Wednesday, August 11, 2010

ಸಂತಮಹಂತರ ನೆಲೆವೀಡು ಗುಲ್ಬರ್ಗಾ





ಕರ್ನಾಟಕ ರಾಜ್ಯದ ಗುಲಬರ್ಗಾ ಜಿಲ್ಲೆಯ ಪ್ರಾಚೀನ ಹೆಸರು ಕಲಬುರಿಗಿ. ಗುಲಬರ್ಗಾ ಬಹುಮನಿ ಸುಲ್ತಾನರ ರಾಜಧಾನಿಯಾಗಿತ್ತು. ರಾಜ್ಯಗಳ ಪುನರ್ವಿಂಗಡಣೆ ಆಗುವ ಮುಂಚೆ ಗುಲಬರ್ಗಾ ಇದ್ದ ರಾಜ್ಯ ಹೈದ್ರಾಬಾದ್. ಇಲ್ಲಿ ರಾಷ್ಟ್ರಕೂಟರು ಪ್ರಧಾನ ರಾಜಮನೆತನದವರು. ಜಿಲ್ಲಾ ಆಡಳಿತ ಕೇಂದ್ರ ಗುಲಬರ್ಗಾದ ವಿಸ್ತೀರ್ಣ ೧೬.೨೨೪ ಚ.ಕಿ.ಮೀ. ರಾಜ್ಯದಲ್ಲೇ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಜಿಲ್ಲೆ ಇದಾಗಿದೆ.
ಜಿಲ್ಲೆಯ ಒಟ್ಟು ಜನಸಂಖ್ಯೆ ಅಂದಾಜು ೩೧.೨೪.೮೫೮ ಈ ಪೈಕಿ ಪುರುಷರು ೧೫.೯೧.೩೭೯ ಹಾಗೂ ಸ್ತ್ರೀಯರ ಸಂಖ್ಯೆ ೧೫.೩೧.೪೭೯ ಇದ್ದು, ಜನಸಾಂದ್ರತೆ ೧೯೩ರಷ್ಟಿದೆ. ಸುಮಾರು ೪೮ ಹೋಬಳಿಗಳನ್ನು, ೧೦ ತಾಲೂಕುಗಳನ್ನು ಹೊಂದಿರುವ ಗುಲಬರ್ಗಾ ಕಂದಾಯ ವಿಭಾಗವಾಗಿದೆ.
ಸಿಮೆಂಟ್, ವಾಹನ, ಹತ್ತಿ ಈ ಜಿಲ್ಲೆಯ ಪ್ರಮುಖ ಕೈಗಾರಿಕೆಗಳು. ಮ್ಯಾಂಗನೀಸ್ ಖನಿಜ ಸಂಪತ್ತನ್ನು ಹೊಂದಿರುವ ಜಿಲ್ಲೆಯಲ್ಲಿ ಭೀಮಾ, ಕಾಗ್ನ, ಬೆಣ್ಣೆತೋರು, ಮುಳ್ಳುಮಾರಿ ಜಿಲ್ಲೆಯ ಜೀವನಗಳು. ತೊಗರಿ, ಶೇಂಗಾ, ಸೂರ್ಯಕಾಂತಿ, ಕುಸುಬೆ, ನೆಲೆಗಡಲೆಯನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯ ಪ್ರಸಿದ್ಧವಾದ ಬೆಳೆ ತೊಗರಿ.
ಗುಲಬರ್ಗಾ ರಾಜ್ಯದ ಪ್ರಮುಖ ಐತಿಹಾಸಿಕ ಸ್ಥಳಗಳ ಪೈಕಿ ಒಂದಾಗಿದ್ದು, ಹತ್ತು ಹಲವು ವೈಶಿಷ್ಠ್ಯಗಳನ್ನು ಹೊಂದಿದೆ.
ಗುಲಬರ್ಗಾ
ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರ ವಿಭಾಗೀಯ ಕಾರ್ಯಾಲಯವೂ ಇಲ್ಲಿದೆ. ಗುಲ್ಬರ್ಗಾದಲ್ಲಿ ಬಹುಮನಿ ಸುಲ್ತಾನರು ಕ್ರಿ.ಶ.೧೩೪೭ರಲ್ಲಿ ರಾಜಧಾನಿಯಾನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರು. ಇದರ ಮಗದೊಂದು ಹೆಸರು ಕಲಬುರ್ಗಿಯಾಗಿತ್ತು.
ಸೂಫಿಸಂತ ಬಂದೇನವಾಜನ ಘೋರಿ ಮತ್ತು ಶರಣಬಸಪ್ಪನವರ ಸಮಾಧಿಗಳು ಇಲ್ಲಿವೆ. ಇಲ್ಲಿ ಖಲಂದಾರ್ ಮಸೀದಿ ಮತ್ತು ಚಾಂದಬೀಬಿ ಕಟ್ಟಿಸಿದ ಹೀರಾಪುರ್ ಮಸೀದಿ ಮುಂತಾದ ಸ್ಮಾರಕಗಳು ಇವೆ.
ಗಾಣಗಾಪುರ್
ಅಪ್ಜಲ್‌ಪುರ ತಾಲೂಕಿನ ಗಾಣಗಾಪುರ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ. ಇಲ್ಲಿ ದತ್ತಾತ್ರೇಯ ದೇವಾಲಯವಿದೆ. ಗಾಣಗಾಪುರವನ್ನು ಶ್ರೀ ಗುರುಚರಿತ್ರೆಯಲ್ಲಿ ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂದು ಕರೆಯುತ್ತಾರೆ.
ವಡಗೇರಿ
ಇಲ್ಲಿ ಚಾಲುಕ್ಯ ಚಕ್ರವರ್ತಿ ೬ನೇ ವಿಕ್ರಮಾದಿತ್ಯನಿಗೆ ಸಂಬಂಧಿಸಿದ ಶಾಸನವಿದೆ. ಈ ಶಾಸನ ೬ನೇ ವಿಕ್ರಮಾದಿತ್ಯ ಕ್ರಿ.ಶ.೧೦೭೭ರಂದು ಅಧಿಕಾರಕ್ಕೆ ಬಂದಿದ್ದನ್ನು ಮತ್ತು ಆತನು ಕ್ರಿ.ಶ.೧೦೭೬ ಮಾರ್ಚ್ ೨ರಂದು ಚಾಲುಕ್ಯ ವಿಕ್ರಮ ಶಕೆ ಆರಂಭಿಸಿದನೆಂದು ಹೇಳುತ್ತದೆ. ಹೀಗೆ ಇದು ವಡಗೇರಿ ಶಾಸನವೆಂದು ಹೆಸರಾಗಿದೆ.
ಸುರಪುರ
ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ ೧೮೫೭ರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ. ಅವನು ಬ್ರಿಟೀಷರ ರೆಸಿಡೆಂಟ್‌ನನ್ನು ಇಟ್ಟುಕೊಳ್ಳಲು ನಿರಾಕರಿಸಿ ದಂಗೆ ಎದ್ದ. ಮಾಳಖೇಡ ಜಮೀನದಾರ, ನಾನಾ ಸಾಹೇಬ್, ದೇಶಮುಖ್ ಮುಂತಾದ ನಾಯಕರ ಬೆಂಬಲ ಪಡೆದು ಅಲ್ಲಿನ ಬ್ರಿಟೀಷ್ ಅಧಿಕಾರಿ ನ್ಯೂಬೇರಿಯನ್‌ನನ್ನು ಕೊಂದರು. ಈ ಕದನದಲ್ಲಿ ೫೦೦ಮಂದಿ ಮರಣ ಹೊಂದಿದರು. ಕ್ಯಾಪ್ಟನ್ ವಿಂಡ್‌ಹ್ಯಾಮ್ ಕ್ರಿ.ಶ.೧೮೫೮ರಲ್ಲಿ ಸುರಪುರವನ್ನು ಆಕ್ರಮಿಸಿದ. ಕ್ರಿ.ಶ.೧೮೬೧ರಲ್ಲಿ ಇದನ್ನು ಹೈದರಾಬಾದ್ ನಿಜಾಮನಿಗೆ ವಹಿಸಿಕೊಡಲಾಯಿತು. ಹೀಗೆ ವೆಂಕಟಪ್ಪ ನಾಯಕ ಬ್ರಿಟೀಷ್‌ರೊಡನೆ ಕಾದಾಡಿ ಸುರಪುರದಲ್ಲಿ ವೀರಮರಣ ಹೊಂದಿದ.
ಆಳಂದ
ತಾಲೂಕು ಸ್ಥಳವಾಗಿರುವ ಇಲ್ಲಿ ೬ನೇ ವಿಕ್ರಮಾದಿತ್ಯನ ಶಾಸನ ಒಂದಿದೆ. ಚಾಲುಕ್ಯರ ಕಾಲದಲ್ಲಿ ಇದು ಒಂದು ಪ್ರಾಂತ್ಯವಾಗಿತ್ತು. ಇಲ್ಲಿ ಲಾಡ್ಲೆ ಮುಷಾಯಕ್ ದರ್ಗಾ ಇದೆ. ಇದು ೧೫ನೇ ಶತಮಾನದಾಗಿದೆ. ಇದರ ಸಮೀಪ ರಾಘವ ಚೈತನ್ಯರ ಸಮಾಧಿ ಇದೆ. ಇಲ್ಲಿ ರಷಿಯಾದ ಪ್ರವಾಸಿಯೊಬ್ಬ ೧೫ನೇ ಶತಮಾನದಲ್ಲಿ ಬಂದಿದ್ದನೆಂದು ಹೇಳಲಾಗಿದೆ.
ಅಂದೋಲ
ಜೀವರ್ಗಿ ತಾಲೂಕಿನಲ್ಲಿರುವ ಅಂದೋಲದಲ್ಲಿ ಗುಮ್ಮಟ, ಮಸೀದಿ, ಸಂಗಮೇಶ್ವರ ದೇಗುಲ, ಅಟಕೇಶ್ವರ, ಶಾಂತಲಿಂಗೇಶ್ವರ ಮುಂತಾದ ದೇಗುಲಗಳಿವೆ ಮತ್ತು ೨ ಶಾಸನಗಳು ಆದಿಲ್‌ಶಾಹಿಯ ಕಾಲದ ಅವಶೇಷಗಳು ಇಲ್ಲಿವೆ.
ಸನ್ನತಿ
ಇದರ ಮೊದಲ ಹೆಸರು ಸೊಂಧಿ. ಸ್ಥಳೀಯರು ಇದನ್ನು ಸನ್ನತಿ ಎಂದು ಕರೆದರು. ಚಿತ್ತಾಪೂರ ತಾಲೂಕಿನಲ್ಲಿರುವ ಇಲ್ಲಿ ಮೌರ‍್ಯರ ಪ್ರಸಿದ್ಧ ಅರಸ ಅಶೋಕನ ೪ಶಾಸನಗಳು ದೊರೆತಿವೆ ಮತ್ತು ಶಾತವಾಹನ ದೊರೆ ಗೌತಮಿ ಪುತ್ರನಿಗೆ ಸಂಬಂಧಿಸಿದ ಒಂದು ಶಾಸನವಿದೆ. ೧೯೯೦ರಲ್ಲಿ ಇದನ್ನು ಪತ್ತೆ ಹಚ್ಚಲಾಗಿದೆ. ಹೀಗಾಗಿ ಈ ಊರಿಗೆ ಇತಿಹಾಸದಲ್ಲಿ ಮಹತ್ವವಾದ ಸ್ಥಾನ ಲಭಿಸಿದೆ. ಈ ಸನ್ನತಿಯಲ್ಲಿ ಮಧ್ಯ ಶಿಲಾಯುಗ ಮತ್ತು ನವಶಿಲಾಯುಗ ಅವಶೇಷಗಳು ಪತ್ತೆಯಾಗಿವೆ. ಇಲ್ಲಿ ಚಾಲುಕ್ಯರ ಕುಲದೇವತೆ ಸುವಿಖ್ಯಾತ ಚಂದ್ರಲಾಂಬಾ ದೇವಸ್ಥಾನವಿದೆ ಮತ್ತು ಮಾರ್ಕಂಡೇಯ ದೇವಸ್ಥಾನ, ಮಾರ್ತಾಂಡಭೈರವ ಕೊಳ ಹಾಗೂ ವಿಶ್ವಂಭಕ ದಿಕ್ಷೀತರ ಸಮಾಧಿಗಳು ಇಲ್ಲಿವೆ.
ಹುಣಸಗಿ
ಸುರಪುರ ತಾಲೂಕಿನ ಹುಣಸಗಿಯಲ್ಲಿರುವ ನಿವೇಶನವನ್ನು ಪೆದ್ದಯ್ಯಾ ಎನ್ನುವವರು ಶೋಧಿಸಿ ಉತ್ಕನನ ಮಾಡಿದರು. ಇಲ್ಲಿ ೧೯೬೭ರಲ್ಲಿ ಮಾಡಲಾದ ಅನ್ವೇಷಣೆಯ ಫಲವಾಗಿ ೪೫ಕ್ಕೂ ಹೆಚ್ಚು ಅಶ್ಯೂಲ್ಯ ನಿವೇಶನಗಳು ಸಿಕ್ಕಿವೆ. ಹುಣಸಗಿ ಊರೊಂದರ ಬಳಿಯಲ್ಲಿಯೇ ೨೫ ಅಶೂಲ್ಯ ಮಾದರಿ ನಿವೇಶನಗಳು ಪತ್ತೆಯಾಗಿವೆ. ಈ ಹಿಂದೆ ಇಲ್ಲಿನ ಜನರು ಈ ಕೊಳ್ಳದಲ್ಲಿ ಅಲೇಮಾರಿ ಜೀವನ ನಡೆಸುತ್ತಿರಬಹುದೆಂದು ಊಹಿಸಲಾಗಿದೆ.
ಯಡಿಯಾಪುರ
ಇದು ಗುಲಬರ್ಗಾ ಜಿಲ್ಲೆಯ ಬೈಚಬಾಳ ಹಳ್ಳದ ಹತ್ತಿರವಿದೆ. ಈ ನಿವೇಶನವು ಅಶ್ಯೂಲ ಮಾದರಿ ಸಂಸ್ಕೃತಿಗೆ ಮೂಲ ವಸತಿ ಸ್ಥಾನವಾಗಿತ್ತು. ಇಲ್ಲಿ ದೊಡ್ಡ ಚಕ್ರಗಳು, ಕೈಗೊಡಲಿ, ಕತ್ತಿ, ಸೀಳುಗತ್ತಿ, ಮಚ್ಚು, ಚಾಕು ಇತ್ಯಾದಿ ಉಪಕರಣಗಳಿದ್ದವು. ಹಳೆಯ ಶಿಲಾಯುಗಕ್ಕೆ ಸಂಬಂಧಿಸಿದ ಈ ಗ್ರಾಮವನ್ನು ಪೆದ್ದಯ್ಯಾನವರು ಕ್ರಿ.ಶ.೧೯೮೭ರಲ್ಲಿ ಶೋಧಿಸಿದರು.
ಮಳಖೇಡ
ರಾಷ್ಟ್ರಕೂಟರ ರಾಜಧಾನಿಯಾಗಿರುವ ಮಳಖೇಡ ಅಥವಾ ಮಾನ್ಯೆಖೇಟ ಸೇಡಂ ತಾಲೂಕಿನಲ್ಲಿದೆ. ಇದನ್ನು ರಾಷ್ಟ್ರಕೂಟರ ಪ್ರಸಿದ್ಧ ಅರಸನಾದ ಅಮೋಘವರ್ಷ ನೃಪತುಂಗ ನಿರ್ಮಿಸಿದ. ಜೈನರ ಬಸದಿಗಳು, ಕಂಚಿನ ಕಲಾಕೃತಿಗಳು ಇಲ್ಲಿವೆ. ವಿಜಯನಗರ ಸ್ಥಾಪನೆಗೆ ಪ್ರೇರಣೆ ನೀಡಿದ ವಿದ್ಯಾರಣ್ಯರ ಸಮಕಾಲೀನರಾದ ಜಯತೀರ್ಥರು ೧೪ನೇ ಶತಮಾನದಲ್ಲಿ ಇಲ್ಲಿ ವಾಸವಾಗಿದ್ದರು ಮತ್ತು ಪುಷ್ಪದಂತ ಎಂಬ ಕವಿ ಈ ಮಳಖೇಟದಲ್ಲಿದ್ದನು. ಈತ ರಾಷ್ಟ್ರಕೂಟರ ಅರಸ ಎರಡನೇ ಕೃಷ್ಣನ ಕಾಲದಲ್ಲಿದ್ದನು.
ಹೋಳಕುಂದಾ
ಕಲಬುರ್ಗಿಯಿಂದ ೩೦ಕಿ.ಮೀ. ದೂರದಲ್ಲಿದೆ, ಇಲ್ಲಿ ಒಂದು ವಿಶಾಲವಾದ ಕೋಟೆಯಿದೆ. ಈ ಕೋಟೆಯೊಳಗೆ ಏಳು ಗುಂಬಜಗಳ ದೊಡ್ಡ ೧೧ಇದೆ. ಈ ಗ್ರಾಮದ ಪುರಾತನ ಹೆಸರು ಸಹೆನಾಲಾದ ಇತ್ತೆಂದು ಹಿರಿಯರು ಹೇಳುತ್ತಾರೆ. ಕೋಟೆಯೊಳಗೆ ಹಜರತ ಮಶಾಕಸಾಲ್ ರೆಹ ಮುತುಲ್ಲಾಹ್ ಅಲ್ಲಾಹ ಎಂಬ ದರ್ಗಾವಿದೆ ಮತ್ತು ಪ್ರಾರ್ಥನೆ ಸಲ್ಲಿಸಲು ಇಲ್ಲೊಂದು ವಿಶಾಲವಾದ ಜಾಮೀಯಾ ಮಜಿದ್ ಕೂಡ ಇದೆ ಮತ್ತು ಈ ಗುಂಬಜಗಳಲ್ಲಿ ಸಮಾಧಿಗಳಿವೆ. ಅವು ೧೦ ರಿಂದ ೧೬ ಅಡಿ ಉದ್ದ ೫ ಅಡಿ ಅಗಲವಾಗಿವೆ. ಸಾಮಾನ್ಯವಾಗಿ ಯಾವುದೇ ಗೋರಿಗಳು ಇಷ್ಟೊಂದು ದೊಡ್ಡದಾಗಿರುವುದಿಲ್ಲ. ಈ ದೊಡ್ಡ ಸಮಾಧಿಗಳು ನೋಡುಗರನ್ನು ಆಶ್ಚರ್ಯವನ್ನುಂ ಟು ಮಾಡುತ್ತವೆ.
ಜೇವರ್ಗಿ
ತಾಲೂಕು ಸ್ಥಳವಾಗಿರುವ ಜೇವರ್ಗಿ ಗುಲಬರ್ಗಾದಿಂದ ಸುಮಾರು ೪೦ ಕಿ.ಮೀ. ದೂರದಲ್ಲಿದೆ. ಇದು ಜೈನಯಾತ್ರಾರ್ಥಿಗಳಿಗೆ ಪ್ರಸಿದ್ಧ ಕೇಂದ್ರವಾಗಿದೆ. ಭೀಮಾನದಿಯ ದಂಡೆಯ ಮೇಲಿರುವ ಇಲ್ಲಿ ಅನೇಕ ಜೈನರ ಬಸದಿಗಳಿವೆ.
ಜಿಲ್ಲೆಯ ಇತರ ವಿಶೇಷತೆಗಳು
ಚಿಂಚೋಳಿ ಅಭಯಾರಣ್ಯ. ನಾರಾಯಣಪುರ ಅಣೆಕಟ್ಟು (ಕೃಷ್ಣಾನದಿ). ಗುಲ್ಬರ್ಗಾ ವಿಶ್ವವಿದ್ಯಾಲಯ ಈ ಜಿಲ್ಲೆಯಲ್ಲಿದೆ. ಮೊದಲ ಆಕಾಶವಾಣಿ (೧೯೭೭) ಪಡೆದ ಜಿಲ್ಲೆ ಮೊದಲ ದೂರದರ್ಶನ ಕೇಂದ್ರ ಪಡೆದ ಜಿಲ್ಲೆ, ತಿಂಥಣಿ ಮೌನೇಶ್ವರ, ಮತ್ತಿತರ ವಿಶೇಷತೆಗಳನ್ನು ಹೊಂದಿದೆ.

No comments:

Post a Comment

ಹಿಂದಿನ ಬರೆಹಗಳು