Sunday, December 5, 2010

ಆಗಿದ್ದೇಕೆ ನಮ್ಮವರು ಹೀಗೆ



ಟಿ.ಎ.ನಾರಾಯಣಗೌಡ




ಎಂಥ ಪ್ರಕೃತಿಯು ನಿನ್ನ ಮಡಿಲ ಸಿರಿಯು ತಾಯೆ, ಧರೆ ಕಂಗೊಳಿಸುತ್ತಿತ್ತು. ಹಸಿರಿನ ಸಿಂಗಾರ ಹೊತ್ತು ನಿಂತಿದ್ದೇ ನೀ ಅಂದು, ಬಗೆದರು ನಿನ್ನ ಒಡಲ ಅಗೆದು ಸಾಗಿಸಿದರು ಹೊನ್ನ ಸಿರಿಯ, ಬರಿದಾಯಿತು ಬಂಗಾರದ ನಿನ್ನ ಒಡಲು, ಶಿಕ್ಷಿಸು ತಾಯೇ ಇಂಥ ಭಕ್ಷಕರ -ಭಕ್ಷಕರ.
ಅಖಂಡ ಕರ್ನಾಟಕ ಕನ್ನಡದ ಕುಲಬಾಂದವರೆ, ಇದು ಕರುನಾಡಿನ ಕಥೆಯೋ? ಇಲ್ಲ ವ್ಯಥೆಯೋ? ಇಲ್ಲಿ ಹೇಳಲೇ ಬೇಕಾಗಿದೆ. ನನ್ನಾಡಿನ ಭಕ್ಷಕರ ಇತಿಹಾಸ ಗಾಥೆಯ! ಸಿರಿಸಂಪತ್ತಿನಿಂದ ತುಂಬಿದ ವಿಜಯನಗರದ ಅರಸರ ಕಾಲದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ರಾಶಿರಾಶಿಯಾಗಿ ಸೇರುಗಳಲ್ಲಿ ಅಳೆಯುತ್ತಿದ್ದ ಭವ್ಯ ಶ್ರೀಮಂತ ಸಾಮ್ರಾಜ್ಯವೊಂದು ಎಷ್ಟೊಂದು ಶ್ರೀಮಂತಿಕೆಯಿಂದ ಪ್ರಜ್ವಲಿಸಿದ ಐತಿಹಾಸಿಕ ಸತ್ಯವೋ ಹಸಿರು ಸಿರಿಯ ನಾಡಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಿರುವ ನಮಗೆ ಅಷ್ಟೇ ಸತ್ಯವಾಗಿ ಗೋಚರಿಸುತ್ತಿದೆ ಈ ಗಣಿಗಾರಿಕೆ.
ಕುವೆಂಪು ಕವಿವಾಣಿ ಹೇಳಿದಂತೆ ಕರ್ನಾಟಕ ಎಂಬುದು ಬರೇ ಹೆಸರೇ? ಈ ಮಣ್ಣಿಗೆ ಶಕ್ತಿಕಣಾ! ತಾಯಿಕಣಾ! ಸಿಡಿಲುಕಣಾ! ಛಲವ ಕೊಲುವ ಚಾಮುಂಡಿಕಣಾ! ಎನ್ನುವ ಕವಿವಾಣಿ ಒಂದು ಕಡೆಯಾದರೆ, ಯಾವ ಸಂಪತ್ತಿಗೂ ಕೊರತೆ ಇಲ್ಲದ ಕನ್ನಡ ನಾಡಲ್ಲಿ ಖನಿಜಸಂಪತ್ತು, ವನಸಂಪತ್ತು, ಜಲಸಂಪತ್ತು, ಪ್ರಕೃತಿ ಸಂಪತ್ತು ಒಳಗೊಂಡ ಅಖಂಡ ಕರ್ನಾಟಕ ಕರಗುತ್ತಿರುವ ದಿನಗಳಲ್ಲಿ ನೊಂದ ಕನ್ನಡಿಗನ ಮುಂದೆ ಮತ್ತೊಂದು ಕವಿ ಕೈಯಾರ ಕಿಯಣ್ಣರೈರವರು ಹೇಳುವಂತೆ ಕನ್ನಡದ ಮನೆಗೆ ಬೆಂಕಿ ಬಿದ್ದಿದೆ ಆರಿಸ ಬನ್ನಿ.
"ನುಡಿಕಾಯೋ, ಗುಡಿಕಾಯೋ, ಗಡಿಕಾಯೋ, ಕಾಯಲಾಗದೆ ಹೋದರೆ ನೀ ಸಾಯೋ" ಎನ್ನೊ ಮಾತುಗಳು ಕವಿವಾಣಿ, ಇಂದು ಕನ್ನಡ ನಾಡಿನ ಮುಂದಿದೆ. ಎಲ್ಲಾ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ವಿಚಾರ ನಿಮ್ಮೆದುರಿಗೆ ತರುತ್ತಿದ್ದೇನೆ.
ಈ ನಾಡಿನ ಲಕ್ಷಾಂತರ ಅನ್ನದಾತ ರೈತರಿಗೆ ಬದುಕುಕಟ್ಟಿಕೊಟ್ಟಿದ್ದ. ತೋಟಗಾರಿಕೆಯನ್ನು ಇಂದು, ನಾಡಿನ ಜೀವಾಳವಾಗಿರುವ ರೈತರಿಂದ ಕಿತ್ತು, ಬಂಡವಾಳಶಾಹಿಗಳ ಕರಾಳಹಸ್ತದ ಪಾಲು ಮಾಡಲಾಗುತ್ತಿದೆ. ಇಂತಹ ತೋಟಗಾರಿಕೆಯನ್ನು ಖಾಸಗೀಕರಣಗೊಳಿಸುವುದಕ್ಕೆ ಬಿಡದೆ, ರಕ್ಷಿಸುವ ಹೊಣೆ ಪ್ರತಿಯೊಬ್ಬ ಕನ್ನಡಿಗನ ಹೆಗಲಿಗಿದೆ.
ನಾಡಿನ ಹಸಿರು ಕ್ರಾಂತಿಯ ರೂವಾರಿ, ತೋಟಗಾರಿಕೆಯ ರತ್ನ ಡಾ||ಎಂ.ಎಚ್.ಮರೀಗೌಡರ ಕನಸಿನ ಕೂಸಾದ ತೋಟಗಾರಿಕೆಯನ್ನು ಪರಕೀಯರ ಪಾಲು ಮಾಡಲು ಹೊರಟಿರುವ ಇಂದಿನ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ. ನನ್ನದು ರೈತ ಸರ್ಕಾರ, ನಾನು ರೈತ ನಾಯಕ ಎಂದು ವಿಧಾನಸೌದದ ಮುಂದೆ ಹಸಿರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಂತಹ ಯಡಿಯೂರಪ್ಪನವರು ತಮ್ಮ ಅಧಿಕಾರವಧಿಯಲ್ಲಿ ರೈತರ ಪಾಲಿಗೆ ಸಂಜೀವಿನಿಯಾಗಿರುವ ತೋಟಗಾರಿಕೆಯನ್ನು ಇಂದು ಖಾಸಗಿ ಕಂಪೆನಿಗಳ ಮಾಲೀಕತ್ವಕ್ಕೆ ನೀಡಲಾಗುತ್ತಿರುವ ಈ ಹುನ್ನಾರದ ಹಿಂದೆ ಕಾಂಚಾಣವು ಕುಣಿಯುತ್ತಿದೆ.
ಸಾವಿರಾರು ಹಣ್ಣಿನ ಸಸಿಗಳು, ಗಿಡಮೂಲಿಕೆ ಸಸಿಗಳು, ಸುಗಂಧ ದ್ರವ್ಯಗಳ ಸಸಿಗಳು, ಅಲಂಕಾರಿಕ ಗಿಡಗಳು, ಉತ್ತಮ ತಳಿಯ ಹಣ್ಣು ತರಕಾರಿ ಬೀಜಗಳನ್ನು ನೀಡುವ ಸಾವಿರಕ್ಕೂ ಹೆಚ್ಚು ಮರಗಿಡಗಳಿರುವ ತೋಟಗಾರಿಕೆ, ರೈತನ ಜೀವನಾಡಿಯಾಗಿದೆ. ಅಂತಹ ರೈತನ ಜೀವಂತ ಸಮಾಧಿಯ ಮೇಲೆ ಬಂಡವಾಳ ಶಾಹಿಗಳು ಮಹಲುಗಳನ್ನು ಕಟ್ಟಿ ಮೆರೆಸುವ ದುಸ್ಸಾಹಸಕ್ಕೆ ಸರ್ಕಾರ ಅಸ್ತು ಎನ್ನುತ್ತಿರುವ ಈ ಸಂದರ್ಭದಲ್ಲಿ ನಾಡಿನ ಕೋಟ್ಯಾಂತರ ಅನ್ನದಾತರ ದುರಂತದ ಕಥನ ಇಲ್ಲಿದೆ.
ನಾಡಿನ ಪ್ರಜ್ಞಾವಂತ, ವಿಚಾರವಂತ ಹೋರಾಟಗಾರರೆ ಎಚ್ಚೆತ್ತು ಬನ್ನಿ! ಭೂತಾಯಿಯ ಮಣ್ಣಿನ ಸುವಾಸನೆ ಬೀರುತ್ತಾ ಹಸಿರುಟ್ಟು ನಿಂತಿರುವ ಸಸ್ಯಕಾಶಿಯಿಂದ ತೋಟಗಾರಿಕೆಯನ್ನು ರಕ್ಷಿಸೋಣ! ನಾಡನ್ನು ಉಳಿಸೋಣ! ರೈತನ ಬದುಕು ಕಟ್ಟಲು ಮುಂದಾಗೋಣ!
"ನಮಗೆ ಬೇಕಾದುದು ಸಿರಿವಂತರ ಮಾಳಿಗೆಯ ಕೃತಕ ಪ್ರದರ್ಶನ ಅಲ್ಲ, ಕಂಗೊಳಿಸುತ್ತಿರುವ ನಾಡಿನ ಪ್ರಕೃತಿಯ ಜೀವಂತ ನಿದರ್ಶನ".
೧೯೬೦ರ ದಶಕದಲ್ಲಿ ಪ್ರಾರಂಭವಾದ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ "ತೋಟಗಾರಿಕೆಯ ರತ್ನ" ಡಾ|| ಎಂ.ಎಚ್.ಮರೀಗೌಡರು ತಮ್ಮ ಅಧಿಕಾರಾವಧಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಮಣ್ಣಿನ ಮಕ್ಕಳನ್ನು, ರಾಜಕಾರಣಿಗಳನ್ನು ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರನ್ನು ಪ್ರೇರೇಪಿಸಿ, ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಯೋಗ್ಯವಾದ ಸಂಯೋಜಿತ ಯೋಜನೆಗಳನ್ನು ರೂಪಿಸಿ, ಈ ಕ್ಷೇತ್ರವನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಿದ್ದರು. ತೋಟಗಾರಿಕೆಯ ದಿಗ್ಗಜ ಎಂಬ ಕೀರ್ತಿ ತೋಟಗಾರಿಕೆ ತಜ್ಞರಾದ ದಿವಂಗತ ಡಾ||ಎಂ.ಎಚ್.ಮರೀಗೌಡರಿಗೆ ಸಲ್ಲುತ್ತದೆ.
ತಾಲ್ಲೂಕು, ಜಿಲ್ಲೆ, ಹೋಬಳಿ, ಪಟ್ಟಣಗಳ ಸಮೀಪದ ಮತ್ತು ಹಳ್ಳಿಗಾಡಿನ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರು ತೋಟಗಾರಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಲು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಒತ್ತು ಕೊಟ್ಟು ರಾಜ್ಯಾದ್ಯಂತ ೩೯೪ ತೋಟಗಾರಿಕೆ ಕ್ಷೇತ್ರವನ್ನು ಅವರ ಅವಧಿಯಲ್ಲೇ ಸ್ಥಾಪಿಸಿದರು. ಅವುಗಳಲ್ಲೊಂದಾದ ದೊಡ್ಡಸಗ್ಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಇಂದಿಗೂ ಡಾ||ಎಂ.ಹೆಚ್ ಮರೀಗೌಡರು ತೋರಿಸಿಕೊಟ್ಟ ದಾರಿಯಲ್ಲೇ ಲಕ್ಷಾಂತರ ಹಣ್ಣಿನ ಸಸಿಗಳನ್ನು ಕಸಿ ಮಾಡಿ, ರೈತರಿಗೆ ಗಿಡಗಳನ್ನು ಯಾವುದೇ ಲಾಭನಷ್ಟವಿಲ್ಲದೇ ವಿತರಿಸಲಾಗುತ್ತಿದೆ. ಇದರ ಅರ್ಥ ಇಲಾಖೆ ನಷ್ಟದಲ್ಲಿದೆ ಎಂದಲ್ಲ ಎನ್ನುವುದನ್ನು ಸರ್ಕಾರ ಮನಗಾಣಬೇಕು.
ಇದೇ ವರ್ಷದ ’ಆಗಸ್ಟ್ ೮ರಂದು ತೋಟಗಾರಿಕೆಯ ದಿನಾಚರಣೆ’ಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಇಲಾಖೆಯು ಎರಡು ಕೋಟಿ ಸಸಿ-ಕಸಿ ಗಿಡಗಳನ್ನು ಉತ್ಪಾದಿಸುತ್ತಿದೆ ಎಂದು ತಿಳಿಸಿದರು. ಇದು ಕಸಿ ಗಿಡಗಳ ಮಾರಾಟದ ಅಂಕಿ ಅಂಶವಾಗಿದೆ. ಅಷ್ಟೇ ಸಂಖ್ಯೆಯ ಸಸಿಗಳನ್ನು ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಹಾಗೂ ಸಣ್ಣ ರೈತರಿಗೆ ಉಚಿತವಾಗಿ ವಿತರಿಸುತ್ತಿದೆ ಎಂದು ತಿಳಿಸಿದರು.
ಇದುವರೆಗೂ ಡಾ||ಎಂ.ಹೆಚ್.ಮರಿಗೌಡರ ಕಾರ್ಯಯೋಜನೆಯನ್ನು, ಎಲ್ಲಾ ಸರ್ಕಾರಗಳು ಅನುಷ್ಠಾನದಲ್ಲಿಟ್ಟುಕೊಂಡೇ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಸರ್ಕಾರವು ಇಲಾಖೆಯನ್ನು ಖಾಸಗೀಕರಣಗೊಳಿಸುವ ನಿಲುವನ್ನು ತಳೆದು ಅವರ ಧ್ಯೇಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.
ದೊಡ್ಡಸಗ್ಗೆರೆ ತೋಟಗಾರಿಕೆ ಇಲಾಖೆಯಲ್ಲಿ ಮಾವಿನ ಸಸಿಗಿಡಗಳನ್ನು ಒಂದಕ್ಕೆ ೨೨ ರೂಗಳಂತೆ ಮಾರಾಟ ಮಾಡುತ್ತಿದೆ. ಮತ್ತು ಇಲ್ಲಿಯ ನರ್ಸರಿಮೆನ್ ಕೋ-ಆಪರೇಟಿವ್ ಸೊಸೈಟಿಯಿಂದ ಆಲ್ಫಾಂಜೋ ಕಸಿ, ಮಾವಿನ ಸಸಿಗೆ ೧೫೦ ರೂ.ನಂತೆ ಮಾರಾಟ ಮಾಡುತ್ತಿದೆ. ಆದರೆ ಖಾಸಗಿಯವರು ಲಾಭವಿಲ್ಲದೆ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಅವರಿಗೆ ಕಾಂಚಾಣದ ಮಹಿಮೆ ಮಾತ್ರ ಗೊತ್ತು. ಅವರು ಸಸಿಯೊಂದಕ್ಕೆ ೧೫೦ ರೂ.ನಿಂದ ೫೦೦ ರೂ.ಗೆ ಮಾರಿದರೆ, ಯಾವ ರೈತ ತಾನೇ ಕೊಂಡ್ಯಾನು? ಕೊಳ್ಳಲು ಬಂದಾನು? ರೈತ ಪರವಾಗಿ ಹುಟ್ಟಿಕೊಂಡ ಈ ಇಲಾಖೆ, ರೈತನ ಬಗ್ಗೆಯೇ ಕಾಳಜಿ ಇಲ್ಲದಂತಾದರೆ ಇನ್ನಾವ ಅಭಿವೃದ್ಧಿ ಕಂಡೀತು. ಅಧಿಕಾರಿಗಳು ಜಾಣಕುರುಡನಿಂದ ನೀಡಿದ ಮಾಹಿತಿಗಳನ್ನು ಅನುಸರಿಸಿ ಸರ್ಕಾರ ದಿನಾಂಕ: ೦೨-೧೧-೨೦೧೦ ಪತ್ರಿಕಾ ಗೋಷ್ಠಿಯಲ್ಲಿ "ಖಾಸಗಿಗೆ ಫಾರಂ ನೀಡಿದರಷ್ಟೇ ಅಭಿವೃದ್ಧಿ" ಎಂದು ತಿಳಿಸಿದುದನ್ನು ನೋಡಿದರೆ ರೈತರ ಎದೆಯ ಮೇಲೆ ನಿಲ್ಲುವ ದುಃಸ್ಸಾಹಸಕ್ಕೆ ಕೈ ಹಾಕಿದಂತೆ ಕಾಣುತ್ತದೆ.
ಧೀಮಂತ ಡಾ||ಎಂ.ಎಚ್.ಮರೀಗೌಡರ ಯೋಜನೆಗಳನ್ನೇ ಆಧರಿಸಿ ಇಲಾಖೆಯು ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕರ್ನಾಟಕವು ತೋಟಗಾರಿಕೆಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು "ತೋಟಗಾರಿಕಾ ರಾಜ್ಯ ಎನ್ನುವ ಹೆಸರು ಉಳಿಸಿಕೊಂಡಿದೆ. "ತೋಟಗಾರಿಕೆ ಎಂದರೆ ಮರೀಗೌಡರು, ಮರೀಗೌಡರು ಎಂದರೆ ತೋಟಗಾರಿಕೆ" ಎಂದು ಸುಖಾ-ಸುಮ್ಮನೆ ಸಭೆ ಸಮಾರಂಭಗಳಲ್ಲಿ ಅವರ ಧ್ಯೇಯಗಳನ್ನು ಹೊಗಳಿದರೆ ಸಾಲದು, ಹಿಂದೆಯೇ ಅವರ ನೀತಿಗಳನ್ನು ಬದಿಗೊತ್ತುವ ಆಷಾಡಭೂತಿತನ ಸಲ್ಲದು. ತೋಟಗಾರಿಕೆಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಹುನ್ನಾರದಿಂದ ಅನ್ನದಾತನಿಗೆ ಅನ್ಯಾಯವಾಗಿ, ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ.
ಸರ್ಕಾರವು ಸೃಷ್ಟಿಸಿಕೊಂಡಿರುವ ಇಂತಹ ಪರಿಸ್ಥಿತಿಯಲ್ಲಿ ದೊಡ್ಡಸಗ್ಗೆರೆ ಡಾ||ಎಂ.ಎಚ್.ಮರೀಗೌಡರ ತೋಟಗಾರಿಕೆ ಕ್ಷೇತ್ರದ ಅಂಕಿ-ಅಂಶಗಳ ಸೂಕ್ಷ್ಮ ಪರಿಚಯ ಕನ್ನಡನಾಡಿನ ಮುಂದಿಡಬೇಕಾಗಿದೆ.
ಆ ಕ್ಷೇತ್ರದ ಒಟ್ಟು ವಿಸ್ತೀರ್ಣ ೧೦೫೯ ಎಕರೆಗಳು, ಅಭಿವೃದ್ಧಿಯಾದ ವಿಸ್ತೀರ್ಣ ೨೬೫ ಎಕರೆ, ಈಗ ಗುತ್ತಿಗೆ ಆಧಾರದ ಮೇಲೆ ನೀಡಲು ಹೊರಟಿರುವ ವಿಸ್ತೀರ್ಣ ೬೫೦ ಎಕರೆ, ಇಲ್ಲಿ ಸಪೋಟ, ಮಾವು, ಹುಣಸೆ, ಹಾಗೂ ಇತರೆ ೭೮೫೬ ಮಣ್ಣಿನ ಮರಗಳು ಪ್ರಸ್ತುತ ಇದೆ. ಭೂಮಿಯನ್ನು ಹೊರತುಪಡಿಸಿ, ಈ ಹಣ್ಣಿನ ಮರಗಳ ಬೆಲೆ ಮೂರು ಕೋಟಿ. ಭೂಮಿಯ ಸದ್ಯದ ಬೆಲೆ ಎಕರೆಗೆ ಎಂಟು ಲಕ್ಷದಂತೆ ನೋಡಿದರೆ ೫೨ ಕೋಟಿ ರೂಪಾಯಿಗಳು ಇದನ್ನು ತಾಳೆ ಮಾಡಿ ನೋಡಿದರೆ ಮುಂದಿನ ಮೂವತ್ತು ವರ್ಷಗಳಲ್ಲಿ ಇದರ ಬೆಲೆ ನೂರರಷ್ಟು ಅಂದರೆ ಎಕರೆಗೆ ಎಂಟು ಕೋಟಿಯಷ್ಟು ಹೆಚ್ಚಾಗಬಹುದು. ಒಟ್ಟು ೫೨೦೦ ಕೋಟಿಯಾಗುತ್ತದೆ. ಆದರೆ ಗುತ್ತಿಗೆದಾರರು ನೀಡುತ್ತಿರುವುದು. ಮೂವತ್ತು ವರ್ಷಕ್ಕೆ ೩೩.೩೦ಲಕ್ಷ, ಒಂದು ವರ್ಷಕ್ಕೆ ತೆಗೆದುಕೊಂಡರೆ ೫೦೭೭ ರೂ ಎಕರೆಗೆ ನೀಡಿದಂತಾಗುತ್ತದೆ.
ಮೂವತ್ತು ವರ್ಷಕ್ಕೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಹಿಂಪಡೆದ ಒಂದೇ ಒಂದು ನಿದರ್ಶನವು ಇಲ್ಲಿ ಇದುವರೆಗೂ ಇಲ್ಲವೇ ಇಲ್ಲ. ಇನ್ನು ಇದೆಲ್ಲಿಯ ಮಾತು? ಖಾಸಗೀಕರಣದ ಹುನ್ನಾರದ ಹಿಂದಿರುವ ತಂತ್ರಗಳು ಗೋಚರಿಸುತ್ತಿದೆ. ತೋಟಗಾರಿಕಾ ಕ್ಷೇತ್ರವು ನಷ್ಟದಲ್ಲಿದೆ ಎಂದು ಕಪೋಲಕಲ್ಪಿತ ಕಾರಣಗಳನ್ನು ನೀಡುತ್ತ ಭಂಡತನದ ಧೈರ್ಯ ಪ್ರದರ್ಶಿಸುವ ಸಾಹಸವನ್ನು ಸರ್ಕಾರ ನಿಲ್ಲಿಸಲಿ, ಇಲ್ಲದಿದ್ದರೆ ಈ ನಾಡಿನ ಬೆನ್ನೆಲುಬಾದ ರೈತನಿಗೆ ಅನ್ಯಾಯವಾಗುವುದನ್ನು ಖಂಡಿಸುತ್ತ, ಕನ್ನಡ ನಾಡಿನ ಮಕ್ಕಳು ಸರ್ಕಾರದ ಈ ನಿರ್ಧಾರಕ್ಕೆ ಕಡಿವಾಣ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಬೇಕಾಗಿದೆ. ಹಾಗೂ ಮತ್ತೊಂದು ಕಡೆ ಬಿ.ಜೆ.ಪಿ. ನೇತೃತ್ವದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ತೋಟಗಾರಿಕಾ ವಿ.ವಿ.ಮಾಡುವ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿರುವ ಪದವೀಧರರ ಗತಿಯೇನು ಹಾಗೂ ಸರ್ಕಾರದ ಸಾವಿರಾರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ನೀಡುವ ಪ್ರಯತ್ನಕ್ಕೆ ನಾಡಿನ ಎಲ್ಲಾ ಭಾಗದ ತೋಟಗಾರಿಕಾ ಕ್ಷೇತ್ರದ ರೈತ ಬಂಧುಗಳು ಹಾಗೂ ರೈತಪರ ಹೋರಾಟಗಾರರು ಮುಂದಾಗಿ ಯಾವುದೇ ಕಾರಣಕ್ಕೂ ಸರ್ಕಾರದ ತೋಟಗಾರಿಕಾ ಕ್ಷೇತ್ರ ಖಾಸಗಿಯವರ ಪಾಲಾಗದಂತೆ ತಡೆಯುವ ಹೋರಾಟಕ್ಕೆ ಮುಂದಾಗಬೇಕುಂಬುದೆ ನಮ್ಮ ಸಂಘಟನೆಯ ಮನವಿ.

No comments:

Post a Comment

ಹಿಂದಿನ ಬರೆಹಗಳು