Friday, June 4, 2010

ಭರವಸೆ ಭಿತ್ತಿದ ಮಹಾಬೆಳಕು ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ ಸ್ವಾಮೀಜಿ




ಧರ್ಮಗುರುಗಳು ಹೇಗಿರಬೇಕು ಎಂಬುದಕ್ಕೆ ಜೀವಂತ ನಿದರ್ಶನವೆಂದರೆ ಸಿದ್ಧಗಂಗಾ ಕ್ಷೇತ್ರದ ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳೆಂದರೆ ಅತಿಶಯೋಕ್ತಿಯಲ್ಲ.
ಸಿದ್ಧಗಂಗಾ ಕ್ಷೇತ್ರವನ್ನು ಭಕ್ತಿ, ಜ್ಞಾನ ಮತ್ತು ಅನ್ನದಾಸೋಹದ ಮಹಾಮನೆಯನ್ನಾಗಿ ಬೆಳೆಸಿರುವ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಇಷ್ಟಲಿಂಗ ಪೂಜಾಫಲದಿಂದಾಗಿ ಸಿದ್ಧಗಂಗಾ ಕ್ಷೇತ್ರ ಕನ್ನಡ ನಾಡಿನ ಬೃಹತ್ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿ ಮಾದರಿಯಾಗಿದೆ ಮಾತ್ರವಲ್ಲದೇ, ಸಿದ್ಧಗಂಗಾ ಕ್ಷೇತ್ರದ ಆಶ್ರಯದಲ್ಲಿ ಹಿಂದಿನಿಂದ ನಡೆದು ಬಂದ ಕೃಷಿ ಕಾಯಕವನ್ನು ಶ್ರದ್ಧೆಯಿಂದ ಮುಂದುವರೆಸಲಾಗುತ್ತಿದೆ.
ಒಂದು ಕ್ಷಣ ಸಿದ್ಧಗಂಗಾ ಮಠವಿಲ್ಲದ ತುಮಕೂರನ್ನು ಕಲ್ಪಿಸಿಕೊಳ್ಳಿ. ಅದು ಒಮ್ಮೆಗೇ ನೂರಾರು ವರ್ಷಗಳಷ್ಟು ಹಿಂದೆ ಹೋಗಿಬಿಡುತ್ತದೆ. ಅದನ್ನು ಅವಿದ್ಯೆಯ ಕತ್ತಲೆ ಆವರಿಸಿಬಿಡುತ್ತದೆ. ಹಸಿವಿನ ಬೇಗೆಯಿಂದ ಅದು ಕಂಗಾಲಾಗುತ್ತದೆ !
ಹನ್ನೆರಡನೆಯ ಶತಮಾನದ ಶರಣರು ಹೊಸ ಸಮಾಜವನ್ನು ಕಟ್ಟಲು ಹೊಸ ಜೀವನ ದೃಷ್ಟಿಕೋನವನ್ನು ನೀಡಿದರು. ಜೀವಪರತೆ ಅದರ ಉಸಿರು. ಬದುಕಿಗೆ ಅವರು ನೀಡಿದ ಪ್ರಾಧಾನ್ಯ ಅನನ್ಯವಾದದ್ದು, ಹಾಗಾಗಿ ಬದುಕನ್ನು ಹಸನು ಮಾಡುವುದೇ ಜೀವನದ ಪರಮಗುರಿ ಎಂಬ ನಂಬಿಕೆ ಅವರದು. ಹಿಂದಿನ ವಿರಕ್ತಿಪರ ದೃಷ್ಟಿಕೋನದಂತೆ ಅವರು ಬದುಕನ್ನು ಮಿಥ್ಯ ಎನ್ನಲಿಲ್ಲ. ’ಮರ್ತ್ಯ’ವನ್ನು ’ಕರ್ತಾರನ ಕಮ್ಮಟ’ ಎಂದರು.
ಅದನ್ನು ಕೇವಲ ಅಸ್ಪಷ್ಟ ಆದರ್ಶವಾಗಿಸಲಿಲ್ಲ. ಬದುಕನ್ನು ಉತ್ತಮಿಸಲು ಅವರು ಕಟು ವಾಸ್ತವದ ನೆಲೆಯಿಂದ ಚಿಂತಿಸಿದರು. ಜೀವಿಗಳಿಗೆ ಬದುಕಲು ಮೂಲಭೂತವಾಗಿ ಬೇಕಾದದ್ದು ಆಹಾರ. ದೇಹ ಶ್ರಮದಿಂದ ಕಳೆದುಕೊಂಡ ಶಕ್ತಿಯ ಅನುಭವವಾಗುವುದು ಹಸಿವಿನ ಮೂಲಕವೇ ಆದ್ದರಿಂದ ಹಸಿವು ಮಾನವನ ಆದಿ ಸಮಸ್ಯೆ. ಅದಕ್ಕೇ ದಾಸಿಮಯ್ಯ ಹಸಿವನ್ನು ಹೆಬ್ಬಾವಿಗೆ ಹೋಲಿಸುವುದು. ಹಸಿವನ್ನು ನೀಗಿಸಲು ಅನ್ನ ಮುಖ್ಯ. ಆ ಅನ್ನದ ಅಥವಾ ಆಹಾರದ ಸಮಸ್ಯೆಯನ್ನು ಪರಿಹರಿಸುವವನನ್ನು ದಾಸಿಮಯ್ಯ ’ಗಾರುಡಿಗ’ ಎನ್ನುತ್ತಾನೆ. ಆದರೆ ಹಸಿವಿನ ಸಮಸ್ಯೆಯನ್ನು ನೀಗಿಸುವುದು ಅಷ್ಟು ಸುಲಭವೇ? ಹಾಗಾಗಿ ಆ ದಿಸೆಯಲ್ಲಿ ದುಡಿಯುವುದನ್ನೇ ಪೂಜೆ ಎಂದು ವಚನಕಾರರು ಪ್ರತಿಪಾದಿಸಿದರು. ಅದಕ್ಕೇ ಅಂಬಿಗ ಚೌಡಯ್ಯ ’ದೇಹಾರವ ಮಾಡುವಣ್ಣಗಳಿರಾ ಒಂದು ತುತ್ತು ಆಹಾರವನಿಕ್ಕಿರೇ’ ಎಂದದ್ದು. ದೇಹಾರಕ್ಕಿಂತ ಆಹಾರ ಮುಖ್ಯ. ಆ ಸಮಸ್ಯೆಯ ಪರಿಹಾರಕ್ಕೆ ವಚನಕಾರರು ತೋರಿಸಿದ ದಾರಿಗಳೆಂದರೆ ಕಾಯಕ-ದಾಸೋಹಗಳು. ಕಾಯಕ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಉತ್ಪಾದನೆಯ ದಾರಿಯಾದರೇ, ದಾಸೋಹ ಅದರ ವಿನಿಯೋಗದ ವಿಧಾನ.
ವಚನಕಾರರಿಗೂ ಹಿಂದೆ ’ದಾನ’ದ ಪರಿಕಲ್ಪನೆಯಿತ್ತು. ಅದು ನೀಡುವುದನ್ನು ಸೂಚಿಸಿದರೂ ಅದರಲ್ಲಿ ಕೊಡುವವನ ಕೈ ಮೇಲೆ, ತೆಗೆದುಕೊಳ್ಳುವವನದು ಕೆಳಗೆ. ಹೀಗಾಗಿ ಕೊಡುವವನಿಗೆ ಮನದಾಳದಲ್ಲಿಯಾದರೂ ಮೇಲರಿಮೆ. ತೆಗೆದುಕೊಳ್ಳವವನಿಗೆ ಕೀಳರಿಮೆ. ಕೊಡುವವನದು ಹೆಮ್ಮೆ. ತೆಗೆದುಕೊಳ್ಳುವವನದು ದೈನ್ಯ. ಈ ರೀತಿಯಲ್ಲಿ ಅದು ಮನುಷ್ಯರನ್ನು ವರ್ಗಗಳಾಗಿ ಮಾಡಲು ಸಹಕಾರಿಯಾಗಿತ್ತು. ಶರಣರು ಅದರ ಬದಲು ದಾಸೋಹದ ಪರಿಕಲ್ಪನೆಯನ್ನು ನೀಡಿದರು. ಇಲ್ಲಿ ಕೊಡುವುದು ಕರ್ತವ್ಯ. ಕೊಟ್ಟಾಗ ಕೃತಕೃತ್ಯಭಾವ. ತೆಗೆದುಕೊಳ್ಳುವವನು ಜಂಗಮ. ಅಂದರೆ ಕೇವಲ ಕಾವಿಧಾರಿಯಲ್ಲ. ಜೀವಂತಿಕೆಯ ಸಂಕೇತ. ಅವನದ್ದು ಸಮಾಜವನ್ನು ತಿದ್ದುವ ಕಾಯಕ. ಆದ್ದರಿಂದ ಅವನು ಪೂಜ್ಯ. ಇಂಥವನಿಗೆ ನೀಡುವುದು ದಾಸೋಹ.
ಅಂದರೆ ಕೊಡುವವನಿಗೆ ಕೃತಕೃತ್ಯ
ತೆಯುಂಟಾಗಬೇಕಾದರೆ ತೆಗೆದುಕೊಳ್ಳುವವನು ಪೂಜ್ಯನಾಗಿರಬೇಕು. ಅಂಥವನಿಗೆ ನೀಡಿದಾಗಲೇ ಸಾರ್ಥಕ್ಯ. ದಾಸೋಹದಲ್ಲಿ ನೀಡುವವನ ಕೈ ಮೇಲಲ್ಲ. ತೆಗೆದುಕೊಳ್ಳುವವನ ಕೈಕೆಳಗಲ್ಲ. ಬೇಡುವವನು ಜಂಗಮನಲ್ಲ-ಬೇಡಿಸಿಕೊಂಬುವವನು ಭಕ್ತನಲ್ಲ. ಈ ದಾಸೋಹದ ಪ್ರಕ್ರಿಯೆಯಲ್ಲಿ ’ದಾನ’ದ ಪರಿಕಲ್ಪನೆಯಲ್ಲಿರುವಂತೆ ಪಡೆಯುವವನ ಆತ್ಮಗೌರವಕ್ಕೆ ಭಂಗವಿಲ್ಲ.
ದಾಸೋಹ ಎಂದರೆ ಯಾವುದನ್ನು ಬೇಕಾದರೂ ನೀಡುವುದು. ಆದರೆ ಮನುಷ್ಯನ ಮೂಲಭೂತ ಅವಶ್ಯಕತೆ ಆಹಾರವಾದ್ದರಿಂದ ’ದಾಸೋಹ’ ಎಂದರೆ ಆಹಾರವನ್ನು ನೀಡುವುದು ಎಂಬ ಅರ್ಥ ಸಾಮಾನ್ಯವಾಯಿತು. ವಚನಕಾರರ ಕಾಲದಲ್ಲಿಯೂ ಈ ಅರ್ಥ ಜನಜನಿತವಾಗಿತ್ತು. ಅದಕ್ಕೇ ಬಸವಣ್ಣ ಉಣ್ಣುವ ಜಂಗಮಕ್ಕೆ ನೀಡದೆ ಉಣ್ಣದ ಲಿಂಗಕ್ಕೆ ನೀಡುವ ಮನೋಭಾವವನ್ನು ಟೀಕಿಸಿದ್ದು, ಈ ಪರಿಕಲ್ಪನೆ ಎಷ್ಟು ವ್ಯಾಪಕವಾಯಿತೆಂದರೆ ಮುಂದಿನ ಶತಮಾನಗಳಲ್ಲಿಯೂ ಶರಣರ ಅನುಯಾಯಿಗಳಲ್ಲಿ ಇದು ಅನುರಣಿಸಿತು. ’ಶೂನ್ಯ ಸಂಪಾದನೆ’ಯ ’ಪ್ರಭುದೇವರ ಆರೋಗಣೆ’ಯ ಪ್ರಸಂಗದಲ್ಲಿ ಇದರ ಆತ್ಯಂತಿಕ ಚಿತ್ರಣವಿದೆ.
ಹೀಗೆ, ಜೀವಿಗಳಿಗೆ ಅನ್ನ ನೀಡುವುದಕ್ಕೆ ಪ್ರಥಮ ಆದ್ಯತೆಯನ್ನು ವಚನಕಾರರು ನೀಡಿದ್ದರಿಂದಲೇ ಮುಂದೆ ಲಿಂಗಾಯತ ಮಠಗಳಲ್ಲಿ ದಾಸೋಹಕ್ಕೆ ಅಷ್ಟು ಮಾನ್ಯತೆ ಬಂದದ್ದು. ಮಠಗಳು ಬಯಸಿ ಬಂದವರಿಗೆ ಅನ್ನ ನೀಡುವ ಪರಿಪಾಠವನ್ನು ಮುಂದುವರಿಸಿಕೊಂಡು ಬರದೆ ಹೋಗಿದ್ದಿದ್ದರೆ ಸಮಾಜದ ಕೆಳವರ್ಗದವರು ವಿದ್ಯೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಅದೂ ಮಠಗಳಲ್ಲಿನ ದಾಸೋಹದ ಪರಿ ಶರಣರ ಕಾಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಯಿತು. ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ನೇರವಾಗಿ ಅನ್ನ ನೀಡಿದರೆ ಕೊಟ್ಟವನು -ತೆಗೆದುಕೊಂಡವನು ಮುಖಾಮುಖಿಯಾಗುತ್ತಾರೆ. ಪ್ರಾಮಾಣಿಕರಾಗಿದ್ದರೂ ಕೊಡುವವರ ಮನಸ್ಸಿನಲ್ಲಿ ಮೇಲರಿಮೆ ಬರಬಹುದು. ಪ್ರಭುದೇವರಿಗೆ ಆರೋಗಣೆಗಿಕ್ಕುವಾಗ ಬಸವಣ್ಣನ ಮನಸ್ಸಿನ ಯಾವುದೋ ಮೂಲೆಯಲ್ಲಿ ಇಂಥ ಅಹಂಕಾರವಿತ್ತು. ಚೆನ್ನಬಸವಣ್ಣನ ಮಾತುಗಳಿಂದ ಅದು ನಿವಾರಣೆಯಾಯಿತು ಎಂಬ ಚಿತ್ರ ಮೇಲೆ ಉದಾಹರಿಸಿದ ಪ್ರಸಂಗದಲ್ಲಿಯೇ ಇದೆ. ಆದರೆ ಮಠ ಎಂಬುದು ಒಂದು ಸಂಸ್ಥೆ: ಅಲ್ಲಿ ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ. ಹೀಗಾಗಿ ಯಾರೋ ಭಕ್ತಕೊಟ್ಟ ವಸ್ತು ಇಲ್ಲಿ ಮಠವೆಂಬ ಮಾಧ್ಯಮದ ಮೂಲಕ ಅವಶ್ಯಕತೆಯಿರುವ ವ್ಯಕ್ತಿಗೆ ಸಂದಾಯವಾಗುತ್ತದೆ. ಹೀಗಾಗಿ ಪಡೆದುಕೊಂಡವನ ಕೃತಜ್ಞತೆ ಮಠಕ್ಕೆ ಸಲ್ಲುತ್ತದೆ. ಆ ಮೂಲಕ ಮಠಕ್ಕೆ ನೀಡಿದವನಿಗೆ ಅದು ಸಲ್ಲಬೇಕು. ಹೀಗಾಗಿ ಕೊಟ್ಟವನು ತೆಗೆದುಕೊಂಡವನು ಮುಖಾಮುಖಿಯಾಗದೆಯೇ ದ್ರವ್ಯ ಇಲ್ಲಿ ಸದ್ವಿನಿಯೋಗವಾಗುತ್ತದೆ. ಭಕ್ತರ ತೊಡಗಿಕೊಳ್ಳುವಿಕೆಯಿಲ್ಲದೆ ಮಠಕ್ಕೆ ಅಸ್ತಿತ್ವವಿಲ್ಲವಾದ್ದರಿಂದ ನೀಡುವವನ ಅಹಂಕಾರಕ್ಕೆ ಇಲ್ಲಿ ಅವಕಾಶವಿಲ್ಲ. ಪಡೆಯುವವನ ಸ್ವಾಭಿಮಾನಕ್ಕೆ ಧಕ್ಕೆಯಿಲ್ಲ.
ಶ್ರೀ ಸಿದ್ಧಗಂಗಾ ಮಠ ಇಂಥ ಉನ್ನತ ಪರಂಪರೆಯ ಜೀವಂತ ಬಿಂದುಗಳಲ್ಲಿ ಒಂದು. ತನ್ನ ಅಮೋಘ ದಾಸೋಹಸಂಪದದಿಂದ ದೀನತೆಯ ಮುಜುಗರವಿಲ್ಲದೆ, ಸ್ವಾಭಿಮಾನಕ್ಕೆ ಊನವಾಗದಂತೆ ನೂರಾರು ವರ್ಷಗಳಿಂದ ಲಕ್ಷಾಂತರ ಜನರ ಹಸಿವನ್ನು ಇಂಗಿಸಿ, ವಿದ್ಯೆಯ ಬೆಳಕನ್ನು ಹಚ್ಚಿ ಮತ್ತು ಹಣತೆಗಳನ್ನು ಬೆಳಗಿಸಲು ಅನುವು ಮಾಡಿಕೊಟ್ಟಿದೆ. ಹಿಂದಿನ ಪರಿಸ್ಥಿತಿಗೆ ತಕ್ಕಂತೆ ಇದ್ದಿರಬಹುದಾದ ಅಲ್ಲಿನ ವ್ಯವಸ್ಥೆ ಆಧುನಿಕ ಜಗತ್ತಿಗೆ ಅನುಗುಣವಾಗಿ ಮಾರ್ಪಾಡುಗೊಂಡು ಕೆಳ ವರ್ಗದ ಜನತೆಯ ಬಾಳಿನಲ್ಲಿ ನಂದಾದೀವಿಗೆಯನ್ನು ಬೆಳಗಿಸಿದೆ. ಅನ್ನ ದಾಸೋಹದ ಮೂಲಕ ಆರಂಭಗೊಂಡಿರಬಹುದಾದ ಈ ಮಣಿಹ ಕಳೆದ ಶತಮಾನದಿಂದ ವಿದ್ಯಾ ದಾಸೋಹಕ್ಕೂ ವ್ಯಾಪಿಸಿದೆ. ಸೌಲಭ್ಯವಂಚಿತ ಹಳ್ಳಿಗಾಡು ಪ್ರದೇಶಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಅಕ್ಷರಸಂಸ್ಕೃತಿಯ ವಿಸ್ತರಣೆಗೆ ಅಪಾರ ಕೊಡುಗೆ ನೀಡಿದೆ. ಈ ವಿದ್ಯೆ ಕೇವಲ ಔಪಚಾರಿಕ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ತನ್ನ ಪುಸ್ತಕ ಪ್ರಕಟಣೆ ವಿಚಾರಮಂಥನ-ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಠವು ಜನರಲ್ಲಿ ತಿಳವಳಿಕೆಯ ಬೆಳಕನ್ನೂ ಹಂಚುತ್ತಿದೆ.
ಸಿದ್ಧಗಂಗಾ ಮಠವಿಲ್ಲದಿದ್ದರೆ ತುಮಕೂರು ಜಿಲ್ಲೆ ವಿದ್ಯೆಯ ವಿಷಯದಲ್ಲಿ ಬಹು ಹಿಂದೆ ಉಳಿದುಬಿಡುತ್ತಿದ್ದುದರಲ್ಲಿ ಸಂದೇಹವಿಲ್ಲ. ’ಶೂನ್ಯ ಸಂಪಾದನೆಗೆ’ ಅಂತಿಮ ರೂಪವನ್ನಿತ್ತ ಗೂಳೂರ ಸಿದ್ಧವೀರಣ್ಣೊಡೆಯನ ಜನ್ಮತಾಣಕ್ಕೆ ಸನಿಹವಾದ ಸಿದ್ಧಗಂಗೆಯು ಮಠದ ಮೂಲಕ ವಚನಕಾರರ ಅತ್ಯಂತ ಮಹತ್ವದ ಪರಿಕಲ್ಪನೆಯಾದ ದಾಸೋಹವನ್ನು ಅಖಂಡ ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ. ಈಗ ತುಮಕೂರು ವಿದ್ಯೆಯ ಕ್ಷೇತ್ರದಲ್ಲಿ ಕರ್ನಾಟಕದ ಒಂದು ಪ್ರಮುಖ ಕೇಂದ್ರವಾಗಿರುವುದರ ಹಿಂದೆ ಸಿದ್ಧಗಂಗಾ ಮಠದ ಕೊಡುಗೆ ಸಿಂಹಪಾಲಿನದು.
ಮಠ ಎಂಬುದು ಅಮೂರ್ತವಾದುದು ನಿಜ. ಆದರೆ ಇಂಥ ಅಮೂರ್ತತೆಗೆ ಮೌಲ್ಯದ ಚೌಕಟ್ಟು ಹಾಕಿ ಅದನ್ನು ಬೆಳೆಸುವುದು ಅಸಾಮಾನ್ಯ ದುಡಿಮೆಯನ್ನು ಬೇಡುವಂಥದ್ದು. ಕೆಲವು ಶತಮಾನಗಳ ಹಿಂದೆ ಬೀಜರೂಪದಲ್ಲಿ ನೆಲೆಗೊಂಡ ಈ ಮಠ ಈಗ ಮಹಾವಟವೃಕ್ಷವಾಗಿ ಬೆಳೆದಿರುವುದು ಆಕಸ್ಮಿಕವಾಗಿಯಲ್ಲ. ತಾನೇ ತಾನಾಗಿ ಒಂದು ಮಠ ಬೆಳೆಯಬಹುದಾದರೆ ಎಲ್ಲ ಮಠಗಳು ಹಾಗೆ ಬೆಳೆದಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬೀಜದಲ್ಲಿ ಮರವಾಗುವ ಶಕ್ತಿಯಿದ್ದರೂ ಅದು ಸಾಕಾರಗೊಳ್ಳುವುದು ಅದಕ್ಕೆ ಪೂರಕ ಪರಿಸರ ದೊರಕಿದಾಗ ಮಾತ್ರ. ಅಂತಹ ಪರಿಸರವೂ ತಾನಾಗಿ ಬರುವುದಲ್ಲ. ಶ್ರಮದಿಂದ ತರಬೇಕಾದದ್ದು. ತಾನು ನಿರ್ವಹಿಸುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಸಿದ್ಧಗಂಗಾಮಠವು ವ್ಯಾಪಕವಾಗಿ ಬೆಳೆದಿರುವುದಕ್ಕೆ ಕಾರಣ ಕಳೆದ ೭೫ಕ್ಕೂ ಹೆಚ್ಚಿನ ವರ್ಷಗಳಿಂದ ಅದರ ಕೈಹಿಡಿದು ನಡೆಸುತ್ತಿರುವ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಕರ್ತೃತ್ವಶಕ್ತಿ ಮತ್ತು ನಾಯಕತ್ವದ ನಿಸ್ವೃಹತೆಗಳು.
ಶ್ರೀಗಳು ಮಠಾಪತಿಗಳಾದ ಮೇಲೆ ಮಠವು ವಾಮನರೂಪಿ ಯಾಗಿದ್ದುದು ತ್ರಿವಿಕ್ರಮತ್ವವನ್ನು ಪಡೆಯಿತು. ಅದರ ಬಾಹುಗಳು ದೂರದೂರಕ್ಕೆ ಚಾಚಲು ಕಾರಣವಾಯ್ತು. ಜಿಲ್ಲೆಯ ಬಹುಭಾಗದ ಮೇಲೆ ಮಠದ ಮತ್ತು ಶ್ರೀ ಸ್ವಾಮಿಗಳವರ ಕರುಣಾಹಸ್ತ ಚಾಚಿಕೊಂಡಿದೆ. ಸ್ವತಃ ದೊಡ್ಡ ವಿದ್ವಾಂಸರೂ ಜ್ಞಾನಿಗಳೂ ಆದ ಶ್ರೀಗಳು ಮಾತನಾಡದೆಯೇ ಸುತ್ತಲಿನ ಜನರಲ್ಲಿ ಸಂದೇಶ ಬಿತ್ತಬಲ್ಲ ಚೈತನ್ಯರೂಪಿಗಳಾಗಿದ್ದಾರೆ. ದಾಸೋಹದ ಸಾಕಾರವಾಗಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ಕ್ಷೇತ್ರದ ಎಲ್ಲ ಮೂಲೆಗಳ ಮೇಲೂ ಕಣ್ಣಿಟ್ಟು ಅದರ ಸ್ವಾಸ್ಥ್ಯಕ್ಕೆ ಕಾರಣೀಭೂತರಾಗಿರುವ ಅವರು ಈ ಮಣಿಹಕ್ಕೆ ತಮ್ಮನ್ನು ತೊಡಗಿಸಿಕೊಂಡ ಮೊದಲಲ್ಲಿ ಹೇಗೆ ಕಾರ್ಯಶೀಲರಾಗಿದ್ದಿರಬೇಕು ಎಂಬುದನ್ನು ಊಹಿಸಿಕೊಳ್ಳ ಹೊರಟರೆ ನಮ್ಮ ಕಲ್ಪನೆಯೂ ತತ್ತರಿಸುತ್ತದೆ.
ಶತಮಾನದ ದೇವಪುರುಷರಿವರು
ಅದಕ್ಕೆ ಮುಖ್ಯ ಕಾರಣ ಶ್ರೀ ಶಿವಕುಮಾರಸ್ವಾಮಿಗಳವರು. ಪವಾಡವೆಂದರೇನು? ಮಾನವರು ಮಾಡಲು ಸಾಧ್ಯವಿಲ್ಲದ ಕಾರ್ಯಗಳನ್ನು ಮಾಡುವುದು ಎಂಬುದು ಸಾಮಾನ್ಯ ತಿಳಿವಳಿಕೆ. ದೇವಮಾನವರನ್ನು ಪವಾಡ ಪುರುಷರು ಎಂದು ಕರೆಯಲಾಗುತ್ತದೆ. ಆದರೆ ವಚನಕಾರರು ಇಂಥ ನಂಬಿಕೆಗಳನ್ನು ಅಲ್ಲಗಳೆದರು. ಬಸವಣ್ಣನೇ ಪವಾಡಗಳನ್ನು ’ಹಗರಣಿಗನ ಚೋಹ’ ಗಳೆಂದು ಕರೆಯುತ್ತಾನೆ. ಅಂದರೆ ನಾಟಕದಲ್ಲಿನ ಪಾತ್ರಗಳು ಸುಳ್ಳು ಎಂಬುದು ಇಂಗಿತಾರ್ಥ. ಆದರೆ ಕಾವ್ಯಗಳಲ್ಲಿ ಬಸವಣ್ಣನದೆಂದು ಆರೋಪಿಸಲಾದ ಪವಾಡಗಳನ್ನು ವಿಶ್ಲೇಷಿಸಿದರೆ ಕವಿಗಳು ವರ್ಣಿಸುವ ಅನೇಕ ಪವಾಡಗಳು ಸಾಂಕೇತಿಕವಾದವುಗಳೆಂಬುದು ಮನವರಿಕೆಯಾಗುತ್ತದೆ. ಠಕ್ಕರು ಕಟ್ಟಿಕೊಂಡಿದ್ದ ಬದನೆಕಾಯಿಗಳನ್ನು ಬಸವಣ್ಣ ಲಿಂಗಗಳಾಗಿ ಮಾಡಿದನೆಂದರೆ ಏನರ್ಥ? ಕಾಯಿಗಳನ್ನು ಕಲ್ಲುಗಳನ್ನಾಗಿ ಮಾಡಿದನೆಂದೆ? ಅಲ್ಲ, ತನ್ನ ಮಾರ್ಗವನ್ನು ಅಲ್ಲಗಳೆಯುತ್ತಿದ್ದವರೂ ತನ್ನ ಅನುಯಾಯಿಗಳಾಗುವಂತೆ ತನ್ನ ವರ್ಚಸ್ಸಿನಿಂದಾಗಿ ಮನಃಪರಿವರ್ತನೆ ಮಾಡಿದ ಎಂದು. ಅದು ಸಾಧ್ಯವಾದದ್ದು ಬಸವಣ್ಣನ ವ್ಯಕ್ತಿತ್ವದಿಂದಾಗಿ. ಆ ಅರ್ಥದಲ್ಲಿಯೇ ನಾನು ಸಿದ್ಧಗಂಗಾ ಮಠದಲ್ಲಿ ಪವಾಡ ನಡೆದಿದೆ ಎಂದದ್ದು. ಅದರ ಚಾಲಕ ಶಕ್ತಿಯಾಗಿ ಅಸಂಖ್ಯ ಜೀವರಲ್ಲಿ ಭರವಸೆಯ ಬೆಳಕನ್ನು ಬಿತ್ತಿರುವ ಈ ಮಹಾಬೆಳಕು ಮಾಡಿರುವುದು ಪವಾಡವಲ್ಲದೆ ಇನ್ನೇನು?
ನಿರ್ಲಕ್ಷ್ಯ ನಮ್ಮ ನಮ್ಮ ಸಮುದಾಯದ ಬಗೆಗಿರುವ ನಿರಭಿಮಾನ ಮತ್ತು ನಮ್ಮ ಆಸಕ್ತಿಯೆಲ್ಲ ದೂರದ ಅನ್ಯಸಮುದಾಯಗಳಲ್ಲಿ (’ಅಲ್ಲಿರುವುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ’ ಎಂಬ ಭಾವ), ‘ಅವರಿಗೆ’ ಯಾವ ದುರಂತವಾದರೇನು ‘ನಮ್ಮಸ್ವಾರ್ಥ ಪೂರೈಸಿದರಾಯ್ತು ಎಂಬ ಸಂಕುಚಿತ ಭಾವ, ದುಡಿಯದೇ ಬಂದುದನ್ನು ಕಬಳಿಸುವ ನೀಚತನ ಮತ್ತು ಹೊಣೆಗಾರಿಕೆಯನ್ನು ಪೂರೈಸದೆ ಹಕ್ಕನ್ನು ಹಕ್ಕೊತ್ತಾಯವನ್ನಾಗಿಸುವ ಆತುರ ಮತ್ತು ಹಠ-ಇವೆಲ್ಲವೂ ಸಮಾಜದ ಅಸ್ವಾಸ್ಥ್ಯಕ್ಕೆ ಫಲವಾದ ಭೂಮಿಕೆಯನ್ನು ಸಿದ್ಧಗೊಳಿಸುತ್ತಲಿವೆ ಅಥವಾ ಅಸ್ವಾಸ್ಥ್ಯ ಭಾಗಗಳೇ ಆಗಿರುತ್ತವೆ ಎಂದರೂ ತಪ್ಪಿಲ್ಲ.
ಒಂದು ಕಾಲದಲ್ಲಿ ಕಲ್ಲಿನ ಗುಹೆಯಾಗಿದ್ದ ಶ್ರೀ ಸಿದ್ಧಗಂಗಾ ಕ್ಷೇತ್ರವನ್ನು ವಿಶ್ವವೇ ಅಚ್ಚರಿಯಿಂದ ನೋಡುವ ಮಟ್ಟಕ್ಕೆ ಬೆಳೆಸಿದ್ದರ ಹಿಂದೆ ಶ್ರೀಗಳ ಶ್ರಮವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಠದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಕಾಲದಲ್ಲೂ ಶ್ರೀಗಳು ಅಭಿವೃದ್ಧಿ ಯೋಜನೆಗಳಿಗೆ ಹಿಂಜರಿಯಲಿಲ್ಲ. ಸಂಘ, ಸಂಸ್ಥೆಗಳ ಸ್ಥಾಪನೆಯತ್ತ ಮುನ್ನುಗಿದರು ಎಂದರೆ ನಂಬಲು ಸ್ವಲ್ಪ ಕಷ್ಟವಾಗಬಹುದು.
ಹೌದು, ಎಣ್ಣೆ-ಬತ್ತಿಗೂ ಕಾಸಿಲ್ಲದ ಕಾಲದಲ್ಲಿ ಪೀಠವೇರಿದ ಶ್ರೀಗಳು ಅಪಾರ ಸಾಧನೆ ಮಾಡಿದ್ದರೂ ಕೂಡ ಇವತ್ತಿಗೂ ಕೈಕಟ್ಟಿ ಕುಳಿತಿಲ್ಲ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರ ಮಾತಿಗೆ ಪುಷ್ಟಿಕೊಡುವಂತಿದೆ ಶ್ರೀಮಠದ ಶೈಕ್ಷಣಿಕ ಸಾಧನೆಗಳು. ೧೯೧೭ರಲ್ಲಿ ಉದ್ದಾನ ಶಿವಯೋಗಿಗಳವರಿಂದ ಸಂಸ್ಕೃತ ಮತ್ತು ವೇದ ಪಾಠಶಾಲೆ ಸ್ಥಾಪನೆಯಾಯಿತು. ಶ್ರೀ ಶಿವಕುಮಾರ ಮಹಾಸ್ವಾಮಿಗಳು ೧೯೩೭ರಲ್ಲಿ ಉದ್ದಾನ ಶಿವಯೋಗಿಗಳ ಸಮ್ಮುಖದಲ್ಲಿ ಅದನ್ನು ಕಾಲೇಜಾಗಿ ಪರಿವರ್ತಿಸಿದರು. ಇಂದು ಸುಮಾರು ೨೫೦೦-೩೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಕೃತ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಒಂದೇ ಕಡೆ ಊಟ, ವಸತಿಗಳ ಸೌಕರ್ಯಗಳೊಡನೆ ತರ್ಕ, ವ್ಯಾಕರಣ, ಅಲಂಕಾರ, ಶಕ್ತಿ, ವಿಶಿಷ್ಟಾದ್ವೈತ ವೇದಾಂತ ವಿಭಾಗಗಳಲ್ಲಿ ವಿದ್ವತ್ ಮಟ್ಟದವರೆಗೆ ಓದಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಜತೆಗೆ ಕನ್ನಡ ಪಂಡಿತ ಪರೀಕ್ಷಾ ವಿಭಾಗವೂ ಈ ಸಂಸ್ಕೃತ ಕಾಲೇಜಿನ ಅಂಗವಾಗಿ ಉದಯಗೊಂಡಿದೆ. ಮೈಸೂರಿನ ಕನ್ನಡ ಪಂಡಿತ ಬಿ.ಎ ಇಂಟಿಗ್ರೇಟೆಡ್ ಶಾಲೆಯನ್ನು ಸರಕಾರ ಮುಚ್ಚಿದೆ. ಹೀಗಾಗಿ ಇಲ್ಲಿನ ಕನ್ನಡ ಪಂಡಿತ ಪರೀಕ್ಷಾ ವಿಭಾಗ ಇಡೀ ರಾಜ್ಯವನ್ನು ಪ್ರತಿನಿಧಿಸುತ್ತಿದೆ. ನೂರಾರು ಪಂಡಿತರನ್ನು ರಾಜ್ಯದ ಹೈಸ್ಕೂಲು ಶಿಕ್ಷಕ ಸ್ಥಾನಕ್ಕೆ ಒದಗಿಸಿದೆ. ಜೂನಿಯರ್ ಕಾಲೇಜು, ಹೈಸ್ಕೂಲ್, ಸಂಗೀತ ಶಿಕ್ಷಣ ಶಾಲೆ, ಕುರುಡರ ಶಾಲೆ, ಉಪಾಧ್ಯಾಯ ತರಬೇತಿ ಕೇಂದ್ರ (ಟಿ.ಸಿ.ಎಚ್.), ಜ್ಯೋತಿಷ್ಯ ಪಾಠಶಾಲೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ...ಮೊದಲಾದವುಗಳಿಗೆ ಶ್ರೀ ಮಠ ಆಶ್ರಯ ತಾಣವಾಗಿದೆ. ಇಲ್ಲಿನ ವಿದ್ಯಾರ್ಥಿಗಳೆಲ್ಲ ಶ್ರೀ ಮಠದಲ್ಲಿಯೇ ವಸತಿಯ ಸೌಕರ‍್ಯ ಹೊಂದಿದ್ದಾರೆ. ಶ್ರೀಗಳವರು ಖುದ್ದಾಗಿ ಈ ಮಕ್ಕಳನ್ನೆಲ್ಲ ಪಾಲನೆ ಪೋಷಣೆ ಮಾಡುತ್ತಾರೆ. ತೀಡಿ, ತಿದ್ದುತ್ತಾರೆ.
ಉದ್ದಾನ ಶಿವಯೋಗಿಗಳವರ ಕಾಲದಲ್ಲಿ, ಅಂದರೆ ೧೯೪೦-೪೧ರಲ್ಲಿ ಈ ಕ್ಷೇತ್ರದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೬೦ ಮಾತ್ರ ಇತ್ತು. ಕಾಲಕಾಲಕ್ಕೆ ಆ ಸಂಖ್ಯೆ ಗಣನೀಯವಾಗಿ ಬೆಳೆದು, ಇಂದು ಆ ಸಂಖ್ಯೆ ಸುಮಾರು ೮ಸಾವಿರಕ್ಕೆ ಏರಿದೆ. ತುಮಕೂರಿನಲ್ಲಿ ೧೯೪೪ರಲ್ಲಿಯೇ ಆರಂಭವಾದ ಸಿದ್ಧಗಂಗಾ ಹೈಸ್ಕೂಲ್, ಆವತ್ತಿನಿಂದ ಈವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.
ವಿದ್ಯಾಭ್ಯಾಸ ಕೇವಲ ನಗರ ಪ್ರದೇಶಕ್ಕೆ ಸೀಮೀತವಾಗಬಾರದು. ಹಳ್ಳಿ ಮೂಲೆಯಲ್ಲೂ ಶಾಲೆಗಳು ಆರಂಭವಾಗಬೇಕು ಎಂಬ ಸಂಕಲ್ಪದೊಂದಿಗೆ ಶ್ರೀಗಳು ಶೈಕ್ಷಣಿಕ ಕ್ರಾಂತಿಗೆ ಕೈ ಹಾಕಿದರು. ೧೯೬೨ರಿಂದಲೇ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆ ಆರಂಭಿಸಲು ಶುರುವಿಟ್ಟರು. ಹೌದು, ಅದೊಂದು ಕ್ರಾಂತಿಯೇ ಸರಿ. ಅದರ ಫಲವೆಂಬಂತೆ ಇವತ್ತು ೫೫ ಪ್ರೌಢ ಶಾಲೆಗಳಿಗೆ ಮಠ ಆಸರೆಯಾಗಿದೆ.
ಭಿನ್ನ ಭೇದವಿಲ್ಲ
ಶ್ರೀ ಮಠದ ಯಾವೊಂದು ವಿದ್ಯಾಸಂಸ್ಥೆಗೂ ಈವರೆಗೆ ಜಾತಿಯ ಸೋಂಕು ತಟ್ಟಿಲ್ಲ. ಇಲ್ಲಿನ ವಿದ್ಯಾರ್ಥಿಗಳನ್ನು ಯಾವ ಜಾತಿಯವರು ಎಂದು ಪ್ರಶ್ನಿಸುವ ಪ್ರಮೇಯವೇ ಬರುವುದಿಲ್ಲ. ಬಹುಶಃ ಅದೇ ಕಾರಣಕ್ಕಾಗಿ ಶ್ರೀಕ್ಷೇತ್ರ ಇವತ್ತು ಸಮಾಜದಲ್ಲಿ ಮಾದರಿ ಸ್ಥಾನ ಗಳಿಸಿರಬಹುದು. ೧೯೮೦ರಲ್ಲಿ ಸುಮಾರು ೪೨ ಜಾತಿಯ ೩೮೦೦ ವಿದ್ಯಾರ್ಥಿಗಳಿಗೆ ಮಠ ಆಶ್ರಯ ನೀಡಿರುವುದು ಇವತ್ತಿಗೂ ದಾಖಲೆಯಾಗಿಯೇ ಉಳಿದಿದೆ. ’ಅನ್ನ ದಾಸೋಹ, ಜ್ಞಾನ ದಾಸೋಹಗಳು ಮಾತ್ರ ಮಠದ ಗುರಿ ಹೊರತು ಒಂದು ಜಾತಿಯನ್ನು, ಪಂಗಡವನ್ನು ನಿರ್ಮಿಸುವುದು ನಮ್ಮ ಧ್ಯೇಯವಲ್ಲ ಎಂಬ ಶ್ರೀಗಳ ಮಾತನ್ನು ಮಠದ ಎಲ್ಲ ಸಂಸ್ಥೆಗಳು ಆಜ್ಞೆಯನ್ನಾಗಿ ಸ್ವೀಕರಿಸಿವೆ.
ಶ್ರೀ ತೋಂಟದಾರ್ಯ ವಿದ್ಯಾರ್ವನೀ ಸಭಾ
ಶೈಕ್ಷಣಿಕ ಸಂಸ್ಥೆಗಳ ಜತೆಗೆ ಹತ್ತು ಹಲವು ಸಂಘಗಳ ತವರುಮನೆಯಾಗಿ ಮಠ ಕಾರ್ಯನಿರ್ವಹಿಸುತ್ತಿದೆ. ಅಂತಹ ಸಾಲಿನಲ್ಲಿ ಸಿಗುವುದು ೧೯೩೮ರಲ್ಲಿ ಸ್ಥಾಪಿತವಾದ ಈ ಸಂಘ. ವಿದ್ಯಾರ್ಥಿಗಳಿಗಾಗಿ ರೂಪಿತವಾಗಿರುವ ಈ ಸಂಘದಲ್ಲಿ ಲೇಖನ, ಭಾಷಣ, ಕಾವ್ಯವಾಚನ, ವಚನ ಸ್ಪರ್ಧೆಗಳನ್ನೇರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಅರಳಿಸಲು ಪ್ರಯತ್ನ ಇಂದಿಗೂ ಮುಂದುವರೆದಿದೆ.
ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿ
ಗುಬ್ಬಿ ವೀರಣ್ಣನಂಥ ಕಲಾವಿದರಿಗೆ ಜನ್ಮಕೊಟ್ಟ ಊರಲ್ಲಿ ಒಂದು ನಾಟಕ ಮಂಡಳಿ ಇಲ್ಲದೇ ಹೋದರೆ ಹೇಗೆ ಸ್ವಾಮಿ? ಅನ್ನುವವರಿಗೆ ಉತ್ತರವೆಂಬಂತೆ ಮಠದ ಆವರಣದಲ್ಲಿ ನಾಟಕ ಮಂಡಳಿಯೊಂದು ಅರಳಿದೆ. ಪ್ರತಿಭಾವಂತರಾದ ಅಧ್ಯಾಪಕ, ಸಿಬ್ಬಂದಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕಲೆಯನ್ನು ಸದುಪಯೋಗಮಾಡಿಕೊಳ್ಳುವ ದೃಷ್ಟಿಯಿಂದ ಜನ್ಮ ತಾಳಿದ ಈ ಮಂಡಳಿ ಶ್ರೀಮಠದ ಜಾತ್ರೆಯ ಕಾಲದಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಅನೌಪಚಾರಿಕ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಪಾತ್ರವಹಿಸಿದೆ.
ಜನರಲ್ಲಿ ಧಾರ್ಮಿಕ ಹಾಗೂ ರಾಷ್ಟ್ರೀಯ ಮನೋಭಾವವನ್ನು ರೂಢಿಸಲು ಶ್ರಮಿಸುತ್ತಿದೆ. ಮಂಡಳಿಯಿಂದ ಪ್ರದರ್ಶಿತವಾಗಿರುವ ಭಕ್ತ ಮಾರ್ಕಂಡೇಯ, ಎಚ್ಚಮ ನಾಯಕ, ರಾಜಶೇಖರ ವಿಲಾಸ ಮತ್ತು ಜಗ ಜ್ಯೋತಿ ಬಸವೇಶ್ವರ ನಾಟಕಗಳು ಜನ ಮಾನಸದಲ್ಲಿ ಅಚ್ಚಾಗಿಬಿಟ್ಟಿವೆ. ಅದರಲ್ಲೂ ಜಗಜ್ಯೋತಿ ಬಸವೇಶ್ವರ ನಾಟಕವಂತೂ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಇದುವರೆವಿಗೂ ಸುಮಾರು ೮೦೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮಂಡಳಿ ಪರಿಪೂರ್ಣ ಸ್ವಾವಲಂಬಿಯಾಗಿದ್ದು ರಂಗ ಸಲಕರಣೆಗಳನ್ನು ಹೊಂದಿದೆ.
ಶ್ರೀ ಸಿದ್ಧಲಿಂಗೇಶ್ವರ ಹಾಗೂ ಶ್ರೀ ಸಿದ್ಧಗಂಗಾ ಪ್ರಕಾಶನ
ಸಾಹಿತ್ಯ ಪ್ರಕಾಶನ ಕ್ಷೇತ್ರದಲ್ಲೂ ಶ್ರೀಮಠದ ಪಾಲಿದೆ. ಧಾರ್ಮಿಕ, ಅಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಚಾರಗಳನ್ನೊಳಗೊಂಡ ಗ್ರಂಥಗಳನ್ನು ಪ್ರಕಟಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಈ ಪ್ರಕಾಶನ ’Sಡಿi ಃಚಿsಚಿvesತಿಚಿಡಿಚಿ ಚಿಟಿಜ his ಛಿoಟಿಣemಠಿoಡಿಚಿಡಿie’ ಎಂಬ ಇಂಗ್ಲಿಷ್ ಗ್ರಂಥ ಮತ್ತು ಅದರ ಕನ್ನಡಾನುವಾದ ‘ಶ್ರೀ ಬಸವೇಶ್ವರ ಮತ್ತು ಅವರ ಸಮಕಾಲೀನರು’ ಎಂಬುದನ್ನೂ, ‘ಸುಭಾಷಿತ ಕುಸುಮಾಂಜಲಿ’ ಎಂಬ ಸಂಕಲನ ಗ್ರಂಥವನ್ನೂ ‘ಕರ್ಮಯೋಗಿ ಸಿದ್ಧರಾಮ’ ಎಂಬ ನಾಟಕ ಮತ್ತು ‘ಪೌರುಷ ಪಾಂಚಜನ್ಯ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದೆ. ಶ್ರೀ ಸಿದ್ಧಗಂಗಾ ಪ್ರಕಾಶನದ ಹೆಸರಿನಲ್ಲಿ ‘ಕರ್ತಾರನ ಕಮ್ಮಟ’, ‘ಶಿವಯೋಗಿ ಉದ್ದಾನ ಯತೀಶ್ವರ ’, ‘ವಚನಗಂಗಾ’ ಮತ್ತು ‘ವಚನಬಿಲ್ವ ಶಟಸ್ಥಲಶಿಲ್ಪಿ ಚನ್ನಬಸವಣ್ಣ ಕೃತಿಗಳನ್ನು ಪ್ರಕಟಿಸಿದೆ.
ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ
ಶ್ರೀ ಮಠದ ಆಶ್ರಯ ಪಡೆದು ವಿದ್ಯಾವಂತರಾಗಿ ದೇಶ ವಿದೇಶಗಳ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಮಾತೃಸಂಸ್ಥೆಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ೧೯೫೪ನೇ ಅಕ್ಟೋಬರ್ ೪ ರಂದು ಈ ಸಂಘವನ್ನು ಸ್ಥಾಪಿಸಿದ್ದಾರೆ.
ಅಂದಿನಿಂದ ಸಂಘವು ಪ್ರಗತಿಪಥದಲ್ಲಿ ಮುನ್ನಡೆದು ಗಣನೀಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ. ಜಾತ್ರೆಯ ಕಾಲದಲ್ಲಿನ ’ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ’ ಈ ಸಂಘದ ಕೊಡುಗೆಯಾಗಿದೆ. ಸಿದ್ಧಗಂಗಾ ಮಾಸಪತ್ರಿಕೆ ಕೂಡ ಸಂಘದ ಕೊಡುಗೆಯೇ. ಶ್ರೀ ಶ್ರೀಗಳವರ ಪೀಠಾರೋಹಣ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪ್ರಕಟಿಸಿದ ’ಸಿದ್ಧಗಂಗಾಶ್ರೀ’ ಬೃಹತ್ ಅಭಿನಂದನಾ ಗ್ರಂಥದಲ್ಲಿ ಸಂಘದ ಪಾಲು ಅಪಾರ. ಇನ್ನು ವಜ್ರಮಹೋತ್ಸವದ ಸಂಸ್ಮರಣವಾಗಿ ಮೂಡಿಬಂದ ’ದಾಸೋಹ ಸಿರಿ’ ಮಹಾಸಂಪುಟ ಪ್ರಕಟಣೆಯೂ ಸಂಘದ ಸೇವೆಗೆ ಸಾಕ್ಷಿಯಾಗಿದೆ. ಬೆಂಗಳೂರು, ಮೈಸೂರುಗಳಲ್ಲಿರುವ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಈ ಸಂಘದ ಶಾಖೆ ಸ್ಥಾಪಿಸಿದ್ದಾರೆ.
ಸಿದ್ಧಗಂಗಾ ಮಾಸಪತ್ರಿಕೆ
ಇದು ಶ್ರೀಮಠದ ಮುಖವಾಣಿ. ಆದರೂ ಧಾರ್ಮಿಕ ಶಿಕ್ಷಣ ಪ್ರಸಾರ, ಸಾಮಾಜಿಕ ಆರೋಗ್ಯ, ನೈರ್ಮಲ್ಯಗಳ ಸಾಧನೆಯೇ ಪತ್ರಿಕೆಯ ಜೀವಾಳ. ೧೯೬೫ರಲ್ಲಿ ತ್ರೈಮಾಸಿಕವಾಗಿ ಪ್ರಾರಂಭವಾದ ’ಸಿದ್ಧಗಂಗಾ’ ನಂತರ ಮಾಸಿಕವಾಗಿ ಮುನ್ನಡೆದು ಬೆಳ್ಳಿಹಬ್ಬ ಆಚರಿಸಿಕೊಂಡಿದೆ. ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸಿಯನ್ನೂ ಗಳಿಸಿದೆ. ಅಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೇಖನಗಳ ಜತೆಗೆ ಪೂಜ್ಯ ಶ್ರೀಗಳವರ ಶ್ರೀವಾಣಿಯೊಂದಿಗೆ, ಶ್ರೀಗಳವರ ಕಾರ್ಯಕ್ರಮಗಳ ಪರಿಚಯದೊಂದಿಗೆ, ಶ್ರೀ ಕ್ಷೇತ್ರವಾರ್ತೆಯನ್ನೊಳಗೊಂಡು ಪ್ರತಿ ತಿಂಗಳೂ ಪ್ರಕಟವಾಗುತ್ತಿದೆ.
ವಸ್ತು ಪ್ರದರ್ಶನ
ಶಿವರಾತ್ರಿಯ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಕಾಲದಲ್ಲಿ ೧೫ ದಿನಗಳ ಕಾಲ ಈ ವಸ್ತು ಪ್ರದರ್ಶನ ನಡೆಯುತ್ತದೆ. ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಾನಾ ಇಲಾಖೆಗಳು ಹಾಗೂ ಖಾಸಗಿ ಉದ್ಯಮಿಗಳೂ ತಮ್ಮ ಸಂಸ್ಥೆಗಳ ಮಳಿಗೆಗಳನ್ನೂ ಇಡುತ್ತಾರೆ.
ಆಚರಣೆ ಹಾಗೂ ಸಮ್ಮೇಳನಗಳು
ಅಧ್ಯಾತ್ಮದ ಜತೆಗೆ ಸಾಹಿತ್ಯದ ಘಮವೂ ಇದೆ, ವಿಜ್ಞಾನದ ಲೇಪವೂ ಇದೆ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಠದಲ್ಲಿ ನಡೆದಿರುವ, ನಡೆಯುತ್ತಿರುವ ಶಿಬಿರ, ಸಮ್ಮೇಳನಗಳು. ೧೯೬೩ರಲ್ಲಿ ಪ್ರಸಿದ್ಧ ವಿದ್ವಾಂಸರಾದ ಡಾ. ರಂ. ಶ್ರೀ ಮುಗಳಿ ಅವರ ಅಧ್ಯಕ್ಷತೆಯಲ್ಲಿ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನವು ನಡೆದಿದೆ. ೧೯೬೪ರಲ್ಲಿ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನ ಹಾಗೂ ೧೯೭೬ರಲ್ಲಿ ಅಖಿಲ ಕರ್ನಾಟಕ ದ್ವಿತೀಯ ಸಂಸ್ಕೃತ ಸಮ್ಮೇಳನ ಜರುಗಿದೆ. ೧೯೮೫ರಲ್ಲಿ ಇಲಕಲ್ ಶ್ರೀ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಶರಣ ಸಿದ್ಧಾಂತ ವಿದ್ಯಾಪೀಠದ ವತಿಯಿಂದ ಒಂದು ವಾರದ ಶಿವಾನುಭವ ತರಬೇತಿ ಶಿಬಿರ ನಡೆದಿತ್ತು. ಜತೆಗೆ ಪ್ರತಿವರ್ಷ ಸಂಕ್ರಾಂತಿಯಂದು ಪರಮಪೂಜ್ಯ ಶ್ರೀ ಆಟವೀಸ್ವಾಮಿಗಳ ಹಾಗೂ ಪರಮಪೂಜ್ಯ ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳ ಪುಣ್ಯಾರಾಧನೆ ಹಾಗೂ ಗ್ರಾಮಾಂತರ ಬಸವ ಜಯಂತಿ ವಾರ್ಷಿಕ ಸಮಾರೋಪ ಸಮಾರಂಭಗಳು ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತವೆ.
ಅದ್ಧೂರಿ ನವರಾತ್ರಿ ಆಚರಣೆ ಮಠದ ವೈಶಿಷ್ಟ್ಯಗಳಲ್ಲೊಂದು. ಶ್ರಾವಣಮಾಸದ ವಿಶೇಷ ಸಂದರ್ಭಗಳಲ್ಲಿ ಕೀರ್ತನೆ, ಶರಣರ ಪುರಾಣ, ಪ್ರವಚನಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಪ್ರತಿ ಹುಣ್ಣಿಮೆಯಂದು ನಡೆವ ಶೂನ್ಯ ಸಂಪಾದನೆ ಪ್ರವಚನ ಕಾರ್ಯಕ್ರಮ ನಿರಂತರವಾಗಿ ನಡೆದು ಬರುತ್ತಿದೆ ಇವೆಲ್ಲವೂ ಮತ್ತಷ್ಟು ಕಾಲ ಹೀಗೆ ಮುಂದುವರೆಯಲಿ ಮತ್ತು ಇವೆಲ್ಲವೂ ಬೇರೆಲ್ಲಾ ಮಠ ಮಾನ್ಯಗಳಿಗೆ ಮಾದರಿಯಾಗಲಿ ಅಲ್ಲವೇ....?

No comments:

Post a Comment

ಹಿಂದಿನ ಬರೆಹಗಳು