ್ತಿದ್ದಾಗ ಸರ್ ಸಿವಿ ರಾಮನ್ ಅವರು ಸ್ವಿಝರ್‌ಲೆಂಡಿನ ಪ್ರೊ||ರಹಂ ಅವರನ್ನು ಭೇಟಿ ಮಾಡಿಸಿ ಹೇಳಿದರು. "ಇವರು ಒಂದು ಕೀಟವನ್ನು ಕಂಡು ಹಿಡಿದಿದ್ದಾರೆ.
ಅದು ೧೨ ವರ್ಷ ನಿರಾಹಾರ ಇರಬಹುದು. ಮುಂದಿನ ಸಂಶೋಧನೆಗಾಗಿ ಭಾರತಕ್ಕೆ ಬಂದಿದ್ದಾರೆ" ಆಗ ಗಾಂಧೀಜಿ "ಅದರ ರಹಸ್ಯವನ್ನು ಕಂಡುಹಿಡಿದರೆ ನನಗೆ ತಿಳಿಸಿ".
೧೯೨೭ ಗಾಂಧೀಜಿ ಕುಮಾರಕೃಪದಲ್ಲಿ ತಂಗಿದ್ದರು. ಆಗ ಖಾದಿ ವಸ್ತುಪ್ರದರ್ಶನ ಏರ್ಪಡಿಸಬೇಕೆಂದು ರಾಜಾಜಿ ಅಪೇಕ್ಷಿಸಿದರು.
೩.೭.೨೭ ರಂದು ಉದ್ಘಾಟನಾ ಭಾಷಣ ಮಾಡುತ್ತಾ-".... ಭಾರತದ ಮಿಲಿಯನ್ ಗಟ್ಟಲೆ ಅರೆಉಂಡ ಮೂಕ ಜನರ ಸ್ವಪ್ರೇರಿತ ಪ್ರತಿನಿಧಿ ಆಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಆ ಜನರನ್ನೇ ದಿ| ದೇಶಬಂಧು ಚಿತ್ತರಂಜನದಾಸರು ’ದರಿದ್ರನಾರಾಯಣ’ ಎಂದು ಕರೆದಿದ್ದಾರೆ. ನೀವು ಕೊಳ್ಳುವ ಖಾದಿಗೆ ಬೆಂಬಲವಾಗಿ ನೀವು ಕೊಡುವ ಬಿಡಿಗಾಸು ನೀವು ಮಿಲಯಗಟ್ಟಲೆ ಇರುವ ಬಡಜನರಿಗೆ ತೋರಿಸಿದ ಸ್ಪಷ್ಟ ಸಹಾನುಭೂತಿ"
೧೯೩೪ರಲ್ಲಿ ಗಾಂಧೀಜಿ ಖಾದಿ ಪ್ರಚಾರಕ್ಕೆ ಕೊಡಗಿಗೆ ಬಂದಿದ್ದರು. ಬಹಿರಂಗ ಸಭೆಯಲ್ಲಿ ಗೌರಮ್ಮ ತನ್ನ ಪತಿಯ ಒಪ್ಪಿಗೆಯಿಂದ ತನ್ನ ಒಡವೆಯನ್ನು ಖಾದಿ ನಿಧಿಗೆ ಅರ್ಪಿಸಿದರು. ಆಗ ಸ್ಫೂರ್ತಿಯಿಂದ ಮತ್ತೊಬ್ಬ ಮಹಿಳೆ ತನ್ನ ಬಂಗಾರದ ಬಳೆಯನ್ನು ಕೊಟ್ಟಳು. ಅವಳ ಗಂಡ ಅಲ್ಲಿಯೇ ನಿಂತಿದ್ದನು. ಆಗ ಗಾಂಧೀಜಿ ಕೇಳಿದರು. ನಿಮ್ಮ ಹೆಂಡತಿಗೆ ಬಳೆ ಕೊಡಲು ಒಪ್ಪಿಗೆ ಕೊಟ್ಟಿರುವಿರಾ? ಆಗ ಅವಳ ಗಂಡ ’ಅನುಮತಿ ಕೊಟ್ಟಿರುವೆ. ಇಷ್ಟಾಗಿ ಒಡವೆ ಅವಳದಲ್ಲವೇ?’ ಗಾಂಧೀಜಿ ’ಎಲ್ಲ ಗಂಡಂದಿರೂ ಇಷ್ಟು ವಿವೇಚನೆಯಿಂದ ನಡೆಯುವುದಿಲ್ಲ ನಿಮ್ಮ ವಯಸ್ಸು ಎಷ್ಟು?’ ಎಂದಾಗ ಮೂವತ್ತು ಎಂದನು. ಆಗ ಗಾಂಧೀಜಿ "ನಿಮ್ಮ ವಯಸ್ಸಿನಲ್ಲಿ ನಾನು ಇಷ್ಟು ವಿವೇಕದಿಂದ ನಡೆದುಕೊಳ್ಳಲಿಲ್ಲ. ನನಗೆ ವಿವೇಕ ಕಲಿಸಿದವಳು ನನ್ನ ಹೆಂಡತಿ".
ಗಾಂಧೀಜಿ ನಂದಿ ಬೆಟ್ಟದಲ್ಲಿದ್ದಾಗ ಬಾಲಿಕಾ ಪಾಠಶಾಲೆಯ ಹುಡುಗಿಯರು ಗಾಂಧೀಜಿ ದರ್ಶನಕ್ಕೆ ಬಂದರು. ಪ್ರಾಚಾರ್ಯರು ಗಾಂಧೀಜಿಗೆ ಹುಡುಗಿಯರು ನೂಲುವುದನ್ನು ಕಲಿತಿದ್ದಾರೆ ಎಂದರು.
ಮಕ್ಕಳು ಹಾಡಿದರು. ನಂತರ ಗಾಂಧೀಜಿ ಮಕ್ಕಳಿಗೆ ಕೇಳಿದರು ’ಖಾದಿ ಎಂದರೆ ಏನು?’ ಅದೇನು ಪಕ್ಷಿಯೇ ಆಟದ ವಸ್ತುವೇ? ಮಕ್ಕಳು ನಕ್ಕು ಒಂದೊಂದಾಗಿ ಉತ್ತರಿಸಿದರು.
-ಅದು ಒಂದು ಬಟ್ಟೆ
ಗಾಂಧಿ- ಎಂಥ ಬಟ್ಟೆ?
-ಒರಟು ಬಟ್ಟೆ
ಗಾಂಧಿ-ಆ ಬಟ್ಟೆ ಯಾಕೆ ಉಡಬೇಕು?
-ಬಾಳಿಕೆ ಬರುತ್ತದೆ
ಗಾಂಧಿ- ಅದು ಸರಿಯಾದ ಕಾರಣವಲ್ಲ
-ಆ ಬಟ್ಟೆ ಒಗೆದರೆ ಬೆಳ್ಳಗೆ ಆಗುತ್ತದೆ.
ಗಾಂಧೀಜಿ- ಈ ಖಾದಿ ನೂಲುವವರು ಬಡವರು. ಆ ಜನರಿಗೆ ಓದು-ಬರಹವಿಲ್ಲ. ಹೊಟ್ಟೆ ತುಂಬ ಹಿಟ್ಟಿಲ್ಲ, ಹಾಲಿಲ್ಲ. ಇವರು ಖಾದಿ ನೂಲುತ್ತಾರೆ. ಇದರಿಂದ ಅವರಿಗೆ ಎರಡಾಣೆ ಸಿಗುತ್ತದೆ. ಅದೇ ಅವರಿಗೆ ಭಾಗ್ಯ. ಆ ಎರಡಾಣೆಗೆ ಉಪ್ಪು, ಮೆಣಸಿನಕಾಯಿ, ಹಾಲು, ಹಣ್ಣು ಯಾವುದು ಬೇಕು ಅದನ್ನು ಕೊಳ್ಳುತ್ತಾರೆ. ಗೊತ್ತಾಯಿತೇ ಖಾದಿ ಏಕೆ ಕೊಳ್ಳಬೇಕೆಂದು".ಮಕ್ಕಳಿಗೆ ಆಶ್ಚರ್ಯವಾಯಿತು.
ಗಾಂಧೀಜಿ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು. ಅವರ ಕಾರ್ಯಕಲಾಪದ ನಂತರ ಜತೆಯಲ್ಲಿದ್ದವರು ಸಮೀಪದಲ್ಲಿದ್ದ ’ಜೋಗಜಲಪಾತ’ದ ಬಗ್ಗೆ ವಿವರಿಸುತ್ತ ಇಂಥ ದೊಡ್ಡ ಜಲಪಾತ ನೀವು ನೋಡಿರುವುದಿಲ್ಲ ಎಂದರು. ಆಗ ಅವರನ್ನು ಮಧ್ಯದಲ್ಲಿಯೇ ತಡೆದು" ಇದಕ್ಕಿಂತ ದೊಡ್ಡ ಅದ್ಭುತ ಜಲಪಾತ ನೋಡಿದ್ದೇನೆ. ನೀವೂ ನೋಡಿರುವಿರಿ. ಅದರ ಮುಂದೆ ಜೋಗದ ಜಲಪಾತ ಎಲ್ಲಿಯದು?" ಆಗ ಅವರು ಪೆಚ್ಚಾಗಿ ನಾವು ನೋಡಿರುವ ಆ ಜಲಪಾತ ಯಾವುದು? ಎಂದು ಪ್ರಶ್ನಿಸಿದಾಗ ಬಾಪೂ ಉತ್ತರಿಸಿದರು "ಆಕಾಶದಿಂದ ಸುರಿಯುವ ಧಾರಕಾರ ಮಳೆ"

No comments:

Post a Comment