Tuesday, February 8, 2011

ಕನ್ನಡ ಮತ್ತು ಸಾಹಿತ್ಯ ಸಮ್ಮೇಳನ


ಕರ್ನಾಟಕದ ಮೂಲ ಮನಸ್ಸುಗಳನ್ನು ಒಂದುಗೂಡಿಸಿ ಭಾಷಾವಾರು ಕನ್ನಡ ಪ್ರಾಂತವನ್ನು ಕಟ್ಟುವ ಪ್ರೇರಣೆಯ ಹಿಂದೆ ಇದ್ದದ್ದು ಕನ್ನಡ ಚಳವಳಿ. ಸುತ್ತಲಿನ ಪ್ರಾಂತಗಳಲ್ಲಿ ಹರಡಿದ್ದ ಕನ್ನಡ ಕುಲಕೋಟಿಗಳನ್ನು ಒಂದು ರಾಜ್ಯದ ಚೌಕಟ್ಟಿನೊಳಗೆ ತರಲು ಪ್ರೇರೇಪಿಸಿದ್ದು ಕನ್ನಡ ಏಕೀಕರಣ ಚಳವಳಿ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾಷಾವಾರು ರಾಜ್ಯಗಳ ಕಲ್ಪನೆ ಸಹ ಉಂಟಾಯಿತು. ನಮ್ಮ ನಾಡಗೀತೆ ಕುವೆಂಪು ಅವರ "ಜಯ ಭಾರತ ಜನನಿಯ ತನುಜಾತೆ" ಈ ಪದ್ಯ ೧೯೨೮ರಲ್ಲಿ ರಚಿತವಾದದ್ದು. ಭಾರತ ಮಾತೆಯ ದೇಹದಿಂದ ಹುಟ್ಟಿದವಳು ಈ ಕರ್ನಾಟಕ ಮಾತೆ. ಎಂಥ ಅದ್ಭುತ ಕಲ್ಪನೆ. ಭಾವನಾತ್ಮಕವಾಗಿ ಭಾರತವೂ ಮಾತೆ, ಕರ್ನಾಟಕವೂ ಆ ದೇಶದ ಭಾಗ. ಈ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಇದು ’ಏಕೀಕರಣ’ದ ನೆಲೆಯಲ್ಲಿ ಎಲ್ಲರೂ ಒಂದಾಗಬೇಕು ಎಂಬ ಸಂದೇಶವನ್ನು ಸಾರಿ ಹೇಳುತ್ತದೆ. ಕುವೆಂಪು ತಮ್ಮ ಇನ್ನೊಂದು ಕವಿತೆಯಲ್ಲಿ ’ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವವರನು ಕೂಡಿಸಿ ಒಲಿಸು; ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು!’ ಎಂದು ಆಗಲೇ ಎಚ್ಚರಿಸಿದ್ದು ಈಗಲೂ ಎಚ್ಚರಿಕೆಯ ಸೂತ್ರವಾಗಿದೆ. ಅಂದಿನಿಂದಲೂ ಈಗಿನವರೆಗೂ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡಿ ಉಳಿಸಿಕೊಳ್ಳಬೇಕಾಗಿದೆ.
ಕೃತಿಗಳ ಪ್ರಕಟಣೆ, ಸಾಹಿತ್ಯ ಪರೀಕ್ಷೆಗಳು, ಕಮ್ಮಟಗಳು, ಶಿಬಿರಗಳು, ಶಾಲೆಗಾಗಿ ಸಾಹಿತ್ಯ, ವಿಚಾರ ಮಂಥನಗಳು; ಗ್ರಾಮೀಣ ಸಾಹಿತ್ಯ ಯೋಜನೆ, ಇವುಗಳ ಜೊತೆಗೆ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ತಾಲೂಕು-ಜಿಲ್ಲೆ ಸಾಹಿತ್ಯ ಸಮ್ಮೇಳನಗಳು. ಇವೆಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಮುಖಗಳು. ಮತ್ತೆ ಸಾಹಿತ್ಯ ಸಮ್ಮೇಳನ ಬಂದಿದೆ! ಸಾಹಿತ್ಯ ಸಮ್ಮೇಳನ ಎಂದರೆ ನೆನಪಿಗೆ ಬರುವುದು ವೇದಿಕೆ ಕಾರ್ಯಕ್ರಮಗಳು, ಸಮನಾಂತರ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಊಟ-ತಿಂಡಿ ವ್ಯವಸ್ಥೆ, ರಾಜಕಾರಣಿಗಳ ವೈಭವೀಕರಣ, ಗೋಷ್ಠಿಗಳಲ್ಲಿ ಸಭಾಸದರ ಕೊರತೆ, ಸಮಯ ತಪ್ಪಿ ನಡೆಯುವ ಹಲವು ಕಾರ್ಯಕ್ರಮಗಳು, ಸಮ್ಮೇಳನ ಸಂಚಿಕೆಯ ಸಾಂಕೇತಿಕ ಬಿಡುಗಡೆ (ಪೂರ್ತಿ ಸಂಚಿಕೆ ಇನ್ನಾವಾಗಲೋ) ಪುಸ್ತಕ ಪ್ರದರ್ಶನ; ಸಮಯಾಭಾವ ಒತ್ತಡದಿಂದ ಯಾವ ವಿಷಯದ ಬಗ್ಗೆ ದೃಢತೆ ಇಲ್ಲದ ಭಾಷಣಗಳು ಕೊನೆಗೆ ನಿರ್ಣಯಗಳ ಮಂಡನೆ, ಅನುಷ್ಠಾನದ ಬಗ್ಗೆ ಕೇಳಬೇಡಿ. ಇವು ಸಾಹಿತ್ಯ ಸಮ್ಮೇಳನದ ಮುಖ್ಯ ಅಂಶಗಳು.
ಇನ್ನೂ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಬಗ್ಗೆ ಹಿಂದೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ವಿಶೇಷ ಗೌರವ ಇದ್ದಿತು. ಅವರ ನೇತೃತ್ವದಲ್ಲಿ ಕನ್ನಡ ಕೆಲಸಗಳು ನಡೆಯುತ್ತಿದ್ದವು. ಅವರನ್ನು ನಾಡಿನೆಲ್ಲೆಡೆ ಕರೆಸಿ ವಿಚಾರ ಸಂಕಿರಣ ನಡೆಸುತ್ತಿದ್ದರು. ಕನ್ನಡದ ಯಾವುದೇ ಸಮಸ್ಯೆಗಳಿಗೆ ಸಲಹೆ ಸೂಚನೆ ಹೊಂದುತ್ತಿದ್ದರು.
***
ಸಮ್ಮೇಳನ ಹೇಗಿರಬೇಕು?
* ಸಾಹಿತ್ಯದ ಹಲವು ವಿಚಾರಾಸ್ಪದ ವಿಷಯಗಳ ಮೇಲೆ ಪ್ರಾಧಾನ್ಯತೆ ಕೊಟ್ಟು ಪ್ರಚಲಿತ ರಾಜಕೀಯ ಸಾಮಾಜಿಕ ಸಾಂಸ್ಕೃತಿಕ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಬೇಕು.
* ಗಂಭೀರ ಸಾಹಿತ್ಯ ವಿಷಯಗಳು ಆಸಕ್ತರಿಗೆ ಮೀಸಲಾಗಿರುವಂತೆ ಸಮಾನಾಂತರ ವೇದಿಕೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳು, ಗೀತ-ಸಂಗೀತ-ಕವಿಗೋಷ್ಠಿಗಳು ಪ್ರಧಾನ ವೇದಿಕೆಯಲ್ಲಿ ನಡೆಯಬೇಕು.
* ಭಾಷಣಕಾರರಿಗೆ ಸಮಯ ನಿರ್ಬಂಧ ಇರಬೇಕು.
* ಪ್ರಾಜ್ಞರಿಗೆ ಅವಕಾಶ ಕೊಡಬೇಕು.
* ಆಳ್ವಾಸ್ ನುಡಿಸಿರಿಯಲ್ಲಿ ಸಾಹಿತಿಗಳಿಗೆ ಮಾತ್ರ ಅವಕಾಶವಿರುವಂತೆ ಮತ್ತು ಮಹಾರಾಷ್ಟ್ರದಲ್ಲಿ ರಾಜಕಾರಣಿಗಳು ಸಾಮಾನ್ಯ ಪ್ರೇಕ್ಷಕರಂತೆ ಆಗಬೇಕು.
* ಸಾಹಿತಿ-ರಾಜನೀತಿಜ್ಞ ಅವಕಾಶ ಕೊಡಲಿ.
* ಸ್ಮರಣ ಸಂಚಿಕೆಗಳು ಸಮ್ಮೇಳನ ಮುಗಿದ ತಿಂಗಳೊಳಗಾಗಿ ಪರಿಪೂರ್ಣವಾಗಿ ಪ್ರಕಟವಾಗಿ ಸಾಮಾನ್ಯ ಓದುಗರಿಗೆ ನಿಲುಕುವ ಅತ್ಯಲ್ಪ ಬೆಲೆಯಲ್ಲಿ ಬಿಡುಗಡೆ ಆಗಬೇಕು.
* ಸಮ್ಮೇಳನ ನಡೆಯುವ ಪ್ರದೇಶದ ಬಗ್ಗೆ ಪರಿಪೂರ್ಣ ಮಾಹಿತಿಯುಳ್ಳ ಗ್ರಂಥ ಬಿಡುಗಡೆ ಆಗಬೇಕು. ಈಗಾಗಲೇ ಕೆಲ ಸಮ್ಮೇಳನಗಳಲ್ಲಿ ಈ ಕಾರ್ಯ ಆಗಿದೆ.
* ಸಮ್ಮೇಳನಕ್ಕೆ ಮುನ್ನ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ, ಅವುಗಳನ್ನು ಸಮಿತಿ ಮುಂದೆ ಇಟ್ಟು ವಿಮರ್ಶಿಸಿ, ಸಮಿತಿ ವಿಷಯಗಳನ್ನು ಸೇರಿಸಿ ಮತ್ತು ಸಮ್ಮೇಳನದಲ್ಲಿ ಬರುವ ಸೂಚನೆಗಳನ್ನು ಆಧರಿಸಿ ನಿರ್ಣಯಗಳನ್ನು ಸ್ವೀಕರಿಸಿ ಮಂಡಿಸಬೇಕು. ಆಯಾ ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ, ಜಿಲ್ಲಾ ತಾಲೂಕು ಘಟಕಗಳ ಸಹಾಯ ಸಹಕಾರದೊಂದಿಗೆ ಇತರ ಸಮಿತಿಗಳೊಂದಿಗೆ ನಿರ್ಣಯಗಳನ್ನು ಅನುಷ್ಠಾನ ಮಾಡಬೇಕು.
***
ಮಾತೃಭಾಷೆ ಶಿಕ್ಷಣ ಮಾಧ್ಯಮಕ್ಕೆ; ಆಡಳಿತದಲ್ಲಿ ಕನ್ನಡ ಅಂಕಿಗಳ ಬಳಕೆಗೆ; ಪ್ರಮುಖ ಊರಿನ ಹೆಸರುಗಳ ಕನ್ನಡೀಕರಣ ಬಗ್ಗೆ; ಮಹಾಜನ ವರದಿ ಮತ್ತು ಸರೋಜಿನಿ ಮಹಿಷಿ ವರದಿಗಳ ಜಾರಿಗೆ, ಗಡಿನಾಡು ಶಿಕ್ಷಣ ನಿರ್ದೇಶನಾಲಯದ ಸ್ಥಾಪನೆ ಬಗ್ಗೆ; ಜಾನಪದ-ರಂಗಭೂಮಿ-ಸಾಂಸ್ಕೃತಿಕ ಕಲೆಗಳ ಉಳಿವಿಗಾಗಿ ಒತ್ತಾಯಿಸುವುದು ಅವಶ್ಯವಾಗಿದೆ.
***
ಕೇವಲ ’ಕಲ್ಯಾಣ ಕರ್ನಾಟಕ’, ’ಕಿತ್ತೂರ ಕರ್ನಾಟಕ’ ಎಂದು ಮರುನಾಮಕರಣ ಮಾಡಿ ಶಬ್ದಗಳಲ್ಲಿ ವೈಭವ ಮಾಡುವುದು ಬೇಡ, ಅಲ್ಲಿ ಜನರ ಮೂಲಭೂತ ಅವಶ್ಯಕತೆಗಳ ಜೊತೆಗೆ ಪ್ರಬಲ ಸಮಸ್ಯೆಗಳಾಗುವ ಶೌಚಾಲಯ, ಸಂತ್ರಸ್ತರಿಗೆ ಆಶ್ರಯ, ಸಾಂಕ್ರಾಮಿಕ ರೋಗದ ತಡೆಗಟ್ಟುವಿಕೆ, ಸಾರಿಗೆ ವ್ಯವಸ್ಥೆ ಇವೆಲ್ಲವುಗಳ ಬಗ್ಗೆ ಆದ್ಯ ಗಮನ ಕೊಟ್ಟಾಗ ಆ ಹೆಸರಿನ ಸಾರ್ಥಕತೆ ಆಗುವುದು.
***
ಈ ಸಲ ರಾಜಧಾನಿ ಬೆಂಗಳೂರಿನಲ್ಲಿ ೪೦ ವರ್ಷಗಳ ಬಳಿಕ ಸಮ್ಮೇಳನ ನಡೆಯುತ್ತಲಿದೆ. ಇಂಗ್ಲೀಷ್, ತಮಿಳು, ತೆಲುಗು, ಮಲೆಯಾಳಂಮಯವಾಗುತ್ತಿರುವ; ಆಂಗ್ಲ ಶಿಕ್ಷಣ ಮಾಧ್ಯಮ ಶಾಲೆಗಳಿಂದ ತುಂಬಿರುವ; ಕನ್ನಡ ಚಲನಚಿತ್ರಗಳು, ಪತ್ರಿಕೆಗಳು ಮಾಯವಾಗುತ್ತಿರುವ, ಐಟಿ ಬಿಟಿ ಮಯವಾಗುತ್ತಿರುವ; ವಲಸಿಗರೇ, ಹೆಚ್ಚಾಗುತ್ತಿರುವ; ಕನ್ನಡಿಗರಿಗೆ ಉದ್ಯೋಗ ಶೂನ್ಯವಾಗುತ್ತಿರುವ; ಕಂಗ್ಲಿಷ್ ಭಾಷೆಯ ಎಫ್‌ಎಮ್ ಮತ್ತು ಯುವ ಸಂಸ್ಕೃತಿ ಹೊಂದಿರುವ ಬೆಂಗಳೂರು ಈ ಸಮ್ಮೇಳನವನ್ನು ಹೇಗೆ ಸ್ವಾಗತಿಸುತ್ತದೆ?
* ’ಕನ್ನಡ ನಿನ್ನೆ ಮತ್ತು ಇಂದು’ ಎಂಬ ವೈಚಾರಿಕ ಗೋಷ್ಠಿ ಏರ್ಪಾಡಾಗಬೇಕು. ವಿಶೇಷವಾಗಿ ಯುವಜನತೆ, ಶಾಲೆ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
* ಕನ್ನಡ ಪುಸ್ತಕ ಮಳಿಗೆಗಳಲ್ಲಿ ಶೇ.೫೦ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳು ಮಾರಾಟವಾಗಬೇಕು.
* ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆಗಳ ಪ್ರದರ್ಶನ ಏರ್ಪಾಡಾಗಬೇಕು. ಇದರಿಂದ ಕನ್ನಡಿಗರಿಗೆ ತಮ್ಮ ಭಾಷೆಯ ಪತ್ರಿಕೆಗಳ ಬಗ್ಗೆ ಪರಿಜ್ಞಾನ ಉಂಟಾಗುವುದು. ಪತ್ರಿಕೆಗಳ ಗುಣ ಮಟ್ಟ ನೋಡಿ ಹೊಸ ಚಂದಾದಾರರಾಗಬಹುದು. ಹೊಸ ಓದುಗರು ಪತ್ರಿಕೆಗೆ ದೊರೆಯುವುದು.
* ಹಿಂದಿನ ಸಾಹಿತ್ಯ ಸಮ್ಮೇಳನದ ವಿಶೇಷಾಂಕಗಳನ್ನು (ಸ್ಮರಣ ಸಂಚಿಕೆ) ಶೇ.೫೦ ರಿಯಾಯಿತಿ ದರದಲ್ಲಿ ಲಭಿಸುಂತೆ ಮಾಡಬೇಕು.
****
ಶೇ.೩೦ ರಷ್ಟು ಮಾತ್ರ ಕನ್ನಡಿಗರಿರುವ, ಇಂಗ್ಲಿಷ್ ವ್ಯಾಮೋಹದ ಹುಟ್ಟು ಹೊಳೆಯಲ್ಲಿ ’ಕನ್ನಡತನವೇ’ ಕೊಚ್ಚಿ ಹೋಗುತ್ತಿರುವ ಬೆಂಗಳೂರಿನಲ್ಲಿ ಈ ಸಮ್ಮೇಳನ ಭಾಷಾ ದೃಷ್ಟಿಯಿಂದ ಅವರ ಬೆಳವಣಿಗೆ ದೃಷ್ಟಿಯಿಂದ ಬಹಳ ಮಹತ್ವ ಎನಿಸಿದೆ. ಭಾಷಾ ಮಲಿನತೆ ನಿವಾರಿಸಿ ಭಾಷಾ ಶುದ್ಧತೆ ಹರಿಸುವ ಮುಖೇನ ಕನ್ನಡ ಬಳಕೆಯ ಹೊಣೆ ಈ ಸಮ್ಮೇಳನಕ್ಕೆ ಇದೆ. ಇದಕ್ಕೆ ಗರಿ ಇಟ್ಟಂತೆ ಪದಜೀವಿ, ನಿಘಂಟುಕಾರ, ಶಬ್ದಬ್ರಹ್ಮ ಪ್ರೊ.ಜಿ.ವೆಂಕಟಸುಬ್ಬಯ್ಯ ಸಾರಥ್ಯ ಕಳಶಪ್ರಾಯ.ಅವರಲ್ಲಿ ಈ ಎಲ್ಲ ಸಮ್ಮೇಳನಗಳಿಗೂ ಮಾರ್ಗೋಪಾಯಗಳಿವೆ ಅವರು ಸಾಹಿತ್ಯ ಪರಿಷತ್ತಿಗಿಂತಲೂ ಹಿರಿಯರಾಗಿದ್ದರೂ, ಚಿಂತನೆಯಲ್ಲಿ ಚಿಗುರು. ನಿರಂತರ ಅಧ್ಯಯನ, ಶಿಸ್ತು ಸಂಶೋಧನೆ, ದೈಹಿಕ ಮಾನಸಿಕ ಸಾಮರ್ಥ್ಯದಿಂದ ೯೭ ವಸಂತಗಳನು ದಾಟಿದರೂ "ಜ್ಞಾನದ ಬೆಳಕು". ಬೆಂಗಳೂರು ಕನ್ನಡತನ ಕಳದುಕೊಳ್ಳಬಾರದು. ಇನ್ನಾದರೂ ಬೆಂಗಳೂರಿಗರು ಜಾಗೃತರಾಗಬೇಕು. ಬೆಂಗಳೂರು ಬರೀ ವಲಸಿಗರ ನಗರವಾಗದೇ ಕನ್ನಡದ ಸಾಂಸ್ಕೃತಿಕ ಕೇಂದ್ರ ಆಗಬೇಕು ಎನ್ನುವ ಹಿರಿದಾದ ಆಶಯ ಹೊಂದಿದ್ದಾರೆ. ಈ ಅಧ್ಯಕ್ಷ ಸ್ಥಾನ ಹೊಣೆಗಾರಿಕೆ ಹೆಚ್ಚಿದೆ ಎಂದಿದ್ದಾರೆ. ಕನ್ನಡದ ಶಬ್ದ ಸಂಪತ್ತನ್ನು ಹೆಚ್ಚಿಸಿದಂತೆ ’ಭಾಷಾ ಸಂಪತ್ತ’ನ್ನು ವೃದ್ಧಿಸಲು ಹೊಸ ಆಯಾಮಗಳನ್ನು ಸೂಚಿಸಲಿ ಎಂಬುದು ಕನ್ನಡಿಗರೆಲ್ಲರ ಹಾರೈಕೆ.
ಕೊನೆ ಸಿಡಿ:- "ವಿಶ್ವದ ಆರು ಸಾವಿರ ಪ್ರಖರ ಭಾಷೆಗಳಲ್ಲಿ ೨೫ನೇ ಸ್ಥಾನದಲ್ಲಿರುವ ಕನ್ನಡ ಅತ್ಯಂತ ಸತ್ವಯುತವಾಗಿದೆ. ಹೀಗಾಗಿ ’ಕನ್ನಡ ಸಾಯುತ್ತಿದೆ’ ಎಂಬ ಮಾತನ್ನು ಯಾರೂ ಆಡಬೇಡಿ. -ಪ್ರೊ.ಜಿ.ವಿ.

ಯು.ಎನ್.ಸಂಗನಾಳಮಠ
ಉಪನ್ಯಾಸಕರು, ಲೇಖರು.

No comments:

Post a Comment

ಹಿಂದಿನ ಬರೆಹಗಳು