Saturday, August 13, 2011

ಕೆಚ್ಚೆದೆಯ ಹೋರಾಟಗಾರ ಎ.ಎಸ್.ನಾಗರಾಜು


ಗೋಕಾಕ್ ಚಳವಳಿಯ ಮೂಲಕ ಕನ್ನಡ ಪರ ಹೋರಾಟಕ್ಕೆ ಕಾಲಿಟ್ಟ ಎ.ಎಸ್.ನಾಗರಾಜು ಕರ್ನಾಟಕ ರಕ್ಷಣಾ ವೇದಿಕೆಯ ಹಲವು ಮಹತ್ವಪೂರ್ಣ ಹೋರಾಟಗಳಲ್ಲಿ ಸಕ್ರಿಯರಾಗುವ ಮೂಲಕ ಸಂಘಟನೆಗೆ ಬಲ ತುಂಬಿದವರು.
ಬೆಂಗಳೂರಿನಲ್ಲಿ ವಾಸವಾಗಿರುವ ನಾಗರಾಜು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಗಳಿಬೈಲು ಗ್ರಾಮದವರು. ಎ.ಎನ್.ಶಂಕರಪ್ಪಗೌಡ ಹಾಗೂ ಗಿರಿಜಮ್ಮ ದಂಪತಿಗಳ ಪುತ್ರನಾಗಿ ೧೦೬೪ ನವೆಂಬರ್ ೧೯ರಂದು ಜನಿಸಿದ ನಾಗರಾಜು ಎಸ್‌ಎಸ್‌ಎಲ್‌ಸಿ ವರೆಗೆ ವ್ಯಾಸಂಗ ಪೂರೈಸಿದವರು. ಅಪ್ಪಟ ಮಲೆನಾಡಿನ ವಾತಾವರಣದಲ್ಲಿ ಬೆಳೆದ ನಾಗರಾಜು ತೀರ್ಥಹಳ್ಳಿಯಲ್ಲಿದ್ದಾಗಲೇ ಕನ್ನಡ ಪರವಾದ ಸಾಕಷ್ಟು ಹೋರಾಟಗಳಲ್ಲಿ ತೊಡಗಿಸಿಕೊಂಡರು. ಮೊದಲಿಗೆ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಟನೆಯಲ್ಲಿ ಸಕ್ರಿಯರಾಗುವ ಮೂಲಕ ಕನ್ನಡ ಕಂಪನ್ನು ಪಸರಿಸಿದವರು. ಆ ನಂತರ ರಾಜಧಾನಿ ಬೆಂಗಳೂರಿಗೆ ಆಗಮಿಸಿ ಬದುಕು ಕಟ್ಟಿಕೊಂಡವರು.
ಅಗ್ರಹಾರ ದಾಸರಹಳ್ಳಿಯಲ್ಲಿ ಆರಂಭದಲ್ಲಿ ಪುಟ್ಟ ಉದ್ಯೋಗ ಮಾಡಿಕೊಂಡಿದ್ದ ನಾಗರಾಜು ಅವರದ್ದು ಸದಾ ಕನ್ನಡಕ್ಕೆ ತುಡಿಯುವ ಮನಸ್ಸು. ಈ ಕಾರಣಕ್ಕಾಗೇ ಅವರು ಮೇರುನಟ ಡಾ.ರಾಜ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾದರು. ರಾಜ್‌ರ ಮೇರು ವ್ಯಕ್ತಿತ್ವ, ಭಾಷೆ ಕನ್ನಡದ ಮೇಲಿನ ಅವರ ಅತೀವ ಬದ್ಧತೆಗೆ ಮಾರುಹೋದ ನಾಗರಾಜು ನಿಧಾನವಾಗಿ ಕನ್ನಡಪರ ಹೋರಾಟಗಳತ್ತ ತೊಡಗಿಸಿಕೊಂಡವರು.
ಕರವೇಯತ್ತ...
ಈ ನಡುವೆಯೇ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಯಾಗಿ ಸೇರ್ಪಡೆಗೊಂಡ ನಾಗರಾಜು ಅಲ್ಲಿನ ಹಲವು ಹೋರಾಟಗಳಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಗುರುತಿಸಿಕೊಂಡರು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಆತ್ಮೀಯ ಒಡನಾಡಿಯಾದ ನಾಗರಾಜು ಬಹುಬೇಗ ಸಮರ್ಥ ಹೋರಾಟಗಾರರಾಗಿ ರೂಪುಗೊಂಡರು. ಅವರಲ್ಲಿನ ಹೋರಾಟದ ತೀವ್ರತೆ, ಸಂಘಟನಾ ಚಾತುರ‍್ಯ ಗಮನಿಸಿದ ಗೌಡರು ಕರವೇ ಗಾಂಧಿನಗರ ಘಟಕ ಅಧ್ಯಕ್ಷರನ್ನಾಗಿ ನೇಮಿಸಿದರು.
ಸಾಕಷ್ಟು ಪರಿಶ್ರಮ ವಹಿಸಿ ಗಾಂಧಿನಗರ ಘಟಕಕ್ಕೆ ಮೂರ್ತರೂಪ ನೀಡಿದ ನಾಗರಾಜು ಅವರ ಸಂಘಟನೆ ವೈಖರಿ ಗಮನಿಸಿದ ನಾರಾಯಣಗೌಡರು ಬೆಂಗಳೂರು ನಗರ ಘಟಕದ ಪ್ರಧಾನ ಕಾರ‍್ಯದರ್ಶಿಯಾಗಿ ನಂತರ ರಾಜ್ಯ ಕಾರ‍್ಯದರ್ಶಿಯಾಗಿ ನೇಮಿಸಿದರು.
ಕೆಚ್ಚೆದೆಯ ಕನ್ನಡಿಗ...
ಹೀಗೆ ನಾಗರಾಜು ಗೌಡರು ನೀಡಿದ ಎಲ್ಲಾ ಜವಾಬ್ದಾರಿಯನ್ನು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸುವ ಮೂಲಕ ಕರವೇ ವ್ಯಾಪ್ತಿ ಮತ್ತಷ್ಟು ವಿಸ್ತಾರಕ್ಕೆ ಕಾರಣರಾದರು. ಹೀಗೆ ಸಂಘಟನೆಯಲ್ಲಿ ಮಾತ್ರವಲ್ಲದೇ ಹೋರಾಟಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು ನಾಗರಾಜು. ಎತ್ತರದ ಧ್ವನಿ, ದೊಡ್ಡ ಶರೀರ, ಸದಾ ಹಸನ್ಮುಖಿ, ಮನಸ್ಸು ಮಾತ್ರ ಕೋಮಲ. ಇಂಥ ನಾಗರಾಜು ನಾರಾಯಣಗೌಡರೊಂದಿಗೆ ಹೋರಾಟಕ್ಕೆ ಧುಮುಕಿದರೆ ಅದಕ್ಕೊಂದು ಅಂತಿಮ ರೂಪು ನೀಡದೆ ವಿರಮಿಸುವವರೇ ಅಲ್ಲ. ಛಲ ಮತ್ತು ದೃಢತೆಯ ಸಂಕೇತದಂತಿರುವ ನಾಗರಾಜು ಕರವೇ ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲೂ ಮುಂಚೂಣಿಯಲ್ಲಿರುತ್ತಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕರವೇಯ ಐತಿಹಾಸಿಕ ಹೋರಾಟದಲ್ಲಿ ನಾಗರಾಜು ಅವರ ಪಾತ್ರ ಮಹತ್ತರವಾದದ್ದು. ಕಾವೇರಿ ನದಿ ನೀರಿನ ಸಂಬಂಧ ನಡೆದ ರಾಜ್ಯವ್ಯಾಪಿ ಹೋರಾಟದಲ್ಲಿ ಗೌಡರೊಂದಿಗೆ ಜೈಲು ವಾಸ ಅನುಭವಿಸಿದರು. ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನ್ನಡ ವಿರೋಧಿ ಧೋರಣೆ ಖಂಡಿಸಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಕನ್ನಡಿಗರ ಸಾರ್ವಭೌಮತೆಯನ್ನು ಎತ್ತಿಹಿಡಿದವರು.
ಕರವೇ ಹಮ್ಮಿಕೊಂಡ ಹೋರಾಟಗಳು ಲೆಕ್ಕಕ್ಕಿಲ್ಲ. ಪ್ರತೀ ಹೋರಾಟವೂ ಕೂಡ ಕರವೇ ಪಾಲಿಗೆ ಐತಿಹಾಸಿಕ ಘಟನೆಗಳೆ. ಮಳೆ, ಬಿಸಿಲೆನ್ನದೆ ನಡೆಸುವ ಧರಣಿ, ಪೊಲೀಸರ ಲಾಠಿ ಏಟು, ಜೈಲು ವಾಸ, ಜನಪ್ರತಿನಿಧಿಗಳ ದೂಷಣೆ...ಇವೆಲ್ಲವನ್ನೂ ಸಹಿಸಿಕೊಳ್ಳಬೇಕಾಗದ ಅನಿವಾರ‍್ಯತೆ ಪ್ರತೀ ಹೋರಾಟಗಾರನದ್ದು. ಇಂಥ ಅನಿವಾರ‍್ಯತೆಗಳನ್ನು ಕರವೇಯ ಪ್ರತೀ ಕಾರ‍್ಯಕರ್ತನೂ ಎದುರಿಸಿದ್ದಾನೆ. ಪ್ರತೀ ನಾಯಕನೂ ಅನುಭವಿಸಿದ್ದಾನೆ. ನಾಗರಾಜು ಕೂಡ ಅಂಥದ್ದೇ ಸಾಲಿಗೆ ಸೇರಿದವರು. ಅಷ್ಟಾದರೂ ಅವರ ಕನ್ನಡದ ಕೆಚ್ಚು ಕಡಿಮೆಯಾಗಿಲ್ಲ, ಹೋರಾಟದಿಂದ ವಿಮುಖರಾದವರಲ್ಲ. ನಾಗರಾಜು ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ೫೦ ಮೊಕದ್ದಮೆಗಳು ದಾಖಲಾಗಿದ್ದವು. ಈ ಪೈಕಿ ೧೨ ಮೊಕದ್ದಮೆಗಳು ಬಾಕಿ ಇವೆ. ಪ್ರತೀ ಹೋರಾಟಗಾರ ಅನುಭವಿಸುವ ತುಮುಲ, ಮಾನಸಿಕ ಹಿಂಸೆಯನ್ನು ನಾಗರಾಜು ಕೂಡ ಅನುಭವಿಸಿದ್ದಾರೆ. ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದೂ ಅಲೆದೂ ಅಲೆದು ಹೈರಾಣಾಗಿದ್ದರೂ ಕರವೇ ಮೇಲಿನ ಇವರ ಅದಮ್ಯ ನಿಷ್ಠೆ, ನಾರಾಯಣಗೌಡರ ಮೇಲಿನ ಇವರ ಅಭಿಮಾನ ಕಡಿಮೆಯಾಗಿಲ್ಲ.
ಬಡವರ ಬಂಧು...
ನಾಗರಾಜು ತಮ್ಮನ್ನು ತಾವು ಕನ್ನಡ ಪರ ಹೋರಾಟಕ್ಕಷ್ಟೇ ಸೀಮಿತಗೊಳಿಸಿಕೊಂಡವರಲ್ಲ. ಇವರದ್ದು ಸದಾ ಬಡವರ, ನೊಂದವರ, ತುಳಿತಕ್ಕೊಳಗಾದವರಿಗೆ ತುಡಿಯುವ ಮನಸ್ಸು. ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನೆಲಸಿರುವ ಇವರು ಆ ಭಾಗದ ಬಡವರ, ದುರ್ಬಲರ ಸಂಕಷ್ಟಗಳಿಗೆ ಸ್ಪಂದಿಸುತ್ತಲೇ ಬಂದವರು. ಜನಸಾಮಾನ್ಯರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಶ್ರಮಿಸುತ್ತಲೇ ಇದ್ದಾರೆ.
ನೂರಾರು ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ, ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲರ ವೇತನ ಕೊಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿರುವ ನಾಗರಾಜು ಅವೆಲ್ಲವನ್ನೂ ತೆರೆಮರೆಯಲ್ಲಿದ್ದುಕೊಂಡೇ ಮಾಡಿದವರು. ಗಾರ್ಮೆಂಟ್ ಉದ್ಯೋಗಿಗಳ ನೆರವಿಗೆ ಹೋರಾಟ ರೂಪಿಸಿದ್ದಲ್ಲದೆ, ಹೋಟೆಲ್ ಕಾರ್ಮಿಕರ ಹಕ್ಕುಗಳಿಗೆ ದಶಕಗಳಿಂದ ಹೋರಾಡುತ್ತಲೇ ಬಂದ ನಾಗರಾಜು ಭಿನ್ನವಾಗಿ ನಿಲ್ಲುತ್ತಾರೆ.
ನಾಗರಾಜು ಅವರ ಸಮಾಜಮುಖಿ ಚಿಂತನೆ ಮತ್ತು ಜನಮುಖಿ ಕಾರ‍್ಯಗಳನ್ನು ಗಮನಿಸಿದ ನಾರಾಯಣಗೌಡರು ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಅಗ್ರಹಾರ ದಾಸರಹಳ್ಳಿ ವಾರ್ಡ್‌ನಿಂದ ಕರವೇ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಸಿದ್ದರು.
ಕರವೇಯಂಥ ಬೃಹತ್ ಆಲದ ಮರದಲ್ಲಿ ಎ.ಎಸ್.ನಾಗರಾಜು ಅವರಂಥ ಅದೆಷ್ಟೋ ಬಿಳಲುಗಳಿವೆ. ಪ್ರತಿಯೊಬ್ಬರದ್ದೂ ಒಂದೊಂದು ದಂತಕಥೆ. ಪ್ರತೀ ಹೋರಾಟಗಾರನದ್ದೂ ಒಂದೊಂದು ಯಶೋಗಾಥೆ...ಇಂಥ ಬಿಳಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿ, ಕರವೇ ಮತ್ತಷ್ಟು ಬೆಳೆಯಲಿ...

No comments:

Post a Comment