Friday, June 4, 2010

ಸಿ.ಬಿ.ಎಸ್.ಇ ಹೇರುವ ಹುನ್ನಾರ!

ಕರ್ನಾಟಕ ರಾಜ್ಯ ಸರ್ಕಾರದ, ನಗರಾಭಿವೃದ್ಧಿ ಮಂತ್ರಿಗಳಾದ ಶ್ರೀ ಸುರೇಶ್‌ಕುಮಾರ್ ಅವರು ಮೊನ್ನೆ ಒಂದು ಹೇಳಿಕೆ ಕೊಟ್ಟು ಶೀಘ್ರದಲ್ಲೇ ಕರ್ನಾಟಕದ ಎಲ್ಲಾ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ, ಖಾಸಗಿಯವರ ಜೊತೆಗೂಡಿ ಸಿ.ಬಿ.ಎಸ್.ಇ ಶಾಲೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ. ಕರ್ನಾಟಕ ಸರ್ಕಾರದ ಈ ನಿಲುವು ನಾಡಿನ ಶಿಕ್ಷಣ ವ್ಯವಸ್ಥೆಯನ್ನು, ನಾಳಿನ ಪೀಳಿಗೆಯನ್ನು ವಿನಾಶದೆಡೆಗೆ ಒಯ್ಯುತ್ತಿರುವ ನಡೆಯಾಗಿದೆ.
ನಗರಾಭಿವೃದ್ಧಿ ಸಚಿವಾಲಯ ವ್ಯಾಪ್ತಿ ಮೀರಿದೆಯೇ?
ನಗರಪಾಲಿಕೆಯೊಂದರ ವ್ಯಾಪ್ತಿ ಏನು? ಅದರ ಮಿತಿ ಏನು? ಹೊಣೆಗಾರಿಕೆ ಏನು? ಎಂಬುದನ್ನೆಲ್ಲಾ ಅರಿತೇ ರಾಜ್ಯಸರ್ಕಾರ ಇಂತಹ ನಿಲುವಿಗೆ ಬಂದಿದೆಯೇ ಎಂಬ ಅಚ್ಚರಿ ಮೂಡುತ್ತದೆ. ಏಕೆಂದರೆ ಕರ್ನಾಟಕ ಶಿಕ್ಷಣ ಇಲಾಖೆಯ ಎಲ್ಲೆಯನ್ನು ನಗರ ಪಾಲಿಕೆ, ನಗರಾಭಿವೃದ್ಧಿ ಸಚಿವಾಲಯ ಮೀರುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮಾನ್ಯ ಶಿಕ್ಷಣ ಮಂತ್ರಿಗಳಿಗೇಕೋ ಈ ವಿಷಯ ತೋಚಿದಂತಿಲ್ಲ. ಭಾರತೀಯ ಒಕ್ಕೂಟದಲ್ಲಿ ರಾಜ್ಯಗಳ ಹಿಡಿತದಲ್ಲಿರಬೇಕಾದ ಶಿಕ್ಷಣ ಕ್ಷೇತ್ರವು ಈಗಾಗಲೇ ಕನ್‌ಕರೆಂಟ್ ಪಟ್ಟಿಯಲ್ಲಿದೆ. ಕರ್ನಾಟಕ ಸರ್ಕಾರದ ಇಂದಿನ ಈ ನಡೆ, ಶಿಕ್ಷಣವನ್ನು ಕೇಂದ್ರದ ಪಟ್ಟಿಗೆ ಸೇರಿಸಲು ತುದಿಗಾಲಲ್ಲಿ ನಿಂತಿರುವಂತಿದೆ.
ಕಟ್ಟಬೇಕಾದವರೇ ಕೆಡವಲು ನಿಂತಂತೆ!
ನಾಡಿನ ನಾಳೆಗಳು ಚೆನ್ನಾಗಿರಬೇಕೆಂದರೆ ನಾಡಿನ ಶಿಕ್ಷಣದ ಗುಣಮಟ್ಟ ಚೆನ್ನಾಗಿರಬೇಕು. ಇದರರ್ಥ ನಮ್ಮ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಅಷ್ಟರ ಮಟ್ಟಿಗೆ ಚೆನ್ನಾಗಿಸುವ ಹೊಣೆಗಾರಿಕೆ ಸರ್ಕಾರದ್ದು. ಆದರೆ ಗುಣಮಟ್ಟದ ಈ ಮಾತನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳೋದು ಒಂದು ಸರ್ಕಾರ ತನ್ನ ಜನಕ್ಕೆ ಮಾಡೋ ದೊಡ್ಡ ಮೋಸ. ಯಾಕೆಂದರೆ ತನ್ನ ನಿಲುವಿನಿಂದಾಗಿ ಕರ್ನಾಟಕ ಸರ್ಕಾರವು ತಾನೇ ಹೊಣೆಯಾಗಿರುವ ಕನ್ನಡನಾಡಿನ ಶಿಕ್ಷಣ ವ್ಯವಸ್ಥೆಯು ಕಳಪೆ, ಗುಣಮಟ್ಟದ ಶಿಕ್ಷಣವೆಂದರೆ ಅದು ಕೇಂದ್ರೀಯ ಶಿಕ್ಷಣ ವ್ಯವಸ್ಥೆಯ ಸಿ.ಬಿ.ಎಸ್.ಇ ಪದ್ದತಿಯದ್ದು, ಅದಕ್ಕಾಗಿ ಆ ಕಲಿಕಾ ಪದ್ದತಿಗೇ ನಮ್ಮ ಪ್ರೋತ್ಸಾಹವಿದೆ ಎನ್ನುತ್ತಿದೆ. ಇದು ರಾಜ್ಯ ಪಠ್ಯಕ್ರಮದ ಶಿಕ್ಷಣವನ್ನು ಕಟ್ಟಬೇಕಾದ ಸರ್ಕಾರವೇ ತನಗೆ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆಯಿಲ್ಲಾ ಎಂದು ಡಂಗೂರ ಸಾರಿದಂತಾಗಿದೆ.
ಕಳೆದ ವರ್ಷ ಇದೇ ಸರ್ಕಾರದ ಮಾನ್ಯ ಶಿಕ್ಷಣ ಸಚಿವರು, ಕೇಂದ್ರೀಯ ಪಠ್ಯಕ್ರಮಗಳಲ್ಲಿ ದಯಮಾಡಿ ಕನ್ನಡವನ್ನು ಬೋಧಿಸಿ ಎಂದು ಗೋಗರೆದಿದ್ದರು. ಇಷ್ಟಕ್ಕೂ ರಾಜ್ಯಸರ್ಕಾರಕ್ಕೆ, ಶಿಕ್ಷಣ ಇಲಾಖೆಗೆ ನಾಡಿನ ೮೫% ಮಕ್ಕಳು ಕಲಿಯುತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಉತ್ತಮ ಪಡಿಸಬೇಕು, ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ನಾಡಿನ ಮಕ್ಕಳಿಗಾಗಿ ರೂಪಿಸಬೇಕು ಎಂದು ಅನ್ನಿಸುತ್ತಲೇ ಇಲ್ಲಾ ಎನ್ನುವುದಾದರೆ ಅದಕ್ಕಿಂತಲೂ ದೊಡ್ಡ ದುರಂತವಿಲ್ಲ. ನಮ್ಮ ರಾಜ್ಯ ಪಠ್ಯಕ್ರಮದ ಕಲಿಕಾ ವ್ಯವಸ್ಥೆಯು ಗುಣಮಟ್ಟದಲ್ಲಿ ಅತ್ಯುತ್ತಮವಾದುದಕ್ಕೆ ಸಾಟಿಯಾಗುವಂತೆ ಮಾಡುವುದರ ಬಗ್ಗೆ ದುಡಿಯಲು ಮುಂದಾಗದೆ, ಆ ಬಗ್ಗೆ ಯೋಚಿಸದೆ ಇಡೀ ನಾಡಿಗೆ ಪಲಾಯನವಾದದ ದೊಡ್ಡದೊಂದು ಕೆಟ್ಟ ಆದರ್ಶವನ್ನು ನಮ್ಮ ರಾಜ್ಯಸರ್ಕಾರವೇ ತೋರಿಸಿಕೊಡುತ್ತಿದೆ. ಈ ನಡೆಯ ಮೂಲಕ ರಾಜ್ಯಸರ್ಕಾರವು ಗುಣಮಟ್ಟದ ರಾಜ್ಯಪಠ್ಯಕ್ರಮವಿರುವ ಒಂದು ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕಾದ ತನ್ನ ಮೂಲಭೂತ ಹೊಣೆಗಾರಿಕೆಯಿಂದ ತಲೆತಪ್ಪಿಸಿಕೊಂಡು ಓಡುತ್ತಾಯಿದೆ, ಅಷ್ಟೆ.
ಸಿ.ಬಿ.ಎಸ್.ಇ ಕಲಿಕಾ ಪದ್ದತಿ!ಸೆಂಟ್ರಲ್ ಬೋರ್ಡ್ ಫಾರ್ ಸೆಕಂಡರಿ ಎಜುಕೇಷನ್ ಎಂಬುದರ ಸಂಕ್ಷಿಪ್ತ ರೂಪ ಸಿ.ಬಿ.ಎಸ್.ಇ. ಇದರ ಪಠ್ಯಕ್ರಮವನ್ನು ಕೇಂದ್ರೀಯ ಪಠ್ಯಕ್ರಮವೆಂದೂ ಕರೆಯುತ್ತಾರೆ. ಈ ಶಿಕ್ಷಣ ಪದ್ದತಿಯ ಮೂಲೋದ್ದೇಶಗಳಲ್ಲಿ ಪ್ರಮುಖವಾದದ್ದು, ಕೇಂದ್ರಸರ್ಕಾರಿ ನೌಕರರ/ ವರ್ಗಾವಣೆಗೆ ಈಡಾಗಬಲ್ಲಂತ ಕೆಲಸಗಳಲ್ಲಿರುವವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೀ ಅನ್ನುವುದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಇದರ ಪಠ್ಯಕ್ರಮವನ್ನು ರೂಪಿಸಲಾಗಿರುತ್ತದೆ. ಈ ವಿಷಯವನ್ನು ರಾಜ್ಯಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಹಿಂದಿ ಹೇರಿಕೆಯ ಪ್ರಬಲ ಅಸ್ತ್ರ!ಪ್ರಪಂಚದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯ ಮೂಲ ಇರುವುದೇ ಸ್ಥಳೀಯವಾದದ್ದನ್ನು, ಮಕ್ಕಳಿಗೆ ಪರಿಚಿತವಾದ ವಸ್ತುಗಳನ್ನು ಬಳಸಿ ಕಲಿಸುವುದು ಪರಿಣಾಮಕಾರಿ ಅನ್ನುವುದರಲ್ಲಿ. ಇವತ್ತು ರಾಜ್ಯಸರ್ಕಾರ ಸಿ.ಬಿ.ಎಸ್.ಇ ಪದ್ದತಿಗೆ ಮಣೆ ಹಾಕುವುದರ ಮೂಲಕ ಈ ಮೂಲಭೂತ ನಿಯಮಕ್ಕೇ ಕೊಡಲಿ ಪೆಟ್ಟು ಹಾಕಲು ಮುಂದಾಗಿದೆ. ಯಾಕೆಂದರೆ ಕರ್ನಾಟಕದ ಮಕ್ಕಳ ಕಲಿಕೆಯಲ್ಲಿ ಕಮಲ, ಬಸವ ಹೆಚ್ಚು ಪರಿಣಾಮಕಾರಿಯೇ ಹೊರತು ಶೀತಲ್, ಚಂಚಲ್ ಅಲ್ಲಾ. ಇನ್ನು ಸಿ.ಬಿ.ಎಸ್.ಇ ಪಠ್ಯಕ್ರಮದಲ್ಲಿ ಏನು ಕಲಿಸಲಾಗುತ್ತದೆಂiಂದು ಅರಿಯಲು ಆ ಪದ್ದತಿಯ ಪುಸ್ತಕಗಳನ್ನು ನೋಡಿದರೇ ಸಾಕಾಗುತ್ತದೆ. ಇಲ್ಲಿನ ಕಲಿಕಾ ಮಾಧ್ಯಮ ಇಂಗ್ಲಿಷ್. ಪ್ರಿ-ನರ್ಸರಿಯಿಂದಲೇ ಹಿಂದಿ ಕಡ್ಡಾಯ. ಎಲ್.ಕೆ.ಜಿ ಮಕ್ಕಳಿಗೆ ಇರೋ ಅತೀ ದಪ್ಪದ ಪುಸ್ತಕ ಹಿಂದೀದು. ಕನ್ನಡನಾಡಿನಲ್ಲೇ ಇದ್ದರೂ, ಕನ್ನಡಿಗರೇ ಆಗಿದ್ದರೂ ಇಲ್ಲಿ ಕನ್ನಡದ ಅ,ಆ,ಇ,ಈ ಕಲಿಸಲು ಆರಂಭಿಸುವುದು ಐದನೇ ತರಗತಿಯಲ್ಲಿ. ಆರನೆಯ ತರಗತಿಯಲ್ಲಿ ಕ,ಕಾ,ಕಿ,ಕೀ ಅನ್ನುವ ಕಾಗುಣಿತ, ಎಂಟನೇ ತರಗತಿ ಆದ ಕೂಡಲೇ ಅದಕ್ಕೆ ಎಳ್ಳುನೀರು. ಐದನೇ ತರಗತಿಯಿಂದ ಕನ್ನಡ ಕಲಿಯುವುದು ಕೂಡಾ ಕಡ್ಡಾಯವೇನಲ್ಲ. ಕನ್ನಡ ನಾಡಿನಲ್ಲಿರುವ ವಿದ್ಯಾರ್ಥಿಗಳು ಭಾಷೆಯಾಗಿ ತಮಿಳು, ತೆಲುಗು, ಗುಜರಾತಿ, ಮರಾಠಿ ಹೀಗೆ ಯಾವುದನ್ನಾದರೂ ಕಲಿಕೆಗೆ ಆರಿಸಿಕೊಳ್ಳಬಹುದು. ಹಿಂದೊಮ್ಮೆ ಪಂಜಾಬು ತನ್ನಲ್ಲಿನ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಪಂಜಾಬಿ ಭಾಷೆಯನ್ನು ಕಡ್ಡಾಯ ಮಾಡಿ ಎಂದು ಬೋರ್ಡನ್ನು ಕೇಳಿಕೊಂಡಿತ್ತು. ಆದರೆ ಅಂತಹ ಅವಕಾಶವನ್ನು ನಿರಾಕರಿಸಲಾಗಿತ್ತು. ಇಂಥಾ ಪದ್ದತಿಯಿಂದಾಗುವ ಪರಿಣಾಮವನ್ನಾದರೂ ರಾಜ್ಯಸರ್ಕಾರ ಊಹೆ ಮಾಡೀತಾ? ನಾಡಿನಲ್ಲಿ ಈಗಿರುವ ಪರಭಾಷಿಕರನ್ನು ಮುಖ್ಯವಾಹಿನಿಯಿಂದ ಇದು ದೂರಮಾಡುವುದಿಲ್ಲವೇ? ಕನ್ನಡದ ಮಕ್ಕಳನ್ನೇ ಕನ್ನಡದಿಂದ ದೂರಾ ಮಾಡುವುದಿಲ್ಲವೇ? ಭಾರತದ ವೈವಿಧ್ಯತೆಯನ್ನೇ ಅಳಿಸಿಹಾಕುವ ನಿಟ್ಟಿನಲ್ಲಿ ಈ ಕಲಿಕಾ ವ್ಯವಸ್ಥೆ ಇದೆ. ಕರ್ನಾಟಕ ರಾಜ್ಯಸರ್ಕಾರವು ಇದೀಗ ಸಿ.ಬಿ.ಎಸ್.ಇ ಕಲಿಕಾ ಪದ್ದತಿಯ ಶಾಲೆಯನ್ನು ಪ್ರೋತ್ಸಾಹಿಸುವ/ ವಹಿಸಿಕೊಳ್ಳುವ ಮೂಲಕ ಕನ್ನಡಿಗರ ಮೇಲೆ ಹಿಂದೀ ಹೇರಿಕೆಯನ್ನು ಮಾಡಲು ಮುಂದಾಗಿರುವುದನ್ನು ಕಾಣುತ್ತಿದ್ದೇವೆ.
ಸಿ.ಬಿ.ಎಸ್.ಇ ಎಂಬ ನೆಲದ ಬೇರು ಸಡಿಲಿಸೋ ಪದ್ದತಿ!
ಇನ್ನು ಈ ಶಾಲೆಗಳಲ್ಲಿ ಕಲಿಸುವ ಇತಿಹಾಸ, ಸಮಾಜ ಶಾಸ್ತ್ರಗಳಲ್ಲಿ ಕನ್ನಡನಾಡಿಗೆ ಎಳ್ಳಷ್ಟು ಮಹತ್ವವೂ ಇಲ್ಲ. ನಮ್ಮ ಇತಿಹಾಸ, ನಮ್ಮ ಆಚರಣೆ, ನಂಬಿಕೆಗಳು, ಪದ್ದತಿಗಳು, ಪರಂಪರೆಗಳ ಬಗ್ಗೆ ಸಣ್ಣ ಪರಿಚಯವನ್ನೂ ಕೂಡಾ ಇವು ನೀಡುತ್ತಿಲ್ಲ. ಕೆಲದಿನಗಳ ಹಿಂದೆ ಮಾಧ್ಯಮಗಳಲ್ಲಿ ಒಂದು ವರದಿ ಬಂದಿತ್ತು. ಕನ್ನಡವೆನ್ನುವುದು ಒಂದು ವಿಚಿತ್ರವಾದ ನುಡಿಯೆನ್ನುವಂತೆ ಕೇಂದ್ರೀಯ ಪಠ್ಯಕ್ರಮದಲ್ಲಿ ಬರೆಯಲಾಗಿದೆ ಎಂಬುದನ್ನು ಆ ವರದಿ ಬಯಲು ಮಾಡಿತ್ತು. ಇಂತಹ ಪಠ್ಯಗಳಿಂದ ಕನ್ನಡದ ಮಕ್ಕಳಲ್ಲಿ ಕೀಳರಿಮೆ ಹುಟ್ಟುವುದಿಲ್ಲವೇ? ನಾನು, ನನ್ನ ಹಿರಿಯರು, ನನ್ನ ನಾಡು, ನನ್ನ ನುಡಿಗಳೆಲ್ಲಾ ಕೀಳು ಎನ್ನುವ ಮನೋಭಾವನೆಗೆ ಕಾರಣವಾಗುವುದಿಲ್ಲವೇ? ನಮ್ಮ ಮುಂದಿನ ಪೀಳಿಗೆಯನ್ನೇ ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಗಳಿಂದ ದೂರ ಹೋಗುವಂತೆ ಮಾಡುವುದಿಲ್ಲವೇ? ಒಟ್ಟಿನಲ್ಲಿ ಸರ್ಕಾರದ ಈ ನಿಲುವು ನಿಜಕ್ಕೂ ಮುಂದಿನ ದಿನಗಳಲ್ಲಿ ಕನ್ನಡದ ಮಕ್ಕಳನ್ನು ಈ ನೆಲದ ಸಂಸ್ಕೃತಿ, ಪರಂಪರೆಗಳಿಂದ ದೂರ ಮಾಡಲಿದೆ. ನಮ್ಮತನದ ನಮ್ಮ ಬುನಾದಿಯ ಬೇರುಗಳನ್ನೇ ಇದು ಸಡಿಲಗೊಳಿಸಲಿದೆ.
ಕರ್ನಾಟಕ ಸರ್ಕಾರ ಮತ್ತು ಅದನ್ನು ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ತನ್ನ ಸ್ವಹಿತಾಸಕ್ತಿಗಳನ್ನು ಈ ವಿಷಯದಲ್ಲಾದರೂ ಬದಿಗಿಟ್ಟು ತನ್ನ ನಿಲುವನ್ನು ಬದಲಿಸಬೇಕಾಗಿದೆ. ರಾಜ್ಯಸರ್ಕಾರದ ಶಿಕ್ಷಣ ಸಚಿವರು ಇದರ ವಿರುದ್ಧ ದನಿಯೆತ್ತಿ ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಬೇಕಾಗಿದೆ. ನಾಡಿನ ಶಿಕ್ಷಣತಜ್ಞರುಗಳು, ಶಿಕ್ಷಣ ಇಲಾಖೆಯೋರು, ಬುದ್ಧಿಜೀವಿಗಳು, ಪ್ರಜ್ಞಾವಂತ ನಾಗರಿಕರು ಸರ್ಕಾರದ ಇಂದಿನ ನಿಲುವನ್ನು ಬದಲಾಯಿಸಲು ಸರ್ಕಾರವನ್ನು ಒತ್ತಾಯಿಸಬೇಕಾಗಿದೆ.

ಆನಂದ್
ಬನವಾಸಿ ಬಳಗ

No comments:

Post a Comment

ಹಿಂದಿನ ಬರೆಹಗಳು