Saturday, December 11, 2010

ಅಂಥ ನಿಜಲಿಂಗಪ್ಪ ಮತ್ತು ಇಂಥ ಯಡಿಯೂರಪ್ಪ




“ನಾನು ಬಂದೂಕ ಹಿಡಿದಿಲ್ಲವಾದರೂ ಅನೇಕ ರಾಜಕೀಯ ಬಂದೂಕಧಾರಿಗಳಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಿದ್ದೇನೆ. ಕೆಲವೊಮ್ಮೆ ನಾನು ಪರಾಜಯವನ್ನು ಅನುಭವಿಸಿದ್ದೇನೆನ್ನುವುದೂ ನಿಜ, ಆದರೂ ಆ ಬಗ್ಗೆ ನನಗೆ ಸಂಕಟವಿಲ್ಲ. ನನಗೆ ಮುಕ್ತಿ ಬೇಕಿಲ್ಲ. ಈ ದೇಶದಲ್ಲಿ ಮಾತ್ರವಲ್ಲ, ಈ ರಾಜ್ಯದಲ್ಲಿ ಮತ್ತೆ ಮತ್ತೆ ಹುಟ್ಟುವ ಆಸೆ ನನಗಿದೆ. ನನ್ನ ಶಕ್ತಿ ಮೀರಿ ನನ್ನ ಜನರಿಗಾಗಿ ದುಡಿಯುವುದೇ ನನ್ನ ಹಂಬಲ. ನಾನು ಹಣ ಕೂಡಿಹಾಕಿಲ್ಲ. ಮಕ್ಕಳಿಗೂ ಕೊಟ್ಟಿಲ್ಲ. ನಾನು ಮುಖ್ಯಮಂತ್ರಿಯಾದಾಗ ನನ್ನ ಲೆಕ್ಕದಲ್ಲಿ ಕೇವಲ ಏಳು ಸಾವಿರ ರೂಪಾಯಿಗಳಿದ್ದವು. ಬ್ಯಾಂಕಿನಲ್ಲಿರುವ ಹಣ ಮತ್ತು ಆಸ್ತಿ ಸುಖ ಕೊಡಲಾರವೆಂಬುದನ್ನು ನಾನು ಬಲ್ಲೆ. ಮುಪ್ಪಿನಲ್ಲಿ ಜೋಗಿ ಮಠದಲ್ಲಿ ಸಣ್ಣದೊಂದು ಕುಟೀರ ಕಟ್ಟಿಕೊಂಡಿರಬೇಕೆಂದಿದ್ದೆ. ಆ ಬಗ್ಗೆ ಸರ್ಕಾರಕ್ಕೊಂದು ಯೋಜನೆ ಕಳಿಸಿದ್ದೆ. ಅದು ಮಂಜೂರಾಗಿ ಬರಲು ಮೂರು ವರ್ಷ ಹಿಡಿಯಿತು. ಆ ಹೊತ್ತಿಗೆ ನನ್ನ ಉತ್ಸಾಹದ ನೆರೆಯೂ ಇಳಿದಿತ್ತು. ನನ್ನ ಜನರಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದೇನೆಯೇ ಎಂಬ ಶಂಕೆಯೇನೋ ಇದೆ. ಆದರೂ ನಾನು ಪಶ್ಚಾತ್ತಾಪವಿಲ್ಲದೆ ಮೃತ್ಯುದೇವತೆಯನ್ನು ಸ್ವಾಗತಿಸುತ್ತೇನೆ” ಹೀಗೆಂದಿದ್ದವರು ಎಸ್.ನಿಜಲಿಂಗಪ್ಪ. ಅಖಂಡ ಕರ್ನಾಟಕದ ಕನಸು ಕಂಡು ಅದನ್ನು ನನಸು ಮಾಡಿದ ಮಹಾಪುರುಷ ನಿಜಲಿಂಗಪ್ಪನವರು. ರಾಷ್ಟ್ರ ರಾಜಕಾರಣದಲ್ಲಿ ಇಂದಿರಾಗಾಂಧಿಗೆ ಸೆಡ್ಡು ಹೊಡೆದು ನಿಂತವರು. ಇಂದಿರಾ ಅವರ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದವರು. ಎರಡು ಅವಧಿಗಳ ಕಾಲ ಏಕೀಕೃತ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು.
ಒಂದೊಮ್ಮೆ ನಿಜಲಿಂಗಪ್ಪನವರೂ ಭ್ರಷ್ಟರಾಗಿದ್ದರೆ ಇಂದಿರಾಗಾಂಧಿಯವರ ಜತೆಗಿನ ಯುದ್ಧದಲ್ಲೇ ಅವರ ಕೈ ಮೇಲಾಗುತ್ತಿತ್ತೇನೋ? ಆದರೆ ಅವರು ಭ್ರಷ್ಟರಾಗಲಿಲ್ಲ. ಪಾರ್ಟಿ ಫಂಡುಗಳ ಹೆಸರಿನಲ್ಲಿ ಹರಿದು ಬರುವ ಹಣ ಎಂಥದ್ದು ಎಂಬುದನ್ನು ನಿಜಲಿಂಗಪ್ಪನವರು ಸರಿಯಾಗೇ ಗುರುತಿಸಿದ್ದರು. ಹಣ ಕೊಟ್ಟವರು ಅಧಿಕಾರಸ್ಥರಿಂದ ಏನೇನನ್ನು ಬಯಸುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಆ ಕಾರಣಕ್ಕೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗಲೂ ಅವರು ಇಂಥ ಕಪ್ಪು ಹಣವನ್ನು ಸಂಗ್ರಹಿಸುವ ಮನಸ್ಸು ಮಾಡಿರಲಿಲ್ಲ. ಅದೇ ಅವಕಾಶವನ್ನು ಬಳಸಿಕೊಂಡು ತನ್ನ ನಿಷ್ಠರನ್ನು ಬಳಸಿಕೊಂಡು ಇಂದಿರಾಗಾಂಧಿಯವರೇ ಆ ಕೆಲಸ ಮಾಡಿದರು. ನಿಜಲಿಂಗಪ್ಪನವರು ನೇಪಥ್ಯಕ್ಕೆ ಸರಿದರು.
ಎಲ್ಲಿಯ ನಿಜಲಿಂಗಪ್ಪ, ಎಲ್ಲಿಯ ಯಡಿಯೂರಪ್ಪ! ಸಾಯುವಾಗ ಜೋಗಿ ಮಠದಲ್ಲಿ ಸಣ್ಣ ಕುಟೀರದಲ್ಲಿ ಕಳೆಯುತ್ತೇನೆ ಎಂದಿದ್ದ ನಿಜಲಿಂಗಪ್ಪ ಅವರೆಲ್ಲಿ? ತಾನು ತನ್ನ ಮಕ್ಕಳು, ವಂಶಸ್ಥರು ಇನ್ನೂ ಹಲವಾರು ಪೀಳಿಗೆಯವರೆಗೆ ಕುಳಿತು ತಿನ್ನಲು ಆಸ್ತಿ ಸಂಗ್ರಹಿಸುತ್ತಿರುವ ಯಡಿಯೂರಪ್ಪನವರೆಲ್ಲಿ?
ಅಧಿಕಾರದ ಮದ ಜನಪ್ರತಿನಿಧಿಗಳಿಂದ ಏನೇನನ್ನು ಮಾಡಿಸುತ್ತದೆ ಎಂಬುದನ್ನು ನಿಜಲಿಂಗಪ್ಪನವರು ಬಲ್ಲವರಾಗಿದ್ದರು. ಅದಕ್ಕೇ ಅವರು ಹೇಳಿದರು: “ಅಧಿಕಾರಪ್ರಮತ್ತರಾದ ಮಂತ್ರಿಗಳಿಗೆ ನೀತಿ ಮೀಮಾಂಸೆ ಎಂಬುದೇ ಇಲ್ಲ. ಅವರಿಗೆ ಸಮಾಜ ರೂಪಿಸಿದ, ಪರಂಪರೆಯಿಂದ ಬಂದ, ಋಷಿಸಂತ ಸಾಧುಗಳು ಬೋಧಿಸಿದ ನೀತಿ ಸೂತ್ರಗಳು ಬೇಕಿಲ್ಲ. ತಾವೇ ರಚಿಸಿಕೊಂಡ, ತಮ್ಮ ನಡೆನುಡಿಗಳಿಂದ ಹೊರಹೊಮ್ಮಿದ ನೀತಿಸೂತ್ರಗಳೇ ಅವರಿಗೆ ಮೆಚ್ಚು. ತರುಣಿಯರ ಮಾನಭಂಗ ಮಾಡುವುದು ಪೌರುಷದ ಕುರುಹು. ಲಂಚ ಲಪಟಾಯಿಸುವುದು ರಾಜಕೀಯ ಕೌಶಲದ ಚಿಹ್ನೆ. ಶಾಸನಗಳನ್ನು ಅತಿಕ್ರಮಿಸುವುದು ಯಜಮಾನ್ಯದ ಸಂಕೇತ. ಇಂಥವರು ಮತ್ತೆ ಸಾರ್ವಜನಿಕ ಸೇವಾಕ್ಷೇತ್ರಕ್ಕೆ ಮರಳದಂತೆ ಶಾಸನಮಾಡಲೇಬೇಕು, ಶಾಸನ ಮಾಡದಿದ್ದಲ್ಲಿ ಜನರೇ ಕ್ರಮ ಜರುಗಿಸಬೇಕು.”
ಯಡಿಯೂರಪ್ಪನವರು ಹೋರಾಟದ ಮೂಲಕವೇ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದವರು. ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಹಾಗು ಜನತಾ ಪರಿವಾರಕ್ಕೆ ಪ್ರತಿಯಾಗಿ ಬೇರುಮಟ್ಟದಲ್ಲಿ ಕಟ್ಟಿ ಬೆಳೆಸಿದವರಲ್ಲಿ ಒಬ್ಬರು. ಭಾರತೀಯ ಜನತಾ ಪಕ್ಷವೇ ನೀತಿ-ಸಿದ್ಧಾಂತಗಳ ಅಡಿಯಲ್ಲಿ ರೂಪುಗೊಂಡಿದ್ದು. ಹೀಗಾಗಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ರಾಮರಾಜ್ಯವಲ್ಲದಿದ್ದರೂ ಭ್ರಷ್ಟಾಚಾರಮುಕ್ತವಾದ ಸದೃಢ, ಪ್ರಗತಿಪರ ರಾಜ್ಯವಾಗಿ ಕರ್ನಾಟಕ ರೂಪುಗೊಳ್ಳಬಹುದು ಎಂಬ ನಿರೀಕ್ಷೆ ಹಲವರಲ್ಲಿತ್ತು.
ಎಲ್ಲಿಂದ ಎಲ್ಲಿಗೆ ಬಂದು ತಲುಪಿದರು ಯಡಿಯೂರಪ್ಪ? ನಾನು, ನನ್ನ ಮಕ್ಕಳು ಮಾಡಿಕೊಂಡಿರುವ ಭೂಮಿ ಕಾನೂನುಬದ್ಧವಾಗೇ ಪಡೆದುಕೊಂಡಿದ್ದು ಎಂದು ಹೇಳುವ ಮೂಲಕ ಯಡಿಯೂರಪ್ಪ ಯಾವ ಸಂದೇಶ ನೀಡಲು ಹೊರಟಿದ್ದಾರೆ? ಕಾನೂನುಬದ್ಧ ಭ್ರಷ್ಟಾಚಾರ ಎಂಬ ಹೊಸ ನುಡಿಗಟ್ಟನ್ನು ಅವರು ಸೃಷ್ಟಿಸುವ ಮೂಲಕ ತಮ್ಮನ್ನು ತಾವು ರಾಜಕೀಯ ಕೌಶಲದ ನಿಪುಣ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆಯೇ?
ಇವತ್ತು ಯಡಿಯೂರಪ್ಪ ಪರವಾಗಿ ನಿಂತಿರುವವರು ಯಾರು? ಸಾರ್ವಜನಿಕ ಆಸ್ತಿಯನ್ನು ಮಕ್ಕಳಿಗೆ, ಅಳಿಯಂದಿರು, ಸೊಸೆಯರು, ವಂಶಸ್ಥರಿಗೆ ಬೇಕಾಬಿಟ್ಟಿ ಹಂಚಿ ಕೋಟಿಗಟ್ಟಲೆ ಹಣ ಲೂಟಿ ಮಾಡಿದ ಯಡಿಯೂರಪ್ಪನವರನ್ನು ಉಳಿಸಿಕೊಳ್ಳಲೇಬೇಕೆಂದು ನಿಂತವರು ಕೆಲವು ಮಠಾಧೀಶರು. ಯಡಿಯೂರಪ್ಪ ಉಳಿದುಕೊಂಡರೆ ಅವರಿಗೇನು ಲಾಭ? ಯಾಕೆ ಒಂದೇ ಸಮಾಜದ ಮಠಾಧೀಶರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದು ಬೀದಿಗೆ ಬಂದರು?
ಬಸವರಾಜ ಕಟ್ಟೀಮನಿಯವರು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿರುವ ಕೆಲವು ವಿಷಯಗಳನ್ನು ಗಮನಿಸಿ. “ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರು ಲಿಂಗಾಯತರು, ನಮ್ಮವರು, ನಮ್ಮ ಕೆಲಸ ಸುಲಭವಾಗಿ ಆದೀತು ಎಂದೆಲ್ಲ ಆಶೆಯಿಟ್ಟುಕೊಂಡು ಕೆಲವರು ಕಾವಿಧಾರಿಗಳು ಬಾಲಬ್ರೂಯಿಗೆ ದಯಮಾಡಿಸುತ್ತಿದ್ದರು. ನಿಜಲಿಂಗಪ್ಪನವರು ಮಾತ್ರ ಇಂಥವರನ್ನು ದೂರದಲ್ಲಿಯೇ ಇಟ್ಟುಬಿಡುತ್ತಿದ್ದರು. ಅವರಿಗೆ ಹೆಚ್ಚಿನ ಸಲಿಗೆ ನೀಡುತ್ತಿರಲಿಲ್ಲ. ಅವರು ಹೇಳುವ ಕೆಲಸ ನಿಯಮಗಳ ಚೌಕಟ್ಟಿನಲ್ಲಿ ಬರುವಂತಿದ್ದರೆ ಮಾತ್ರ ಆ ಬಗೆಗೆ ಆಜ್ಞೆ ಮಾಡುತ್ತಿದ್ದರು. ಅವರು ಲಿಂಗಾಯಿತ ಸ್ವಾಮಿಗಳೆಂಬ ಕಾರಣಕ್ಕಾಗಿ ಸರ್ಕಾರದ ನಿಯಮಗಳನ್ನು ಅವರಿಗಾಗಿ ಸಡಿಲಿಸುತ್ತಿರಲಿಲ್ಲ. ‘ಲಿಂಗಾಯಿತರ ಸರ್ಕಾರ ಬಂದಿದೆ. ನಾವು ಹೇಳಿದ್ದೆಲ್ಲ ಆಗ್ತದೆ’ ಎಂದು ಆಶೆಯಿಟ್ಟುಕೊಂಡು ಬಂದವರೆಲ್ಲರಿಗೂ ನಿರಾಶೆಯಾಗುತ್ತಿತ್ತು. ಇಂಥ ಅನೇಕ ಸ್ವಾಮಿಗಳು ನನ್ನೆದುರಿಗೆ ನಿಜಲಿಂಗಪ್ಪನವರನ್ನು, ವಿರೇಂದ್ರ ಪಾಟೀಲರನ್ನು ಬಯ್ದದ್ದುಂಟು”
ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗಿನಿಂದ ಮಠ-ಮಾನ್ಯಗಳಿಗೆ ಕೇಳಿದಷ್ಟು ಹಣ ಕೊಟ್ಟರು. ಕೆಲವು ಮಠಗಳಿಗೆ ಅಧಿಕಾರಿಗಳೇ ಹೋಗಿ ಅಲ್ಲೇ ಫೈಲುಗಳ ವಿಲೇವಾರಿ ಮಾಡತೊಡಗಿದರು. ಮಠಾಧೀಶರು ಹೇಳಿದವರಿಗೆ ಕೆಲಸ-ಕಾರ್ಯಗಳನ್ನು ಮಾಡಿಕೊಟ್ಟರು.
ಈಗ ಋಣಸಂದಾಯದ ಕಾಯಕ ನಡೆಯುತ್ತಿದೆ!
ನಾಳೆ ಇನ್ಯಾವುದೋ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾನೆ. ಆ ವ್ಯಕ್ತಿಯೂ ಲಂಪಟನಾಗಿ, ಲೂಟಿಕೋರನಾಗಿ ಹಗರಣಗಳೆಲ್ಲವೂ ಬಯಲಾದಾಗ ಆತನ ಸಮುದಾಯದ ಸ್ವಾಮಿಗಳೂ ಬೀದಿಗಿಳಿದು ರಕ್ಷಣೆಗೆ ನಿಂತರೆ? ಪ್ರಜಾಪ್ರಭುತ್ವಕ್ಕೇನು ಅರ್ಥ? ಈ ನಾಡನ್ನು ಕಾಪಾಡುವವರು ಯಾರು? ಧರ್ಮಬೋಧೆ ಮಾಡಿಕೊಂಡು ಇರಬೇಕಾದ ಸ್ವಾಮಿಗಳು ನೇರವಾಗಿ ದರೋಡೆಕೋರ ರಾಜಕಾರಣಿಗಳನ್ನು ಸಮರ್ಥಿಸಿಕೊಳ್ಳುತ್ತ ಹೋದರೆ ಧರ್ಮಕ್ಕೇನು ಅರ್ಥ ಉಳಿಯಿತು?
ಯಡಿಯೂರಪ್ಪ ಅವರ ಬ್ಲಾಕ್‌ಮೇಲ್‌ಗೆ ಮಣಿದು ಬಿಜೆಪಿಯ ಹೈಕಮಾಂಡ್ ಮುಖ್ಯಮಂತ್ರಿಯನ್ನು ಬದಲಿಸುವುದಿಲ್ಲ ಎಂದು ದಿಲ್ಲಿಯಲ್ಲಿ ಘೋಷಣೆ ಮಾಡಿದಾಗ ನಾನು ಹುಬ್ಬಳ್ಳಿಯಲ್ಲಿದ್ದೆ. ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ ನಾನು ಹೇಳಿದ್ದಿಷ್ಟು: “ಇದು ಭ್ರಷ್ಟ ಸರ್ಕಾರ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಅಪರಾಧಗಳನ್ನು ತನ್ನ ಮೈಮೇಲೆ ಹಾಕಿಕೊಂಡಿದೆ. ಅದರರ್ಥ ಹೈಕಮಾಂಡ್‌ಗೂ ಭ್ರಷ್ಟಾಚಾರದಲ್ಲಿ ಪಾಲಿರಬೇಕು.
ಆದರೆ ಕರ್ನಾಟಕದ ಜನತೆ ಈ ಮುಖ್ಯಮಂತ್ರಿಯನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಮತ್ತೊಬ್ಬ ಪರ್ಯಾಯ

No comments:

Post a Comment

ಹಿಂದಿನ ಬರೆಹಗಳು