Friday, June 4, 2010

ಈ ಸಾವು ನ್ಯಾಯವೇ?

ಮಂಗಳೂರಿನಲ್ಲಿ ನಡೆದ ದುಬಾಯಿ - ಮಂಗಳೂರು ನಡುವೆ ಸಂಚರಿಸುವ ಏರ್ ಇಂಡಿಯಾ ವಿಮಾನದ ಅಪಘಾತ ಎಂತಹವರ ಮನಸ್ಸನ್ನೂ ನೋಯಿಸುವಂತಹದ್ದು. ಹಲವಾರು ಕನಸುಗಳನ್ನು ಹೊತ್ತು ಊರಿಗೆ ಹಿಂದಿರುಗುತ್ತಿದ್ದ ಅನಿವಾಸಿ ಭಾರತೀಯರು ಊರು ತಲುಪಿದರೂ ಮನೆ ತಲುಪಲಾಗದೆ ದುರಂತದ ಬೆಂಕಿಯಲ್ಲಿ ಬೆಂದು ತಮ್ಮವರಿಗೂ ತಮ್ಮ ಗುರುತು ಸಿಗಲಾರದಂತೆ ಸುಟ್ಟು ಕರಕಲಾಗಿ ಹೋಗಿದ್ದರು.
ಹೇಳಿ ಕೇಳಿ ಮಂಗಳೂರು ವಿಮಾನ ನಿಲ್ದಾಣ ಅಷ್ಟೇನೂ ಸುರಕ್ಷಿತವಲ್ಲದ ಬೆಟ್ಟ ಗುಡ್ಡಗಳ ನಡುವೆ ನಿರ್ಮಿಸಿದ ಕಿರಿದಾದ ರನ್ ವೇ ಯನ್ನು ಒಳಗೊಂಡ ಅಪಾಯಕಾರಿ ವಿಮಾನ ನಿಲ್ದಾಣ. ಇದು ಅಲ್ಲಿ ವಿಮಾನದ ಮೂಲಕ ಬಂದಿಳಿದವರಿಗೆ ಸಾಮಾನ್ಯವಾಗಿ ಅನುಭವವಾಗಿರುತ್ತದೆ. ವಿಮಾನ ಇಳಿಯುತ್ತಿದ್ದಂತೆ ಕಾಣುವ ಬೆಟ್ಟಗುಡ್ಡಗಳನ್ನೊಳಗೊಂಡ ವಿಮಾನ ನಿಲ್ದಾಣದ ನೋಟ ಪ್ರಯಾಣಿಕರ ಎದೆ ಜುಂ ಎನಿಸುತ್ತದೆ. ವಿಮಾನ ಭೂಸ್ಪರ್ಶವಾಗುತ್ತಿದ್ದಂತೆ ಅಲ್ಲಿ ಹಾಕುವ ಬ್ರೇಕ್ ಒಮ್ಮೆಲೇ ವಿಮಾನದ ಒಳಗಿರುವ ಪ್ರಯಾಣಿಕರನ್ನು ಎತ್ತಿನಗಾಡಿಯ ಪ್ರಯಾಣದ ನೆನಪಿಗೆ ಕೊಂಡು ಹೋಗುತ್ತದೆ. ಬ್ರೇಕ್ ಹಾಕುವಾಗ ವಿಮಾನದ ಒಳಗೆ ಅಲುಗಾಡುವ ಪರಿ ಅಂತಹದ್ದು. ಇದು ಈ ರನ್ ವೇ ಎಷ್ಟು ಅಪಾಯಕಾರಿ ಎಂಬುವದನ್ನು ಪ್ರಾಯೋಗಿಕವಾಗಿಯೇ ನಮ್ಮ ಮುಂದೆ ತೆರೆದಿಡುತ್ತದೆ. ನನ್ನ ಅನುಭವದ ಪ್ರಕಾರ ನಾನು ಅಬುಧಾಬಿ, ಶಾರ್ಜಾ, ಬೆಂಗಳೂರು, ಮುಂಬೈ, ರಿಯಾದ್, ತಬೂಕ್, ಮಂಗಳೂರು ವಿಮಾನ ನಿಲ್ದಾಣಗಳ ರನ್ ವೇ ಗಳಲ್ಲಿ ವಿಮಾನದ ಮೂಲಕ ಇಳಿದಿದ್ದೇನೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಗುವಂತಹ ಅನುಭವವೇ ಬೇರೇ.
ನನ್ನ ಪ್ರಕಾರ ಇದು ನನ್ನ ಒಬ್ಬನ ಅನುಭವವಲ್ಲ. ಸಾಧಾರಣ ಪ್ರಯಾಣಿಕರಿಗೆ ಇದರ ಅನುಭವವಾಗಿರುತ್ತದೆ. ಮೊನ್ನೆ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಮುಂಬೈ ಮೂಲದ ಗಗನ ಯಾತ್ರಿ ಈ ನಿಲ್ದಾಣದ ಅಪಾಯಕಾರಿ ರನ್ ವೇ ಬಗ್ಗೆ ತನ್ನ ಪೋಷಕರಲ್ಲಿ ಹೇಳಿ ಇಲ್ಲಿ ವಿಮಾನದ ಲ್ಯಾಂಡಿಂಗ್ ಮೊದಲು ಗಗನ ಸಖಿಯರಾದ ನಾವು ವಿಮಾನದ ಸುರಕ್ಷಿತ ಲ್ಯಾಂಡಿಂಗ್ ಗಾಗಿ ದೇವರಲ್ಲಿ ಪ್ರಾರ್ಥಿಸುತಿದ್ದೆವು ಎಂದು ಹೇಳಿದ ವಿಚಾರವನ್ನು ಆಕೆಯ ಶವ ಪಡೆಯಲು ಬಂದ ಆಕೆಯ ಪೋಷಕರು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ಇದು ಈ ರನ್ ವೇಯ ಅಪಾಯಕಾರಿ ಮಟ್ಟವನ್ನು ಸೂಚಿಸುತ್ತದೆ.
ದುರಂತ ನಡೆದ ನಂತರ ವಿಮಾನ ನಿಲ್ದಾಣದ ಸುರಕ್ಷತಾ ವಿಭಾಗದ ಅಧಿಕಾರಿಗಳು ಹಾಗೂ ನೌಕರರು ಕೈಗೊಂಡ ಪರಿಹಾರ ಕ್ರಮಗಳು ಸಕಾಲಿಕವಾಗಿ ಜರುಗಿದ್ದರೆ ಇನ್ನೂ ಅನೇಕ ಜೀವಗಳನ್ನು ಉಳಿಸಬಹುದಿತ್ತು ಎಂಬುವುದು ದುರಂತ ನಡೆದ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ದುರಂತ ಸ್ಥಳಕ್ಕೆ ಓಡಿ ಹೋದ ಸ್ಥಳೀಯ ನಾಗರಿಕರ ಅಭಿಪ್ರಾಯ. ಅವರ ಪ್ರಕಾರ ವಿಮಾನ ಬಿದ್ದ ಹತ್ತು ನಿಮಿಷಗಳಲ್ಲಿ ವಿಮಾನ ನಿಲ್ದಾಣದ ರನ್ ವೇ ಮೇಲಿನಿಂದ ಎರಡು ಅಗ್ನಿಶಾಮಕ ವಾಹನಗಳು ನೊರೆಭರಿತ ನೀರನ್ನು ವಿಮಾನದ ಮೇಲೆ ಸಿಂಪಡಿಸಿದವು. ಆದರೆ ಅವು ವಿಮಾನವನ್ನು ತಲುಪಲೇ ಇಲ್ಲ . ಕೊನೆಗೆ ಅವು ಹಿಂತಿರುಗಿ ಹೋಗಿ ಇನ್ನೊಂದು ದಾರಿಯ ಮೂಲಕ ಸುಮಾರು ಇಪ್ಪತ್ತು ನಿಮಿಷದ ದುರ್ಗಮ ಹಾದಿಯ ಮೂಲಕವಾಗಿ ದುರಂತ ಸ್ಥಳಕ್ಕೆ ಬಂದವು. ಆನಂತರ ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಮತ್ತು ಕೆಲವು ಶವಗಳನ್ನು ಹೊರಗೆ ಎಳೆಯಲು ಸಾಧ್ಯವಾಯಿತು. ಇಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಸುರಕ್ಷತಾ ಕ್ರಮಗಳ ಲೋಪ ಮತ್ತು ಅವು ಅಳವಡಿಸಿಕೊಂಡ ಅವೈಜ್ಞಾನಿಕ ರೀತಿಯ ವ್ಯವಸ್ಥೆ ಎದ್ದು ಕಾಣುತ್ತದೆ. ಬೆಟ್ಟ ಗುಡ್ಡಗಳ ನಡುವೆ ಇರುವ ವಿಮಾನ ನಿಲ್ದಾಣ ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವಿಮಾನ ಗುಂಡಿಗೆ ಬೀಳುವ ಸಾಧ್ಯತೆಯೇ ಅಧಿಕ . ಈ ಮುಂಚೆ ವೀರಪ್ಪ ಮೊಯ್ಲಿ ಪ್ರಯಾಣಿಸಿದ ವಿಮಾನ ಸಹ ಈ ರೀತಿ ಗುಂಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಅವರ ಜೀವ ಉಳಿದಿತ್ತು. ಅಂದು ಕೂಡ ಅದು ತಡೆಗೋಡೆಗೆ ಡಿಕ್ಕಿ ಹೊಡೆಯದಿದ್ದರೆ ಅವರೂ ಕೂಡ ವಿಮಾನದೊಟ್ಟಿಗೆ ಗುಂಡಿಗೆ ಬೀಳುತಿದ್ದರು. ಈ ಎಲ್ಲಾ ಘಟನೆಗಳನ್ನು ಅವರು ಈ ದುರಂತ ನಡೆಯುವ ಒಂದು ವಾರ ಮೊದಲು ನಡೆದ ನೂತನ ರನ್ ವೇಯ ಉದ್ಘಾಟನೆಯಲ್ಲೂ ನೆನಪಿಸಿಕೊಂಡಿದ್ದರು.
ಹೀಗಿರುವಾಗ ವಿಮಾನ ನಿಲ್ದಾಣದ ಮೇಲಿನಿಂದ ಅಗ್ನಿಶಾಮಕ ವಾಹನಗಳು ಹಾರಿಸಿದ ನೊರೆಭರಿತ ನೀರು ಕೆಳಗಿದ ವಿಮಾನಕ್ಕೆ ತಲುಪಿಲ್ಲ ಅಂದರೆ ಇಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು ಎಷ್ಟೊಂದು ಅವೈಜ್ಞಾನಿಕ ಎನ್ನುವುದನ್ನು ಸೂಚಿಸುತ್ತದೆ. ಅದಲ್ಲದೆ ಪರ್ಯಾಯ ದಾರಿ ಇಲ್ಲದೆ ಇದ್ದ ಕಚ್ಛಾ ರಸ್ತೆಯನ್ನು ಬಳಸಿಕೊಂಡು ಬರಲು ತೆಗೆದು ಕೊಂಡ ಅಮೂಲ್ಯ ಇಪ್ಪತ್ತು ನಿಮಿಷವೂ ಸಹ ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂಬುವುದು ಪ್ರತ್ಯಕ್ಷದರ್ಶಿಗಳ ಸ್ಪಷ್ಟ ಅಭಿಪ್ರಾಯ.
ದುರಂತವೇನೋ ನಡೆದಿದೆ. ಸಮಗ್ರ ವರದಿ ಬಂದ ನಂತರ ಸ್ಪಷ್ಟವಾಗಿ ತಿಳಿಯಲಿದೆ. ಆದರೆ ಈ ರೀತಿಯ ದುರಂತ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಜೊತೆಗೆ ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ. ದುರಂತದಲ್ಲಿ ಮಡಿದ ಅಮಾಯಕ ನಾಗರಿಕರಿಗೆ ಅಲ್ಲಲ್ಲಿ ಶೋಕ ಸಭೆಗಳು ನಡೆಯುತ್ತಿದೆ. ಸಭೆ ಸಮಾರಂಭಗಳ ಮೂಲಕ ಜನತೆ ಅವರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ದುರಂತದ ಬಗ್ಗೆ ಮತ್ತು ವಿಮಾನ ನಿಲ್ದಾಣದ ಸುರಕ್ಷತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತವಾದ ತನಿಖೆ ನಡೆದು ಮೃತರ ಕುಟುಂಬಸ್ಥರಿಗೆ ಯಾವುದೇ ಅಡಚಣೆ ಇಲ್ಲದೆ ಪರಿಹಾರ ದೊರಕಿಸಿಕೊಟ್ಟರೆ ಅದು ಮಾತ್ರ ಮೃತರಿಗೆ ಸಲ್ಲಿಸುವ ನೈಜ ಶ್ರದ್ದಾಂಜಲಿಯಾಗಬಹುದು.

ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

No comments:

Post a Comment

ಹಿಂದಿನ ಬರೆಹಗಳು