Tuesday, February 8, 2011

ಸಾಧಿಸಿರುವ ಕಾರ್ಯಗಳ ಬಗ್ಗೆ ಹೆಮ್ಮೆ ಮತ್ತು ತೃಪ್ತಿ

ಜಾನಪದ ವಿದ್ವಾಂಸ, ಸಾಹಿತಿ, ಬಹುಮುಖ ಪ್ರತಿಭೆ ಡಾ.ನಲ್ಲೂರು ಪ್ರಸಾದ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಅವರ ಸಾರಥ್ಯದಲ್ಲಿ ಮೂರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ‘ನಲ್ನುಡಿಯೊಂದಿಗೆ ತಮ್ಮ ಹಾಗೂ ಪರಿಷತ್ತಿನ ನಂಟು, ಸಮ್ಮೇಳನದ ಮಾಹಿತಿ ಇತ್ಯಾದಿಗಳನ್ನು ಹಂಚಿಕೊಂಡಿದ್ದಾರೆ.



ನಿಮ್ಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಡುವಿನ ಸಂಬಂಧ ರೂಪುಗೊಂಡ ಬಗೆ ಹೇಗೆ?
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನನ್ನ ನಡುವಿನ ಸಂಬಂಧ ಮೂರು ದಶಕಗಳಿಗೂ ಮೀರಿದ ಸಂಬಂಧ. ನಾನು ಬೆಂಗಳೂರಿಗೆ ಬರುವುದಕ್ಕಿಂತ ಮೊದಲಿನಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರಂಭಗಳಲ್ಲಿ, ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ಮತ್ತು ಅತ್ಯಂತ ಆಸಕ್ತಿಯಿಂದ, ಕುತೂಹಲದಿಂದ ಗಮನಿಸುತ್ತಾ ಬಂದಂಥವನು.
ಬೆಂಗಳೂರಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ನಂತರ ನಮ್ಮ ಕಾಲೇಜಿಗೆ ಸಮೀಪದಲ್ಲಿಯೇ ಇದ್ದಂತಹ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ದಿನವೂ ತಪ್ಪದೇ ಭೇಟಿ ಕೊಡುತ್ತಿದ್ದೆ. ಕಾಲೇಜಿನಲ್ಲಿ ಪಾಠ ಪ್ರವಚನಗಳನ್ನು ಪೂರ್ಣಗೊಳಿಸಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾಂಗಣದಲ್ಲೇ ನನ್ನ ಬದುಕಿನ ಹೆಚ್ಚು ಪಾಲನ್ನು ಕಳೆದಿದ್ದೇನೆ. ಅಲ್ಲಿಯೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು, ನನ್ನ ನಾಲ್ಕೈದು ಸದಭಿರುಚಿಯ ಗೆಳೆಯರು, ಸಾಹಿತ್ಯಾಸಕ್ತರೆಲ್ಲರೂ ಸೇರಿ ಸಾಹಿತ್ಯದ ಸಂಗತಿಗಳು, ಪರಿಷತ್ತಿನ ಕುರಿತಾದ ವಿಷಯಗಳನ್ನು ಚರ್ಚಿಸುತ್ತಾ ಕಾಲ ಕಳೆಯುತ್ತಿದ್ದೆವು.
ತದನಂತರ ಹಂಪನಾ ಅಧ್ಯಕ್ಷರಾದಾಗ ಅವರ ಪರಿಚಯವಾಗಿ, ಪರಿಷತ್ತಿನಲ್ಲಿ ನಡೆಯುವ ಜಾನಪದ ತರಗತಿಗಳಿಗೆ ಗೌರಪ್ರಾಧ್ಯಾಪಕನಾಗಿ ಕರ್ತವ್ಯ ನಿರ್ವಹಿಸಲು ನನ್ನನ್ನು ಪ್ರೋತ್ಸಾಹಿಸಿದರು. ಇದರಿಂದ ನನಗೆ ಪರಿಷತ್ತಿನ ಒಳಭಾಗಕ್ಕೆ ಪ್ರವೇಶ ದೊರೆತಂತಾಯಿತು. ಆ ಕಾಲದಲ್ಲಿ ಜಾನಪದ ತರಗತಿಗಳೆಂದರೆ ಬಹಳ ಅದ್ದೂರಿಯಾಗಿ ಸಂಭ್ರಮಿಸುವಂತಹ ರೀತಿಯಲ್ಲಿರುತ್ತಿದ್ದವು. ಪಾಠ ಪ್ರವಚನಗಳಷ್ಟೇ ಅಲ್ಲದೇ ಪ್ರಾಯೋಗಿಕವಾಗಿ ಕರಪಾಲ ಮೇಳ, ಸೋಬಾನೆ ಪದ, ಕುಣಿತ ಇತ್ಯಾದಿಗಳ ತರಬೇತಿಯನ್ನು ನೀಡುತ್ತಿದ್ದೆ. ಅಪ್ಪಗೆರೆ ತಿಮ್ಮರಾಜು ಅವರೆಂಥ ಜಾನಪದ ಕಲಾವಿದರನ್ನು, ದೊಡ್ಡಹುಲ್ಲೂರು ರುಕ್ಕೋಜಿರಾವ್, ಪತ್ರಕರ್ತ ಶಮಂತ ಹೀಗೆ ಸುಮಾರು ಹದಿನೈದು ಇಪ್ಪತ್ತು ಜನ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ಹಾಗೂ ಇದರೊಂದಿಗೆ ಸಂಪೂರ್ಣವಾಗಿ ನನ್ನನ್ನು ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಹೀಗಾಗಿ ಪರಿಷತ್ತು ಮತ್ತು ನನ್ನ ನಡುವಣ ಸಂಬಂಧ ಆ ಮೂಲಕ ಹೆಚ್ಚುತ್ತಾ ಹೋಯಿತು.
ಹಂಪನಾ ಅವರ ಕಾಲದಲ್ಲೇ ’ಬೆಳ್ಳಿ ಬಿಟ್ಟ ಬಳ್ಳಿ ಮಾಲೆ’ಯೊಳಗಡೆ ನನ್ನ ಒಂದು ಪುಸ್ತಕವನ್ನು ಪ್ರಕಟಿಸಿದರು. ನಾನು ಬರೆದಂತಹ ’ನಲ್ಲೂರು ದೊರೆಕಾಳಿ’ ಎನ್ನುವ ಗ್ರಾಮದೇವತೆಯನ್ನು ಕುರಿತಾದ ಆ ಪುಸ್ತಕ ನಾಡಿನ ತುಂಬೆಲ್ಲ ಪ್ರಸಿದ್ಧವಾಯಿತು ಮತ್ತು ನನಗೆ ಖ್ಯಾತಿಯನ್ನು ತಂದುಕೊಟ್ಟಿತು.
ಆ ನಂತರ ಜಿ.ಎಸ್.ಸಿದ್ಧಲಿಂಗಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಮಯದಲ್ಲಿ "ಕನ್ನಡ ನುಡಿ"ಯ ಸಂಪಾದಕನಾಗಿ ಮತ್ತೆ ಪರಿಷತ್ತಿನ ಒಳಾಂಗಣಕ್ಕೆ ಪ್ರವೇಶವನ್ನು ಪಡೆದೆ. ಮುಂದೆ ಹರಿಕೃಷ್ಣಪುನರೂರವರ ಅಧ್ಯಕ್ಷತೆಯಲ್ಲಿ ನನ್ನನ್ನು ಕೋಶಾಧ್ಯಕ್ಷನನ್ನಾಗಿ ನೇಮಿಸಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಸದಾವಕಾಶವನ್ನು ಕಲ್ಪಿಸಿದರು. ಹೀಗಾಗಿ ಪರಿಷತ್ತಿನ ಸಣ್ಣ ಸಣ್ಣ ವಿಚಾರದಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಅನುವಾಯಿತು. ೩-೪ ದಶಕಗಳ ಸಂಬಂಧ ಮತ್ತು ಸಂಪರ್ಕದಿಂದ ಪರಿಷತ್ತು ಹೇಗಿದೆ? ಹೇಗಿರಬೇಕು? ಹೇಗೆ ಕಟ್ಟಬೇಕು? ಇನ್ನು ಮುಂತಾದವುಗಳನ್ನು ಗ್ರಹಿಸುವ ದಿಕ್ಕಿನಲ್ಲಿ ಪ್ರಾಥಮಿಕವಾದ ಪರಿಜ್ಞಾನ ಮೂಡಲು ಅವಕಾಶ ದಕ್ಕಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೨ ವರ್ಷಗಳನ್ನು ಪೂರೈಸಿದ್ದೀರಿ ಈ ಅವಧಿಯಲ್ಲಿ ನಿಮ್ಮ ಸಾಧನೆಗಳೇನು? ಮತ್ತು ತಮ್ಮ ಮುಂದಿನ ಯೋಜನೆಗಳೇನು?
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಒಂದಷ್ಟು ಕಾಲ ಆರಾಮಾಗಿ ಇದ್ದು ಹೋಗಬೇಕು ಎನ್ನುವ ದೃಷ್ಟಿಯಿಂದ ಬಂದವನಲ್ಲ ನಾನು. ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತೇನೆ. ಪರಿಷತ್ತೇ ನನ್ನ ಕಾರ್ಯಕ್ಷೇತ್ರ. ಅದರ ನೋವು-ನಲಿವುಗಳನ್ನು ನಾನು ಚೆನ್ನಾಗಿ ಬಲ್ಲೆ. ಪರಿಷತ್ತನ್ನು ಅತ್ಯಂತ ಔನ್ನತ್ಯಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಕನಸು ಕಟ್ಟಿಕೊಂಡೇ ಹೆಜ್ಜೆ ಇರಿಸಿದವನು ನಾನು. ಆ ಕಾರಣದಿಂದಲೇ ಸಮಾನ ಮನಸ್ಕರೊಡನೆ ಸಮಾಲೋಚಿಸಿ ಯಾವುದು ಕಾರ್ಯಸಾಧುವೋ? ಅಚ್ಚುಕಟ್ಟಾಗಿ ಪರಿಷತ್ತನ್ನು ಕಟ್ಟಲು ಯಾವ ಯಾವ ಸ್ವರೂಪಗಳ ಅಗತ್ಯವಿದೆಯೋ ಅವೆಲ್ಲವನ್ನೂ ಆಮೂಲಾಗ್ರವಾಗಿ ಚಿಂತಿಸಿ ಆ ನಂತರದಲ್ಲಿಯೇ ನಾನು ೧೦ ಅಂಶಗಳ ಪ್ರಣಾಳಿಕೆಯನ್ನು ನೀಡಿದ್ದು. ಚುನಾವಣೆಗೆ ಹೋಗುವ ಸಂದರ್ಭದಲ್ಲೂ ಪರಿಷತ್ತಿನ ಹಣಕಾಸಿನ ಪರಿಸ್ಥಿತಿಯ ಅರಿವು ಸ್ಪಷ್ಟವಾಗಿ ಇದ್ದಿದ್ದರಿಂದ ಆರ್ಥಿಕವಾಗಿ ಗಟ್ಟಿ ಅಡಿಪಾಯವಿಲ್ಲದೆ ಅಭಿವೃದ್ಧಿ ಮಾಡುವುದಾದರೂ ಹೇಗೆ ಎನ್ನುವ ಆತಂಕ ನನ್ನನ್ನು ಕಾಡುತ್ತಲೇ ಇತ್ತು. ನನ್ನ ಸ್ನೇಹಿತ ಪ್ರೊ.ಚಂದ್ರಪ್ಪ, ನಿಮ್ಮಲ್ಲಿ ಇಚ್ಛಾಶಕ್ತಿ ಇದೆ. ನೀವು ಸಾಧಿಸುತ್ತೀರಿ ಎಂದು ಹೇಳುತ್ತಾ ನನ್ನಲ್ಲಿ ಉತ್ಸಾಹವನ್ನು ತುಂಬುತ್ತಿದ್ದ ದಿನಗಳವು. ಈ ನಾಡಿನ ಜನರ ಪ್ರೀತಿ ವಿಶ್ವಾಸ ಅಭಿಮಾನದಿಂದ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದೆ.
ಈಗ ೨ ವರ್ಷಗಳು ಕಳೆದು ಮೂರನೇ ವರ್ಷಕ್ಕೆ ಪ್ರವೇಶ ಮಾಡುತ್ತಿದ್ದೇನೆ. ಹಿಂತಿರುಗಿ ನೋಡಿದರೆ ಬಹಳ ಸಂತೋಷ ಮತ್ತು ಹೆಮ್ಮೆ ಇದೆ. ಕಾರಣ ೧೦ ಅಂಶಗಳ ಪ್ರಣಾಳಿಕೆಯಲ್ಲಿ ಕೊಟ್ಟ ಅಷ್ಟನ್ನೂ ಅತ್ಯದ್ಭುತವೆನ್ನುವ ರೀತಿಯಲ್ಲಿ ನೆರವೇರಿಸಿದ್ದೇನೆ ಎನ್ನುವ ಆತ್ಮತೃಪ್ತಿ.
ಪ್ರಮುಖವಾಗಿ, ಜಿಲ್ಲಾ ಘಟಕಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಪ್ರತೀ ಜಿಲ್ಲೆಗೂ ೫ ಲಕ್ಷ ರೂಪಾಯಿಗಳ ಹಣಕಾಸಿನ ನೆರವು ಲಭ್ಯವಾಗುತ್ತಿದೆ. ಮತ್ತು ಅಲ್ಲಿನವರೇ ನಾಲ್ಕು ಪುಸ್ತಕಗಳನ್ನು ಹೊರತರಬೇಕೆಂದು ಹೇಳಿದ್ದೇನೆ. ಹಳ್ಳಿಗರು ತಮ್ಮ ಹಳ್ಳಿಗಳಲ್ಲಿಯೇ ಸಮ್ಮೇಳನವನ್ನು ಆಚರಿಸಲು ಅನುವು ಮಾಡಿಕೊಟ್ಟು ಅವರಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಯೋಜನೆಯನ್ನು ಜಾರಿಗೆ ತಂದಿದ್ದೇನೆ. "ಕನ್ನಡ ನುಡಿ" ಪತ್ರಿಕೆಗೆ ಹೊಸ ಸ್ವರೂಪ ನೀಡಿದ್ದೇವೆ.
ಪರಿಷತ್ತು ಬರೀ ಬೆಂಗಳೂರಿಗರ ಸ್ವತ್ತಲ್ಲ. ಅದು ನಾಡಿನ ಎಲ್ಲ ಜನಸಾಮಾನ್ಯರ ಸ್ವತ್ತಾಗಿರುವುದರಿಂದ ಪರಿಷತ್ತನ್ನು ಸರ್ವರೂ ಪ್ರೀತಿಸುವ ಹಾಗೆ ಮಾಡುವ ಕನಸು ನನ್ನದಾಗಿತ್ತು. ಅದೂ ಕೂಡ ನನಸಾಗಿದೆ.
ಪುಸ್ತಕ ಪ್ರಕಟಣೆಗೆ ಸಂಬಂಧಪಟ್ಟ ಹಾಗೆ ಗುಣಮಟ್ಟ ಕಾಯ್ದಕೊಳ್ಳುವುದು ಸಾಧ್ಯವಾಗುತ್ತಿದೆ. ಈ ೨ ವರ್ಷದ ಅವಧಿಯಲ್ಲಿ ಪರಿಷತ್ತಿನಿಂದ ಪ್ರಕಟಣೆಗೊಂಡ ಪುಸ್ತಕಗಳನ್ನು ಬಾಹ್ಯ ಮತ್ತು ಆಂತರಿಕ ಸೌಂದರ್ಯದ ದೃಷ್ಟಿಯಿಂದ ನೋಡುವುದಾದರೆ ಯಾವುದೇ ಖಾಸಗಿ ಪ್ರಕಾಶಕರು ಪ್ರಕಟಿಸುವ ಪುಸ್ತಕಗಳಿಗೆ ಸವಾಲೊಡ್ಡುವ ತೆರದಲ್ಲಿ ಇರುವುದನ್ನು ನೀವು ಗಮನಿಸಬಹುದು. ಬಹಳಷ್ಟು ಮಂದಿ ನಿಮ್ಮ ಪುಸ್ತಕಗಳು ಹೊರಗಿನಿಂದ ಮತ್ತು ಒಳಗಿನ ಹೂರಣದಿಂದ ಬಹಳ ಸೊಗಸಾಗಿ ಮೂಡಿ ಬರುತ್ತಿವೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನಕ್ಕೆ ಪರಿಷತ್ತಿಗೆ ಆದಾಯವೂ ಸಂದಾಯವಾಗುತ್ತಿದೆ. ಮತ್ತೊಂದು ಗಮನಿಸಲೇಬೇಕಾದ ವಿಚಾರವೆಂದರೆ ಬಂದ ಆದಾಯವನ್ನೆಲ್ಲಾ ತಿಂದು ಹಾಕುವ ಕೆಲಸ ಇಲ್ಲಿ ನಡೆಯುವುದಿಲ್ಲ. ಹಿಂದೆ ಪರಿಷತ್ತಿನಿಂದ ಪ್ರಕಟಣೆಗೊಂಡ ಪುಸ್ತಕಗಳಲ್ಲಿ ನೂರು ರೂಪಾಯಿ ಆದಾಯ ಗಳಿಸಿದರೆ ಎಲ್ಲವನ್ನೂ geಟಿeಡಿಚಿಟ ಚಿಛಿಛಿouಟಿಣಗೆ ಹಾಕಿ ಖರ್ಚುವೆಚ್ಚವೆಂದು ಬಿಡುತ್ತಿದ್ದರು. ಆದರೆ ಈಗ ಪ್ರತಿ ನೂರು ರೂಪಾಯಿಗಳಲ್ಲಿ ೭೦ ರೂಪಾಯಿಗಳನ್ನು ಪರಿಷತ್ತಿಗಾಗಿ ತೆಗೆದಿಟ್ಟು, ಉಳಿದ ೩೦ ರೂ.ಗಳನ್ನು ಖರ್ಚುವೆಚ್ಚಕ್ಕಾಗಿ ಮೀಸಲಿಡುವ ವ್ಯವಸ್ಥೆಯಾಗಿದೆ. ಹಾಗೆ ಮಾಡದಿದ್ದ ಪಕ್ಷದಲ್ಲಿ ಪರಿಷತ್ತನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲವೆಂಬ ಸ್ಪಷ್ಟ ಅರಿವು ನನಗಿದೆ.
ಬಹಳ ಕಾಲದಿಂದಲೂ ತಡೆ ಹಿಡಿದಿದ್ದ ಸಂಶೋಧನಾ ಕೇಂದ್ರ ನನ್ನ ಅವಧಿಯಲ್ಲಿ ಚಾಲನೆಗೊಂಡಿದೆ. ಕುವೆಂಪು ಸಭಾಂಗಣದ ಉದ್ಘಾಟನೆಯಾಗಿದೆ. ಜಾನಪದ ತರಗತಿಗಳು, ಶಾಸನ ಶಾಸ್ತ್ರ ತರಗತಿಗಳು ನಡೆಯುತ್ತಿವೆ. ಎಂಫಿಲ್ ಮತ್ತು ಪಿ.ಎಚ್.ಡಿ.ಗೆ ಸಂಬಂಧಪಟ್ಟ ಹಾಗೆ ಹಂಪಿ ವಿಶ್ವವಿದ್ಯಾಲಯದ ಜೊತೆಗೆ ಚರ್ಚಿಸಿ ಅನುಮತಿಯನ್ನು ಕೋರಿದ್ದೇನೆ ಅದೀಗ ಪರಿಶೀಲನೆಯ ಹಂತದಲ್ಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ೪೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದಂತಹ ನಿಘಂಟು ಮರುಮುದ್ರಣ ಯೋಜನೆಗೆ ಚಾಲನೆಯನ್ನು ನೀಡಿ, ಸರ್ಕಾರದಿಂದ ೧ ಕೋಟಿ ಅನುದಾನವನ್ನು ತಂದು ನಿಘಂಟುಗಳನ್ನು ಪ್ರಕಟಿಸಿದ್ದೇವೆ. ಇಂದು ಅದು ಎಲ್ಲ ವಿದ್ವಾಂಸರ ಕೈ ಸೇರುವಂತಾಗಿದೆ. ಇದು ಕೂಡ ಮಹತ್ವದ ಸಾಧನೆ ಎಂತಲೇ ನಾನು ಭಾವಿಸಿಕೊಂಡಿದ್ದೇನೆ.
ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡಿ ಹಿಂದೆಂದೂ ಇಲ್ಲದಷ್ಟು ಮಟ್ಟದಲ್ಲಿ ದಾಖಲೆ ಎನ್ನುವ ಹಾಗೆ ೩ ಕೋಟಿ ೪೫ ಲಕ್ಷ ರೂ.ಗಳನ್ನು ಒಂದೇ ಚೆಕ್‌ನಲ್ಲಿ ಪರಿಷತ್ತಿನ ಅಭಿವೃದ್ಧಿಗಾಗಿ ತಂದಿದ್ದೇನೆ. ಹೀಗಾಗಿ ಮೊದಲಿನ ಸ್ಥಿತಿಗೆ ಹೋಲಿಸಿದರೆ ಪರಿಷತ್ತು ಆರ್ಥಿಕವಾಗಿ ಸ್ವಲ್ಪ ಸುಧಾರಿಸಿದೆ ಎನ್ನಬಹುದು.
ನಾನು ಬಂದ ಸಂದರ್ಭದಲ್ಲಿ ೬೦ ಸಾವಿರವಿದ್ದ ಸದಸ್ಯರ ಸಂಖ್ಯೆ ೧ ಲಕ್ಷ ೨೦ ಸಾವಿರಕ್ಕೆ ಏರಿದೆ. ದತ್ತಿ ನಿಧಿ ಸಂಗ್ರಹವೂ ದುಪ್ಪಟ್ಟಾಗಿದೆ. ಬಹುಶಃ ಇದೂ ಕೂಡ ಒಂದು ದಾಖಲೆ ಇರಬಹುದು. ಪರಿಷತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವ ಸಂಸ್ಥೆ ಮತ್ತು ಕನ್ನಡದ ಕೆಲಸಗಳು ಸಾಗುತ್ತಿವೆ ಎನ್ನುವ ಕಾರಣಕ್ಕೆ ನಾಡಿನ ಜನತೆ ಪರಿಷತ್ತಿನ ಕಡೆ ಮುಖ ಮಾಡುವಂತಾಗಿದೆ. ಇನ್ನೂ ಮಾಡಬೇಕಾದದ್ದು ಬಹಳಷ್ಟಿದೆ. ಅಚ್ಚುಕೂಟದ ಅಭಿವೃದ್ಧಿಯಾಗಬೇಕಾಗಿದೆ ಇತ್ಯಾದಿ ಇತ್ಯಾದಿ...
೩ ವರ್ಷದಲ್ಲಿ ಮಾಡಬೇಕಾದ ಕೆಲಸಗಳನ್ನು ೨ ವರ್ಷದಲ್ಲಿಯೇ ಪೂರ್ಣಗೊಳಿಸಿದ್ದೇನೆ. ಸಾಧಿಸಬೇಕಾದದ್ದು ಬಹಳಷ್ಟಿದೆ. ಆದರೆ ಸಾಧಿಸಿರುವ ಕಾರ್ಯಗಳ ಬಗ್ಗೆ ಹೆಮ್ಮೆ ಮತ್ತು ತೃಪ್ತಿ ಇದೆ.
ಬೆಂಗಳೂರಿಗೆ ೪೦ ವರ್ಷಗಳ ನಂತರ ಸಮ್ಮೇಳನವನ್ನು ತಂದಿದ್ದೇನೆ. ಇದಲ್ಲದೆ ಇನ್ನೆರಡು ಕಾರ್ಯಕ್ರಮಗಳಿವೆ. ಶ್ರವಣಬೆಳಗೊಳದಲ್ಲಿ ಪ್ರಾಚ್ಯ ಸಾಹಿತ್ಯ ಸಮಾವೇಶ- ಕೂಡಲ ಸಂಗಮದಲ್ಲಿ ವಿಶ್ವ ವಚನ ಸಾಹಿತ್ಯ ಸಮ್ಮೇಳನ.
ಇಷ್ಟನ್ನೂ ಸಮರ್ಥವಾಗಿ ಪೂರೈಸಿದ್ದಾದರೆ ಇಲ್ಲಿಗೆ ಬಂದದ್ದಕ್ಕೆ, ಅಧ್ಯಕ್ಷನಾಗಿದ್ದಕ್ಕೆ ಸಾರ್ಥಕ.
೨ ವರ್ಷದ ಅವಧಿಯಲ್ಲಿ ಹಗಲು ರಾತ್ರಿಯೆನ್ನದೆ ದುಡಿದಿದ್ದೇನೆ. ಮನೆ, ಮಡದಿ, ಮಕ್ಕಳು ಎಲ್ಲರನ್ನು ಮರೆತೇ ಪರಿಷತ್ತಿನ ಕೆಲಸಗಳಿಂದಾಗಿ ನಿಷ್ಠೆಯಿಂದ ಶ್ರಮಿಸಿದ್ದೇನೆ, ಸಾರ್ಥಕವೆನಿಸಿದೆ. ಸಮಾಧಾನ ತಂದಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರೆಸಿಕೊಂಡು ಹೋಗಬೇಕೆನ್ನುವ ಪ್ರಾಮಾಣಿಕ ಆಕಾಂಕ್ಷೆ ಇದೆ.
ಮೂಲತಃ ನೀವೊಬ್ಬ ಕವಿ, ಜೊತೆಗೆ ಅಧ್ಯಾಪಕರೂ ಸಂಶೋಧಕರು ಆಗಿದ್ದೀರಿ. ಈ ಅಧ್ಯಕ್ಷಗಾದಿಗೆ ಬಂದ ನಂತರದಲ್ಲಿ ನಿಮ್ಮ ಸೃಜನಶೀಲತೆಗೆ ಧಕ್ಕೆ ಉಂಟಾಗಿದೆ ಎನಿಸುವುದಿಲ್ಲವೆ?
ನನ್ನೊಳಗಿನ ಕವಿ ಜೀವಂತವಾಗಿಯೇ ಇದ್ದಾನೆ. ಆದರೆ ಸದ್ಯಕ್ಕೆ ಮಲಗಿದ್ದಾನೆ ಅಷ್ಟೆ. ಸೃಜನಶೀಲತೆಯ ದೃಷ್ಟಿಯಿಂದ ನೋಡಿದಾಗ ನನಗೆ ಇದು ರೀತಿಯ bಟಚಿಛಿಞ ಠಿeಡಿioಜ ಏನೋ ಎಂದು ಕೆಲವು ಬಾರಿ ಅನಿಸುತ್ತದೆ. ಬಹಳ ಬೇಸರವೂ ಆಗುವುದುಂಟು. ನನ್ನ ಕೆಲವು ಮಿತ್ರರು, ಸಾಹಿತಿಗಳು, ನಲ್ಲೂರೊಳಗಡೆ ಕವಿ ನಲ್ಲೂರು ಇದ್ದೇ ಇರ‍್ತಾನೆ. ಈಗ ಆಡಳಿತಗಾರ ನಲ್ಲೂರು ಮೇಲೆದ್ದು ನಿಂತಿದ್ದಾನೆ. ಒದಗಿ ಬಂದಿರುವ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಿದ್ದೀರಿ. ಖಂಡಿತವಾಗಿಯೂ ಕವಿ ಮತ್ತು ಸಂಶೋಧಕ ನಲ್ಲೂರು ಜಾಗೃತವಾಗಿ ಇರುತ್ತಾನೆ ಎನ್ನುತ್ತಾ ಸ್ಥೈರ್ಯ ತುಂಬುತ್ತಿದ್ದಾರೆ.
ನನಗೆ ಒಂದು ಸಮಾಧಾನವೆಂದರೆ ನನ್ನೊಬ್ಬನ ಬೆಳವಣಿಗೆಗಿಂತ ಸಾವಿರಾರು ಹುಡುಗರಿಗೆ, ಬರಹಗಾರರಿಗೆ ಸ್ಫೂರ್ತಿ ತುಂಬುವಂಥ ಅವಕಾಶಗಳನ್ನು ಕಲ್ಪಿಸಿಕೊಡುವಂಥ ಕೆಲಸಗಳನ್ನು ಮಾಡಿದ್ದೇನೆ. ಆ ಸಾಧನೆ ಸಾಕು. ಏಕೆಂದರೆ ಅದೂ ಕೂಡ ಕನ್ನಡದ ಕೆಲಸವೇ. ನನಗೆ ವೈಯಕ್ತಿಕವಾಗಿ ಲಾಭವಾಗದೆ ಹೋದರೂ ಕನ್ನಡಕ್ಕೆ ಆದ ಲಾಭವನ್ನು ನನಗಾದ ಲಾಭವೆಂದೇ ಭಾವಿಸುತ್ತೇನೆ.
ಈ ಅಧಿಕಾರದಿಂದ ಹೊರ ಬಂದ ನಂತರ ಸಾಕಷ್ಟು ಅನುಭವಗಳು ಜೊತೆಗಿರುತ್ತವೆ. ಎಂದಿನಂತೆ ಸೃಜನಶೀಲತೆ ಮುಂದುವರೆಯುತ್ತವೆ ಎನ್ನುವ ಭರವಸೆ ಇದೆ.
ಬೆಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕಾರಣವೇನು? ಇವತ್ತಿನ ಸಂದರ್ಭಕ್ಕೆ ಇದರ ಸಾಂಸ್ಕೃತಿಕ ಮಹತ್ವವೇನು?
ಸ್ವತಃ ನನಗೇ ಬೆಂಗಳೂರಿನಲ್ಲಿ ಸಮ್ಮೇಳನ ಅತ್ಯಂತ ಅವಶ್ಯ ಮತ್ತು ಅನಿವಾರ್ಯ ಎನಿಸಿದೆ. ಏಕೆಂದರೆ ನಾನು ಬೆಂಗಳೂರಿಗೆ ಸುಮಾರು ೩೦ ವರ್ಷದ ಹಿಂದೆ ಬಂದು ನೆಲೆಸಿದವನು. ಆಗ ಇದ್ದಂತಹ ಬೆಂಗಳೂರಿಗೂ ಇಂದು ಇರುವ ನಮ್ಮ ಬೆಂಗಳೂರಿಗೂ ನಂಬಲಸಾಧ್ಯವೆನ್ನುವಷ್ಟರ ಮಟ್ಟಿಗಿನ ಬದಲಾವಣೆಗಳಾಗಿವೆ. ಭೌತಿಕವಾದ ಬದಲಾವಣೆಗಳು ಬಿಡಿ. ಆದರೆ ಎಲ್ಲೋ ಒಂದು ಕಡೆ ನಮ್ಮ ಸಂಸ್ಕೃತಿಯ ಬೇರುಗಳು ಪಲ್ಲಟವಾಗುತ್ತಿವೆ ಎಂಬ ಭಯ ತೀವ್ರವಾಗಿ ನನ್ನನ್ನು ಭಾದಿಸುತ್ತಿದೆ. ಕನ್ನಡತನ ಸ್ವಲ್ಪ ಮಾಸಿ ಹೋಗುತ್ತಿದೆಯೇನೋ ಅನ್ನುವ ಹಾಗಿದೆ. ಅದು ಸ್ಪಷ್ಟವಾಗಿಯೂ ಕಾಣುತ್ತಿಲ್ಲ. ಕನ್ನಡತನ ಇಲ್ಲವೇ ಇಲ್ಲ ಎಂದು ಹೇಳಲು ಆಗುತ್ತಿಲ್ಲ. ನಮಗೇ ಗೊತ್ತಿಲ್ಲದ ಹಾಗೆ ಒಂದು ಸಣ್ಣ ಎಳೆ ಏಟು ಕೊಡುತ್ತಿದೆ.
ಒಂದು ಬೃಹತ್ ನಗರದ ಬೆಳವಣಿಗೆಯನ್ನು ಕಾಣುವಾಗ ಇದೆಲ್ಲವೂ ಸಾಮಾನ್ಯ. ಚಲನಶೀಲತೆ ಎನ್ನುವುದು ಅಲ್ಪ ಸ್ವಲ್ಪ ಬದಲಾವಣೆಯನ್ನು ತರುತ್ತದೆ ನಿಜ. ಬದಲಾಗಲೇಬಾರದು ಎಂತಲೂ ಅಲ್ಲ. ಆದರೆ ಆ ಬದಲಾವಣೆಯಾಗುವ ಸಂದರ್ಭದಲ್ಲೂ ನಮ್ಮ iಜeಟಿಣiಣiಥಿ ಯನ್ನು ಕಳೆದುಕೊಳ್ಳಬಾರದು. ಬದಲಾವಣೆ ಅನಿವಾರ್ಯವಾದರೂ ನಮ್ಮ ನೆಲದ ವಿಚಾರ, ಭಾಷೆಯ ವಿಚಾರ, ನಮ್ಮ ಸಂಸ್ಕೃತಿಯ ವಿಚಾರದಲ್ಲಿ ಗಾಢವಾದ ಎಚ್ಚರಿಕೆ ಇರಲೇಬೇಕು. ಅಸ್ತಿತ್ವವನ್ನು ಅಸ್ಮಿತೆಯನ್ನು ಕಳೆದುಕೊಳ್ಳುತ್ತೇವೆ ಎಂದಾದರೆ ಬಹುಶಃ ನಾವೂ ಇರುವುದಿಲ್ಲ, ನಮ್ಮತನಕ್ಕೂ ಉಳಿಗಾಲವಿಲ್ಲ. ಹಾಗಾಗಿ ಒಂದು ಜಾಗೃತಿಯನ್ನು ಉಂಟು ಮಾಡಲಿಕ್ಕೆ ಕನ್ನಡಿಗರಲ್ಲಿ ಎಚ್ಚರದ ಪ್ರಜ್ಞೆಯನ್ನು ಮಾಡಿಸಲಿಕ್ಕೆ ಸಮ್ಮೇಳನ ಸಹಕಾರಿಯಾಗಲಿದೆ.

ನಿಮ್ಮ ಸಾಹಿತ್ಯ ವಲಯದಲ್ಲಿಯೇ ಸಾಹಿತ್ಯ ಸಮ್ಮೇಳನಗಳನ್ನು ಜಾತ್ರೆ, ಪರಿಶೆ ಎಂದೆಲ್ಲಾ ಹೇಳುವುದಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ವಾಸ್ತವದಲ್ಲಿ ಸಮ್ಮೇಳನಗಳು ಅನೇಕರ ವ್ಯಂಗ್ಯಕ್ಕೆ ತುತ್ತಾಗಿರುವುದು ನಿಜ. ಸಮ್ಮೇಳನವನ್ನು ಜಾತ್ರೆ, ಪರಿಶೆ ಎನ್ನುವ ಎಲ್ಲ ವ್ಯಂಗ್ಯಕಾರರನ್ನು ನಾವು ಸ್ವಾಗತಿಸೋಣ.
ಕನ್ನಡದ ಸಾಹಿತ್ಯ ಸಮ್ಮೇಳನವೆನ್ನುವುದು ನಿಜವಾದ ಕನ್ನಡದ ಪರಿಶೆ, ಕನ್ನಡದ ಜಾತ್ರೆ. ಜಾತ್ರೆಗೆ ಪರಿಶೆಗೆ ಜನರನ್ನು ಒಗ್ಗೂಡಿಸುವ ಶಕ್ತಿ ಇದ್ದೇ ಇರುತ್ತದೆ ಅಲ್ಲವೇ? ಒಂದು ಭಾಷೆಯ ಹೆಸರಿನಲ್ಲಿ ೧ ಲಕ್ಷ, ೨ ಲಕ್ಷ ಜನರು ಸೇರುತ್ತಾರೆಂದರೆ ನಾವೇನು ಜನರನ್ನು ಲಾರಿಯಲ್ಲಿ ತುಂಬಿಕೊಂಡು ಬರುವುದಿಲ್ಲವಲ್ಲ. ಊಟ ಕೊಡುತ್ತೇವೆ, ಸೀರೆ ಬಟ್ಟೆ ಕೊಡುತ್ತೇವೆ ಬನ್ನಿ ಎನ್ನುವ ಆಮಿಷವನ್ನು ಒಡ್ಡುವುದಿಲ್ಲವಲ್ಲ. ಕನ್ನಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂತಹ ಶಕ್ತಿ ಒಂದು ಇದೆ. ಕನ್ನಡ ಕಾಮಧೇನುವಿನ ಅಮೃತದ ಸವಿಗಾಗಿ ಜನ ಬಂದು ಸೇರುತ್ತಾರೆ. ಮಹಾವಿದ್ವಾಂಸರು, ಪ್ರಖಾಂಡ ಪಂಡಿತರು ಬರುವ ಹಾಗೆ ತಡೀಯಪ್ಪ ಹೇಂಗೆ ನಡೀತಾದೆ ನೋಡೋಣ ಅಂತ ಒಬ್ಬ ಶ್ರೀ ಸಾಮಾನ್ಯನು ಬಂದು ಕುಳಿತುಕೊಳ್ಳುತ್ತಾನೆ.
ಸರಿ ಸುಮಾರು ೪೦ ವರ್ಷಗಳ ನಂತರ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ ಇದರ ಯಶಸ್ಸಿಗೆ ರೂಪುರೇಷೆಗಳೇನು?
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿಗೆ ತರುವುದಷ್ಟೇ ಬಹಳ ಶ್ರಮ ವಹಿಸಿದ್ದೇನೆ. ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುವುದಕ್ಕೇ ಅಲ್ಲದೆ ಅರ್ಥಪೂರ್ಣವಾಗಿ ಆಚರಿಸಬೇಕೆನ್ನುವ ಕನಸಿದೆ. ಆ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳುತ್ತಿವೆ.
ಬೆಂಗಳೂರಿನ ಜನ ಸಂಭ್ರಮಿಸಬೇಕು ಇಲ್ಲದಿದ್ದರೆ ಬಹಳ ಕಷ್ಟ. ಬೇರೆ ಜಿಲ್ಲೆಗಳಲ್ಲಾದರೆ ಜನರು ಸ್ಪಂದಿಸುವ ರೀತಿಯೇ ಬೇರೆ. ಇದು ನಮ್ಮ ಜಿಲ್ಲೆಗೆ ಸಂದಂತಹ ಗೌರವ ಸದಾವಕಾಶ ಎಂದು ಭಾವಿಸಿ ಹಳ್ಳಿಯವರು, ಪೇಟೆಯವರೆಲ್ಲರೂ ಹೋರಾಟ ಮಾಡುತ್ತಾರೆ. ಒಂದಾಗುತ್ತಾರೆ. ಆದರೆ ಬೆಂಗಳೂರಿನ ಸಮಸ್ಯೆಯೆಂದರೆ ಮೆಜೆಸ್ಟಿಕ್‌ನಲ್ಲಿ ಮಾಡಿದರೆ ಶಿವಾಜಿನಗರದವರಿಗೆ ಗೊತ್ತಿರುವುದಿಲ್ಲ. ಬಸವನಗುಡಿಯಲ್ಲಿ ನಡೆದರೆ ಹಲಸೂರಿನವರಿಗೆ ಅದರ ಗಂಧವೇ ಇರುವುದಿಲ್ಲ.
ಈ ಸಮಸ್ಯೆಯ ನಿವಾರಣೆಗಾಗಿಯೇ ೧೫ ದಿವಸಗಳ ಮುಂಚಿತವಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಟ್ಟಾಗಿ ಎಲ್ಲಾ ವಿಧಾನಸಭಾ ಕ್ಷೇತ್ರದ ಘಟಕಗಳಲ್ಲೂ "ನುಡಿತೇರು" ಎನ್ನುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ಭಾಗಗಳಲ್ಲೂ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಮ್ಮೇಳನದ ಬಗ್ಗೆ ಆಸಕ್ತಿಯನ್ನು ಮೂಡಿಸಿ, ಸಮರ್ಪಕ ಮಾಹಿತಿಗಳನ್ನು ನೀಡುವ ಕುರಿತಾಗಿ ಆಲೋಚಿಸಿ ಯೋಜಿಸಿದ್ದೇವೆ. "ನುಡಿತೇರು" ಕೊನೆಯ ದಿವಸ ಮಹಾನಗರ ಪಾಲಿಕೆಯ ಬಳಿಗೆ ಬಂದು ಸೇರುತ್ತದೆ. ಇದರಿಂದಾಗಿ ಸಾಹಿತ್ಯ ಸಮ್ಮೇಳನದ ವಿಚಾರ ಬೆಂಗಳೂರಿನ ತುಂಬೆಲ್ಲಾ ಹರಡುವ, ಮನೆಮಾತಾಗುವ ಸಾಧ್ಯತೆಗಳು ಹೆಚ್ಚಾಗಲಿವೆ.
ಒಟ್ಟಾರೆ ಒಂದು ದಾಖಲೆ ಆಗುವ ರೀತಿಯಲ್ಲಿ ಸಮ್ಮೇಳನ ನಡೆಯಬೇಕು ಎನ್ನುವ ಕನಸು ನನ್ನದು. ಬೆಂಗಳೂರಿನ ಜನತೆ ಸ್ಪಂದಿಸಬೇಕು. ಎಲ್ಲ ರೀತಿಯ ನೆರವನ್ನೂ ನೀಡಬೇಕು. ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು ಪ್ರತಿಯೊಬ್ಬರು ಸ್ಪಂದಿಸಿದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಅದರಲ್ಲಿಯೂ ಸರ್ಕಾರದ ಸಹಕಾರ ಬಹಳ ಮುಖ್ಯ.
ವಾಸ್ತವ ಬೇರೆ, ಆದರ್ಶ ಬೇರೆ. ಮಾತನಾಡುವವರು ಒಂದು ಕಡೆ ಇರ‍್ತಾರೆ. ಮಾಡುವವರು ಒಂದು ಕಡೆ ಇರ‍್ತಾರೆ. ಮಾತನಾಡುವ, ಮಾಡುವ ಮನಸ್ಸುಗಳು ಮಿಲಾಕತ್ ಆದ್ರೇನೆ ಸಮ್ಮೇಳನ ಯಶಸ್ವಿಯಾಗೋದು. ಆಡಳಿತ ಯಂತ್ರ ಕೈಜೋಡಿಸಬೇಕು. ಶ್ರೀ ಸಾಮಾನ್ಯನೂ ಕೈ ಜೋಡಿಸಬೇಕು. ಪರಿಷತ್ತಿನ ಜೊತೆಗೆ ಎಲ್ಲರೂ ಕೈ ಜೋಡಿಸಿದರೆ ಮಾತ್ರವೇ ಸಮ್ಮೇಳನ ಯಶಸ್ವಿಯಾಗುತ್ತದೆಯೇ ವಿನಃ ಪರಿಷತ್ತೊಂದೇ ಸಮ್ಮೇಳನವನ್ನು ಯಶಸ್ವಿಯಾಗಿಸುತ್ತದೆ ಎನ್ನುವ ಯಾವ ಭ್ರಮೆಗಳು ನನಗಿಲ್ಲ. ಆ ಕಾರಣಕ್ಕಾಗಿಯೇ ಯಾರನ್ನೂ ನಿರಾಕರಣೆ ಮಾಡುವುದಿಲ್ಲ. ಎಲ್ಲರನ್ನೂ ಕೂಡಿಸಿಕೊಂಡೇ ಕನ್ನಡದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ.
ಸಮ್ಮೇಳನದ ವಿಶೇಷತೆಗಳೇನು? ಹಳೆಯ ಸಂಪ್ರದಾಯಗಳನ್ನೇ ಪಾಲಿಸುವಿರಾ? ಇಂದಿನ ಸ್ಥಿತಿಗತಿಗಳಿಗೆ ತಕ್ಕ ಹಾಗೆ ಮಾರ್ಪಾಟುಗಳಾಗುವ ಸಾಧ್ಯತೆಗಳಿವೆಯೇ?
ವೈವಿಧ್ಯಮಯವಾದ ಗೋಷ್ಠಿಗಳನ್ನು ಆಯೋಜಿಸಿದ್ದೇವೆ. ಪ್ರಧಾನ ವೇದಿಕೆಯ ಜೊತೆಗೆ ಇದ್ದೂ ೨ ಕಡೆಗಳಲ್ಲಿ ಸಮಾನಾಂತರ ವೇದಿಕೆಗಳನ್ನು ಕಲ್ಪಿಸಿದ್ದೇವೆ. ಬೆಂಗಳೂರನ್ನೇ ಕುರಿತಾದ semiಟಿoಡಿ ಇರುತ್ತದೆ. ಒಂದು ಹಿಂದಿನ ಬೆಂಗಳೂರು ಬೆಂಗಳೂರಿನ ಇತಿಹಾಸ ಮತ್ತು ಗತದ ಬೆಂಗಳೂರಿನ ಸ್ವರೂಪ ಹೇಗಿತ್ತು ಎಂಬುದರ ಕುರಿತಾದದ್ದು. ಮತ್ತೊಂದು ವರ್ತಮಾನದ ಬೆಂಗಳೂರು ಹಾಗೂ ನಾಳಿನ ಬೆಂಗಳೂರನ್ನು ಕುರಿತಾದದ್ದು. ನಮ್ಮ ಕನಸಿನ ಬೆಂಗಳೂರು ಹೇಗಿರಬೇಕು ಈ ವಿಚಾರವಾಗಿ ಸಾಹಿತಿಗಳಷ್ಟೇ ಅಲ್ಲದೇ ಬೇರೆ ಬೇರೆ ಕ್ಷೇತ್ರದ ಪರಿಣಿತರು ಕೂಡ ತಮ್ಮ ತಮ್ಮ ವಿಚಾರಧಾರೆಗಳನ್ನು ಮಂಡಿಸುತ್ತಾರೆ. ಇವತ್ತಿನ ಸಮಕಾಲೀನ ಸಮಸ್ಯೆಯಾಗಿರುವ ಮಾನವ ಹಕ್ಕುಗಳು, ಮಾಹಿತಿ ಹಕ್ಕುಗಳು, ಮಹಿಳೆ ಮತ್ತು ಮಕ್ಕಳ ಬಗೆಗಿನ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನೆಲದ ಮೇಲಿನ ಆಪ್ತತೆ ಕ್ಷೀಣಿಸುತ್ತಿದೆ. ಭೂಮಿಯ ಜೊತೆಗಿನ ಸಂಬಂಧ ಕಡಿಮೆಯಾಗುತ್ತಿದೆ. ಇದು ಬಹಳ ಅಪಾಯಕಾರಿ. ಭೂಮಿಯ ಕಡೆಗೆ ಪ್ರೀತಿಯುಂಟು ಮಾಡುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು, ರೈತರ ಸಮಸ್ಯೆಗಳು, ನಗರದತ್ತ ಗ್ರಾಮೀಣರ ಚಿತ್ತ ಸಾಹಿತ್ಯದ ವಿಚಾರಗಳು, ಕಾನೂನು ಮತ್ತು ಕನ್ನಡ, ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಕವಿಗೋಷ್ಠಿಗಳು ಹೀಗೆ ಪ್ರಧಾನವಾದ ಸಾಹಿತ್ಯಕ್ಕೆ ಸಂಬಂಧಪಟ್ಟ ಗೋಷ್ಠಿಗಳ ಜೊತೆಗೆ ಹೊಸತನವನ್ನು ನೀಡಬೇಕೆನ್ನುವ ದೃಷ್ಟಿಯಿಂದ ಹೊಸ ವಿಚಾರಗೋಷ್ಠಿಗಳು ರೂಪುಗೊಂಡಿವೆ.
ಇನ್ನು ನಾಡು ನುಡಿಗೆ ದುಡಿದಂತಹ ಕೆಲವು ಮಹನೀಯರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಯುವ ಕವಿಗಳು, ಬರಹಗಾರರು, ಸಾಹಿತಿಗಳಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದೇವೆ.
ಹೊಸ ಚಿಗುರು ಹಳೆ ಬೇರುಗಳನ್ನು ಸಮ್ಮಿಶ್ರಗೊಳಿಸಿ, ಎಲ್ಲಾ ವಿಷಯಗಳನ್ನು ಒಳಗೊಂಡ ಹಾಗೆ ಪರಿಷತ್ತು ವೈಶಿಷ್ಟ್ಯಪೂರ್ಣವಾದ ಸಮ್ಮೇಳನದ ಆಚರಣೆಗೆ ಸಜ್ಜಾಗುತ್ತಿದೆ.
ವಿಚಾರಗೋಷ್ಠಿಗಳನ್ನು ಪ್ರಧಾನ ವೇದಿಕೆಯಿಂದ ದೂರದ ವೇದಿಕೆಗಳಲ್ಲಿ ಆಯೋಜಿಸುವುದರಿಂದ ಹೆಚ್ಚು ಜನ ಬರುವುದು ಸಾಧ್ಯವಾಗುವುದಿಲ್ಲವೆನ್ನುವ ಅಭಿಪ್ರಾಯ ಸಾಹಿತಿಗಳಲ್ಲೇ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈಗ ನೋಡಿ, ಒಂದು ಬಹಳ ವೈಚಾರಿಕವಾದ ಸಂಗತಿ ಚರ್ಚೆಯಾಗುತ್ತಿದೆ ಎಂದ ಮಾತ್ರಕ್ಕೆ ಎಲ್ಲರಿಗೂ ಆಸಕ್ತಿ ಇರಲೇಬೇಕೆಂದೇನು ಇಲ್ಲವಲ್ಲ. ಎಲ್ಲರಿಗೂ ಎಲ್ಲಾ ವಿಷಯಗಳಲ್ಲೂ ಅಭಿರುಚಿ ಆಸಕ್ತಿ ಇರುತ್ತದೆ ಎನ್ನುವ ಭ್ರಮೆಗಳು ಬೇಡ ಮತ್ತು ಎಲ್ಲಾ ಕಡೆಗೆ ಎಲ್ಲಾ ಜನರು ಬರುವುದು ಸಾಧ್ಯವಿಲ್ಲ. ಈಗ ನನ್ನನ್ನೇ ತೆಗೆದುಕೊಳ್ಳಿ, ನನ್ನ ಆಸಕ್ತಿಗಳು ಕಾವ್ಯ, ಜಾನಪದ ಸಾಹಿತ್ಯ ಇತ್ಯಾದಿ. ಇದನ್ನುಳಿದು ಬೇರೆ ವಿಷಯಗಳಲ್ಲಿಯೂ ಅಷ್ಟೇ ಗಂಭೀರವಾಗಿ ಕುಳಿತುಕೊಳ್ಳುತ್ತೇನೆ ಎಂಬ ನಂಬಿಕೆ ನನಗಿಲ್ಲ. ಚಿತ್ರದುರ್ಗದಲ್ಲಿ ನಡೆದಂತಹ ಸಮ್ಮೇಳನದಲ್ಲಿ ಸಣ್ಣ ಸಣ್ಣ ವೇದಿಕೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸುತ್ತಿದುದನ್ನು ನಾನೇ ಪ್ರತ್ಯಕ್ಷ ಕಂಡಿದ್ದೇನೆ. ಹೀಗಾಗಿ ಎಷ್ಟೇ ದೂರವಿದ್ದರೂ ತಮಗೆ ಆಸಕ್ತಿ ಇರುವ ವಿಚಾರಗಳನ್ನು ಅರಿಯುವುದಕ್ಕೆ ಜನ ಬಂದೇ ಬರುತ್ತಾರೆ.
ಪ್ರತಿ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕಾರ್ಯಗತವಾಗದೆ ಕಾಗದಗಳಲ್ಲೇ ಭದ್ರವಾಗಿ ನೆಲೆಯೂರಿ ನಿಂತಿರುವುದು ತಮಗೂ ತಿಳಿದಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಸಮ್ಮೇಳನದಲ್ಲಿ ಹೊಸ ಸಂಪ್ರದಾಯವನ್ನು ಹುಟ್ಟು ಹಾಕುವ ಆಲೋಚನೆ ಇದೆಯೇ?
ನಿರ್ಣಯಗಳ ಬಗ್ಗೆ ಮಾತನಾಡುವುದು ಬೇಡವೆನಿಸುತ್ತಿದೆ. ಕಾರಣ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪರಿಷತ್ತು. ಕಾರ್ಯರೂಪಕ್ಕೆ ತರಬೇಕಿರುವುದು ಸರ್ಕಾರ.
ಸ್ವಾತಂತ್ರ್ಯಪೂರ್ವದಿಂದಲೂ ಸಾವಿರಾರು ನಿರ್ಣಯಗಳನ್ನು ಸಮ್ಮೇಳನ ತೆಗೆದುಕೊಂಡಿದೆ. ಅವುಗಳಲ್ಲಿ ಯಾವುದೋ ನಾಲ್ಕೈದು ಈಡೇರಿರುವುದು ಬಿಟ್ಟರೆ ಉಳಿದವು ಇದ್ದಲ್ಲಿಯೇ ಇದ್ದಾವೆ. ಅದಕ್ಕಾಗಿಯೇ ನಾವು ಚಂಪಾರವರ ಅಧ್ಯಕ್ಷತೆಯಲ್ಲಿ ನಿರ್ಣಯ ಅನುಷ್ಠಾನ ಸಮಿತಿಯ ರಚನೆ ಮಾಡಿ ಸರ್ಕಾರಕ್ಕೆ ಎಲ್ಲವನ್ನು ತಲುಪಿಸಿದ್ದೇವೆ. ಮಧ್ಯ ಮಧ್ಯ ಸರ್ಕಾರವನ್ನು ವಿಚಾರಿಸಿದಾಗ, ಆ ಸಮಯದಲ್ಲಿ ಒಂದಿಷ್ಟು ಉತ್ತರವನ್ನು ಕಳುಹಿಸುತ್ತಾರೆ ಅಷ್ಟೆ.
ಆದ್ದರಿಂದ ನಿರ್ಣಯಗಳನ್ನು ತೆಗೆದುಕೊಳ್ಳಬೇಕೋ ತೆಗೆದುಕೊಂಡಿರುವ ನಿರ್ಣಯಗಳ ಅನುಷ್ಠಾನಕ್ಕಾಗಿ ಪ್ರಯತ್ನಿಸಬೇಕೋ ಅಥವಾ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಬೇಕಾಗುತ್ತದೆಯೋ? ಒಟ್ಟಿನಲ್ಲಿ ಈ ಎಲ್ಲ ವಿಚಾರವಾಗಿ ಚಿಂತಿಸಿ, ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ.
ಚಂಪಾರವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಮಾತೃಭಾಷಾ ಶಿಕ್ಷಣ ಜಾರಿ ಕುರಿತಾದ ವಿಚಾರದಲ್ಲಿ ತೀವ್ರವಾದ ಚಳವಳಿಯನ್ನು ಮಾಡಿದರು. ಸಾಹಿತ್ಯ ಪರಿಷತ್ತು ಒಮ್ಮೊಮ್ಮೆ ಕನ್ನಡ ಭಾಷೆಯ, ಕನ್ನಡ ಜನತೆಯ ಹಿತಾಸಕ್ತಿಯನ್ನು ಕಡೆಗಣಿಸುವ ಸರ್ಕಾರಗಳ ವಿರುದ್ಧ ಹೋರಾಟಗಳನ್ನು ಮಾಡಿದ್ದು ಇದೆ. ನಿಮ್ಮ ನಿಲವು?
ಹೋರಾಟವೆಂದರೆ, ಕೇವಲ ಚಳವಳಿ ಮಾತ್ರವಲ್ಲ. ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ನಾನು ಕೂಡ ಹೋರಾಟವನ್ನು ಮಾಡಿದ್ದೇನೆ. issue bಚಿseಜ ಆದಂತಹ ಒಂದು ಹೋರಾಟ ಅದು.
ಪರಿಷತ್ತು ಬರೀ ಚಳವಳಿಯ ನೆಲೆಯೊಳಗೆ ನಿಲ್ಲುವುದು ಸಾಧ್ಯವಿಲ್ಲ. ಅದಕ್ಕೆ ಬೇರೆ ಬೇರೆಯಾದ ದಿಕ್ಕುಗಳೂ ಇವೆ. ಬಹಳ ಪ್ರಧಾನವಾದ ಸಂದರ್ಭದಲ್ಲಿ ಚಳವಳಿಗೂ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತದೆ ಮತ್ತು ಕನ್ನಡಪರ ಕೆಲಸವನ್ನು ಬೇರೆ ಬೇರೆ ದಿಕ್ಕಿನಿಂದಲೂ ಮಾಡುತ್ತಾ ಹೋಗುತ್ತದೆ. ಈಗ ನಾವು, ಪುಸ್ತಕ ಪ್ರಕಟಣೆ, ಗೋಷ್ಠಿಗಳು, ಉಪನ್ಯಾಸಗಳು, ಸಾಹಿತ್ಯ ಸಮ್ಮೇಳನಗಳು ಇವೆಲ್ಲವನ್ನು ಸಮರ್ಥವಾಗಿ ನೆರವೇರಿಸಿದ್ದೇವೆ. ಇವೆಲ್ಲವೂ ಕನ್ನಡದ ಪ್ರೀತಿಯ ಕೆಲಸಗಳೇ ಅಲ್ಲವೇ? ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಹೋರಾಟದ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅತ್ಯದ್ಭುತವೆನ್ನುವ ರೀತಿಯಲ್ಲಿ ತೊಡಗಿಸಿಕೊಂಡಿದ್ದನ್ನು ಜನತೆ ಗಮನಿಸಿದೆ. ನಾನು ಕೂಡ ನಾಡಿನ ತುಂಬ ಹೋರಾಟಕ್ಕಿಳಿಯುತ್ತೇನೆ ಎಂಬ ಘೋಷಣೆಯನ್ನು ಮಾಡಿದೆ ಮತ್ತು ಅದು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಇದು ಕೂಡ ಕಡಿಮೆ ಸಾಧನೆಯೇನಲ್ಲವಲ್ಲ. ಆ ನಂತರದ ದಿನಗಳಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತದ್ದು ತಮಗೆಲ್ಲರಿಗೂ ತಿಳಿದಿರುವ ವಿಚಾರವೇ.
ಸರ್ಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿದ ಸ್ವತ್ತನ್ನು ಪರಭಾಷೆ ಮಾಡಲು ಹೊರಟಾಗ ಸರ್ಕಾರದ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ಉಗ್ರವಾದ ಪ್ರತಿಭಟನೆಯನ್ನು ಮಾಡಿತ್ತು.
ಇನ್ನು ಭಾಷೆಗೆ ಸಂಬಂಧಪಟ್ಟ ಚಳವಳಿಯನ್ನು ಮಾಡುವ ಹಾಗಿಲ್ಲವಲ್ಲ ಹೇಗೆ ಮಾಡ್ತಿರಿ? ಅದು ಕೋರ್ಟಿನಲ್ಲಿದೆಯಲ್ಲಾ. ನಾನು ಮತ್ತು ಅನಂತಮೂರ್ತಿಯವರು ಸುಪ್ರೀಂ ಕೋರ್ಟ್‌ನಲ್ಲಿ ಪಾರ್ಟಿಗಳಾಗಿದ್ದೇವೆ. ಹಾಗಾಗಿ ಪರಿಷತ್ತು ಸಂದರ್ಭಾನುಸಾರ ಚಳವಳಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿರುತ್ತದೆ. ನನ್ನ ಅಧಿಕಾರಾವಧಿಯಲ್ಲೂ ಕನ್ನಡ ನಾಡು, ನುಡಿ, ಸಂಸ್ಕೃತಿಯ ಹಿತವನ್ನು ಕಾಪಾಡುವ ವಿಚಾರಗಳನ್ನು ಅಧಿಕಾರಸ್ಥರಿಗೆ ಮನದಟ್ಟು ಮಾಡುವ ಕಾರ್ಯವನ್ನು ಮಾಡುತ್ತಿದ್ದೇನೆ.
ಬೆಂಗಳೂರಿಗೆ ಅನ್ಯಭಾಷಿಕರ ಅನಿಯಂತ್ರಿತ ವಲಸೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕನ್ನಡ ನಾಡಿನಿಂದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದರೂ ಕನ್ನಡವನ್ನು ಕಲಿಯಬೇಕು, ಗೌರವಿಸಬೇಕು ಎಂಬ ಮನೋಭಾವವೇ ಇಲ್ಲದೆ ತಮ್ಮ ಭಾಷೆ ಸಂಸ್ಕೃತಿಯನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನಗಳಾಗುತ್ತಿವೆ. ಬೆಂಗಳೂರನ್ನು ಕನ್ನಡೀಕರಣಗೊಳಿಸುವ ದಿಕ್ಕಿನಲ್ಲಿ ಸಮ್ಮೇಳನದ ಪಾತ್ರವೇನು?
ಅನ್ಯಭಾಷಿಕರ ವಲಸಿಗರ ಸಮಸ್ಯೆ ಬೆಳವಣಿಗೆ ಕಂಡುಕೊಳ್ಳುತ್ತಿರುವ ಎಲ್ಲ ನಗರಗಳ ಸಮಸ್ಯೆಯೂ ಹೌದು. ಈಗ ನಮ್ಮವರು ಬಾಂಬೆಯಲ್ಲಿ ಲಕ್ಷಾಂತರ ಮಂದಿ ಇಲ್ಲವೇ? ಜೀವನೋಪಾಯಕ್ಕಾಗಿ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು ಅದು ಅನಿವಾರ್ಯ ಮತ್ತು ಸಹಜ ಕೂಡ. ನೀವು ಎಲ್ಲಿಯವರಾದರೂ ಆಗಿರಿ ಇಲ್ಲಿಗೆ ಬಂದ ನಂತರ ಕನ್ನಡದಲ್ಲಿ ನಿಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳು ನಡೆಯಬೇಕು ಎನ್ನುವುದು ನಮ್ಮ ಆಶಯ.
ಇಲ್ಲಿಯ ಆಡಳಿತ ಕನ್ನಡದ್ದು. ಕನ್ನಡದಲ್ಲಿಯೇ ಸ್ಪಂದಿಸಬೇಕು. ಅದಕ್ಕೆ ಏನು ಮಾಡಬೇಕು? ಕನ್ನಡದ ಆಡಳಿತ ಬಿಗಿಯಾದರೆ ಸಹಜವಾಗಿ ಇಲ್ಲಿಗೆ ಬಂದವರೂ ಸಹ ನಮ್ಮ ಮಾತನ್ನು ಕೇಳುತ್ತಾರೆ. ಉದಾಹರಣೆಯಾಗಿ, ಮಹಾನಗರ ಪಾಲಿಕೆ ಕಛೇರಿಗೆ ಸಿಬ್ಬಂದಿ ಇದು ನಮಗೆ ಗೊತ್ತಾಗುವುದಿಲ್ಲ ಕನ್ನಡದಲ್ಲಿ ಬರೆದುಕೊಂಡು ಬನ್ನಿ ಎಂದು ಹೇಳಿದರೆ ಅವರಿಗೆ ಬರದಿದ್ದರೂ, ಬೇರೆಯವರ ಹತ್ತಿರವಾದರೂ ಬರೆಯಿಸಿಕೊಂಡು ಬರುತ್ತಾರೆ. ಹೀಗಾಗಿ ರಾಜಕೀಯ ಇಚ್ಛಾಶಕ್ತಿ ಮತ್ತು ಶ್ರೀ ಸಾಮಾನ್ಯನ ಪ್ರೀತಿ ಇವೆರಡರ ಅಗತ್ಯವೂ ಇದೆ.
ಎಲ್ಲರ ಅಂತರಂಗದಲ್ಲೂ ಕನ್ನಡದ ಬಗ್ಗೆ ಜಾಗೃತಿ ಉಂಟು ಮಾಡುವುದೇ ಸಮ್ಮೇಳನದ ಉದ್ದೇಶ. ಇದರಿಂದ ಪ್ರೇರೇಪಿತರಾದ ಜನ ಕನ್ನಡ ಬಳಸುವ, ಕನ್ನಡ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ಕೈಗೊಂಡು ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡುವ ದಿಕ್ಕಿನಲ್ಲಿ ಹೊರಡುತ್ತಾರೆ.
ಹಬ್ಬದಂತೆ ಉತ್ಸವದಂತೆ ಸಂಭ್ರಮಿಸುವ ವಾತಾವರಣ ನಿರ್ಮಾಣ ಮಾಡಿ, ಅದರಿಂದ ಕನ್ನಡತನದ ನಿರ್ಮಾಣ ಮಾಡುವುದೇ ಸಮ್ಮೇಳನದ ಧ್ಯೇಯ. ಒಂದು ಸಮಾರಂಭದಲ್ಲಿ ಎಚ್.ವಿಶ್ವನಾಥ್ ಹೇಳ್ತಾ ಇದ್ದರು. ನಾವೆಲ್ಲಾ ಇಂದು ನಾಯಕರಾಗಿ ನಿಂತು ಭಾಷಣ ಮಾಡುತ್ತಿರುವುದಕ್ಕೆ ಪ್ರೇರಣೆ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳನಗಳಿಂದಲೇ ನಮಗೆ ಕನ್ನಡದ ಬಗ್ಗೆ ವಿಶ್ವಾಸ ಮೂಡಿ, ಕನ್ನಡ ಸಂಘಗಳನ್ನು ಸ್ಥಾಪಿಸಿ ಹಾಗೇನೇ ರಾಜಕೀಯ ರಂಗದಲ್ಲೂ ಭಾಷಣಗಳನ್ನು ಮಾಡುತ್ತಲೇ ರಾಜಕಾರಣಿಯೇ ಆದೊ ಅಂತ. ಹೀಗೆ ಸಾವಿರಾರು ಜನರಿಗೆ ಈ ಸಮ್ಮೇಳನಗಳು ಪ್ರೇರಣೆಯನ್ನು ನೀಡಿವೆ. ವೈಯಕ್ತಿಕವಾಗಿ ನನಗೂ ಕೂಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯುವುದಕ್ಕೆ ಮತ್ತು ಇವತ್ತಿನ ಈ ಹಂತವನ್ನು ತಲುಪುವುದಕ್ಕೆ ಸಾಹಿತ್ಯ ಸಮ್ಮೇಳನಗಳೇ ಸ್ಫೂರ್ತಿ. ಹಾಗಾಗಿ ಹೊರಗಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವಂಥವರಿಗೂ ಕನ್ನಡದ ಮೇಲೆ ಪ್ರೀತಿಯನ್ನುಂಟು ಮಾಡುವ ದಿಕ್ಕಿನಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿದೆ.
ಬೆಂಗಳೂರಿನಲ್ಲಿ ಕನ್ನಡ ಭಾಷೆಗೆ ಮಾನ್ಯತೆಯೇ ಇಲ್ಲವಾಗುತ್ತಿದೆ ಜಾಹೀರಾತುಗಳಲ್ಲಿ, ನಾಮ ಫಲಕಗಳಲ್ಲಿ ಆಂಗ್ಲ ಭಾಷೆ ವಿಜೃಂಭಿಸುತ್ತಿದೆ. ದಶಕಗಳ ಕಾಲದಿಂದ ಕನ್ನಡ ಪರ ಸಂಘಟನೆಗಳು ಹೋರಾಟವನ್ನು ನಡೆಸುತ್ತಲೇ ಬಂದಿವೆ. ಇದಕ್ಕೆಲ್ಲ ಸರ್ಕಾರದ ಅವಜ್ಞೆ ಕಾರಣ ಅನಿಸುವುದಿಲ್ಲವೇ? ಕನಿಷ್ಠ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಾದರೂ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸರ್ಕಾರ ಎಚ್ಚೆತ್ತುಕೊಳ್ಳುವ ಹಾಗೆ ಕಾರ್ಯನಿರ್ವಹಿಸಲು ಸಾಧ್ಯವಿದೆಯೇ?
ನಾನು ಈಗಾಗಲೇ ಸರ್ಕಾರದ ಜೊತೆಗೆ, ಬೆಂಗಳೂರು ಮಹಾನಗರ ಪಾಲಿಕೆಯ ಜೊತೆಗೆ ಚರ್ಚಿಸಿ ಎಲ್ಲಾ ಕಡೆಗಳಲ್ಲಿಯೂ ಕನ್ನಡದ ಫಲಕಗಳೇ ಇರುವಂತಾಗಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇನೆ.
ಪರಿಷತ್ತನ್ನು ಜನಮುಖಿಯಾಗಿಸಬೇಕೆಂಬ ಹೆಬ್ಬಯಕೆಯಿಂದ ಬಂದವರು ನೀವು. ಸಾಹಿತ್ಯ ಸಮ್ಮೇಳನವನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವಲ್ಲಿ ನಿಮ್ಮ ಯೋಜನೆಗಳೇನು?
ಎಲ್ಲ ವಾಹಿನಿಗಳಿಗೂ ನೇರ ಪ್ರಸಾರ ಮಾಡುವಂಥ ಅವಕಾಶವನ್ನು ನೀಡುತ್ತೇವೆ. ಎಲ್ಲರಿಗೂ ಸ್ವಾತಂತ್ರ್ಯ ಉಂಟು. ಈಗಾಗಲೇ ಬೆಂಗಳೂರು ದೂರದರ್ಶನದ ನಿರ್ದೇಶಕರು ನಮ್ಮ ಜೊತೆ ಮಾತನಾಡಿ ನೇರಪ್ರಸಾರ ಮಾಡಲು ಒಪ್ಪಿದ್ದಾರೆ.
ಕನ್ನಡದ ಈ ಕೆಲಸವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಧ್ಯಮ ಮಿತ್ರರದ್ದು. ನಾನೀರುವಾಗಲೇ ಮಾಧ್ಯಮ ಮಿತ್ರರ ಜೊತೆಯಲ್ಲಿ ಮಾತನಾಡಿ ಅವರ ಸಂಪೂರ್ಣ ಸಹಕಾರವನ್ನು ಕೋರಿದ್ದೇನೆ. ಕಳೆದ ಬಾರಿ ಗದಗ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮಾಧ್ಯಮ ಮಿತ್ರರು ನೀಡಿದಂತಹ ಬೆಂಬಲ ಮತ್ತು ಅವರು ತೆಗೆದುಕೊಂಡ ತೀರ್ಮಾನಗಳು ನನಗೆ ಬಹಳ ಸಂತೋಷ ತಂದಿದೆ. ಅವರ ಮೇಲೆ ಭರವಸೆಯೂ ಮೂಡಿದೆ. ಕಳೆದ ಬಾರಿ ಸಮ್ಮೇಳನದಲ್ಲಿ ಸಣ್ಣಪುಟ್ಟ ವ್ಯತ್ಯಯಗಳನ್ನು ಉಂಟು ಮಾಡಬೇಕೆಂದು ಬಂದಿದ್ದವರಿಗೆ ಬುದ್ದಿ ಕಲಿಸಿದವರೇ ಮಾಧ್ಯಮ ಮಿತ್ರರು (ತಮ್ಮ ಜೇಬುಗಳನ್ನು ತಾವೇ ಕತ್ತರಿಸಿಕೊಂಡು ಸಮ್ಮೇಳನದಲ್ಲಿ ಜೇಬುಗಳ್ಳತನ ಎಂದು ಉಯಿಲೆಬ್ಬಿಸಿದವರನ್ನು ಹಿಡಿದು ನಿಮ್ಮ ಜೇಬುಗಳನ್ನೇ ನೀವು ಕಾಯ್ದುಕೊಳ್ಳದಿದ್ದ ಮೇಲೆ ಕನ್ನಡವನ್ನು ಏನ್ರಯ್ಯ ಕಾಯ್ತೀರಿ ಎಂದೆನ್ನುವ ಬುದ್ದಿಮಾತುಗಳನ್ನು, ಎಚ್ಚರಿಕೆಯನ್ನು ಹೇಳಿದವರು ಮಾಧ್ಯಮ ಮಿತ್ರರೇ) ಅವರ ಸಹಕಾರ ಶ್ಲಾಘನೀಯ.
ಈ ಬಾರಿಯೂ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ ಗೆಳೆಯರು ಸಮ್ಮೇಳನದ ಮಹತ್ವದ ಸಂಗತಿಗಳನ್ನು ಸದುದ್ದೇಶಗಳನ್ನು ಜನರ ಮನೆ-ಮನಗಳಿಗೆ ತಲುಪಿಸುವಲ್ಲಿ ಒಮ್ಮತದ ಸಹಕಾರವನ್ನು, ನೆರವನ್ನು ನೀಡುತ್ತಿದ್ದಾರೆಂಬ ವಿಶ್ವಾಸ ನನಗಿದೆ.
ನಾಡಿನ ಜನತೆಗೆ ಸಮ್ಮೇಳನದ ಮುಖಾಂತರ ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ?
ಸಂದೇಶ ಎನ್ನುವುದಕ್ಕಿಂತ ಹೆಚ್ಚಾಗಿ ಕನ್ನಡತನವನ್ನು ಕಾಪಿಟ್ಟುಕೊಳ್ಳುವ ದಿಕ್ಕಿನಲ್ಲಿ ಈ ಸಮ್ಮೇಳನ ಒಂದು ಪ್ರೇರಣೆಯನ್ನು ನೀಡಬೇಕು. ಬೆಂಗಳೂರಿಗೆ ಸಮ್ಮೇಳನ ಬಂದಿರುವುದರಿಂದ ಕನ್ನಡಕ್ಕೇ ಒಳ್ಳೆಯದೇನೋ ಆಗಬಹುದು ಎಂಬ ಭಾವ ಕನ್ನಡಿಗರಲ್ಲಿ ಮೂಡಿದೆ. ಇದೂ ಕೂಡ ಬಹಳ ಒಳ್ಳೆಯ ಬೆಳವಣಿಗೆಯೇ.
ಕುವೆಂಪುರವರು ಹೇಳಿದ ಹಾಗೆ "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಕನ್ನಡ ಬಹಳ ಮುಖ್ಯ. ಎಲ್ಲರ ಎದೆಯಲ್ಲೂ ಕನ್ನಡತನವನ್ನು ತುಂಬುವ ಪ್ರೇರಕ ಶಕ್ತಿಯನ್ನು ಈ ಸಮ್ಮೇಳನ ತುಂಬಬೇಕು ಎನ್ನುವ ಆಶಯ ನನ್ನದು. ಅದು ಖಂಡಿತವಾಗಿಯೂ ಈಡೇರುತ್ತದೆ.
ನಲ್ನುಡಿಯ ಓದುಗ ಬಳಗದೊಂದಿಗೆ ನಿಮ್ಮ ಮಾತುಗಳು?
’ಕರವೇ ನಲ್ನುಡಿ’ ನನಗೆ ಬಹಳ ಇಷ್ಟವಾದಂಥ ಒಂದು ಪತ್ರಿಕೆ. ಕನ್ನಡ ಭಾಷೆ ಸಂಸ್ಕೃತಿ, ನೆಲ, ಜಲದ ಬಗ್ಗೆ ಬದ್ಧತೆಯುಳ್ಳ ಒಂದು ವಿಶಿಷ್ಟವಾದ ಪತ್ರಿಕೆ. ನಾಡು ನುಡಿಯ ವಿಚಾರದಲ್ಲಿ ಕಾಳಜಿ ಹೊಂದಿರುವ ಮನಸ್ಸುಗಳೇ ಈ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿವೆ ಎಂಬುದೇ ಬಹಳ ಮುಖ್ಯವಾದ ಅಂಶ. ಲಾಭಕ್ಕಾಗಿಯೋ, ಸ್ವಾರ್ಥಕ್ಕಾಗಿಯೋ ಮಾಡುತ್ತಿರುವುದಲ್ಲ. ಸಂಪೂರ್ಣವಾಗಿ ಕನ್ನಡದ ಬೆಳವಣಿಗೆಗಾಗಿ ತನ್ನನ್ನು ತೊಡಗಿಸಿಕೊಂಡಿರುವ ಪತ್ರಿಕೆ ಇದು.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಬಂಧ ’ನಲ್ನುಡಿ’ ಪತ್ರಿಕೆಯೊಂದಿಗೆ ಬಹಳ ಮಧುರವಾಗಿಯೇ ಇದೆ.
’ನಲ್ನುಡಿ’ ಪತ್ರಿಕೆಯ ಲಕ್ಷಾಂತರ ಓದುಗ ಬಂಧುಗಳಲ್ಲಿ ಈ ಮೂಲಕ ನನ್ನ ಮನವಿಯೇನೆಂದರೆ, ನೀವೆಲ್ಲರೂ ಕೂಡ ಪರಿಷತ್ತಿನ ಈ ಸಮ್ಮೇಳನಕ್ಕೆ ’ನಲ್ನುಡಿ’ಯಿಂದಲೇ ಹರಸಿ, ಹಾರೈಸಿ ಯಶಸ್ವಿಗೊಳಿಸಿ, ಸಮ್ಮೇಳನದ ಯಶಸ್ಸಿಗೆ ’ನಲ್ನುಡಿ’ಯೂ ಕಾರಣವಾಗಬೇಕು.
’ನಲ್ನುಡಿ’ಯ ಓದುಗರು ಶುಭವನ್ನು ಹೊತ್ತು ತರಬೇಕು.

No comments:

Post a Comment

ಹಿಂದಿನ ಬರೆಹಗಳು