Saturday, August 13, 2011

ಪವಿತ್ರ ಮಾಸ ರಂಜಾನ್ ವಿಶೇಷತೆಗಳು


ಪವಿತ್ರ ರಂಜಾನ್ ತಿಂಗಳಲ್ಲಿ ೩೦ ದಿನಗಳ ಉಪವಾಸ (ರಂಜಾನ್ ಅರಬ್ಬಿ ತಿಂಗಳುಗಳ ಹೆಸರುಗಳಲ್ಲಿ ಒಂದು) ವಿರುವುದು ಕಡ್ಡಾಯ. ಅದಕ್ಕೆ ಬಡವ, ಶ್ರೀಮಂತ, ಹೆಣ್ಣು, ಗಂಡು ಎಂಬ ಬೇಧವಿಲ್ಲ. ಏಳು ವರ್ಷದ ಮಕ್ಕಳಿಗೂ ಉಪವಾಸ ಕಡ್ಡಾಯ. ಈ ತಿಂಗಳಲ್ಲಿ ಒಂದು ಪುಣ್ಯ ಮಾಡಿದರೆ ೭೦ ಪುಣ್ಯಗಳ ಮತ್ತು ಒಂದು ಪೈಸೆ ದಾನ ಮಾಡಿದರೆ ಎಪ್ಪತ್ತು ಪೈಸೆಗಳಷ್ಟು ಪ್ರತಿಫಲ ಸಿಗುತ್ತದೆಂಬ ಸಂದೇಶ ಪವಿತ್ರ ಕುರಾನಿನಲ್ಲಿದೆ.
ರಂಜಾನ್ ರಾತ್ರಿಗಳಲ್ಲಿ ಜಾಗರಣೆ ಮುಖಾಂತರ ಪ್ರಾರ್ಥಿಸಿದರೆ ದೇವರು ನಮ್ಮ ಪಾಪ ಕರ್ಮಗಳನ್ನು ಕ್ಷಮಿಸುತ್ತಾನೆ. ಭಕ್ತರು ಆ ಹತ್ತು ರಾತ್ರಿಗಳಲ್ಲಿ ಮನಸಾರೆ ದೇವರನ್ನು ಸ್ಮರಿಸಿದರೆ ಆ ಒಂದು ರಾತ್ರಿಯ ಪುಣ್ಯದ ಫಲವಾಗಿ ಸಾವಿರ ವರ್ಷ ರಾತ್ರಿಗಳ ಪುಣ್ಯವನ್ನು ಧಾರೆ ಎರೆಯುತ್ತಾನೆ. ಮನುಷ್ಯನು ತಾನು ಸಂಪಾದಿಸಿರುವ ಸಂಪಾದನೆಯಲ್ಲಿ ಸ್ವಲ್ಪ ಭಾಗ ಸ್ವಂತದವರಿಗೂ, ಬಡವರಿಗೂ ದಾನ ಮಾಡಬೇಕೆಂಬ ನಿಯಮವಿದೆ. ಇದು ದೇವಾಜ್ಞೆಗಳಲ್ಲೇ ಬಹುಮುಖ್ಯವಾದ ಆಜ್ಞೆ ಎಂದೇ ನಂಬಲಾಗಿದೆ.
ಕುರ್‌ಆನಿನಲ್ಲಿ ಮನುಷ್ಯನ ಜೀವನವನ್ನು ೫ ಭಾಗಗಳಾಗಿ ವಿಂಗಡಿಸಲಾಗಿದೆ.
ಮೊದಲನೆಯ ಭಾಗ
ಪ್ರಪಂಚದ ಮೊಟ್ಟ ಮೊದಲನೇ ಮಾನವರಾದಂಥ (ಆದಮ್ ಅಲೈಹಿಸ್ಸಲಾಂ) ಹೀಗೆ ಹೇಳುತ್ತಾರೆ;
‘ಆದಮ್ ಎಂಬ ಹೆಸರಿನಿಂದ ವಿಚಲಿತರಾಗುವಂತಹ ದೇಹವನ್ನು ಮಣ್ಣಿನಿಂದ ಮಾಡಿ ಪ್ರಾಣಿಪಕ್ಷಿ, ಜೀವಜಂತುಗಳ, ಯಕ್ಷ ಮಾನವರ ಆತ್ಮಗಳನ್ನು ಒಂದು ಉನ್ನತವಾದ ಸಮಯ ಮತ್ತು ಜಾಗದಲ್ಲಿ ಸೇರಿಸಿ ಪ್ರಪಂಚವನ್ನು sಸೃಷ್ಟಿಸುತ್ತೇನೆ ಮತ್ತು ಈ ಮಣ್ಣಿಗೆ ಜೀವ ತುಂಬುತ್ತೇನೆ. ನನ್ನ ಅಪ್ಪಣೆಯಂತೆ ನೀವೆಲ್ಲ ಈ ಮಣ್ಣಿನ ದೇಹಕ್ಕೆ ಸಾಷ್ಟಾಂಗವೆರಗಿರಿ’ ಎಂದು ಹೇಳಿದಾಗ ಯಕ್ಷಗಳ ಸರದಾರ (ಭೂತ) ‘ಹೇ ದೇವ, ನಾನು ನಿನ್ನ ಶ್ರೇಷ್ಠ ಭಕ್ತರಲ್ಲಿ ಒಬ್ಬನಾಗಿದ್ದು, ಈ ಮಣ್ಣಿನ ಮೂರ್ತಿಗೆ ಸಾಷ್ಟಾಂಗ ಮಾಡುವುದಿಲ್ಲ ಎಂದು ಹೇಳಿದಾಗ ದೇವರು ಆ ಸರದಾರನನ್ನು ದಿಟ್ಟಿಸಿ ನೋಡಿ ಆ ಮಣ್ಣಿನ ಮೂರ್ತಿಯ ಮೇಲೆ ಉಗಿಯುತ್ತಾನೆ. (ಆ ಭಾಗವೆ ನಮ್ಮ ಹೊಕ್ಕಳು)
ನಾನು ಈ ಮೂರ್ತಿಗೆ ಸಾಷ್ಟಾಂಗವೆರಗಲಾರೆ, ಅದರ ಫಲವಾಗಿ ನೀನು ಯಾವ ಮಾನವ ಕುಲಕ್ಕೆ ಜೀವ ತುಂಬಿ ನಿನ್ನ ಮಾರ್ಗದ ಅನುಕರಣೆ ಮಾಡುವೆಯೋ ಅದೇ ಮಾನವನಿಗೆ ಹಿಂದಿನಿಂದಲೂ ಮುಂದಿನಿಂದಲೂ, ಮನಸ್ಸಿನಿಂದಲೂ ನಾನು ದುನ್ಮಾರ್ಗದ ಶಿಕ್ಷಣ ಕೊಡುತ್ತೇನೆ. ಯಾರು ಗೆಲ್ಲುವರೋ ನೋಡುವ ಎಂದು ಹೇಳುತ್ತಾನೆ.
ಹೀಗೆ ದೇವರು ತನ್ನ ಭಕ್ತರ, ಅನುಯಾಯಿಗಳ, ಯಕ್ಷಗಳ, ಪ್ರಾಣಿಪಕ್ಷಿಗಳ ಪ್ರಪಂಚದ ಎಲ್ಲಾ ಜೀವಜಂತುಗಳ ಭಕ್ತಿಯನ್ನು ಅಪೇಕ್ಷಿಸುತ್ತಾನೆಯೇ ಹೊರತು ಬೇರೇನು ಅಲ್ಲ. ಸಕಲ ಜೀವ ಜಂತುಗಳನ್ನು ತನ್ನ ಮಹಿಮೆಯಿಂದಲೇ ಪೊರೆಯುತ್ತಿದ್ದಾನೆ.
ಎರಡನೇ ಜೀವನ: (ತಾಯಿಯ ಹೊಟ್ಟೆಯಲ್ಲಿ ಮಗುವಿನ ಸ್ಥಿತಿ)
ನಿಜ ಕುರ್‌ಆನಿನ ಒಂದು ವಾಕ್ಯ ಹೇಳುತ್ತದೆ. ಹಸು ತಿನ್ನುವುದು ಹುಲ್ಲು, ಅದು ಮಲ, ಮೂತ್ರವಾಗಿಯೂ ಹೊರ ಹೊಮ್ಮುತ್ತದೆ ಹಾಗು ಒಂದು ಸಣ್ಣ ನರದ ಮೂಲಕ ನನ್ನ ನಿದರ್ಶನಗಳಲ್ಲೊಂದು ಸ್ವಾದಿಷ್ಟವಾದ, ಸುವಾಸನೆಯುಳ್ಳ ಹಾಲನ್ನು ಕೊಡುತ್ತದೆ.
ಅದೇ ರೀತಿ ತಾಯಿಯ ಹೊಟ್ಟೆಯ ಪದರದ ಒಳಗೆ ಮತ್ತೊಂದು ಪದರವಿಟ್ಟು ಬರಿ ಒಂದು ತೊಟ್ಟು ವೀರ್ಯದ ಕಣದಿಂದ ಒಂದು ಮಗುವನ್ನು ಸೃಷ್ಟಿಸುತ್ತೇನೆ, ಆ ಮಗುವಿಗೆ ಆಹಾರದ ವ್ಯವಸ್ಥೆ ಮಾಡಿದ್ದೇನೆ ನಂತರ ತಾಯಿಯ ದೇಹದಿಂದ ಹಾಲು ಉತ್ಪತ್ತಿಯಾಗುವಂತೆ ಮಾಡಿ ಆ ಮಗುವಿಗೆ ಉಣಿಸುತ್ತೇನೆ. ಇದೂ ಸಹ ನನ್ನ ನಿದರ್ಶನಗಳಲ್ಲೊಂದು. ಅಲ್ಲದೆ ಎಂದೂ ಆ ತಾಯಿಗೆ ಒಳ್ಳೆ ಸ್ಥಾನಮಾನ ಕೊಟ್ಟು ಅವಳ ಪಾದಗಳ ಕೆಳಗೆ ಸ್ವರ್ಗವನ್ನು ಇಟ್ಟಿದ್ದೇನೆ ಎಂದು ಹೇಳುತ್ತಾನೆ. ತಾಯಿ ಮಕ್ಕಳನ್ನು ಆರೈಕೆ ಮಾಡಿದಂತೆ ಮಕ್ಕಳು ದೊಡ್ಡವರಾಗಿ ಅವರನ್ನೂ ಆರೈಕೆ ಮಾಡಬೇಕು. ಆಗ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರ್ಥ.
ಮೂರನೇ ಜೀವನ: (ಇಹಲೋಕದ ಜೀವನ)
ಈ ಜೀವನ ಅತ್ಯಂತ ಮಹತ್ವ ಪೂರ್ಣ. ಮಾನವನಿಗೆ ಕೇಳಲಿಕ್ಕೆ ಕಿವಿ, ಮಾತಾಡುವುದಕ್ಕೆ ನಾಲಿಗೆ, ಭಯದೊಂದಿಗೂ ನಿರೀಕ್ಷೆಯೊಂದಿಗೂ ಆಕಾಶದಿಂದ ಮಿಂಚಿನ ಹೊಳಪನ್ನು ತೋರಿಸುವುದು. ಆಕಾಶದಿಂದ ನೀರನ್ನು ಸುರಿಸುವುದು, ಸತ್ತು ಬರಡಾಗಿರುವ ಭೂಮಿಯಲ್ಲಿ ಮತ್ತೆ ಜೀವ ತುಂಬುವುದು. ಆಕಾಶ ಭೂಮಿ ನನ್ನ ಅಪ್ಪಣೆಯಿಂದ ಸ್ಥಾಪನೆಯಾಗಿದೆ.
ಇದೂ ಸಹ ನನ್ನ ನಿದರ್ಶನಗಳಲ್ಲೊಂದು ಎಂದು ಹೇಳುತ್ತ, ಸೃಷ್ಟಿಯ ಆರಂಭ ಮತ್ತು ಅಂತ್ಯ ನನ್ನ ಕೈಯಲ್ಲಿದೆ. ಪ್ರಕೃತಿಯಲ್ಲಿ ಆಗುಹೋಗುವ ನಾವು ಈ ಭೂಮಿಯನ್ನು ಹಾಳುಗೆಡವಿದ್ದೀವಿ. ನನ್ನನ್ನು ಸ್ಮರಿಸಿರಿ. ನಿಸರ್ಗ ಪ್ರಕೃತಿಗಳಲ್ಲಿರುವ ವಸ್ತುಗಳು ನಿರ್ಮಿಸಿದವ ನಾನು, ನಾನಿದರ ಒಡೆಯ ನನಗೆ ಸಾಷ್ಟಾಂಗ ವೆರಗಿರಿ ಎಂದು ಕುರ್‌ಆನಿನ ಮೂಲಕ ಸಾರುತ್ತಾನೆ.
ಹೆಣ್ಣಿಗೆ ಸ್ಥಾನಮಾನ ತಾನಾಗಿ ಸಿಗುವ ಹಾಗೆ ಮಾಡಿದ್ದೇನೆ. ಹೆಣ್ಣು ವ್ಯಭಿಚಾರಿಯಾಗಿಯೂ, ದುರ್ನಡತೆಯುಳ್ಳವಳಾಗಿಯೂ, ಅಶ್ಲೀಲವಾಗಿಯೂ, ನಡೆದುಕೊಳ್ಳುತ್ತಾಳೆ. ಪಾಪ ಕಾರ್ಯಗಳು ಹೆಣ್ಣಿನಿಂದಲೇ ಹೆಚ್ಚಾಗುತ್ತದೆ. ಓ ಹೆಣ್ಣೇ ನೀನು ಸಭ್ಯಸ್ಥಳಾಗು ನಿನ್ನಿಂದ ಪಾಪಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ. ನೀನು ಸಭ್ಯಸ್ಥಳಾದರೆ ನಿನ್ನ ಪಾದಗಳಲ್ಲಿ ನಾನು ಸ್ವರ್ಗ ಪ್ರಾಪ್ತಿಸಿದ್ದೇನೆ. ನೀನು ಸ್ವರ್ಗದಲ್ಲಿ ಜಾಗ ಕೊಡಿಸು. ನರಕದಲ್ಲಿ ತಳ್ಳಬೇಡ ಎಂದು ಎಚ್ಚರಿಸಿದ್ದಾನೆ.
ಬಡವನಿಗೂ ಧನಿಕನಿಗೂ ಒಂದೇ ನ್ಯಾಯ. ಮನುಷ್ಯರು ಎಲ್ಲರೂ ಸಮಾನರು ಒಂದೇ ಸಾಲಿನಲ್ಲಿ ನಿಂತು ಪ್ರಾರ್ಥಿಸಬೇಕು. ಸತ್ತ ಮೇಲೆ ಒಂದು ಜಾಗದಲ್ಲಿ ಮಣ್ಣು ಮಾಡಬೇಕು. ಎಷ್ಟೇ ಸಂಪತ್ತಿದ್ದರೂ ದರ್ಪ, ದುರಹಂಕಾರ ಮಾಡಬಾರದು. ದರ್ಪದ ನಡೆ ದುರಹಂಕಾರ ನಾನು ಹೊತ್ತು ಮಲಗುವ ಕಂಬಳಿ. ನನ್ನ ಕಂಬಳಿಯನ್ನು ಯಾರು ಎಳೆಯದಿರಿ.
ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿಗಳಲ್ಲಿ ದೇವರ ಗುಣಗಾನ ಮಾಡುವುದರಿಂದ ತಪ್ಪುಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಏಳು ವರ್ಷದ ನಂತರ ಮಕ್ಕಳು ನಮಾಜ್ ಅನ್ನು ಪ್ರತಿದಿನ ಕರ್ತವ್ಯಪೂರ್ಣವಾಗಿ ಮಾಡಬೇಕು ಎಂದು ಘೋಷಿಸುತ್ತಾನೆ.
ದಾನ, ಧರ್ಮ ದೇವರು ಆಜ್ಞೆಯಿತ್ತ ಕರ್ತವ್ಯಗಳಲ್ಲಿ ಮತ್ತೊಂದು. ತಮ್ಮಲ್ಲಿರುವ ಸಂಪತ್ತುಗಳೆವನ್ನು ದಾನಧರ್ಮ ಮಾಡಿರಿ ಅಥವಾ ಕನಿಷ್ಟ ದಾನಧರ್ಮ ಆದರೂ ಮಾಡಲೇ ಬೇಕು ಎನ್ನುತ್ತಾನೆ.
ಮರಳುಗಾಡಿನಲ್ಲಿ ಕಾಣಿಸುವಂತಹ ಪ್ರಾಣಿ ಒಂಟೆ. ನೀರಿಲ್ಲದ ಮರಳುಗಾಡಿನಲ್ಲಿ ಒಂಟೆ ತನ್ನ ಬೆನ್ನಿನಲ್ಲಿ ನೀರನ್ನಿಟ್ಟುಕೊಳ್ಳುವ ವ್ಯವಸ್ಥೆ ಮಾಡಿದವನಾರು? ಓ ಯಕ್ಷಗಳೇ ಮತ್ತು ಮಾನವರೇ, ನನ್ನ ಯಾವ ಯಾವ ಚಮತ್ಕಾರಗಳನ್ನು ಸುಳ್ಳಾಗಿಸುವಿರಿ ಎಂದು ಪ್ರಶ್ನಿಸುತ್ತಾನೆ.
ಉಪವಾಸಗಳನ್ನು ಕಡ್ಡಾಯಗೊಳಿಸಿದ್ದಾನೆ. ಇದರಿಂದ ರೋಗುರುಜಿನಗಳು ಸಹ ದೂರವಿರುತ್ತದೆ. ೧೦-೧೦ ದಿನಗಳ ೩ ಭಾಗಗಳಾಗಿ ಕೊನೆಯ ಹತ್ತು ದಿನದ ಭಾಗದಲ್ಲಿ ಒಂದು ರಾತ್ರಿಯನ್ನು ಅಭೂತಪೂರ್ವ ರಾತ್ರಿಯಾಗಿ ಮಾಡಿದ್ದೇನೆ. ಆ ರಾತ್ರಿಯನ್ನು ಹುಡುಕಿ ನನ್ನನ್ನು ಜಪಿಸಿ, ನನ್ನ ಮಹಿಮೆಯನ್ನು ಕೊಂಡಾಡಿ, ನಾನು ಅನುಗ್ರಹಿಸುವುದನ್ನು ಸ್ಮರಿಸಿ ಕೃತಜ್ಞರಾಗಿ. ಈ ರಾತ್ರಿಯ ಅನುಕಂಪತೆಯನ್ನು ನಾನು ನನ್ನ ಆಪ್ತ ಭಕ್ತರ ಮೇಲೆ ಪ್ರಾಪ್ತಿಸುತ್ತೇನೆ ಅದರ ಮಹಿಮೆ ನಿಮಗೆ ಸಾವಿರ ತಿಂಗಳವರೆಗೂ ಪುಣ್ಯ ಪ್ರಾಪ್ತಿಸುತ್ತೇನೆ. ಇದು ನನ್ನ ವಾಗ್ದಾನ ಎಂದು ಹೇಳಿದ್ದಾನೆ.
ನಾಲ್ಕನೇ ಜೀವನ: (ಸಾವು ಸಾವಿನ ಮನೆ)
ಮನುಷ್ಯ ಹುಟ್ಟುವುದಕ್ಕೆ ಮುಂಚೆ ಹುಟ್ಟಲಿಕ್ಕಾಗಿ ಪೂಜೆ ಪುನಸ್ಕಾರಗಳು, ದಾನಧರ್ಮ, ಹರಕೆಗಳನ್ನು ಮಾಡಲಾಗುತ್ತದೆ. ಮಗುವಿನ ಬರುವಿಕೆ ಅಳುವಿನಿಂದಲೇ ಶುರುವಾಗುತ್ತದೆ. ಕಾರಣ ಆ ಮಗುವಿಗೆ ಈ ಪ್ರಪಂಚದ ಜೀವನ ಬೇಡವಾಗಿರುತ್ತದೆ. ಆಗ ಜನಗಳು ಆ ಮಗುವಿಗೆ ಜೇನು-ಖರ್ಜೂರದ ಸಿಹಿಯನ್ನು ನಾಲಗೆಗೆ ತೋರಿಸಿ ಇಲ್ಲಿ ಸಿಹಿ ಸಿಗುತ್ತದೆ ಎಂದು ಬಾಯಿಮುಚ್ಚಿಸಿ ಬರಮಾಡಿಕೊಳ್ಳುತ್ತಾರೆ. ದೊಡ್ಡವನಾಗಿ ಅದು ಮಹಾನ್ ವ್ಯಕ್ತಿಯೂ ಆಗಬಹುದು, ಮಹಾನ್ ಮಾತೆಯೂ ಆಗಬಹುದು. ರಾಜನೂ ಆಗಬಹುದು ಅಥವ ಕ್ರೂರಿಯೂ ಆಗಬಹುದು. ಆದರೆ ರಾಜನಾದರೂ ಸರಿಯೇ ಸತ್ತ ನಂತರ ಅದು ಶವವೇ. ಅವನನ್ನು ದೇವಚರರು ಕರೆದುಕೊಂಡು ಹೋಗುವಾಗ ದೇಶದ್ರೋಹದಿಂದ ಸಂಪಾದನೆ ಮಾಡಿದ್ದಂತಹುದೆಲ್ಲ ಅವನಿಗೆ ನೋಡಿ ನಗುತ್ತದೆ.
ನಂತರ ಎಲ್ಲವನ್ನು ಬಿಟ್ಟು ಶವವನ್ನು ಹೊತ್ತು ಸ್ಮಶಾನದ ಕಡೆಗೆ ಪ್ರಯಾಣಿಸುತ್ತಾರೆ. ಹೆಂಡತಿ-ಮಕ್ಕಳು, ತಾಯಿ-ತಂದೆಯರು ಅಳುತ್ತ ಬೀಳ್ಕೊಡುತ್ತಾರೆ. ಆಗ ಆ ಮನುಷ್ಯ ನಾನು ಬಂದಾಗ ಈ ಜನ ನಕ್ಕವರು ಅಕಸ್ಮಾತ್ ಆಗ ಆಳುತ್ತಿದ್ದಿದ್ದರೆ ನಾವು ಭೂಲೋಕದಲ್ಲಿ ತಪ್ಪುಗಳನ್ನು ಮಾಡುತ್ತಿರಲಿಲ್ಲ ಎಂದು ಬೇಸರ ಪಡುತ್ತಾನೆ.
ನಂತರ ಮಣ್ಣಿನಲ್ಲಿ ಸೇರಿಸಿ ಬಂಧು-ಬಾಂಧವರೆಲ್ಲ ವಾಪಸ್ಸಾಗುತ್ತಾರೆ. ಅಲ್ಲಿ ಉಳಿಯುವುದು ಆ ಶವ ಮತ್ತು ಅವನ ಪಾಪಪುಣ್ಯಗಳು ಮಾತ್ರ. ದೇವಚರರು ತಕ್ಕಡಿ ಸಮೇತ ಅಲ್ಲಿಗೆ ಧಾವಿಸುತ್ತಾರೆ.
ಐದನೇ ಮತ್ತು ಕೊನೆಯ ಜೀವನ ನಿರ್ಣಾಯಕ ದಿನ
ಆ ದಿನ ಮಹಾದುರಂತ ಅಗುತ್ತದೆ. ಭೂಮಿಯ ಆಕಾರ ಬೇರೆಯ ತರವಾಗುತ್ತದೆ. ಸೂರ್ಯ ತಲೆಯ ಮೇಲೆ ಬಂದಿರುತ್ತಾನೆ. ಗತಿಸಿ ಹೋದಂತಹವರೆಲ್ಲರನ್ನೂ ಜೀವಂತಗೊಳಿಸಿ ಬಿಟ್ಟಿರುತ್ತಾರೆ. ಆ ದಿನ ಜನರು ಚದುರಿದ ಹಾಳೆಗಳಂತಾಗುವರು. ಪರ್ವತಗಳು ಬಣ್ಣಬಣ್ಣದ ಉಣ್ಣೆಯಂತಾಗಿ ಬಿಡುವುದು. ಗತಿಸಿಹೋದಂತಹ ೧,೨೪,೦೦೦ ಪ್ರವಾದಿಗಳು, ಧರ್ಮಪ್ರಚಾರಕರುಗಳು, ಧರ್ಮಗುರುಗಳು ಕಾಣುವರು. ದೇವರ ಸನ್ನಿಧಿಯಲ್ಲಿ ದೇವರ ದರ್ಶನಕ್ಕಾಗಿ ಎದುರು ನೋಡುವರು. ಕುರ್‌ಆನ್‌ನಿನ ಪ್ರಕಾರ ಅಂದೇ ಆ ದಿನದಲ್ಲೇ ದೇವರನ್ನು ನೋಡಬಹುದು. ಅಲ್ಲಿಯವರೆಗೂ ದೇವರು ಯಾರಿಗೂ ಕಾಣಸಿಗುವುದಿಲ್ಲವೆನ್ನುತ್ತದೆ.
ದೇವರು ಆ ದಿನ ಗತಿಸಿ ಹೋದವರ ಆತ್ಮಗಳಲ್ಲಿ ಜೀವತುಂಬಿ ಪಾಪ-ಪುಣ್ಯಗಳ ಗಣನೆಯನ್ನು ತೋರುತ್ತಾನೆ. ಸನ್ಮಾರ್ಗದಡೆಗೆ ಹೋಗುತ್ತಿದ್ದವರನ್ನು ಸ್ವರ್ಗದತ್ತಲೂ, ದುಮಾರ್ಗದೆಡೆಗೆ ನಡೆಯುತ್ತಿದ್ದವರನ್ನು ನರಕದೆಡೆಗೂ ಕಳುಹಿಸುತ್ತಾನೆ. ಆದುದರಿಂದ ಮುಸ್ಲಿಂ ಬಾಂಧವರು ನಮಾಜ್ ಉಪವಾಸ, ದಾನಧರ್ಮ, ಹಜ್ ಎಂಬ ಕರ್ತವ್ಯಗಳನ್ನು ಮಾಡುತ್ತಿರುತ್ತಾರೆ.

ಮಾಸ್ತಿ ಜಾಕಿರ್ ಅಲಿಖಾನ್
ಉಪಾಧ್ಯಕ್ಷ, ಕರವೇ ಬೆಂಗಳೂರು ನಗರ ಜಿಲ್ಲೆ

No comments:

Post a Comment