Saturday, January 8, 2011

ಕನ್ನಡ ಮೊದಲ ಸೂಫಿ ಕವಿ ಖಾದರಿ ಪೀರಾ



ರಂಜಾನ್ ದರ್ಗಾ

ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ (೧೮೨೨-೧೮೯೬) ಅವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದವರು. ಕನ್ನಡದ ಮೊದಲ ಮುಸ್ಲಿಂ ತತ್ತ್ವಪದಕಾರರಾದ ಗುಲಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಚೆನ್ನೂರು ಜಲಾಲಸಾಹೇಬರು ಇವರ ಹಿರಿಯ ಸಮಕಾಲೀನರು. (೧೭೭೦-೧೮೫೦) ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜನಮನ ಸೂರೆಗೊಂಡ ತತ್ತ್ವಪದಕಾರ ಶಿಶುನಾಳ ಶರೀಫರು (೧೮೧೯-೧೮೮೯) ಇವರ ಸಮಕಾಲೀನರು. ಈ ಮೂವರು ಕನ್ನಡದಲ್ಲಿ ಬರೆದ ಮೊದಲ ಮುಸ್ಲಿಂ ಕವಿಗಳಾಗಿದ್ದಾರೆ.
ಚೆನ್ನೂರ ಜಲಾಲಸಾಹೇಬರ ಮೂರು ತತ್ತ್ವಪದಗಳು ಸಿಕ್ಕಿವೆ. ಹಿಂದುಗಳು ಮತ್ತು ಮುಸಲ್ಮಾನರನ್ನು ಅವರು ಭಾವೈಕ್ಯದ ಕಡೆಗೆ ಸೆಳೆದರು. ’ಮಾನವಕುಲದ ಮೂಲ ಒಂದೇ’ ಎಂದು ತಿಳಿಸಿದರು. ಸೂಫಿ ಇಸ್ಲಾಂ ತತ್ತ್ವ, ಶರಣರ ನಡೆ ನುಡಿ ಸಿದ್ಧಾಂತ ಮತ್ತು ಕಳಸದ ಗುರು ಗೋವಿಂದಭಟ್ಟರಿಂದ ಸಂಪಾ ದಿಸಿದ ಉಪನಿಷತ್ ಜ್ಞಾನದ ಮೂಲಕ ಶಿಶುನಾಳ ಶರೀಫರು ನಿರ್ಗುಣ ನಿರಾಕಾರ ಬ್ರಹ್ಮನೆನಿಸಿದ ಪರಮಾತ್ಮನನ್ನು ಅನುಭಾವಿಸಿದರು. ’ಬೋಧ ಒಂದೇ ಬ್ರಹ್ಮನಾದ ಒಂದೇ’ ಎಂದು ಸಾರಿದರು. ಗುರು ಖಾದರಿ ಪೀರಾ ಅವರು ಶರಣ ಮತ್ತು ಸೂಫಿ ತತ್ತ್ವದ ಮೂಲಕ ಅದ್ವೈತವನ್ನು ಸಾಧಿಸಿದರು. ’ಮಾನವಕುಲದ ಏಕತೆ ಮತ್ತು ಮಾನವರ ಒಳಗೇ ದೇವರಿದ್ದಾನೆ’ ಎಂಬುದರ ಕುರಿತು ಅವರು ಮನಮುಟ್ಟುವಂತೆ ಬರೆದ ೨೫೫ ತತ್ತ್ವಪದಗಳು ಸಿಕ್ಕಿವೆ. ಅವುಗಳಲ್ಲಿ ಕೆಲವೊಂದು ಉರ್ದು ಭಾಷೆಯಲ್ಲಿವೆ ಕೆಲವೊಂದು ಉರ್ದು ಮಿಶ್ರಿತ ಕನ್ನಡ ಭಾಷೆಯಲ್ಲಿವೆ. ಉಳಿದ ಬಹುಪಾಲು ತತ್ತ್ವಪದಗಳು ರಾಯಚೂರು ಭಾಗದ ಜನಪದ ಕನ್ನಡದಲ್ಲಿವೆ. ನಿಜಾಂ ಆಡಳಿತದಿಂದಾಗಿ ಅಂದಿನ ದಿನಗಳಲ್ಲಿ ಉರ್ದು ಭಾಷೆಯ ಪ್ರಭಾವವಿರುವ ಆ ಪ್ರದೇಶದಲ್ಲಿ ಈ ಸೂಫಿಸಂತ ಕನ್ನಡದಲ್ಲಿ ಬರೆದದ್ದು ಕನ್ನಡವನ್ನು ಕಡೆಗಣಿಸುವವರ ಕಣ್ಣುತೆರೆಸುವಂಥದ್ದಾಗಿದೆ.
ಈ ಮೂವರು ತತ್ತ್ವಪದಕಾರರ ಆಶಯ ಒಂದೇ ಆಗಿತ್ತು. ಆದರೆ ಗುರು ಖಾದರಿಪೀರಾ ಅವರು ಇಸ್ಲಾಂ ತತ್ತ್ವಗಳ ರಹಸ್ಯವನ್ನು ಭೇದಿಸಿ ಕನ್ನಡಿಗರಿಗೆ ಮಾನವ ಏಕತೆಯ ಮಹತ್ವವನ್ನು ತಿಳಿಸಿದ್ದು ವಿಶಿಷ್ಟವಾಗಿದೆ. ಅಹಂ ಬ್ರಹ್ಮಾಸ್ಮಿ (ನಾನೇ ದೇವರು) ಎಂದು ಶಂಕರಾಚಾರ್ಯರು ಹೇಳಿದರೆ. ’ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂದು ಬಸವಣ್ಣನವರು ತಿಳಿಸಿದರು. ’ನಾನು ದೇವರಲ್ಲ ಆದರೆ ನನ್ನೊಳಗಿನ ದೇವರ ದಾಸ ನಾನು’ ಎಂಬದು ಇದರ ಅರ್ಥ. ಇದೇ ವಿಚಾರವನ್ನು ಪವಿತ್ರ ಕುರಾನ್ ತಿಳಿಸುತ್ತದೆ ಎಂಬುದನ್ನು ನಮಗೆ ತೋರಿಸಿಕೊಟ್ಟವರು ಮತ್ತು ಆ ಮೂಲಕ ಸೂಫಿಗಳ ಪ್ರೇಮತತ್ತ್ವವನ್ನು ಸಾರಿದವರು ಗುರು ಖಾದರಿಪೀರಾ ಅವರು.
"ವನಹನು ಅಕ್ರಬಮಿನ್ ಹಬ್‌ಲಿಲ್ ವರೀದ್ ಎಂಬ ಕುರಾನ್ ವಾಕ್ಯ ’ದೇವರು ಕಾಯದಲ್ಲಿ ಇದ್ದಾನೆ’ ಎಂಬ ಭಾವಾರ್ಥವನ್ನು ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೇ ಗುರು ಪೀರಾ ಅವರು ಕನ್ನಡದಲ್ಲಿ ಹೀಗೆ ಹೇಳಿದ್ದಾರೆ: "ನನ್ನ ಮನೆಯಲ್ಲಿ ಇದ್ದಾನೊ ನಲ್ಲಾ; ಇವನೇ ಅವನೆಂದು ತಿಳಿಯಲಿಲ್ಲಾ
ಗುರು ಖಾದರಿಪೀರಾ ಅವರು ಕನ್ನಡ, ಹಿಂದಿ, ಉರ್ದು, ಸಂಸ್ಕೃತ, ಪಾರ್ಸಿ ಮತ್ತು ಅರಬಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಣತರಾಗಿದ್ದರು. ಆದರೆ ಕನ್ನಡದಲ್ಲಿ ಸೂಫಿ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಬಹಳ ಆಸಕ್ತಿ ವಹಿಸಿದರು.
ಅನ ಅಲ್ ಹಖ್ (ನಾನೇ ಸತ್ಯ) ಎಂದು ಹೇಳಿದ ಇರಾನಿನ ಸೂಫಿ ಸಂತ ಮನಸೂರ್ ಅಲ್ ಹಲ್ಲಾಜ್ (೮೫೮-೯೨೨) ನನ್ನು ದೈವನಿಂದನೆಯ ಆರೋಪ ಹೊರಿಸಿ ಇರಾಕ್ ರಾಜಧಾನಿ ಬಗದಾದ್‌ನಲ್ಲಿ ಗಲ್ಲಿಗೇರಿಸಲಾಯಿತು. ’ಸತ್ಯ ಎಂಬುದು ಅಲ್ಲಾಹನ ೯೯ ಹೆಸರುಗಳಲ್ಲಿ ಒಂದಾಗಿರುವುದರಿಂದ ಮನಸೂರ್ ಹೇಳುವ ಸಾಲಿನ ಅರ್ಥ ’ನಾನೇ ದೇವರು’ ಎಂದು ಆಗುತ್ತದೆ ಎಂದು ಮೂಲಭೂತವಾದಿಗಳು ಪ್ರತಿಪಾದಿಸಿದರು. ಈ ಕಾರಣದಿಂದಲೇ ಅವನನ್ನು ಗಲ್ಲಿಗೇರಿಸಲಾಯಿತು. ಗುರು ಖಾದರಿಪೀರಾ ಕೂಡ ಇಂಥ ಪರಂಪರೆಗೆ ಸೇರಿದ ಸೂಫಿಸಂತ. ಈ ಹಿನ್ನೆಲೆಯಲ್ಲೇ ಅವರು ಇಸ್ಲಾಂ ತತ್ತ್ವಜ್ಞಾನವನ್ನು ವ್ಯಾಖ್ಯಾನಿsಸಿದರು.
ಒಬ್ಬನೇ ದೇವರು. ಆದರೆ ಮಾನವರೆಲ್ಲರಲ್ಲಿ ಆತ ಇರುವುದರಿಂದ ಎಲ್ಲರೂ ದೇವರು. ಎಲ್ಲರಲ್ಲಿ ದೇವರಿರುವುದರಿಂದ ಅವನನ್ನು ಸ್ವರ್ಗದಲ್ಲಿ, ಕಾಬಾ-ಕಾಶಿಯಲ್ಲಿ ಅಥವಾ ಮಂದಿರ-ಮಸೀದಿಗಳಲ್ಲಿ ಹುಡುಕಬೇಕಿಲ್ಲ. ಆತ ಇರುವುದು ದೇಹ ಎಂಬ ಮಂದಿರದೊಳಗೆ ಎಂಬುದು ಖಾದರಿಪೀರಾ ಅವರ ಅಚಲ ನಂಬಿಕೆಯಾಗಿತ್ತು. ಹೀಗೆ ಅವರ ಏಕದೇವೋಪಾಸನೆಯ ಪರಿಕಲ್ಪನೆ ಪ್ರತಿಯೊಬ್ಬ ಮಾನವನೊಳಗಿನ ಘನದ ಮೂಲಕ ಮಾನವನ ಘನತೆಯನ್ನು ಎತ್ತಿಹಿಡಿಯುವಂಥದ್ದಾಗಿದೆ.
ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್ ಅನ್ನು ಅವರು ಕೂಲಂಕಷವಾಗಿ ಅಧ್ಯಯನ ಮಾಡಿದರು. ಆ ಮೂಲಕ ಇಸ್ಲಾಮಿನ ಮಾನವೀಯ ಪರಂಪರೆಯ ವಕ್ತಾರರಾದರು. ಆ ಮೂಲಕ ಸೂಫಿ ಜೀವಕಾರುಣ್ಯ ಮತ್ತು ಪ್ರೇಮತತ್ತ್ವವನ್ನು ತಮ್ಮ ತತ್ತ್ವಪದಗಳ ಮೂಲಕ ಸಾರಿದರು. ಶರಣರ ವಚನಗಳ ಅಧ್ಯಯನದೊಂದಿಗೆ ವೇದೋಪನಿಷತ್ತುಗಳ ಅಧ್ಯಯನವನ್ನೂ ಮಾಡಿದರು. ವೈದಿಕರ ಜಡ ವಿಚಾರಗಳನ್ನು ದೂರ ಸರಿಸಿ, ಮಾನವೀಯ ಚಿಂತನೆಗಳನ್ನು ಸ್ವೀಕರಿಸಿ, ಶರಣರ ತತ್ತ್ವಕ್ಕೆ ಮಾರುಹೋಗಿ ಸೂಫಿ ತತ್ತ್ವದ ಜೊತೆ ಸಮೀಕರಿಸಿದರು. ಸೂಫಿ, ಶರಣ, ಸಂತ ಮತ್ತು ದಾಸರ ತತ್ತ್ವಗಳೊಳಗಿನ ಜೀವಪರ ನಿಲವನ್ನು ಎತ್ತಿಹಿಡಿದ ಗುರು ಖಾದರಿಪೀರಾ ಅವರು ಈ ನಾಲ್ಕೂ ವಿಚಾರಧಾರೆಗಳನ್ನು ತತ್ತ್ವಪದಕಾರರಾಗಿ ಸ್ವೀಕರಿಸಿದ್ದಾರೆ. ಇವುಗಳ ಒಳತೋಟಿಯ ಪ್ರಜ್ಞೆಯೊಂದಿಗೆ ಅನೇಕ ಕಡೆಗಳಲ್ಲಿ ಇವುಗಳನ್ನು ಸಮಾನಾರ್ಥದಲ್ಲಿ ಬಳಸಿದ್ದಾರೆ. ಅಷ್ಟೇ ಅಲ್ಲದೆ ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ. ಹೀಗಾಗಿ ಅವರ ತತ್ತ್ವಪದಗಳು ಸೂಫಿ ಮತ್ತು ಶರಣ ತತ್ತ್ವಗಳ ಮಹಾಸಂಗಮವಾಗಿವೆ.
೧೯ನೇ ಶತಮಾನದ ಅಂತ್ಯದವರೆಗೆ ಕನ್ನಡಿಗರಿಗೆ ವಚನಗಳು ಪ್ರಕಟಿತ ಗ್ರಂಥರೂಪದಲ್ಲಿ ಲಭ್ಯವಿರಲಿಲ್ಲ. ವಚನಕಟ್ಟುಗಳು ಪೂಜೆಯ ವಸ್ತುಗಳಾಗಿ ಪರಿಣಮಿಸಿದ್ದವು. ಇಂಥ ಸ್ಥಿತಿಯಲ್ಲಿ ಗುರು ಖಾದರಿಪೀರಾ ಅವರು ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅವುಗಳಲ್ಲಿನ ತತ್ತ್ವ ಎಲ್ಲ ದೃಷ್ಟಿಯಿಂದಲೂ ಸೂಫಿತತ್ತ್ವಕ್ಕೆ ಸಮನಾಗಿದೆ ಎಂಬುದನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ತಾವೊಬ್ಬ ಬಸವಣ್ಣನ ಅನುಯಾಯಿಯಾಗಿದ್ದು ಬಸವಣ್ಣನೇ ತಮ್ಮ ಪ್ರಾಣ ಎಂದು ಸಾರಿದ್ದಾರೆ. ಅವರ ವಿಚಾರಗಳು ಮುಖ್ಯವಾಗಿ ಬಸವಣ್ಣನವರ ವಿಚಾರಗಳೊಂದಿಗೆ ಬಹಳಷ್ಟು ಸಾಮ್ಯತೆಯನ್ನು ಹೊಂದಿವೆ. ’ನಮ್ಮೊಳಗಿನ ಘನದ ಪೂಜೆ ಮಾತ್ರ ನಿಜವಾದ ಪೂಜೆ’ ಎಂಬುದು ಇವರಿಬ್ಬರ ನಿಲವಾಗಿದೆ.
"ಖಾದರಿಪೀರಾ ಅವರ ಪೂರ್ವಜರು ಪೈಗಂಬರರ ಅಳಿಯ ಹಜರತ್ ಅಲಿ ಅವರ ವಂಶಸ್ಥರು. ’೭೦೦ ವರ್ಷಗಳಷ್ಟು ಹಿಂದೆ ಇರಾಕ್ ರಾಜಧಾನಿ ಬಗದಾದ್‌ನಿಂದ ಖ್ಯಾತ ಸೂಫಿಸಂತ ಮಹಬೂಬೇ ಸುಬಹಾನಿ ಅವರ ಮೊಮ್ಮಗ ಸೈಯ್ಯದ್ ವಲಿ ಉಲ್ಲಾ ಷಾ ಖಾದರಿ ಅವರು ತಮ್ಮ ೧೩ನೇ ವಯಸ್ಸಿನಲ್ಲಿ ಒಂಟಿಯಾಗಿ ಭಾರತಕ್ಕೆ ಬಂದರು...
... .. ಸಾಲಗುಂದಾ ಗ್ರಾಮದಲ್ಲಿ ಸೈಯದ್ ಷಾ ಮೊಹಿಯುದ್ದೀನ್ ಖಾದರಿ ಮತ್ತು ಬಿಜಾಪುರದ ಸೂಫಿ ಹಾಷಂಪೀರ ಸಂತತಿಯ ಯೂಸುಫ್ ಹುಸೇನಿಯವರ ಪುತ್ರಿ ಸೈಯದಾ ಸೋಗರಾಬೀ ಸಾಹೇಬಬೀಬಿ ಪುಣ್ಯ ದಂಪತಿಗಳ ಉದರದಲ್ಲಿ ದಿನಾಂಕ ೧೧.೫.೧೮೨೨ ಸೋಮವಾರದಂದು ಆಲಾ ಹಜರತ್ ಇಮಾಮ್ ಸೈಯದ್ ಅಬ್ದುಲ್ ಖಾದಿರ್ ಖಾದರಿ ಹಸನಿ ಉಲ್ ಹುಸೈನಿ ಹಾಷಮಿ (ಗುರು ಖಾದರಿಪೀರಾ) ಅವರು ಜನಿಸಿದರು.. .. .. .. ಸಹಾನುಭೂತಿ, ಮಾನವತಾವಾದ, ಸರ್ವಧರ್ಮ ಸಮಾನತೆ ಮತ್ತು ಜಾತ್ಯತೀತತೆಯನ್ನು ಮೈಗೂಡಿಸಿಕೊಂಡ ಜ್ಞಾನಾಕಾಂಕ್ಷಿಗಳಾದ ಇವರು ತಂದೆಯವರಿಂದ ಖಿಲಾಪತ್ (ಜ್ಞಾನದೀಕ್ಷೆ) ಪಡೆದು ಗುರುಪೀಠವನ್ನು ಅಲಂಕರಿಸಿದರು.
.. .. ತಮ್ಮ ೨೨ನೇ ವಯಸ್ಸಿನಲ್ಲಿ ಬಿಜಾಪುರದ ಮಹಾನ್ ಸೂಫಿಯಾದ ಅಮೀನುದ್ದೀನ್ ಆಲಾ ಶೇರ್ ಏ ಖುದಾ ಬಿಜಾಪುರಿ ಅವರ ಸಂತತಿಯ ಅಸದುಲ್ಲಾ ಹುಸೈನಿಯವರ ಪುತ್ರಿ ಸೈಯದಾ ಬೀಬಿ ಜೈನಬ್ ಅವರ ಸಂಗಡ ಇವರ ವಿವಾಹ ನೆರವೇರಿತು...
.. .. ಉರ್ದು ಭಾಷೆಯಲ್ಲಿ ’ಫೈಜುಲ್ ಹೈದರಿಯಾ’, ಕನ್ನಡ ಭಾಷೆಯಲ್ಲಿ ’ಜ್ಞಾನಸಮುದ್ರ ಮತ್ತು ಹಿಂದಿ ಭಾಷೆಯಲ್ಲಿ ’ಸಾಕ್ಷಾತ್ಕಾರ’ ಎಂಬ ಪದ್ಯರೂಪದ ಮಹಾನ್ ಕೃತಿಗಳನ್ನು ರಚಿಸಿದರು. ಈ ಗ್ರಂಥಗಳಲ್ಲಿ ವ್ಯಕ್ತವಾದ ಎಲ್ಲಾ ಪದ್ಯಗಳ ಕೊನೆಯಲ್ಲಿ ಗುರುಪೀರಾ ಎಂಬ ಅಂಕಿತನಾಮದಿಂದ ಮಹಬೂಬೇ ಸುಬಹಾನಿ ಪೀರಾನೇಪೀರ್ ದಸ್ತಗೀರ್ ಅವರಿಗೆ ಅರ್ಪಣೆ ಮಾಡಿ ಕೊನೆಗೊಳಿಸಿದ್ದಾರೆ" ಎಂದು ಅವರ ಮೊಮ್ಮಗ ಡಾ. ಎಸ್.ಎ. ಖಾದರಿ (ಹಾಷಮಿ) ಅವರು ’ಜ್ಞಾನಸಮುದ್ರ ಗ್ರಂಥದ ಆರಂಭದಲ್ಲಿ ಗ್ರಂಥಕರ್ತ ಶ್ರೀಗುರು ಖಾದರಿಪೀರಾ ಅವರ ಕುರಿತು ಬರೆದ ಪರಿಚಯ ಲೇಖನದಲ್ಲಿ ತಿಳಿಸಿದ್ದಾರೆ.
"ಜ್ಞಾನಸಮುದ್ರ ಗ್ರಂಥದಲ್ಲಿನ ತತ್ತ್ವಪದಗಳನ್ನು ಗುರು ಖಾದರಿಪೀರಾ ಅವರ ಶಿಷ್ಯರಾಗಿದ್ದ ದಿವಂಗತ ಮದಿರೆ ತಿಮ್ಮಪ್ಪ ಮತ್ತು ಅವರ ಮಗ ರಂಗಪ್ಪ ಸಾಲಗುಂದ ಅವರು ಏಕತಾರದೊಂದಿಗೆ ಸುಶ್ರಾವ್ಯವಾಗಿ ಹಾಡುವುದನ್ನು ೧೯೭೧ರಲ್ಲಿ ಕಂಡು ಎಸ್.ಎ. ಖಾದರಿ ಅವರು ಅಕರ್ಷಿತರಾದರು. ೧೯೭೩ರಲ್ಲಿ ಶಿಷ್ಯವೃಂದದ ಸಹಕಾರದಿಂದ ಭಜನಾ ಮಂಡಳಿ ರಚಿಸಿ ಈ ತತ್ತ್ವಪದಗಳನ್ನು ಸಿಂಧನೂರು, ಆಲೂರು, ಆದವಾನಿ, ಹೊಸಪೇಟೆ ಮತ್ತು ಬಳ್ಳಾರಿ ತಾಲ್ಲೂಕುಗಳಲ್ಲಿ ಜನಪ್ರಿಯಗೊಳಿಸಿದರು. ಕ್ರಿಸ್ತ ಶಕ ೨೦೦೦ದಲ್ಲಿ ಜ್ಞಾನಸಮುದ್ರ ಗ್ರಂಥವನ್ನು ಪ್ರಕಟಿಸಿದರು" ಎಂದು ಆರ್. ಅಬ್ದುಲ್ ವಾಹಬ್ ಖಾದರಿ ಅವರು ಜ್ಞಾನಸಮುದ್ರ ಗ್ರಂಥದ ಬೆನ್ನುಡಿಯಲ್ಲಿ ಬರೆದಿದ್ದಾರೆ.

’ಇಸ್ಲಾಂ ಎಂದರೆ ಶಾಂತಿಯೊ ಜಾಣ|
ತಿಳಿದು ನುಡಿಯುವುದೇ ಸುಜ್ಞಾನ|
ಹುರುಫೆ ಮುಖತ್ತಿಯಾತ ತಿಳಿಯದೆ
ಹೆಂಗ ತಿಳಿಯತೈತೊ ಖುರಾನ||’
ಎಂದು ಗುರು ಖಾದರಿಪೀರಾ ಅವರು ಬರೆದು ಮುಲ್ಲಾ ಮೌಲ್ವಿಗಳಿಗೆ ಸವಾಲು ಹಾಕಿದ್ದಾರೆ. ’ಮೌಲ್ವಿಗಳಿಗೆ ಗೊತ್ತಿದೆ; ಖರಾನಿನಲ್ಲಿ ಹುರುಫೇ ಮುಖತ್ತಿಯಾತ ಎನ್ನುವ ೨೯ ಸಂಕೇತ ಅಕ್ಷರಗಳಿವೆ. ಅಲೀಫ್, ಲಾಮ್, ಮೀಂ, ಯಾಸೀನ್ ಮುಂತಾದ ಈ ಸಂಕೇತ ಅಕ್ಷರಗಳಿಗೆ ಎಲ್ಲಿಯೂ ಅರ್ಥ ಸಿಗುವುದಿಲ್ಲ. ಸೂಫೀಜಂನಲ್ಲಿ ಇವುಗಳಿಗೆ ಗೌಪ್ಯವಾಗಿ ಅರ್ಥ ತಿಳಿಸಲಾಗುವುದು. ಇದರಿಂದ ನಮಗೆ ತಿಳಿಯುವುದೇನೆಂದರೆ ಗುರುಪೀರಾರವರಿಗೆ ಇವುಗಳ ಅರ್ಥ ತಿಳಿದಿದೆ ಎಂದು. ಆದುದರಿಂದ ಹುರಫೇ ಮುಕತ್ತಿಯಾತ ತಿಳಿಯದೆ ಖುರಾನ ತಿಳಿಯುವುದಿಲ್ಲಾ ಎಂದು ಸಾಧಿಕ್ ಹುಸೇನ್ ಖಾದರಿ ಅಲ್ ಅನ್ಸಾರಿ ಅವರು ’ಜ್ಞಾನಸಮುದ್ರಕ್ಕೆ ಬರೆದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
"ಮಾನವಧರ್ಮಕ್ಕೆ ಜಯವಾಗಲಿ; ಮಾನವರಿಂದ ಮಾನವರು ಉದ್ಧಾರವಾಗಲಿ" ಎಂಬ ಸಂದೇಶದೊಂದಿಗೆ ಗುರು ಖಾದರಿಪೀರಾ ಅವರು ಗ್ರಾಮ್ಯಭಾಷೆಯಲ್ಲಿ ತತ್ತ್ವಪದಗಳನ್ನು ಬರೆದು ಖುರಾನ್ ತಿರುಳನ್ನು ಮತ್ತು ಶರಣರ ವಚನಗಳ ತಿರುಳನ್ನು ಒಂದಾಗಿಸಿ ಲೋಕಾರ್ಪಣೆ ಮಾಡಿದ್ದಾರೆ.
ತತ್ತ್ವಪದಗಳು ಜನಪದ ತತ್ತ್ವಜ್ಞಾನವನ್ನೂ ಒಳಗೊಂಡಿರುತ್ತವೆ. ವಿಶ್ವಮಾನ್ಯವಾದ ಧರ್ಮತತ್ತ್ವಗಳನ್ನು ಜನಪದ ತತ್ತ್ವಜ್ಞಾನದೊಂದಿಗೆ ಕೂಡಿಸುವುದರ ಮೂಲಕ ರಾಯಚೂರು ಭಾಗದ ಕನ್ನಡ ಜನರ ಆಡುಭಾಷೆಯಲ್ಲಿ ಸಾಮರಸ್ಯದ ಸಾಹಿತ್ಯ ಸೃಷ್ಟಿಸಿದ ಕೀರ್ತಿ ಗುರು ಖಾದರಿಪೀರಾ ಅವರಿಗೆ ಸಲ್ಲುತ್ತದೆ. ಆ ಮೂಲಕ ಮೂಲಭೂತಿವಾದಿಗಳು ಅರಿಯದಂಥ ಧರ್ಮದ ತಿರುಳನ್ನು ಜನಸಾಮಾನ್ಯರಿಗೆ ನೀಡಿ ಅವರ ಬದುಕನ್ನು ಅರ್ಥಪೂರ್ಣಗೊಳಿಸಿದ್ದಾರೆ.

"ಗುಡಿಗುಂಡಾರದ ಜಗಳವ್ಯಾಕೊ ಯಪ್ಪ ಮಾನವಗೆ ಮಾನವನು ತಾ ತಿಳಿಯಬೇಕು|
ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ||
ಶಿವ ಕಾಣಲಿಲ್ಲ ನೀ ಶಿವನು; ನಿನ್ನ ದೇಹದ ಗುಡಿಯೊಳಗೆ ಕುಂತಾನು ಅವನು|
ನೀನೆ ಗುಡಿಯಾಗಿ ಗುಡಿ ಕಟ್ಟುವದ್ಯಾಕೊ ಸಾಕಪ್ಪ ಸಾಕು ನಿನ್ನ ಗುಡಿಜನಗಳ ಸಾಕು||
ನಿರಾಕಾರ ನಿರಾಹಾರ ಶಿವಗ ಯಪ್ಪ ನಿನ್ನಂತೆ ರೂಪ ಮಾಡಿ ಅವಗ|
ಎಲ್ಲ ನಿನ್ನ ಲಾಭಕ್ಕಾಗಿ ಮಾಡಿಟ್ಟು ಅವಗ ಮೋಸ ವಂಚನೆಯ ಮಂತ್ರ ಹೇಳುವುದ್ಯಾಕೊ||
ಎಲ್ಲರಿಗೆ ಗುರು ಒಬ್ಬ ಸಾಕೊ ಭೇದ ಮಾಡುವ ಕೆರಗುರು ನಮಗ್ಯಾಕಬೇಕು|
ಭೇದ ಮಾಡುವ ಜಗದ್ಘಾತಕರ‍್ಯಾಕೊ ಮಾನವ ಪ್ರೀತಿಯೆ ಮಾನವ ತಿಳಿಯಬೇಕು||
ಪ್ರೀತಿಯ ರೂಪಧಾರಿ ಅವನು; ನೀವು ಪ್ರೀತಿ ಮಾಡಿರಿ ಸಿಗುವನವನು|
ಪ್ರೀತಿಯಿಂದಲೇ ಭಕುತಿ, ಪ್ರೀತಿಯಿಂದಲೇ ಮುಕುತಿ, ಪ್ರೀತಿ ಇಲ್ಲದ ಬದುಕು ಬಾಳುವುದ್ಯಾಕೊ||
ಜಾತಿಭೇದಗಳಿಲ್ಲ ಶಿವಗ ಯಪ್ಪಾ ಹೆಂಡರಿಲ್ಲ ಮಕ್ಕಳಿಲ್ಲ ಅವಗ|
ನೋಡಿಬಂದವರಿಲ್ಲಿ ಹೇಳಲಿಲ್ಲ ನಮಗ; ಕರುಣಾಳು ಗುರುಪೀರ ಭೇದಬುದ್ಧಿ ನಮಗ್ಯಾಕೊ||
ಸಾಲಗುಂದಿಪುರದೊಳಗೆ ಖಾತ್ರಿ ನೀವು ಮರಿಯದೆ ಮಾಡಬೇಕು ಪ್ರೀತಿ|
ಗುರುಪೀರ ಖಾದರಿಯ ಪ್ರೀತಿಯೇ ಬಲು ಖಾತ್ರಿ; ಪ್ರೀತಿ ಇಲ್ಲದ ಬದುಕು ಬಾಳುವದ್ಯಾಕೊ||"
ಭೇದ ಮೂಡಿಸುವ ಯಾವುದನ್ನೂ ಖಾದರಿಪೀರಾ ಅವರು ಸ್ವೀಕರಿಸುವುದಿಲ್ಲ. ಸೌಹಾರ್ದಕ್ಕಾಗಿ ಅವರು ಏನನ್ನಾದರೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಪ್ರೀತಿಯಿಂದ ಮಾತ್ರ ಸಹಾರ್ದ ಸಾಧ್ಯ ಎಂಬುದನ್ನು ಅವರು ಪದೆ ಪದೆ ಒತ್ತಿ ಹೇಳಿದ್ದಾರೆ. ಕುಲ, ಗೋತ್ರ, ಜಾತಿಗಳು ಮಾನವನ ಏಕತೆಗೆ ಬಹುದೊಡ್ಡ ಕಂಟಕಗಳಾಗಿವೆ ಎಂಬುದನ್ನು ಮನಂಬುಗುವಂತೆ ತಿಳಿಸಿದ್ದಾರೆ.
೧೫೦ ವರ್ಷಗಳಷ್ಟು ಹಿಂದೆಯೇ ಅವರು ಗುಡಿಗುಂಡಾರಗಳ ಜಗಳಗಳ ಕುರಿತು ಪ್ರಸ್ತಾಪಿಸಿದ್ದಾರೆ. ಗುಡಿವಿವಾದಗಳಿಂದ ಈ ದೇಶ ಇನ್ನೂ ಮುಕ್ತವಾಗಿಲ್ಲ. ಸಾವಿರಾರು ಜನರು ಈ ಘರ್ಷಣೆಗಳಿಗೆ ಬಲಿಯಾಗಿದ್ದಾರೆ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ಹಾನಿಯಾಗಿದೆ. ವಿವಿಧ ಸಮಾಜಗಳನ್ನು ಒಂದುಗೂಡಿಸದೆ ದೇಶದ ಉದ್ಧಾರವಾಗುವುದಿಲ್ಲ. ಅದಕ್ಕಾಗಿ ಗುರು ಖಾದರಿಪೀರಾ ಅವರಂತೆ ಪ್ರತಿಯೊಬ್ಬರಲ್ಲಿ ದೇವರನ್ನು ಕಂಡು ಪ್ರತಿಯೊಬ್ಬರ ಘನತೆ ಗೌರವಗಳನ್ನು ಮಾನ್ಯ ಮಾಡುತ್ತ. ’ಮಾನವಕುಲ ಒಂದೇ’ ಎಂದು ದಯಾಭಾವ ಮತ್ತು ಪ್ರೇಮಭಾವದೊಂದಿಗೆ ಬದುಕುವುದರಿಂದ ಮಾತ್ರ ಈ ದೇಶ ಔನ್ನತ್ಯಕ್ಕೆ ಏರಲು ಸಾಧ್ಯ.

"ಬಂಗಾರ ಗಟ್ಟಿಯಿಂದ ತಮ್ಮ ಇಲ್ಲಿ ವಸ್ತ ಮಾಡ್ಯಾರಲ್ಲ|
ಬಂಗಾರ ಬ್ಯಾರೆ ವಸ್ತ ಬ್ಯಾರೆ ಎಂದು ಹೇಳತಾರ ಜನರೆಲ್ಲ|
ಬಂಗಾರವೆ ವಸ್ತ ವಸ್ತವೆ ಬಂಗಾರ ಮೂಲ ತಿಳಿಯಲಿಲ್ಲ||
ಸಾಲಗುಂದಿಪುರದೊಳಗೆ ಸೇರಿ ನೀ ನೋಡು ನಿನ್ನ ಮೊದಲ|
ಗುರುಪೀರಖಾದರಿ ಕೇಳಿ ತಿಳಿದು ತಾವು ನೋಡಿ ಹೇಳ್ಯಾರಲ್ಲಾ|
ಮನುಷ್ಯರೇ ದೇವರು, ದೇವರೇ ಮನುಷ್ಯರು ಬಿಚ್ಚಿ ಹೇಳಿದರೆಲ್ಲ||"
ಮನುಷ್ಯರೊಳಗೆ ದೇವರಿದ್ದಾನೆ. ಆ ದೇವರು ಮನುಷ್ಯ ರೂಪದಲ್ಲಿದ್ದಾನೆ. ಇದನ್ನು ತಿಳಿದವ ತನ್ನೊಳಗಿನ ದೇವರ ಜೊತೆ ಒಂದಾಗುತ್ತಾನೆ. ಹೀಗೆ ಒಂದಾದಾಗ ಆತ ಅಂತಃಕರಣ ಮತ್ತು ಪ್ರೇಮ ಭಾವವನ್ನು ತಾಳುತ್ತಾನೆ. ಆ ಮೂಲಕ ದೇವಸ್ವರೂಪನೇ ಆಗುತ್ತಾನೆ. ಈ ಪ್ರಕ್ರಿಯೆಯನ್ನು ಅನುಭವಿಸುವ ಮೊದಲು ಮಾನವ ರೂಪದಲ್ಲಿರುವ ನಾವು ನಿಜ ಮಾನವರಾಗಬೇಕಾಗುತ್ತದೆ. ನಿಜಮಾನವರಾದ ಮನುಷ್ಯರೇ ದೇವರು. ಹೀಗೇ ದೇವರೇ ಮನುಷ್ಯರೂಪದಲ್ಲಿರುವ ಕ್ರಮವನ್ನು ಗುರು ಖಾದರಿಪೀರಾ ಅವರು ತಿಳಿಸಿದ್ದಾರೆ.

ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕಂಡು|
ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕೂಡಿ||
ಸತ್ಯವನು ನಾ ತಿಳಕೊಂಡೆ ಜನರಿಗೆ ನಾ ಕೆಟ್ಟವ ಕಂಡೆ|
ಪ್ರೀತಿ ಮಾಡಿ ಎಲ್ಲ ಪಡಕೊಂಡೆ ಸದ್ಗುರುವಿನ ಕಂಡೆ||
ಮಾನವರು ಉನ್ನತಿಯನ್ನು ಸಾಧಿಸಬೇಕಾದರೆ ತಮ್ಮೊಳಗಿನ ದೇವರಲ್ಲಿ, ಅಂದರೆ ತಮ್ಮ ಆತ್ಮಸಾಕ್ಷಿಯಲ್ಲಿ ತಮ್ಮ ನಿಜಸ್ವರೂಪವನ್ನು ಕಂಡುಕೊಳ್ಳಬೇಕು. ಅಲ್ಲದೆ ತಮ್ಮೊಳಗಿನ ದೇವರು ಹೇಳಿದಂತೆ ಕೇಳುವುದರ ಮೂಲಕ ಆ ದೇವರೊಡನೆ ಕೂಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸಕಲಜೀವಾತ್ಮರಿಗೆ ಲೇಸನೇ ಬಯಸುವಂಥ ಮನಸ್ಸು ರೂಪುಗೊಳ್ಳುವುದು. ಆಗ ಜಾತಿ, ವರ್ಣ, ಮೇಲು, ಕೀಳು ಮುಂತಾದ ಮಾನಸಿಕ ಹೊಲಸು ಮಾಯವಾಗುವವು. ಹೀಗೆ ಮಾನವ ಉದಾತ್ತವಾಗುವನು. ಆದರೆ ವರ್ಣವ್ಯವಸ್ಥೆಯಿಂದ ಲಾಭ ಪಡೆಯುವವರು ಇಂಥ ಮಾನಸಿಕ ಸ್ಥಿತಿಗೆ ವಿರುದ್ಧವಾಗಿರುತ್ತಾರೆ. ಎಲ್ಲರೂ ಸಮಾನರಾದಾಗ ಅವರ ಅಸ್ತಿತ್ವವೇ ಉಳಿಯುವುದಿಲ್ಲ. ಹೀಗಾಗಿ ಅಂಥವರ ದೃಷ್ಟಿಯಲ್ಲಿ ಇಂಥ ಉತ್ತಮರು ಕೆಟ್ಟವರಾಗಿ ಕಾಣುತ್ತಾರೆ. ಆದರೆ ಉತ್ತಮರು ಯಾವುದಕ್ಕೂ ಎದೆಗುಂದದೆ ಜಗತ್ತನ್ನು ಪ್ರೀತಿಸುತ್ತಲೇ ಮುಂದೆ ಮುಂದೆ ಸಾಗುತ್ತ ತಮ್ಮೊಳಗಿನ ಅರಿವೆಂಬ ಸದ್ಗುರುವಾದ ದೇವರನ್ನು ಕಾಣುತ್ತಾರೆ. ಅರಿವು ಎಂದರೆ ಬೇರೆ ಅಲ್ಲ. ನಮ್ಮೊಳಗೇ ದೇವರಿದ್ದಾನೆ ಎಂಬುದೇ ಅರಿವು. ಸಕಲ ಜೀವಿಗಳಲ್ಲಿ ದೇವರಿದ್ದಾನೆ ಎಂಬುದೇ ಅರಿವು. ಈ ಕಾರಣದಿಂದ ಸಕಲಜೀವಾತ್ಮರಿಗೆ ಲೇಸನ್ನೇ ಬಯಸಬೇಕು. ಸಕಲರ ಜೊತೆ ಪ್ರೇಮಭಾವದಿಂದ ಇರಬೇಕು. ದಯೆಯೇ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕು ಎಂದು ನಾವು ನಿರ್ಧರಿಸುವಂತೆ ಮಾಡುವುದೇ ಅರಿವು.

"ದೇವರು ಒಬ್ಬನಲ್ಲೊ ಯಪ್ಪ ಬಹಳ ಬಹಳ ಮಂದಿ ಹಾರ|
ದೇವರು ಅಲ್ಲೆ ಅಲ್ಲೊ ಜಾಣ ಅವರು ಇಲ್ಲೆ ಇಲ್ಲೆ ಹಾರ||
ತೆತ್ತೀಸ ಕೋಟಿ ಎಣಿಸಿ ಹೇಳಿದರು; ಎಲ್ಲರೂ ಇಲ್ಲೇ ಹಾರ ಅವರೆ|
ನಾವಾಗಿ ಇರುತಾರ; ಹೇಳಬ್ಯಾಡ ಸತ್ಯ ಹೊಡಿಯುತಾರ||
ಹೂವಿನೊಳ್ ವಾಸನೆ, ಹಾಲಿನೊಳಗೆ ತುಪ್ಪ ಎಲ್ಲರೂ ಒಪ್ತಾರ|
ಗುರುಪೀರಾ ಖಾದರಿ ಬಿಚ್ಚಿ ಹೇಳಿದರೆ ಎಗರಿ ಬೀಳತಾರ||"
ದೇವರು ಬಹಳ ಮಂದಿ ಇದ್ದಾರೆ ಎಂದರೆ ಬಹುದೇವೋಪಾಸನೆ ಮಾಡಬೇಕೆಂದಲ್ಲ. ಪ್ರತಿಯೊಬ್ಬರು ತಮ್ಮೊಳಗಿನ ದೇವರನ್ನು ಆರಾಧಿಸಬೇಕು ಎಂದು ಅರ್ಥ. ಪ್ರತಿಯೊಬ್ಬರು ತಮ್ಮೊಳಗಿನ ದೇವರ ಜೊತೆ ಬದುಕಲು ಕಲಿತರೆ ಇಡೀ ವಿಶ್ವ ಸುಲಿಗೆಯಿಂದ, ಮೇಲುಕೀಳು ಭಾವನೆಯಿಂದ, ಹಿಂಸೆ, ಅತ್ಯಾಚಾರ, ಕೊಲೆ ಮತ್ತು ಯುದ್ಧಗಳಿಂದ ಮುಕ್ತವಾಗುತ್ತದೆ. ಹೂವಿನಲ್ಲಿ ವಾಸನೆ ಇರುವಂತೆ, ಹಾಲಿನೊಳಗೆ ತುಪ್ಪ ಇರುವಂತೆ ದೇವರು ನಮ್ಮೊಳಗೆ ಇರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಅವರವರ ಒಳಗಿರುವ ದೇವರ ಉಪಾಸನೆ ಮಾಡಬೇಕು ಮತ್ತು ಕೊನೆಗೆ ಆ ದೇವರೇ ಆಗಬೇಕು. ಆದರೆ ವಿಶ್ವಮಾನವರಾಗದೇ ಎಲ್ಲರೀತಿಯ ಶೋಷಣೆಯನ್ನು ಮಾಡುತ್ತ ಬದುಕ ಬಯಸುವವರು ಈ ಸತ್ಯ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ಇಂಥ ನಿಜತತ್ತ್ವಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇರುತ್ತಾರೆ.

"ಹೇ ತೊಗಲಿನ ಕಾಯ ಭೇದವೇಕೊ ಮಹಾರಾಯ|
ಮೈಯಲ್ಲಾ ನಿನಗೆ ಗಾಯ ನಿನ್ನಂತೆ ಅವರ ಕಾಯ||"
ಶಿವನಿರುವ ಗುಡಿಯೇ ತೊಗಲು ಮುಂದೆ ಕುಂತ ನಂದಿಯೇ|
ತೊಗಲು; ಇವನು ತೊಗಲು, ಶಿವನು ತೊಗಲು, ಅರಿವು ಎಂಬ|
ಗುರುಪೀರನೆ ತೊಗಲು||
ಇಲ್ಲಿ ಗುರು ಖಾದರಿಪೀರಾ ಅವರು ತೊಗಲನ್ನು ನಶ್ವರ ವಸ್ತುವಿನ ಸಂಕೇತವಾಗಿ ಬಳಸಿದ್ದಾರೆ. ದೇಹ ಎಂಬುದು ವಸ್ತು, ಅರಿವಿನ ಮೂಲಕ ಆ ದೇಹದೊಳಗಿನ ಚೈತನ್ಯವನ್ನು ದೇವರೆಂಬುದನ್ನು ಮನಗಾಣಬೇಕು ಎಂದು ಸೂಚಿಸಿದ್ದಾರೆ. ಈ ಸತ್ಯವನ್ನು ಹೇಳುವ ಗುರು ಕೂಡ ಇತರರಂತೆ ವಸ್ತುವೇ ಆಗಿದ್ದಾನೆ. ಆದರೆ ಪ್ರತಿಯೊಂದು ವಸ್ತುವಿನ ಒಳಗೆ ದೇವರಿದ್ದಾನೆ.

"ಪರಮ ಸುಂದರ ನೀನು, ನಿನ್ನ ಮಂದಿರ ನಾನು|
ಸುಂದರ ಮಂದಿರವು ಎರಡು ಒಂದಾಗಿರಲು||
ಕಲ್ಲು ಮೂರುತಿ ಮಾಡಿ ನಲ್ಲನೆಂದೆನುತಿರಲು|
ನಲ್ಲ ಬಂದೊಡೆ ಕಲ್ಲು ಮೂರುತಿ ಸರಿಸಲು||
ನಿನ್ನ ರಥವು ನಾನು, ರಥಕೆ ಸಾರಥಿ ನೀನು
ಎರಡು ಚಕ್ರದ ಆಟ ಇರಿಸು ಒಂದಾಗಿರಲು"
ವಸ್ತುವೆಂಬದು ಮಂದಿರ; ಅದರೊಳಗಿನ ಚೈತನ್ಯವೇ ಪರಮ ಸುಂದರ. ಅದುವೇ ಸತ್ಯ. ಅದುವೇ ಶಿವ. ಆ ಚೈತನ್ಯವೇ ಎಲ್ಲ ದೇವರುಗಳ ಮೂಲ. ಅದುವೇ ಪರಮ ಸುಂದರ. ವಸ್ತು ಎಂಬದು ಮತ್ತು ಮಾನವಕುಲ ಎಂಬದು ರಥ ಮಾತ್ರ. ಆ ಪರಮ ಸುಂದರ ಚೈತನ್ಯವೇ ಸಾರಥಿ. ಈ ವಸ್ತು ಮತ್ತು ಚೈತನ್ಯದ ಅಭೇದ್ಯ ಸಂಬಂಧವೇ ಅದ್ವೈತ.

"ಪಂಚಭೂತ ರಂಗಮಂಟಪ ರಚಿಸಿ; ಇದರೊಳು ಆತ್ಮದ ಪೀಠವ ಇರಿಸಿ ಕುಂತು|
ಕಾಣದಂತೆ ನನ್ನೊಳು ಸೂತ್ರಧಾರಿಯಾಗಿ ನೀನು ನಾನಾಗಿ ಪಾತ್ರ ಮಾಡಿದ್ಯಾ||"
ಪ್ರತಿಯೊಂದು ಜೀವ ಪಂಚಮಹಾಭೂತಗಳಿಂದಲೇ ಸೃಷ್ಟಿಯಾಗಿದೆ. ಆ ಜೀವಿಗಳೊಳಗಿನ ಆತ್ಮದ ಪೀಠದ ಮೇಲೆ ಚೈತನ್ಯವೆಂಬ ದೇವರು ಕಾಣದಂತೆ ಆತ್ಮಸಾಕ್ಷಿಯಾಗಿ ಕುಳಿತು ಬದುಕಿನ ಸೂತ್ರಧಾರಿಯಾಗಿದ್ದಾನೆ. ಆತ ಆ ಜೀವಿಯ ಪಾತ್ರ ಮಾಡುತ್ತಿದ್ದಾನೆ. ಆದ್ದರಿಂದ ಆತ್ಮಸಾಕ್ಷಿಯೇ ದೇವರು. ಜೀವಿಯು ತನ್ನ ಆತ್ಮಸಾಕ್ಷಿಯ ಆದೇಶವನ್ನು ಪಾಲಿಸಿದರೆ ದುಃಖಕ್ಕೆ ಈಡಾಗುವುದಿಲ್ಲ.

"ಎಲ್ಲ ಮಾನವರು ಒಂದೇ ಎಂಬ ನಿಜತತ್ತ್ವ ನೀ ತಿಳಿಬೇಕು|
ಭೇದ ಮಾಡದೆ ಸರ್ವ ಜನರಲ್ಲಿ ರಬ್ಬಿಲಾಲನ ನೀ ಕಾಣಬೇಕು||"
ಹೀಗೆ ಎಲ್ಲರೊಳಗೂ ಒಂದೇ ತೆರನಾದ ಆತ್ಮಸಾಕ್ಷಿ ಇರುತ್ತದೆ. ಆ ಮೂಲಕ ಎಲ್ಲರಲ್ಲೂ ಒಬ್ಬನೇ ದೇವರಿದ್ದಾನೆ. ಆ ದೇವರನ್ನು ನಮ್ಮ ಅರಿವಿನ ಕಣ್ಣುಗಳಿಂದ ಕಾಣುವುದರ ಮೂಲಕ ’ಎಲ್ಲ ಮಾನವರು ಒಂದೇ’ ಎಂಬ ಸತ್ಯವನ್ನು ಅರಿಯಬೇಕು. ಈ ನಿಜತತ್ತ್ವವನ್ನು ಅರಿತವನು ಜಾತಿ, ಧರ್ಮ, ದೇಶ ಮತ್ತು ಭಾಷೆಗಳ ಹೆಸರಿನಲ್ಲಿ ಜನರಲ್ಲಿ ಭೇದಭಾವ ಮಾಡದೆ ಎಲ್ಲರಲ್ಲೂ ದೇವರನ್ನೇ ಕಾಣುವನು. ’ತಾನು ಎಲ್ಲರೊಳಗೆ ಎಲ್ಲರೂ ತನ್ನೊಳಗೆ’ ಎಂದು ಬದುಕುವನು. ಹೀಗೆ ಬದುಕುವ ಅರಿವನ್ನು ಮೂಡಿಸುವುದೇ ನಮಾಜ (ಪ್ರಾರ್ಥನೆ) ಎಂದು ಖಾದರಿಪೀರಾ ತಿಳಿಸಿದ್ದಾರೆ. ಪ್ರಾರ್ಥನೆ ಎಂಬುದು ಸಕಲಜೀವಾತ್ಮರನ್ನು ಪ್ರೀತಿಸುವ ಮನಸ್ಸನ್ನು ರೂಪಿಸುವಂಥದ್ದು.

"ಹೊಂದಿಕೊಂಡು ಒಂದಾಗಿರಲಿಲ್ಲಾ; ಕೂಡಿ ಬಾಳಲಿಲ್ಲಾ|
ಶಾಂತಿ ಎಂಬುದೇ ಸಿಗಲಿಲ್ಲಾ ಪ್ರೀತಿ ಮಾಡಲಿಲ್ಲಾ||
ಭೇದ ಮಾಡುವರೆಲ್ಲಾ ಬಲವಿದ್ದಲ್ಲಿ ಬಾಗುವರೆಲ್ಲಾ|
ಪ್ರೀತಿ ಏನೆಂಬುದು ತಿಳೀಲಿಲ್ಲಾ ಹಾಳಾದರೆಲ್ಲಾ||"
ಪ್ರೀತಿ ಇಲ್ಲದೆ ಮಾನವನ ಮನಸ್ಸಿನಲ್ಲಿ ಶಾಂತಿ ಲಭಿಸದು. ಭಾವೈಕ್ಯದಿಂದ ಬದುಕುವ ಪ್ರಜ್ಞೆ ಮೂಡದು. ಭೇದಭವದಿಂದಾಗಿ ಬಲವುಳ್ಳವರು ಬಲಹೀನರನ್ನು ಗುಲಾಮಗಿರಿಗೆ ತಳ್ಳುವರು. ಲೋಕದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವುದು. ಹೀಗೆ ಪ್ರೀತಿಯ ಮಹತ್ವವನ್ನು ಅರಿಯದೇ ಜನರು ಹಾಳಾಗಿಹೋಗುವರು ಎಂದು ಖಾದರಿಪೀರಾ ಅವರು ಖೇದ ವ್ಯಕ್ತಪಡಿಸುತ್ತಾರೆ.

ರಾಜಭೋಗದ ದರ್ಪ ಸಿರಿ ಸಂಪತ್ತಿನ ದರ್ಪ|
ಬುದ್ಧಿವಂತಿಕೆಯ ದರ್ಪ ದೊಡ್ಡವನೆಂಬುವ ದರ್ಪ|
ಜೀವ ಹೋದಮ್ಯಾಲೆ ಏನಿಲ್ಲೊ ಮರುಳೆ||
ಪ್ರತಿಯೊಬ್ಬರು ಪ್ರತಿಕ್ಷಣವೂ ಸಾವಿನ ದವಡೆಯ ಕಡೆಗೆ ಸಾಗುತ್ತಿರುತ್ತಾರೆ. ಇದನ್ನು ಅರಿಯದೆ ಅಧಿಕಾರ, ಶ್ರೀಮಂತಿಕೆ, ಬುದ್ಧಿವಂತಿಕೆ ಮತ್ತು ದೊಡ್ಡಸ್ತಿಕೆಯ ದರ್ಪದಿಂದ ಬದುಕುವವರು ಕೂಡ ಎಲ್ಲವನ್ನೂ ಇಲ್ಲೇ ಬಿಟ್ಟು ಸಾಯುವರು. ಅವರ ಸೊಕ್ಕು ಧಿಮಾಕುಗಳೆಲ್ಲ ಅರ್ಥಹೀನವಾಗುತ್ತವೆ ಎಂಬುದನ್ನು ಆ ಧಿಮಾಕಿನವರು ಅರಿಯುವಂತೆ ಎಚ್ಚರಿಸುತ್ತಾರೆ.

"ಸಾಧು ಆಗಿ ನೀ ಸಾಧನೆ ಇಲ್ಲದೆ ಭೋಗವ ಭೋಗಸೈತಿ ನಿನ್ನ ಮನ|
ಯೋಗದ ತೋರಿಕೆ, ಜಾಗದ ಮಹಿಮೆ ಮನಸೆಲ್ಲಿ ಜಾರೈತಿ|
ಹೇಳು ನಿನ್ನ ಮನಸೆಲ್ಲಿ ಜಾರೈತಿ||"
ಇಂಥ ವಿಷಮಸ್ಥಿತಿಯಲ್ಲಿ ಜನರಿಗೆ ಮಾರ್ಗದರ್ಶನ ಮತ್ತು ತತ್ತ್ವದರ್ಶನ ಮಾಡಿಸಬೇಕಾದ ಧರ್ಮಗುರುಗಳು ಕೂಡ ಯಾವುದೇ ಸಾಧನೆ ಇಲ್ಲದೆ ಭೋಗಕ್ಕೆ ಮನಸೋತು ಅದರಲ್ಲೇ ನಿತ್ಯಾನಂದವನ್ನು ಕಾಣುತ್ತಿದ್ದಾರೆ. ತೋರಿಕೆಯ ಯೋಗ ಮತ್ತು ಧ್ಯಾನ ಹಾಗೂ ತಾವು ಪ್ರತಿನಿಧಿಸುತ್ತಿರುವ ಸುಕ್ಷೇತ್ರದ ಮಹಿಮೆಯಿಂದಾಗಿ ಇಂಥ ಧರ್ಮಗುರುಗಳು ವರ್ಚಸ್ಸನ್ನು ಬೆಳೆಸಿಕೊಂಡು ಮನೋ ಕಾಮನೆಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಇಂಥವರನ್ನು ಪ್ರಶ್ನಿಸುವ ಕ್ರಮವಿದು.

"ದುಷ್ಟಶಕ್ತಿ ಹೇಳಿದಾ ಮಾತು ವೇದವಾಕ್ಯ ಬಡವನಿಗಾಯ್ತು|
ಬಡವ ಹೇಳಲಾರದಂಗಾಯ್ತು ಹೇಳಿದರೆ ಹೆಣ ಸಿಗದಂಗಾಯ್ತು||
ಶಕ್ತಿಶಾಲಿ ನೀನಾಗಬೇಕು ಸತ್ಸಂಗ ನಿನ್ನ ಉಸಿರಾಗಬೇಕು|
ಮಾನವಂತರ ಮಾನ ನಿನ್ನಯ ಮಾನವಾಗಿ ತಿಳಿಯಬೇಕೊ||"
ಈ ದುಷ್ಟಶಕ್ತಿಗಳೆಲ್ಲ ಕೂಡಿ ಬಡವರ ಜೀವ ತಿನ್ನುತ್ತವೆ. ಇಂಥ ಅಧಿಕಾರಬಲ, ಧನಬಲ, ಅಂತಸ್ತುಬಲ ಮತ್ತು ಧರ್ಮಬಲ ಇದ್ದವರು ಹೇಳಿದ ಮಾತುಗಳನ್ನು ಬಡವರು ವೇದವಾಕ್ಯವೆಂಬಂತೆ ಸ್ವೀಕರಿಸುವುದು ಅನಿವಾರ್ಯವಾಗಿದೆ. ಒಂದುವೇಳೆ ಸ್ವೀಕರಿಸದೆ ಇದ್ದರೆ ಆತನ ಹೆಣವೂ ಸಿಗದಂಥ ಪರಿಸ್ಥಿತಿ ಅನೇಕ ಕಡೆಗಳಲ್ಲಿ ಇಂದಿಗೂ ಮುಂದುವರಿದಿದೆ. ಇಂಥ ಸ್ಥಿತಿಯಲ್ಲಿ ಬಡವರು ಸತ್ಸಂಗ ಮಾಡುತ್ತ ದುಷ್ಟಶಕ್ತಿಗಳನ್ನು ಎದುರಿಸುವ ಕ್ರಮವನ್ನು ಅವರು ಬಹಳ ಮಾರ್ಮಿಕವಾಗಿ ಸೂಚಿಸಿದ್ದಾರೆ.
ಸದಾ ನೋವು ಮತ್ತು ಅಪಮಾನಕ್ಕೆ ಒಳಗಾಗುವ ಬಡವರು ಒಂದಾಗದೆ ಇದ್ದಾಗ ಅವರನ್ನು ಬಲವುಳ್ಳವರು ಬಹಳ ಹೀನಾಯವಾಗಿ ಕಾಣುತ್ತಾರೆ ಎಂಬುದನ್ನು ಗುರು ಖಾದರಿಪೀರಾ ಅವರು ’ಕೋತಿ ಕರಡಿ ರಾಕ್ಷಸರು’ ತತ್ತ್ವಪದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

"ಕೋತಿ ಕರಡಿ ರಾಕ್ಷಸರು ನಾವು ಹಿಂದೆ ಉಳಿದವರು|
ದೇವಿ ದೇವತರೆಲ್ಲ ಮುಂದೊರೆದ ಹಾರುವರು||
ಗುಡಿಗಳು ಹುಟ್ಟಲು ಕಾರಣರ‍್ಯಾರು; ಅದಕೆ ಪೂಜಾರಿ ಅವರು|
ದಾನ ನೀಡಲು ಹಿಂದುಳಿದವರು; ಬೇಡುವವರೇ ಹಿರಿಯರು||
ಸಹಾಯ ಮಾಡಿದ ಜಾಂಬುವಂತಗೆ ಕರಡಿಯೆಂದು ಕರೆದವರ‍್ಯಾರು|
ಅಪಕಾರ ಮಾಡಿದವರು ದೇವರಾಗಿ ಮೆರಿತಿಹರು||
ಜಾನಕಿಯ ತಂದವರ‍್ಯಾರು; ಕಪಿಸೈನ್ಯ ನಮ್ಮವರ ಹೆಸರು|
ಕಷ್ಟದಿಂದ ಪಾರು ಮಾಡಲು ನಾವೇ ಪ್ರಜೆಗಳು, ಅವರೆ ರಾಜರು||
ಯಲ್ಲಮ್ಮ ಯಾರವರು; ಹಿಂದುಳಿದ ನಾವೇ ಜೋಗಮ್ಮನವರು|
ಕೊರಳಲ್ಲಿ ಕೆರು ಕಟ್ಟಿಕೊಂಡು ಬೆತ್ತಲಾಗಿ ನಮ್ಮವರು||
ದೇವರ ಹೆಸರಿನಲ್ಲಿ ವ್ಯಭಿಚಾರ ಮಾಡುವರ‍್ಯಾರು; ಯಾಗದ ನೆಪದಲ್ಲಿ|
ಕುರಿಕೋಣಕೋಳಿ ನುಂಗಿ ಮಂತ್ರ ಹೇಳಿದವರ‍್ಯಾರು||
ಹಕ್ಕು ಕೇಳಬಾರದು ಯಾರು, ಹಿಂದುಳಿದ ನಾವೇ ಶೂದ್ರ ಜನರು|
ಸತ್ತರೆ ಸುಡುವರ‍್ಯಾರು ನಾವೆ ಸಂಕಟರಮಣರು||
ಗುರುಪೀರ ನಮ್ಮವರು ಬೈಲುಮಾಡಿ ತೋರಿದರು ಶೂದ್ರರಲ್ಲಾ|
ನಾವೇ ರಾಜರು ಎಂದು ಸತ್ಯ ಹೇಳಿದವರು ಇವರೆ ನಮ್ಮ ಗುರುಗಳು||"
ದುಡಿಯುವ ಬಹುಪಾಲು ಶೂದ್ರ ಜನರೇ ರಾಜರು ಎಂಬ ಸತ್ಯವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಗುರು ಖಾದರಿ ಪೀರಾ ಅವರು ಕಾರ್ಲ್ ಮಾರ್ಕ್ಸ್ ಮತ್ತು ಸ್ವಾಮಿ ವಿವೇಕಾನಂದರ ಸಮಕಾಲೀನರು ಕೂಡ ಆಗಿದ್ದಾರೆ. ಕಾರ್ಲ್ ಮಾರ್ಕ್ಸ್ ಅವರು ಕಾರ್ಮಿಕ ಸರ್ವಾಧಿಕಾರದ ಬಗ್ಗೆ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದ ಅವರು ಶೂದ್ರರು ಈ ಜಗತ್ತನ್ನು ಆಳಬೇಕು ಎಂದು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಖಾದರಿಪೀರಾ ಅವರು ’ಶೂದ್ರರಲ್ಲಾ; ನಾವೇ ರಾಜರು’ ಎಂದು ಹೇಳಿದ್ದು ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತ ಬಂದ ಶೂದ್ರ ಜನಾಂಗದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ.
ಸೌಹಾರ್ದ ಎಂಬುದು ತೋರಿಕೆಯ ಮಾತುಗಳಿಂದ ಸೃಷ್ಟಿಯಾಗುವಂಥದ್ದಲ್ಲ. ಮೇಲ್ಜಾತಿ ಮತ್ತು ಮೇಲ್ವರ್ಗದ ದೌರ್ಜನ್ಯವನ್ನು ಅಲ್ಲಗಳೆಯುತ್ತ, ಕೆಳಜಾತಿ ಮತ್ತು ಕೆಳವರ್ಗಗಳ ಜನಸಮುದಾಯಗಳ ಬಗ್ಗೆ ಅಂತಃಕರಣದ ವಾತಾವರಣ ಸೃಷ್ಟಿಸುತ್ತ ಸರ್ವಧರ್ಮ ಸಮಭಾವದ ಪ್ರಜ್ಞೆಯೊಂದಿಗೆ ಮಾನವೀಯ ಚಿಂತನೆಗಳನ್ನು ಹರಡಿದಾಗ ಸೌಹಾರ್ದದ ವಾತಾವರಣ ಸೃಷ್ಟಿಯಾಗುತ್ತದೆ. ಸೌಹಾರ್ದ ಸೃಷ್ಟಿಯಲ್ಲಿ ಕಾಳಜಿ, ಹೋರಾಟ, ಇದ್ದದ್ದನ್ನು ಇದ್ದ ಹಾಗೆ ಹೇಳುವ ನೈತಿಕ ಶಕ್ತಿ, ಸರ್ವಧರ್ಮ ಸಮಭಾವ ಮತ್ತು ಮಾನವ ಏಕತೆಯ ಪ್ರಜ್ಞೆ ಹೆಚ್ಚಿನ ಪಾತ್ರ ವಹಿಸುತ್ತವೆ. ಗುರು ಖಾದರಿಪೀರಾ ಅವರು ತಮ್ಮ ಬದುಕಿನಲ್ಲಿ ಸಾಧಿಸಿದ್ದು ಇದನ್ನೇ. ಅವರ ಸಾಧನೆಯ ಸಂಕೇತವಾಗಿ ’ಜ್ಞಾನಸಮುದ್ರ ನಮ್ಮ ಕಣ್ಣೆದುರಿಗಿದೆ.
ಶಿಶುನಾಳ ಶರೀಫರು ನಮಗೆ ಭಾವಪೂರ್ಣ ತತ್ತ್ವಪದಕಾರರಾಗಿ ಕಂಡುಬಂದರೆ ಸೂಫಿ ದೃಷ್ಟಿಕೋನದ ಇಸ್ಮಾಮಿನ ಧರ್ಮಗುರು ಖಾದರಿಪೀರಾ ಅವರು ಪ್ರಜ್ಞಾಪೂರ್ಣ ತತ್ತ್ವಪದಕಾರರಾಗಿ ಕಂಡುಬರುತ್ತಾರೆ. ’ದೇವರು ಎಲ್ಲರಲ್ಲಿ ಇದ್ದಾನೆ’ ಎಂದು ಪ್ರತಿಪಾದಿಸುವ ಅವರು ಗುಡಿ ಮಸೀದಿಗಳ ಬಗ್ಗೆ ಉದಾಸೀನ ಭಾವ ತಾಳುತ್ತಾರೆ. ನಮ್ಮ ದೇಹಗಳೇ ಗುಡಿ ಮಸೀದಿಗಳು ಎಂದು ಸಾರುವ ಅವರು ಜಾತಿ, ವರ್ಣ, ಶೋಷಣೆ ಮುಂತಾದ ಅನಿಷ್ಟಗಳ ಬಗ್ಗೆ ಸಾತ್ವಿಕ ಕೋಪವನ್ನು ವ್ಯಕ್ತಪಡಿಸುತ್ತಾರೆ. ಅಸ್ಪೃಶ್ಯರ ಮತ್ತು ಶೂದ್ರರ ಪರವಾಗಿ ನಿಲ್ಲುತ್ತಾರೆ. ತೋರಿಕೆಯ ದೇವರುಗಳನ್ನು ನಿರಾಕರಣೆ ಮಾಡುವ ಅವರು ಗಣಪತಿ, ದೇವಿ ಮುಂತಾದ ದೇವತೆಗಳನ್ನು ಕೂಡ ಸಂಕೇತಾರ್ಥದಲ್ಲಿ ನೋಡಿ ಪ್ರೇಮಭಾವದಿಂದಲೇ ಬರೆದಿದ್ದಾರೆ. ಸೂಫಿ ಪ್ರೇಮತತ್ತ್ವವು ಯಾವುದನ್ನೂ ನಿರಾಕರಿಸುವುದಿಲ್ಲ. ಆದರೆ ಮಾನವಘನತೆಗೆ ಕುಂದು ತರುವ ಯಾವುದನ್ನೂ ಸ್ವೀಕರಿಸುವುದಿಲ್ಲ.

"ದಾನಧರ್ಮದ ನೆಪಕಾಗಿ ಜನರಲ್ಲಿ ತನ್ನಯ ಹಿತಕ್ಕಾಗಿ|
ಕ್ವಾಣ ಕಡಿಯುವ ಧರ್ಮವೆ ಅಲ್ಲಾ; ಮಾರೆಮ್ಮನಿಗೆ ಅದು| ಬೇಕಿಲ್ಲಾ||"
ಪ್ರಾಣಿಬಲಿ ಕೊಡುವುದು ಧರ್ಮ ಅಲ್ಲ ಎಂದು ಹೇಳುವ ಅವರು, ಇದ್ದವರು ಜನರಿಂದ ತಮಗೆ ಲಾಭವಾಗುವ ಉದ್ದೇಶದಿಂದಲೇ ದಾನಧರ್ಮದ ನೆಪದೊಂದಿಗೆ ಇಂಥ ಸಂಪ್ರದಾಯಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಅವರ ಸೂಕ್ಷ್ಮಪ್ರಜ್ಞೆಯ ಪ್ರತೀಕವಾಗಿದೆ.
"ಮಾರೆಮ್ಮಾ ಅಲ್ಲಾ ತಮ್ಮಾ ಮಾ ಅಮ್ಮ ಎಂದು ತಿಳಿಸುತ್ತಾರೆ. "ಅಮ್ಮನಿಗೆ ನೀ ತಿಳಿ ತಮ್ಮ; ಮನ್ಯಾಗ ಐದಾಳ ನಿಮ್ಮಮ್ಮ ಎಂದು ಹೇಳಿ ಮನೆಯೊಳಗಿನ ಅಮ್ಮನ ಸೇವೆ ಮಾಡಬೇಕೆನ್ನುತ್ತಾರೆ. "ಅಮ್ಮನಂಥ ದೇವರು ಇಲ್ಲಾ; ಅಮ್ಮನಿಂದಲೇ ದೇವರು ಎಲ್ಲಾ ಎಂದು ಸಾರುತ್ತಾರೆ. ಹೀಗೆ ಮಾನವೀಯತೆ ಮತ್ತು ದೈವತ್ವದ ಮಧ್ಯೆ ಅಭೇದ್ಯ ಕಲ್ಪಸುವ ಅವರ ಕ್ರಮ ವಿಶಿಷ್ಟವಾಗಿದೆ.
ಅವರು ಮಾನವೀಯ ತತ್ತ್ವನ್ನು ಸಾರುತ್ತಲೇ ಸಮಾಜದ ನಿಜಸ್ವರೂಪವನ್ನು ಅನಾವರಣಗೊಳಿಸುತ್ತ ಕಾವ್ಯರಚನೆ ಮಾಡಿದ್ದಾರೆ. ’ಒಳಗಿನ ಮಾತು ಸಂಗಯ್ಯನೇ ಬಲ್ಲ ಎಂಬ ತತ್ತ್ವಪದದಲ್ಲಿ ಅವರು ನಮ್ಮ ಸಮಾಜದ ನಿಜಸ್ವರೂಪವನ್ನು ಹೀಗೆ ತೋರಿಸಿದ್ದಾರೆ.

"ಒಳಗಿನ ಮಾತು ಸಂಗಯ್ಯನೇ ಬಲ್ಲ; ಲಿಂಗಯ್ಯ ತಾನಾಗಿ ನೋಡ್ಯಾನ|
ಲಿಂಗಸಂಗದ ಕೂನಾವು ತಾನಾಗಿ ಗುರುಪೀರಾ ಖಾದರಿ ಹೇಳ್ಯಾನ||
ಸುಳ್ಳರಂಗ ನೀ ಇರದಿದ್ದರ ಇಲ್ಲಿ ಹುಚ್ಚನೆನ್ನುವರು ತಿಳಿ ನೀನಾ|
ಬಟ್ಟೆತೊಟ್ಟು ಬಿಚ್ಚಿಡುವ ಜನರಿಗೆ ಸತ್ಯ ಕೆಟ್ಟ ಸಂಕಟರಮಣ||
ಪ್ರೀತಿ ಮಾಡುವ ಜನರಿಗೆ ಜಗದಲ್ಲಿ ಅಸುರರೆಂದರು ತಿಳಿ ನೀನಾ|
ಕುಡಿತ ಕಡಿತ ಜಡಿತೆಲ್ಲಾ ಮಾಡಿ ಇಲ್ಲಿ ದೇವರಾದರು ತಿಳಿ ಜಾಣಾ||
ಕಾಲಿಗೆ ತಲೆಯೆಂದು ತಲೆಗೆ ಕಾಲೆಂದು ಪಂಡಿತರಾಗ್ಯಾರೊ ತಿಳಿ ನೀನಾ|
ಸುರ ಅಸುರರ ಮೂಲಾ ಗುಟ್ಟು ತಿಳಿದ ಶರಣರಿಗಾಯಿತು ಅವಮಾನ||
ಎಲ್ಲ ಧರ್ಮದಲ್ಲಿ ಮಣ್ಣಿಗೆ ಸುಣ್ಣ ಹೊಡೆದು ಸುಳ್ಳು ಹೇಳಿದವರಿಗೆ ಘನಸ್ಥಾನ|
ಸತ್ಯ ಹೇಳಿದ ಸೂಫಿಸಂತರಿಗೆ ಗಲ್ಲಿಗೇರಿಸ್ಯಾರೊ ತಿಳಿ ನೀನಾ||
ಮೂರು ಕಾಲದೊಳು ಬದಲಾಗುವ ಜನ ನೋಡಿ ತಿಳಿಯೊ ನೀ ಅವರ ಗುಣ|
ಸಾಲಗುಂದಿಪುರದೊಳು ನೀ ಹಸನಾಗಿ ವೆಸನ ಮಾಡಿ ತಿಳಿ ನಿನ್ನ ನೀನಾ||
ಗುರುವೇ ಖಾದರಿ ಪೀರನಾಗಿ ಹೇಳೋ ಇದ್ದದ್ದು ಇದ್ದಾಂಗ ಜಗದ ಗುಣ|
ಸತ್ಯಶರಣರಿಗೆ ಕಾಡಿಸಿ ಕೊಲೆಮಾಡಿ ಬೆಂಕಿಯಂಥ ಶರಣೆಂದ ಜನ||
ಇನ್ನೊಂದು ತತ್ತ್ವಪದದಲ್ಲಿ "ಇಲ್ಲಿ ಧರ್ಮ ಎಂಬುದು ಬಂದೀಖಾನೆ ಅಲ್ಲಿ ನರಕ ಎಂಬುವ ಬಂದೀಖಾನೆ ... .. ಪ್ರೀತಿಯೇ ನಿಜಧರ್ಮ ನನ್ನ ಗುರುವಿನಾಣೆ|" ಎಂದು ಪ್ರೇಮದ ಉತ್ಕಟ ಭಾವವನ್ನು ಮೆರೆದಿದ್ದಾರೆ. ಎಲ್ಲ ಸೂಫಿಗಳಂತೆ ಅವರಿಗೆ ಪ್ರೇಮವೇ ಧರ್ಮವಾಗಿತ್ತು. ಬಸವಣ್ಣನವರ ದಯೆ ಮತ್ತು ಭಕ್ತಿಯನ್ನು ಅವರು ಪೇಮದ ಆದಿ ಮತ್ತು ಅಂತ್ಯವಾಗಿ ಕಾಣುತ್ತಾರೆ. ಅವರ ’ಬಡವರ ಬಸವ’ ಕವನ ಇದಕ್ಕೆ ಸಾಕ್ಷಿ.

"ಬಸವ ಬಡವರ ಬಸವ ಕರುಣಾಸಾಗರ ಬಸವ|
ಅಲ್ಲಮನ ಪ್ರಾಣ ಬಸವ ಅಕ್ಕನ ಮಾನ ಬಸವ|
ಸರ್ವರೊಳು ಗುರುಸಂಗನ ಕಂಡ ಕಲ್ಯಾಣ ಬಸವ||
ಬಸವ ನಿನ್ನಯ ವಾಸ ಕೂಡಲಸಂಗನ ಧ್ಯಾಸ|
ಸತ್ಯ ಸಾರುವ ಧೀಶ ನಿನ್ನ ನೆನೆಯುವ ಧ್ಯಾಸ|
ಮರೆತು ಬಾಳೆನಯ್ಯಾ ಬಸವ ನನ್ನುಸಿರು ನನ್ನ ಬಸವ||
ಭೇದ ಅಳಿದವನೆ ಬಸವ ಪ್ರೀತಿ ತಿಳಿಸಿದವನೆ ಬಸವ|
ಜಾತಿ ಧರ್ಮಕೆ ಅತೀತನಾಗಿ ಮಾನವತೆಯ ಪ್ರಾಣ ಬಸವ||
ಎಲ್ಲಾ ನನ್ನವರೆಂದು ಭೇದವಿಲ್ಲದ ಬಂಧು|
ಎಲ್ಲಾ ಮಾನವರೊಂದು ಎಲ್ಲರೂ ಶರಣರೆಂದು|
ಎಲ್ಲರೊಳು ತಾ ಕಿರಿಯನೆಂದು ತನ್ನ ತಾನು ತಿಳಿದ ಬಸವ||
ಬಿಜ್ಜಳನಿಗೆ ಬಸವನೇ ಮಂತ್ರ ಹಾರವನ ಸ್ಥಾನ ಅತಂತ್ರ|
ಕೊಂಡಿ ಮಂಚಣ್ಣನ ಕುತಂತ್ರ ಮಂತ್ರಿಪದವಿ ಬಿಟ್ಟುನಿಂತ|
ದೀನರಾ ಮಾನ ಬಸವ ಬಡವರ ಪ್ರಾಣ ಬಸವ||
ಬಡಜಂಗಮರು ಶಿವನೆಂದು ಸಾರಿದ ಧೀರಬಸವ|
ಸಾಲಗುಂದಿಪುರದ ಜನರ ಪ್ರೀತಿಪ್ರಾಣವೆ ಬಸವ|
ಗುರುಪೀರಾ ಖಾದರಿಯ ಜೀವದಾಜೀವ ಬಸವ||
೧೯ನೇ ಶತಮಾನದಲ್ಲಿ ಬಸವಣ್ಣ ಎಂದರೆ ಎತ್ತು ಎಂದು ತಿಳಿದಂಥ ವಾತಾವರಣವಿತ್ತು. ಕನ್ನಡಿಗರಲ್ಲಿ ವಚನಪ್ರಜ್ಞೆಯೇ ಮೂಡಿರಲಿಲ್ಲ. ಇಂಥ ಸ್ಥಿತಿಯಲ್ಲಿ ಖಾದರಿಪೀರಾ ಅವರು ಬಸವಣ್ಣನವರ ಬಗ್ಗೆ ಸೂಕ್ಷ್ಮ ವಿವರಣೆಗಳೊಂದಿಗಿನ ಒಳನೋಟವನ್ನು ಹೊಂದಿದ ಪದರಚನೆ ಮಾಡಿದ್ದು ಇಂದಿನ ವಚನತಜ್ಞರನ್ನು ಕೂಡ ಬೆರಗುಗೊಳಿಸುವಂಥದ್ದಾಗಿದೆ.
ಬಸವಣ್ಣ ಹುಟ್ಟಿದ ವಿಜಾಪುರದಲ್ಲೇ ಹುಟ್ಟಿದ ಪ್ರಖ್ಯಾತ ಸೂಫಿ ಸಂತರಾಗಿದ್ದ ಹಾಗೂ ತಮ್ಮ ಪತ್ನಿ ಸಯ್ಯದಾ ಬೀಬಿ ಜೈನಬ್‌ರವರ ಪೂರ್ವಜರಾಗಿದ್ದ ಖಾಜಾ ಅಮೀನುದ್ದೀನ ಆಲಾ (೧೫೯೭-೧೬೭೫) ಅವರ ಬಗ್ಗೆ ಖಾದರಿಪೀರಾ ಅವರು ಬರೆದದ್ದು ಶರಣ ಮತ್ತು ಸೂಫಿ ಬದುಕಿನಲ್ಲಿ ಯಾವುದೇ ಭೇದವಿಲ್ಲ ಎಂಬುದನ್ನು ಸೂಚಿಸುತ್ತದೆ.

"ಸದ್ಗುರು ಅಮೀನ್ ಆಲಾ ಭೇದ ತೊರೆದು ನೀನೇ ಮೌಲಾ|
ಕರುಣಿಸಿ ನನ್ನ ಮ್ಯಾಲೆ ನೀನಾದಿ ನನ್ನ ಶೀಲಾ||
ಅಜ್ಞಾನಿಗಳಿಗೆ ನೀನು ಜ್ಞಾನದಾನ ಮಾಡುವಾತ|
ಧರ್ಮಜಾತಿಭೇದ ಅತೀತಾ ಖ್ವಾಜಾ ಅಮೀನ್ ಆಲಾ||
ದೊರೆಗಳಿಗೆ ದೊರೆಯಾದಾತ ಬಡವರಿಗೆ ನೀ ವಿಧಾತ|
ಸರ್ವರಲಿ ನೀನೆ ಪ್ರಾಣ ಆಖಾ ಅಮೀನ್ ಆಲಾ||
ಪ್ರೀತಿ ಒಂದೇ ನಿನ್ನ ಮಾತ; ಸಿದ್ಧ ನಾಥರಿಗೆ ನೀ ನಾಥ|
ಭೇದವಿಲ್ಲೊ ನಿನಗೆ ತಾತಾ ಮೌಲಾ ಅಮೀನ್ ಆಲಾ||
ಶೂನ್ಯ ಮರ್ಮ ತಿಳಿಸಿದಾತ ಭಯ ಬಯಲು ಮಾಡುವಾತ|
ಧ್ಯಾನ ಜಪತಪಿಲ್ಲದಂತೆ ಮಮಾ ಮೋಕ್ಷ ಅಮೀನ್ ಆಲಾ||
ಶಿರಹಟ್ಟಿ ಫಕೀರಸ್ವಾಮಿಗಳು ಖಾಜಾ ಅಮೀನುದ್ದೀನ ಅವರ ಶಿಷ್ಯರಾಗಿದ್ದರು. ಫಕೀರಸ್ವಾಮಿಗಳು ಹುಟ್ಟಿದಾಗ ಖಾಜಾ ಅಮೀನರು ಇಟ್ಟ ಹೆಸರೇ ಭಾವೈಕ್ಯದ ಪ್ರತೀಕವಾದ ಫಕೀರಸ್ವಾಮಿ. ಈ ಹೆಸರಿನಲ್ಲಿ ಸೂಫಿ ಮತ್ತು ಶರಣ ತತ್ತ್ವದ ಸಂಗಮವಾಗಿದೆ. ಇದು ಅಮೀನರ ಕನಸಾಗಿತ್ತು.
ತಮ್ಮ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರ ತತ್ತ್ವಗಳ ಜೊತೆ ಬಸವಣ್ಣ ಮತ್ತು ಖಾಜಾ ಅಮೀನರ ತತ್ತ್ವಗಳನ್ನು ಒಂದಾಗಿಸಿ ಮಾನವ ಏಕತೆಯ ತತ್ತ್ವಪದಗಳನ್ನು ಬರೆದ ಖಾದರಿಪೀರಾ ಅವರು ’ಈ ಧರ್ಮವ್ಯಾಕೊ ಈ ಜಾತಿಯಾಕೊ’ ಎಂಬ ಪದ್ಯದಲ್ಲಿ ಮೊದಲು ಮಾನವನಾಗು ಎಂಬುದನ್ನು ಒತ್ತಿಹೇಳಿದ್ದಾರೆ.

"ಈ ಧರ್ಮವ್ಯಾಕೊ ಈ ಜಾತಿಯಾಕೊ|
ಮೊದಲಿಗೆ ಮಾನವ ನೀನಾಗು ಸಾಕು||
ಕುರಣೆಯೇ ನಿಜಧರ್ಮ ತಿಳಿದರೆ ಸಾಕು; ಪ್ರೀತಿಯೇ ನಿಜಪೂಜೆ ಈ ಭೇದವ್ಯಾಕೊ|
ಸ್ನೇಹದಿ ನೀ ಸನಿಹ ಬರಲಿಲ್ಲವ್ಯಾಕೊ ಮೊದಲಿಗೆ ಮಾನವ ನೀನಾಗು ಸಾಕು||
ತಿಳಿಯದೆ ಏನೇನು ನೀ ಮಾಡಿ ಕೆಟ್ಟಿ; ದೇವರ ಹೆಸರೇಳಿ ನೀನೆ ತಿಂದಿಟ್ಟಿ|
ನಿರಾಕಾರ ನಿರಾಹಾರ; ಇಲ್ಲದವನಿಗ್ಯಾಕೊ, ಕಲ್ಲಿಗೆ ಎಡೆಮಾಡಿ ಕೆಡಿಸುವುದ್ಯಾಕೊ||
ಮಾನವರೆಲ್ಲರೊಂದೆ ಎಂದ್ಹೇಳುವುದ್ಯಾಕೊ; ನಾಲ್ಕು ವರ್ಣದ ಭೇದ ಬಿಡುನೀ ಸಾಕು|
ಮಾನವನೇ ನಿಜಧರ್ಮ ತಿಳಿದರೆ ಸಾಕೊ; ಸತ್ಯವೇ ಶಿವರೂಪ ನೀನಾಗಬೇಕು||
ಹಸಿದ ಹೊಟ್ಟಿಗೆ ಹಿಟ್ಟು ಕೊಡಲಿಲ್ಲವ್ಯಾಕೊ ಕಲ್ಲುದೇವರಿಗೆಂದು ಯಡೆ ಮಾಡುವದ್ಯಾಕೊ|
ಬೇಡುವವನಿಗೆ ನೀಡು ಕೆಡಸುವುದ್ಯಾಕೊ; ಉಡುವ ತಿನ್ನುವ ವಸ್ತು ನೀ ಸುಡುವುದ್ಯಾಕೊ||
ಈ ಗೊಳ್ಳು ಧರ್ಮ ಈ ಜೊಳ್ಳು ಜಾತಿ: ಪ್ರೀತಿ ತಿಳಿಯದೆ ನೀನು ಹೀಂಗ್ಯಾಕ ಸಾಯ್ತಿ|
ಈ ಕ್ರೋಧವ್ಯಾಕೊ ಈ ಭೇದ ಸಾಕೊ; ಮೊದಲಿಗೆ ಮಾನವ ನೀನಾಗು ಸಾಕು||
ಕೈಯೊಳಗಿನ ಗಂಟೆ ನೋಡಲಿಲ್ಲವ್ಯಾಕೊ; ಆರತಿ ಬೆಳಕಲ್ಲಿ ಶಿವ ಕಾಣಲಿಲ್ಯಾಕೊ|
ನೀ ದೇವನಾಗಿರುವಿ ತಿಳಿದರೆ ಸಾಕೊ; ಕಣ್ಣು ಮುಚ್ಚಿ ಬೆಕ್ಕಿನಂತೆ ಹಾಲು ಕುಡಿಯುವುದ್ಯಾಕೊ||
ಪುರ ಸಾಲಗುಂದದೊಳಗೆ ಕೂಡಲಿಲ್ಲವ್ಯಾಕೊ; ತಿಳಿದು ಮತ್ತಿದರೊಳಗೆ ಬೆರಿಲಿಲ್ಲವ್ಯಾಕೊ|
ಗುರುಪೀರ ಖಾದರಿಯ ದಯವೊಂದೇ ಸಾಕೊ; ಪ್ರೀತಿಯೆ ನಿಜಧರ್ಮ ತಿಳಿದೆಡುವೂದ್ಯಾಕೊ||"
ಮಾನವೀಯತೆ ಇಲ್ಲದ್ದು ಏನೇ ಇದ್ದರೂ ಅರ್ಥಹೀನ ಎಂಬ ಅವರ ದೃಢನಿಲವು ಸದಾಕಾಲ ಮಾನವರನ್ನು ಎಚ್ಚರಗೊಳಿಸುವಂಥದ್ದಾಗಿದೆ. ಮಾನವೀಯತೆಯ ಅಭಾವದಿಂದಾಗಿಯೇ ನಮಗೆ ಮಂದಿರ ಮಸೀದಿ ವಿವಾದಗಳು ದೊಡ್ಡದಾಗುತ್ತವೆ. ಅಂದಿನ ದಿನಗಳಲ್ಲೇ ಇಂಥ ಸಮಸ್ಯೆಗಳು ಕುರಿತು "ಗುಡಿಗುಂಡಾರದ ಜಗಳವ್ಯಾಕೊ ಯಪ್ಪ; ಮಾನವಗೆ ಮಾನವನು ತಾ ತಿಳಿಯಬೇಕು. ಎಲ್ಲರೊಳಗೆ ಜೀವಶಿವನಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ" ಎಂದು ಬುದ್ದಿ ಹೇಳಿದ್ದಾರೆ. ಈ ಬುದ್ಧಿ ನಮಗೆಲ್ಲ ಬಂದಿದ್ದರೆ ರಾಮಜನ್ಮಭೂಮಿ ವಿವಾದದಲ್ಲಿ ಸಹಸ್ರಾರು ಜನರು ಪ್ರಾಣ ಕಳೆದುಕೊಂಡು ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗುವ ಪ್ರಸಂಗ ಬರುತ್ತಿರಲಿಲ್ಲ.

"ಇವನ ಎಲ್ಲೆಲ್ಲಿ ಹುಡುಕಿದೆನಲ್ಲ ಅವನು ನನ್ನೊಳಗೆ ತಾನಿದ್ದನಲ್ಲ|
ಸುಮ್ಮಸುಮ್ಮನೆ ತಿರುಗಿ ಸತ್ತೆನಲ್ಲ; ನನ್ನ ಒಡೆಯನ ನಾ ತಿಳಿಯಲಿಲ್ಲ|
ಯವ್ವ ನನ್ನ ಗಂಡನ ನಾ ತಿಳಿಯಲಿಲ್ಲ||
ಕಾಬಾ ಕಾಶಿಯೊಳಗೆ ಕಾಣಲಿಲ್ಲ; ವ್ಯರ್ಥ ಕಲ್ಲುಪೂಜೆ ಮಾಡಿ ಸತ್ತೆನಲ್ಲ|
ಭೇದ ನಾ ಮಾಡಿ ಮೋಸ ಹೋದೆನಲ್ಲ; ನನ್ನ ಪ್ರಿಯಕರನ ನಾ ತಿಳಿಯಲಿಲ್ಲ||"
ದೇವರನ್ನು ಮಂದಿರ ಮಸೀದಿಗಳಲ್ಲಿ ಹುಡಕದೆ ನಮ್ಮೊಳಗೆ ಹುಡುಕಿದ್ದರೆ ಈ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ.
"ಈ ಸೃಷ್ಟಿಗೆ ನೀನೊಡೆಯನಂತ ಸೃಷ್ಟಿಕರ್ತನ ಪ್ರತಿರೂಪವಂತ|
ಕಲ್ಲುದೇವರು ಹೆಂಗ ಹುಟ್ಯಾರಂತ ಇವರಪ್ಪ ಅಮ್ಮ ಯಾರಂತ|
ಈ ದೇವರಿಗೆ ನೀ ದೇವರಂತ ನಿನ್ನ ಬಿಟ್ಟು ದೇವರಿಲ್ಲಂತ ಭಗವಂತ||
ಎಂಬ ತೀಕ್ಷ್ಣ ಮಾತುಗಳಿಂದ ಖಾದರಿಪೀರಾ ಅವರು ನಮ್ಮನ್ನು ಜಾಗೃತಗೊಳಿಸುತ್ತಾರೆ. ಕಣ್ಣಿಗೆ ಕಾಣುವ ಎಲ್ಲ ದೇವರುಗಳನ್ನು ಮಾನವನೇ ಸೃಷ್ಟಿ ಮಾಡಿದ್ದಾನೆ. ಅವು ಕಾಲದ ತುಳಿತಕ್ಕೆ ಒಳಗಾಗುವ ದೇವರುಗಳು! ಆದರೆ ಆತ ತನ್ನೊಳಗಿನ ಅಗಮ್ಯ ಅಗೋಚರ ಮತ್ತು ಅಪ್ರತಿಮನಾದ ದೇವರನ್ನು ಕಾಣುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಹೀಗಾಗಿ ಜಾತಿ ಧರ್ಮಗಳ ಹೆಸರಿನಲ್ಲಿ ಭೇದಭಾವ ಮಾಡುವುದರಲ್ಲೇ ಮಾನವ ಆಯುಷ್ಯವನ್ನು ಕಳೆದುಕೊಳ್ಳುತ್ತಾನೆ.
"ಅಲ್ಲಾಕೇ ಬಂದೇ ತೊಗಲೆಲ್ಲ ಒಂದೆ; ಯೋಚಿಸು ನೀನ್ಯಾರು ಎಲ್ಲಿಂದ ಬಂದೆ. ನಿನ್ನ ನೀನು ತಿಳಿದುಕೊಂಡು ನಡಿಯಬೇಕು ಮುಂದೆ" ಎಂದು ಅವರು ಮುಸ್ಲಿಮರಿಗೆ ಹೇಳಿದರೆ, ಹಿಂದುಗಳಿಗೆ ಹೀಗೆ ಹೇಳುತ್ತಾರೆ:

"ಬ್ರಾಹ್ಮಣ ವೈಶ್ಯ ಕ್ಷತ್ರಿಯ ಶೂದ್ರ ನಾಲ್ಕರಿಂದ ವೇದ ಭದ್ರ|
ಶೂದ್ರ ಸಣ್ಣ ವಸ್ತು ಎಂದು ತಿಳಿಯಬ್ಯಾಡೊ ನೀ ದರಿದ್ರ||
ತಿನ್ನುವ ಅನ್ನ ಶೂದ್ರ, ಕುಡಿಯುವ ನೀರು ಶೂದ್ರ|
ತಿಳಿದು ಹೇಳಿದವನು ಇದ್ರ ಕೇಳಿದವನು ಬಲು ಭದ್ರ||
ಹನಿಯಾಗಿ ಇರು ನೀ ಇದ್ರ ಸಾಲಗುಂದಿ ಬಲು ಭದ್ರ|
ಪಿಂಡ ಅಂಡದೊಳಗೆ ಸೇರಿ ಒಳಗಿನಿಂದ ಬಂದ ಶೂದ್ರ||"

ಈ ಎಲ್ಲ ತಾರತಮ್ಯಗಳು ದೇಹದಲ್ಲಿ ಜೀವವಿರುವ ವರೆಗೆ ಮಾತ್ರ. ಆ ಜೀವವೇ ಪರಮಾತ್ಮ. ಆ ಪರಮಾತ್ಮ ನಮ್ಮಿಂದ ದೂರ ಹೋದ ಮೇಲೆ ನಾವು ಹೆಣವಾಗುವೆವು. "ಅವ ನಿನ್ನಲ್ಲಿರುವತನಕ ಆನಂದ ಸಿಗುವುದು ನಿನಗ. ಅವ ಬಿಟ್ಟು ಹೋದ ಮ್ಯಾಗ ಹೆಣವೆಂದು ಕರಿವರು ನಿನಗ" ಎಂದು
ಖಾದರಿಪೀರಾ ಅವರು ಮಾನವದೇಹದ ನಶ್ವರತೆಯ ಬಗ್ಗೆ ಹೇಳುತ್ತಾರೆ. ನಮ್ಮ ಎಲ್ಲ ಮೇಲುಕೀಳುಗಳು ದೇಹಕ್ಕೆ ಅಂಟಿಕೊಂಡು ಮನಸ್ಸಿಗೆ ಕಿರಿಕಿರಿ ಮಾಡುತ್ತವೆ. ದೇಹವು ಐಹಿಕ ಸುಖವನ್ನು ಬಯಸುತ್ತದೆ. ಐಹಿಕ ಸುಖ ನೀಡುವ ವಸ್ತುಮೋಹದಿಂದಾಗಿ ವರ್ಗಗಳು ಮತ್ತು ವರ್ಣಗಳು ಸೃಷ್ಟಿಯಾಗಿವೆ. ಮಾನವ ಐಹಿಕ ಸುಖವನ್ನು ಮೀರಿ ಒಳನೋಟದ ಅರಿವನ್ನು ಪಡೆದು ಜೀವಪರವಾದಾಗ ಸಹಜವಾಗಿಯೇ ಸರ್ವರಿಗೂ ಸಮಾನವಾದ ಬದುಕನ್ನು ಬಯಸುತ್ತಾನೆ. ಹೀಗೆ ಮಾನವರು ಸರ್ವಸಮತ್ವದಿಂದ ಬದುಕಬೇಕೆನ್ನುವುದೇ ಖಾದರಿಪೀರಾ ಅವರ ಆಶಯವಾಗಿದೆ.

"ಇರಬೇಕವ್ವಾ ಇರಬೇಕು ಗುರು ಎಲ್ಲರಿಗಿರಬೇಕು. ಜಾತಿಧರ್ಮಗಳಿಗತೀತನಾದ ಸದ್ಗುರು ನಮಗೆ|
ಇರಬೇಕು ಇರಬೇಕು ಗುರು ಇರಬೇಕು"
ಎಂದು ಅವರು ಇಂಥ ಸದುದ್ದೇಶದಿಂದಲೇ ಹೇಳಿದ್ದಾರೆ.

"ನಮ್ಮ ದೇಶಕ್ಕೆ ಮತ್ತು ನಮ್ಮ ಜನಗಳಿಗೆಲ್ಲ. ಸೌಖ್ಯವಾಗಿರುವಂಥ ಸುಬುದ್ಧಿ ಕೊಡು ಅಲ್ಲಾ. ಈಶ್ವರನು ನೀನಾಗಿ ರಕ್ಷಿಸು ನಮಗೆಲ್ಲಾ
ಎಂದು ಅವರು ಪ್ರಾರ್ಥಿಸಿದ್ದಾರೆ. ಅವರ ದೇಶಪ್ರೇಮ ಅನುಕರಣೀಯವಾಗಿದೆ. ಅವರು ಬದುಕಿದ ಕಾಲದಲ್ಲಿ ಭಾರತ ಎಂಬುದು ಅನೇಕ ದೇಶಗಳ ದೇಶವಾಗಿತ್ತು. ಇಂದಿನ ಭಾರತದೇಶದ ಕಲ್ಪನೆ ಅಂದು ಇರಲಿಲ್ಲ. ಆದರೆ ಖಾದರಿಪೀರಾ ಅವರು ಭವ್ಯಭಾರತದ ಕನಸುಕಂಡಿದ್ದರು.

"ನಮಿಸುವೆ ಭಾರತಿ ತಾಯಿಗೆ ಸಿರಬಾಗಿ ತಲೆಬಾಗಿ ಮಮತೆಯ ಮೂರುತಿ ನೀನೆಂದ|
ಪುಣ್ಯ ಬೇಕು ಈ ಭೂಮಿಯಲು ಹುಟ್ಟಲು ಭಾಗ್ಯವಂತರು ನಾವೆಂದ||"
ಸೂಫಿಸಂತನ ಈ ದೇಶಪ್ರೇಮ ನಮಗೆಲ್ಲ ಮಾರ್ಗದರ್ಶಿಯಾಗಬೇಕಲ್ಲವೆ? ಅಷ್ಟೇ ಅಲ್ಲ ಮುಹಮ್ಮದ್ ಪೈಗಂಬರರು ಕೂಡ ಭಾರತದೇಶವನ್ನು ಪ್ರೀತಿಸಿದ್ದರು ಎಂಬುದನ್ನು ನಮ್ಮ ನೆನಪಿಗೆ ತರುತ್ತಾರೆ.

"ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದ|
ಅರಬ್ ದೇಶದಲ್ಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದ|
ಅಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ ದೇಶ ಬಲು ಛಂದ||"
ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್‌ನಲ್ಲಿ ಹಿಂದ್ (ಭಾರತ) ದೇಶದ ಬಗ್ಗೆ ಪ್ರಸ್ತಾಪವಿದೆ. ಹಿಂದ್‌ನಿಂದ ತಂಪುಗಾಳಿ ಬೀಸುತ್ತಿದೆ. ನಾನು ಹಿಂದ್‌ನಲ್ಲಿ ಇಲ್ಲ; ಹಿಂದ್ ನನ್ನೊಳಗೆ ಇದೆ ಎಂದು ಮುಂತಾಗಿ ಪೈಗಂಬರರು ಹೇಳಿದ ವಿಚಾರಗಳು ಹದೀಸ್‌ನಲ್ಲಿ ಇವೆ. ಈ ತಂಪುಗಾಳಿ ಶಾಂತಿತತ್ತ್ವದ ಪ್ರತೀಕವಾಗಿದೆ. ಉಪನಿಷತ್ತಿನ ಶಾಂತಿಮಂತ್ರಗಳು ಮತ್ತು ನಿರ್ಗುಣ ನಿರಾಕಾರ ಬ್ರಹ್ಮತತ್ತ್ವ ೧೪೦೦ ವರ್ಷಗಳಷ್ಟು ಹಿಂದೆಯೆ, ಅಂದರೆ ಪೈಗಂಬರರ ಜೀವಿತಾವಧಿಯಲ್ಲೇ ಅರಬ್ ದೇಶವನ್ನು ತಲುಪಿದ ಸಾಧ್ಯತೆಗಳಿವೆ. ಇಂಥ ಮಹತ್ವದ ಚಿಂತನೆಗಳನ್ನು ಖಾದರಿಪೀರಾ ಅವರು ನಮ್ಮ ಮುಂದೆ ಇಟ್ಟು ವಿಶ್ವಬಂಧುತ್ವದಲ್ಲಿ ಭಾರತದೇಶದ ಮಹತ್ವವನ್ನು ೧೯ನೇ ಶತಮಾನದಲ್ಲೇ ಸಾರಿದ್ದಾರೆ.
ಸುಳ್ಳುದೇವರುಗಳೆಲ್ಲ ನಾಶವಾಗಿ ’ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವ ಕುಲ’ ಎಂದು ಮಾನವರು ನಂಬುವುದರ ಮೂಲಕ ಎಲ್ಲ ಅಡ್ಡಗೋಡೆಗಳನ್ನು ಕೆಡವುತ್ತ ಒಂದಾಗುವ ಕಾಲ ಬರುತ್ತದೆ ಎಂಬುದರಲ್ಲಿ ಅವರಿಗೆ ನಂಬಿಕೆ ಇದೆ. ಸಾಲಗುಂದಾದಂಥ ಹಳ್ಳಿಯ ಮೂಲೆಯೊಂದರಲ್ಲಿ ಕುಳಿತಿದ್ದ ಅವರು, ಕೈಗಾರಿಕೀಕರಣದಿಂದಾಗಿ ಜಗತ್ತಿನ ರೂಪು ಬದಲಾಗುತ್ತಿರುವುದನ್ನು ಮಾಧ್ಯಮದ ಸಹಾಯವಿಲ್ಲದೆ ಅರ್ಥೈಸಿಕೊಂಡಿದ್ದಾರೆ. ಟಿ.ವಿ. ಜನಕ ಲೋಗಿ ಬಿಯಾರ್ಡ್ ಹುಟ್ಟುವ ಮೊದಲೇ ಟಿ.ವಿ. ಬರುವ ಬಗ್ಗೆ ಅವರು ನಿಖರವಾಗಿ ತಿಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸೃಷ್ಟಿಯಾಗುತ್ತಿರುವ ಹೊಸ ಕಾಲದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ದೇವರು ಧರ್ಮಗಳ ಕುರಿತ ಆಚಾರ ವಿಚಾರಗಳಲ್ಲಿ, ಜಾತಿ ಮತ್ತು ವರ್ಗಗಳಲ್ಲಿ, ಆಹಾರ ಧಾನ್ಯಗಳ ಉತ್ಪಾದನಾ ಮತ್ತು ಸಂಸ್ಕರಣಾ ವ್ಯವಸ್ಥೆಯಲ್ಲಿ, ಹೆಣ್ಣು ಗಂಡಿನ ಸಂಬಂಧಗಳಲ್ಲಿ ಅಗಾಧ ಬದಲಾವಣೆಗಳಾಗುವ ಬಗ್ಗೆ ಅವರು ತರ್ಕಬದ್ಧವಾದ ಭವಿಷ್ಯ ನುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ’ಕಾಲ ಬಲುಬೇಗ ಬರುತೈತೆ’ ಎಂದು ಬರೆದ ತತ್ತ್ವಪದವಿದು.

"ಕಾಲ ಬಲುಬೇಗ ಬರತೈತೆ ಈ ದೇವರೆಲ್ಲ ನಾಶವಾಗುವ ಕಾಲ|
ಬಲುಬೇಗ ಬರತೈತೆ||
ಗೊತ್ತಿಲ್ಲದೆ ಗಳಿಸಿದ ಆಸ್ತಿ ಬಡವರ ಪಾಲಾಗುವ ಕಾಲ|
ಜಾತಿಭೇದಗಳು ನಾಶವಾಗಲು ದ್ವೇಷವಿಲ್ಲದೆ ಬದುಕುವ ಕಾಲ||
ಮಠದಲ್ಲಿಯ ಘಟದ ದೇವರಿಗೆ ಹಟದಿಂದ ಕಡಿಯುವ ಕಾಲ|
ಹೊಗಳುತಿದ್ದ ನಾಯಿಗಳೆಲ್ಲ ಹಡಪತ್ತಿ ಅವು ಸಾಯುವ ಕಾಲ||
ಹೆಚ್ಚಿನ ಬೆಳೆಯನು ತಂತ್ರಜ್ಞಾನದಿ ಯಂತ್ರದಿಂದ ಬೆಳೆಯುವ ಕಾಲ|
ಧಾನ್ಯ ರಸವನು ಮಾನ್ಯ ಮಾಡಿಸಿ ಗುಳಿಗೆ ಮಾಡಿ ನುಂಗಿ ಬದುಕುವ ಕಾಲ||
ಗಂಡು ಹೆಣ್ಣುಗಳ ಭೇದ ಅಳಿಯುವುದು; ಹೆಣ್ಣು ತನ್ನ ತಾ|
ತಿಳಿದು ಬಾಳುವುದು; ಕೃತಕ ಗರ್ಭಧಾರಣದಿಂದ ಮಕ್ಕಳು ಜನ್ಮಪಡೆಯುವ ಕಾಲ||
ದೇವರಿಂದ ಆಗದ ಕೆಲಸಕೆ ಮಾನವ ಸಾಧಿಸಿ ತೋರುವ ಕಾಲ|
ಒಂದೆ ಕ್ಷಣದಿ ನಿರ್ಜೀವ ಲೋಹದಿ ಅಲ್ಲೆ ವಸ್ತು ಇಲ್ಲಿ ಕಾಣುವ ಕಾಲ||
ಬಡವರು ಶ್ರೀಮಂತರಾಗುವರು, ಶ್ರೀಮಂತರು ಬಡವರಾಗುವರು|
ಕಷ್ಟ ಪಟ್ಟವರು ಸುಖಭೋಗಿಸುವ ಸತ್ಯವೆಂಬ ನಿತ್ಯದ ಕಾಲ||
ಉತ್ತರದಿಂ ನಾಶವಾಗುವರು ದಕ್ಷಿಣದಿಂ ರಾಜ್ಯವಾಳುವರು|
ಚಪಲ ಮೋಸ ವಂಚನೆಯಲ್ಲ ಹಾಳಾಗಿ ಹಲ್ ಕಿಸಿಯುವ ಕಾಲ||
ಸತ್ಯ ಮಿಥ್ಯಕೆ ಜಗಳಾಗುವುದು ಮಿಥ್ಯ ನಿತ್ಯ|
ನಾಶ ಆಗುವುದು ಸತ್ಯಗುರು ಖಾದರಿ ಪೀರನು|
ಹೇಳಿದ ಸತ್ಯ ನೋಡುವ ಕಾಲ||
ಇಂಥ ಬದಲಾವಣೆಗಳೊಳಗಿನ ವೈರುಧ್ಯಗಳನ್ನೂ ಅವರು ಗುರುತಿಸಿದ್ದಾರೆ. ೧೫೦ ವರ್ಷಗಳಿಗೂ ಹಿಂದೆಯೆ ಪ್ರಜಾಪ್ರಭುತ್ವದಲ್ಲಿನ ಸಮಸ್ಯೆಗಳನ್ನು ಗುರುತಿಸಿದ್ದಾರೆ.

"ಪ್ರಜೆಗಳೆಲ್ಲ ಪ್ರಭುಗಳು ಎಂದು ಹೇಳುವರು ಜನರಲ್ಲಿ|
ಸುಳ್ಳು ಮೋಸ ವಂಚನೆ ಮಾಡಿ ಪ್ರಭುಗಳು ಆಗುವರು ಇಲ್ಲಿ||
ಸತ್ಯವೆಂಬಾ ಬಡತನದಲ್ಲಿ ಸುಳ್ಳಿಗೆ ಶ್ರೀಮಂತಿಕೆಯಿಲ್ಲಿ|
ನೂರಾರು ಮನೆಗಳು ಮುರಿದು ಧರ್ಮಛತ್ರ ಕಟ್ಟುವರಲ್ಲಿ||"
ಎಂದು ಅವರು ಹೇಳುವಲ್ಲಿ ಇಂದಿನ ಭ್ರಷ್ಟಸಮಾಜದ ಬೇರುಗಳಿವೆ. ‘ಎಷ್ಟೊಂದು ತರ್ಕಬದ್ಧ ಮುಂದಾಲೋಚನೆಯ ವಿಶಿಷ್ಟ ಸೂಫಿ ಈ ಖಾದರಿಪೀರಾ’ ಎಂಬುದು ಅವರ ತತ್ತ್ವಪದಗಳ ಓದುಗರಿಗೆ ಅನಿಸದೆ ಇರದು.

"ಉಳಿಯದೊ ಯಪ್ಪಾ ಈ ದೇಶ ಹಿಂಗಾದರೆ ದಿವಸಾ|
ಜಾತಿಯ ಜಗಳವೆದ್ದು ಬಿದ್ದಾರೊ ತಾವೆ ಎದ್ದು ದಿವಸಾ|
ನ್ಯಾಯಾದ ಮೂಲ ಈ ಖೋಡಿ ಜಗಳ||"
ಹೀಗೆ ಅವರು ಜನಸಮುದಾಯಗಳ ಮಧ್ಯದ ವೈರುಧ್ಯಗಳು ದೇಶದ ಏಕತೆಗೆ ಹೇಗೆ ಕಂಟಕವಾಗುತ್ತವೆ ಎಂಬುದನ್ನು ತಿಳಿಸಿಹೇಳಿದ್ದಾರೆ. ಜಾತಿ ಧರ್ಮಗಳ ಮಧ್ಯದ ವೈರುಧ್ಯ ಹೆಚ್ಚಾದಂತೆಲ್ಲ ಪರಿಸ್ಥಿತಿ ಉಲ್ಬಣಗೊಂಡು ಇಂದು ದೇಶ ಭಯೋತ್ಪಾದಕರ ಮತ್ತು ಕೋಮುಗಲಭೆಕೋರರ ಸ್ಥಾನವಾಗಿದೆ. ಈ ದೇಶ ದುರ್ದಿನಗಳನ್ನು ಕಾಣಬಾರದು ಎಂಬುದು ಅವರ ಕಳಕಳಿಯಾಗಿತ್ತು. ಸೌಹಾರ್ದ ಬದುಕಿನಿಂದ ಮಾತ್ರ ಈ ದುರಂತವನ್ನು ತಪ್ಪಿಸಲು ಸಾಧ್ಯ ಎಂಬುದು ತಮ್ಮ ಬಹುಪಾಲು ತತ್ತ್ವಪದಗಳಲ್ಲಿ ಸೂಚಿಸಿದ್ದಾರೆ.

"ಎಲ್ಲಾ ನೀನೇ ಮಾಡಿ ಅವನ ಹೆಸರು ಹೇಳಬೇಕು ಪುಣ್ಯವಂತನವನು|
ಅವನೇ ನಾನೆಂದು ಹೇಳಿದ ಮನಸೂರಗೆ ಗಲ್ಲಿಗೇರಿಸಿಲ್ಲೇನು?
ಬ್ಯಾಡೆಂದು ಹೇಳಲಿಲ್ಲ ಕಾರಣೇನು?"
ಸೂಫಿಸಂತ ಮನಸೂರ್ ’ನಾನೇ ಸತ್ಯ ಎಂದು ಹೇಳಿದ್ದಕ್ಕೆ ದೈವನಿಂದನೆಯ ಆರೋಪ ಹೊರಿಸಿ ಗಲ್ಲಿಗೇರಿಸಲಾಯಿತು. ಸಮಾಜ ಅದನ್ನು ವಿರೋಧಿಸಲಿಲ್ಲ. ಮನುಷ್ಯರು ತಮ್ಮೊಳಗಿನ ಶಕ್ತಿಸಾಮರ್ಥ್ಯದಿಂದ ಎಲ್ಲವನೂ ಸಾಧಿಸುತ್ತಾರೆ. ಆದರೆ ಅದೆಲ್ಲದಕ್ಕೆ ತಮ್ಮೊಳಗಿನ ದೇವರೇ ಕಾರಣ ಎಂದು ತಿಳಿಯದೆ ಇಲ್ಲದ ದೇವರ ಹೆಸರು ಹೇಳುತ್ತಾರೆ ಎಂದು ಖಾದರಿಪೀರಾ ಬೇಸರ ವ್ಯಕ್ತಪಡಿಸುತ್ತಾರೆ.

"ದೇವರ ಹೆಸರೇಳಿ ನೀನು ಮಾಡಬ್ಯಾಡೊ ಕದನ|
ಭೇದ ಅಳೆದು ಪ್ರೀತಿ ಮಾಡಿದರೆ ನೀನೇ ದೇವರು ಗೊತ್ತಿಲ್ಲೇನಾ|
ಯೋಚಿಸಿ ನೋಡಪ್ಪಾ ನೀನಾ; ಬಿಡು ನಿನ್ನ ಕೆಟ್ಟ ಗುಣಾ||"
ನಮ್ಮ ದೇಶದ ದುರಂತವೆಂದರೆ ಮಾನವರು ತಮ್ಮ ದೇವರು ಮತ್ತು ಧರ್ಮದ ಹೆಸರಿನಲ್ಲೇ ಗಲಭೆಗಳನ್ನು ಸೃಷ್ಟಿಸುತ್ತಾರೆ. ಆದರೆ ಭೇದ ಅಳಿಸಿ ಪ್ರೀತಿ ಭಾವದ ಮೂಲಕ ತಾವೇ ದೇವರಾಗಬೇಕೆಂಬ ತೀವ್ರತೆಯನ್ನು ಅವರು ಹೊಂದಿರುವುದಿಲ್ಲ. ಅಂದರೆ ತಮ್ಮೊಳಗಿನ ಸದ್ಭಾವನೆಗಳ ಜೊತೆ ಬದುಕುವುದನ್ನು ಅವರು ಕಲಿಯಲು ಪ್ರಯತ್ನ ಮಾಡುವುದಿಲ್ಲ. ಇದೇ ಎಲ್ಲ ಭೇದಭಾವಗಳ ಮತ್ತು ಶೋಷಣೆಯ ಮೂಲವಾಗಿದೆ. ಈ ನೋವು ಖಾದರಿಪೀರಾ ಅವರಿಗೆ ಕಾಡುತ್ತಲೇ ಇದೆ. ಸತ್ಯ ಹೇಳಿದ ಹುತಾತ್ಮ ಸೂಫಿಸಂತ ಮನಸೂರರನ್ನು ಅವರು ಅನೇಕ ಕಡೆ ನೆನಪಿಸಿಕೊಳ್ಳುತ್ತಾರೆ. "ಸತ್ಯ ಹೇಳಿದವರಿಲ್ಲಿ ಉಳೀಲಿಲ್ಲ ಮನಸೂರ್‌ಗ ಗಲ್ಲಿಗೇರಿಸಿರ‍್ಯಾರೆಲ್ಲ ಎಂದು ದುಃಖಪಡುತ್ತಾರೆ.
ಯಾವುದೇ ಧರ್ಮ ತನ್ನತನವನ್ನು ಉಳಿಸಿಕೊಳ್ಳಬೇಕಾದರೆ ಅದು ಅಹಿಂಸೆ, ಸಮಾನತೆ ಮತ್ತು ಶಾಂತಿಯ ಮೇಲೆ ನಿಂತಿರಬೇಕಾಗಿರುತ್ತದೆ. ವಿಶ್ವಶಾಂತಿ ಮತ್ತು ಸತ್ಯದರ್ಶನಕ್ಕೆ ಇವೇ ಮೂಲವಾಗಿರುತ್ತವೆ. ಹಿಂಸೆಯನ್ನು ಮುಂದಿಟ್ಟುಕೊಟ್ಟು ಯಾವುದೇ ಧರ್ಮ ಸತ್ಯದರ್ಶನ ಮಾಡಿಸಲಾರದು. ಮಾನವ ಅಹಿಂಸೆಯನ್ನು ಪಾಲಿಸಬೇಕು. ಅಹಿಂಸೆಯು ಆತ್ಮಸಾಕ್ಷಾತ್ಕಾರದೆಡೆಗೆ ಒಯ್ಯುತ್ತದೆ. ಆತ್ಮಸಾಕ್ಷಾತ್ಕಾರದಿಂದ ಶಾಂತಿ ಲಭಿಸುತ್ತದೆ. ಈ ಒಳಗಿನ ಶಾಂತಿಯೇ ವಿಶ್ವಶಾಂತಿಗೆ ಮೂಲಾಧಾರವಾಗುತ್ತದೆ. ಆ ಮೂಲಕ ಸಮಾನತೆಯಿಂದ ಕೂಡಿದ ವಿಶ್ವಭ್ರಾತೃತ್ವ ಶಾಶ್ವತವಾಗುತ್ತದೆ. ಇಂಥ ವಾತಾವರಣದಲ್ಲಿ ಮಾನವರೇ ದೇವರಾಗುತ್ತಾರೆ. ಹೀಗೆ ಮಾನವರನ್ನು ಉದ್ಧರಿಸುವುದು ಧರ್ಮದ ಕಾರ್ಯವಾಗಿದೆ.
ಹಿಂಸೆ ಎಂಬುದು ಧರ್ಮಕ್ಕೆ ಅಂಟಿದ ಕಳಂಕ. ಅದು ಧರ್ಮನಿಂದನೆಯ ಆರೋಪದ ಮೇಲೆ ನಡೆಯಬಹುದು. ಧರ್ಮಯುದ್ಧದ ನೆಪದಲ್ಲಿ ನಡೆಯಬಹುದು. ಧರ್ಮರಕ್ಷಣೆಯ ನೆಪದಲ್ಲಿ ನಡೆಯಬಹುದು. ಈ ಹಿಂಸಾ ಪ್ರವೃತ್ತಿ ಕೊನೆಯಲ್ಲಿ ಕೋಮುಹಿಂಸೆ ಮತ್ತು ಭಯೋತ್ಪಾದನೆಯಲ್ಲಿ ಕೊನೆಗೊಳ್ಳುವುದು. ಆದ್ದರಿಂದ ಧರ್ಮದ ಹೃದಯವನ್ನು ಅರಿಯುವುದು ಅವಶ್ಯವಾಗಿದೆ. ಆ ಹೃದಯವಂತಿಕೆಯ ಆಧಾರದ ಮೇಲೆ ಧರ್ಮದ ಬುದ್ಧಿಯ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ಆದರೆ ಮೂಲಭೂತವಾದಿಗಳು ತಮ್ಮ ಧರ್ಮದ ಭುಜಭಲವನ್ನು ಮಾತ್ರ ನೋಡಲು ಬಯಸುತ್ತಾರೆ. ಹೀಗಾಗಿ ಅವರಿಗೆ ಅವರ ಧರ್ಮಗ್ರಂಥಗಳ ಅಂತರಾಳ ಗೊತ್ತೇ ಆಗುವುದಿಲ್ಲ. ಜಗತ್ತಿನ ದೇವರುಗಳಿಗೆ ಇಟ್ಟ ಹೆಸರುಗಳೆಲ್ಲ ಮನುಷ್ಯರು ಇಟ್ಟ ಹೆಸರುಗಳೇ ಆಗಿವೆ. ದೇವರು ಅಖಂಡ ಪ್ರೇಮಸ್ವರೂಪದಲ್ಲಿ ಮಾತ್ರ ಇರುತ್ತಾನೆ. ಅಲ್ಲಿ ಹಿಂಸೆ, ಅನ್ಯಾಯ, ಶೋಷಣೆ, ಅಸಮಾನತೆ ಮತ್ತು ಗುಲಾಮಗಿರಿಗೆ ಅವಕಾಶವಿಲ್ಲ.
ಒಬ್ಬ ಗುರು ತನ್ನ ಕಿರಿಯ ಶಿಷ್ಯನಿಗೆ ’ಕುದುರೆಗೆ ನೀರು ತೋರಿಸಿಕೊಂಡು ಬಾ’ ಎಂದು ಹೇಳುತ್ತಾನೆ. ಆತ ಕುದುರೆಯನ್ನು ನದಿ ದಂಡೆಗೆ ಒಯ್ದು, ಕುದುರೆಗೆ ನೀರು ಕುಡಿಯಲು ಅವಕಾಶ ಕಲ್ಪಿಸದೆ ಬರಿ ತೋರಿಸಿಕೊಂಡು ಬರುತ್ತಾನೆ. ಇದನ್ನು ಅರಿತ ಗುರು ತನ್ನ ಹಿರಿಯ ಶಿಷ್ಯನನ್ನು ಕರೆದು ’ಕುದುರೆಗೆ ನೀರು ತೋರಿಸಿಕೊಂಡು ಬಾ’ ಎಂದು ಹೇಳುತ್ತಾನೆ. ಆ ಹಿರಿಯ ಶಿಷ್ಯ ಕುದುರೆಯನ್ನು ನದಿ ದಂಡೆಗೆ ಒಯ್ದು ಬಿಡುತ್ತಾನೆ. ಆಗ ಕುದುರೆ ನೀರು ಕುಡಿಯುತ್ತದೆ. ಕುದುರೆಯು ಎಮ್ಮೆಯ ಹಾಗೆ ಅಲ್ಲ. ಅದು ನೀರು ಕಂಡಲ್ಲಿ ಮುಳುಗುವುದಿಲ್ಲ. ನೀರಡಿಕೆಯಾದಾಗ ಮಾತ್ರ ನೀರಿನ ಬಳಿ ಹೋಗುತ್ತದೆ. ಕುದುರೆಗೆ ನೀರು ಕುಡಿಯಲು ಕೂಡ ಒತ್ತಾಯಿಸಬಾರದು. ನೀರು ತೋರಿಸಬೇಕು ಅಷ್ಟೆ. ಅಂದರೆ ಅದಕ್ಕೆ ನೀರಿನ ಬಳಿ ಬಿಡಬೇಕು. ಅದು ಕುಡಿಯಬಹುದು ಅಥವಾ ಬಿಡಬಹುದು. ಒತ್ತಾಯವಿಲ್ಲ.
ಕಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಮೂಲಭೂತವಾದಿಗಳು ಧರ್ಮಗ್ರಂಥಗಳನ್ನು ಅರ್ಥೈಸುತ್ತಾರೆ. ಆದರೆ ಸೂಫಿಗಳು, ಶರಣರು, ಸಂತರು, ದಾಸರು ಮತ್ತು ತತ್ತ್ವಪದಕಾರರು ಹಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಧರ್ಮದ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೀಗೆ ಎಲ್ಲ ಸೂಫಿಗಳ ಹಾಗೆ ಖಾದರಿಪೀರಾ ಅವರು ಪವಿತ್ರ ಖುರಾನ್‌ಅನ್ನು ಅರ್ಥ ಮಾಡಿಕೊಂಡರು. ತುಳಿತಕ್ಕೊಳಗಾದವರು ಮತ್ತು ಅಪಮಾನಕ್ಕೆ ಒಳಗಾದವರು ಈ ಜಗತ್ತನ್ನು ಆಳಬೇಕೆಂದು ಖುರಾನ್ ಬಯಸುತ್ತದೆ. ಈ ಖುರಾನ್ ಆಶಯಗಳೊಂದಿಗೆ ಸಾಲಗುಂದಾದಲ್ಲಿ ಬದುಕಿದ ಖಾದರಿಪೀರಾ ಅವರು ಶರಣರ ಮಾರ್ಗದಲ್ಲಿ ನಡೆಯುತ್ತ ಜನರಿಗೆ ಹೊಸ ಬದುಕಿನ ಬೆಳಕನ್ನು ನೀಡಿದ್ದು ಒಂದು ಅಪೂರ್ವ ಸಾಧನೆಯಾಗಿದೆ. ಅಂತೆಯ ಅವರು ಮೇಲೆ ತಿಳಿಸಿದ ಕಿರಿಯ ಶಿಷ್ಯನಂತಿರುವ ಮುಲ್ಲಾ ಮೌಲಾನರನ್ನು ಪ್ರಶ್ನಿಸುತ್ತಾರೆ.

"ನಿನ್ನ ನೀನು ತಿಳಿಯೋ ಮುಲ್ಲಾ, ದಯವಿಲ್ಲದೆ ಧರ್ಮವಿಲ್ಲ|
ನಲ್ಲನ ನೀ ಎಂದು ನೋಡಲಿಲ್ಲ, ಬರೆ ಕೂಗಿದೋ ಮುಲ್ಲಾ|
ನೋಡಿ ನಿನಗೆ ನಗುತಾನ ಅಲ್ಲಾ; ನೀ ನೋಡಲಿಲ್ಲ||"
ಎಂದು ಹೇಳುವ ಮೂಲಕ ಅವರು ಮುಸ್ಲಿಂ ಮೂಲಭೂತವಾದಿಗಳನ್ನು ಎದುರು ಹಾಕಿಕೊಳ್ಳುತ್ತಾರೆ. ದೇವರಲ್ಲಿ ಅಚಲವಾದ ನಂಬಿಕೆ ಇರುವ ಅವರು ಆತನನ್ನು ಮನುಷ್ಯನ ಒಳಗೇ ಕಾಣಲು ಲೋಕಕ್ಕೆ ತಿಳಿಸುತ್ತಾರೆ. ಸೂಫಿಗಳಿಂದ ಆರಂಭವಾದ ಈ ಕ್ರಮ ಶರಣರಲ್ಲಿ ಅಂತಿಮ ಘಟ್ಟವನ್ನು ತಲುಪಿದೆ. ಇವೆರಡೂ ತತ್ತ್ವಗಳ ಸಂಗಮವಾಗಿರುವುದರಿಂದಲೇ ಖಾದರಿಪೀರಾ ಅವರಿಗೆ ಇಂಥ ಪ್ರಖರ ತಾತ್ತ್ವಿಕ ವೈಚಾರಕತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ.

"ಅಲ್ಲಾ ನೀನೆಲ್ಲಾ ಸೃಷ್ಟಿ ಮಾಡಿದ್ಯೋ ನಮಗೆಲ್ಲಾ|
ನಮ್ಮೊಳಗೆಲ್ಲಾ ನೀನೇ ಇರಲು ಹೇಗೆ ಹೇಳಲಿ ನೀನಿಲ್ಲಾ||
ನಿನ್ನ ಹೆಸರಿಲೆ ಧರ್ಮವ ರಚಿಸಿ ಭೇದ ಮಾಡುವ ಜನರೆಲ್ಲಾ|
ಭೇದ ಮಾಡುತಾ ಭವಿಗಳಾಗಿ ಅವು ತಿರುಗಿ ತಿರುಗಿ ಸಾಯುವರೆಲ್ಲಾ||"
ಎಂದು ಅವರು ಧರ್ಮಗಳ ಹೆಸರಲ್ಲಿ ಭೇದ ಸೃಷ್ಟಿಸುವ ಜನರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಶರಣರ ಹಾಗೆ ಸ್ವರ್ಗ ನರಕಗಳನ್ನು ತಿರಸ್ಕರಿಸುತ್ತ "ಸ್ವರ್ಗ ನರ್ಕದ ಆಸೆಯ ಭಯದಲ್ಲಿ ಎಲ್ಲರೂ ಮುಳುಗ್ಯಾರ. ಸ್ವರ್ಗ ಎಲ್ಲೈತೆ ನರ್ಕ ಎಲ್ಲೈತೆ ಹೇಳದೆ ಸಾಯ್ತಾರ ಯಪ್ಪ ಎಂದು ಅವರು ಹೇಳತ್ತಾರೆ.

"ಮಸೀದಿ ಎಂಬುದು ಹಾಳಾದ ಜಾಗ ಅದರ ಗೊಡವಿ ನಿನಗ್ಯಾಕಂತೆ|
ಮಾನವನಿಗೆ ಮಾನವ ತಾ ತಿಳಿದರೆ ಎಲ್ಲ ನಿನ್ನೊಳಗಡಗೈತಂತೆ||"
ಎಂದು ಹೇಳಲು ಕೂಡ ಅವರು ಹಿಂಜರಿಯುವುದಿಲ್ಲ. ದೇವರು ಮಸೀದಿಯಲ್ಲಿ ಇಲ್ಲ ಆತ ನಮ್ಮೊಳಗೇ ಇದ್ದಾನೆ. ಆತನ ಜೊತೆಗೇ ಇದ್ದು ಪ್ರತಿಯೊಬ್ಬ ಮಾನವ ವಿಶ್ವಮಾನವ ಆಗುವ ಮೂಲಕ ದೇವರೇ ಆಗಬೇಕು ಎಂಬುದು ಅವರ ಆಶಯವಾಗಿದೆ. ಆದ್ದರಿಂದ ಅವರಿಗೆ ’ಸೂಫಿಗಳ ಮತ್ತು ಶರಣರ ದೃಷ್ಟಿಕೋನದ ಧರ್ಮವೇ ಸತ್ಯ ಎಂಬುದು ಸಿದ್ಧವಾಗುತ್ತದೆ.

"ಯಾಕಬೇಕು ನಮಗೆ ಇಂಥ ಸ್ವಾರ್ಥದಿಂದ ಕೂಡಿದ ಧರ್ಮ|
ಪಶು ನಾಯಿ ಹಂದಿಗಿಂತ ಕೀಳಾದ ಶೂದ್ರ ಧರ್ಮ|
ನಾಲ್ಕು ವರ್ಣದ ವಿರುದ್ಧ ಹುಟ್ಟಿಬಂತು ಸತ್ಯ ಬಸವಧರ್ಮ||"
ಜನರು ಕೀಳಾಗಿರುವುದಿಲ್ಲ. ಆದರೆ ಜನರನ್ನು ಕೀಳು ಮಾಡುವ ಧರ್ಮಗಳು ನಾಯಿ ಹಂದಿಗಳಿಗಿಂತಲೂ ಕೀಳಾಗಿರುತ್ತವೆ. ಇಂಥ ಕೀಳುವರ್ಣವ್ಯವಸ್ಥೆಯನ್ನು ಹೊಂದಿರುವ ಧರ್ಮದ ವಿರುದ್ಧ ಸತ್ಯ ಬಸವಧರ್ಮ ಹುಟ್ಟಿಬಂದಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಯಾವ ಪಂಚಮರನ್ನು ಮತ್ತು ಶೂದ್ರರನ್ನು ವರ್ಣವ್ಯವಸ್ಥೆಯ ಧರ್ಮ ಕೀಳಾಗಿ ಕಂಡಿತೋ ಅಂಥವರನ್ನು ಒಂದುಗೂಡಿಸಿದ ಬಸವಣ್ಣನವರು ಸತ್ಯಧರ್ಮವನ್ನು ಲೋಕಕ್ಕೆ ನೀಡಿದರು. ಪವಿತ್ರ ಖುರಾನ್ ಮತ್ತು ಪೈಗಂಬರರ ಹದೀಸ್ ಮೂಲಕ ಸೂಫಿಗಳು ಅರ್ಥೈಸಿದ ಇಸ್ಲಾಂ ಧರ್ಮಕ್ಕೂ ಬಸವಧರ್ಮಕ್ಕೂ ಅವರು ಭೇದವನ್ನೇ ಕಾಣುವುದಿಲ್ಲ. ಹೀಗಾಗಿ ಅವರು ತಮ್ಮ ತತ್ತ್ವಪದಗಳಲ್ಲಿ ಪೈಗಂಬರರನ್ನು ಮತ್ತು ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ.

"ಸಾಲಗುಂದಿಪುರ ಸೇರಿ ಹೇಳು ಅವ ಇಲ್ಲ ನಾನೇ ನಾನು|
ಗುರುಪೀರಾ ಖಾದರಿ ಬೆಳಕಾಗಿ ತಾ ಬಂದು ಕತ್ತಲೋಡುವುದು ಇನ್ನೇನು?|
ತಿಳಿದು ಎಲ್ಲಾ ನೋಡು ನೀನು||"
ಸಾಲಗುಂದಿಪುರ ಎಂಬುದು ಅವರಿಗೆ ಒಂದು ’ದರ್ಶನ’ವಾಗಿ ಕಾಣುತ್ತದೆ. ಅವರ ದೃಷ್ಟಿಯಲ್ಲಿ ಗುರುಪೀರಾ ಖಾದರಿ ಎಂದರೆ ಅವರ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರೇ ಆಗಿದ್ದಾರೆ. ಅವರ ತತ್ತ್ವಪದಗಳಲ್ಲಿ ಬರುವ ‘ಗುರುಪೀರಾ ಖಾದರಿ’ ಅಂಕಿತನಾಮವು ಮಹಬೂಬೇ ಸುಬಹಾನಿ ಅವರಿಗೇ ಸಂಬಂಧಿಸಿದೆ.

"ಅಲ್ಲನಿಗೊಂದು ಮನೆಯೆಂದು ಹೇಳಿ ನೀನೆ ಕಟ್ಟಿ ಕೊಟ್ಟಿಲ್ಲೇನು?|
ಕಲ್ಲಿನ ಮನೆಯೊಳು ಅಲ್ಲನಿಲ್ಲೆಂದು ಗುರುಪೀರ ಅಂದೇ ಹೇಳಲಿಲ್ಲೇನು||
ಸಾಲಗುಂದಿಯೊಳು ಹೋಗಿ ನೋಡುನೀ ಕಂಡನು ಅವ ನೋಡಿಲ್ಲೇನೊ|
ನಿನ್ನೊಳು ಅವ ತಾ ನೆಲೆಸ್ಯಾನಲ್ಲಾ ಇನ್ನೊರಿಗೆ ನೋಡಿಲ್ಲೇನು?||
ಎಂದು ಹೇಳವ ಅವರು ದೇವರು ನಮ್ಮೊಳಗೇ ಇರುವ ಈ ರಹಸ್ಯವನ್ನು ಮಹಬೂಬೇ ಸುಹಬಾನಿ ಅವರಿಂದ ಕಂಡುಕೊಂಡಿರುವುದಾಗಿ ಸೂಚಿಸಿದ್ದಾರೆ. ‘ನಿಮ್ಮೊಳಗಿರುವ ಆ ದೇವರನ್ನು ಇಲ್ಲಿಯವರೆಗೆ ನೋಡಿಲ್ಲೇನು’ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ.
ಇಸ್ಲಾಂ ಮೂಲಭೂತವಾದಿಗಳು ಸೂಫಿ ಸಂತರ ಸಮಾಧಿಗಳ ಬಗ್ಗೆ ವಿಮುಖ ಧೋರಣೆ ಹೊಂದಿದ್ದಾರೆ. ಈ ಧೋರಣೆಯನ್ನು ಖಾದರಿ ಪೀರಾ ವಿರೋಧಿಸಿದ್ದಾರೆ.

"ಗೋರಿಯೊಳಗೆ ಏನಿಲ್ಲವೆಂದು ನೀನು ಹೇಳತಿಯೊ ಮೌಲಾನಾ|
ಮಸೀದಿಯಲ್ಲಿ ಅಲ್ಲನೆ ಇಲ್ಲ; ಹೆಂಗ್ ಹೇಳ್ತಿನೀ ಐದಾನಲ್ಲಿ ನೀನಾಗು ಮೋಮಿನೀನಾ||
ನನ್ನ ಶರಣರು ನಿತ್ಯ ಬದುಕ್ಯಾರ ಹೇಳುತೈತಿ ಖರಾನಾ|
ತಪ್ಪು ಹೇಳಿದರೆ ಕಿವಿ ಹಿಡಿಯೊ ನೀನ ನಿಮ್ಮಪ್ಪ ಈಗ ಒಪ್ತಾನ||"
ಎಂದು ಅವರು ಮೂಲಭೂತವಾದಿ ಧರ್ಮಪಂಡಿತರಿಗೆ ಸವಾಲು ಹಾಕುತ್ತಾರೆ. ಖಾದರಿಪೀರಾ ಅವರು ಹಿಂದು ಮೂಲಭೂತವಾದಿಗಳನ್ನೂ ಬಿಟ್ಟಿಲ್ಲ.

"ಯಾಕಪ್ಪ ಈ ಔತಾರ ಬೆತ್ತಲಾಗಿ ಹುಟ್ಟಿದರೆಲ್ಲಾರ|
ಹುಟ್ಟಿದಾಗ ಇರಲಿಲ್ಲಪ್ಪೊ ಹಾರವನಿಗೆ ಜನಿವಾರ||
ಎಲ್ಲರಿಗೆ ಒಬ್ಬನೆ ದೇವರ, ತಿಳಿದು ತಿಳಿಯಲಿಲ್ಲೊ ಜನರ|
ನಿನ್ನೊಳಗಿನ ಆರು ಕಳ್ಳರ ಜೊತೆಗೂಡಿ ನೀ ಆದಿಯೊ ಚೋರಾ||"
ಎಂದು ಅವರು ಟೀಕಿಸಿದ್ದಾರೆ. ಈ ಟೀಕೆಯ ಹಿಂದೆ ಅಖಂಡ ಮಾನವಪ್ರೇಮ ಇದೆ. ತಪ್ಪು ಮಾಡುವವರಿಗೆ ತಿಳಿಸಿಹೇಳುವ ಕ್ರಮವಿದೆ. ಹಾಳಾಗಬೇಡಿರಿ ಎಂಬ ಎಚ್ಚರಿಕೆಯ ಮಾತಿದೆ.
ಗುರು ಖಾದರಿಪೀರಾ ಅವರ ದೃಷ್ಟಿಕೋನ ವಿಶಿಷ್ಟವಾಗಿದೆ. ಅವರು ಧರ್ಮವನ್ನು, ಸಮಾಜವನ್ನು, ಸಮಾಜದೊಳಿಗಿನ ವೈರುಧ್ಯಗಳನ್ನು, ಮತ್ತು ಧರ್ಮವನ್ನು ಕಡೆಗಣಿಸಿ ನಿಲ್ಲುವ ಮಾನಸಿಕ ತುಮುಲಗಳನ್ನು ಬಹಳ ತೀಕ್ಷ್ಣವಾಗಿ ಗಮನಿಸಿದ್ದಾರೆ. ಆ ಕುರಿತು ಬಹಳ ಆಳವಾಗಿ ಚಿಂತಿಸಿದ್ದಾರೆ. ಭೌತಿಕ ಸ್ಥಿತಿಗತಿಗಳು ಮಾನವನನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ’ಮಾನವ ಕುಲದಲ್ಲಿಯ ಗುಟ್ಟು’ ನಮ್ಮನ್ನು ವಾಸ್ತವದ ಕಡೆಗೆ ಸೆಳೆಯುತ್ತದೆ.

"ಮನುಕುಲದಲ್ಲಿಯ ಗುಟ್ಟು ಹೇಳತೀನಿ ಮಾಡಬ್ಯಾಡ್ರಿ|
ತಾಸ್ಚಾರ ಚತುರ್ ವರ್ಣದ ಚಕ್ರದಿಂದ ಇದು ಹುಟ್ಯಾದ ಔತಾರಾ ಹಾಂ ಹಾಂ||
ಬಲಸ್ಯ ಪೃಥ್ವಿ ಎಂಬುದು ತಿಳಿದರೆ ರಾಜರಾಗುತಾರ; ಸುಳ್ಳಿನ ಗುಟ್ಟು|
ತಿಳಿದರೆ ಚೂಟಿಯ ಶ್ರೀಮಂತರಾಗುತಾರ ತಮ್ಮಾ ಶ್ರೀಮಂತರಾಗುತಾರ||
ಸುಳ್ಳು ಮೋಸ ವಂಚನೆ ಮಾಡಲು ದೇವರಾಗುತಾರ|
ಸತ್ಯಧರ್ಮದಿಂದ ಇದ್ದವರೆಲ್ಲ ಶೂದ್ರರಾಗುತಾರ ತಮ್ಮ ಶೂದ್ರರಾಗುತಾರ||
ಇಲ್ಲದ್ದು ಇದ್ದಾಂಗ ಹೇಳಿದವರೆಲ್ಲ ಆರ್ಯರಾಗುತಾರ|
ನ್ಯಾಯನೀತಿಯಿಂದ ಇದ್ದವರೆಲ್ಲ ದರಿದ್ರರಾಗುತಾರ ತಮ್ಮಾ||
ಗೊಡವೆ ಇಲ್ಲದ ಜನರಿಗೆ ಹೊಡೆದರೆ ಕ್ಷತ್ರಿಯರಾಗುತಾರ|
ಕೆಲಸವಿಲ್ಲದೆ ಗಳಿಕೆ ಮಾಡಿದವರು ವೈಶ್ಯರಾಗುತಾರ ತಮ್ಮ||
ಕಂಗೆಟ್ಟು ವಲಸೆ ಬಂದವರೆಲ್ಲ ಸೂತ್ರ ಹಿಡಿಯತಾರ|
ಅನುಕೂಲ ನೋಡಿ ಜೈ ಎಂದವರೆಲ್ಲ ಬ್ರಾಹ್ಮಣರಾಗುತಾರ ತಮ್ಮಾ||
ಭೇದವಿಲ್ಲದೆ ಬೋಧ ಮಾಡುವವರು ಉಪವಾಸ ಸಾಯ್ತಾರ ದುಡಿದು|
ದುಡಿದು ಮುಪ್ಪಾದ ಎತ್ತಿಗೆ ಸಂತಿಗೆ ಹೊಡಿತಾರ ತಮ್ಮಾ||
ಶಾಸ್ತ್ರದ ಪಟ್ಟಿನ ಗುಟ್ಟು ತಿಳಿದರೆ ಜ್ಞಾನಿಗಳಾಗುತಾರ; ಅನ್ಯಾಯ|
ನೋಡಿ ಸುಮ್ಮನಾಗಬೇಕು ತಮ್ಮ ಯೋಗ್ಯರಾಗುತಾರ ತಮ್ಮಾ||
ಸತ್ಯ ಇದ್ದರೆ ಹಾಗೆ ಹೇಳಬೇಡ ಖೋಡಿ ದಡ್ಡರಾಗತಾರ|
ಅನ್ಯಾಯ ತಡಿಯಲು ಹೋದವರೆಲ್ಲಾ ಸತ್ತುಹೋಗತಾರ||
ಧರ್ಮದ ಸತ್ಯ ಮುಚ್ಚಿ ಹೇಳಿದರೆ ಋಷಿ ಮುನಿಗಳಾಗುತಾರ|
ನ್ಯಾಯ ನೀತಿಯಿಂದ ಇದ್ದವರೆಲ್ಲಾ ಅಸ್ಪೃಶ್ಯರಾಗುತಾರ ತಮ್ಮಾ||"
ಗುರು ಖಾದರಿಪೀರಾ ಅವರಿಗೆ ಆ ಕಾಲದ ಬಹುಸಂಖ್ಯಾತ ಬಡ ನಿರಕ್ಷರಿ ಕನ್ನಡಿಗರ ಬಗ್ಗೆ ತೀವ್ರ ಕಾಳಜಿ ಇತ್ತು. ಅಂತೆಯೆ ಅವರು ತಮ್ಮ ಭಾಗದ ಹಳ್ಳಿಗರು ಆಡುವ ಕನ್ನಡದಲ್ಲಿ ’ಜ್ಞಾನಸಮುದ್ರ ಸೃಷ್ಟಿಸಿದರು. ತಾವು ಕಂಡುಕೊಂಡ ತತ್ತ್ವಜ್ಞಾನವನ್ನು ಹಳ್ಳಿಗಾಡಿನ ಕನ್ನಡಿಗರಿಗೆ ತಲುಪಿಸುವುದಕ್ಕಾಗಿ ತಮ್ಮ ತತ್ತ್ವಪದಗಳನ್ನು ಅವರ ಮುಂದೆ ಹಾಡಿ ತೋರಿಸಿದರು. ಆ ಮೂಲಕ ಕನ್ನಡವನ್ನು ಎತ್ತಿ ಹಿಡಿದರು. ಆ ನಿರಕ್ಷರಿ ಕನ್ನಡಿಗರು ತಮ್ಮ ಸ್ಮೃತಿಯಲ್ಲಿ ಗುರು ಖಾದರಿಪೀರಾ ಅವರ ತತ್ತ್ವಗಳನ್ನು ಸಂರಕ್ಷಿಸಿದರು. ಅಂಥ ಬಡ ಕನ್ನಡಿಗರು ೧೯ನೇ ಶತಮಾನದಿಂದ ಉಳಿಸಿಕೊಂಡು ಬಂದ ತತ್ತ್ವಪದಗಳೇ ಇಂದು ’ಜ್ಞಾನಸಮುದ್ರವಾಗಿ ಮುದ್ರಣಗೊಂಡು ನಮ್ಮ ಅರಿವಿನ ವಿಸ್ತಾರಕ್ಕೆ ಕಾರಣವಾಗಿವೆ.
"ಕನ್ನಡಾಂಬೆಗೆ ರವಿಯು ತಾನಾಗಿ ಬೆಳಕು ನೀಡುತಿತ್ತ; ಅಜ್ಞಾನದ ಕತ್ತಲು|
ತಾ ಕಳಿದು ದಾರಿ ತೋರಿಸಿತ್ತ ಭಕ್ತರ ಮನದಲಿ ತಾ ಕುಂತ||"
ಕನ್ನಡಾಂಬೆಗೆ ದರ್ಶನಸೂರ್ಯನು ಬೆಳಕಿನ ಸೇವೆ ಮಾಡುತ್ತಿದ್ದಾನೆ. ಆ ಮೂಲಕ ಕನ್ನಡಾಂಬೆಯ ಕಂಡು ಜನರ ಅಜ್ಞಾನದ ಕತ್ತಲು ಕಳೆಯುತ್ತಿದೆ. ಆ ದರ್ಶನದ ಬೆಳಕೇ ನಿಜದ ನಿಲವಿನ ಭಕ್ತರ ಮನದಲ್ಲಿ ಕುಳಿತು ವಿಶ್ವಮಾನವ ಪಥವನ್ನು ತೋರಿಸುತ್ತಿದೆ. ಭಕ್ತರೇ ದೇವರಾಗುವ ರಹಸ್ಯವನ್ನು ಬಯಲು ಮಾಡುತ್ತಿದೆ! ಗುರು ಖಾದರಿಪೀರಾ ಅವರು ಕನ್ನಡ ಜನಪದ ಪರಂಪರೆಯೊಂದಿಗೆ ಸೂಫಿಗಳ ಹಾಗೂ ಶರಣರ ಮಾನವಧರ್ಮ ಪರಂಪರೆಯನ್ನು ಒಂದಾಗಿಸಿ ಪ್ರೇಮತತ್ತ್ವವನ್ನು ಸಾರುತ್ತ ವಿಶ್ವಮಾನವನ ಕನಸುಕಂಡಿದ್ದು ಸರ್ವರಿಗೂ ಮಾರ್ಗದರ್ಶಿಯಾಗಿದೆ.
ತಾವು ಸಾಕ್ಷಾತ್ಕರಿಸಿಕೊಂಡ ಮಾನವರಿಂದ ಮಾನವರನ್ನು ಉದ್ಧಾರ ಮಾಡುವ ಮಾನವಧರ್ಮದ ಪ್ರಚಾರಕ್ಕಾಗಿ, ವಾಹನ ಸೌಲಭ್ಯವಿಲ್ಲದ ಅಂದಿನ ದಿನಗಳಲ್ಲಿ ಕುದುರೆ ಮೇಲೆ ಕುಳಿತು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಅನೇಕ ಕಡೆಗಳಲ್ಲಿ ಸುತ್ತಾಡಿದರು. ಲೋಕಕಲ್ಯಾಣದ ತತ್ತ್ವವನ್ನು ಪ್ರಚಾರ ಮಾಡಿದರು. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರಷ್ಟೇ ಅಲ್ಲದೆ ಮಾನವತಾವಾದಿ ಬ್ರಾಹ್ಮಣರಿಗೂ ಅವರು ಸರ್ವ ಸಮತ್ವದಿಂದ ಕೂಡಿದ ಸೂಫಿ ಶರಣರ ಮಾನವಧರ್ಮದ ದೀಕ್ಷೆ ಕೊಟ್ಟರು. ವಂಶಪಾರಂಪರ್ಯವಾಗಿ ಬಂದ ಜಹಗೀರನ್ನು ನಿರಾಕರಿಸಿದ್ದ ಅವರು ಕೊನೆಯವರೆಗೂ ಸಾಮಾನ್ಯರ ಮಧ್ಯೆಯೆ ಬದುಕುತ್ತ ೨೫.೭.೧೮೯೬ರಂದು ಗುರುವಾರ ಸಾಲ್ಗುಂದಾ ಗ್ರಾಮದಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಅವರ ದರ್ಗಾ (ಸಮಾಧಿ) ಸಾಲಗುಂದಾ ಗ್ರಾಮದಲ್ಲಿದೆ.

ಕರ್ನಾಟಕ ಮತ್ತು ಕನ್ನಡಿಗರು



ಡಾ.ಎಂ.ವೆಂಕಟಸ್ವಾಮಿ

ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಮುಂದಕ್ಕೆ ಸಾಗುತ್ತಿದ್ದರೆ ಕನ್ನಡಿಗರು ಹಿಂದಕ್ಕೆ ಹೋಗುತ್ತಿದ್ದಾರೆಯೇ? ಈ ಪ್ರಶ್ನೆ ನನ್ನನ್ನು ಹಲವು ವರ್ಷಗಳಿಂದ ಬಹಳವಾಗಿ ಕಾಡುತ್ತಿದೆ. ೨೦ನೇ ಶತಮಾನದಲ್ಲಿ ಮೊದಲ ನಾಲ್ಕೈದು ದಶಕಗಳಲ್ಲಿ ಮೈಸೂರು ರಾಜ್ಯವನ್ನು ‘ಮಾಡಲ್ ಸ್ಟೇಟ್ ಎಂದು ಕರೆಯಲಾಗುತ್ತಿತ್ತು. ಅದು ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾಇಸ್ಮೈಲ್, ದಿವಾನ್ ಪೂರ್ಣಯ್ಯರಂತಹ ಘಟಾನುಘಟಿಗಳು ದಿವಾನರಾಗಿದ್ದ ಕಾಲ. ಆ ಕಾಲಕ್ಕೆ ಕೋಲಾರ ಚಿನ್ನದ ಗಣಿಗಳು ಪ್ರಪಂಚ ಪ್ರಖ್ಯಾತವಾಗಿದ್ದು ಚಿನ್ನದ ಉತ್ಪಾದನೆಯಲ್ಲಿ ಬರುತ್ತಿದ್ದ ಲಾಭದಲ್ಲಿ ಶೇಕಡ ೮ ರಾಜಧನವನ್ನು ಬ್ರಿಟಿಷ್ ಸರಕಾರ ಮೈಸೂರು ಸರಕಾರಕ್ಕೆ ನೀಡುತ್ತಿತ್ತು. ಜೊತೆಗೆ ಮೈಸೂರು ರಾಜರ ಅಭಿವೃದ್ಧಿ ಕಾರ್ಯಗಳಿಂದ ಈ ಪ್ರದೇಶ ಮಾಡಲ್ ಸ್ಟೇಟ್ ಎಂದು ಹೆಸರು ಗಳಿಸಿಕೊಂಡಿತ್ತು. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಕುಟುಂಬ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದ್ದು ಮೈಸೂರಿನಲ್ಲಿ, ಏಷಿಯಾದಲ್ಲೇ ಮೊದಲಿಗೆ ವಿದ್ಯುತ್ ಬಂದಿದ್ದು ಕೋಲಾರ ಚಿನ್ನದ ಗಣಿಗಳಿಗೆ ೧೯೦೨ರಲ್ಲಿ. ಎರಡು ವರ್ಷಗಳ ನಂತರ ಬೆಂಗಳೂರು/ಮೈಸೂರಿಗೆ ೧೯೦೪ ಬಂದಿತ್ತು.
ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದು ಬ್ರಿಟಿಷರು ತಮ್ಮ ದೇಶಕ್ಕೆ ಹೊರಟುಹೋದ ಮೇಲೆ ದೇಶದಲ್ಲಿ ಅನೇಕ ಬದಲಾವಣೆಗಳು ಬಂದವು. ೧೯೮೫ರ ಸುಮಾರಿಗೆ ರಾಜ್ಯದಲ್ಲಿ ಐಟಿ/ಬಿಟಿ ಉದ್ದಿಮೆಗಳು ನಿಧಾನವಾಗಿ ಬೆಳೆಯತೊಡಗಿದವು. ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಹೀಗೆ ನೂರಾರು ದೇಶ ವಿದೇಶಿ ಕಂಪನಿಗಳು ಬೆಂಗಳೂರು ತಲುಪಿ ಪ್ರಪಂಚದ ಐಟಿ/ಬಿಟಿ ನಕ್ಷೆಯಲ್ಲಿ ಹೆಸರು ಮಾಡುತ್ತಾ ಸಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ವರ್ಷಕ್ಕೆ ಸರಾಸರಿ ಏನಿಲ್ಲವೆಂದರೂ ೨೦-೫೦ ಸಾವಿರ ಜನರು ಈ ಕಂಪನಿಗಳಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ. ಇನ್ನು ಬಿಪಿಓ ಕಂಪನಿಗಳಲ್ಲಿ ೨ ಲಕ್ಷಕ್ಕಿಂತ ಎಚ್ಚು ಜನರು ಉದ್ಯೋಗ ಮಾಡುತ್ತಿದ್ದು ಅಮೆರಿಕಾದ ಅಧ್ಯಕ್ಷ ಓಬಾಮಾ ಖುದ್ದಾಗಿ ನಮ್ಮ ಬಿಪಿಓ ಉದ್ಯೋಗಗಳೆಲ್ಲ ಬೆಂಗಳೂರಿನವರ ಪಾಲಾಗುತ್ತಿದೆ ಎಂದು ಹಲ್ನುಬುತ್ತಿದ್ದಾರೆ. ಈ ಕಂಪನಿಗಳಿಗೆ ಸಂಬಂಧಪಟ್ಟ ಸಾರಿಗೆ, ರಕ್ಷಣೆ, ಸಿಬ್ಬಂದಿ ಇತ್ಯಾದಿ ಕೆಲಸಗಳಲ್ಲಿ ಸ್ಥಳೀಯರಿಗೂ ಅವಕಾಶಗಳು ದೊರಕಿವೆ.
ಇದರ ಜೊತೆಜೊತೆಗೆ ನೂರಾರು ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಾದ್ಯಂತ ನಾಯಿಕೊಡೆಗಳಂತೆ ಕಾಣಿಸಿಕೊಂಡು ರಾಜ್ಯ ಮತ್ತು ದೇಶದ ದಿಕ್ಕುದಿಕ್ಕುಗಳಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದು ಕಾಲೇಜುಗಳಲ್ಲಿ ಸೇರಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕೆಲವು ಕಾಲೇಜುಗಳಂತು ಪ್ರತಿಷ್ಟೆತೆಯ ಕೇಂದ್ರಗಳಾಗಿ ಬೆಳೆದು ವಿದ್ಯಾರ್ಥಿಗಳು ಮೂರನೇ ವರ್ಷ ಮುಗಿಸುತ್ತಿದ್ದಂತಯೇ ನೂರಾರು ಕಂಪನಿಗಳು ಕಾಲೇಜು ಕ್ಯಾಂಪಸ್‌ಗಳಿಗೆ ನುಗ್ಗಿ ಬಂದು ನಾಮುಂದು ತಾಮುಂದು ಎಂದು ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ಲೆಟರ್‌ಗಳನ್ನು ನೀಡಿ ಬುಕ್ ಮಾಡಿ ಹೋಗುತ್ತಾರೆ.
***
ಈಗ ನಮ್ಮನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆಯೆಂದರೆ ಸ್ಥಳೀಯ ಕನ್ನಡಿಗರ ಎಷ್ಟು ಮಕ್ಕಳು ಪ್ರತಿ ವರ್ಷ ಈ ದೇಶ ವಿದೇಶಿ ಕಂಪನಿಗಳಲ್ಲಿ ಆಯ್ಕೆಯಾಗುತ್ತಿದ್ದಾರೆ ಎನ್ನುವುದು. ಒಟ್ಟಾರೆ ಕನ್ನಡಿಗರ ಅಂಕಿಅಂಶಗಳನ್ನು ತೆಗೆದುಕೊಂಡರೆ ದೊಡ್ಡ ನಿರಾಶೆ ಎದುರಾಗುತ್ತದೆ. ಕಂಪನಿಗಳು ಹೇಳಿಕೊಳ್ಳುವಂತೆ ಕ್ವಾಲಿಟಿ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಮಾತ್ರ ಶುದ್ಧು ಸುಳ್ಳು. ವಿದ್ಯಾರ್ಥಿಗಳು ಕಾಲೇಜಿಗೆ ಆಯ್ಕೆಯಾಗುವುದರಿಂದಲೆ ಗೋಲ್‌ಮಾಲ್ ಪ್ರಾರಂಭವಾಗಿಬಿಡುತ್ತದೆ. ಕೇವಲ ಕೆಲವು ಕಾಲೇಜುಗಳನ್ನು ಬಿಟ್ಟರೆ ಬಹಳಷ್ಟು ಕಾಲೇಜುಗಳಲ್ಲಿ ಕೆಲವು ಅಧ್ಯಾಪಕರು ಮತ್ತು ಸಿಬ್ಬಂದಿಯೇ ವಿದ್ಯಾರ್ಥಿಗಳಿಂದ ಹಣ ಪಡೆದು ಕಾಪಿ ಹೊಡೆಸಿ ಇಲ್ಲ ಹೆಚ್ಚು ಅಂಕಗಳನ್ನು ನೀಡುವ ಪ್ರಸಂಗಗಳೂ ಉಂಟೂ.
ಇನ್ನು ಕಂಪನಿಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಬಂದಾಗ ಪ್ಲೇಸ್‌ಮಿಂಟ್ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಮುಂದೆ ಬರುವ ವಿಷಯಗಳೂ ಇವೆ. ಇಲ್ಲಿ ಹಣ/ಜಾತಿ/ಮತಗಳು ಸ್ವಲ್ಪ ಕೆಲಸ ಮಾಡುತ್ತವೆ. ಇನ್ನು ಕಂಪನಿಗಳ ಹೆಚ್‌ಆರ್‌ಡಿಗಳು ಮಲಯಾಳಿ, ತಮಿಳು, ತೆಲುಗು ಬೆಂಗಾಲಿ, ಒರಿಯಾ ಯುಪಿ ಇತ್ಯಾದಿ ಗುಂಪುಗಳಾಗಿ ಒಳಗೊಳಗೆ ಗುಂಪುಕಟ್ಟಿಕೊಂಡು ಕೆಲಸ ಮಾಡುತ್ತಿರುತ್ತವೆ. ವಿದೇಶಿ ಕಂಪನಿಗಳ ಆಡಳಿತದಾರರಿಗೆ ಇದರ ಯಾವುದೇ ಸೂಚನೆಗಳು ತಿಳಿಯದಂತೆ ಈ ಗುಂಪುಗಳು ನೋಡಿಕೊಳ್ಳುತ್ತವೆ. ದೇಶಿ ಕಂಪನಿಗಳ ಒಡೆಯರು ಮತ್ತು ಮೇಲ್ಮಟ್ಟದ
ಅಧಿಕಾರಿಗಳಿಗೂ ಇವು ಅರ್ಥವಾಗುವುದಿಲ್ಲ. ಯಾರಾದರೂ ಇದರ ಬಗ್ಗೆ ಚಕಾರ ಎತ್ತಿದರೆ ಅವರನ್ನು ಗುರುತಿಸಿ ಅವರ ಮೇಲೆ ಕೆಲಸದ ಒತ್ತಡ ಹಾಕಿ, ಇಲ್ಲ ಸುಮ್ಮಸುಮ್ಮನೆ ಯಾವುದೋ ಖ್ಯಾತೆ ತೆಗೆದು ತಾವೇ ಕೆಲಸ ಬಿಟ್ಟು ಹೋಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಬಿಡುತ್ತಾರೆ. ತೀರಾ ಹೆಚ್ಚಾದರೆ ಒಂದು ಸಾಯಂಕಾಲ ಪಿಂಕ್ ಪತ್ರವನ್ನು ಕೈಗೆ ನೀಡಿ ಕಂಪನಿಯಿಂದ ಹೊರಗಾಕಿಬಿಡುತ್ತಾರೆ. ಐಟಿ/ಬಿಟಿ ಕಂಪನಿಗಳನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ.
ಕಂಪನಿಗಳು ನೀಡುವ ಪ್ರಮೋಷನ್/ಬೋನಸ್‌ನ್ನು ಕೆಲವು ಗುಂಪುಗಳು ಒಳಗೊಳಗೆ ಹಂಚಿಕೊಳ್ಳುತ್ತವೆ. ವಿಶೇಷವೆಂದರೆ ಒಂದೇ ತಂಡದಲ್ಲಿರುವ ಹತ್ತು ಜನರಿಗೆ ೧೦ ರೀತಿಯಲ್ಲಿ ಬೋನಸ್ ದೊರಕುತ್ತದೆ. ಯಾರಿಗೆ ಎಷ್ಟು ದೊರಕಿತು ಎನ್ನುವುದು ಕೂಡ ಟಾಪ್ ಸೀಕ್ರೆಟ್. ಆ ತಂಡದ ನಾಯಕ ಒಬ್ಬರನ್ನೆ ತನ್ನ ಕೋಣೆಯೊಳಕ್ಕೆ ಕರೆದು ಮಾತನಾಡಿ ಬೋನಸ್ ಚುಕ್ತಾ ಮಾಡುತ್ತಾನೆ. ಬೋನಸ್ ತೆಗೆದುಕೊಂಡವರೂ ಅಷ್ಟೇ ಅಕ್ಕಪಕ್ಕದ ಗೆಳೆಯರಿಗೂ ಹೇಳುವಂತಿಲ್ಲ. ಇದು ಕಂಪನಿಗಳ ಕಾನೂನು. ಈ ಕಾರಣಗಳಿಂದ ಉದ್ಯೋಗಿಗಳೂ ಕೂಡ ಎರಡು ಮೂರು ವರ್ಷಗಳಿಗೆ ಒಮ್ಮೆ ಅವಕಾಶ ಸಿಕ್ಕಾಗೆಲ್ಲ ಪಲಾಯನವಾಗುತ್ತಿರುತ್ತಾರೆ. ಕಂಪನಿಬಿಟ್ಟಾಗ ಅವರ ಸಂಬಳದ ವಿವರ ಮತ್ತು ಕಾಂಡಕ್ಟ್ ಸರ‍್ಟಿಪಿಕೇಟ್ ಬೇರೆ ಕಂಪನಿಗಳಿಗೆ ಬೇಕೇಬೇಕು. ಹಾಗಾಗಿ ಉದ್ಯೋಗಿಗಳು ಯಾರೂ ಬಾಯಿ ಬಿಡುವುದಿಲ್ಲ. ಅವರು ಎಲ್ಲಿಗೋದರೂ ಒಂದೇ ರೀತಿಯ ಬಾಳನ್ನು ಸಾಗಿಸಬೇಕಿದೆ. ಮುಖ್ಯ ಸಂಗತಿ ಎಂದರೆ ಉದ್ಯೋಗಿಗಳೂ ಕೂಡ ತಾವು ಕೆಲಸ ಮಾಡಿದ ಕಂಪನಿಗಳ ಬಗ್ಗೆ ಚಕಾರ ಎತ್ತುವುದಿಲ್ಲ, ಹಾಗೆಯೇ ಕಂಪನಿಗಳೂ ಕೂಡ ಉದ್ಯೋಗಿಗಳು ಕೆಲಸ ಬಿಟ್ಟುಹೋಗುವಾಗ ಯಾವ ತಕರಾರುಗಳನ್ನು ತೆಗೆಯುವುದಿಲ್ಲ. ಎಲ್ಲಾದರೂ ಹೋಗಿ ಚನ್ನಾಗಿ ದುಡಿಯುರಿ ಚನ್ನಾಗಿರಿ ಎನ್ನುವುದೇ ಇವುಗಳ ಪಾಲಿಸಿ.
ಕೆಲವು ಕಂಪನಿಗಳಲ್ಲಿ ಇನ್ನೊಂದು ರೀತಿಯ ಪ್ರಕ್ರಿಯೆ ಇದೆ. ಕಂಪನಿಗಳ ಒಳಗಿರುವ ಯಾರಾದರೂ ಉದ್ಯೋಗಿಗಳು ತಮಗೆ ಗೊತ್ತಿರುವ ಗೆಳೆಯರನ್ನು ಅವರ ಯುವಿ (ಬಯೋಡೆಟಾ) ಮೂಲಕ ಪರಿಚಯಿಸಬಹುದು. ಹಾಗೇ ಪರಿಚಯಿಸಿ ಅಭ್ಯರ್ಥಿಗಳು ಸಂದರ್ಶನದ ಮೂಲಕ ಆಯ್ಕೆಯಾದರೆ ಪರಿಚಯಯಿಸಿದವರಿಗೆ ಇಂತಿಷ್ಟು ಹಣ ದೊರಕುತ್ತದೆ (೧೦-೫೦ ಸಾವಿರದವರೆಗೂ) ಹೆಚ್‌ಆರ್‌ಡಿ ಮತ್ತು ಪರಿಚಯಿಸಿದವರ ಮಧ್ಯ ಸ್ವಲ್ಪ ಒಡಂಬಡಿಕೆ ಇದ್ದರೆ ಸಾಕು ಒಂದಷ್ಟು ಗುಂಪುಗಳು ಒಳಗೊಳಗೆ ಕೆಲಸ ನಡೆಸಿ ತಮ್ಮ ಜಾತಿ/ಜನಾಂಗ/ರಾಜ್ಯಗಳಿಗೆ ಅದ್ಯತೆ ನೀಡುತ್ತವೆ.
ಕನ್ನಡಿಗರು ಹಿಂದೆ
ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು ಕೇವಲ ೪ ವರ್ಷ ಇಲ್ಲಿ ಓದಿ ಯಾವುದೋ ಒಂದು ಕಂಪನಿ ಸೇರಿ, ಇಲ್ಲೇ ಮದುವೆ ಮಾಡಿಕೊಂಡು, ಮನೆ ಕಾರು ಖರೀದಿ ಮಾಡಿ ಹಾಯಾಗಿ ಇದ್ದುಬಿಡುತ್ತಾರೆ. ಇಲ್ಲ ಅವಕಾಶ ಸಿಕ್ಕರೆ ವಿದೇಶಗಳಿಗೆ ಓಡಾಡುತ್ತ ಬೆಂಗಳೂರನ್ನು ತಮ್ಮ ತವರು ಮನೆ/ಅತ್ತೆಮನೆ ಮಾಡಿಕೊಂಡು ಇದ್ದು ಬಿಡುತ್ತಾರೆ. ಇವರು ೨೦ವರ್ಷ ಕಾಲ ಬೆಂಗಳೂರಿನಲ್ಲೆ ಇದ್ದರೂ ಕನ್ನಡ ಕಲಿತುಕೊಳ್ಳುವುದಿಲ್ಲ. ಇಲ್ಲ ನಾವು ಅವರಿಗೆ ಕನ್ನಡ ಕಲಿಸುವುದಿಲ್ಲ. ಯಾವುದೇ ಕಂಪನಿ ಒಳಹೊಕ್ಕಿ ನೋಡಿದರೂ ಬೇರೆ ರಾಜ್ಯಗಳವರ ಸಂಖ್ಯೆಯೇ ಎದ್ದು ಕಾಣಿಸುತ್ತದೆ. ತಾಂತ್ರಿಕ ವಿಭಾಗಗಳೆ ಅಲ್ಲ ಸೆಕ್ಯೂರಿಟಿ, ಕ್ಯಾಂಟೀನ್ ಮಾಲುಗಳೆಲ್ಲದರಲ್ಲೂ ಮಲಯಾಳಿ, ಆಂಧ್ರ ಇತರ ರಾಜ್ಯಗಳವರೆ ತುಂಬಿಹೋಗಿದ್ದಾರೆ. ಬೆಂಗಳೂರಿನ ಐಟಿಬಿಟಿ ಕಂಪನಿಗಳಲ್ಲಿ ಕನ್ನಡಿಗರ ಸಂಖ್ಯೆ ಇಷ್ಟು ಕಡಿಮೆ ಯಾಕೆ? ರಾಜ್ಯದಲ್ಲಿ ಒಳ್ಳೆ ಕಾಲೇಜುಗಳಿದ್ದರೂ ಸ್ಥಳೀಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಏಕೆ? ಕನ್ನಡಿಗರಿಗೆ ಆಂಬಿಷನ್ ಕಡಿಮೆಯೇ? ಕಷ್ಟಪಟ್ಟು ಓದುವುದಿಲ್ಲವೇ? ಆತ್ಮವಿಶ್ವಾಸ ಕಡಿಮೆಯೇ? ಪೋಷಕರು ಮಕ್ಕಳಿಗೆ ಸರಿಯಾಗಿ ಪ್ರೋತ್ಸಾಹ ನೀಡುವುದಿಲ್ಲವೇ? ಸೋಮಾರಿಗಳೆ? ಏನೆಲ್ಲ ಕಾರಣ. ಮೇಲಿನ ಎಲ್ಲಾ ವಿಷಯಗಳೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣ ಎಂದರೂ ತಪ್ಪಾಗುವುದಿಲ್ಲ. ಮೊನ್ನೆ ಒಂದು ಕಾಲೇಜಿನಲ್ಲಿ ಅಧ್ಯಾಪಕರ ಮುಂದೆ ಮೇಲಿನ ವಿಷಯವನ್ನು ಪ್ರಸ್ತಾಪ ಮಾಡಿದಾಗ ಅಧ್ಯಾಪಕರೊಬ್ಬರು, ‘ಅಯ್ಯೊ ಬಿಡಿ ಸಾರ್ ನಮ್ಮವರು ಮನೆ ಬಿಟ್ಟು ಹೊರಕ್ಕೆ ಹೋಗುವುದಿಲ್ಲ. ಇವರು ಏನು ಮಾಡುವುದಕ್ಕೆ ಸಾಧ್ಯ? ಎಂದರೆ ಇನ್ನೊಬ್ಬರು ‘ಹೊರಕ್ಕೆ ಹೋಗದೆ ಇದ್ದರೆ ಹೋಗಲಿ ಇಲ್ಲಿ ಮಾತ್ರ ಏನು ಮಾಡ್ತಾ ಇದ್ದಾರೆ ಎಂದರು.
ಐಎಎಸ್/ಐಪಿಎಸ್/ಐಐಟಿ/ಐಐಎಮ್ ಯಾವುದೇ ರಾಷ್ಟ್ರಮಟ್ಟದ ಆಯ್ಕೆಪಟ್ಟಿಯನ್ನು ನೋಡಿದರೂ ಕರ್ನಾಟಕ ಅಭ್ಯರ್ಥಿಗಳ ಸಂಖ್ಯೆ ತೀರ ಕಡಿಮೆ. ಕಳೆದ ವರ್ಷ ಐಎಎಸ್/ಐಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಮ್ಮ ರಾಜ್ಯದ ಅಭ್ಯರ್ಥಿಗಳ ಸಂಖ್ಯೆ ಕೇವಲ ೩೦ (ಆ ವರ್ಷ ಅದೇ ಹೆಚ್ಚು). ಐಐಟಿ ಕಾಲೇಜುಗಳಿಗೆ ಆಯ್ಕೆಯಾಗುವವರ ಸಂಖ್ಯೆಯೂ ತೀರಾ ಕಡಿಮೆ. ನೆರೆಯ ಹೈದರಾಬಾದ್ ನಗರ ಒಂದರಿಂದಲೇ ಶೇಕಡ ೨೫ ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷವೂ ಆಯ್ಕೆಯಾಗುತ್ತಾರೆ. ಇನ್ನು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಐಐಎಮ್‌ನಲ್ಲಿ ಈ ವರ್ಷ ಆಯ್ಕೆಯಾಗಿರುವ ೩೭೫ ವಿದ್ಯಾರ್ಥಿಗಳಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಸಂಖ್ಯೆ ೧೪. ಅದೇ ಆಂಧ್ರ, ತಮಿಳುನಾಡು ಮತ್ತು ಕೇರಳದಿಂದ ತಲಾ ೪೦ ೮೦ ೩೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಇನ್ನೊಂದು ಪ್ರತಿಷ್ಟಿತ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (ಐಐಎಸ್) ಕನ್ನಡಿಗರನ್ನು ದುರ್ಬೀಣು ಹಾಕಿಕೊಂಡು ನೋಡಿದರೂ ಸಿಕ್ಕುವುದಿಲ್ಲ. ಇಷ್ಟಕ್ಕೂ ಐಐಟಿ/ಐಐಎಸ್ ಎಲ್ಲದರಲ್ಲೂ ಮೀಸಲಾತಿ ಇದೆ. ಇದನ್ನೆಲ್ಲಾ ನೋಡಿದಾಗ ಕರ್ನಾಟಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಎಷ್ಟು ಎನ್ನುವ ಪ್ರಶ್ನೆ ಏಳುತ್ತದೆ.
ಮಂಡಲ್ ವರದಿ ಅನುಷ್ಠಾನಕ್ಕೆ ಬಂದ ಮೇಲೆ ದೇಶದಾದ್ಯಂತ ಎಲ್ಲಾ ಕೇಂದ್ರ ಸರಕಾರದ ವಿಭಾಗಗಳಲ್ಲೂ ಓಬಿಸಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಕರ್ನಾಟಕದ ಓಬಿಸಿಗಳಿಗೆ ಕೇಂದ್ರ ಸರಕಾರದಲ್ಲಿ ಮೀಸಲಾತಿ ಇದೆ ಎನ್ನುವ ವಿಷಯವೇ ಗೊತ್ತಿಲ್ಲವೇನೂ ಎನ್ನುವ ಆತಂಕ ಮೂಡುತ್ತದೆ. ದೇಶದ ಎಲ್ಲಾ ರಾಜ್ಯಗಳ ಅಭ್ಯರ್ಥಿಗಳೂ ಕೇಂದ ಸರಕಾರದ ೧೨೦ ವಿಭಾಗಗಳಲ್ಲೂ ಆಯ್ಕೆಯಾಗುತ್ತಿರುವುದನ್ನು ನೋಡಬಹುದು. ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಇತ್ತೀಚೆಗೆ ತೀರಾ ಹೆಚ್ಚಾಗಿ ಕಾಣಿಸುತ್ತಿದೆ. ಆದರೆ ತೀರಾ ಕಳಕಳಿಯ ವಿಷಯವೆಂದರೆ ಕರ್ನಾಟಕದಿಂದ ಮಹಿಳಾ ಅಭ್ಯರ್ಥಿಗಳು ಒಂದು ಕಡೆಗಿರಲಿ ಗಂಡು ಅಭ್ಯಥಿಗಳ ಕಾಣಿಸುತ್ತಿಲ್ಲ. ಕಳೆದ ೧೦ ವರ್ಷಗಳಲ್ಲಿ ಆಯ್ಕೆಯಾಗಿರುವ ಪಟ್ಟಿಯನ್ನು ನೋಡಿದಾಗ ಭಾರಿ ನಿರಾಶೆಯಾಗುತ್ತದೆ. ಓಬಿಸಿಗಳೆ ಅಲ್ಲ, ಎಸ್‌ಸಿ, ಎಸ್‌ಟಿ, ಬಿಸಿ ಇನ್ನಿತರರ ಅಭ್ಯರ್ಥಿಗಳೂ ಸಂಖ್ಯೆಯೂ ತೀರಾ ಗೌಣ. ನಮ್ಮ ರಾಜ್ಯದ ಅಭ್ಯರ್ಥಿಗಳೆಲ್ಲ ಏನಾದರೂ ಮಾಡಿ ೧೦ ೨೦ ಲಕ್ಷ ಲಂಚ ಕೊಟ್ಟು ರಾಜ್ಯದಲ್ಲಿಯೇ ಯಾವುದಾದರೂ ವಿಭಾಗದಲ್ಲಿ ತೂರಿಕೊಳ್ಳೋಣ ಎಂದು ಪಡಬಾರದ ಕಷ್ಟಗಳನ್ನು ಪಡುತ್ತಿರುತ್ತಾರೆ. ಹಾಗೇ ಲಂಚ ಕೊಟ್ಟು ಸೇರಿದ ಮೇಲೆ ಹಾಕಿದ ಹಣವನ್ನು ಹಿಂದಕ್ಕೆ ಪಡೆಯಬೇಕಾದರೆ ಅವರೂ ಲಂಚ ತೆಗೆದುಕೊಳ್ಳಬೇಕಲ್ಲವೇ? ಅಂದರೆ ಅವರ ಎಂಟ್ರಿಯೇ ಭ್ರಷ್ಟತೆಯಿಂದ ಪ್ರಾರಂಭವಾಗಿಬಿಡುತ್ತದೆ. ಇನ್ನು ನಮ್ಮ ರಾಜಕಾರಣಿಗಳು, ಸರಕಾರದ ಬಗ್ಗೆ ಮಾತನಾಡಲು ನನಗೆ ಸುತರಾಂ ಇಷ್ಟವಿಲ್ಲ.
***
ಇನ್ನು ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ದೆವ್ವ ಬಡಿದಿದೆ ಎಂದರೂ ತಪ್ಪಾಗುವುದಿಲ್ಲ. ಈ ವಿಶ್ವವಿದ್ಯಾಲಯಗಳಲ್ಲಿ ಮುಂಚೂಣಿಯಲ್ಲಿರುವ ಒಂದೇ ಒಂದು ವಿಷಯವೆಂದರೆ ಜಾತಿ ರಾಜಕೀಯ. ಸುಮಾರು ಹತ್ತು ವರ್ಷಗಳ ಹಿಂದೆಯೇ ಬಂಗಾಳ, ಒರಿಸ್ಸಾ ಇತರ ರಾಜ್ಯಗಳ ಆಭ್ಯರ್ಥಿಗಳು ಯಾವ ಕಾರಣದಿಂದ ಕೇಂದ್ರ ಸರಕಾರದ ವಿಭಾಗಗಳಲ್ಲಿ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ವಿಷಯ ಕೆದಕಿದಾಗ ಅಲ್ಲಿನ ವಿಶ್ವವಿದ್ಯಾಯಗಳು/ಕಾಲೇಜುಗಳು ವಿದ್ಯಾರ್ಥಿಗಳಿಗೆ ಓದುವ ಹಂತದಲ್ಲೆ ಆಯಾ ವಿಭಾಗಗಳಿಗೆ ಸಂಬಂಧಪಟ್ಟ (ಐಐಟಿ/ಐಐಎಮ್/ಯುಪಿಎಸ್‌ಸಿಯ ಎಲ್ಲಾ ವಿಷಯಗಳು, ಬ್ಯಾಂಕ್, ಮಿನಿಸ್ಟ್ರಲ್ ಸ್ಟಾಫ್, ಇಂಜಿನಿಯರ‍್ಸ್, ಮಿಲಿಟರಿ ಹೀಗೆ...) ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಗಳನ್ನು ಪ್ಯಾರಲಲ್ ಆಗಿ ನಡೆಸುತ್ತಾರೆ ಎಂದು ತಿಳಿಯಿತು. ಅಷ್ಟೇ ಅಲ್ಲ ಬಹಳಷ್ಟು ಕಾಲೇಜುಗಳಲ್ಲಿ ಹೆಚ್ಚು ಅಂಕಗಳನ್ನು ನೀಡಿ ಕೇಂದ್ರ ಸರಕಾರದ ವಿಭಾಗಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಹಾಯ ಮಾಡುವುದು ಉಂಟು. ಇನ್ನೂ ಒಂದು ಆತಂಕದ ವಿಷಯವೆಂದರೆ ಕೆಲವು ಮಿನಿಸ್ಟ್ರಿಗಳಲ್ಲಿ ಆಯಾ ವಿಭಾಗಗಳಲ್ಲಿ ತಮ್ಮ ರಾಜ್ಯದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಸ್ವಲ್ಪ ಮಟ್ಟಗಿನ ಇನ್‌ಫ್ಲೂಯನ್ಸ್ ಕೂಡ ನಡೆಸಲಾಗುತ್ತಿದೆ ವಿನ್ನುವ ಮಾತು ಕೇಳಿಬರುತ್ತಿದೆ. ಕರ್ನಾಟಕದ ದೆಲ್ಲಿ ರಾಜಕಾರಣಿಗಳು ಅವರ ಸಮಸ್ಯಗಳ ಬಗ್ಗೆ ಚರ್ಚಿಸಲು ಮಾತ್ರ ದೆಲ್ಲಿಗೆ ಹೋಗುತ್ತಾರೆಯೇ ನಿನಹಃ ರಾಜ್ಯದ ಬಗ್ಗೆ, ಜನರ ಬಗ್ಗೆ ಅವರು ಯಾವಾಗಲೂ ಮಾತನಾಡುವುದಿಲ್ಲ.
ವಿದ್ಯಾರ್ಥಿಗಳ ಆಯ್ಕೆಯ ಬಗ್ಗೆ ರಾಜ್ಯದ ಹಲವು ಡಿಗ್ರಿ ಕಾಲೇಜು/ವಿಶ್ವವಿದ್ಯಾಲಯಗಳ ಲೆಕ್ಚರ‍್ಸ್/ಪ್ರೊಪೆಸರ‍್ಸ್ ಜೊತೆಗೆ ಮಾತನಾಡಿದ್ದೀನಿ. ಆದರೆ ಯಾರೂ ಅದನ್ನು ತಮ್ಮ ಕಿವಿಗಳಿಗೆ ಹಾಕಿಕೊಳ್ಳಲಿಲ್ಲ. ಕೆಲವು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ಸರಕಾರ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಉಚಿತ ತರಗತಿಗಳನ್ನು ನಡೆಸುತ್ತಿತ್ತು. ಈಗ ಬಹುಶಃ ನಡೆಯುತ್ತಿಲ್ಲ ಎನಿಸುತ್ತದೆ, ನಡೆದರೂ ಅದು ಕಾಟಾಚಾರಕ್ಕೆ ಮಾತ್ರ. ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಗಳಿಗೆ ತಯಾರು ನಡೆಸುವ ಹಲವಾರು ಖಾಸಗಿ ಕೇಂದ್ರಗಳಿದ್ದರೂ ಅವೆಲ್ಲ ಆರಕ್ಕೆ ಏರದ ಮೂರಕ್ಕೆ ಇಳಿಯದ ಕೇಂದ್ರಗಳಾಗಿವೆ.
ರಾಜ್ಯದ ವಿದ್ಯಾಮಂತ್ರಿಗಳು ಮಾನವ ಸಂಪನ್ಮೂಲ ಮಂತ್ರಿಗಳು ಮತ್ತು ಬುದ್ಧಿಜೀವಿಗಳು ಇದರ ಬಗ್ಗೆ ತೀವ್ರವಾಗಿ ಗಮನ ಹರಿಸಬೇಕಾಗಿದೆ. ನಮ್ಮ ಕರವೇ ಇನ್ನಿತರರು ಯಾವಾಗಲೋ ಒಮ್ಮೆ ಎಲ್ಲಾ ಕಂಪನಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಉಳಿದವರ‍್ಯಾರು ಅವರಿಗೆ ನೆರವು ನೀಡುವಂತೆ ತೋರುವುದಿಲ್ಲ. ಮೇಲಿನ ಮಾತುಗಳು ಅನೇಕ ವರ್ಷಗಳಿಂದ ನನ್ನಲ್ಲಿ ಕುದಿಯುತ್ತಿದ್ದು ಈಗ ಕನ್ನಡಿಗರ ಮುಂದೆ ಇಟ್ಟಿರುತ್ತೇನೆ. ಇದರಿಂದ ಸರಕಾರ/ಅಥವಾ ಸಂಬಂಧಪಟ್ಟವರು ಎಚ್ಚತ್ತುಕೊಂಡರೆ ಒಳ್ಳೆಯದು, ಇಲ್ಲವೆಂದರೆ ಲೇಖನ ಓದಿ ಹತ್ತರಲ್ಲಿ ಇದು ಒಂದು ಎಂದುಕೊಂಡರೆ? ಅದು ನಮ್ಮ ನಿಮ್ಮೆಲ್ಲರ ಹಣೆಬರ.

ರಂಗಭೂಮಿ: ಹೊಸ ಸಾಧ್ಯತೆಗಳು



ಡಾ.ರಾಜಪ್ಪ ದಳವಾಯಿ

ರಂಗಭೂಮಿ ಸದಾ ಜೀವಂತವಾದುದು. ಪ್ರಶ್ನಿಸುವ ಗುಣವಿರುವ ಮನಸ್ಸುಗಳ ಒಕ್ಕೂಟ ಅದು. ಅಲ್ಲಿ ಜನಶಿಕ್ಷಣ ನಡೆಯುತ್ತಿರುತ್ತದೆ. ಶಾಲಾ ಕಾಲೇಜು ಕಲಿಸಲಾರದ ಅಸಂಖ್ಯಾತ ಪಾಠಗಳನ್ನು ರಂಗಭೂಮಿ ಕಲಿಸುತ್ತದೆ. ಪ್ರಜಾಪ್ರಭುತ್ವ ನಿಂತಿರುವುದೇ ಪ್ರಶ್ನಿಸುವುದರಿಂದ. ಗುಲಾಮರ ಸೃಷ್ಟಿಸುವುದರಿಂದ ಶಿಕ್ಷಣಕ್ಕೆ ಯೋಗ್ಯ ಸ್ಥಿತಿ ಬರದು. ರಂಗಭೂಮಿ ಎತ್ತುವ ಪ್ರಶ್ನೆಗಳಿಗೆ ನಮ್ಮ ಯಾವ ಸರ್ಕಾರಗಳು ಉತ್ತರಿಸಲಾರವು. ಏಕೆಂದರೆ ರಂಗಭೂಮಿ ಎಲ್ಲರ ಮುಖವಾಡಗಳನ್ನು ಕಳಚಿಟ್ಟು ವಾಸ್ತವವನ್ನು ತೋರುವ ಕೈಗನ್ನಡಿ. ನಿಜ ಜೀವನದ ಪಾಠಗಳನ್ನು ರಂಗಭೂಮಿಯಷ್ಟು ಸಮರ್ಥವಾಗಿ ಕಲಿಸಬಲ್ಲ ಮತ್ತೊಂದು ಮಾಧ್ಯಮವಿಲ್ಲ. ಆದ್ದರಿಂದಲೇ ಭಾರತ ಸರ್ಕಾರ ತನ್ನ ಮುಂದಿನ ಯೋಜನೆಯಲ್ಲಿ ರಂಗಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಿಂದ ಪದವಿ, ಸ್ನಾತಕೋತ್ತರ ಪದವಿಗಳವರೆಗೆ ಕಡ್ಡಾಯ ಮಾಡುತ್ತಿರುವುದು ಸ್ವಾಗತಾರ್ಹ.
ಕನ್ನಡ ರಂಗಭೂಮಿ ಪ್ರಯೋಗಶೀಲರ ಸಮೃದ್ಧ ಕ್ಷೇತ್ರ. ಗುಬ್ಬಿ ಕಂಪನಿಯಂಥ ಅನೇಕ ಶಾಖೆ ಹೊಂದಿದ್ದ ಕಂಪನಿ ವೈಭವವು ವೃತ್ತಿ ರಂಗಭೂಮಿಯ ಒಂದು ತುದಿ. ಬಳ್ಳಾರಿ ರಾಘವರಂಥ ಪ್ರತಿಭಾಶಾಲಿಗಳಿಂದ ಹವ್ಯಾಸಿ ರಂಗಭೂಮಿ ಆರಂಭಗೊಂಡು ಇಂದಿಗೂ ಜೀವಂತವಿದೆ. ಅತಿ ಹೆಚ್ಚು ಎನ್‌ಎಸ್‌ಡಿ ಪದವೀಧರರು ಕರ್ನಾಟಕದಲ್ಲಿದ್ದಾರೆ. ಅನೇಕ ರಂಗತಂಡಗಳಿವೆ. ಕೆಲವು ನಿರಂತರ ರಂಗಕ್ರಿಯೆಯಲ್ಲಿವೆ. ಇನ್ನು ಕೆಲವು ಫಂಡ್ ನೋಡಿಕೊಂಡು ನಾಟಕ ಕಲಿಯುವ ತಂಡಗಳೂ ಇವೆ. ವೃತ್ತಿರಂಗ ತಂಡಗಳು ಕಡೆಗಾಲದ ದಿನಗಳನ್ನೆಣೆಸುತ್ತಿವೆ. ಅವು ಡಬಲ್ ಮೀನಿಂಗು, ಹಾಡು ನೃತ್ಯಗಳಲ್ಲಿ ಮಾತ್ರ ತಮ್ಮನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಅಲ್ಲಿ ನಾಟಕ ಇದೆ ಎನ್ನುವುದಕ್ಕಿಂತ ಜೀವಂತ ಸಿನಿಮಾ ಇದೆ ಎನ್ನುವುದೇ ಮೇಲು. ಬೆಂಗಳೂರು ಮೆಜೆಸ್ಟಿಕ್‌ನ ಗುಬ್ಬಿವೀರಣ್ಣ ರಂಗಮಂದಿರ ಇಂಥ ವೃತ್ತಿಪರರಿಗಾಗಿಯೇ ಮೀಸಲಿದೆ.
ರಂಗಭೂಮಿ ಜೀವಂತವಾಗಿದ್ದರೆ ನಾಟಕ ರಚನೆ ರಂಗವಿಮರ್ಶೆ ಮತ್ತು ಸಿನಿಮಾ ಹೆಚ್ಚು ನಾವೀನ್ಯತೆಯಿಂದ ಕೂಡಿರುತ್ತವೆ. ಸಿನಿಮಾ ನಟರಿಗೆ ರಂಗಭೂಮಿಯೇ ಮೊದಲ ತರಬೇತಿ ಶಾಲೆ. ಸಿನಿಮಾಕೆ ಹೋದವರು ಮತ್ತೆ ರಂಗಕ್ಕೆ ಹಿಂತಿರುಗಿ ನೋಡದ ಚಾಳಿಯೊಂದು ಕನ್ನಡದಲ್ಲಿದೆ. ನಾಟಕಕ್ಕೆ ಬಂದರೆ ತಮ್ಮ ಡಿಮ್ಯಾಂಡ್ ಎಲ್ಲಿ ಕಡಿಮೆ ಆದೀತೋ ಎಂಬ ಭಯ ಕಾಡಬಹುದು. ಹತ್ತಿದ ಏಣಿಯನ್ನು ಬಹುಬೇಗ ಮರೆಸುವ ಗುಣ ಸಿನಿಮಾಕ್ಕಿದೆ. ಅಲ್ಲಿ ಡಾಂಭಿಕತೆ ಹೆಚ್ಚು. ರಂಗಭೂಮಿ ಅಂಥ ಡಾಂಭಿಕತೆಯ ವಿರೋಧಿ. ವಾಸ್ತವವಾಗಿ ಸಿನಿಮಾ ಹೆಚ್ಚು ತಾಜಾತನದಿಂದ ಕೂಡಿರಬೇಕಾಗಿತ್ತು. ಆದರೆ ಅಲ್ಲೊಂದು ಶರಣಾಗತಿ ಸಂಸ್ಕೃತಿ ಪ್ರವಹಿಸಿ ಬರೀ ಅತಿರಂಜಕ ನಡವಳಿಕೆಗಳಿಂದ ಸಿನಿಮಾದ ಮಸಾಲೆಗಳಂತೆಯೇ ಕೃತಕತೆ ಅಧಿಕವಾಗಿದೆ. ತಮಗೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ತಿಳಿದ ಸಿನಿಮಾ ನಟರು ಕಡಿಮೆ ಎನ್ನುವಂತಾಗಿದೆ. ಕೇವಲ ಮನರಂಜನಾ ಗೊಂಬೆಗಳಾದ ಇಂಥ ಅನಾಹುತಗಳು ಆಗುತ್ತವೆ. ಆದರೆ ಖುಷಿಯ ವಿಚಾರವೆಂದರೆ ರಂಗಭೂಮಿಯಿಂದ ಪಳಗಿಹೋದ ನಟರ ಮಾತು ನಡವಳಿಕೆಗಳು ಬೇರೆಯೇ ಆಗಿರುವುದನ್ನು ಸದಾ ಗಮನಿಸಬಹುದು. ಕಾರಣ ರಂಗದಲ್ಲಿ ಅವರು ರೂಪು ಪಡೆದಿರುವ ಪ್ರಶ್ನಿಸುವ ಗುಣಗಳಿಂದಾಗಿ ಅವರು ಬೇರೆ ರೀತಿಯೇ ಇರುತ್ತಾರೆ.
ಈಗ ರಂಗಕ್ರಿಯೆ ಮುಖ್ಯವಾಗಿದೆ. ಆದ್ದರಿಂದ ಅದು ನಾಟಕ ರಚನೆಯನ್ನೇ ಕಾಯುತ್ತಿಲ್ಲ. ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ, ಸಾಹಿತ್ಯಕ ವಾಗ್ವಾದಗಳು, ಪತ್ರಿಕಾ ವರದಿ-ಹೀಗೆ ಯಾವುದೇ ಪಠ್ಯನಾಟಕಕ್ಕೆ ವಸ್ತುವಾಗಬಹುದು. ಸಿಜಿಕೆ ಬೆಲ್ಸಿ-ಪತ್ರಿಕಾ ವರದಿಯನ್ನಾಧರಿಸಿದ್ದು, ಬಸವಲಿಂಗಯ್ಯನವರ ’ಲಂಕೇಶರಿಗೆ ನಮಸ್ಕಾರ’ ಒಂದು ಕೊಲಾಜ್, ದಿ.ಆರ್.ನಾಗೇಶ್ ಅನೇಕ ಸಣ್ಣಕತೆ, ಕಾದಂಬರಿಗಳನ್ನು ರಂಗಕ್ಕೆ ತಂದು ಯಶಸ್ವಿ ನಾಟಕಗಳನ್ನಾಗಿಸಿದವರು. ಅದರ ನಾಟಕಕ್ಕೆ ವಸ್ತು ನಾಟಕವೇ ಆಗಬೇಕಾಗಿಲ್ಲ ಎಂಬುದು ಮುಖ್ಯವಾಯಿತು. ಏಕೆಂದರೆ ಸಾಹಿತ್ಯ ಏಕಕರ್ತೃ ಮಾಧ್ಯಮ. ರಂಗಕ್ರಿಯೆ ಅಥವಾ ಸಿನಿಮಾ ಸಾಮುದಾಯಿಕವಾದದ್ದು. ಅನೇಕ ಪ್ರತಿಭೆಗಳ ಸಂಗಮ. ರಂಗವನ್ನು ಈಗ ಏಕವ್ಯಕ್ತಿ ಪ್ರದರ್ಶನ ನೀಡುತ್ತಾರಾದರೂ ರಂಗದ ಹಿಂದೆ ಅನೇಕ ಜನ ಕೆಲಸ ಮಾಡಿರುತ್ತಾರೆ.
ಕನ್ನಡ ರಂಗಭೂಮಿ ಸದಾ ಜೀವಂತ. ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಜಯನಗರದ ಎಚ್.ಎನ್.ಕಲಾಕ್ಷೇತ್ರಗಳ ರಿಹರ್ಸಲ್‌ಗಳಾಗಲಿ, ರಂಗಶಂಕರದ ಪ್ರದರ್ಶನಗಳು ನಾಟಕ ಅಕಾಡೆಮಿಯ ಚಟುವಟಿಕೆಗಳು, ಹವ್ಯಾಸಿ ತಂಡಗಳ ಪ್ರಯೋಗಗಳು, ಬೆಂಗಳೂರಿನಾಚೆ ಜೀವಂತವಾಗಿರುವ ನೂರಾರು ರಂಗತಂಡಗಳು ರಂಗಭೂಮಿಯನ್ನು ಜೀವಂತವಾಗಿಟ್ಟಿವೆ. ಎನ್‌ಎಸ್‌ಡಿ ತನ್ನ ಶಾಲೆಯನ್ನು ಆರಂಭಿಸಬೇಕಾದುದು ಬಾಕಿ ಇದೆ. ಅನೇಕ ನಾಟಕೋತ್ಸವಗಳು, ರಂಗಶಿಕ್ಷಣ ಕೇಂದ್ರಗಳ ಚಟುವಟಿಕೆಗಳು ನಿರಂತರಗೊಂಡು ರಂಗಕ್ರಿಯೆ ಸದಾ ಸಶಕ್ತವೂ ಚೈತನ್ಯಶೀಲವೂ ಆಗಿರುವುದನ್ನು ಗಮನಿಸಬಹುದಾಗಿದೆ. ರಂಗ ಚಟುವಟಿಕೆಗಾಗಿ ಸಹಾಯಧನ ಸ್ವೀಕರಿಸುವ ಅನೇಕ ಸಂಸ್ಥೆಗಳು, ವ್ಯಕ್ತಿಗಳೂ ಇದ್ದಾರೆ. ಕೋಲಾರದ ಆದಿಮ ರಂಗಕ್ರಿಯೆಯ ಇಂದಿನ ದೊಡ್ಡ ಸಾಧ್ಯತೆಯಾಗಿ ಕೆ.ರಾಮಯ್ಯ ಅವರ ತಂಡ ಕ್ರಿಯಾಶೀಲವಾಗಿದೆ. ಪ್ರಧಾನವಾಗಿ ಮಕ್ಕಳ ರಂಗಭೂಮಿ ಕಟ್ಟುವ ಮೂಲಕ ಹೊಸ ಸಾಧ್ಯತೆಗಳತ್ತ ಸಾಗುತ್ತಿದೆ. ತುಮರಿ ಚಿಣ್ಣರ ಮೇಳ ಕಳೆದೆರಡು ದಶಕಗಳಿಂದ ಹೊಸ ವಸ್ತು, ಪ್ರದರ್ಶನಗಳ ಸಾಧ್ಯತೆಗಳನ್ನು ಪ್ರದರ್ಶಿಸುತ್ತಾ ಬಂದಿದೆ. ಜ್ಞಾನಿಗಳ ರಂಗಭೂಮಿ ಹೇಗೆ ಮುಖ್ಯವೋ ಮಕ್ಕಳ ರಂಗಭೂಮಿಯೂ ಅಷ್ಟೇ ಮುಖ್ಯ ಎಂದು ಅನೇಕ ವ್ಯಕ್ತಿಗಳು ರಂಗ ನಿರಂತರವಾಗಿದ್ದಾರೆ.
ಕರ್ನಾಟಕ ಸರ್ಕಾರ ಸಂಸ್ಕೃತಿ ಇಲಾಖೆಯ ಮೂಲಕ ಸಾಕಷ್ಟು ಸಹಾಯ ಮಾಡುತ್ತಿದೆ. ಆದರೆ ರಂಗ ಚಟುವಟಿಕೆಗೆ ಈಗ ಇಟ್ಟಿರುವ ಅನುದಾನದ ಹೆಚ್ಚಳ ಅಗತ್ಯವಾಗಿದೆ. ಒಂದು ಸಂಗೀತ ಕಛೇರಿ, ನಾಟ್ಯ ಪ್ರದರ್ಶನದ ಹಣಕ್ಕೆ ಹೋಲಿಸಿದರೆ ರಂಗಭೂಮಿಗೆ ಅದು ಕೊಡುತ್ತಿರುವ ಪ್ರೋತ್ಸಾಹ ಇನ್ನೂ ಚಿತ್ರಾನ್ನಕ್ಕಾಗುವಷ್ಟು ಮಾತ್ರ. ಮೂವತ್ತು ಜನದ ಒಂದು ತಂಡಕ್ಕೆ ಇಪ್ಪತ್ತು ಸಾವಿರ ರೂ. ಬಜೆಟ್ ಇದ್ದರೆ, ಅನೇಕ ಕಡಿತಗಳೊಂದಿಗೆ ತಂಡಕ್ಕೆ ಹತ್ತೋ ಹನ್ನೆರಡು ಸಾವಿರವೋ ಸಿಗುತ್ತದೆ. ರಂಗನಿರ್ವಹಣೆ ದುಬಾರಿಯಾಗಿರುವ ಈ ಕಾಲಕ್ಕೆ ಅನುದಾನವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ದೊಡ್ಡವರಿಗೆ ಲಕ್ಷಗಟ್ಟಲೆ ಕೊಡುವುದು ಅನಾಮಿಕರಿಗೆ ಚಿಲ್ಲರೆ ಕಾಸು ಕೊಡುವುದು ಅಲ್ಲಿದೆ. ರಂಗನೀತಿಯ ಬಗ್ಗೆ ಹೊಸ ಸಾಧ್ಯತೆಗಳ ಪ್ರಯೋಗಶೀಲರಿಗೆ ಕೊಡುವ ಹಣ ಹೆಚ್ಚಾಗಬೇಕು. ಹೊಸ ತಂಡಗಳಿಗೆ ನಿಯಮಗಳ ಬಾರು ಕೋಲೆತ್ತುವುದನ್ನು ಬಿಟ್ಟು ರಂಗಕ್ರಿಯೆಗೆ ಪೂರಕವಾಗಿ ಸ್ಪಂದಿಸದಿದ್ದರೆ ಹೊಸ ಕನಸು ಹೊತ್ತು ರಂಗಭೂಮಿಯತ್ತ ಬರುವ ಹೊಸ ತಂಡಗಳ ಕನಸು ಭಗ್ನಗೊಳ್ಳುತ್ತವೆ. ಕೊಟ್ಟವರಿಗೆ ಕೊಡುವುದನ್ನು ನಿಲ್ಲಿಸಿ ಹೊಸಬರನ್ನು ಒಳಗೊಳ್ಳುವ ಪ್ರಕ್ರಿಯೆ ನಡೆಯಬೇಕು. ಇಲ್ಲದಿದ್ದರೆ ನಮ್ಮ ಸಾಂಸ್ಕೃತಿಕ ನೀತಿಯೇ ದಿಕ್ಕೆಟ್ಟು ಹೋಗುತ್ತದೆ. ರಂಗಭೂಮಿ ಅಸಂಖ್ಯಾತ ಕ್ರಿಯಾಶೀಲರ ನಮ್ಮ ಭೂಮಿ. ನಮ್ಮ ಜನಸಂಖ್ಯೆಗೆ ಹೋಲಿಸಿದರೆ, ನಮ್ಮ ರಂಗಚಟುವಟಿಕೆಗಳು ಅಲ್ಪ ಪ್ರಮಾಣದವೇ ಆಗಿವೆ. ಹೊಸ ನಿರ್ದೇಶಕರಿಗಾಗಿ, ಆಯಾವರ್ಷ ಹೊಸ ನಾಟಕಗಳಿಗಾಗಿ, ಹೊಸ ನಟರಿಗಾಗಿ, ಸಂಗೀತ ನಿರ್ದೇಶಕರಿಗಾಗಿ, ಗಾಯಕರಿಗಾಗಿ, ಬೆಳಕಿನ ತಜ್ಞರಿಗಾಗಿ ಸರಿಯಾಗಿ ಗುರುತಿಸುವಿಕೆ ಇಲ್ಲದಿದ್ದರೆ ಚಿಗುರುವ ಪ್ರತಿಭೆಗಳು ಕಮರುತ್ತವೆ.
ಪ್ರತಿಭೆಗೆ ವಯಸ್ಸೊಂದೇ ಮಾನದಂಡ ಆಗಬಾರದು. ಬದಲಿಗೆ ರಂಗಕ್ರಿಯೆ ಮುಖ್ಯವಾಗಬೇಕು. ಜೊತೆಗೆ ರಂಗಭೂಮಿ ಹೆಸರಿನಲ್ಲಿ ಅನುದಾನ ತೆಗೆದುಕೊಳ್ಳುವವರು ವರ್ಷದಲ್ಲಿ ಒಂದಾದರೂ ನಾಟಕವಾಡುವುದರಿಂದ ರಂಗಕ್ರಿಯೆಗೆ ಹೆಚ್ಚು ಸತ್ವ ಬರುತ್ತದೆ. ಸರ್ಕಾರದ ಹಣ ತೆಗೆದುಕೊಂಡ ಮೇಲೆ ಕೇವಲ ಸುಳ್ಳು ಲೆಕ್ಕ ತೋರುವ ಬದಲು ಜನರ ಹಣವನ್ನು ತಾವೂ ಬಳಸಿಕೊಂಡು ಸ್ವಲ್ಪವನ್ನಾದರೂ ಜನರ ಬೌದ್ಧಿಕ ಚಿಂತನೆಗೆ, ಮನರಂಜನೆಗೆ ಬಳಸದಿದ್ದರೆ ಏನು ಪ್ರಯೋಜನವಾಗುತ್ತದೆ? ರಂಗಭೂಮಿಯ ಹೆಸರೇಳಿಕೊಂಡು ಹಣ ಪಡೆದು ಜನರಿಗೆ ಧೋಕಾ ಮಾಡಿದಂತಾಗುತ್ತದೆ. ಫಂಡಿನ ಕಡೆಯೇ ಹೆಚ್ಚು ಗಮನ ಹರಿಸಿದರೆ ರಂಗಚಟುವಟಿಕೆ ನಿಷ್ಕ್ರಿಯ ಆಗುತ್ತವೆ. ಅಲ್ಲದೆ ಅನುದಾನ ನೀಡುವವರಿಗೂ ವಿವೇಕ ಇರಬೇಕು. ರಂಗಪ್ರಯೋಗಿಸುವವರಿಗೆ ಹೆಚ್ಚಿನ ಹಣ ಸಿಗುವಂತೆ ನೋಡಬೇಕಾಗಿರುವುದು ಇದು ಅನಿವಾರ್ಯವಾಗಿದೆ.
ರಂಗಭೂಮಿಯನ್ನೇ ನಂಬಿ ಬದುಕುತ್ತಿರುವವರ ಬದುಕಿನ ಅಧ್ಯಯನ ಮೊದಲು ನಡೆಯಬೇಕು. ವಾರ್ಷಿಕಾವರ್ತದಲಿ ಅವರ ಚಟುವಟಿಕೆಗಳನ್ನು ಗಮನಿಸಿ ಅವರಿಗೆ ಅನುದಾನದ ಅನುಕೂಲಗಳು ಸಿಗಬೇಕು. ರಂಗಕರ್ಮಿಗಳದ್ದೊಂದು ವ್ಯವಸ್ಥಿತ ಸಂಘ ಮತ್ತು ಆ ಮೂಲಕ ಅವರದದ್ದೊಂದು ಬ್ಯಾಂಕು ಆರಂಭವಾಗಬೇಕು. ರಂಗದವರಿಗೆ ದುಡಿಮೆ ಇಲ್ಲವೆಂದಲ್ಲಿ ಬಂದ ದುಡಿಮೆ ಆಯಾ ದಿನದ ಖರ್ಚಿಗೂ ಸಾಲದು. ಎಷ್ಟೋ ಜನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡುವಾಸೆ. ಆದರೆ ೫೦ ರೂ. ಕೊಟ್ಟು ಟಿಕೇಟು ಪಡೆದು ಹೋಗಲಾರದ ದುಃಸ್ಥಿತಿಯಿರುತ್ತದೆ. ಹೋಟೇಲು ಮಾಲೀಕರ ಬ್ಯಾಂಕಿನಂತೆ ರಂಗಕರ್ಮಿಗಳ ಬ್ಯಾಂಕೂ ಸಾಲಕ್ಕೆ ವಹಿವಾಟು ಮಾಡುವಂತಾದರೆ ಅದು ರಂಗಭೂಮಿಯ ಜವಾಬ್ದಾರಿಯೂ ಆಗುತ್ತದೆ. ಪ್ರಸಿದ್ಧ ರಂಗಕರ್ಮಿ ರತನ್ ಥಿಯಾಂ ಅವರ ಮೊದಲ ನಾಟಕದ ಬಜೆಟ್ ೪೫೦೦ ರೂ. ಈಗ ಅವರ ನಾಟಕದ ಬಜೆಟ್ ೩೫ ಲಕ್ಷ ರೂ. ಅವರು ತಮ್ಮ ನಟ, ನಟಿಯರ ಮಕ್ಕಳ ಜೀವವಿಮಾ ಹಣದ ಬಾಬ್ತನ್ನೂ ನಮ್ಮ ನಾಟಕದ ಹುಟ್ಟುವಳಿಯಲ್ಲೂ ಲೆಕ್ಕ ಹಾಕಿರುತ್ತಾರೆ. ನಾಟಕ ಮುಖ್ಯವಾದ ಒಂದು ಉದ್ಯಮ. ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣಯ್ಯ ಮುಂತಾದವರು ಅದಕ್ಕಿರುವ ಆರ್ಥಿಕತೆಯನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಅದಕ್ಕೆ ಬೇಕಿರುವುದು ಶಿಸ್ತೇ ಹೊರತು ಜಿದ್ದಲ್ಲ. ರಾಜಾ ಪಾರ್ಟ್ ಸಿ.ಬಿ.ಮಲ್ಲಪ್ಪನವರು ನಿರ್ಗತಿಕರಾಗಿ ತೀರಿದರು. ಎತ್ತರದ ಕಂದಕದ ಎಲ್ಲಾ ಏಳು ಬೀಳುಗಳೂ ನಾಟಕದಲ್ಲಿದೆ.
ಸಿನಿಮಾದಲ್ಲೂ ಇವೆ. ನಮ್ಮದು ಕೇವಲ ಗೆದ್ದವರ ಚರಿತ್ರೆ. ಆದ್ದರಿಂದ ಇಲ್ಲಿ ಸೋತವರು ಅಸಂಖ್ಯಾತರು. ಆದರೂ ಅವರ ಸೋಲಿನಲ್ಲಿ ಒಂದು ದಿಲ್ ಇತ್ತು. ಕಲಾರಾಧನೆ, ಪಾಲನೆ, ಪೋಷಣೆ, ಪ್ರೀತಿ, ಮಮತೆ, ಅನುಕಂಪ, ಪರದಾಟ ಎಲ್ಲವೂ ಇದ್ದವು. ಇವೆಲ್ಲ ಇರದ ಬಾಳು ಬಾಳೇ ಅಲ್ಲ. ಸೋತವರ ಸರಣಿಯೇ ರಂಗಭೂಮಿ. ಆದರೆ ಜೀವನ ಮಾಡಲು ರಂಗಸ್ಥಳ ನೀಡಿದ ಸ್ಫೂರ್ತಿ, ಧೈರ್ಯ ಮತ್ತು ಸೋಲರಿಯದ ಸರದಾನತನವನ್ನು ರಂಗಭೂಮಿಗಿಂತ ಚೆನ್ನಾಗಿ ಈಸುವ ಗುರು ಬಹುಶಃ ಜಗತ್ತಿನಲ್ಲಿ ಬೇರೆ ರಂಗ ಇಲ್ಲ. ಸಮಕಾಲೀನ ರಂಗ ನಿಷ್ಕ್ರಿಯೆಯೇ ನಮಗೆ ಜೀವನದ ಸವಾಲಾಗಿದೆ. ಆದ್ದರಿಂದ ರಂಗಭೂಮಿ ಸದಾ ಕ್ರಿಯಾಶೀಲವಾಗಿರಬೇಕು.

ಕನ್ನಡದ ನಿಜ ಸನ್ಯಾಸಿ ಅ. ಸಂಜೀವಪ್ಪ



ವೆ.ಶ್ರೀನಿವಾಸ್

ಕನ್ನಡ ಚಳವಳಿಯನ್ನು ತಪಸ್ಸಿನಂತೆ ಸ್ವೀಕರಿಸಿ ಕನ್ನಡ-ಕರ್ನಾಟಕ-ಕನ್ನಡಿಗ ಸಂಸ್ಕೃತಿಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು ಅ.ಸಂಜೀವಪ್ಪ. ಕನ್ನಡ ಚಳವಳಿಗಾಗಿ ಬ್ರಹ್ಮಚಾರಿಯಾಗಿಯೇ ಉಳಿದು ಜೀವನ ಸವೆಸಿದವರು ಅವರು. ಸುಮಾರು ೧೨ ವರ್ಷಗಳ ಕಾಲ ಮೌನವ್ರತವನ್ನು ಆಚರಿಸಿದ ಸಂಜೀವಪ್ಪ ಕನ್ನಡ ಚಳವಳಿಯಲ್ಲೇ ಅಪರೂಪದ ವ್ಯಕ್ತಿ.
ಸಂಜೀವಪ್ಪನವರು ಕರ್ನಾಟಕ ಏಕೀಕರಣದ ಹೋರಾಟಗಾರರು. ಹಳೇ ಮೈಸೂರು ಭಾಗದಲ್ಲೂ ಏಕೀಕರಣಕ್ಕೆ ವಿರುದ್ಧವಾದ ಧ್ವನಿಗಳು ಕೇಳಿಬರುತ್ತಿದ್ದಾಗ ಸಂಜೀವಪ್ಪ ಅಖಂಡ ಕರ್ನಾಟಕದ ಕನಸು ನನಸಾಗಲೇಬೇಕೆಂದು ತಮ್ಮ ಸಹೋದರರು, ಗೆಳೆಯರೊಂದಿಗೆ ಸೇರಿ ಹೋರಾಟಕ್ಕೆ ಇಳಿದವರು.
ಕೋದಂಡರಾಮ, ಎಂ.ಲಿಂಗಪ್ಪ, ಸಿದ್ಧರಾಮಯ್ಯ, ವೆಂಕಟರಮಣ, ದೂ.ಮ.ರಾಮಕೃಷ್ಣ, ರಾಮಕೃಷ್ಣದೇವ ಮತ್ತಿತರ ಗೆಳೆಯರೊಂದಿಗೆ ’ನಾವು ಕನ್ನಡಿಗರು ಎಂದೆಂದೂ ಒಂದೇ’ ಎಂಬ ಘೋಷಣೆಯನ್ನು ಮೊಳಗಿಸಿದ ಸಂಜೀವಪ್ಪ ಕರ್ನಾಟಕದ ಏಕೀಕರಣಗೊಂಡಾಗ ತಮ್ಮ ಕನಸು ನನಸಾಗಿದ್ದನ್ನು ಕಂಡು ಸಂಭ್ರಮಿಸಿದರು.
ಬೆಂಗಳೂರಿನಲ್ಲಿ ಪರಭಾಷಿಕರ ಅಟ್ಟಹಾಸ ಮುಗಿಲು ಮುಟ್ಟಿದ್ದಾಗ ಸಂಜೀವಪ್ಪ ಕನ್ನಡ ಚಳವಳಿಯ ಕ್ಷೇತ್ರಕ್ಕೆ ಇಳಿದರು. ಸಂಜೀವಪ್ಪನವರು ಸಮಾಜವಾದಕ್ಕೆ ಮನಸೋತವರು. ಡಾ.ರಾಮಮನೋಹರ ಲೋಹಿಯಾ ಅವರ ಸಿದ್ಧಾಂತಗಳ ಅನುಯಾಯಿ. ಹೀಗಾಗಿ, ಕರ್ನಾಟಕ ಸಂಯುಕ್ತ ರಂಗದ ಗೋಪಾಲಗೌಡರೊಂದಿಗೆ ಅವರ ಒಡನಾಟವಿತ್ತು.
ನಂತರದ ದಿನಗಳಲ್ಲಿ ಕರ್ನಾಟಕ ಸಂಯುಕ್ತ ರಂಗದಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾದವು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅವರೊಂದಿಗೆ ಗುರುತಿಸಿಕೊಂಡ ಸಂಜೀವಪ್ಪನವರು ಹೊಸದಾಗಿ ಸ್ಥಾಪನೆಗೊಂಡ ಕನ್ನಡ ಚಳವಳಿ ಕೇಂದ್ರ ಮಂಡಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮಂಡಳಿಯಲ್ಲಿ ಜಿ.ನಾರಾಯಣ್‌ಕುಮಾರ್, ಕೆ.ಪ್ರಭಾಕರರೆಡ್ಡಿ, ಸೋಸಲೆ ಜವರಯ್ಯ, ಸಾ.ಕೃ.ಸಂಪಂಗಿ, ಟಿ.ಪಿ.ಪ್ರಸನ್ನಕುಮಾರ್, ಮುದ್ದೇಗೌಡ, ರಾಮಸ್ವಾಮಿ ಮತ್ತಿತರರು ಇದ್ದರು.
ಈಗ ಬೆಂಗಳೂರಿನಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಇರುವ ಸ್ಥಳದಲ್ಲಿ ಬ್ರಿಟಿಷರ ರಣಸ್ತಂಭವಿತ್ತು. ಅದು ಗುಲಾಮಗಿರಿಯ ಪ್ರತೀಕವಾಗಿ ನಾಡಿಗರನ್ನು ಅಣಕಿಸುತ್ತಿತ್ತು. ಅದೇ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾನಕ್ಕೆ ಸೂಕ್ತ ಜಾಗವೊಂದನ್ನು ಬೆಂಗಳೂರು ಮಹಾನಗರ ಪಾಲಿಕೆ ಹುಡುಕುತ್ತಿತ್ತು. ಆಗ ಜಿ.ನಾರಾಯಣ ಅವರು ಮಹಾಪೌರರಾಗಿದ್ದರು. ಅ.ಸಂಜೀವಪ್ಪ ಹೋರಾಟವನ್ನು ಕೈಗೆತ್ತಿಕೊಂಡು ರಣಸ್ತಂಭವನ್ನು ಕಿತ್ತುಹಾಕಲು ಚಳವಳಿ ರೂಪಿಸಿದ್ದರು. ಚಳವಳಿಯ ಪ್ರತಿಫಲವಾಗಿ ರಣಸ್ತಂಭವನ್ನು ಕಿತ್ತು ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.
ಭಾಷಾವಾರು ಪ್ರಾಂತ್ಯ ವಿಭಜನೆಯಾದಾಗ ಅಪ್ಪಟ ಕನ್ನಡದ ಊರು ತಾಳವಾಡಿ ತಮಿಳುನಾಡಿಗೆ ಸೇರಿ ಹೋಯಿತು. ಈ ಅನ್ಯಾಯವನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಸಂಜೀವಪ್ಪ ಪಾಲ್ಗೊಂಡಿದ್ದರು. ಕನ್ನಡ ಹೋರಾಟಗಾರರ ದಂಡು ತಾಳವಾಡಿಗೇ ಹೋಗಿ ಚಳವಳಿ ನಡೆಸಿದ್ದು ಐತಿಹಾಸಿಕ ಘಟನೆಯಾಗಿತ್ತು.
ಬೆಂಗಳೂರಿನ ಕೆಂಪೇಗೌಡ ರಸ್ತೆಯ ಎಲ್ಲ ಚಿತ್ರಮಂದಿರಗಳಲ್ಲೂ ತಮಿಳು, ತೆಲುಗು, ಹಿಂದಿ ಚಿತ್ರಗಳೇ ವಿಜೃಂಭಿಸುತ್ತಿದ್ದವು. ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರಂಭಗೊಂಡ ಹೋರಾಟದಲ್ಲಿ ಸಂಜೀವಪ್ಪ ಪ್ರಮುಖ ಪಾತ್ರ ವಹಿಸಿದದ್ದರು.
ಕನ್ನಡ ಚಳವಳಿಗಾರರನ್ನು ಒಗ್ಗೂಡಿಸಲೆಂದೇ ಅ.ಸಂಜೀವಪ್ಪನವರು ಸುಭಾಷನಗರ ಮೈದಾನದಲ್ಲಿ (ಈಗಿನ ಕೆಂಪೇಗೌಡ ಬಸ್ ನಿಲ್ದಾಣ) ಸಭೆಯೊಂದನ್ನು ಕರೆದಿದ್ದರು. ಆ ಸಭೆಯಲ್ಲಿ ವಾಟಾಳ್ ನಾಗರಾಜ್, ಜಿ.ನಾರಾಯಣ ಕುಮಾರ್, ಕೆ.ಲಕ್ಕಣ್ಣ, ಕೆ.ಪ್ರಭಾಕರ ರೆಡ್ಡಿ, ಬಿ.ರಾಮಕೃಷ್ಣ, ವಿ.ಕೆ.ರಾಮದಾಸ್ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು. ಮಾಸ್ಟರ್ ಹಿರಣ್ಣಯ್ಯನವರ ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ನಡೆದ ಈ ಸಭೆಯಲ್ಲಿ ಭಿನ್ನಾಭಿಪ್ರಾಯಗಳಿಂದ ಯಾವ ನಿರ್ಧಾರಕ್ಕೂ ಬರಲಾಗಲಿಲ್ಲ. ಹೀಗಾಗಿ ಸಂಜೀವಪ್ಪ ನೊಂದುಕೊಂಡಿದ್ದರು.
ಮೈಸೂರು ಮಹಾರಾಜರ ನಿಧನಾನಂತರ ದಸರಾ ಜಂಬೂಸವಾರಿ ಸಂದರ್ಭದಲ್ಲಿ ಅಂಬಾರಿಯಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಇಟ್ಟು ಮೆರವಣಿಗೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಸಂಜೀವಪ್ಪನವರ ನಾಯಕತ್ವದಲ್ಲಿ ಹೋರಾಟವೊಂದು ರೂಪುಗೊಂಡು ನಾಡದೇವಿ ಚಾಮುಂಡೇಶ್ವರಿ ಪ್ರತಿಮೆಯನ್ನು ಅಂಬಾರಿಯಲ್ಲಿ ಇಡಬೇಕು ಎಂಬ ಒತ್ತಾಯವನ್ನು ಹೇರಲಾಯಿತು. ಸಂಜೀವಪ್ಪನವರ ನೇತೃತ್ವದಲ್ಲಿ ನಡೆದ ಈ ಹೋರಾಟ ಫಲಕಾರಿಯಾಯಿತು. ಈ ಚಳವಳಿಯಲ್ಲಿ ಕೆ.ಬಿ.ಸಂಜೀವಪ್ಪ, ಜಿ.ನಾರಾಯಣಕುಮಾರ್, ಕೆ.ಲಕ್ಷ್ಮಣ, ಬಿ.ರಾಮಕೃಷ್ಣ, ವಿ.ಕೆ.ರಾಮದಾಸ್, ವೆ.ಶ್ರೀನಿವಾಸ್, ನಾರಾಯಣ ಮೊದಲಾದವರಿದ್ದರು.
ಅ.ಸಂಜೀವಪ್ಪನವರು ಅಖಲ ಭಾರತ ಕನ್ನಡಿಗರ ಪರಿಷತ್ತು ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಗೋವಿಂದಳ್ಳಿ ದೇವೇಗೌಡರು, ವೆ.ಶ್ರೀನಿವಾಸ್, ಬೆ.ತೋ.ರಾಜಶೇಖರ್ ಮೊದಲಾದವರು ಸಂಘಟನೆಯ ಪದಾಧಿಕಾರಿಗಳಾಗಿದ್ದರು. ಮೊದಲ ಕಾರ್ಯಕ್ರಮವಾಗಿ ರಾಷ್ಟ್ರಕವಿ ಕುವೆಂಪು ಅವರನ್ನು ಅವರ ಉದಯರವಿ ನಿವಾಸದಲ್ಲೇ ಸನ್ಮಾನಿಸಲಾಯಿತು. ಕಾವೇರಿ ಜಲವಿವಾದ ಭುಗಿಲೆದ್ದಾಗ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಸಂಜೀವಪ್ಪನವರು ಯಾವುದಕ್ಕೂ ಅಂಜದ ಸಾಹಸಿ.
ಪಾವಗಡ ಬಳಿ ಆಂಧ್ರಪ್ರದೇಶ ಸರ್ಕಾರ ಫೀಡರ್ ಕಾಲುವೆ ಮೂಲಕ ಕರ್ನಾಟಕದ ನೀರನ್ನು ಉಪಯೋಗಿಸಿಕೊಳ್ಳುತ್ತಿರುವುದನ್ನು ಪ್ರತಿಭಟಿಸಿ ಪರಿಷತ್ತು ಹೋರಾಟಕ್ಕಿಳಿಯಿತು. ಅದೂ ಸಹ ಸಫಲವಾಯಿತು.
ಕನ್ನಡಕ್ಕೆ, ಕರ್ನಾಟಕಕ್ಕೆ ಸಂಕಷ್ಟಗಳು ಎದುರಾಗಲೆಲ್ಲ ಸಂಜೀವಪ್ಪನವರು ಪ್ರತ್ಯಕ್ಷರಾಗುತ್ತಿದ್ದರು. ಇಂಥ ಅಪರೂಪದ ಹೋರಾಟಗಾರ ಮೌನವ್ರತವನ್ನು ಸ್ವೀಕರಿಸಿಬಿಟ್ಟರು. ಸುಮಾರು ೧೨ ವರ್ಷಗಳ ಕಾಲ ಅವರು ಮಾತನಾಡಲೇ ಇಲ್ಲ. ಕಾವಿ ಉಡುಗೆ ತೊಟ್ಟು ಸಂನ್ಯಾಸಿ ಜೀವನ ಆರಂಭಿಸಿದರು. ಯಾರೇ ಹಣ ಕೊಟ್ಟರೂ ಸ್ವೀಕರಿಸುತ್ತಿರಲಿಲ್ಲ. ಯಾರಾದರೂ ಕನ್ನಡ ಕಾರ್ಯಕರ್ತರು ಸಿಕ್ಕರೆ ಮಾತ್ರ ಅವರೊಂದಿಗೆ ಕಾಫಿ-ಊಟ ಸೇವಿಸುತ್ತಿದ್ದರು. ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಓದುತ್ತ ಅಧ್ಯಯನಶೀಲರಾಗಿರುತ್ತಿದ್ದರು.
ಇಷ್ಟಾದರೂ ಅವರು ಕನ್ನಡ ಹೋರಾಟದಿಂದ ವಿಮುಖರಾದವರಲ್ಲ. ಕನ್ನಡ ಕಾರ್ಯಕರ್ತರು ಸಿಕ್ಕರೆ ಅವರು ನಡೆಸಬೇಕಾದ ಚಳವಳಿಯ ಕುರಿತು ಚೀಟಿಯಲ್ಲಿ ಬರೆದುಕೊಡುತ್ತಿದ್ದರು. ಹೊಸ ಚಳವಳಿಗಳಿಗೆ ಪ್ರೇರಣೆ ನೀಡುತ್ತಿದ್ದರು.
ಸ್ವಭಾವತಃ ಹಾಸ್ಯಪ್ರಿಯರಾಗಿದ್ದ ಸಂಜೀವಪ್ಪ ಮೌನವ್ರತ ಧರಿಸುವುದಕ್ಕೂ ಮುನ್ನ ಅರಳು ಹುರಿದಂತೆ ಮಾತನಾಡುತ್ತಿದ್ದರು. ಮಾರ್ಕ್ಸ್, ಲೆನಿನ್ ವಿಚಾರಧಾರೆಗಳಿಂದ ಹಿಡಿದು ಕುವೆಂಪು ಅವರ ರಾಮಾಯಣ ದರ್ಶನಂವರೆಗೆ ಎಲ್ಲ ವಿಷಯಗಳ ಕುರಿತೂ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು.
ಸಂಜೀವಪ್ಪರಂಥವರು ವಿರಳ. ಅವರನ್ನು ಸ್ಮರಿಸಿಕೊಳ್ಳುವುದು ಕನ್ನಡಿಗನ ಕರ್ತವ್ಯ.

ನಟಭಯಂಕರ ವಜ್ರಮುನಿ




ಸ್ನೇಹ

ಡಿಸೆಂಬರ್ ತಿಂಗಳ ಚುಮುಚುಮು ಚಳಿಯಲ್ಲಿ ನೆನಪಾಗುವುದು ಗೀತಾ ಗಾರುಡಿಗ ಅಶ್ವಥ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅವರ ನಿಧನದ ಘಟನೆ. ಅದಕ್ಕಿಂತ ಆರು ವರ್ಷದ ಹಿಂದೆ ಜನವರಿ ತಿಂಗಳ ಮೊದಲ ವಾರದಲ್ಲಿ ಇದೇ ರೀತಿ ಖಳನಾಯಕ ವಜ್ರಮುನಿ ನಿಧನ ಹೊಂದಿ ಅವರ ಅಭಿಮಾನಿಗಳ ಬೇಸರ ಮೂಡಿಸಿದ್ದರು. ಹೀಗಾಗಿ ಈಗ ಜನವರಿ ತಿಂಗಳು ಹತ್ತಿರವಾಗುತ್ತಿದ್ದಂತೆ ಮತ್ತೊಮ್ಮೆ ವಜ್ರಮುನಿ ನೆನಪಾಗುತ್ತಿದ್ದಾರೆ.
ನಿಮಗೆ ಗೊತ್ತಿರುವ ಹಾಗೇ ವಜ್ರಮುನಿ ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ಮಾತ್ರವಲ್ಲ, ಮಹಾನ್ ಖಳನಾಯಕನೂ ಹೌದು. ಆದರೆ, ಅದೆಷ್ಟೋ ಜನರಿಗೆ ಅವರ ಸ್ವಾಭಿಮಾನದ ಮುಖ ಗೊತ್ತೇ ಇರಲಿಲ್ಲ. ಒಂದೆಡೆ ಸ್ವಾಭಿಮಾನ, ಮತ್ತೊಂದೆಡೆ ಮಹಾನ್ ಕಲಾವಿದ ಹಾಗೂ ಇನ್ನೊಂದೆಡೆ ಸ್ನೇಹ ಜೀವಿ ಈ ಮೂರು ಗುಣಗಳನ್ನು ಹೊಂದಿದ್ದ ವಜ್ರಮುನಿಯವರನ್ನು ಕರ್ನಾಟಕದ ಜನತೆ ಹೇಗೆ ತಾನೇ ಮರೆಯಲು ಸಾಧ್ಯ? ಅವರ ಹೆಸರಿನಲ್ಲಿ ಸರ್ಕಾರವಾಗಲಿ ಅಥವಾ ಅವರ ಅಭಿಮಾನಿಗಳಾಗಲೀ ಯಾವುದೇ ಸ್ಮಾರಕ ಅಥವಾ ಸಮಾಧಿಯನ್ನು ಕಟ್ಟಿಲ್ಲ. ಆದರೂ, ವಜ್ರಮುನಿ ಇಂದಿಗೂ ಕರ್ನಾಟಕದ ಕಲಾರಸಿಕರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನವನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ಅವರ ಮೇಲೆ ತಿಳಿಸಿದ ಮೂರು ಗುಣಗಳು.
ಅವರ ವೃತ್ತಿ ಜೀವನದ ಮೇಲೆ ಬೆಳಕು ಚೆಲ್ಲುವ ಮೊದಲು ಒಮ್ಮೆ ಅವರ ಕೊನೆಯ ನೋವಿನ ಆರು ವರ್ಷಗಳ ಯಮಯಾತನೆಯ ದಿನಗಳನ್ನೊಮ್ಮೆ ನೆನೆಸಿಕೊಳ್ಳೋಣ.
ವಜ್ರಮುನಿ ೫೦ ವರ್ಷದ ಹರೆಯದಲ್ಲಿದ್ದಾಗ ಇನ್ನು ಗಟ್ಟಿಮುಟ್ಟಾಗಿಯೇ ಇದ್ದರು. ಆ ಸಂದರ್ಭದಲ್ಲಿ ಬಹುತೇಕ ಎಲ್ಲಾ ನಾಯಕ ನಟರ ಜೊತೆ ಸಿನಿಮಾದಲ್ಲಿ ಹೊಡೆದಾಟ, ಗುದ್ದಾಟ ಮಾಡುತ್ತಲೇ ಇದ್ದರು. ಆ ಸಂದರ್ಭದಲ್ಲಿ ಅದ್ಯಾವ ಕೆಟ್ಟ ಕಣ್ಣು ಅವರ ಮೇಲೆ ಬಿತ್ತೋ ಗೊತ್ತಿಲ್ಲ. ಒಮ್ಮೆ ದಾಯಾದಿ ಚಿತ್ರ ಮುಗಿಸಿದ ನಂತರ ಅವರಿಗೆ ವಾಂತಿ ಮತ್ತು ಮಲಬದ್ಧತೆ ಆರಂಭವಾಯಿತು. ಅದೇ ಅವರ ಅನಾರೋಗ್ಯ ಜೀವನದ ಮತ್ತು ನಿಧನಕ್ಕೆ ಒಂದು ಮುನ್ನುಡಿಯೆಂದು ಯಾರೂ ಭಾವಿಸಿರಲಿಲ್ಲ. ಈ ವಾಂತಿ ಮತ್ತು ಮಲಬದ್ಧತೆ ಒಂದು ತಿಂಗಳ ಕಾಲ ನಿಲ್ಲಲೇ ಇಲ್ಲ. ಬೆಂಗಳೂರಿನ ಖ್ಯಾತ ವೈದ್ಯರ ಆಸ್ಪತ್ರೆಗಳಿಗೆಲ್ಲಾ ಈ ಮಹಾನ್ ಖಳನಾಯಕ ಭೇಟಿ ಕೊಟ್ಟರು. ಆದರೆ, ಬೆಂಗಳೂರಿನ ವೈದ್ಯರಿಂದ ಇದಕ್ಕೆ ಪರಿಹಾರ ಸಿಗಲೇ ಇಲ್ಲ. ಕೊನೆಗೊಂದು ದಿನ ಗೊತ್ತಾಯಿತು. ಇದು ಮೂತ್ರಪಿಂಡದ ಖಾಯಿಲೆ ಎಂದು. ಅದೇನು ಅಂತಹ ಮಹಾನ್ ಖಾಯಿಲೆ ಆಗಿರಲಿಲ್ಲ. ಆದರೆ, ವಜ್ರಮುನಿಯ ದುರದೃಷ್ಟವೋ ಏನೋ ಆ ಖಾಯಿಲೆಗೆ ವೈದ್ಯರು ಚಿಕಿತ್ಸೆ ನೀಡಲು ಹೊರಟಾಗ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ, ವಜ್ರಮುನಿಯವರಿಗೆ ಸಕ್ಕರೆ ಖಾಯಿಲೆಯು ಅಂಟಿಕೊಂಡಿತ್ತು. ಆದರೂ ವೈದ್ಯರು ಕನ್ನಡನಾಡಿನ ಈ ಮಹಾನ್ ನಟರನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಲೇ ಇದ್ದರು. ಇವರ ರಕ್ತಕ್ಕೆ ಸರಿಹೊಂದುವ ರಕ್ತವನ್ನು ಹೊಂದಿಸಿಕೊಳ್ಳಲು ಸುಮಾರು ೨ ವರ್ಷಗಳ ಸುದೀರ್ಘ ಅವಧಿಯೇ ಬೇಕಾಯಿತು. ಆ ಸಂದರ್ಭದಲ್ಲಿ ಸಕ್ಕರೆ ಖಾಯಿಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಾ ಹೋಯಿತು. ಕೊನೆಗೊಮ್ಮೆ ಧೈರ್ಯ ಮಾಡಿ ವೈದ್ಯರು ಡಯಾಲಿಸಿಸ್ ಆರಂಭಿಸಿದರು. ವಾರಕ್ಕೆರಡು ಬಾರಿ ಯಾವುದೇ ತೊಂದರೆಯಿಲ್ಲದೆ ಡಯಾಲಿಸಿಸ್ ನಡೆಯುತ್ತಿದ್ದಾಗ ಈ ಮಹಾನ್ ನಟ ಮತ್ತೊಂದು ದೊಡ್ಡ ಆಘಾತವನ್ನು ಎದುರಿಸಬೇಕಾಯಿತು. ಅದೇನೆಂದರೆ ಹೃದಯಾಘಾತ. ಕೂಡಲೇ ವೈದ್ಯರುಗಳೆಲ್ಲಾ ಒಟ್ಟು ಸೇರಿ ವಜ್ರಮುನಿಯವರ ಹೃದಯ ರೋಗದ ಚಿಕಿತ್ಸೆಗೆ ಮೊದಲ ಪ್ರಾಶಸ್ತ್ಯ ನೀಡಿದರು. ಅದಕ್ಕಾಗಿ ಆಪರೇಷನ್ ಮಾಡಲೇ ಬೇಕಾಯಿತು. ಇದೊಂದು ರೀತಿಯಲ್ಲಿ ಬೆಂಗಳೂರಿನ ವೈದ್ಯಲೋಕಕ್ಕೆ ದೊಡ್ಡ ಸವಾಲೇ ಆಯಿತು. ಕೊನೆಗೆ ವೈದ್ಯರ ಅಪ್ಪಣೆಯ ಪ್ರಕಾರ ವಜ್ರಮುನಿ ಯಾವುದೇ ಎದೆಗುಂದದೆ ಆಪರೇಷನ್ ಮಾಡಿಸಿಕೊಳ್ಳಲು ಮುಂದೆ ಬಂದರು. ಈ ಸಂದರ್ಭದಲ್ಲಿ ಮತ್ತೊಂದು ಆಘಾತ ವಜ್ರಮುನಿಯವರ ಕಿಡ್ನಿ ಆಪರೇಷನ್ ಮತ್ತು ಹೃದಯದ ಆಪರೇಷನ್ ಯಶಸ್ವಿಯಾದರೂ ಅವರ ಎರಡು ಕಿವಿಗಳು ಕಿವುಡಾಗಿ ಹೋದವು. ಅಲ್ಲಿಗೆ ವಜ್ರಮುನಿ ಮತ್ತು ಈ ಪ್ರಪಂಚದ ನಡುವಿನ ಸಂಪರ್ಕ ಸೇತುವೆ ಸಂಪೂರ್ಣವಾಗಿ ಕಡಿದು ಹೋಯಿತು.
ಆದರೂ, ಈ ಮಹಾನ್ ನಟ ನಾಯಕ ನಟರುಗಳ ಜೊತೆ ಸೆಣಸಾಡಿದಂತೆ ಹೆಜ್ಜೆಹೆಜ್ಜೆಗೂ ಪ್ರತಿಯೊಂದು ಖಾಯಿಲೆಯನ್ನು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಎದುರಿಸುತ್ತಾ ಹೋದರು. ಬಹುತೇಕ ಎಲ್ಲಾ ಹಂತಗಳಲ್ಲೂ ಯಮಧೂತನ ವಿರುದ್ಧ ವಿಜಯ ಪತಾಕೆಯನ್ನು ಬಾರಿಸಿದ ಈ ಖಳನಾಯಕ ಕೊನೆಗೂ ಮತ್ತೊಮ್ಮೆ ಪ್ರಪಾತಕ್ಕೆ ಬಿದ್ದರು.
ಅದಾಗಿದ್ದು ಹೀಗೆ: ಅವರ ಮನೆಯಲ್ಲಿ ಮಹಡಿಯಿಂದ ಇಳಿಯುತ್ತಿದ್ದಾಗ, ಹೆಜ್ಜೆತಪ್ಪಿ ಜಾರಿ ಬಿದ್ದು ಕಾಲು ಮುರಿದುಕೊಂಡರು. ಎಂದಿನಂತೆ ವೈದ್ಯರು ಕಾಲು ರಿಪೇರಿ ಮಾಡಲು ಒಂದು ಆಪರೇಷನ್ ಮಾಡಿದರು. ಆಪರೇಷನ್ ಸಕ್ಸಸ್ ಆದರೂ ಅವರು ಊರುಗೋಲು ಹಿಡಿದುಕೊಂಡೇ ಮನೆ ಒಳಗಡೆ ನಡೆದಾಡುವಂತಾಯಿತು.
ಈಗ ನೀವೇ ಹೇಳಿ, ನೀವು ಎಂದಾದರೂ ಒಬ್ಬ ಮನುಷ್ಯ ಇಷ್ಟೊಂದು ಸಂಖ್ಯೆಯ ಖಾಯಿಲೆ... ಕಿಡ್ನಿ ವೈಫಲ್ಯ.... ಸಕ್ಕರೆ ಖಾಯಿಲೆ... ಎದೆಯ ನೋವು.... ಕಿವುಡುತನ.... ಕಾಲು ನೋವು.... ಹೀಗೆ ಅನೇಕ ಖಾಯಿಲೆಗಳಿಗೆ ಆಶ್ರಯ ನೀಡಿದ ವ್ಯಕ್ತಿಯನ್ನು ನೋಡಿದ್ದೀರಾ? ಆದರೂ, ಸುಮಾರು ಆರು ವರ್ಷಗಳ ಕಾಲ ವಜ್ರಮುನಿ ಮನೆಯಲ್ಲೇ, ಏಕಾಂತದಲ್ಲೇ ಈ ಖಾಯಿಲೆಗಳನ್ನು ಎದುರಿಸುತ್ತಾ ಮತ್ತೊಮ್ಮೆ ಬೆಳ್ಳಿ ತೆರೆಯ ಮೇಲೆ ನಾಯಕ ನಟರ ಎದುರು ಆರ್ಭಟಿಸಿ, ತೊಡೆ ತಟ್ಟಿ ನಿಲ್ಲಲು ಪ್ರಯತ್ನಿಸುತ್ತಲೇ ಇದ್ದರು.
ಈ ಮಧ್ಯೆ ವಿಶೇಷವೆಂದರೂ ವಜ್ರಮುನಿ ಆಸ್ಪತ್ರೆಯಲ್ಲಿದ್ದಾಗ ಅಥವಾ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಲು ಆಸ್ಪತ್ರೆಗಳಿಗೆ ಎಡಕಾಡುತ್ತಿದ್ದಾಗ ನಮ್ಮ ಸರ್ಕಾರ ನಿದ್ರೆಯಲ್ಲಿತ್ತು. ಹಾಗೆಯೇ ಸರ್ಕಾರದ ಮಾದರಿಯಲ್ಲೇ ಫಿಲಂ ಛೇಂಬರ್ ಪದಾಧಿಕಾರಿಗಳು ಕೂಡ ಗಾಢ ನಿದ್ರೆ ಮಾಡುತ್ತಿದ್ದರು. ಈ ಮಹಾನ್ ಖಳ ನಾಯಕನಿಗೆ ಏನಾದರೂ ಆರ್ಥಿಕ ಸಹಾಯ ಬೇಕೇ? ಎಂದು ಕೇಳುವ ಮನಸ್ಸನ್ನು ಯಾರೂ ಮಾಡಲೇ ಇಲ್ಲ. ಕನಿಷ್ಠ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಅವರ ಆರೋಗ್ಯದ ವಿಚಾರವನ್ನು ತಿಳಿದು ನೈತಿಕ ಸ್ಥೈರ್ಯ ಮೂಡಿಸುವ ದೊಡ್ಡ ಮನಸ್ಸು ಕೂಡ ನಮ್ಮವರಿಗೆ ಇರಲಿಲ್ಲ. ಅದು ವಜ್ರಮುನಿಯವರನ್ನು ಯಾವತ್ತೂ ಕಾಡಲೇ ಇಲ್ಲ. ಅವರು ಅಂಜನಾಪುರದಲ್ಲಿರುವ ತಮ್ಮ ಒಂದೊಂದೇ ಸೈಟನ್ನು ಮಾರುತ್ತಾ ಚಿಕಿತ್ಸೆಗಾಗಿ ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿ ಖರ್ಚು ಮಾಡಿದರೇ ವಿನಃ ಸರ್ಕಾರದ ಎದುರು ಭಿಕ್ಷಾಪಾತ್ರೆಯನ್ನು ಹಿಡಿಯಲೇ ಇಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಅಥವಾ ಸಿನಿಮಾ ಮಂದಿಯ ಮುಂದೆ ಚಿಕಿತ್ಸೆಗಾಗಿ ಹಣ ಕೇಳಬಾರದು ಎಂದು ತನ್ನ ಕುಟುಂಬದ ಸದಸ್ಯರಿಗೆ ಅವರು ತಾಕೀತು ಮಾಡಿದ್ದು ಅವರ ಸ್ವಾಭಿಮಾನದ ಮತ್ತೊಂದು ಮುಖ. ಒಮ್ಮೆ ಡಾ.ರಾಜ್‌ಕುಮಾರ್ ಮತ್ತೊಮ್ಮೆ ಅಂಬರೀಷ್ ಇನ್ನೊಮ್ಮೆ ಶ್ರೀನಾಥ್ ಹೀಗೆ ತೀರ ಹತ್ತಿರದ ಮೂವರು ಸ್ನೇಹಿತರು ಬಿಟ್ಟರೆ ವಜ್ರಮುನಿ ಅವರನ್ನು ಯಾರೂ ಭೇಟಿಯಾಗಲೇ ಇಲ್ಲ. ಇದಕ್ಕಿಂತಲೂ ಮುಖ್ಯವಾಗಿ ಅವರ ಮಾನವೀಯತೆಯ ಮತ್ತೊಂದು ಮುಖಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ಸ್ವತಃ ತಾವೇ ಅನೇಕಾನೇಕ ಖಾಯಿಲೆಗಳಿಂದ ಬಳಲುತ್ತಿದ್ದೂ ತನ್ನ ಸಮಕಾಲೀನರಾದ ಮೈಸೂರಿನಲ್ಲಿರುವ ರಾಜಾನಂದ್ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ೫೦ ಸಾವಿರ ರೂಪಾಯಿಗಳನ್ನು ಅವರಿಗೆ ಕೊಟ್ಟು ಕಳುಹಿಸಿದರು. ಇದು ಖಳನಟನ ಸ್ವಾಭಿಮಾನ ಮತ್ತು ಮಾನವೀಯತೆಯ ಮುಖವನ್ನು ಅನಾವರಣ ಮಾಡಿದೆ ಎಂಬುದು ನಂಬಬೇಕು.
ವಜ್ರಮುನಿ ಈ ಎಲ್ಲಾ ಕಾರಣಕ್ಕಾಗಿ ಇಂದಿಗೂ, ಎಂದೆಂದಿಗೂ ಕನ್ನಡ ಕಲಾ ರಸಿಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತಾರೆ. ಸಿನಿಮಾಕ್ಕೆ ಬರುವ ಮೊದಲು ರಂಗಭೂಮಿಯಲ್ಲಿ ನೂರಾರು ಪ್ರದರ್ಶನಗಳನ್ನು ನೀಡಿ ಪ್ರಚಂಡ ರಾವಣ ನಾಟಕದ ರಾವಣನ ಪಾತ್ರದಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿ ಜನಪ್ರಿಯರಾಗಿದ್ದರು.
ಇಂದಿಗೂ ವಜ್ರಮುನಿಯ ತರಹ ಆರ್ಭಟಿಸುವ ಮತ್ತೊಬ್ಬ ರಾವಣ ಕನ್ನಡ ರಂಗಭೂಮಿಗೆ ದೊರೆತಿಲ್ಲ ಎಂದರೆ ಅವರ ಪ್ರತಿಭೆಯ ಮಹತ್ವ ಗೊತ್ತಾಗುತ್ತದೆ. ಸಿನಿಮಾದಲ್ಲಂತೂ ವಜ್ರಮುನಿ ನೂರಾರು ಪಾತ್ರಗಳಿಂದ ಕನ್ನಡಿಗರನ್ನು ರಂಜಿಸುತ್ತಿದ್ದರು. ಸಂಪತ್ತಿಗೆ ಸವಾಲ್ ಚಿತ್ರದ ಸಾಹುಕಾರ್ ಸಿದ್ದಪ್ಪನನ್ನು ಯಾರೂ ತಾನೇ ಮರೆಯಲು ಸಾಧ್ಯ? ಹಾಗೆಯೇ ಬಬ್ರುವಾಹನ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರಿಗೆ ಸರಿಸುಮಾರಾಗಿ ನಟಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಆ ಪಾತ್ರ ಕೂಡ ಅಜಾರಮರವೇ. ಮಯೂರ, ಗಂಧದ ಗುಡಿ, ತಾಯಿ ದೇವರು.... ಹೀಗೆ ಎಲ್ಲೆಲ್ಲಿ ಡಾ.ರಾಜ್‌ಕುಮಾರ್ ನಾಯಕನಾಗಿ ವಿಜೃಂಭಿಸುತ್ತಿದ್ದರೋ ಅಲ್ಲೆಲ್ಲಾ ಖಳನಾಯಕನಾಗಿ ಅವರ ಎದುರಿಗೆ ಆರ್ಭಟಿಸಿ ನಿಂತಿದ್ದು ಇದೇ ವಜ್ರಮುನಿ. ಕೊನೆಗೆ ಏನಾಯಿತೋ ಗೊತ್ತಿಲ್ಲ. ಡಾ.ರಾಜ್ ಕ್ಯಾಂಪಿನ ಅನೇಕ ಚಿತ್ರಗಳಲ್ಲಿ ಅವರ ಗೈರು ಹಾಜರಿ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಅದಕ್ಕೆ ಕಾರಣವಂತೂ ಯಾರಿಗೂ ಗೊತ್ತಿಲ್ಲ. ಕೊನೆಗೆ ಮತ್ತೊಮ್ಮೆ ರಾಜ್ ಪುತ್ರ ಶಿವರಾಜ್‌ಕುಮಾರ್ ಎದುರು ಕೂಡ ವಜ್ರಮುನಿ ಖಳನಾಯಕನಾಗಿ ಕಾಣಿಸಿಕೊಂಡಾಗ ಎಲ್ಲರಿಗೂ ಸಂತೋಷವಾಯಿತು. ಅಷ್ಟೊತ್ತಿಗೆ ಈ ಖಾಯಿಲೆಗಳ ಸರಮಾಲೆ ಕನ್ನಡ ಚಿತ್ರರಂಗದ ಮಹಾನ್ ಖಳನಾಯಕನನ್ನು ಕುಬ್ಜ ಮಾಡಿತು. ವಜ್ರಮುನಿ ಖಳನಾಯಕನಾಗಿ ವಿಜೃಂಭಿಸಿದ್ದೇ ದೊಡ್ಡ ಸಾಧನೆ. ಅದಕ್ಕಿಂತಲೂ ಮುಖ್ಯವಾಗಿ ಅನಾರೋಗ್ಯದ ಸಂದರ್ಭದಲ್ಲಿ ಯಾರನ್ನೂ ಅವಲಂಬಿತವಾಗದೇ, ಯಾರ ಮುಂದೆಯೂ ಭಿಕ್ಷಾಪಾತ್ರೆ ಹಿಡಿಯದೇ ಅತ್ಯಂತ ಸ್ವಾಭಿಮಾನದಿಂದ ಬದುಕಿದರು. ಇಂತಹ ಸ್ವಾಭಿಮಾನದ ಮತ್ತು ಪ್ರತಿಭಾವಂತ ನಟ ಬಹುಶಃ ಕನ್ನಡ ಚಿತ್ರರಂಗದ ಆಸ್ತಿಯೆಂದೇ ಹೇಳಬೇಕು. ಈಗಲೂ ಕಿರುಪರದೆಯಲ್ಲಿ ವಜ್ರಮುನಿ ನಟಿಸಿದ ಚಿತ್ರಗಳ ಆ ನಟನಾ ವೈಖರಿ, ಭಯಂಕರ ನಗು, ಅಮೋಘವಾದ ಆರ್ಭಟ ಮತ್ತು ನಾಯಕನನ್ನು ದುರುಗುಟ್ಟಿ ನೋಡುವ ಶೌರ್ಯದ ದೃಶ್ಯಗಳೆಲ್ಲಾ ನೋಡಿದಾಗ ಈ ನಟ ಇನ್ನೂ ಒಂದಿಷ್ಟು ವರ್ಷ ನಮ್ಮ ನಡುವೆ ಬದುಕಿದ್ದರೆ ಚೆನ್ನಾಗಿರೋದು ಎಂದು ಕಲಾಭಿಮಾನಿಗಳಿಗೆ ಅನಿಸುತ್ತದೆ. ಈಗ ಆರು ವರ್ಷಗಳ ಹಿಂದೆ ಜನವರಿ ತಿಂಗಳಲ್ಲಿ ನಮ್ಮನ್ನು ಅಗಲಿ ದೂರವಾದ ವಜ್ರಮುನಿಯ ನೆನಪು ಬರಲು ಕಾರಣ ಮತ್ತೆ ಜನವರಿ ಮಾಸ ಬರುತ್ತಿರುವುದು. ಅದಕ್ಕೆ ಹೊಸ ವರ್ಷ ವಜ್ರಮುನಿಯ ಅಭಿಮಾನಿಗಳ ಪಾಲಿಗೆ ಹರುಷದ ಜೊತೆಗೆ ಈ ನೋವಿನ ನೆನಪನ್ನು ನೀಡುತ್ತಿದೆ. ಇದು ಆ ಮಹಾನ್ ನಟನಿಗೆ ನಮ್ಮ ನಮನವನ್ನು ನೆನಪಿಸುವ ಒಂದು ಪುಟ್ಟ ಲೇಖನ ಅಷ್ಟೇ!

ನಾನು ಕಂಡ ತೇಜಸ್ವಿ...

ಪ್ರಸಾದ್ ರಕ್ಷಿದಿ



ಭಾಗ - 2
ಅವರ ಗೊಂದಲವನ್ನು ಗಮನಿಸಿದ ನಾನು, "ನೋಡಿ ನೀವು ಸುಮ್ಮನೆ ತಪ್ಪು ತಿಳಿದಿದ್ದೀರಿ. ಮೊದಲು ಇಡೀ ನಾಟಕವನ್ನು ನೋಡಿ, ಆಮೇಲೂ ನಿಮಗೆ ಈ ನಾಟಕದಿಂದ ಅವಮಾನ ಆಗ್ತಿದೆ ಅನ್ಸಿದ್ರೆ ಹೇಳಿ-ನಾನು ಮತ್ತು ಈ ನಾಟಕ ತಂಡದ ಮ್ಯಾನೇಜರ್, ಇಬ್ರೂ ಜೊತೇಲಿ ವೇದಿಕೆ ಮೇಲೆ ನಿಂತು ದಲಿತರ ಕ್ಷಮೆ ಕೇಳ್ತೀವಿ. ಮತ್ತು ಇನ್ನೊಂದಿನ ತೇಜಸ್ವಿಯವರಿಂದಲೇ ಸ್ಪಷ್ಟೀಕರಣ ಕೊಡಿಸ್ತೀವಿ. ಈಗ ಹೋಗಿ ನಾಟಕ ನೋಡಿ" ಎಂದೆ.
ಸ್ವಲ್ಪ ಹೊತ್ತು ಗುಸು ಗುಸು ಮಾಡುತ್ತಿದ್ದವರು, ಮತ್ತೆ ಸುಮ್ಮನಾಗಿ ನಾಟಕ ನೋಡುತ್ತಾ ಕೂತರು. ನಾಟಕ ಮುಂದುವರೆಯಿತು. ಉಳಿದೆರಡು ದಿನ ಇನ್ನೂ ಹೆಚ್ಚು ಜನರು ನಾಟಕ ನೋಡಲು ಬಂದಿದ್ದರು.
ನಾಟಕ ಮುಗಿದು ಕೆಲವು ದಿನಗಳಾಗಿದ್ದವು. ಕೆಲವರು ದಲಿತ ಹುಡುಗರು ನಮ್ಮಲ್ಲಿಗೆ ಬಂದರು.
"ಏನ್ರಯ್ಯ ಅಂದೆ
"ಸಾರ್ ಅವತ್ತು ಅಂದ್ರಲ್ಲ ತೇಜಸ್ವಿ-ಕುವೆಂಪು ಮಗ ಅವ್ರು ನಿಮ್ಗೆ ತುಂಬಾನೇ ಕ್ಲೋಸಂತೆ"
"ಕ್ಲೋಸು-ಗೀಸು ಏನೂ ಇಲ್ಲ, ಒಂದೆರಡು ಸಾರಿ ಅವ್ರತ್ರ ಮಾತಾಡಿದ್ದೀನಿ ಅಷ್ಟೆ ಏನಿವಾಗ?"
"ಅವ್ರನ್ನ ಕರ‍್ಸ್ ಬೇಕಲ್ಲ
"ಯಾಕೆ ನಾಟ್ಕ ನೋಡಿ ಸಮಾಧಾನ ಆಯ್ತಲ್ಲ ಇನ್ನೇನ್ ನಿಮ್ಗೆ" ?
"ಮುಂದಿನ ವಾರ ನಮ್ಮ ಸಂಘಟನೆ ರ‍್ಯಾಲಿ ಇದೆ. ಅವ್ರನ್ನ ಭಾಷ್ಣಕ್ಕೆ ಕರಿಯಾಣಾಂತ"!
"ನೀವೇ ಹೋಗಿ ಕರೀರಿ, ನಿಮ್ಮ ಕಾರ್ಯಕ್ರಮ ಒಳ್ಳೇದು ಅನ್ಸಿದ್ರೆ, ಅವ್ರಿಗೆ ಪುರುಸೋತ್ತಿದ್ರೆ ಬರ‍್ತಾರೆ ಹೋಗಿ" ಎಂದು ಆ ಹುಡುಗರನ್ನು ಸಾಗಹಾಕಿದೆ.
*****
ಈ ನಾಟಕೋತ್ಸವದಲ್ಲಿ ಅಡಿಗೆ ಊಟದ ಜವಾಬ್ದಾರಿ ವಹಿಸಿಕೊಂಡಿದ್ದ ಕರಿಯಪ್ಪ ಗೌಡರಿಗೆ ತೇಜಸ್ವಿಯವರೊಂದಿಗಿದ್ದ ಒಡನಾಟ ನಮೆಗೆಲ್ಲರಿಗೂ ತಿಳಿದಿದ್ದ ವಿಷಯವೇ ಆಗಿದ್ದುದರಿಂದ, ಬಿಡುವಿನವೇಳೆಯಲ್ಲಿ ಅವರನ್ನು ಮಾತಿಗೆಳೆಯುತ್ತಿದ್ದೆವು. ಅಂತಹ ಸಮಯದಲ್ಲಿ ಸಂಜೆ ಅಡಿಗೆ ಕೆಲಸವೆಲ್ಲ ಮುಗಿದ ಮೇಲೆ ಅಳಿಯ ಉಗ್ಗಪ್ಪ ತಂದುಕೊಡುತ್ತಿದ್ದ "ಕ್ವಾರ್ಟರ್ ಗಂಟಲಲ್ಲಿ ಇಳಿದ ಮೇಲಂತೂ ಕರಿಯಪ್ಪ ಗೌಡರಿಗೆ ಮಾತಿಗೆ ಲಹರಿ ಬರುತ್ತಿತ್ತು.
"ಕಿರಗೂರಿನ ಗಯ್ಯಾಳಿಗಳು" ನಾಟಕ ನೋಡಿದ ಕರಿಯಪ್ಪ ಗೌಡರು "ಇದು ಕಿರುಗೂರೂ ಅಲ್ಲ ಬರಗೂರೂ ಅಲ್ಲ, ನಮ್ಮೂರು ಗಯ್ಯಾಳಿಗಳ ಕಥೆ" ಎಂದರು.
"ಅದು ಹೇಗೆ ಹೇಳ್ತೀರಿ ಕರಿಯಪ್ಪಣ್ಣ" ಯಾರೋ ಕೇಳಿದರು.
"ಹ್ಯಾಗೆ ಅಂದ್ರೆ, ಅಗ ಆ ಕೆಂಪು ಸೀರೆ ಉಟ್ಕ ಬಂದ್ಲಲ ಅವ್ಳು, ಸೀನಪ್ಪನ ಮಗ್ಳು, ಅಮೇಲೆ ಇನ್ನೊಂದು ಪಟಾಪಟಿ ಸೀರೆ ಉಟ್ಟದ್ಲಲ ಅವ್ಳೂ ಬೈರಪ್ಪಣ್ಣನ ಹೆಂಡ್ತಿ. ಇನ್ನೊಬ್ಬ ಅವ್ನು... ಆ ಹೇತ್ಲಾಂಡಿ ನನಮಗ ಇದಾನಲ್ಲ ಅವ್ನು ಬಿಡಿ ಊರಿಗೇ ಗೊತ್ತು" ಎಂದು ತೇಜಸ್ವಿಯವರ ಕಥಾ ಪ್ರಪಂಚದ ಪಾತ್ರಗಳನ್ನು ಒಂದೊಂದಾಗಿ ತೆರೆದಿಡಲು ಪ್ರಾರಂಭಿಸಿದರು.
ತೇಜಸ್ವಿಯವರೊಮ್ಮೆ ತಮ್ಮ ಕಥಾ ಪಾತ್ರಗಳ ಬಗ್ಗೆ ಮಾತಾಡುತ್ತಾ "ಅವ್ರೆಲ್ಲ ಇಲ್ಲೇ ಇದ್ದಾರೆ ಕಣ್ರಯ್ಯ ಎಂದದ್ದು ನೆನಪಾಯಿತು.
"ಕರಿಯಪ್ಪಣ್ಣ ನೀವು ಈಗ ತೇಜಸ್ವಿಯೋರ ಜೊತೆ ಶಿಕಾರಿಗೆ ಹೋಗಲ್ವ ನಮ್ಮಲ್ಲೊಬ್ಬ ಕೇಳಿದ.
"ಥೋ..ಥೋ..ಥೋ ಅವರೆಲ್ಲ ಶಿಕಾರಿ ಬುಟ್ಟು ಯಾವದೋಕಾಲ ಆಯ್ತು, ಈಗ ನನ್ಕೈಲೂ ಆಗಲ್ಲ. ಆವಾಗೆಲ್ಲ ಅವ್ರು ಚಂದ್ರಾಪುರದಲ್ಲಿ ಇದ್ರಲ್ಲ, ಅಲ್ಲೇ ಪಕ್ಕ ನಮ್ಮೂರು (ಕರಿಯಪ್ಪ ಗೌಡರ ಊರು ಚಂದ್ರಾಪುರದ ಪಕ್ಕದ ನಿಡುಗೋಡು ಎಂಬ ಹಳ್ಳಿ) ಆವಾಗ ನಮ್ಮನೆವ್ರೆಲ್ಲ ಅವ್ರಲ್ಲಿ ಕರದಾಗ ಕೆಲ್ಸಕ್ಕೋಗೋರು, ಆವಾಗ ಶಿಕಾರಿ ಅಂತ ನನ್ ಜೊತೆ ಕಾಡು ಸೋವೋಕೆ ಬರೋರು, ಅಂತ ಹುಚ್ಚೇನಿಲ್ಲ ಅವ್ರಿಗೆ, ನಾನೇ ಆವಾಗ ಒಂದೆರಡ್ಸಾರಿ ಶಿಕಾರಿ ಮಾಡಿದ್ದಾಗ ಮಾಂಸ ತಗಂದೋಗಿ ಕೊಟ್ ಬರ‍್ತಿದ್ದೆ. ಒಂದ್ಸಾರಿ ಎಂಥ ಎಡವಟ್ಟಾಯ್ತು ಅಂತೀರಿ, ನಾನು ಶಿಕಾರಿ ಮಾಂಸನೂ ಹಿಡ್ಕಂದು ಕೋವಿ ಹೆಗಲಾಗೆ ಇಟ್ಕಂದು ಅವರ ಮನಿ ಹತ್ರ ಹೋದೆ, ಅಂಗಳಕ್ಕೆ ಬರ‍್ತೀನಿ ಒಬ್ರು ಉದ್ದನೆ ಇಜಾರ ಹಾಕ್ಕಂಡು ಉದ್ದನೆ ಕೋಟು ತೊಟ್ಕಂಡು ನಿಂತ್ಕಂಡಿದ್ರು, ನಂಗಿವುರ‍್ಯಾರೋ ಡಿ.ಸಿ.ನೋ ಡಿ.ಎಫೋ ಇರ‍್ಬೇಕು ಅಂತಾಯ್ತು, ಮುಗೀತು ನನ್ಕತೆ ಅಂತ.. ಹಂಗೆ ಬಗ್ಗಿ ಕಾಫಿಗಿಡದೊಳಿಕ್ ನುಗ್ಗಿ, ಕೋವಿ ತೋಟದೊಳಿಕ್ಕೆ ಹಣದು, ಮಾಂಸ ಹಿಡ್ಕಂಡು ಕಾಡುಬಿದ್ದು ಪರಾರಿಯಾದೆ, ಆಮೇಲ್ ಗೊತ್ತಾಯ್ತು ಅವ್ರೇ ’ಕುವೆಂಪು’, ಮಗನ ಮನೀಗ್ ಬಂದಿದ್ರು ಅಂತ. ಅದೇ ಪಸ್ಟು ಅವ್ರುನ್ನ ನಾನೋಡಿದ್ದು."
ಹೀಗೆ ಕರಿಯಪ್ಪ ಗೌಡರ ನೆನಪಿನ ಪಾಕಶಾಲೆಯಿಂದ ಒಂದೊಂದೇ ಐಟಮ್ಮುಗಳು ಹೊರಬರುತ್ತಿದ್ದವು.
"ಮತ್ತೆ ಕರಿಯಪ್ಪ ಗೌಡ್ರೆ ತೇಜಸ್ವಿಯವರ ಮದ್ವೆಲೂ ನೀವೆ ಬಿರಿಯಾನಿ ಮಾಡಿದ್ರಂತೆ" ನಾನು ಕೆಣಕಿದೆ.
ಮದುವೇಲಲ್ಲ,.. ಅದೆಂತ ಮದುವೆ ’ಮಂತ್ರ ಮಾಂಗಲ್ಯ ಅದು, ಗಂಡು ಹೆಣ್ಣು ಇಬ್ಬುರ‍್ನೂ ಎದುರಿಗೆ ನಿಲ್ಲಿಸಿಕೊಳ್ಳೋದು, ಅದೆಂತದೋ ಪುಸ್ತ್ಕ ತಗ್ದು ಅವರಪ್ಪ ಇಂಗ್ರೇಜಿ ಪಾದ್ರಿ ಹಂಗೆ ಓದೋದು. ಆಮೇಲೆ ಇಬ್ರಿಗೂ ಆಶೀರ್ವಾದ ಮಾಡೋದು. ಅಲ್ಲಿಗಾಯ್ತು... ಅದೇ ಒಂದು ಮದುವೆ. ಎಂದು ತೇಜಸ್ವಿಯವರ ಮದುವೆಯನ್ನು ಒಂದು ಕೆಲಸ ತಿಳಿಯದ ಅಡ್ಡಕಸಬಿಗಳು ಮಾಡುವ ಕೃತ್ಯವೆಂಬಂತೆ ವಿವರಿಸಿದರು.
"ಮತ್ತೆ ನಿಮ್ಮ ಬಿರಿಯಾನಿ ಊಟ" ಮತ್ತೆ ನೆನಪಿಸಿದೆ.
ಅದೇ ಹೇಳ್ತೀನಿ ಕೇಳಿ, ಆಮೇಲೊಂದಿನ ತೇಜಸ್ವಿ, "ಕರಿಯಪ್ಪ ನನ್ನ ಮದ್ವೆ ಆಯ್ತು, ನಾಕು ಜನಕ್ಕೆ ಊಟ ಹಾಕ್ಬೇಕಲ್ಲ, ಒಳ್ಳೇ ಬಿರಿಯಾನಿ ಮಾಡ್ಬೇಕು" ಅಂದ್ರು. ಆಗ ಅವ್ರ ಅಪ್ಪಾರು ಅಲ್ಲೇ ಇದ್ರು. ನಾನೇನೋ ದೊಡ್ಡೋರ ಮನೆ ಮದುವೆ ಒಂದು ಸಾವಿರ ಜನಕ್ಕೆ ಊಟ ಇಟ್ಕಂಡಿರಬೋದು ಅಂತ, "ಸಾಮಾನು ಪಟ್ಟಿ ಬರ‍್ಕಳಿ" ಅಂದೆ. "ಅದೆಂತ ಬರಿಯದು ಕರಿಯಪ್ಪ ಒಂದೈವತ್ ಜನಕ್ಕೆ ಸಾಕು" ಅಂದ್ರು. "ಆ... ಅದೆಂಥ ಊಟ ಮದುವೆ ಊಟಕ್ಕೂ ಒಂದು ಮರ‍್ಯಾದಿ ಬೇಡ್ವಾ ಅಂದೆ. ಅದ್ಕೆ "ಅಷ್ಟೇ ಜನ ಬರಾದು" ಅಂದ್ರು.
ಅಮ್ಮಾವ್ರು ಮನೆ (ರಾಜೇಶ್ವರಿ) ಅಲ್ಲೇ ಮೂಡಿಗೆರೆಂದಾಚೆ ಭೂತನಕಾಡಿನ ಹತ್ರ ಇತ್ತು. ಅಲ್ಲೇ ಊಟ, ಮನೀಗೆ ಹೋಗೋ ದಾರೀಲೆ ಒಂದು ಸಣ್ಣ ಚಪ್ರ ಹಾಕ್ಸಿದ್ರು. ನಾನು ಹೆಂಗಾರ ಇರ‍್ಲಿ ಆಮೇಲೆ ಮರ‍್ಯಾದಿ ಹೋಗದು ಬ್ಯಾಡ ಅಂತ ಅವ್ರು ಐವತ್ ಜನಕ್ಕೆ ಅಂದ್ರೂ ಅರುವತ್ತು ಎಪ್ಪತ್ತು ಜನಕ್ಕೆ ಸುದಾರ‍್ಸೋವಷ್ಟು ಅಡಿಗೆ ಮಾಡಿದ್ದೆ.
"ಎಂಥಾ ಜನ ಅಂತೀರಿ ಊಟಕ್ಕೆ. ... ಎಲ್ಲಾ ಸೇರಿ ಇಪ್ಪತ್ತೈದು ಜನ ಬಂದಿದ್ದರು!. ಇವ್ರು ಯಾರಿಗೂ ಹೇಳೇಇಲ್ಲ..ಮಾರಾಯ್ರ ಇನ್ನೂ ನಲುವತ್ ಜನಕ್ಕೆ ಆಗೋವಷ್ಟು ಊಟ ಉಳೀತು. "ಅದನ್ನ ನೀನೇ ತಗಂದೋಗು ಕರಿಯಪ್ಪ ಯಾರ‍್ಗಾದ್ರೂ ಕೊಡು ಅಂದ್ಬುಟ್ರು
"ಕರಿಯಪ್ಪ ಗೌಡ್ರೆ ನೀವು ಅಡಿಗೇಲಿ ತಾಲ್ಲೂಕು ವಿಖ್ಯಾತ ಜಿಲ್ಲಾ ವಿಖ್ಯಾತ ಎಲ್ಲಾ ಆಗಿರ‍್ಬೋದು, ಅದರೆ ನೀವು ತೇಜಸ್ವಿಯವರ ಕಾದಂಬರಿಯೊಳಗೆ ಸೇರಿಕೊಂಡು ಲೋಕ ವಿಖ್ಯಾತ ಆಗಿಬಿಟ್ರಿ!" ಎಂದೆ.
ಅದಕ್ಕವರು "ಅಲ್ಲಾ ಮನುಷ್ಯ ಅಂದ್ಮೇಲೆ ಸಣ್ಣ ಪುಟ್ಟ ಅರೆಕೊರೆಗಳು ಇದ್ದೇ ಇರ‍್ತಾವಪ್ಪ, ಅದನ್ನೆಲ್ಲ ಕಥೇಲಿ (ಕರ್ವಾಲೋ ಆಗ ಪಿ.ಯು ತರಗತಿಗೆ ಪಠ್ಯ ಪುಸ್ತಕವಾಗಿತ್ತು) ಬರ‍್ದು ನನ್ನನ್ನ ಕಾಲೇಜು ಹುಡುಗ್ರ ಬಾಯಿಗೆ ಹಾಕಿದ್ರು. ಅವ್ರಿನ್ನೇನು ಕೇಳ್ಬೇಕ ನನ್ನ ದಾರಿಲೆಲ್ಲ ’ಬಿರಿಯಾನಿ ಕರಿಯಪ್ಪ ಅನ್ನೋಕೆ ಶುರು ಮಾಡಿದ್ರು. ನಾನೇನು ಬಿಡ್ಲಿಲ್ಲ ನೋಡಿ ತೇಜಸ್ವೋರ ಮನೀಗೆ ಹೋಗಿ ಸರ‍್ಯಾಗಿ ಜಗಳ ಮಾಡ್ದೆ". ಎಂದು ಹೇಳಿ ಸ್ವಲ್ಪ ತಡೆದು " ಏನೋ ಅವರಪ್ಪ ತುಂಬಾ ದೊಡ್ಡಮನುಷ್ಯರಂತೆ ನಾನು ಹೆಚ್ಗೆ ತಿಳದಿಲ್ಲ ಬಿಡಿ ಆದ್ರೆ ಈತ ಮಾತ್ರ ಮನುಷ್ಯರಲ್ಲ, ಮತ್ತೆ ಆಕೆನೂ ಅಷ್ಟೆ ಅಮ್ಮ(ರಾಜೇಶ್ವರಿ)ಬಡವರ‍್ನ ಕಂಡ್ರೆ ತುಂಬ ಪ್ರೀತಿ. ಜಗಳವೆಲ್ಲ ಮುಗದ್‌ಮೇಲೆ ಕಾಫಿ ತಿಂಡಿಕೊಟ್ರು. ನಾನು ತಿಂತಾ ಇದ್ರೆ, ಈವಯ್ಯ ಅಲ್ಲೇ ನಗ್ತಾ ನಿಂತಿತ್ತು.
"ಇಬ್ರೂ ರಾಮದೇವರ ಜೋಡಿ" ಎಂದರು.
ತೇಜಸ್ವಿಯವರ ಕಥಾ ಲೋಕದ, ನಡೆದಾಡುವ ಪಾತ್ರವಾಗಿರುವ ಕರಿಯಪ್ಪನಿಗೆ ತೇಜಸ್ವಿ ದಂಪತಿ ರಾಮ-ಸೀತೆಯರಂತೆ ಕಂಡಿದ್ದರು!
"ಕರಿಯಪ್ಪ ಗೌಡ್ರೆ ಹಂಗಾದರೆ ಅವ್ರಿಬ್ರೂ ರಾಮ-ಸೀತೆ ಅಂಥಾಯ್ತು, ಹೆಂಗೂ ’ಕುವೆಂಪು’ ಒಂದು ರಾಮಾಯಣ ಬರ‍್ದಿದ್ದಾರೆ. ನೀವು ನಿಮ್ದೇ ಒಂದು ತೇಜಸ್ವಿ ರಾಮಾಯಣ ಅಂತ ಬರದ್ಬಿಡಿ" ಎಂದೆ.
"ಇನ್ನೇನು ರಾಮಾಯಣವೇ ಇದು. ಅಲ್ಲಾ ಅವ್ರ ಅಪ್ಪಾರು ಎಂಥಾ ದೊಡ್ಡ ಕೆಲಸದಲ್ಲಿದ್ದರು. ಎಂತೆಂತ ಮಿನಿಷ್ಟ್ರುಗಳೆಲ್ಲ ಇವ್ರ ಮನೀಗೆ ಹೆಣ್ಣು ಕೊಡಕೆ ತಯಾರಾಗಿದ್ರಂತೆ. ದೊಡ್ಡ ದೊಡ್ಡ ಪ್ಲಾಂಟರುಗಳು ತಮ್ಮ ಮಗ್ಳನ್ನ, ಕೊಡಕೆ ಕೇಳಿದ್ರಂತೆ, (ಅಲ್ಲ ಈಕೆ ಪಾಪ ಒಳ್ಳೇ ಹೆಂಗ್ಸು, ಅವರಿಗ್ ತಕ್ಕನಾದೋರೆ) ಇವ್ರು ಮನಸ್ ಮಾಡಿದ್ರೆ ದೊಡ್ಡ ಕೆಲಸ ಸೇರಿ ಪಾರಿನ್ಗೋಬೋದೊತ್ತು. ಅದೆಲ್ಲಾ ಬುಟ್ಟು ಇಲ್ಲಿ ಸಾಸ್ವತ ವನವಾಸ ಬಂದ್ರಲ್ಲ ಅದೇಒಂದು ರಾಮಾಯ್ಣ ಅಲ್ವ!"
ತೇಜಸ್ವಿಯರು ಕರ್ವಾಲೋ ಬರೆದ ಹಲವು ವರ್ಷಗಳ ನಂತರ ಎಲ್ಲೋ ಒಂದು ಕಡೆ ’ನನ್ನ ಕಥೆಯೊಂದರ ಪಾತ್ರವೇ ಹೀಗೆ ಬಂದು ಜಗಳಕ್ಕೆ ನಿಂತೀತೆಂದು ಎಣಿಸಿರಲಿಲ್ಲ ಎಂದಿದ್ದಾರೆ.
ತೇಜಸ್ವಿಯವರ ಕಥೆಯ ಪಾತ್ರವಾಗಿಬಿಟ್ಟಿದ್ದ ಕರಿಯಪ್ಪ ತನ್ನನ್ನು ಸೃಷ್ಟಿಸಿದ ಲೇಖಕನ ಬದುಕಿನ ವಿಮರ್ಶೆಗೇ ತೊಡಗಿದ್ದ.
*****
ಮೂಡಿಗೆರೆಯ ಪಕ್ಕದ ಬೆಳಗೋಡಿನ ಶಾಂತಕುಮಾರ್ ಎಂಬವರೊಬ್ಬರು, ’ತಬರನ ಕಥೆ’ ಸಿನಿಮಾ ಆದಾಗ ಅದರಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದರು. ಅವರೀಗ ನಮ್ಮೂರಿಗೆ ಬಂದು ರೈತರಾಗಿ ನೆಲೆಸಿದ್ದಾರೆ. ತಬರನ ಕಥೆ ಸಿನಿಮಾ ಆಗುವ ಸಮಯದಲ್ಲಿ ಅವರು ಬೆಳಗೋಡಿನಲ್ಲಿಯೇ ಇದ್ದರು. ಅವರಿಗೆ ಆಗಲೇ ತೇಜಸ್ವಿಯವರ ಪರಿಚಯವೂ ಇತ್ತು. ಒಂದೆರಡು ಬಾರಿ ತೇಜಸ್ವಿಯವರ ತೋಟಕ್ಕೆ ಕೆಲಸದಾಳುಗಳನ್ನು ಒದಗಿಸಿಕೊಟ್ಟಿದ್ದರಂತೆ, ಯಾವಾಗಲೋ ಒಮ್ಮೆ ತೇಜಸ್ವಿ ಇವರಲ್ಲಿ "ಯಾರಾದರೂ ತೋಟ ನೋಡಿಕೊಳ್ಳಲು ರೈಟರ್ ಇದ್ದರೆ ಕಳುಹಿಸಿಕೊಡಿ" ಎಂದಿದ್ದರಂತೆ. ತಬರನ ಕಥೆ ಸಿನಿಮಾ ಆಗುವ ಸುದ್ದಿ ತಿಳಿದ ಶಾಂತಕುಮಾರ್ ತೇಜಸ್ವಿಯವರಲ್ಲಿಗೆ ಹೋಗಿ,(ತಾನು ಅವರಿಗೆ ಸಹಾಯ ಮಾಡಿರುವುದರಿಂದ) ’ಇದು ನಿಮ್ಮ ಕರ್ತವ್ಯ ಎನ್ನುವಂತೆ, "ಅದರಲ್ಲಿ ನಂಗೂ ಒಂದು ಪಾತ್ರ ಕೊಡಕೆ ಹೇಳಿ" ಎಂದು ಕೇಳಿದರಂತೆ. ಆಗ ತೇಜಸ್ವಿ "ಅದೇ ಒಂದು ಲೋಕ ಮಾರಾಯ, ನಮ್ದೇ ಒಂದು ಲೋಕ, ಹೋಗಿ ನೀನೇ ಕೇಳು" ಎಂದರಂತೆ.
ಅದನ್ನೇ ಒಂದು ಸವಾಲಿನಂತೆ ತಿಳಿದ ಇವರು ಹೇಗಾದರೂ ಸರಿ ತಾನು ಆ ಸಿನಿಮಾದಲ್ಲಿ ಪಾತ್ರ ಮಾಡಲೇಬೇಕು ಎಂದುಕೊಂಡು, ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಬಳಿಹೋಗಿ, "ನಾನೂ ಇದೇ ಊರಿನವ್ನು ತಬರನಕಥೆ ಓದಿದ್ದೀನಿ ನಂಗೂ ಒಂದು ಪಾತ್ರ ಕೊಡಿ" ಎಂದು ಕೇಳಿದರಂತೆ. ಆಗ ಕಾಸರವಳ್ಳಿಯವರು, "ನಮಗೆ ಶೂಟಿಂಗಿಗೆ ಒಂದು ಸ್ಪ್ರೇಮೆಷಿನ್ ಬೇಕಾಗಿದೆ ಅದನ್ನ ತಂದು ಕೊಡಿ, ನಿಮಗೆ ಒಂದು ಪಾತ್ರ ಕೊಡುತ್ತೇನೆ" ಎಂದರಂತೆ. ಅಂತೆಯೇ ಶಾಂತಕುಮಾರ್ ಒಂದು ’ಗಟರ್ ಸ್ಪ್ರೇಮೆಷಿನನ್ನು ತಂದು ಕೊಟ್ಟದ್ದಲ್ಲದೆ ಹುಲ್ಲು ಮನೆಯೊಂದರ ಮಾಡನ್ನು ಹಳೆಯದರಂತೆ ಕಾಣಲು (ನಿರ್ದೇಶಕರು ಹೇಳಿದಂತೆ)ಕಪ್ಪು ಬಣ್ಣವನ್ನು ಸ್ಪ್ರೇ ಮಾಡಿ ಕೊಟ್ಟರಂತೆ. ನಂತರ ಇವರಿಗೆ ಆ ಸಿನಿಮಾದಲ್ಲಿ ನಟ ಸತ್ಯಸಂಧ ಅವರ ಜೊತೆಯಲ್ಲಿ ಮೂರು ಸಣ್ಣ ಸಣ್ಣ ಪಾತ್ರಗಳು ದೊರೆತವು! ಆ ನಂತರವೂ ಇವರು ಒಂದೆರಡು ಬಾರಿ ನಿರ್ದೇಶಕ ಕಾಸರವಳ್ಳಿಯವರನ್ನು ಭೇಟಿ ಮಾಡಿ ಸಿನಿಮಾದಲ್ಲಿ ಪಾತ್ರ ನೀಡುವಂತೆ ಕೇಳಿದ್ದರಂತೆ. ಹೀಗೆ ಸಿನಿಮಾ ಹುಚ್ಚನ್ನು ಹತ್ತಿಸಿಕೊಂಡ ಶಾಂತಕುಮಾರ್ ಮದ್ರಾಸಿನವರೆಗೂ ಅಲೆದು ಇವರೇ ಒಬ್ಬ ’ತಬರ’ನಂತಾಗಿ ಸಾಕಷ್ಟು ಹಣವನ್ನೂ ಕಳೆದುಕೊಂಡು ನಂತರ ನಮ್ಮೂರಿಗೆ ಬಂದು ನೆಲೆಸಿದ್ದಾರೆ. ಆದರೆ "ತಬರಕಥೆ"ಯ ಅನುಭವವನ್ನು ಈಗಲೂ ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ.
ಆದರೆ "ತಬರನ ಕಥೆ" ಇನ್ನೊಂದು ಸ್ತರದಲ್ಲಿ ನಮ್ಮ ಸುತ್ತಮುತ್ತ ಈಗಲೂ ಹೇಗೆ ಜೀವಂತವಾಗಿದೆಯೆಂದರೆ. ಮೂಲಕಥೆಯಲ್ಲಿ ತನ್ನ ಪೆನ್ಷನ್ ಹಣಕ್ಕಾಗಿ ಸರ್ಕಾರಿ ಕಛೇರಿಗಳನ್ನು ಸುತ್ತುತ್ತಾ ನಮ್ಮ ವ್ಯವಸ್ಥೆಯ ಕ್ರೌರ್ಯದಿಂದ ನಲುಗಿದರೆ, ಮೂಡಿಗೆರೆ-ಸಕಲೇಶಪುರ ತಾಲ್ಲೂಕುಗಳಲ್ಲಿ ಯಾವುದೇ ಕೆಲಸಕ್ಕಾಗಿ ಪ್ರತಿದಿನವೆಂಬಂತೆ ಸರ್ಕಾರಿ ಕಛೇರಿಗಳ ಮುಂದೆ ಸುತ್ತುತ್ತಿರುವವರಿಗೆ ’ತಬರ’ ಎಂಬ ಅಡ್ಡ ಹೆಸರು ಅಂಟಿಕೊಳ್ಳುತ್ತದೆ. ನಮ್ಮ ತಾಲ್ಲೂಕಿನ ರಾಜಕಾರಣಿಯೊಬ್ಬರಿಗೂ ಈ ಅಡ್ಡ ಹೆಸರಿದೆ.
*****
ತೊಂಬತ್ತರ ದಶಕದ ಪ್ರಾರಂಭದ ವರ್ಷಗಳಲ್ಲಿ ನಾನು ಹಾನುಬಾಳಿನಿಂದಾಚೆ ದೇವಾಲದಕೆರೆ ಎಂಬ ಊರಿನ ಬಳಿ ಕಾಫಿಎಸ್ಟೇಟೊಂದರ ಉಸ್ತುವಾರಿ ನಡೆಸುತ್ತಿದ್ದೆ, ಸಾಮಾನ್ಯವಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಅಲ್ಲಿಗೆ ಹೋಗಿಬರುತ್ತಿದ್ದೆ. ಜನ್ನಾಪುರದ ಬಳಿಯ ಖಾಸಿಂ ಸಾಬಿ ಎಂಬ ಗುಜರಿ ವ್ಯಾಪಾರಿ ಸೈಕಲ್ಲಿನಲ್ಲಿ ಆ ಕಡೆಯೆಲ್ಲ ಸುತ್ತಾಡುತ್ತ ಬರುತ್ತಿದ್ದ. ಸೈಕಲ್ಲಿನ ಕ್ಯಾರಿಯರಿನಲ್ಲಿ ಐಸ್ ಕ್ಯಾಂಡಿ ಡಬ್ಬವನ್ನಿಟ್ಟುಕೊಂಡು ಪಕ್ಕದಲ್ಲೆರಡು ಗೋಣಿಚೀಲವನ್ನು ಕಟ್ಟಿರುತ್ತಿದ್ದ. ಈತನಿಗೆ ಐಸ್ ಕ್ಯಾಂಡಿಗೆ ಹಣವನ್ನೇ ಕೊಡಬೇಕೇಂದೇನಿರಲಿಲ್ಲ ಕಬ್ಬಿಣ, ಅಲ್ಯುಮಿನಿಯಂ, ಚೂರುಪಾರುಗಳು, ಖಾಲಿ ಕ್ವಾರ್ಟರ್ ಬಾಟ್ಳಿಗಳು ಯಾವುದಾದರೂ ಸರಿ ಎಲ್ಲಕ್ಕೂ ಬದಲಿಯಾಗಿ ಐಸ್ ಕ್ಯಾಂಡಿ ಕೊಡುತ್ತಿದ್ದ. ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳೇ ಇವನ ಗಿರಾಕಿಗಳು. ಸಾಮಾನ್ಯವಾಗಿ ನಾವು ಎಸ್ಟೇಟಿನ ಗೇಟಿನ ಒಳಗಡೆ ಇಂತಹ ವ್ಯಾಪಾರದವರನ್ನು ಬಿಡುವುದಿಲ್ಲ. ಇವನ ಐಸ್ ಕ್ಯಾಂಡಿ ಆಸೆಗೆ ಕೆಲಸಗಾರರ ಮಕ್ಕಳು ಮನೆಯಲ್ಲಿದ್ದ ಹತಾರ(ಕೃಷಿ ಉಪಕರಣಗಳು)ಗಳನ್ನು ಕೊಟ್ಟು ಐಸ್ ಕ್ಯಾಂಡಿ ತಿನ್ನುತ್ತಿದ್ದುದು ಇದಕ್ಕೆ ಕಾರಣವಾಗಿತ್ತು. ಖಾಸಿಂಸಾಬಿಗೆ ಮಾತ್ರ ತೋಟದೊಳಕ್ಕೆ ಬರಲು ಅನುಮತಿ ಇತ್ತು. ಮಕ್ಕಳು ತೋಟದ ವಸ್ತುಗಳನ್ನು ತಂದರೆ ಅವನು ತೆಗೆದುಕೊಳ್ಳುತ್ತಿರಲಿಲ್ಲವಷ್ಟೇ ಅಲ್ಲ ಅವರಿಗೆ ಬುದ್ದಿ ಹೇಳಿ ವಾಪಸ್ ಕಳುಹಿಸುವುದೂ ಅಲ್ಲದೆ ಅದನ್ನು ನಮ್ಮ ಗಮನಕ್ಕೂ ತರುತ್ತಿದ್ದ. ಆದರೆ ಎಷ್ಟೋಬಾರಿ ಬರಿಗೈಯಿಂದ ಬಂದ ಮಕ್ಕಳಿಗೂ ಪುಕ್ಕಟೆಯಾಗಿ ಐಸ್ ಕ್ಯಾಂಡಿ ಕೊಡುತ್ತಿದ್ದ.
ನನ್ನ ಪರಿಚಯವಾದ ನಂತರ ಖಾಸಿಂಸಾಬಿ ನಮ್ಮೂರು ಬೆಳ್ಳೇಕೆರೆಯತ್ತಲೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ.
ಒಮ್ಮೊಮ್ಮೆ ನಮ್ಮ ಮನೆಗೂ ಬರುತ್ತಿದ್ದ. ಹೀಗೇ ಒಂದುದಿನ ಮಾತಾಡುತ್ತ "ಮೂಡಿಗೆರೆ ಹ್ಯಾಂಡ್ ಪೋಸ್ಟಲ್ಲಿ ಒಬ್ರು ಕತೆ ಬರಿಯೋರಿದಾರಲ್ಲ ಭಾಳಾ ಪೇಮಸ್, ಅವ್ರ ಮನೀಗೋಗಿದ್ದೆ" ಅಂದ.
ಅವನು ಹೇಳುತ್ತಿರುವುದು ಯಾರ ಮನೆಯೆಂದು ನನಗೆ ತಿಳಿಯಿತು. "ಅವ್ರಿಗೂ ಐಸ್ ಕ್ಯಾಂಡಿ ಕೊಟ್ಯಾ ಎಂದೆ.
"ಅಲ್ಲಿ ಮಕ್ಳು ಮರಿ ಯಾರೂ ಕಾಣ್ಲಿಲ್ಲ, ನಮಗೇನು ಜಾಸ್ತಿ ಗುಜ್ರಿ ಇದ್ರೆ ದುಡ್ಡಿಗೇ ವ್ಯಾಪಾರ ಮಾಡ್ತೀನಿ. ಆದರೆ ನಾನು ಅಲ್ಲಿಗೆ ಹೋಗ್ಬೇಕಾದರೆ ಒಂದ್ ಪಾರ್ಟಿ, ಒಂದು ಟಾರ್ಪಾಲ್ ಅಂಗಳದಲ್ಲಿ ಹಾಸ್ಕೊಂಡು ಒಂದು ಹಳೇ ಸ್ಕೂಟರ್ ಪೂರಾ ಬಿಚ್ಕೊಂಡು ಏನೋ ಮಾಡ್ತಿದ್ರು. ಯಾರೋ ಮೆಕೇನಿಕ್ ಸಾಬ್ರು ಬಂದವ್ರೆ ಅಂತ ಅಂದ್ಕಂಡು, ಅವರತ್ರ ಹೋಗಿ ಮನೇಲಿ ಸಾವ್ಕಾರಿದಾರ ಅಂದೆ. ನೋಡಿದ್ರೆ ಅವ್ರೇ ಸಾವ್ಕಾರ್ರು.! ಇವ್ರೇ ರಿಪೇರಿ ಮಾಡ್ತಿರ‍್ಬೇಕಾದ್ರೆ ಗುಜ್ರಿ ಇದ್ದೇ ಇರುತ್ತೆ ಅಂತಾಯ್ತು. ಕೇಳಿದ್ರೆ ಇವಾಗ ಪುರುಸೋತ್ತಿಲ್ಲ ಇನ್ನೊಂದಿನ ಬಾ ಅಂದ್ರು. ನಾನೂ ಅವ್ರು ರಿಪೇರಿ ಮಾಡೋದ್ನ ನೋಡ್ತಾ ಹಂಗೇ ನಿಂತ್ಕಂಡೆ, ನೀವ್ ಏನಾರ ಅನ್ನಿ ಈ ಮೆಷಿನ್ ರೀಪೇರಿ ಒಳ್ಗೆ ನಮ್ಮ ಸಾಬ್ರುಗಳ್ನ ಬಿಟ್ರೆ ಬೇರೇವ್ರು ಅಷ್ಟೊಂದು ಕರೆಕ್ಟಾಗಿ ಮಾಡಾಕಿಲ್ಲ. ಆದ್ರೆ ಇವ್ರುನ್ನ ನೋಡಿದ್ನಲ್ಲ ಯಾವ ಸಾಬ್ರಿಗೂ ಬಿಟ್ ಕೊಡಾಕಿಲ್ಲ. ಆ ಥರಾ ಕೆಲ್ಸ ಮಾಡೋರು, ಹಂಗೇ ನೋಡ್ತಾ ನಿಂತಿದ್ನಲ್ಲ. ಸ್ವಲ್ಪ ಹೊತ್ತು ಆದ್ಮೇಲೆ ಎಲ್ಲೋ ಸಾಬು ನಿನ್ನ ಗುಜ್ರಿ ಸ್ವಲ್ಪ ತೆಗಿ ಅಂದ್ರು. ನಾನೂ ಇದೇನೋ ಚಕ್ ಮಾಡ್ತಾರಪ್ಪ ಅಂತ ತೆಗ್ದು ತೋರುಸ್ದೆ. ನನ್ನ ಗುಜ್ರಿಂದ್ಲೇ ಒಂದು ಮೂರು ನಾಕು ಐಟಮ್ ತಗೊಂಡ್ರು!, ಆಮೇಲೆ ನೋಡೋ ಸಾಬಣ್ಣ ಆ ಶೆಡ್ಡಿನ ಮೂಲೇಲಿ ಒಂದಷ್ಟು ಬೇಡ್ದೇ ಇರೋವ್ನ ಬಿಸಾಕಿದೀನಿ ಎಲ್ಲ ತೊಗೊಂಡೋಗು ಅಂದ್ರು. ಎಲ್ಲ ತೊಗೊಂಡು ಲೆಕ್ಕ ಹಾಕಿ ದುಡ್ಡು ಕೊಡೋಕೆ ಹೋದ್ರೆ ಬ್ಯಾಡ ಹೋಗು ಅಂದ್ರು. ಆಮೇಲ್ ಗೊತ್ತಾಯ್ತು ನನ್‌ಗೆ, ಅವ್ರು ಕುವೆಂಪು ಅವರ್ ಮಗಾ ಅಂತೆ. ಈ ಭೂಮಿ ಮೇಲೆ ಎಂತೆಂಥವ್ರೆಲ್ಲ ಇರ‍್ತಾರ‍್ನೋಡಿ" ಎಂದು, ಸ್ವಲ್ಪ ತಡೆದು "ಇವಾಗ ನನ್ಗೆ ಅವ್ರು ಚೆನ್ನಾಗ್ ಪರಿಚಯ ದಾರೀಲಿ ಕಂಡ್ರೂ ಮಾತಾಡುಸ್ತೀನಿ" ಎಂದ.
ಖಾಸಿಂಸಾಬಿಗೆ ಆಗಲೇ ಸುಮಾರು ನಲವತ್ತೈದು ವರ್ಷ ದಾಟಿರಬಹುದು. "ಸಾಬ್ರೆ ನಿಮ್ಮ ಮಕ್ಳು ಏನ್ಮಾಡ್ತಿದಾರೆ ನಿಮ್ಮಂಗೆ ಗುಜ್ರಿ ಆಯೋಕೆ ಬಿಟ್ಟಿದ್ದೀರೋ ಇಲ್ಲ ಏನಾದ್ರೂ ವಿದ್ಯೆ ಕಲ್ತಿದಾರಾ" ಎಂದು ಕೇಳಿದೆ. "ದೇವು ನನ್ಗೆ ಅದೊಂದು ಯೋಗ ಕೊಟ್ಟಿಲ್ಲ ಸಾರ್ ಎಂದು ಗುಜರಿ ತುಂಬಿ ಭಾರವಾಗಿದ್ದ ಸೈಕಲನ್ನು ನಿಧಾನವಾಗಿ ತಳ್ಳಿಕೊಂಡು ಹೋದ. ನಾನು ಅವನು ಹೋಗುವುದನ್ನೇ ನೋಡುತ್ತ ನಿಂತೆ.
ಇತ್ತೀಚಿನ ವರ್ಷಗಳಲ್ಲಿ ಖಾಸಿಂಸಾಬಿಯನ್ನು ನಾನು ನೋಡಿಲ್ಲ. ಆತ ಎಲ್ಲೋ ಮಾಯಾಲೋಕದಲ್ಲಿ ಗುಜರಿ ಹುಡುಕುತ್ತಾ ಮಕ್ಕಳಿಗೆ ಐಸ್ ಕ್ಯಾಂಡಿ ಮಾರುತ್ತಿರಬಹುದು.
*****
ನಾವು ಪ್ರಥಮ ಬಾರಿಗೆ ನಮ್ಮ ರಂಗತರಬೇತಿ ಶಿಬಿರಕ್ಕೆ ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಲು ಹೋಗುವಾಗ, ಅವರಲ್ಲಿ ಮಾತನಾಡುವುದು ಹೇಗೆಂದು ಹೆದರಿಕೊಂಡಿದ್ದೆವು. ತೇಜಸ್ವಿಯೆಂದರೆ ತುಂಬಾ ಹಾಸ್ಯಪ್ರಜ್ಞೆಯಿರುವ ಮನುಷ್ಯ, ಜೊತೆಯಲ್ಲಿ ದೂರ್ವಾಸಮುನಿ ಕೂಡಾ, ಇನ್ನು ಕೆಲವು ಬಾರಿ ಏನೂ ಪ್ರತಿಕ್ರಿಯೆ ನೀಡದೇ ತಣ್ಣಗೆ ನಿರಾಕರಿಸಿಬಿಡುತ್ತಾರೆ, ಅವರು ಒಮ್ಮೆ ಏನನ್ನಾದರೂ ನಿರ್ಧರಿಸಿದ ಮೇಲೆ ಮತ್ತೆ ಅವರ ತೀರ್ಮಾನವನ್ನು ಬದಲಾಯಿಸಲು ಒಪ್ಪುವವರೇ ಅಲ್ಲ. ಹೀಗೆ ಬೇರೆ ಬೇರೆ ರೀತಿಯಲ್ಲಿ ಅವರ ಗುಣ ದೋಷಗಳ ಮಾಹಿತಿಗಳು- ಹಿಂಡಿನಿಂದ ತಪ್ಪಿಸಿಕೊಂಡುಬಂದು ಊರಪಕ್ಕದಲ್ಲಿ ಸುಳಿದಾಡುತ್ತಿರುವ ಕಾಡಾನೆಯ ಸುದ್ದಿಯಂತೆ ಹರಿದಾಡುತ್ತಿದ್ದವು. ಆದ್ದರಿಂದಲೇ ಅವರ ಸುತ್ತ ಅನೇಕ ಕತೆಗಳು ಹುಟ್ಟಿಕೊಳ್ಳುತ್ತಿದ್ದವು. (ಇದಕ್ಕೆ ಅವರ ಅನೇಕ ಬರಹಗಳೂ ಪುಷ್ಟಿ ನೀಡುತ್ತಿವೆ) ಆ ಕತೆಗಳೆಲ್ಲ ಹೇಗಿವೆಯೆಂದರೆ ಅವುಗಳನ್ನು ಯಾರು ಬೇಕಾದರೂ ಇದು ನನ್ನೊಡನೆಯೇ ನಡೆದ ಘಟನೆ ಎಂದು ವಿವರಿಸಬಹುದು. ಅಂತವುಗಳಲ್ಲಿ ಇದೊಂದು ಉದಾಹರಣೆ.
ಒಂದುದಿನ ತೇಜಸ್ವಿಯವರು ಸ್ಕೂಟರ್‌ನಲ್ಲಿ ಎಲ್ಲಿಗೋ ಹೋಗುತ್ತಿದ್ದರಂತೆ. ಹಿಂದಿನಿಂದ ಎರಡು ಮೂರು ಬೈಕುಗಳಲ್ಲಿ ಐದಾರು ಜನರು ಅವರನ್ನು ಅಟ್ಟಿಸಿಕೊಂಡು ಬರುವವರಂತೆ ಬಂದು ಮುಂದೆ ಸಾಗಿ, ತಿರುಗಿ ಎದುರಿಗೆ ಬಂದು ಸಾರ್... ಸಾರ್ ಎಂದು ನಿಲ್ಲಿಸಿದರಂತೆ. ಏನೋ ಅನಾಹುತ ಆಗಿರಬೇಕು ಎಂಬಂತೆ ಸ್ಕೂಟರ್ ನಿಲ್ಲಿಸಿ ತೇಜಸ್ವಿ ಕೆಳಗಿಳಿದು, "ಏನ್ರಿ ಎಂದರಂತೆ.
ಅದಕ್ಕೆ ಆ ಬೈಕ್ ಸವಾರರು, "ಏನಿಲ್ಲಾ ಸಾರ್, ನೀವಿಲ್ಲಿ ಹೋಗ್ತಾ ಇರೋದು ಗೊತ್ತಾಯ್ತು..ಹೀಗೇ..ಸುಮ್ನೆ ನಿಮ್ಮುನ್ನ ನೋಡಿ..ಮಾತಾಡ್ಸ್ಕೊಂಡು ಹೋಗಾಣ ಅಂತ ಬಂದ್ವಿ ಎಂದರಂತೆ.
ಕೂಡಲೇ ತೇಜಸ್ವಿ ಅಲ್ಲೇ ಹತ್ತಿರದಲ್ಲಿ ರಸ್ತೆ ರಿಪೇರಿಗೆಂದು ತಂದು ಹಾಕಿದ್ದ ಜಲ್ಲಿ ಗುಡ್ಡೆಯ ಮೇಲೆ ಹತ್ತಿ, ಎರಡೂ ಕೈಗಳನ್ನು ಮೇಲಕ್ಕೆತ್ತಿ ನಿಂತು, "ಸರಿಯಾಗಿ ನೋಡ್ಕೊಳ್ರೀ" ಎಂದರಂತೆ.
ಬೈಕುಸವಾರರು ತಬ್ಬಿಬ್ಬಾಗಿ ನೋಡುತ್ತಿದ್ದಂತೆ "ಸರಿ ನೋಡಿಯಾಯ್ತು ಮಾತಾಡಿನೂ ಆಯ್ತು ಇನ್ನು ಹೋಗಿ" ಎಂದು ಹೇಳಿ ಸ್ಕೂಟರ್ ಹತ್ತಿ ಹೊರಟೇಬಿಟ್ಟರಂತೆ.
ಈ ಕತೆ ಹಲವು ರೀತಿಗಳಲ್ಲಿ ಪ್ರಚಾರದಲ್ಲಿದೆ.
ಅಂದರೆ ತೇಜಸ್ವಿಯವರಿಗೆ ತನ್ನನ್ನು ಒಂದು ಪ್ರದರ್ಶನದ ವಸ್ತುವಿನಂತೆ ನೋಡಲುಬಂದು ಕಾಲಹರಣ ಮಾಡುವವರನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ ನಿಜವಾದ ಕಾಳಜಿಗಳಿದ್ದಾಗ ಮತ್ತು ಆ ಕೆಲಸದ ಹಿಂದಿನ ಕಾಳಜಿಗಳು ಅವರಿಗೆ ಒಪ್ಪಿಗೆಯಾದಾಗ ಅವರು ಯಾವಾಗಲೂ ಸಹಾಯ-ಸಹಕಾರಗಳನ್ನು ನೀಡಿದ್ದಾರೆ. ಅದರಲ್ಲೂ ರೈತರ-ಕೃಷಿಕರ ಬಗೆಗಿನ ಕಾರ್ಯಕ್ರಮಗಳಿಗೆ ಆಸಕ್ತಿವಹಿಸಿ ಸಮಯ ಹೊಂದಿಸಿಕೊಂಡು ಭಾಗವಹಿಸಿದ್ದಾರೆ. ಆದರೆ ಅಲ್ಲೂ ಕೂಡಾ ತಮ್ಮ ಅಭಿಪ್ರಾಯವನ್ನು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ. ಹೀಗಾಗಿ ಕೆಲವು ಕಾರ್ಯಕ್ರಮಗಳಲ್ಲಿ ಅದರ ಸಂಘಟಕರಾಗಲೀ, ಭಾಗವಹಿಸಿದವರಾಗಲೀ ಅಂದುಕೊಂಡದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಅವರು ಹೇಳಿದ್ದೂ ಉಂಟು.
*****
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ (ತೊಂಬತ್ತರ ದಶಕದ ಪ್ರಾರಂಭದಲ್ಲಿ) ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ಜನ ಆಸಕ್ತರು ಸೇರಿ ಕಾರ್ಯಕ್ರಮ ರೂಪಿಸತೊಡಗಿದರು. ಅವರಲ್ಲಿ ಕೆ.ಪಿ.ಸುರೇಶ, ಜಿ.ಎಸ್. ಉಬರಡ್ಕ, ಶಿವರಾಂ ಪೈಲೂರ್, ಎಂ.ಟಿ.ಶಾಂತಿಮೂಲೆ ಮುಂತಾದವರಿದ್ದರು. ಸುಳ್ಯ ತಾಲ್ಲೂಕಿನ ಕುಕ್ಕುಜಡ್ಕ ಎಂಬ ಊರಿನಲ್ಲಿ ಸಭೆ. ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. (ತಾರಿಣಿಯವರ ಪತಿ ಚಿದಾನಂದಗೌಡರ ಊರು ಅಲ್ಲೇ ಪಕ್ಕದಲ್ಲಿದೆ).
ಸಭೆಗೆ ತೇಜಸ್ವಿಯವರ ಜೊತೆ ವಿಜ್ಞಾನಿ ಚಂದ್ರಶೇಖರ್, ಪ್ರದೀಪ್ ಕೆಂಜಿಗೆ, ಹಾಗೂ ರಾಜೇಶ್ವರಿ ಬಂದಿದ್ದರು. ಇವರೆಲ್ಲರೂ ಕಾರಿನಲ್ಲಿ ಬಂದಿಳಿದಾಗ ಅತಿಥಿಗಳನ್ನು ಕಂಡು ಸಂತೋಷದ ಜೊತೆಗೆ ’ಕಾರಿನಲ್ಲಿ ಬಂದಿದ್ದಾರೆ ಖರ್ಚು ಕೊಡದಿದ್ದರೆ ಹೇಗೆ’ ಎಂಬ ಆತಂಕವೂ ಸಂಘಟಕರಿಗೆ ಆಯಿತು.
ಸಾವಯವ ಕೃಷಿಯ ಬಗ್ಗೆ ಅಲ್ಲಿನ ಕೆಲವರಲ್ಲದೆ ಚಂದ್ರಶೇಖರ್ ಅವರೂ ಮಾತನಾಡಿದರು. ನಂತರ ತೇಜಸ್ವಿ ಮಾತನಾಡುತ್ತ, ಆಧುನಿಕ ಕೃಷಿಯ ಮತ್ತು ಆಧುನಿಕ ವಿಜ್ಞಾನದ ಅನಾಹುತಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾದ ನಾವು ವೈಜ್ಞಾನಿಕ ದೃಷ್ಟಿಕೋನವನ್ನೇ ನಿರಾಕರಿಸುವಂತಾಗಬಾರದು, ಕೃಷಿವಿಜ್ಞಾನಿಗಳಿಗಿಂತ ಕೃಷಿಕವಿಜ್ಞಾನಿಯಾಗುವುದು ಮುಖ್ಯ ಎಂದರು.
ಎರೆಹುಳುಗಳ ಬಗ್ಗೆ ಮಾತನಾಡುತ್ತಾ ’ನಾವೆಲ್ಲ ಎರೆಹುಳು ರೈತನ ಗೆಳೆಯ ಎಂಬ ಪಾಠವನ್ನು ಓದಿದ್ದೇವೆ. ಈಗ ನೀವೂ ಎರೆಹುಳು ಸಾಕಿ ಎನ್ನುತ್ತಿದ್ದೀರಿ, ನಾನು ತೋಟದಲ್ಲಿ ನೆಡಲು ಒಂದಷ್ಟು ಕಾಫಿ-ಕುಕ್ಕೆಗಿಡಗಳನ್ನು ಮಾಡಿದ್ದೆ(ಕುಕ್ಕೆ ಗಿಡ ಅಂದರೆ ಪಾಲಿಥೀನ್ ಬ್ಯಾಗ್‌ನಲ್ಲಿ ಮಾಡಿದ ನರ್ಸರಿ) ಅದರಲ್ಲಿ ಸಾಕಷ್ಟು ಎರೆಹುಳುಗಳಿದ್ದವು. ಅವಿದ್ದರೆ ಒಳ್ಳೆಯದು ಅಂದುಕೊಂಡು ಹಾಗೇ ಬಿಟ್ಟೆ, ಎರೆಹುಳಗಳೆಲ್ಲ ದೊಡ್ಡವಾಗಿ ಕುಕ್ಕೆಯೊಳಗೆ ಮೇಲೆ ಕೆಳಗೆ ಹರಿದಾಡಿ ಮಣ್ಣೆಲ್ಲ ಸಡಿಲಾಗಿ ಹೋಯಿತು, ಗಿಡಗಳೆಲ್ಲ ಹಾಳಾದವು.’ ಎಂದರು. ಹೀಗೆ ಯಾವುದೇ ಹೊಸ ಪ್ರಯೋಗವಾದರೂ ರೈತನ ಅನುಭವದ ಪ್ರಯೋಗಶಾಲೆಯಲ್ಲೇ ಅದರ ಮೌಲ್ಯಮಾಪನ ಮತ್ತು ಅಗತ್ಯ ಬದಲಾವಣೆಯ ಅಳವಡಿಕೆ ಆಗಬೇಕು ಎಂದು ಸೂಚ್ಯವಾಗಿ ಹೇಳಿದರು. ಆದರೆ ತೇಜಸ್ವಿಯವರು ಸಾವಯವ ಕೃಷಿಯನ್ನು ಸಮರ್ಥಿಸಿ ಸುದೀರ್ಘ ಭಾಷಣ ಮಾಡಬಹುದೆಂದು ನಿರೀಕ್ಷಿಸಿ ಬಂದಿದ್ದ ಕೆಲವರು, ಆ ಮಾತನ್ನು ತಮಾಷೆಯೆಂದು ಪರಿಗಣಿಸಿದ್ದೇ ಅಲ್ಲದೆ ತೇಜಸ್ವಿಯವರು ಎರೆಹುಳುಗಳ ಉಪಯೋಗದ ವಿರುದ್ಧವೇ ಮಾತನಾಡಿದರು ಅಂದುಕೊಂಡರು.
ಕಾರ್ಯಕ್ರಮ ಮುಗಿಸಿ ಅತಿಥಿಗಳು ಹೊರಡುವಾಗ ಸಂಘಟಕರು ಕವರಿನಲ್ಲಿ ಸ್ವಲ್ಪ ಹಣವನ್ನಿಟ್ಟು ಕೊಡಲು ಹೋದರೆ, "ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ ಎಂದು ಸಂಭಾವನೆಯಿರಲಿ ದಾರಿಖರ್ಚನ್ನೂ ಸ್ವೀಕರಿಸಲು ನಿರಾಕರಿಸಿದರು.
*****
೯೭ನೇ ಇಸವಿಯ ಸುಮಾರಿಗೆ ಒಂದು ದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣ ನನ್ನ ಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ.
ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು. ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ -ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ ಆದಿಬಾಗದಲ್ಲೇ ಒಂದು ಸೆಕೆಂಡ್ ಹ್ಯಾಂಡ್ ಜಾವಾ ಬೈಕನ್ನು ಖರೀದಿಸಿದ್ದ. ಅದನ್ನು ಕಾಡು, ಗುಡ್ಡ, ಗದ್ದೆ ಎಲ್ಲೆಂದರಲ್ಲಿ ಓಡಿಸುತ್ತಿದ್ದ. ಗದ್ದೆಗೆ ಗೊಬ್ಬರ ಸಾಗಿಸುವುದರಿಂದ ಹಿಡಿದು ದನಗಳಿಗೆ ಹುಲ್ಲು ತರಲೂ ಅದನ್ನೇ ಬಳಸುತ್ತಿದ್ದ. ಚಿಕ್ಕಮಗಳೂರು-ಶಿವಮೊಗ್ಗದವರೆಗೂ ಅದರಲ್ಲೇ ಸಂಚರಿಸುತ್ತಿದ್ದ. ಆಗಲೇ ಇವನಿಗೆ ’ಬೈಕ್ ನಾರಾಯಣ’ ಎಂದ ಅಭಿದಾನ ಪ್ರಾಪ್ತವಾಗಿತ್ತು. ಬೈಕನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಿಪೇರಿ ಮಾಡುವ ಕಲೆ ನಾರಾಯಣನಿಗೆ ಕರಗತವಾಗಿತ್ತು. ಅದು ಹೇಗೋ ತೇಜಸ್ವಿಯವರೊಂದಿಗೆ ಈತನಿಗೆ ಸಂಪರ್ಕವಿತ್ತು. ಕೆಲವುಬಾರಿ ಅವರಲ್ಲಿಗೆ ಈತ ಹೋಗಿಬರುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಸಂದರ್ಭ ಸಿಕ್ಕಿದಾಗಲೆಲ್ಲ, ತೇಜಸ್ವಿಯವರಿಗೆ ಸ್ಕೂಟರ್ ರಿಪೇರಿಯನ್ನು ತಾನೇ ಹೇಳಿಕೊಟ್ಟುದ್ದಾಗಿ ರೀಲು ಬಿಡುತ್ತಿದ್ದ!.
ನಾರಾಯಣ ನನ್ನನ್ನುದ್ದೇಶಿಸಿ "ಎತ್ಲಾಗೋ ಮಾರಾಯ" ಎಂದ.
"ಚಿಕ್ಮಗ್ಳೂರಿಗೋಗಿದ್ದೆ, ಈಗ ಊರಿಗೆ" ಎಂದೆ.
"ಬಾ ಇಲ್ಲೇ ತೇಜಸ್ವಿ ಮನೆತಂಕ ಹೋಗ್ಬರೋಣ ಬಾ" ಎಂದು ಕರೆದ.
ನನಗೆ ಅವನೊಂದಿಗೆ ಹೋಗುವ ಮನಸ್ಸಾದರೂ. ಆಗಲೇ ಸಂಜೆ ನಾಲ್ಕಾಗುತ್ತ ಬಂದಿತ್ತು. ಬಸ್ಸು ತಪ್ಪಿದರೆ ಎಂಬ ಚಿಂತೆಯಾಯಿತು. ನಾನು ಬರುವುದಿಲ್ಲ ನೀನೆ ಹೋಗಿ ಬಾ ಎಂದೆ.
"ನನಿಗೆ ಒಬ್ನೇ ಹೋಗಕ್ಕೆ ಬೇಜಾರು, ಅಲ್ಲದೇ ಒಬ್ನೇ ಹೋದ್ರೆ ಮಾರಾಯ ಅವ್ರು ತುಂಬ ಹೊತ್ತು ಮಾತಾಡ್ತ ಕೂತ್ಕಂಡ್ಬಿಡ್ತಾರೆ, ಆಮೇಲ್ ಪಜೀತಿ, ಇಬ್ರಾದ್ರೆ ಏನಾರಹೇಳಿ ಬೇಗ ಹೊರಡ್ಬೋದು ಬಾ" ಎಂದ. ಅವನು ಹೇಳಿದ ದಾಟಿ ತೇಜಸ್ವಿಯವರಿಗೆ ಇವನಂತಹ ಆತ್ಮೀಯ ಸ್ನೇಹಿತ ಇನ್ನೊಬ್ಬರಿಲ್ಲ ಎನ್ನುವಂತಿತ್ತು.
ಈತನ ಮಾತಿನ ಬಗ್ಗೆ ನನಗೇನೋ ಅನುಮಾನವಾಯಿತು. ಆದ್ದರಿಂದ ತಪ್ಪಿಸಿಕೊಳ್ಳಲು ನೆಪಹುಡುಕುತ್ತಾ "ನಾನೀಗ ಅಲ್ಲಿಗೆ ಬಂದು ಐದು ಗಂಟೆ ಬಸ್ ತಪ್ಪಿದ್ರೆ ನಾನಿಲ್ಲೇ ಬಾಕಿ" ಎಂದೆ.
"ಬಾ ಅಮೇಲೆ ನಮ್ಮೂರಿಗೋಗಾಣ, ನಾಳೆ ನಾನು ಆಕಡೆ(ಸಕಲೇಶಪುರ) ಬರೋದಿತ್ತು ಜೊತೆಲೇ ಹೋಗಣ" ಎಂದು ಗಂಟುಬಿದ್ದ. ನನಗೆ ಇವತ್ತು ಊರಿಗೆ ಹೋಗಲೇ ಬೇಕೆಂದೂ ನಾಳೆ ಬೆಳಗ್ಗೆ ಮುಖ್ಯವಾದ ಕೆಲಸವಿರುವುದರಿಂದ ನಿಮ್ಮೂರಿಗೆ ಬಂದು ಉಳಿಯಲು ಸಾಧ್ಯವಿಲ್ಲವೆಂದು ಹೇಳಿದೆ.
"ಸರಿ ಹಂಗಾದ್ರೆ ಇವತ್ತೆ ನಾನು ಸಕಲೇಶಪುರಕ್ಕೆ ಬರ‍್ತೀನಿ, ನಿನ್ನ ಊರೀಗೇ ಬಿಡ್ತೀನಲ್ಲ ಬಾ, ಹೆಂಗೂ ನಿಂಗೆ ಬಸ್ ಚಾರ್ಜ್ ಉಳಿಯುತ್ತಲ್ಲ ಅದು ದಾರೀಲಿ ಹಾನುಬಾಳಲ್ಲಿ ಸಾಯಂಕಾಲದ ಖರ್ಚಿಗಾಯ್ತು" ಎಂದು ಎಳೆದು ಬೈಕ್ ಹತ್ತಿಸಿದ. "ನಾಲ್ಕು ರುಪಾಯಿ ಉಳಿಸಿಕೊಟ್ಟು ನಲವತ್ತು ರುಪಾಯಿ ಖರ್ಚುಮಾಡ್ಸೋ ಐಡಿಯಾ ಹಾಕ್ಬೇಡ, ನಿನಗಾಗಿ ಬರ‍್ತೀನೀ ಆದರೆ ಸಾಯಂಕಾಲದ ಖರ್ಚೆಲ್ಲ ನಿಂದೇ" ಎನ್ನುತ್ತಾ ಅವನೊಂದಿಗೆ ಹೊರಟೆ.
ನಾನೂ ತೇಜಸ್ವಿಯವರನ್ನು ಭೇಟಿ ಮಾಡದೆ ತುಂಬ ಸಮಯವಾಗಿತ್ತು. ಈಗ ನಾರಾಯಣ ಜೊತೆಯಲ್ಲಿ ಇರುವುದರಿಂದ ಅವರಲ್ಲಿಗೆ ಹೋಗಲು ಒಂದು ಕಾರಣ ಸಿಕ್ಕಿತ್ತು.
ಹ್ಯಾಂಡ್ ಪೋಸ್ಟಿಗೆ ಬರುತ್ತಿದ್ದಂತೆ ಹೋಟೆಲೊಂದರ ಮುಂದೆ ಬೈಕ್‌ನಿಲ್ಲಿಸಿದ ನಾರಾಯಣ "ಬಾ ಕಾಫಿ ಕುಡ್ದು ಹೋಗಣ" ಎಂದ.
ಹೋಟೆಲಿನಲ್ಲಿ ಕಾಫಿಗೆ ಮೊದಲು ತಿಂಡಿಗೂ ಹೇಳಿದ. ನನ್ನ ಅನುಮಾನ ಬೆಳೆಯುತ್ತಲೇ ಇತ್ತು.
"ನಾರಾಯಣ ನೀನು ಯಾವಾಗ ಬೇಕಾದ್ರೂ ಅವರಲ್ಲಿಗೆ ಒಬ್ನೇ ಹೋಗ್ತಿದ್ದೆ, ಈಗ ನಾನು ಬರಲ್ಲ ಅಂದ್ರು ಎಳ್ಕೊಂಡು ಹೋಗ್ತಾ ಇರೋದು ನೋಡಿದ್ರೆ ನಂಗ್ಯಾಕೋ ಡೌಟು.. ನೀನೇನೋ ಮುಚ್ಚಿಡ್ತಾ ಇದ್ದೀಯ," ಎಂದೆ.
"ಅದೊಂದು ಕತೆ ಮಾರಾಯ, ಈಗ ಒಂದು ತಿಂಗ್ಳಲ್ಲಿ ನಂಗೆ ಅವ್ರತ್ರ ಅರ್ಜೆಂಟಾಗಿ ಒಂದು ಕೆಲ್ಸ ಆಗ್ಬೇಕಿತ್ತು, ಬೆಳಗ್ಗೆ..ಬೆಳಗ್ಗೇನೆ ಅವ್ರ ಮನೆಹತ್ರ ಹೋದೆ. ಮನೇಲಿ ಯಾರೂ ಕಾಣುಸ್ಲಿಲ್ಲ, ಅಲ್ಲೇ ಮನೆ ಪಕ್ಕದಲ್ಲೇ ಕೆಲಸದೋನಿದ್ದ, ಅವನ್ನ ಕೇಳುದ್ರೆ ’ಅವುರಾಗಳೇ ಕ್ಯಾಮರಾ ತಗಂದು ತ್ವಾಟಕ್ಕೋದ್ರು ಅಂದ, ಅವ್ರು ಹೋದ ದಿಕ್ಕಿಗೇ ಹುಡುಕ್ತಾ ಹೋಗಿ ತೋಟದಲ್ಲೆಲ್ಲಾ ನೋಡ್ದೆ, ಅಲ್ಲೆಲ್ಲೂ ಕಾಣುಸ್ಲಿಲ್ಲ, ಹಂಗೇ ಅವ್ರುಮನೆ ಕೆರೆ ದಾಟಿ ಕಾಡು ಹತ್ತಿ ಗದ್ದೆ ಕಡೀಗ್ ಬಂದು ನೋಡಿದ್ರೂ ಅಸಾಮಿನೇ ಪತ್ತೆ ಇಲ್ಲ. ಇನ್ನೆಂಗೂ ವಾಪಸ್ ಹೋಗದಲ್ಲ, ನನಗ್ ಅವುರ‍್ನ ಅರ್ಜೆಂಟಾಗಿ ಕಾಣ್ಲೇ ಬೇಕಿತ್ತು, ಇಲ್ಲೇ ಎಲ್ಲಾರ ಇರ‍್ಬೌದು ಅಂದ್ಕಂಡ್... ಅಣ್ಣಾ... ಅಣ್ಣಾ..... ಅಂತ ಜೋರಾಗಿ ಕೂಗ್ದೆ. ಅವೆಂತವೋ ಹಕ್ಕಿಗಳು ಮರದಿಂದ ಬರ್ರ್..... ಅಂತ ಹಾರಿಹೋದ್ವು.. ಜೊತಿಗೇ ದಡಕ್ಕಂತೆ ಎಂತದೋ ಪ್ರಾಣಿ ನೆಲದಿಂದ ಎದ್ದಂಗಾಯ್ತು. ನಾನು ಇದೆಂತದೋ ಕಾಡು ಹಂದಿನೋ.. ಕಾಟಿನೋ ಅಂತ ಗಾಭರಿಲಿ ಯಾವ್ದಾರು ಮರ ಹತ್ತಾಣ ಅಂತ ನೋಡ್ತಿದ್ರೆ, ಅದು ಇವ್ರೇ ಮಾರಾಯ... ನೆಲದಲ್ಲಿ ಸೊಪ್ಪು ಕಣಾರ (ಟೊಂಗೆ) ಎಲ್ಲ ಗುಡ್ಡಿಗೆ ಹಾಕ್ಕೊಂಡು ಅದರೊಳಗೆ ಮಲಗಿ ಫೋಟೋ ತೆಗಿಯಕ್ಕೆ ಮಾಡ್ಕಂಡಿದ್ರು, ನಂಗೆ ಗಾಬರೀಲೂ ನಗು ಬಂತು. ಅವರು ಎದ್ದೋರೆ ’ಯಾವೋನೊ ಅವನು, ನಾನು ಅಷ್ಟೊಂತ್ತಿಂದ ಕಾಯ್ತಾ ಇದ್ರೆ ಎಲ್ಲಾ ಹಾಳು ಮಾಡ್ದೋನು, ಇಲ್ಲಿಗ್ಯಾಕಯ್ಯ ಬಂದೆ’ ಅಂತ ಕಣಾರ ತಗಂದು ಹೊಡಿಯೋಕೇ ಬೆರಸ್ಕಂಡ್ ಬಂದ್ರು, ನಾನು ಸಿಕ್ಕಿದ್ರೆ ಹೊಡದೇ ಬಿಡೋರೋ ಏನೋ, ನಾನು ಹೆಂಗೆ ಪದರಾಡುಹಾಕ್ದೇ (ಓಟಕಿತ್ತೆ) ಅಂದ್ರೇ ಮತ್ತೆ ಇವತ್ತೇ ನೋಡು ನೀನಿರೋಹೊತ್ಗೆ ಧೈರ್ಯವಾಗಿ ಅಲ್ಲಿಗೆ ಹೊರಟಿರೋದು" ಅಂದ.
ನಾನು ಇದೇ ಕತೆಯನ್ನು ಬೇರೊಂದು ರೂಪದಲ್ಲಿ ಇನ್ನೊಬ್ಬನ ಬಾಯಲ್ಲಿ ಕೇಳಿದ್ದೆ. ಆದ್ದರಿಂದ ಇವರಿಬ್ಬರಲ್ಲಿ ಯಾರು ಯಾರ ಕಥೆಯನ್ನು ಕದ್ದಿದ್ದಾರೆ ಎಂದು ತಿಳಿಯಲಿಲ್ಲ. ಆದರೂ ಇವನೂ ಇಷ್ಟೆಲ್ಲ ಕಥೆಕಟ್ಟಿ ನನ್ನನ್ನು ಅಲ್ಲಿಗೆ ಕರೆದೊಯ್ಯತ್ತಿರಬೇಕಾದರೆ ಏನೋ ಭೀಕರವಾದದ್ದನ್ನು ಎದುರಿಸಬೇಕಾದೀತೆಂದು ಆತಂಕವಾಯಿತು. "ನೀನು ಏನೇ ಹೇಳಿದ್ರೂ ನಾರಾಯಣ ನಂಗ್ಯಾಕೋ ನಿನ್ನ ಕಥೆ ಬಗ್ಗೆ ನಂಬಿಕೇನೇ ಬರ‍್ತಾಇಲ್ಲಾ ನಿನ್ನ ಮಾತು ಕೇಳ್ತಾ ನನ್ನ ಅನುಮಾನ ಇನ್ನೂ ಜಾಸ್ತಿ ಆಯ್ತು" ಎಂದೆ.
"ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ’ನಿರುತ್ತರ’ ದತ್ತ ಸಾಗಿತು.
ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸದ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. "ಊಟಕ್ಕೆ ಏನು ಮಾಡ್ತೀರಿ?" ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು ಉಪ್ಪು- ನೀರು, ಏನು ಬೇಕೋ ಅದನ್ನು ಹಾಕಿ ಕುದಿಸುತ್ತಾ ಇದ್ದರೆ ರಾಜೇಶ್ವರಿಯವರು ಬರುವವರೆಗೂ ಏನೂ ತೊಂದರೆ ಇಲ್ಲವೆಂದು.. ಮುಂದೆ ಅವರೇ ಬರೆದ "ಪಾಕಕ್ರಾಂತಿ"ಯ ಕೆಲವು ವಿವರಗಳನ್ನು ನೀಡಿದರು. ಮಾತು ಮುಂದುವರೆದಂತೆ ’ಹೇಗಿದೆ ನಿಮ್ಮ ರಂಗ ಚಟುವಟಿಕೆ’ ಎಂದು ನನ್ನಲ್ಲಿ ವಿಚಾರಿಸಿಕೊಂಡರು. ಹಾಗೇ ಮಾತು ’ ಮೈಸೂರಿನ ರಂಗಾಯಣ’ದತ್ತ ತಿರುಗಿತು. ಆಗಿನ್ನೂ ಬಿ.ವಿ.ಕಾರಂತರೇ ರಂಗಾಯಣದ ನಿರ್ದೇಶಕರಾಗಿದ್ದರು. "ಅಲ್ಲಾ ಕಣ್ರಿ ಅವತ್ತು ನಿಮ್ಮಲ್ಲಿ ರಂಗ ಶಿಬಿರ ಮಾಡೋಕೆ ಬಂದಿದ್ದರಲ್ಲ ಹುಡುಗರು (ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ) ಅವ್ರಿನ್ನೂ ಅಲ್ಲೇ ಇದ್ದಾರೇನ್ರಿ?" ಎಂದರು.
"ಅಲ್ಲೇ ಇದ್ದಾರೆ ಸಾರ್ ಎಂದೆ.
"ಆ ಕಾರಂತ ಎಲ್ಲ ಸರಿ ಆದ್ರೆ ಆಡಳಿತನೇ ಸರಿಯಾಗಿ ಗೊತ್ತಿಲ್ಲ ಕಣ್ರಿ.. ಪಾಪ ಈ ಹುಡುಗರ ಭವಿಷ್ಯ ಏನು, ನಾಟಕನೇ ನಂಬ್ಕೊಂಡು ಮುಂದೆ ಏನ್ಮಾಡ್ತಾರೆ. ಎಲ್ಲ ಅವ್ಯವಸ್ಥೆ ಆಗಿದಿಯಂತಲ್ರಿ, ಇದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ದೇ ಮಾಡ್ಬಾರ‍್ದು, ಎಲ್ಲಾ ಬೇಜವಾಬ್ದಾರಿ ಅನ್ಸುತ್ತೆ, ನಂಗೆ ಆ ಹುಡುಗರನ್ನ ಯೋಚ್ನೆ ಮಾಡಿದ್ರೆ ಬೇಜಾರಾಗುತ್ತೆ ಕಣ್ರಿ ಎಂದರು. ರಂಗಾಯಣದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅವರು ಅಂದೇ ಊಹಿಸಿದ್ದರು. ನಮ್ಮ ಮಾತು ಹೀಗೇ ಮುಂದುವರಿಯಿತು. ಕೊನೆಗೆ ತೇಜಸ್ವಿಯರಿಗೆ ಮಾತು ಸಾಕೆನಿಸಿ
"ಮತ್ತೇನು ಈಕಡೆ ಬಂದ್ರಿ ಎಂದು ಮುಕ್ತಾಯದ ಸೂಚನೆ ನೀಡಿದರು.

ನಾನು ಕಂಡ ತೇಜಸ್ವಿ...

ಪ್ರಸಾದ ರಕ್ಷಿದಿ




ಭಾಗ -1

ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕದ ಅನಾವರಣ ಅವರ ಮೊದಲ ಬರಹಗಳೊಂದಿಗೆ ಪ್ರಾರಂಭವಾಗುತ್ತವೆ ಮಲೆನಾಡಿನ ಜನರಿಗೆ ವಿಶಿಷ್ಟವಾದ ಹಾಸ್ಯಪ್ರಜ್ಞೆಯೊಂದಿಗೆ ಇಲ್ಲಿನ ಪಾತ್ರಗಳೆಲ್ಲ ತಮ್ಮೆಲ್ಲ ನೋವು ನಲಿವು, ಸುಖ-ದುಃಖ, ಕೋಪ-ತಾಪಗಳನ್ನು ಹಂಚಿಕೊಳ್ಳುತ್ತವೆ. ತೇಜಸ್ವಿಯವರ ಒಟ್ಟೂ ಕಥಾಲೋಕವನ್ನು, ಅವರ ವ್ಯಕ್ತಿತ್ವದ ಭಾಗವಾಗಿಯೇ ನೋಡುವ ಮಲೆನಾಡಿಗನಾಗಿ ಅವರನ್ನಿಲ್ಲಿ ನೋಡಿದ್ದೇನೆ.
ಅವರ ಕಥೆ ಕಾದಂಬರಿಗಳಲ್ಲೆಲ್ಲ ಬರುವ ಪಾತ್ರಗಳೆಲ್ಲ ನಮ್ಮ ನಡುವೆ ಓಡಾಡುತ್ತಿರುವವರೇ. ಇಲ್ಲಿ ಬರುವ, ಕರಿಯಪ್ಪ, ಬೋಬಣ್ಣ, ಶಾಂತಕುಮಾರ್, ಖಾಸಿಂಸಾಬಿ, ಬಿ.ಎಸ್.ಪಿ. ಹುಡುಗರುಗಳಾಗಲೀ, ಗಾರೆಯವ, ಹಾವುಗೊಲ್ಲರ ಎಂಕ್ಟ, ಚೀಂಕ್ರಮೇಸ್ತ್ರಿಗಳಾಗಲೀ ಇವರೆಲ್ಲರನ್ನೂ ಅವರು ಯಥಾವತ್ತಾಗಿ ನಿಜವ್ಯಕ್ತಿಗಳಾಗಿ ಚಿತ್ರಿಸಿದ್ದಾರೆಂದು ಅರ್ಥವಲ್ಲ. ಅಲ್ಲಿ ಬರುವ ಪಾತ್ರಗಳೆಲ್ಲವೂ ಈ ಜೀವಂತ ವ್ಯಕ್ತಿಗಳನ್ನು ಹೋಲುತ್ತವಷ್ಟೆ. ತೇಜಸ್ವಿಯವರ ಕಥಾಲೋಕದಲ್ಲಿ ಅವರೆಲ್ಲ ಇನ್ನೊಂದು ಆಯಾಮವನ್ನು ಪಡೆದುಕೊಂಡಿದ್ದಾರೆ.
ತೇಜಸ್ವಿಯವರ ಬರಹಗಳು ಅರೆನಗರ ಜೀವನ (ಮೊಫುಸಿಲ್) ಸಂವೇದನೆಗಳನ್ನು ಹೊಂದಿರುವಂತದ್ದಾಗಿದೆಯೆಂದು, ಯು.ಆರ್. ಅನಂತಮೂರ್ತಿವರು ಹೇಳಿದ್ದಾರೆ. ಆದರೆ ಅವರ ಎಲ್ಲ ಬರಹಗಳೂ ಈಗ ಜಾಗತೀಕರಣದ ಪರಿಣಾಮವಾಗಿ ಗ್ರಾಮಾಂತರದ ಎಲ್ಲ ಪ್ರದೇಶಗಳೂ ಕೂಡಾ ಅರೆನಗರ ಪ್ರದೇಶಗಳಾಗಿ ಪರಿವರ್ತಿತವಾಗುತ್ತಿರುವ ಸಂದರ್ಭದ ಕಥಾನಕವೂ ಆಗಿವೆ. ಇಷ್ಟೆಲ್ಲ ಯಾಂತ್ರೀಕರಣದ ನಡುವೆಯೂ ಮೊಬೈಲ್ ಫೋನ್ ಹಿಡಿದು ತಿರುಗುವ, ಬಸವನಕುಣಿಸುವವರು, ರಸ್ತೆಬದಿಯ ಬುಟ್ಟಿಹೆಣೆಯುವವರು ಮುಂತಾದವರಂತೆ, ಇದ್ದಕ್ಕಿದ್ದಂತೆ ರಾತ್ರಿಹೊತ್ತು ಊರಿಗೆಬಂದು ಶಕುನನುಡಿಯವ ಸುಡುಗಾಡುಸಿದ್ಧರಂತೆ. ಅಪರೂಪಕ್ಕೊಮ್ಮೆ ಕಾಣಸಿಗುವ ಗುಬ್ಬಚ್ಚಿ- ನೀರುನಾಯಿಗಳಂತೆ ’ಮಾಯವಾಗದೆ ಉಳಿದುಕೊಂಡಿರುವ ಮಾಯಾಲೋಕದ’ ಕಥಾನಕವೂ ಹೌದು.
ತೇಜಸ್ವಿಯವರ ಸಾಹಿತ್ಯದ ಬಗ್ಗೆ ಇತರರು ಹೇಳಿದಂತೆ ಅಥವಾ ಅವರೇ ಅವರ ಬರಹಗಳಲ್ಲಿ ಉಲ್ಲೇಖಿಸಿರುವ ಹಾಗೆ ಅವರದೊಂದು ವಿಸ್ಮಯದ ಲೋಕ. ನಾವು ಈ ’ವಿಸ್ಮಯ’ ಎಂಬ ಪದವನ್ನು ಭಾರತೀಯ ಸಾಹಿತ್ಯದಲ್ಲಿ ಮುಖ್ಯವಾಗಿ ಬಳಸುವುದು ಮಹಾಭಾರತದ ಬಗ್ಗೆ, ಮಹಾಭಾರತದ ಕಥಾಲೋಕವೂ ವಿಸ್ಮಯದ್ದೇ. ಆ ಬೆರಗಿನ ಲೋಕದೊಳಗೆ ಸೇರಿಕೊಂಡಿರುವ ಉಪಕಥೆಗಳನ್ನಂತೂ ಯಾರು, ಯಾವಾಗ, ಎಲ್ಲಿ, ಮತ್ತು ಹೇಗೆ ಸೇರಿಸಿದರು-ಪ್ರಕ್ಷೇಪಿಸಿದರು ಎನ್ನುವುದೇ ಅಮುಖ್ಯವಾಗುವ ಹಾಗೆ, ಬೆರೆತು. ಮರೆತುಹೋಗುವ ಹಾಗೆ ಸೇರಿಕೊಂಡಿವೆ.
ತೇಜಸ್ವಿಯವರ ಕಥಾಲೋಕಕ್ಕೆ ಎಷ್ಟು ಪಾತ್ರಗಳನ್ನಾದರೂ ಸೇರಿಸಬಹುದು-ಅವರ ವ್ಯಕ್ತಿತ್ವದ ಸುತ್ತ ಆವರಿಸಿಕೊಂಡಿರುವ ಕಥಾಲೋಕಕ್ಕೆ (ಅವರು ಜಲ್ಲಿಗುಡ್ಡೆ ಹತ್ತಿನಿಂತದ್ದು, ಸ್ಕೂಟರಿನ ಹಿಂಬದಿ ಸೀಟನ್ನು ಕಳಚಿಟ್ಟದ್ದು, ಅವರು ಫೋಟೋ ತೆಗೆಯಲೆಂದು ಅಡಗಿ ಕುಳಿತಿದ್ದಲ್ಲಿಗೇ ಬಂದು ಕರೆದವನನ್ನು, ಕೋಲು ಹಿಡಿದು ಅಟ್ಟಾಡಿಸಿದ್ದು ಹೀಗೇ) ಎಷ್ಟು ಉಪಕಥೆಗಳನ್ನಾದರೂ ಸೇರಿಸಬಹುದು, ಯಾವುದನ್ನಾದರೂ ಪ್ರಕ್ಷೇಪಿಸಬಹುದು. ಇದಾವುದರಿಂದಲೂ ಅವರ ಮಾಯಾಲೋಕ ಬದಲಾಗದು.
’ಮುಖ್ಯರ ಮಹಾಭಾರತ ತೆರೆದಿಡುವ ವಿಸ್ಮಯದ ಲೋಕವೊಂದಾದರೆ. ತೇಜಸ್ವಿಯವರು ತೆರೆದಿಟ್ಟಿರುವ ಅಮುಖ್ಯರಾಗಿಯೂ- ಅಮುಖ್ಯರಲ್ಲದವರ ಈ ಆಧುನಿಕ ಭಾರತ ಕಥಾಲೋಕದ ಕೆಲವು ಪಾತ್ರಗಳ ಮೂಲಕವೇ ಅವರನ್ನು ನೋಡಲು ಇಲ್ಲಿ ಪ್ರಯತ್ನಿಸಿದ್ದೇನೆ.
ಕೆ.ವಿ.ಸುಬ್ಬಣ್ಣನವರು ಕುವೆಂಪುರವರ ಬಗ್ಗೆ ಹೇಳುತ್ತಾ ’ಅವರ ಸಾಹಿತ್ಯಕ್ಕಿಂತ ಹೆಚ್ಚಾಗಿ ನಾವರಿಯದ ಒಂದು ಅಗೋಚರ ಸ್ಥರದಲ್ಲಿ ಅವರು, ಇಡೀ ಕರ್ನಾಟಕದ ಸಮಸ್ತ ಜನರರೊಂದಿಗೆ ಸಂವಾದಿಸುತ್ತಾ ಸಾಹಿತ್ಯವನ್ನೇ ಓದದವರ ಮೇಲೂ ಅತ್ಯಂತ ಸೂಕ್ಷವಾದ ಪ್ರಭಾವ ಬೀರಿ ಅವರನ್ನು ರೂಪಿಸುತ್ತಿದ್ದರು’ಎಂದಿದ್ದಾರೆ.
ತೇಜಸ್ವಿಯವರು ಕಥೆಗಾರರಾಗಿ ನೀಡಿದ ಮಾಯಾಲೋಕಕ್ಕಿಂತಲೂ, ವ್ಯಕ್ತಿಯಾಗಿ ನಿರ್ಮಿಸಿದ ಯಾರೂ ಅಮುಖ್ಯರಲ್ಲದ ಮಾಯಾಲೋಕ ಹಿರಿದಾದದ್ದು ಎಂದು ನನ್ನ ಅನಿಸಿಕೆ.
ತೇಜಸ್ವಿಯವರಿಂದು ನಮ್ಮೊಡನಿಲ್ಲ. ಎಪ್ಪತ್ತು ವರ್ಷ ಅಂಥ ವಯಸ್ಸೂ ಅಲ್ಲ. ತೇಜಸ್ವಿ, ಕೆ.ವಿ.ಸುಬ್ಬಣ್ಣ, ಲಂಕೇಶ್ ಅಂಥವರಿದ್ದಾಗ ನಮ್ಮ ಸುತ್ತಲಿನ ಆಗುಹೋಗುಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದ ರೀತಿಯೇ ಅರೋಗ್ಯಪೂರ್ಣ ಮನಸ್ಸುಗಳು ಯೋಚಿಸಬೇಕಾದ ದಿಕ್ಕನ್ನು ಸೂಚಿಸುವಂತಿರುತ್ತಿತ್ತು. ಈಗ ಆ ಜವಾಬ್ದಾರಿಯನ್ನು ನಮಗೆ ನಾವೇ ವಹಿಸಿಕೊಳ್ಳಬೇಕಾಗಿದೆ.
ನಮ್ಮ ನಡುವಿನ ತೇಜಸ್ವಿ
ಎಪ್ಪತ್ತರ ದಶಕದ ಪ್ರಾರಂಭದ ವರ್ಷಗಳು, ನಾನು ಪಿ.ಯು. ವಿದ್ಯಾರ್ಥಿಯಾಗಿದ್ದೆ. ರಜೆಯಲ್ಲಿ, ನಮ್ಮೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯಿಂದ, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಸಮೀಪದಲ್ಲಿರುವ ಬಂಧುಗಳ ಮನೆಗೆ ಹೋದವನು, ಸುಳ್ಯದ ಬಸ್ ನಿಲ್ದಾಣದಲ್ಲಿ ಸುಬ್ರಹ್ಮಣ್ಯದತ್ತ ಹೋಗುವ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ನಿಲ್ದಾಣದಲ್ಲಿ ಒಬ್ಬರು ವ್ಯಕ್ತಿ ನನ್ನ ಗಮನ ಸೆಳೆದರು. ಕಪ್ಪು ಬಣ್ಣದ ಮೂಲಂಗಿ ಪ್ಯಾಂಟು, ಬಿಳಿ ಬಣ್ಣದ ಚೌಕುಳಿಗಳಿದ್ದ ಅಂಗಿ, ಮೀಸೆಯನ್ನು ಸೇರಿದಂತೆ ಬಾಯಿಯನ್ನು ಸುತ್ತುವರಿದ ಉರುಟಾದ ಗಡ್ಡ, ಕೈಯಲ್ಲೊಂದು ವಿಚಿತ್ರ ಆಕಾರದ ಚೀಲ. ಇವರು ದಕ್ಷಿಣ ಕನ್ನಡ ಜಿಲ್ಲೆಯವರಲ್ಲವೆಂದು ಮೇಲ್ನೋಟಕ್ಕೇ ತಿಳಿಯುವಂತಿತ್ತು.
ನಾನು ನೋಡುತ್ತಿದ್ದಂತೆಯೇ ಒಬ್ಬೊರಾಗಿ ಹಲವು ಜನ ಅವರ ಸುತ್ತ ಸೇರತೊಡಗಿದರು. ಕೆಲವರು ಅವರನ್ನು ಮಾತಾಡಿಸುತ್ತಿದ್ದರು. ಏಳೆಂಟು ಜನರು ಸೇರುತ್ತಿದ್ದಂತೆಯೇ ಅವರ‍್ಯಾರೋ ಸಿನಿಮಾ ನಟರೆಂದು ನನ್ನ ತಲೆಯಲ್ಲಿ ಸುಳಿದುಹೋಯಿತು. ನಾನು ಈಗಾಗಲೇ ನೋಡಿದ, ಮಾತನಾಡಿಸಿದ ಸಿನಿಮಾನಟರ ಪಟ್ಟಿಗೆ ಇನ್ನೂ ಒಬ್ಬರ ಹೆಸರನ್ನು ಸೇರಿಸಿಕೊಂಡು ಬೀಗುವ ಘನ ಉದ್ದೇಶದಿಂದ, ಅವರಿದ್ದಲ್ಲಿಗೆ ಓಡಿದೆ. ನಾನು ಓಡುತ್ತಿರುವುದನ್ನು ನೋಡಿ ಕುತೂಹಲದಿಂದ ಇನ್ನೂ ಕೆಲವರು ಅಲ್ಲಿಗೆ ಜಮಾಯಿಸಿದರು. ಅಲ್ಲಿದ್ದವರು ಏನು ಮಾತನಾಡುತ್ತಿದ್ದಾರೆಂದು ತಿಳಿಯದೆ, ಅಕ್ಕಪಕ್ಕದವರಲ್ಲಿ ವಿಚಾರಿಸುತ್ತಿದ್ದಂತೆ ಮಡಿಕೇರಿಗೆ ಹೋಗುವ ಬಸ್ ಬಂತು. ಆ ವ್ಯಕ್ತಿ ಬಸ್ ಹತ್ತಿದರು. ಆನಂತರ ಗುಂಪು ಕರಗಿತು. ಅಲ್ಲೇ ಇದ್ದ ಸ್ವಲ್ಪ ಹಿರಿಯರಲ್ಲಿ ಅವರ‍್ಯಾರೆಂದು ಕೇಳಿದೆ. "ಕೆ.ವಿ.ಪುಟ್ಟಪ್ಪನವರ ಮಗ ಇಲ್ಲೇ ನೆಂಟರ ಮನೆಗೆ ಬಂದಿದ್ದರಂತೆ" ಎಂದರು.
ಪ್ರಯಾಣ ಮುಂದುವರೆಸಿ ಜಿ.ಎಸ್. ಉಬರಡ್ಕ ಅವರ ಮನೆ ಸೇರಿದೆ. ಆ ಕಾಲದಲ್ಲಿ, ನಮ್ಮೂರು ಬೆಳ್ಳೇಕೆರೆಯಿಂದ ಸುಳ್ಯದ ನಾರ್ಣಕಜೆಯಲ್ಲಿರುವ ಉಬರಡ್ಕ ಅವರ ಮನೆಯನ್ನು ತಲಪಬೇಕಾದರೆ ಬೆಳಗಿನಿಂದ ಸಂಜೆಯ ತನಕದ ಪ್ರಯಾಣ, ಸ್ನಾನ ಊಟಗಳ ನಂತರ ಜಿ.ಎಸ್.ರೊಂದಿಗೆ ಮಾತನಾಡುತ್ತ (ಅವರಾಗಲೇ ಕವನ-ಲೇಖನಗಳನ್ನು ಬರೆಯುತ್ತಿದ್ದರು). "ಇವತ್ತು ಸುಳ್ಯದ ಬಸ್‌ಸ್ಟಾಂಡಿನಲ್ಲಿ ಕುವೆಂಪು ಅವರ ಮಗ ಇದ್ದರು. ಹಲವಾರು ಜನರು ಅವರ ಸುತ್ತ ಸೇರಿದ್ದರು. ನಾನು ಅವರನ್ನು ನೋಡಿ ಯಾರೋ ಸಿನಿಮಾನಟರು ಅಂದುಕೊಂಡೆ" ಎಂದೆ. ಅದಕ್ಕವರು "ಹೋ ತೇಜಸ್ವಿ, ಸಿನಿಮಾ ನಟರಿಗಿಂತ ಹೆಚ್ಚು, ಒಳ್ಳೆಯ ಕಥೆಗಾರ ಈಗ ನಿಮ್ಮೂರಿನ ಹತ್ರವೇ ಇದ್ದಾರೆ" ಎಂದರು. ಸ್ವಲ್ಪ ಹೊತ್ತಿನಲ್ಲಿ ತೇಜಸ್ವಿಯವರ ’ಅಬಚೂರಿನ ಪೋಸ್ಟಾಫೀಸು’ ಪುಸ್ತಕವನ್ನು ತಂದು "ಇಕೊ ಅವರನ್ನು ನೋಡಿಯಾಯ್ತಲ್ಲ, ಈಗ ಓದಿ ನೋಡು" ಎಂದು ಕೊಟ್ಟರು.
ಹೀಗೆ ನನಗೆ ತೇಜಸ್ವಿಯವರ ಪ್ರಥಮ ದರ್ಶನವಾಯಿತು. ಅವರಾಗಲೇ ಮೈಸೂರನ್ನು ಬಿಟ್ಟು ಮೂಡಿಗೆರೆಯ ಬಳಿ ’ಚಿತ್ರಕೂಟ’ದಲ್ಲಿ ಬಂದು ನೆಲೆಸಿದ್ದರು. ಅಬಚೂರಿನ ಪೋಸ್ಟಾಫೀಸು ಓದಿದೆ. ನಮ್ಮದೇ ಪರಿಸರದ ಕಥೆಯಾದ್ದರಿಂದ ಅರ್ಥವಾಗದಿದ್ದರೂ ಖುಷಿಯಾಯಿತು. ಊರಿಗೆ ಹಿಂದಿರುಗುವಾಗ ಜಿ.ಎಸ್.ರಲ್ಲಿ ಲಭ್ಯವಿದ್ದ ತೇಜಸ್ವಿಯವರ ಇನ್ನೂ ಕೆಲವು ಪುಸ್ತಕಗಳನ್ನು ಹಿಡಿದುಕೊಂಡು ಬಂದೆ. ಆಗ ’ಕುಬಿ ಮತ್ತು ಇಯಾಲ’, ’ಡೇರ್ ಡೆವಿಲ್ ಮುಸ್ತಾಫ’, ’ತುಕ್ಕೋಜಿ’ ಮುಂತಾದ ಕಥೆಗಳನ್ನು ಮನೆಯವರೆಲ್ಲ ಓದಿದೆವು.
ಆ ಕಾಲದಲ್ಲಿ ಸಾಮಾನ್ಯವಾಗಿ ಯಾವುದೇ ಹಳ್ಳಿಯ ಪೋಸ್ಟಾಫೀಸುಗಳಲ್ಲಿ ವಿತರಣೆಗೆ ಬರುವ ಪೋಸ್ಟ್ ಮಾಸ್ಟರ್, ಪೋಸ್ಟ್‌ಮ್ಯಾನ್, ಮತ್ತಿತರ ಎಲ್ಲ ಸಿಬ್ಬಂದಿಯವರಿಂದ ದಿನಪತ್ರಿಕೆಗಳಂತೆ ಓದಿಸಿಕೊಂಡು ವಿಳಾಸದಾರರಿಗೆ ತಲಪುತ್ತಿದ್ದುದು, ಎಲ್ಲರಿಗೂ ತಿಳಿದಿದ್ದ ಸಾಮಾನ್ಯ ಸಂಗತಿಯಾಗಿತ್ತು. ಇದು ಹಳ್ಳಿಯಲ್ಲಿದ್ದ ನಮಗೂ ತಿಳಿದೇ ಇದ್ದುದರಿಂದ, ನಾನು ಮತ್ತು ನನ್ನಕ್ಕ ’ಅಬಚೂರಿನ ಪೋಸ್ಟಾಫೀಸು’ ಓದಿದ ನಂತರ
ಯಾವುದೇ ಹಳ್ಳಿಯ ಪೋಸ್ಟಾಫೀಸನ್ನು ಕಂಡರೂ ’ಬೋಬಣ್ಣನ ಮನೆ’ ಎನ್ನುತ್ತಿದ್ದೆವು. ತೇಜಸ್ವಿಯವರ ’ಚಿತ್ರಕೂಟ’
ಮೂಡಿಗೆರೆಯ ಬಳಿಯ ಜನ್ನಾಪುರದ ಪಕ್ಕದ
ಚಂದ್ರಾಪುರ ಎಂಬ ಹಳ್ಳಿಯಲ್ಲಿತ್ತು. ಜನ್ನಾಪುರಕ್ಕೆ ಸಮೀಪದಲ್ಲೇ ಎರಡು ಕಿಲೋಮೀಟರ್ ದೂರದಲ್ಲಿ ಗೋಣೀಬೀಡು ಎಂಬ ಊರು ಇದೆ. ಇದು ತೇಜಸ್ವಿಯವರ ಹಲವು ಕಥೆಗಳಲ್ಲಿ ಬರುವ ಊರು. (ಈ ಊರಿನಲ್ಲಿ ಯು.ಆರ್. ಅನಂತಮೂರ್ತಿಯವರು ಬಾಲ್ಯದಲ್ಲಿ ಶಾಲೆಗೆ ಹೋಗಿದ್ದರಂತೆ, ಅನಂತಮೂರ್ತಿಯವರ ಅಜ್ಜ ಈ ಗೋಣಿಬೀಡಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದರಂತೆ). ತೇಜಸ್ವಿಯವರ ಹತ್ತು ಹಲವು ಹವ್ಯಾಸಗಳಿಂದಾಗಿ ಮೂಡಿಗರೆಯ ಸುತ್ತಮುತ್ತಲ ಊರುಗಳಲ್ಲಿ ಹುಚ್ಚು ಹವ್ಯಾಸಿಯೆಂಬ ಖ್ಯಾತಿಯನ್ನು ಆಗಿನ್ನೂ ಗಳಿಸುತ್ತಿದ್ದರಷ್ಟೆ. ಜನರು ಕುತೂಹಲದಿಂದ ಅಲ್ಲಲ್ಲಿ ಅವರ ಬಗ್ಗೆ ಮತ್ತು ಅವರ ಹಲವು ಹವ್ಯಾಸಗಳ ಬಗ್ಗೆ ಮಾತನಾಡುವುದು ಕೇಳಿಬರುತ್ತಿತ್ತು.
ನಾನು ಆಗ ತಾನೇ ಕಾಲೇಜು ಶಿಕ್ಷಣ ಮುಗಿಸಿ ಊರಿಗೆ ಬಂದಿದ್ದೆ. ಬೆಳ್ಳೇಕೆರೆಯ ಸುತ್ತಮುತ್ತ ನಾವೊಂದಷ್ಟು ಜನ ಗೆಳೆಯರು, ರಾತ್ರಿಶಾಲೆ ನಡೆಸುತ್ತಾ, ಜನಸಂಘಟನೆಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದ್ದೆವು. ಆ ಸಂದರ್ಭದಲ್ಲಿ ನಾನು ವಿದ್ಯೆ ಕಲಿತ ಹಾನುಬಾಳು ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ತೇಜಸ್ವಿಯವರು ಆಹ್ವಾನಿತರಾಗಿ ಬರಲಿದ್ದಾರೆಂದು ತಿಳಿಯಿತು. ಹಾನುಬಾಳು, ಮೂಡಿಗೆರೆಗೂ ನಮ್ಮೂರು ಬೆಳ್ಳೇಕೆರೆಗೂ ಮಧ್ಯದಲ್ಲಿರುವ ಹೋಬಳಿ ಕೇಂದ್ರ ಸ್ಥಳ. ಆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನೂ ಸೇರಿದಂತೆ ನಮ್ಮಲ್ಲಿ ಕೆಲವರ ಸವಾರಿ ಹಾನುಬಾಳಿಗೆ ಹೋಯಿತು. ಅಂದು ತೇಜಸ್ವಿಯವರು ಸಾಹಿತ್ಯ, ಸಾಮಾಜಿಕತೆ, ಇತ್ಯಾದಿಗಳ ಬಗ್ಗೆ ಮಾತಾಡಿದಂತೆ ನೆನಪು. ಆ ವೇಳೆಗಾಗಲೇ ಕರ್ನಾಟಕದಾದ್ಯಂತ ಸಾಹಿತ್ಯವಲಯದಲ್ಲಿ ’ಬ್ರಾಹ್ಮಣ-ಶೂದ್ರ ಚರ್ಚೆ ಜೋರಾಗಿ ನಡೆದಿತ್ತು. ಸಭೆಯಲ್ಲಿದ್ದವರೊಬ್ಬರು ಕುವೆಂಪುರವರ ಸಾಹಿತ್ಯದ ಬಗ್ಗೆ ಕೇಳಿದ ಪ್ರಶ್ನೆ ತೇಜಸ್ವಿಯವರನ್ನು ಸಿಟ್ಟಿಗೆಬ್ಬಿಸಿತು. "ಸಂಸ್ಕೃತ ಜ್ಞಾನವಿಲ್ಲದವರೊಬ್ಬರು ರಾಮಾಯಣ ಬರೆಯೋಕೆ ಹೇಗೆ ಸಾಧ್ಯ ಅಂತೇನೋ ಅವರು ಕೇಳಿದ್ದರು. ಅದಕ್ಕೆ ಉತ್ತರಿಸುತ್ತಾ ಅವರು "ಹೌದ್ರಿ ಶೂದ್ರನೊಬ್ಬ ಸಾಹಿತಿಯಾಗೋದಿರ‍್ಲಿ ಸ್ವಲ್ಪ ಬುದ್ಧಿವಂತ ಅನ್ನಿಸಿಕೊಂಡ್ರೂ ಅವನ ಹುಟ್ಟಿನ ಬಗ್ಗೆ ಅನುಮಾನಪಡೋ ಸಮಾಜ ನಮ್ಮದು, ಹಾಗಾದರೆ ಮೇಲ್ಜಾತಿಯಲ್ಲಿ ಹುಟ್ಟಿದ ದಡ್ಡರ ಬಗ್ಗೆ ಏನನ್ಬೇಕು" ಎಂದು ಗುಡುಗಿದರು. ಆಗ ತಾನೇ ಜೆ.ಪಿ.ಯವರ ಸಂಪೂರ್ಣ ಕ್ರಾಂತಿ, ಹಾಗೂ ಎಡಪಂಥೀಯ ಧೋರಣೆಗಳ ಹುಮ್ಮಸ್ಸಿನಲ್ಲಿದ್ದ ನಮಗೆಲ್ಲ ಅವರ ಮಾತನ್ನು ಕೇಳಿ, ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸಿಕ್ಕಿದ ಸಂತೋಷವಾಯಿತು. ಆದರೆ ಸಭೆಗೆ ಬಂದಿದ್ದ ಅನೇಕ ಹಿರಿಯರಿಗೆ ತೇಜಸ್ವಿಯವರ ಆ ಮಾತು ಇಷ್ಟವಾಗಲಿಲ್ಲವೆಂದು ನಮಗೆ ನಂತರ ತಿಳಿಯಿತು. "ಏನಾದ್ರೂ ಪುಟ್ಟಪ್ಪನ ಮಗ ಹಂಗ್ ಮಾತಾಡ್ಬಾರ‍್ದಾಗಿತ್ತು" ಎಂದು ಕೆಲವರು ಹೇಳುವುದು ಕೇಳಿಸಿತು.
ಅವರು ಸಾಹಿತ್ಯ, ಸಾಮಾಜಿಕತೆ, ನಮ್ಮ ಪರಿಸರ ಅಂತೆಲ್ಲ ಮಾತಾಡಿದ್ದು ನನ್ನ ತಲೆಯಲ್ಲಿ ಸುತ್ತುತ್ತಲೇ ಇತ್ತು. ಅವರ ಕೆಲವು ಕಥೆಗಳನ್ನೂ ಓದಿಕೊಂಡಿದ್ದೆ. ಆದ್ದರಿಂದ ನಮ್ಮ ಪರಿಸರ ಯಾರು ಬೇಕಾದರೂ ಕಥೆಬರೆಯಲು ಬಹಳ ಸೂಕ್ತವಾದ ಸ್ಥಳ ಎಂಬ ತೀರ್ಮಾನಕ್ಕೆ ಬಂದೆ. ಕಥೆಯೊಂದನ್ನು ಬರೆದು ಸುಧಾ ವಾರಪತ್ರಿಕೆಗೆ ಕಳುಹಿಸಿದೆ. ಅದು ಪ್ರಕಟವಾಗಿಯೇ ಬಿಟ್ಟಿತು.
ಕಥೆಯಲ್ಲಿ ನಮ್ಮೂರಿನ ಕೆಲವರನ್ನು ನನಗೆ ತಿಳಿದ ಮಟ್ಟಿಗೆ ಯಥಾವತ್ತಾಗಿ ಚಿತ್ರಿಸಿದ್ದೆ. ಯಾರ ಮೂಲಕವೋ ಅವರಿಗೆಲ್ಲ ಆ ವಿಚಾರ ತಿಳಿದು ಅದು ಊರಲ್ಲಿ ಗುಸುಗುಸು ಸುದ್ದಿಯಾಯಿತು. ಕುತೂಹಲದಿಂದ ಪತ್ರಿಕೆ ತರಿಸಿಕೊಂಡು ಓದಿದ ಕೆಲವರು "ಪಾಪ ರೈಟ್ರು (ನಮ್ಮಪ್ಪ ಕಾಫಿ ತೋಟವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು) ಕಷ್ಟಪಟ್ಟು ಮಗನಿಗೆ ವಿದ್ಯೆ ಕಲಿಸಿದರೆ ಇವನು ಹೀಗಾದನಲ್ಲ ಎಂದು ನಮ್ಮಪ್ಪನ ಬಗ್ಗೆ ಮರುಕ ತೋರಿದರು!. ಆ ಕಾಲದಲ್ಲಿ ಕಥೆ, ಸಾಹಿತ್ಯ, ನಾಟಕ ಇತ್ಯಾದಿಗಳ ಹುಚ್ಚು ಹತ್ತಿಸಿಕೊಂಡವರು ಕೆಲಸಕ್ಕೆ ಬಾರದ ನಾಲಾಯಕ್ ಜನರೆಂಬ ಭಾವನೆಯೇ ಹೆಚ್ಚಿನವರಲ್ಲಿ ಇತ್ತು. ನಾನು ಮಾತ್ರ, ನಾನೂ ಒಬ್ಬ ಕಥೆಗಾರ ಎಂದು ನಾನು ಬೀಗುತ್ತ ತಿರುಗಿದೆ.
ತೇಜಸ್ವಿಯವರ ಕಥೆಗಳಂತೆಯೇ ಅವರ ಫೋಟೋಗ್ರಫಿ, ಮೀನುಹಿಡಿಯುವ ಹವ್ಯಾಸಗಳೂ ಪ್ರಚಾರ ಪಡೆಯುತ್ತಿದ್ದಂತೆ, ’ಆಚೆವಾರ ಮದನಾಪುರಕ್ಕೆ ಬಂದಿದ್ರಂತೆ ಮೀನು ಹಿಡಿಯೋಕೆ’, ’ಹೋದವಾರ ಮಾವಿನಹಳ್ಳಿ ಎಣ್ಣೆಹೊಳೇಲಿ(ಹೇಮಾವತಿ ನದಿ) ಮೀನು ಹಿಡೀತಿದ್ದರಂತೆ’, ನಮ್ಮ ಮಾವ ಹೇಳ್ದ. ’ಮೊನ್ನೆ ನಾನೇ ಹೋಗಿದ್ದೆ ’ಅಗನಿ ಬೆಣಗಿನ ಹಳ್ಳದಲ್ಲಿ ಸಕತ್ ಮೀನು ಹಿಡುದ್ರು, ಎಂದು ತೇಜಸ್ವಿಯೆಂದರೆ ವಾರದ ಸಂತೆಗೆ ಬರುವ ಮೀನುವ್ಯಾಪಾರಿಯೆಂಬಂತೆ ವರ್ಣಿಸುವವರು ಹುಟ್ಟಿಕೊಂಡರು. ಹಾಗೇ ’ಹೆಂಗ್ ಮೀನಿಡಿತಾರೆ ಅಂತೀರಿ, ಎಲ್ಲ ಬ್ರಿಟಿಷ್‌ನೋರ ತರನೇ ಮಿಷಿನ್‌ಗಾಣ(ಗಾಳ) ಹಿಡ್ಕೊಂಡ್ ಬಂದಿದ್ರು, ಒಂದೊಂದೇ ಮೀನು ಹಿಡ್ದು ತೂಕ ನೋಡಿ ಸಣ್ಣವುನೆಲ್ಲಾ ವಾಪಸ್ ನೀರಿಗೆ ಬಿಡೋರು, ಅವ್ರಿಗೆ ಯಾವುದು ಬೇಕು ಅದನ್ನ ಮಾತ್ರ ಹಿಡಿಯೋರು, ಅದನ್ನ ನೋಡೋದೆ ಒಂದು ಚಂದ.. ನಂಗೂ ನೋಡಿ .. ನೋಡಿ ಸಾಕಾಯ್ತಪ್ಪ ಎಂದು ರೀಲು ಸುತ್ತುವವರೂ ಇದ್ದರು. ಇವರೆಲ್ಲ ಹೇಳುವ ಜಾಗದಲ್ಲಿ ನಿಜವಾಗಿಯೂ ಮೀನು ಇದೆಯೆ ಅಥವಾ ತೇಜಸ್ವಿಯವರು ಅಲ್ಲಿಗೆ ಬಂದಿದ್ದರೇ ಇಲ್ಲವೇ ಅನ್ನುವುದನ್ನು ಯಾರೂ ವಿಚಾರಿಸುತ್ತಿರಲಿಲ್ಲ. ಎಂಬತ್ತರ ದಶಕದ ಹೊತ್ತಿಗಾಗಲೇ ’ಮೀನು ಹಿಡಿಯುವ ತೇಜಸ್ವಿ ನಮ್ಮೂರ ಸುತ್ತಮುತ್ತ, ಭಾರತದಾದ್ಯಂತ ಸಾವಿರಾರು ಊರುಗಳಲ್ಲಿ ಹೇಳುವ, "ಭೀಮ ಬಕಾಸುರನನ್ನು ಕೊಂದಸ್ಥಳ ಇದೇ" ಎಂದು ರಸವತ್ತಾಗಿ ವರ್ಣಿಸುವ, ಸ್ಥಳಪುರಾಣದಂತೆ ಆಗಿಹೋದರು!.
ಹೀಗಿದ್ದ ಸಂದರ್ಭದಲ್ಲಿ ಮುಂದಿನವಾರ ತೇಜಸ್ವಿಯವರು ಎತ್ತಿನಹಳ್ಳಕ್ಕೆ ಮೀನು ಹಿಡಿಯಲು ಬರುತ್ತಾರೆಂಬ ಸುದ್ದಿ ನಮ್ಮ ಪಕ್ಕದ ಗಾಣದಹೊಳೆಯ ಗೆಳೆಯರಿಂದ ಬಂತು (ಊರಿನ ಹೆಸರು ಮಾತ್ರ ಗಾಣದ ಹೊಳೆ, ಅಲ್ಲಿ ಯಾವುದೇ ಹೊಳೆ ಇಲ್ಲ. ಆ ಊರಿನಲ್ಲಿ ನಾವೊಂದಷ್ಟು ಜನ ಗೆಳೆಯರು ’ಮಿತ್ರ ರೈತ ಯುವಕ ಸಂಘ’ ಎಂಬ ಸಂಘವನ್ನು ಸ್ಥಾಪಿಸಿಕೊಂಡಿದ್ದೆವು). ತೇಜಸ್ವಿಯವರು ಮೀನು ಹಿಡಿಯವ ವೃತ್ತಾಂತ ಆಗಲೇ ಧಾರಾವಾಹಿಯಾಗಿ ನಮ್ಮೂರ ಸುತ್ತ ಸುತ್ತುತ್ತಿದ್ದುದರಿಂದ ಮೀನು ಹಿಡಿಯುವುದನ್ನು ನೋಡಲು ನಾನೂ ಹೊರಟೆ. ಆಗ ಇಂದಿನಂತೆ ಮೊಬೈಲ್‌ಗಳಿರಲಿ ಹಳ್ಳಿಗಳಲ್ಲಿ ಫೋನೇ ಇರಲಿಲ್ಲ. ನಾನು ಸೈಕಲ್ಲೇರಿ ಗಾಣದಹೊಳೆ ತಲಪುವ ವೇಳೆಗೆ ಅವರೆಲ್ಲ ಸೇರಿ ಎತ್ತಿನ ಹಳ್ಳಕ್ಕೆ ಹೊರಟು ಹೋಗಿಯಾಗಿತ್ತು. ಅವರಿವರಲ್ಲಿ ಮೀನು ಹಿಡಿಯಲು ಹೋದವರ ದಿಕ್ಕನ್ನು ವಿಚಾರಿಸುತ್ತಾ ನಾನು ಏಕಾಂಗಿಯಾಗಿ ಐದಾರು ಕಿಲೋಮೀಟರು ಸುತ್ತಾಡಿ ಅವರಿರುವ ಸ್ಥಳವನ್ನು ಪತ್ತೆಮಾಡುವ ವೇಳೆಗೆ ಮಧ್ಯಾಹ್ನವಾಯಿತು. ದಟ್ಟ ಕಾಡಿನ ಮಧ್ಯೆ ಎತ್ತಿನಹಳ್ಳದ ಪುಟ್ಟ ಜಲಪಾತವೊಂದರ ಪಕ್ಕದಲ್ಲಿ ಅವರೆಲ್ಲ ಠಿಕಾಣಿ ಹೂಡಿದ್ದರು. ಕಲ್ಲುಗಳನ್ನು ಜೋಡಿಸಿಟ್ಟು ಮಾಡಿದ ಒಲೆಯಮೇಲೆ ದೊಡ್ಡ ಪಾತ್ರೆಯಲ್ಲಿ ಅನ್ನ ಬೇಯುತ್ತಿತ್ತು. ಅಲ್ಲಿ ಏಳೆಂಟು ಜನರಿದ್ದರು. ತೇಜಸ್ವಿಯವರ ಜೊತೆ ಮೂಡಿಗೆರೆಯಿಂದಲೂ ಒಬ್ಬರು ಬಂದಿದ್ದರು. ಅವರಿಗೆ ಹೆಚ್ಚೇನೂ ಮೀನು ದೊರೆತಂತೆ ಕಾಣಿಸಲಿಲ್ಲ. ತೇಜಸ್ವಿಯವರಾಗಲೇ ಉಳಿದವರಿಗೆ, ಹೊಳೆಯಲ್ಲಿ ಸಿಗುವ ಮೀನುಗಳ ಬಗ್ಗೆ ವಿವರಿಸುತ್ತಿದ್ದರು. ನನಗೆ ಮೀನುಗಳ ಬಗ್ಗೆಯಾಗಲೀ, ಮೀನು ಹಿಡಿಯುವ ಬಗ್ಗೆಯಾಗಲೀ ಏನೂ ಜ್ಞಾನವಿಲ್ಲದ್ದರಿಂದ ಸುಮ್ಮನಿದ್ದೆ. ಅಲ್ಲೇ ಇದ್ದ ನನ್ನ ಗೆಳೆಯನೊಬ್ಬ ತೇಜಸ್ವಿಯವರಿಗೆ ನನ್ನನ್ನು ತೋರಿಸಿ "ಇವ್ನೂ ಕಥೆ ಬರೀತಾನೆ" ಎಂದು ಹೇಳಿದ. ಹೊಳೆಯ ಸದ್ದಿನಲ್ಲಿ ಅವರಿಗೆ ಕೇಳಿಸಿತೋ ಇಲ್ಲವೋ ನನ್ನನ್ನು ನೋಡಿ ನಕ್ಕರು. ಅವರೇನಾದರೂ ಕೇಳಿದರೆ ಏನು ಹೇಳುವುದೆಂದು ತಿಳಿಯದೆ ಮೆಲ್ಲನೆ ಹೊಳೆಯತ್ತ ಜಾರಿಕೊಂಡೆ. ಹೊಳೆಯಲ್ಲಿ ಸಾಕಷ್ಟು ನೀರಿತ್ತು. ಒಂದಿಬ್ಬರು ಈಜುತ್ತಿದ್ದರು. ನಾನೂ ಅವರೊಡನೆ ಸೇರಿ ಈಜತೊಡಗಿದೆ. ದಡದಲ್ಲಿ ತೇಜಸ್ವಿಯವರಿಂದ ಮೀನಿನ ಪಾಠ ಮುಂದುವರಿದಿತ್ತು.
ಊಟಕ್ಕೆ ಕುಳಿತಾಗ ದೊಡ್ಡ ದೊಡ್ಡ ಎಲೆಗಳಲ್ಲಿ ಅನ್ನದ ಗುಡ್ಡೆಯನ್ನು ಪೇರಿಸಿಕೊಂಡು ನಮ್ಮ ಗಾಣದಹೊಳೆಯ ಹುಡುಗರು ಕುಳಿತರು. ಊಟ ಮುಂದುವರಿದಂತೆ ಈ ಅನ್ನದ ಗುಡ್ಡೆಗಳು ಕರಗಿ ಖಾಲಿಯಾಗುತ್ತಿದ್ದ ಪರಿಯನ್ನು ಕಂಡ ತೇಜಸ್ವಿಯವರು "ನಿಮ್ಗೆ ಸಣ್ಣ ಪುಟ್ಟ ಶಿಕಾರಿ ಸಾಕಾಗಲ್ಲ ಕಣ್ರಯ್ಯ ಏನಿದ್ರೂ ಮೂರು ಆನೆ ಹೊಡ್ಕೊಡ್ಬೇಕು ಅಷ್ಟೆ" ಎಂದು ಗಹಗಹಿಸಿ ನಕ್ಕರು.
ನಂತರದ ದಿನಗಳಲ್ಲಿ ಅವರು ಮೀನು ಹಿಡಿಯಲು ಬರುವುದನ್ನು ಕಡಿಮೆಮಾಡಿದರು.
ನಾವು ಹಲವು ಮಂದಿ ಗೆಳೆಯರು ರೈತ ಚಳವಳಿಯಲ್ಲಿ ತೊಡಗಿಕೊಂಡಿದ್ದೆವು. ತಾಲ್ಲೂಕುಕೇಂದ್ರ ಅಥವಾ ಜಿಲ್ಲಾಕೇಂದ್ರಗಳಲ್ಲಿ ರೈತ ಸಂಘ ನಡೆಸುತ್ತಿದ್ದ ಅಭ್ಯಾಸ ಶಿಬಿರಗಳಲ್ಲಿ ಕೆಲವು ಬಾರಿ ತೇಜಸ್ವಿಯವರು ಬಂದು ಮಾತಾಡಿದ್ದುಂಟು. ಆದರೆ ನಮಗ್ಯಾರಿಗೂ ಆಗ ಅವರೊಂದಿಗೆ ಹೆಚ್ಚಿನ ಸಂಪರ್ಕವಾಗಲೀ ಸಲಿಗೆಯಾಗಲೀ ಬೆಳೆಯಲಿಲ್ಲ.
ರೈತಸಂಘದ ಅಭ್ಯಾಸ ಶಿಬಿರಗಳಲ್ಲೂ ಅಷ್ಟೆ ರೈತ ಸಂಘದ ಕಾರ್ಯಕ್ರಮಗಳೂ ಅವರ ವಿಮರ್ಶೆಗೆ ಒಳಗಾಗುತ್ತಿದ್ದವು. ಅದರಲ್ಲೂ ಕಾನೂನುಭಂಗದಂತಹ ಚಳವಳಿಗಳನ್ನು ನೀವು ಕೈಗೆತ್ತಿಕೊಂಡಾಗ ನಿಮ್ಮಲ್ಲಿ ಸ್ಪಷ್ಟತೆ ಮತ್ತು ಸಮರ್ಥ ನಾಯಕತ್ವ ಎರಡೂ ಇಲ್ಲದಿದ್ದರೆ ಖಂಡಿತವಾಗಿಯೂ ಅರಾಜಕತೆಯನ್ನು ಸೃಷ್ಟಿಸುತ್ತೀರಿ, ನಿಮ್ಮ ಉದ್ದೇಶವೂ ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ರೈತ ಸಂಘ ಹಳ್ಳಿಗಳಲಿ, ಸಣ್ಣಪುಟ್ಟ ಜಗಳಗಳ ತೀರ್ಮಾನದಿಂದ ಹಿಡಿದು, ಪ್ರತಿಯೊಂದು ನಿರ್ಧಾರವೂ ಸಂಘದ ನೇತೃತ್ವದಲ್ಲೇ ನಡೆಯುವಂತೆ ಪ್ರಯತ್ನಿಸುತ್ತಿತ್ತು. ಇದರಿಂದ ಕೆಲವು ಕಡೆ ಘರ್ಷಣೆಗಳೂ ಆದವು. ಇನ್ನು ಕೆಲವು ಕಡೆಗಳಲ್ಲಿ ರೈತಸಂಘದ ಹೆಸರಿನಲ್ಲಿ ಕೆಲವರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದರು. ತೇಜಸ್ವಿಯವರು ಅಂದು ಹೇಳಿದ ಮಾತುಗಳು ಮಲೆನಾಡಿನ ಮಟ್ಟಿಗಂತೂ ಬಹಳ ಬೇಗ ನಿಜವಾಗಿಬಿಟ್ಟಿತು.
ಮಲೆನಾಡಿನಲ್ಲಿ ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿರಬಹುದು. ನಮ್ಮೂರಿನಲ್ಲಿದ್ದಂತಹ ಕೆಲವು ರೈತಸಂಘದ ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ - ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತಸಂಘಕ್ಕೆ ಸಿಗದೇ ಹೋಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಅಂದಿನ ಹೆಗಡೆ ಸರ್ಕಾರ ಕೂಡಾ ರೈತಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತಸಂಘದಿಂದ ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಬಯಲು ಸೀಮೆಯಲ್ಲಿ ರೈತ ಸಂಘ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಮುಂದುವರಿದರೂ ಮಲೆನಾಡಿನಲ್ಲಿ ನಾಮಾವಶೇಷವಾಗಿಹೋಯಿತು.
* * *
ತೇಜಸ್ವಿಯವರು ಈ ದಾರಿಯಲ್ಲಿ ಅನೇಕ ಬಾರಿ ಓಡಾಡಿದ್ದರೂ ನಮ್ಮೂರು ಬೆಳ್ಳೇಕೆರೆಗೆ (ಬೆಳ್ಳೇಕೆರೆ ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿ ಹತ್ತು ಕಿ.ಮೀ. ದೂರದಲ್ಲಿರುವ ಹಳ್ಳಿ) ಕಾರ್ಯಕ್ರಮವೊಂದಕ್ಕೆ ಪ್ರಥಮಬಾರಿಗೆ ಬಂದದ್ದು ೧೯೮೮ ರಲ್ಲಿ. ಆ ವೇಳೆಗಾಗಲೇ ಅವರು ’ಚಿತ್ರಕೂಟ’ವನ್ನು ಬಿಟ್ಟು ಮೂಡಿಗೆರೆ ಹ್ಯಾಂಡ್‌ಫೋಸ್ಟ್ ಹತ್ತಿರದ ’ನಿರುತ್ತರ’ದಲ್ಲಿ ನೆಲೆಸಿದ್ದರು. ನಮ್ಮ ಗೆಳೆಯರ ಬಳಗ ಆ ವೇಳೆಗಾಗಲೇ ಸುಮಾರು ಹತ್ತುವರ್ಷಗಳಿಂದ ಹಲವು ಚಳುವಳಿಗಳು, ಹೋರಾಟಗಳು, ಮತ್ತು ಕೆಲವು ವರ್ಷಗಳ ರಂಗ ಚಟುವಟಿಕೆಗಳನ್ನು ನಡೆಸಿದ್ದೆವಾದರೂ, ಆಗಷ್ಟೇ ಪ್ರಥಮ ಬಾರಿಗೆ ಒಂದು ರಂಗ ತರಬೇತಿ ಶಿಬಿರವನ್ನು ನಡೆಸುವ ಯೋಜನೆ ಹಾಕಿದ್ದೆವು. ಶಿಬಿರದ ನಿರ್ದೇಶಕರಾಗಿ ಮಂಡ್ಯ ರಮೇಶ್ ಮತ್ತು ಈಗ ರಂಗಾಯಣದಲ್ಲಿ ನಟರಾಗಿರುವ ಕೃಷ್ಣಕುಮಾರ್ ನಾರ್ಣಕಜೆ ಬರುವವರಿದ್ದರು. ಶಿಬಿರದ ಉದ್ಘಾಟನೆಗೆ ತೇಜಸ್ವಿಯವರನ್ನು ಆಹ್ವಾನಿಸುವುದೆಂದು ತೀರ್ಮಾನವಾಯ್ತು. ಆದರೆ ನಮಗ್ಯಾರಿಗೂ ಅವರಲ್ಲಿ ನೇರವಾಗಿ ಮಾತನಾಡಿ ಆಹ್ವಾನಿಸುವಷ್ಟು ಪರಿಚಯ-ಧೈರ್ಯ ಎರಡೂ ಇರಲಿಲ್ಲ. ಆದ್ದರಿಂದ ತೇಜಸ್ವಿಯವರಿಗೆ ಚೆನ್ನಾಗಿ ಪರಿಚಯವಿರುವ ಮೂಡಿಗೆರೆಯ ರೈತಸಂಘದ ನಮ್ಮ ಗೆಳೆಯರೊಬ್ಬರ ಸಹಾಯವನ್ನು ಕೇಳಿದೆವು.(ನಮ್ಮ ರಂಗತಂಡದ ಹಲವರು ರೈತಸಂಘದಲ್ಲಿದ್ದೆವು.) ಆದರೆ ಆ ಗೆಳೆಯರು
"ತೇಜಸ್ವಿಯವರು ಹೇಳಿದ ಯಾವುದೋ ಕೆಲಸವನ್ನು ಒಪ್ಪಿಕೊಂಡು ಮಾಡದೆ ಈಗ ಅವರ ಎದುರಿಗೆ ಸಿಕ್ಕದೆ ಕದ್ದು ತಿರುಗುತ್ತಿದ್ದೇನೆ ನಾನು ಬರುವುದಿಲ್ಲ ಎಂದರು!.
ಆ ಸಮಯದಲ್ಲಿ ನಮ್ಮ ಬಳಗದ ಗೆಳೆಯ ರಿಚರ‍್ಡ್ ಲೋಬೊ ಬೆಳ್ಳೇಕೆರೆಯಲ್ಲಿ ಮಂಡಲ ಉಪಪ್ರಧಾನರಾಗಿದ್ದರು. ಅವರ ತಂದೆ ಜಾನ್ ಲೋಬೋರವರಿಗೆ ಹಿಂದೆ ಮೂಡಿಗೆರೆಯ ಪಕ್ಕದ ಜನ್ನಾಪುರದಲ್ಲಿ ಕಾಫಿತೋಟವಿದ್ದು ತೇಜಸ್ವಿಯವರ ನೆರೆಯವರಾಗಿದ್ದರು. ಮೂಡಿಗೆರೆಯ ಚರ್ಚಿನ ಪಾದ್ರಿಯೊಬ್ಬರು ಆಗಾಗ ಲೋಬೋರವರ ಮನೆಗೆ ಭೇಟಿ ನೀಡುತ್ತಿದ್ದರಂತೆ. ಆ ಪಾದ್ರಿ ಬಿಳಿಯ ಜುಬ್ಬಾ ಪೈಜಾಮ ಧರಿಸುತ್ತಿದ್ದು ಬರುವಾಗಲೆಲ್ಲ ಮಕ್ಕಳಿಗೆಂದು ಚಾಕಲೇಟ್ ತರುತ್ತಿದ್ದರಂತೆ. ಅವರನ್ನು ಕಂಡೊಡನೆಯೇ ರಿಚರ‍್ಡ್ ಮತ್ತು ಅವರ ಅಣ್ಣ ತಮ್ಮಂದಿರೆಲ್ಲ ಅವರ ಸುತ್ತ ಸೇರುತ್ತಿದ್ದರು.
ಪಕ್ಕದಲ್ಲೇ ತೋಟವನ್ನು ಹೊಂದಿದ್ದ ತೇಜಸ್ವಿಯವರು ಕೂಡಾ ಕೆಲವುಸಾರಿ ಜುಬ್ಬಾ ಪೈಜಾಮ ಧರಿಸುತ್ತಿದ್ದರಂತೆ. ಅದರಿಂದ ತೇಜಸ್ವಿಯವರನ್ನು ’ಇವರೂ ಒಬ್ಬರು ಪಾದ್ರಿಯಿರಬೇಕೆ’ಂದುಕೊಂಡಿದ್ದ ರಿಚರ‍್ಡ್‌ರ ಅಣ್ಣ ತಮ್ಮಂದಿರು (ಆಗ ಇವರೆಲ್ಲ ಶಾಲೆಗೆ ಹೋಗುವ ಹುಡುಗರು)ಚಾಕಲೇಟ್ ಸಿಕ್ಕೀತೆಂಬ ಆಸೆಯಿಂದ
ತೇಜಸ್ವಿಯವರು ಬರುವ ದಾರಿಯಲ್ಲಿ ಕಾದು ನಿಂತು, ಅವರ ಮುಂದೆ ಸುಳಿದಾಡುತ್ತಿದ್ದರಂತೆ!. ಈ ನೆನಪಿನ ಎಳೆಯನ್ನೇ ಹಿಡಿದು ರಿಚರ‍್ಡ್ ಮತ್ತು ನಾನು ಮೂಡಿಗೆರೆಗೆ ತೇಜಸ್ವಿಯವರ ಮನೆಗೆ ಹೋದೆವು. ರಿಚರ‍್ಡ್ ತಮ್ಮ ಪರಿಚಯ ಹೇಳಿಕೊಂಡೊಡನೆ ತೇಜಸ್ವಿಯವರು ಜಾನ್ ಲೋಬೋರವರನ್ನು ನೆನಪಿಸಿಕೊಂಡು ತುಂಬ ಮಾತನಾಡಿದರು ಮನೆಮಂದಿಯ ಬಗ್ಗೆಯೆಲ್ಲ ಮಾತುಕತೆ ಸಾಗಿತು.
ನಾನು ಹೇಗಾದರೂ ಅವರನ್ನು ಮಾತಿಗೆ ಎಳೆಯುವ ಉದ್ದೇಶದಿಂದ ಮಧ್ಯೆ ಬಾಯಿ ಹಾಕಿ "ತೋಟ ಹೇಗಿದೆ ಸಾರ್ ಎಂದೆ.
"ಈಗ ಬರ‍್ತಾ ದಾರೀಲಿ ನೋಡ್ಲಿಲ್ವೇನ್ರಿ, ಗಿಡ ಹಾಕಿ ಎಂಟು ವರ್ಷ ಆಯ್ತು, ಈಗ ನೋಡಿದ್ರೆ ಜಾಡ್ಸಿ ಒದ್ದು ಬಿಡಬೇಕು ಹಂಗಿದೆ!" ಎಂದರು. ನಾನು ತೆಪ್ಪಗಾದೆ. ಲೋಬೋ ಮಾತು ಮುಂದುವರೆಸಿದರು.
"ನೀವೆಲ್ಲ ಹುಡುಗ್ರು ಬೆಳ್ದಿದ್ದೀರಿ ನಾನು ಗುರುತು ಹಿಡಿಯೋಕ್ಕಾಗಲ್ಲ ಸದ ನೀನು ನೆನಪಿಟ್ಕೊಂಡಿದ್ದೀಯಲ್ಲ! ಮತ್ತೆ ಏನ್ ವಿಷ್ಯ ಎಂದರು. ಲೋಬೋ ನನ್ನತ್ತ ನೋಡಿದರು.
ನಾನು ಮೆಲ್ಲನೆ ನಮ್ಮ ರಂಗತರಬೇತಿ ಶಿಬಿರದ ವಿಚಾರವಾಗಿ ಮುದ್ರಿಸಿಕೊಂಡಿದ್ದ ಸಣ್ಣ ಕರಪತ್ರವೊಂದನ್ನು ಅವರಿಗೆ ಕೊಟ್ಟೆ. ಅದನ್ನು ತೆಗೆದುಕೊಂಡು ಸ್ವಲ್ಪ ಹುಬ್ಬುಗಂಟಿಕ್ಕಿ ನನ್ನನ್ನೇ ನೋಡಿದರು. ನೋಡಿದ ರೀತಿ ಚಂದಾ ವಸೂಲಿಗೆ ಬರುವವರನ್ನು ನೋಡಿದಂತಿತ್ತು. ಕೂಡಲೇ ನಾನು ಗಾಬರಿಯಿಂದ "ಇದೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ ನೀವು ಬರ‍್ಬೇಕು"ಎಂದೆ.
ನಿಧಾನವಾಗಿ ಕರಪತ್ರವನ್ನು ಓದಿದರು. ನಿಧಾನವಾಗಿ ಮುಖಚಹರೆ ಬದಲಾಯಿತು.
"ಈ ಕಾಡಲ್ಲಿ ಕೂತ್ಕೊಂಡು ಇದೆಲ್ಲ ಮಾಡೋಕೆ ನಿಮ್ಗೆ ಹೆಂಗ್ ಹೊಳೀತು ಮಾರಾಯ್ರ, ಎಂದ್ ಹೇಳು ಬರ‍್ತೀನಿ" ಎಂದರು.
"ಸಾರ್ ನೀವು ಬರುವ ವ್ಯವಸ್ಥೆ" ಎಂದೆ ಅವಸರದಿಂದ.
"ಎಂಥದ್ದೂ ಬೇಡ ನನ್ ಸ್ಕೂಟರಿದೆ ಬರ‍್ತೀನಿ"
ಕಾರ್ಯಕ್ರಮದ ದಿನಾಂಕ ಸಮಯವನ್ನೆಲ್ಲ ತಿಳಿಸಿದ ರಿಚರ‍್ಡ್ ತೇಜಸ್ವಿಯವರನ್ನು ಕಾರ್ಯಕ್ರಮದ ದಿನ ರಾತ್ರಿ ಊಟಕ್ಕೆ ಅವರಲ್ಲಿಗೆ ಬರುವಂತೆ ಆಹ್ವಾನಿಸಿದರು. ತೇಜಸ್ವಿಯವರನ್ನು ಒಪ್ಪಿಸಿದ ಖುಷಿಯಲ್ಲಿ ಊರಿಗೆ ಬಂದೆವು. ಉದ್ಘಾಟನಾ ಸಮಾರಂಭದ ಸಿದ್ದತೆಗಳು ನಡೆದವು ಮತ್ತು ಅದಕ್ಕೊಂದು ಕರಪತ್ರವೂ ತಯಾರಾಯಿತು.
೧೯೮೮ ನವೆಂಬರ್ ಒಂದರಂದು-ಕನ್ನಡ ರಾಜ್ಯೋತ್ಸವದ ದಿನ ಸಂಜೆ ಐದು ಗಂಟೆಗೆ ರಂಗ ತರಬೇತಿ ಶಿಬಿರದ ಉದ್ಘಾಟನೆಯಾಗಲಿತ್ತು. ನಮ್ಮ ಗೆಳೆಯರ ಬಳಗವೆಲ್ಲ ಉತ್ಸಾಹದಿಂದ ಸೇರಿತ್ತು. ನಿರ್ದೇಶಕರುಗಳಾದ ಮಂಡ್ಯರಮೇಶ್ ಮತ್ತು ಕೃಷ್ಣಕುಮಾರ್ ಹಿಂದಿನ ದಿನವೇ ಬಂದಿದ್ದರು.
ಸಂಜೆ ವೇಳೆಗೆ ಸಕಲೇಶಪುರದಿಂದ ಬಂದ ಕೆಲವರು ಗೆಳೆಯರು "ನಿಮಗೆ ಅಷ್ಟೂ ಬುದ್ದಿ ಬೇಡ್ವಾ? ಅವರಿಗೆ ಇವತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಇದೆ. ಅವರೇನೋ ಮರ‍್ತು ನಿಮಗೆ ಡೇಟ್ ಕೊಟ್ಟಿದ್ದಾರೆ. ನೀವು ಫೋನ್ ಮಾಡಿ ವಿಚಾರಿಸೋದಲ್ವ?" ಎಂದು ಬೈದರು. ಫೋನ್ ಮಾಡಿ ಕೇಳಲು ಆಗ ನಮ್ಮೂರಲ್ಲಿ ಫೋನೇ ಇರಲಿಲ್ಲ. ದೂರದ ಕೆಲವು ದೊಡ್ಡ ಕಾಫಿ ತೋಟಗಳಲ್ಲಿ ಮಾತ್ರ ಫೋನಿತ್ತು ಅಥವಾ ನಾವೇ ಮೂಡಿಗೆರೆಗೆ ಹೋಗಿ ವಿಚಾರಿಸಬೇಕಿತ್ತು ಆದರೆ ಮೂಡಿಗೆರೆ ಇಲ್ಲಿಂದ ೨೬ ಕಿ ಮೀ ದೂರವಿದೆ.
ತೇಜಸ್ವಿಯವರ ಆಸೆ ಬಿಟ್ಟು ಊರಲ್ಲೇ ಯಾರಾದರೂ ಹಿರಿಯರಿಂದ ಉದ್ಘಾಟನೆ ಮಾಡಿಸುವುದೆಂದು ತೀರ್ಮಾನಿಸಿ ಹಿರಿಯರೊಬ್ಬರನ್ನು ಹುಡುಕಿ ಕಾರ್ಯಕ್ರಮ ಉದ್ಘಾಟನೆಗೆ ಅವರನ್ನು ಒಪ್ಪಿಸಿ ಕರೆತಂದೂ ಆಯ್ತು. ಸಂಜೆ ಐದು ಗಂಟೆಗೆ ಸರಿಯಾಗಿ ತೇಜಸ್ವಿಯವರು ಸ್ಕೂಟರಿನಲ್ಲಿ ಹಾಜರ್! ಜೊತೆಯಲ್ಲಿ ಕೆಂಜಿಗೆ ಪ್ರದೀಪ್ ಕೂಡ ಇದ್ದರು.
"ಸಾರ್ ಬೆಂಗಳೂರಿಗೆ ಹೋಗಲಿಲ್ವೆ?" ಆಶ್ಚರ್ಯ ಮತ್ತು ಸಂತೋಷದಿಂದ ನಾವೆಲ್ಲ ಒಟ್ಟಿಗೆ ಕಿರುಚಿಕೊಂಡೆವು.
"ಯಾರಿಗೆ ಬೇಕು ಮಾರಾಯ್ರ, ಅಲ್ಲಿ ವೇದಿಕೆ ಮೇಲೆ ಕೂರ‍್ಸಿ ವಾಚಾಮಗೋಚರವಾಗಿ ಹೊಗಳೋದು ತಡ್ಕೊಳ್ಳೋಕ್ಕಾಗಲ್ಲ ಇಲ್ಲೇ ಇಷ್ಟ ಆಯ್ತು ಬಂದ್ ಬಿಟ್ಟೆ" ಎಂದರು!
ಶಿಬಿರವನ್ನು ಉದ್ಘಾಟಿಸಿ, ರಂಗಶಿಬಿರದ ಅಗತ್ಯದ ಬಗ್ಗೆ ಹಾಗೂ ಮಲೆನಾಡಿನಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಇರುವ ಕಷ್ಟಗಳ ಬಗ್ಗೆ ಮಾತಾಡಿದರು ಅಂದು ಮಕ್ಕಳಿಂದ ಒಂದು ನಾಟಕ ಪ್ರದರ್ಶನವಿತ್ತು. ನಾಟಕದ ವಸ್ತುವೂ ಕಾಡು, ಪ್ರಾಣಿಗಳು ಮತ್ತು ಪರಿಸರದ ಬಗ್ಗೆಯೇ ಇತ್ತು. ಮಕ್ಕಳ ಅಭಿನಯವನ್ನು ಮೆಚ್ಚಿಕೊಂಡು ಈ ಕೆಲಸ ಮುಂದುವರಿಸಿ ಮಕ್ಕಳಿಗೆ ಆಸಕ್ತಿ ಮೂಡಿಸೋದು ಬಹಳ ಮುಖ್ಯ ಎಂದು ಹೇಳಿ, ನಮ್ಮೆಲ್ಲರ ಬೆನ್ನು ತಟ್ಟಿ ಹೋದರು.
* * *
೨೦೦೮ ರಲ್ಲಿ ಸಕಲೇಶಪುರದ ರೋಟರಿ ಸಂಸ್ಥೆಯ ಆಶ್ರಯದಲ್ಲಿ ’ತೇಜಸ್ವಿ ನೆನಪು’ ಕಾರ್ಯಕ್ರಮವಿತ್ತು. ತೇಜಸ್ವಿಯವರ ಬಗ್ಗೆ ಮಾತನಾಡಲು ವೇದಿಕೆಯಲ್ಲಿ ಪ್ರದೀಪ್ ಕೆಂಜಿಗೆ ಮತ್ತು ನಾನು ಇದ್ದೆವು. ಮೊದಲು ಮಾತನಾಡಿದ ನಾನು ಈ ಮೇಲಿನ ಘಟನೆಯನ್ನು ನೆನಪಿಸಿಕೊಂಡು ತೇಜಸ್ವಿಯವರ ಬಗ್ಗೆ ಮಾತನಾಡಿದೆ. ನಂತರ ಮಾತನಾಡುವಾಗ ಪ್ರದೀಪ್ ಅಂದು ನಡೆದ ಸಂಗತಿಯನ್ನು ಒಂದು ತಿದ್ದುಪಡಿಯೊಂದಿಗೆ ವಿವರಿಸಿದರು. ಆ ದಿನ ನಾವೆಂದುಕೊಂಡಂತೆ ತೇಜಸ್ವಿಯವರು ಸ್ವೀಕರಿಸಬೇಕಾದ್ದು ರಾಜ್ಯೋತ್ಸವ ಪ್ರಶಸ್ತಿ ಅಲ್ಲ. ಅಂದಿನ ಘಟನೆಯನ್ನು ಪ್ರದೀಪ್ ಅವರ ಮಾತಿನಲ್ಲಿ ಕೇಳಿ.
"ಅಂದು ಸಂಜೆ ನಾಲ್ಕರವೇಳೆಗೆ ತೇಜಸ್ವಿಯವರು ’ಬಾ ಇಲ್ಲೇ ಬೆಳ್ಳೇಕೆರೆಗೆ ಹೋಗಿಬರೋಣ, ಒಂದು ರಂಗ ತರಬೇತಿಶಿಬಿರ ಮಾಡ್ತಾ ಇದ್ದಾರೆ’ ಎಂದರು. ಇಬ್ಬರೂ ಅವರ ಸ್ಕೂಟರಿನಲ್ಲೇ ಹೊರಟೆವು. ದಾರಿಯಲ್ಲಿ ಚಿಟ್ಟನಹಳ್ಳದ (ಹಾನುಬಾಳಿನಿಂದೀಚೆ ಅಗಲಟ್ಟಿ ಗ್ರಾಮದಲ್ಲಿ ಚಿಟ್ಟನ ಹಳ್ಳ ಹರಿಯುತ್ತದೆ) ಹತ್ತಿರ ಬರುವಾಗ ಸ್ಕೂಟರ್ ನಿಲ್ಲಿಸಿ ’ಇಲ್ಲಿ ಎಂಥ ಮೀನಿದೆ ನೋಡೋಣ ಬಾ’ ಎಂದು ಹಳ್ಳದ ಹತ್ತಿರ ಹೋದರು. ನಾನು ಅವರ ಹಿಂದೆಯೇ ಹೋದೆ. ಹಳ್ಳದ ಬಳಿ ಪ್ಯಾಂಟಿನ ಜೇಬಿಗೆ ಕೈ ಹಾಕಿ ಏನನ್ನೋ ತೆಗೆದರು. ಅಷ್ಟರಲ್ಲಿ ಒಂದು ಚೀಟಿ ಅವರ ಜೇಬಿನಿಂದ ಜಾರಿ ಕೆಳಗೆ ಬಿತ್ತು. ಹೆಕ್ಕಿ ಕೊಡೋಣವೆಂದು ತೆಗೆದು ನೋಡಿದೆ. ಅದೊಂದು ವಿಮಾನಯಾನದ ಟಿಕೆಟ್ ಅದೂ ದೆಹಲಿಗೆ. ’ನೋಡಿ ಫ್ಲೈಟ್ ಟಿಕೆಟ್ ಎಂದು ಅವರಿಗೆ ಕೊಟ್ಟೆ. ಅದನ್ನೊಮ್ಮೆ ಬಿಡಿಸಿನೋಡಿ ’ಇದರಮನೆ ಹಾಳಾಯ್ತು’ ಎಂದು ಹೊಳೆಗೆಸೆದರು. ಹೊಳೆಯಲ್ಲಿನ ಮೀನುಗಳನ್ನು ನೋಡಿ ಮತ್ತೆ ಬೆಳ್ಳೇಕೆರೆಯತ್ತ ಹೊರಟೆವು.
ಅವರ ತಬರನ ಕಥೆ ಸಿನಿಮಾ ಆಗಿ ಕಥಾ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿತ್ತು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಸರ್ಕಾರ ಕಳಿಸಿದ ವಿಮಾನಯಾನದ ಟಿಕೆಟ್ಟಾಗಿತ್ತು ಅದು." ದೆಹಲಿಗೆ ಹೋಗುವುದನ್ನು ಬಿಟ್ಟು ಅಂದು ಅವರು ಬೆಳ್ಳೇಕೆರೆಗೆ ನಮ್ಮ ರಂಗ ಶಿಬಿರದ ಉದ್ಘಾಟನೆಗಾಗಿ ಬಂದಿದ್ದರು !
* * *
ನಮ್ಮ ರಂಗ ತಂಡದ ನಟಿ ಶೋಭಾ, ತೇಜಸ್ವಿಯವರ ಕಾದಂಬರಿ ’ಕರ್ವಾಲೋ’ ದಲ್ಲಿ ಬರುವ "ಬಿರ್ಯಾನಿ ಕರಿಯಪ್ಪನ ಮಗಳು. ನಮ್ಮೂರಿಗೆ ಅಂಗನವಾಡಿಗೋ ಶಿಶುವಿಹಾರಕ್ಕೋ ಟೀಚರಾಗಿ ಬಂದ ಶೋಭಾ ನಮ್ಮ ರಂಗತಂಡದ ಹಿರಿಯ ನಟ ಉಗ್ಗಪ್ಪನನ್ನು ಮದುವೆಯಾಗಿ ಇಲ್ಲೇ ನೆಲೆಸಿದಳು. ತೇಜಸ್ವಿಯವರು ಜನ್ನಾಪುರದ "ಚಿತ್ರಕೂಟ"ದಲ್ಲಿದ್ದಾಗ ಈ ಕರಿಯಪ್ಪನ ಸಂಸಾರವೆಲ್ಲ ಅವರಲ್ಲಿಗೆ ಕೆಲಸಕ್ಕೆ ಹೋಗುತ್ತಿತ್ತಂತೆ. ಆ ಪರಿಚಯದಿಂದ ಈಕೆ ರಂಗ ಶಿಬಿರದ ಉದ್ಘಾಟನೆಗೆಂದು ಬಂದಿದ್ದ ತೇಜಸ್ವಿಯವರನ್ನು ಮಾತಾಡಿಸಿದಳು.
ಮುಂದೆ ಈ ಶೋಭಾ ಮೂಡಿಗೆರೆಗೆ ಹೋದಾಗ ಕೆಲವುಸಾರಿ ತೇಜಸ್ವಿಯವರ ಮನೆಗೆ ಹೋಗಿ ನಮ್ಮ ರಂಗ ವಾರ್ತೆಗಳನ್ನು ಬಿತ್ತರಿಸತೊಡಗಿದಳು. ಈಕೆಯ ಮೂಲಕ ತೇಜಸ್ವಿಯವರಿಗೆ ನಮ್ಮ ರಂಗ ಚಟುವಟಿಕೆಗಳು, ನಮ್ಮ ಜಗಳಗಳೆಲ್ಲ ವರದಿಯಾಗತೊಡಗಿದವು.
"ಬಿರ್ಯಾನಿ ಕರಿಯಪ್ಪ ಮಾಂಸದಡುಗೆಗೆ ಬಹಳ ಪ್ರಸಿದ್ಧ. ಈತನ ಖ್ಯಾತಿ ನಮ್ಮ ಸಕಲೇಶಪುರ-ಮೂಡಿಗೆರೆ ಮಾತ್ರವಲ್ಲ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನವರೆಗೂ ಹರಡಿದೆ. ೧೯೭೦ ಮತ್ತು ೮೦ರ ದಶಕಗಳಲ್ಲಿ ಯಾವುದೇ ಸಮಾರಂಭದಲ್ಲಿ "ಕರಿಯಪ್ಪ ಗೌಡರ ಅಡಿಗೆ" ಎಂದು ಸುದ್ದಿಯಾದರೆ ಸಾಕು ಊಟಕ್ಕೆ ಹಾಜರಾಗುವವರ ಸಂಖ್ಯೆ ಇಮ್ಮಡಿಯಾಗುತಿತ್ತು! ಈ ಅಡಿಗೆ ಕಲೆ ತಂದೆಯಿಂದ ಮಗಳಿಗೂ ಇಳಿದುಬಂದಿದೆ.
* * *
ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗಿತ್ತು. ಹಾನುಬಾಳು ಕ್ಷೇತ್ರದಿಂದ (ನಮ್ಮ ಬೆಳ್ಳೇಕೆರೆ ಹಾನುಬಾಳು ಹೋಬಳಿಗೆ ಸೇರಿರುವ ಗ್ರಾಮ) ಆ ಬಾರಿ, ಕಾಂಗ್ರೆಸ್‌ಪಕ್ಷದಲ್ಲಿದ್ದ ಅಪ್ಪಣ್ಣ ಎಂಬವರನ್ನು ಕರೆದುತಂದು ಜನತಾದಳದಿಂದ ಅಭ್ಯರ್ಥಿಯಾಗಿ ನಿಲ್ಲಿಸಿದರು. ಜನತಾದಳಕ್ಕೆ ಅನುಕೂಲವಾದ ವಾತಾವರಣ ಕಂಡುಬರುತ್ತಿದ್ದುದರಿಂದ ಆ ಪಕ್ಷದ ಕಾರ್ಯಕರ್ತರು ಎಲ್ಲಾಕಡೆ ಉತ್ಸಾಹದಿಂದ ಓಡಾಡುತ್ತಿದ್ದರು. ನಮ್ಮ ರಂಗ ತಂಡದ ಸದ್ಯರೆಲ್ಲ ಒಟ್ಟಾಗಿ ಚುನಾವಣೆಗೆ ಮುಂಚೆಯೇ ಅಪ್ಪಣ್ಣನವರಲ್ಲಿ "ನೀವು ಗೆದ್ದರೆ ಈ ಬಾರಿ ನಮ್ಮಲ್ಲಿ ನಡೆಯುವ ನೀನಾಸಂ ತಿರುಗಾಟದ ನಾಟಕಗಳಿಗೆ ನೀವು ಪ್ರಾಯೋಜಕರಾಗಬೇಕು" (ನಾಟಕ ಪ್ರದರ್ಶನವೇರ್ಪಡಿಸಲು ಬೇಕಾದ ಹಣಕ್ಕೆ ನಮ್ಮಲ್ಲಿ ಕೊರತೆ ಇತ್ತು) ಎಂಬ ಶರತ್ತಿನೊಡನೆ ಅವರಿಗೆ ಬೆಂಬಲ ಕೊಟ್ಟಿದ್ದೆವು.! ಕಾಂಗ್ರೆಸ್‌ನವರು "ಜನತಾದಳದ ಅಭ್ಯರ್ಥಿ ಕಾಂಗ್ರೆಸ್ ಅಪ್ಪಣ್ಣ" ಎಂದು ಹಾಸ್ಯ ಮಾಡತೊಡಗಿದರು. ಆ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾ ಅಲೆ ಇದ್ದುದರಿಂದ ಅಪ್ಪಣ್ಣ ಚುನಾವಣೆಯಲ್ಲಿ ಗೆದ್ದು ಜಿಲ್ಲಾಪಂಚಾಯತ್ ಸದಸ್ಯರಾದರು.
ನಮ್ಮ ಬಳಗವೆಲ್ಲ ಅಪ್ಪಣ್ಣನವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದುದರಿಂದ, ಚುನಾವಣೆ ಮುಗಿಯುವವರೆಗೆ ನಾವು ಯಾವುದೇ ರಂಗ ಚಟುಚಟಿಕೆಗೆ ಇಳಿಯಲಿಲ್ಲ. ಆದರೆ ’ನೀನಾಸಂ ತಿರುಗಾಟ’ವನ್ನು ನಮ್ಮಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಿದ್ದೆವು. ನಮ್ಮ "ಶರತ್ತಿನ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದಿದ್ದರಾದ್ದರಿಂದ ನಾಟಕಗಳ ಪ್ರಾಯೋಜಕರಾಗಲು ಒಪ್ಪಿಕೊಂಡಿದ್ದರು. ಆದ್ದರಿಂದ ನಾವು ಖರ್ಚುವೆಚ್ಚಗಳ ಬಗೆಗೆ ತಲೆಕೆಡಿಸಿಕೊಳ್ಳದೆ ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರೆ ಸಾಕಾಗಿತ್ತು. ನಾಟಕ ತಂಡದ ವಸತಿಗೆ ನಮ್ಮೂರ ಶಾಲೆಯಿದ್ದರೆ, ಊಟದ ವ್ಯವಸ್ಥೆಗೆ ಮತ್ತು ಅಡಿಗೆಗೆ ಕರಿಯಪ್ಪ ಗೌಡರನ್ನೇ ಕರೆಸಿದ್ದೆವು.
ಆ ವರ್ಷ. ನೀನಾಸಂ ತಿರುಗಾಟ ’ಕನಕಾಗಮನ’, ’ಆಊರು-ಈಊರು’ ಮತ್ತು ’ಕಿರಗೂರಿನ ಗಯ್ಯಾಳಿಗಳು’ ಎಂಬ ಮೂರು ನಾಟಕಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸಿಕೊಂಡಿತ್ತು. ನಾಟಕಗಳಿಗೆ ಪ್ರಾಯೋಜಕರಿದ್ದುದರಿಂದ ಟಿಕೆಟ್ ಇಟ್ಟಿರಲಿಲ್ಲ. ಆಗಷ್ಟೇ ಚುನಾವಣೆಗಳು ಮುಗಿದ ಹುಮ್ಮಸ್ಸಿನಲ್ಲಿ ಇದ್ದುದರಿಂದ ಸುತ್ತಮುತ್ತ ಹಲವು ಊರುಗಳಿಂದ ನಾಟಕ ನೋಡಲು ತುಂಬಾ ಜನ ಬಂದು ಸೇರಿದ್ದರು. ಮೊದಲನೇ ದಿನವೇ ’ಕಿರಗೂರಿನ ಗಯ್ಯಾಳಿಗಳು’ ನಾಟಕ. ಈ ನಾಟಕದಲ್ಲಿ ಕೆಲವು ಮಾತುಗಳು ದಲಿತರನ್ನು ಅವಹೇಳನ ಮಾಡುವಂತೆ ಇದೆ ಎಂದು ಯಾರೋ ಕೆಲವರು ನಮ್ಮೂರಿನ ದಲಿತ ಹುಡುಗರಿಗೆ ಹೇಳಿದ್ದರಂತೆ. ಅದಕ್ಕೆ ತಾಳೆಯಾಗುವಂತೆ ನಾಟಕದ ಪ್ರಥಮಾರ್ಧದಲ್ಲಿ ದಲಿತರನ್ನು ಬೈಯುವ ಒಂದೆರಡು ಮಾತುಗಳೂ ಇವೆ. ಇದನ್ನು ಕೇಳಿದ ತಕ್ಷಣ ಕೆಲವು ಕಿಡಿಗೇಡಿಗಳು ಆ ಬೈಗುಳ ಮಾತುಗಳನ್ನು ಬೇಕೆಂದೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಪುನರುಚ್ಚರಿಸುತ್ತಾ ಕೂತರು. ದಲಿತ ಹುಡುಗರು ರೊಚ್ಚಿಗೆದ್ದರು. ಇನ್ನೇನು ಪ್ರೇಕ್ಷಕರಲ್ಲೇ ಎರಡು ಗುಂಪಾಗಿ ಹೊಡೆದಾಟವಾಗುವ ಲಕ್ಷಣಗಳು ಕಾಣಿಸತೊಡಗಿತು. ಅಷ್ಟರಲ್ಲಿ ನಾಟಕದ ಮಧ್ಯಂತರ ವಿರಾಮ ಬಂತು.
ಆಗ ಕೆಲವರು ದಲಿತ ಹುಡುಗರು "ಈ ನಾಟಕದಿಂದ ನಮಗೆ ಅವಮಾನವಾಗುತ್ತಿದೆ. ಈ ನಾಟಕವನ್ನು ಕೂಡಲೇ ನಿಲ್ಲಿಸಬೇಕೆಂದು" ನಮ್ಮಲ್ಲಿ ಒತ್ತಾಯ ಮಾಡತೊಡಗಿದರು. ಅಲ್ಲೇ ಇದ್ದ ಕೆಲವರು ಮರಿ ರಾಜಕಾರಣಿಗಳಿಗೆ, ನಾಟಕದ ಬಗ್ಗೆ ಏನೇನೂ ಗೊತ್ತಿಲ್ಲದ್ದಿದ್ದರೂ ’ದಲಿತ ವಿರೋಧಿಗಳು’ ಎಂಬ ಹಣೆಪಟ್ಟಿ ತಮಗೂ ಬಂದೀತೆಂಬ ಭಯ ಕಾಡತೊಡಗಿ "ಈ ನಾಟಕ ನಿಲ್ಲಿಸುವುದೇ ಒಳ್ಳೆಯದು, ಸುಮ್ಮನೆ ಗಲಾಟೆ ಯಾಕೆ" ಎಂದೆಲ್ಲ ಹೇಳತೊಡಗಿದರು.
ನಾವೇನಾದರೂ ನಾಟಕವನ್ನು ನಿಲ್ಲಿಸಿದರೆ ದೊಡ್ಡ ರಾದ್ಧಾಂತವೇ ಆಗುತ್ತಿತ್ತು. ನಾಟಕವನ್ನು ನಿಲ್ಲಿಸಿದ ಕೂಡಲೇ ಇತರರು ಗಲಾಟೆ ಮಾಡುವುದಲ್ಲದೆ ದಲಿತರ ಮೇಲೆ ಹೊಡೆದಾಟಕ್ಕೂ ಹೋಗುತ್ತಿದ್ದರು. ಅಲ್ಲದೆ ಮುಂದಿನ ಎರಡು ದಿನಗಳಲ್ಲೂ ನಾಟಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಇದುವರೆಗೆ ನಂಬಿಕೊಂಡು ಬಂದ ಮೌಲ್ಯಗಳನ್ನು ಗಾಳಿಗೆ ತೂರಿದಂತಾಗುವುದಲ್ಲದೆ, ’ನಾಟಕ ದಲಿತ ವಿರೋಧಿಯಾಗಿದೆ’ ಎಂದು ಪ್ರಚಾರವಾಗುತ್ತಿತ್ತು.
ಈ ದಲಿತ ಹುಡುಗರೆಲ್ಲ ನಮ್ಮ ಸುತ್ತಲಿನ ಊರವರೇ. ನಮಗೆಲ್ಲ ಚೆನ್ನಾಗಿ ಪರಿಚಿತರೇ. ಆದರೆ ಯಾರೂ ಹೆಚ್ಚಿನ ವಿದ್ಯಾವಂತರಿರಲಿಲ್ಲ.
ಈ ವೇಳೆಗೆ ನಮ್ಮ ತಾಲ್ಲೂಕಿನಲ್ಲಿ ಬಹುಜನ ಸಮಾಜ ಪಾರ್ಟಿ ಸ್ವಲ್ಪ ಮಟ್ಟಿಗೆ ಪ್ರಚಾರಕ್ಕೆ ಬಂದಿತ್ತು. ಒಂದೆರಡು ಚುನಾವಣೆಗಳಲ್ಲಿ ಬಿ.ಎಸ್.ಪಿ. ಅಭ್ಯರ್ಥಿಗಳು ಸ್ಪರ್ಧಿಸಿಯೂ ಇದ್ದರು. ಈ ಹುಡುಗರಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರೂ ಇದ್ದರು. ನಾವೊಂದೆರಡು ಜನರು ಅವರಲ್ಲಿ ಕೆಲವರನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ಹೇಳಿದೆವು.
"ನಿಮ್ಮಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರಿದ್ದೀರ ಹೌದಲ್ಲ
"ಹ್ಞುಂ"
"ಬಿ.ಎಸ್.ಪಿ. ಪೋಸ್ಟರ್‌ಗಳಲ್ಲಿ ಕುವೆಂಪು ಚಿತ್ರ ಇದೆ ಯಾಕೆ?"
"ಅವರು ವಿಚಾರವಾದಿಗಳು ಅದಕ್ಕೆ"
"ಅಂದರೆ ನೀವು ನಂಬಿದ ತತ್ವಕ್ಕೆ ಹೊಂದಿಕೆಯಾಗುವಂತೆ ಅವರ ವಿಚಾರಗಳು ಇದೆ ಅಲ್ವೆ?"
"ಹೌದು, ಆದ್ರೆ ಅದ್ಕೂ ಇದ್ಕೂ ಏನು ಸಂಬಂಧ?"
"ಅದೇ ಹೇಳ್ತೀವಿ, ಈ ನಾಟಕದ ಕಥೆ ಬರೆದವರು ಯಾರು ಗೊತ್ತಾ?"
"ಅದೇ ಹಾಕಿದ್ದೀರಲ್ಲ- ಹ್ಯಾಂಡ್‌ಬಿಲ್ಲಲ್ಲಿ ತೇಜಸ್ವಿ ಅಂತ"
"ಅವರ‍್ಯಾರು ಗೊತ್ತಾ?"
".............."
"ಹೇಳಿ"
"ಕುವೆಂಪು ಮಗ"
"ಸರಿ ಅವರು ನಿಮ್ಮ ವಿರುದ್ಧ ಇದ್ದಾರಾ?"
". . . . . . . . ."
"ತೇಜಸ್ವಿ ಕೂಡಾ ಕುವೆಂಪು ಅವರಷ್ಟೇ ವಿಚಾರವಾದಿಗಳು, ನಿಮಗೆ ಗೊತ್ತಿರಬೇಕಲ್ಲ?"
".........................."