Friday, July 22, 2011

ನಿವೃತ್ತಿ ವಯೋಮಿತಿ ಏರಿಕೆ ನಿವೃತ್ತಿ ವಯೋಮಿತಿ ಏರಿಕೆ ಯುವ ಜನಾಂಗಕ್ಕೆ ನೇಣು ಕುಣಿಕೆ


ಯುಜಿಸಿ ವೇತನ ಪಡೆಯುತ್ತಿರುವ ಅಧ್ಯಾಪಕರುಗಳ ವಯೋಮಿತಿಯನ್ನು ಏರಿಸುವ ಕ್ರಮ ಸೂಕ್ತವೇ? ಎಂಬ ಚರ್ಚೆ ಚಾಲ್ತಿಯಲ್ಲಿದೆ. ಯುಜಿಸಿ ಪ್ರಸ್ತುತ ಕ್ರಮವನ್ನು ಜಾರಿಗೆ ತಂದಲ್ಲಿ ಅನೇಕಾನೇಕ ಸಮಸ್ಯೆಗಳು ಎದುರಾಗುತ್ತವೆ. ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ.ಛೆಡ್ಡಾರವರು ಶಿಕ್ಷಣ ತಜ್ಞರಾಗಿ ಹೆಸರಾಗಿದ್ದವರು. ಸೇವೆಯಲ್ಲಿದ್ದವರನ್ನೇ ಮುಂದುವರೆಸುವಂತೆ ಮಾಡಿರುವ ಶಿಫಾರಸ್ಸು ಅವೈಜ್ಞಾನಿಕವಾದುದು. ತಮ್ಮ ಶಿಫಾರಸ್ಸಿಗೆ ಅವರು ನೀಡುತ್ತಿರುವ ಕಾರಣ-ಅನುಭವೀ ಅಧ್ಯಾಪಕರುಗಳ ಕೊರತೆಯನ್ನು ತುಂಬಿಕೊಳ್ಳುವುದು ಹಾಗೂ ಈಗ ಅಲಭ್ಯವಾಗಿರುವ ಇಂಥವರನ್ನು ಮುಂದುವರೆಸುವುದು ಇದರ ಹಿಂದಿನ ಉದ್ದೇಶ. ಆದರೆ, ಈ ಅನುಭವೀ ಅಧ್ಯಾಪಕರುಗಳೇ ತಾನೇ ಇಷ್ಟು ದಿನ ಯುವಕರಿಗೆ ಬೋಧಿಸಿರುವುದು. ಅವರಿಂದ ಶಿಕ್ಷಣ ಪಡೆದ ಯುವ ಸಮುದಾಯ ಅವರ ಅನುಭವದ ಕಾರಣಕ್ಕಾಗಿ ನಿರುದ್ಯೋಗಿಗಳಾಗಿ ಪರಿತಪಿಸುವಂತಾಗಬಾರದಲ್ಲ. ಈ ಬಗೆಯ ಕನಿಷ್ಠ ವಿವೇಕವನ್ನು ಈ ಸಮಿತಿಯು ಹೊಂದಿಲ್ಲ. ಈ ಶಿಫಾರಸ್ಸಿನ ಕೆಲವು ದುಷ್ಪರಿಣಾಮಗಳೆಂದರೆ:
ನಿರುದ್ಯೋಗದ ಪ್ರಮಾಣ ಹೆಚ್ಚುತ್ತದೆ
ನಿವೃತ್ತಿ ವಯೋಮಿತಿ ಏರಿಕೆಯ ನೇರ ಫಲಾನುಭವಿಗಳೆಂದರೆ, ಯುವ ಜನಾಂಗ. ಜನಸಂಖ್ಯಾ ಸ್ಪೋಟ, ನಿರಂತರ ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ಈಚಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸದತ್ತ ಯುವ ಜನಾಂಗ ವಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ, ತಕ್ಕ ಸ್ಥಳಾವಕಾಶವನ್ನು ಒದಗಿಸಿ ಕೊಡಬೇಕಾಗಿರುವ ಹಿರಿಯರು ಈಗ ಏನು ಮಾಡಬೇಕೆಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಆತ್ಮಸಾಕ್ಷಿಗೆ ತಕ್ಕಂತೆ ವರ್ತಿಸಬೇಕಾಗಿದೆ. ಇಷ್ಟು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿದ್ದು, ವೇತನ ಪಡೆದು ಸೇವೆ ಸಲ್ಲಿಸಿರುವವರು. ಇನ್ನಾದರೂ ಯುವ ಜನಾಂಗಕ್ಕೆ ಅವಕಾಶ ಮಾಡಿಕೊಡಬೇಕು.
ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ
ಈಚಿನ ದಿನಗಳಲ್ಲಿ ಪ್ರಪಂಚ ಕಂಡು, ಕೇಳರಿಯದಷ್ಟು ಕ್ಷಿಪ್ರವಾಗಿ ಬದಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಮಾಹಿತಿಯ ಅನೇಕ ಆಯಾಮಗಳು ಕ್ಷಣಕ್ಷಣಕ್ಕೆ ಅವಸ್ಥಾಂತರಗೊಳ್ಳುತ್ತಿವೆ. ಈ ಹಿಂದಿನ ತಲೆಮಾರಿನ ಅಧ್ಯಾಪಕರುಗಳು ಈ ನಾಗಾಲೋಟಕ್ಕೆ ಒಂದಿಸಬಲ್ಲರೇ? ದಿನಗಳೆದಂತೆ ದೈಹಿಕವಾಗಿ, ಮಾನಸಿಕವಾಗಿ ವಯೋಸಹಜವಾದ ಮುಪ್ಪಿನ ಕಾರಣದಿಂದಾಗಿ ಅವರ ಚೈತನ್ಯ ಕುಗ್ಗಿರುತ್ತದೆ. ಹಲ್ಲು ಹೋಗಿ, ಬೆನ್ನು ಬಾಗಿ, ಕಣ್ಣು ಕಿವಿಗಳೆರಡೂ ತಮ್ಮ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಇಂತಹ ವಯೋಮಾನದವರು ೨೧ನೇ ಶತಮಾನದ ಜಾಗತಿಕ ವಿದ್ಯಮಾನಗಳಿಗೆ ಯುವ ಜನಾಂಗವನ್ನು ಮುಖಾಮುಖಿಯಾಗಿಸಲು, ಅದರಲ್ಲಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವಂತೆ ಪ್ರೇರೇಪಿಸಲು ಸಾಧ್ಯವಾಗುತ್ತಿದೆಯೇ? ಅವರ ಅನಿವಾರ್ಯತೆ ಇದ್ದಲ್ಲಿ, ಅವರನ್ನು ’ಅತಿಥಿ ಉಪನ್ಯಾಸಕ’ರಾಗಿ ಬಳಸಿಕೊಳ್ಳಬಹುದು.
ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಮುಂದುವರಿಕೆ
ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಅಧ್ಯಾಪಕರುಗಳು ಓದಿದ, ಬೋಧಿಸಿದ ಶಿಕ್ಷಣ ಪದ್ಧತಿ ಸಾಂಪ್ರದಾಯಿ. ಪ್ರಸ್ತುತ ಸನ್ನಿವೇಶದಲ್ಲಿ ಜ್ಞಾನಾರ್ಜನೆ ಭಿನ್ನ ಆಯಾಮಗಳನ್ನು ಪಡೆಯುತ್ತಿದೆ. ಬಹುಶಾಸ್ತ್ರೀಯ ಜ್ಞಾನದ ಅವಶ್ಯಕತೆ ಇಂದು ಅಗತ್ಯವಾಗಿದೆ. ಆದರೆ, ಈ ಹಿರಿಯ ಅಧ್ಯಾಪಕರುಗಳ ವಯೋಸಹಜ ಅನಾಸಕ್ತಿಯ ಕಾರಣದಿಂದಾಗಿ ಈ ಬಗೆಯ ಜ್ಞಾನ ಶಿಸ್ತುಗಳನ್ನು ಮೈಗೂಡಿಸಿಕೊಳ್ಳುವುದು ಕಷ್ಟ ಸಾಧ್ಯ. ಹಾಗೂ ಈ ಕಾರಣದಿಂದಾಗಿಯೇ ಅವರು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯನ್ನು ಮುಂದುವರೆಸುತ್ತಾರೆ. ಅದರ ಪರಿಣಾಮದಿಂದಾಗಿಯ ವಿದ್ಯಾರ್ಥಿಗಳ ದಕ್ಷತೆಯು ಈಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಕೇವಲ ಪರೀಕ್ಷಾ ಸಮಯದಲ್ಲಿ ಮಾತ್ರ ವಿದ್ಯಾರ್ಥಿಗಳ ಜ್ಞಾನ ವ್ಯಕ್ತವಾಗುತ್ತಿದೆಯೋ ಹೊರತು ಅದು ಜೀವನದಲ್ಲಿ ಅಳಪಡುತ್ತಿಲ್ಲ. ಆದ್ದರಿಂದ ಇದಕ್ಕೆ ದಕ್ಷವಾದ, ಯುವ, ಉತ್ಸಾಹಿ ಅಧ್ಯಾಪಕರುಗಳು ಅಗತ್ಯವಲ್ಲವೇ?
ಜೀವಾವಧಿ ವೃತ್ತಿಯೇ?
ಕರ್ನಾಟಕದವರ ಸರಾಸರಿ ಜೀವಿತಾವಧಿ ೬೪ ವರ್ಷಗಳು. ಹೀಗಿರುವಾಗ ನಿವೃತ್ತಿ ವಯೋಮಿತಿ ೬೫ ವರ್ಷಗಳು ಹೀಗಿರುವಾಗ ನಿವೃತ್ತಿ ವಯೋಮಿತಿ ೬೫ ವರ್ಷವೇಕೇ? ಸರ್ಕಾರಗಳು ಜೀವಾವಧಿ ವೃತ್ತಿಗಳನ್ನು ನೀಡಬೇಕೇ? ಅಥವಾ ಯುವ ಜನಾಂಗಕ್ಕೆ ಅವಕಾಶ ಕಲ್ಪಿಸಿಕೊಡಬೇಕೇ? ಈ ಪ್ರಶ್ನೆಗಳಿಗೆ ಸರಳವಾದ ಉತ್ತರವೂ, ನಿವೃತ್ತಿ ವಯೋಮಿತಿ ಏರಿಕೆಯು ಅವೈಜ್ಞಾನಿಕವೆಂಬುದನ್ನು ಸಾಬೀತು ಮಾಡುತ್ತದೆ.
ಸರ್ಕಾರಗಳು, ಈ ಬಗೆಯ ಶಿಫಾರಸ್ಸುಗಳನ್ನು ಜಾರಿಗೆ ತರುವಾಗ ಅದರ ಸಾಧಕ-ಬಾಧಕಗಳನ್ನು ಚರ್ಚಿಸಿ ಸೂಕ್ತವಾಗಿ ತಿದ್ದುಪಡಿಗಳನ್ನು ಜಾರಿಗೆ ತರುವುದನ್ನು ಇನ್ನಾದರೂ ರೂಪಿಸಿಕೊಳ್ಳಬೇಕು.
ಅಧ್ಯಾಪಕರುಗಳೇ ಈ ನಿಯಮದ ವಿರುದ್ಧವಿದ್ದಾರೆ
ಪ್ರಸ್ತುತ ಯುಜಿಸಿ ವೇತನ ಪಡೆಯುತ್ತಿರುವ ಹಾಗೂ ಸಾಮಾನ್ಯ ನೌಕರರೂ ಕೂಡ ೫೮-೬೦ ವರ್ಷಕ್ಕೆ ವಯೋಮಿತಿ ಏರಿಸಿದಾಗಲೇ ಅಸಮಾಧಾನಗೊಂಡಿದ್ದರು. ನಾನು ವೈಯಕ್ತಿಕವಾಗಿ ಭೇಟಿ ಮಾಡಿದ ಶಿಕ್ಷಣ, ಸಾರಿಗೆ, ಬೋಧಕ, ಬೋಧಕೇತರ, ಬ್ಯಾಂಕ್, ಯುಜಿಸಿ ವೇತನ ಪಡೆಯುತ್ತಿರುವ ಪದವಿ ಹಾಗೂ ಸ್ನಾತಕೋತ್ತರ ವಿಶ್ವವಿದ್ಯಾಲಯದ ವಿವಿಧ ವಿಬಾಗದ ಅಧ್ಯಾಪಕರುಗಳು, ಸಿಬ್ಬಂದಿಗಳನ್ನು ಈ ಬಗ್ಗೆ ವಿಚಾರಿಸಿದಾಗ ಕೂಡ ಈ ನಿಯಮದ ವಿರುದ್ಧವೇ ಎಲ್ಲರ ಅಭಿಪ್ರಾಯಗಳಿವೆ. ಆದರೆ, ಈ ನಿಯಮ ಜಾರಿಗೆ ಬರುತ್ತಿರುವುದು ಯಾರಿಗಾಗಿ, ಯಾಕಾಗಿ? ಎಂಬ ಪ್ರಶ್ನೆಗಳು ರಾಜಕಾರಣಕ್ಕೆ ತಳುಕು ಹಾಕಿಕೊಳ್ಳುತ್ತವೆ. ಈ ಬಗೆಯ ಕ್ಷುದ್ರ, ಕ್ಷುಲ್ಲಕ ರಾಜಕಾರಣದಿಂದ ಏನನ್ನೂ ಸಾಧಿಸಲು ಸಾಧ್ಯವಾಗದು ಎಂಬಂಶವನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು.
ನೆರೆಯ ರಾಜ್ಯ ಕೇರಳದಲ್ಲಿ ನಿವೃತ್ತಿ ವಯೋಮಿತಿ ೫೫ ವರ್ಷಗಳಾಗಿರುವಾಗ, ಕರ್ನಾಟಕದಲ್ಲಿ ೬೫ ವರ್ಷಗಳಾಗುವುದು ಸರಿಯೇ? ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ಸಂವಿಧಾನ ಹೇಳುತ್ತಿದ್ದರೆ, ರಾಜಕಾರಣಿಗಳು, ಅವರು ನೇಮಿಸುವ ಸಮಿತಿಗಳು, ನ್ಯಾಯಾಲಯಗಳು, ನೀತಿ ನಿರೂಪಕರು, ಶಿಕ್ಷಣ ತಜ್ಞರು ಅದನ್ನು ಉಲ್ಲಂಘಿಸುತ್ತಿವೆ. ನಿವೃತ್ತಿ ವಯೋಮಿತಿಯನ್ನು ಯುಜಿಸಿ ವೇತನ ಪಡೆಯುತ್ತಿರುವವರಿಗೆ ಮಾತ್ರ ಏರಿಸುವುದು ಅವೈಜ್ಞಾನಿಕ. ಈ ರೀತಿಯ ಶಿಫಾರಸ್ಸುಗಳು ಬೇರೆ ಇಲಾಖೆಗಳ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಮುಂದುವರೆದು ಆ ಇಲಾಖೆಗಳ ನೌಕರರೂ ಕೂಡ ನಿವೃತ್ತಿ ವಯೋಮಿತಿಯನ್ನು ಏರಿಸುವಂತೆ ಒತ್ತಾಯಿಸಬಹುದು. ಆಗ ಅದಕ್ಕೂ ಒಂದು ಸಮಿತಿ ರಚಿಸಿ, ಅವರಿಗೂ ವಯೋಮಿತಿ ಏರಿಸುವಂತೆ ಸಮಿತಿ ಶಿಫಾರಸ್ಸು ಮಾಡಬಹುದು. ಹಾಗಾದಲ್ಲಿ ಯುವ ಜನಾಂಗಕ್ಕೆ ಆತ್ಮಹತ್ಯೆಯ ಬದುಕಲು ಸುಗಮವಾದ ದಾರಿಯೆಂದು-ಈ ಎಲ್ಲ ಅಧಿಕಾರಿವರ್ಗ ಹಾಗೂ ಹಿರಿಯ ಜನಾಂಗ-ನಿರ್ದೇಶಿಸಿದಂತಾಗುತ್ತದೆ.
ಅರ್ಹ ಯುವ ವಿದ್ಯಾವಂತ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವಕಾಶವನ್ನು ಒದಗಿಸಬೇಕಾದ ಸರ್ಕಾರಗಳು ಈ ಬಗೆಯ ತೀರ್ಮಾನಗಳನ್ನು ಪರಿಶೀಲಿಸುವುದು ಅವಶ್ಯಕ.
ಸತ್ತರೂ ನೆಲ ಬಿಡನೆಂಬ ಆಸೆಯಿಂದ ನೆಲವನ್ನಪ್ಪಿಕೊಂಡ ಪ್ರಾಣ ಬಿಡುವ ದುರ್ಯೋಧನನಂತೆ, ಪಾತ್ರ ಮುಗಿದರೂ ರಂಗ ಬಿಡಿದ ಚಿರಯೌವನಿಗರಂತೆ ನಟಿಸುವ ಮೂಲಕ ಯುವ ಜನಾಂಗದ ಮನಸ್ಸನ್ನು ಕ್ಷೋಭಿಗೀಡು ಮಾಡಬೇಡ. ಅವರ ಕಣ್ಣಿಗೆ ನಿಮ್ಮ ಈ ಹುಚ್ಚುತನಗಳು ಅಸಹ್ಯವಾಗಿಯೇ ಕಾಣುತ್ತದೆ.
ಒಂದು ವೇಳೆ ಆರನೇ ವೇತನ ಆಯೋಗದ ಸಂಬಳ ಪಡೆಯದಿದ್ದರೆ, ನೀವು ವೃತ್ತಿಯಲ್ಲಿ ಮುಂದುವರೆಯ ಬಯಸುತ್ತಿದ್ದೀರಾ? ಈ ಪ್ರಶ್ನೆಯನ್ನು ಸಮಾಧಾನ ಚಿತ್ತದಿಂದ ಕೇಳಿಕೊಂಡು ನಂತರ ನಿರ್ಧಾರಕ್ಕೆ ಬನ್ನಿ.
ಪ್ರಸ್ತುತ ನಿರುದ್ಯೋಗಿಗಳಾಗಿರುವ ಉದ್ಯೋಗವಕಾಶ ನೀಡುವ ಮನಸ್ಸು ಮಾಡಿ. ನಿವೃತ್ತಿಯಂಚಿನಲ್ಲಿರುವ ಹಿರಿಯ ಅಧ್ಯಾಪಕರುಗಳಿಗೆ ಒಬ್ಬೊಬ್ಬರಿಗೆ ನೀಡುತ್ತಿರುವ ವೇತನದಲ್ಲಿ, ಹೊಸಬರಿಗೆ ನಾಲ್ಕು ಜನರಿಗೆ ಅವಕಾಶ ಕೊಡಬಹುದು. ಈ ಮೂಲಕ ಏಕಕಾಲಕ್ಕೆ ನಿರುದ್ಯೋಗದ ಸಮಸ್ಯೆ ಬಗೆಹರಿಯುವುದಲ್ಲದೆ ಸರ್ಕಾರ್ ಬೊಕ್ಕಸಕ್ಕೆ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ.
ಹೀಗೆ ಉದ್ಯೋಗವಕಾಶವನ್ನು ಹೆಚ್ಚಿಸುವ ಪ್ರಕ್ರಿಯೆ ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಸಮರ್ಥನೀಯವಾಗುತ್ತದೆ. ಈಗಾಗಲೇ ವೃತ್ತಿಯಲ್ಲಿರುವವರಿಗೆ ವೃತ್ತಿ ಭದ್ರತೆಗಿಂತಲೂ ಹೊಸ ಯುವ ಉದ್ಯೋಗಕಾಂಕ್ಷಿಗಳಿಗೆ ಅದು ಅತ್ಯಗತ್ಯವಾದುದಾಗಿದೆ. ವಯೋಮಿತಿ ಏರಿಕೆಯಿಂದಾಗಿ ಸಾಮಾಜಿಕ ನ್ಯಾಯದ ತಕ್ಕಡಿಯೂ ವ್ಯತ್ಯಸ್ಥಗೊಳ್ಳುತ್ತದೆ. ವೃತ್ತಿ ನಿರತರಿಗೆ ಉದ್ಯೋಗ ಹಾಗೂ ತಕ್ಕಡಿಯೂ ವ್ಯತ್ಯಸ್ಥಗೊಳ್ಳುತ್ತದೆ. ವೃತ್ತಿ ನಿರತರಿಗೆ ಉದ್ಯೋಗ ಹಾಗೂ ಆರ್ಥಿಕ ಭದ್ರತೆ ಲಭಿಸುವ ಕಾರಣದಿಂದಾಗಿ ಅನೇಕ ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಉಳ್ಳವರು ಮತ್ತು ಇಲ್ಲದವರು ನಡುವಿನ ಕಂದಕ ಮತ್ತಷ್ಟು ಹೆಚ್ಚಿನ ಸಾಮಾಜಿಕ ಸ್ವಾಸ್ಥ್ಯವು ಕೆಡುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿವೃತ್ತಿ ವಯೋಮಿತಿಯನ್ನು ಏರಿಸುವ ಕ್ರಮವನ್ನು ದೂರಾಲೋಚನೆಯಿಂದ ಸೂಕ್ಷ್ಮವಾಗಿ ಅವಲೋಕಿಸಿ ಈಗ ಆಗಬಹುದಾದ ಅನ್ಯಾಯವನ್ನು ಸರಿಪಡಿಸಬೇಕಾಗಿದೆ.
ಈ ಬಗೆಯ ನಿಯಮಗಳನ್ನು ಜಾರಿಗೆ ತರುವಾಗ ಜನಾಭಿಪ್ರಾಯ ಸಂಗ್ರಹಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯವಾದುದು. ಆದರೆ ಈ ವಿಷಯದಲ್ಲಿ ಯುಜಿಸಿ, ಸರ್ಕಾರಗಳು, ಶಿಕ್ಷಣ ತಜ್ಞರುಗಳು, ನೀತಿ ನಿರೂಪಕರು, ಮಂತ್ರಿಗಳು ಹಾಗೂ ನ್ಯಾಯಾಲಯಗಳು ವರ್ತಿಸುತ್ತಿರುವ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಸಂದೇಹಕ್ಕೆ ಎಡೆಮಾಡಿಕೊಡುತ್ತಿವೆ.
ದಯಮಾಡಿ ನಾಡಿನ ನೀತಿ ನಿರೂಪಕರು, ನ್ಯಾಯಮೂರ್ತಿಗಳು, ಶಿಕ್ಷಣ ತಜ್ಞರು, ಪ್ರಜ್ಞಾವಂತರು, ವಿಚಾರವಂತರು ಹಾಗೂ ಹಿರಿಯ, ಕಿರಿಯ ಅಧ್ಯಾಪಕರುಗಳು ಈ ದಿಸೆಯಲ್ಲಿ ಸೂಕ್ತವಾಗಿ ಕಾರ್ಯ ನಿರ್ವಹಿಸಿ ಪ್ರತಿಕ್ರಿಯಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ವಾತಾವರಣ ನಿರ್ಮಾಣ ಮಾಡಿಕೊಡಬೇಕೆಂದು ಈ ವ್ಯವಸ್ಥೆಯನ್ನು ಎಚ್ಚರಗೊಳಿಸಬೇಕಾಗಿದೆ. ಹಿರಿಯರಿಗೆ ’ಜೀವಾವಧಿ ವೃತ್ತಿ’ ಲಭಿಸಿ, ಯುವಕರಿಗೆ ’ಮರಣ ದಂಡನೆ’ ಸಿಗಬಾರದಲ್ಲವೇ?

ಪ್ರದೀಪ್ ಮಾಲ್ಗುಡಿ

No comments:

Post a Comment