Tuesday, February 8, 2011

ದಿಟ್ಟ ಕನ್ನಡ ಹೋರಾಟಗಾರ ಈಶ್ವರಪ್ಪ



ಕನ್ನಡ ತನ್ನ ಉಳಿವಿಗಾಗಿ ಏನೆಲ್ಲ ಬೇಡುತ್ತದೆ. ಒಂದು ಬಾರಿ ಕನ್ನಡದ ಕಿಚ್ಚು ಹೊತ್ತಿಕೊಂಡರೆ ಸಾಕು ಅದು ಇಡೀ ಬದುಕನ್ನೇ ಆವರಿಸಿಕೊಂಡು ಬಿಡುತ್ತದೆ. ಹೋರಾಟದ ಬದುಕೇ ಹಾಗೇ.
ಹೋರಾಟದ ಮಜಲುಗಳು ಭಿನ್ನ ಭಿನ್ನವಾಗಿರುವಂತೆಯೇ ಹೋರಾಟದ ಪರಿಮಿತಿಯು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಹೋರಾಟದ ಸಾಗರದಲ್ಲಿ ನೂರಾರು, ಸಾವಿರಾರು ಕಲಿಗಳು ಬಂದು ಹೋಗಿದ್ದಾರೆ. ಹಲವರು ತಮ್ಮ ಕಾಯಕದ ಮೂಲಕ ಚಿರಸ್ಥಾಯಿಯಾದರೆ, ಮತ್ತೆ ಕೆಲವರು ಅಂಧಕಾರದಲ್ಲೇ ಉಳಿದುಹೋಗುತ್ತಾರೆ. ಆದರೆ, ಇಂಥವರು ಮಾಡಿರುವ ತ್ಯಾಗ ಬಲಿದಾನಗಳು ಕನ್ನಡವನ್ನು, ಕನ್ನಡತನವನ್ನು ಇಂದಿಗೂ ಜೀವಂತವಾಗಿರಿಸಿದೆ.
ಇಂತಹ ಕನ್ನಡದ ಕಡುಗಲಿಗಳಲ್ಲಿ ಬೆ.ನಿ.ಈಶ್ವರಪ್ಪ ಕೂಡ ಒಬ್ಬರು. ಕನ್ನಡದ ಕೇಸರಿ ಮ.ರಾಮಮೂರ್ತಿ ಹಾಗೂ ಸಾಹಿತಿ ಅ.ನ.ಕೃ ಒಡನಾಟದಲ್ಲಿ ಪಳಗಿದ್ದ ಈಶ್ವರಪ್ಪ ಅವರು ಕನ್ನಡ ಪಕ್ಷದ ಸ್ಥಾಪಕರಲ್ಲಿ ಒಬ್ಬರು. ಕನ್ನಡಕ್ಕಾಗಿ, ಕನ್ನಡಿಗರಿಂದ, ಕನ್ನಡಿಗರಿಗೋಸ್ಕರ ಪಕ್ಷವೊಂದರ ಅಗತ್ಯ ಇದೆ ಎಂಬುದನ್ನು ಮನಗಂಡ ಈಶ್ವರಪ್ಪ ಕನ್ನಡ ಪಕ್ಷದ ಸ್ಥಾಪನೆ ಮಾಡಿ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡರು. ಮ.ರಾಮಮೂರ್ತಿಯವರ ಪ್ರತಿಮೆಯಿರುವ ಸ್ಥಳವಾದ ಕಾಟನ್‌ಪೇಟೆಯಲ್ಲಿ ಉಮಾಶಂಕರ ಕಾಫಿ ಪುಡಿಯ ಅಂಗಡಿಯ ಮಹಡಿ ಮೇಲೆ ಕರ್ನಾಟಕ ಮಿತ್ರ ಮಂಡಳಿಯನ್ನು ಸ್ಥಾಪಿಸುವ ಮೂಲಕ ಬೆಂಗಳೂರಿನಲ್ಲಿ ಮೊಟ್ಟಮೊದಲ ಕನ್ನಡ ಸಂಘದ ಕಛೇರಿ ಸ್ಥಾಪನೆ ಮಾಡಿದ ಕೀರ್ತಿ ಇವರದಾಗಿದೆ.

ಕಛೇರಿಯಲ್ಲಿ ಕನ್ನಡ ಪಕ್ಷದ ಕಾರ್ಯಕಾರಿ ಸಭೆಗಳು ನಡೆಯುತ್ತಿದ್ದವು. ಮ.ರಾಮಮೂರ್ತಿ, ಜಿ.ನಾರಾಯಣಕುಮಾರ್, ಮು.ಗೋವಿಂದರಾಜ್, ಸಿ.ಕೃಷ್ಣಪ್ಪ, ನಾಗೇಶ್ ಕಬ್ಬನ್‌ಪೇಟೆ, ಬೆತಿ ರಾಜಣ್ಣ, ರೂಪಲೇಖನ್ ರಾಮನ್, ಜಗದೀಶ್ ರೆಡ್ಡಿ, ತಿ.ಶ್ರೀನಿವಾಸ, ಲಿಂಗಪ್ಪ ಮಾಧು, ನ.ದಾಸಪ್ಪ, ವೆ.ಶ್ರೀನಿವಾಸ, ಬಸವರಾಜು ಇನ್ನೂ ಅನೇಕ ಕನ್ನಡದ ಕಟ್ಟಾಳುಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ನೆಲ, ಜಲ, ಕನ್ನಡಿಗರಿಗೆ ಅನ್ಯಾಯವಾದಾಗಲೆಲ್ಲಾ ಇದೇ ಕಛೇರಿಯಲ್ಲಿಯೇ ಹೋರಾಟದ ರೂಪುರೇಷೆಗಳ ನೀಲನಕ್ಷೆ ತಯಾರಾಗುತ್ತಿತ್ತು. ನಿಜಕ್ಕೂ ಈಶ್ವರಪ್ಪನವರು ಸ್ಥಾಪಿಸಿದ ಕಛೇರಿ ಕರ್ನಾಟಕದ ಹಲವು ಘಟನೆಗಳಿಗೆ ಸಾಕ್ಷೀಭೂತವಾಗಿದೆ.
ಕನ್ನಡದ ಕಾಯಕಕ್ಕಾಗಿ ಕೆಲಸವನ್ನೇ ಕಳೆದುಕೊಂಡು ಬಡತನವನ್ನು ಅಪ್ಪಿಕೊಂಡ ಈಶ್ವರಪ್ಪನವರ ಕನ್ನಡಪರ ಕಾಳಜಿ ನಿಜಕ್ಕೂ ಶ್ಲಾಘನೀಯ. ಬಿನ್ನಿಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಈಗಿನ ಚಿಕ್ಕಲಾಲ್‌ಬಾಗ್ ಬಳಿ ವಾಸವಿದ್ದರು. ಇವರಿಗೆ ಪತ್ನಿ ಲಿಂಗಮ್ಮ ಹಾಗೂ ನಾಲ್ಕು ಜನ ಮಕ್ಕಳು ಬಡತನದ ಬೇಗೆಯಿಂದ ಬೇಯುತ್ತಿದ್ದರೂ ಕನ್ನಡದ ಹೋರಾಟದಿಂದ ಎಂದೂ ಹಿಂದಡಿಯಿಟ್ಟವರಲ್ಲ.
ಮಹಾನ್ ವಿಚಾರವಾದಿಯಾದ ಈ.ವಿ.ರಾಮಸ್ವಾಮಿ ನಾಯಕರ್ (ಪೆರಿಯಾರ್) ಕುವೆಂಪು, ಬಸವಣ್ಣನವರಿಂದ ಪ್ರಭಾವಿತರಾಗಿದ್ದ ಈಶ್ವರಪ್ಪನವರು ಓರ್ವ ವಿಚಾರವಾದಿಯಾಗಿದ್ದರು. ಜಾತಿ ಭೇದ, ಧರ್ಮಾಂಧತೆಯನ್ನು ಖಂಡಿಸುತ್ತ ಮಾನವತೆಯನ್ನು ಪ್ರತಿಪಾದಿಸುತ್ತಾ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂಕಷ್ಟವನ್ನು ಅನುಭಾವಿಸಿ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದ ಅಪರೂಪದ ಚಿಂತಕ.
ಕನ್ನಡಿಗರಿಗೆ ಕನ್ನಡವೇ ಧರ್ಮ, ಕನ್ನಡವೇ ದೇವರು, ಕನ್ನಡವೇ ಮತ ಎಂಬ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದ ಈಶ್ವರಪ್ಪನವರು ಕನ್ನಡ ಪರ ಹೋರಾಟಗಳಲ್ಲಿ ಕನ್ನಡ ಜಾಗೃತಿ ಸಭೆಗಳಲ್ಲಿ ಭಾಗವಹಿಸಿ ಕನ್ನಡದ ಸಾರ್ವಭೌಮತೆಗೆ ಅವಿರತವಾಗಿ ದುಡಿದರು.
ಕೇಂದ್ರ ಸರ್ಕಾರ ಹಿಂದಿ ಕಡ್ಡಾಯ ಮಾಡಿದಾಗ ಇದನ್ನು ವಿರೋಧಿಸಿ ನಡೆದ ಚಳವಳಿಯ ಮುಂಚೂಣಿ ನಾಯಕರಾಗಿದ್ದರು. ದಿ.ಕರ‍್ಲವುಂಗ ಶ್ರೀ ಕಂಠಯ್ಯನವರ ಜೊತೆಯಲ್ಲಿ ದ್ರಾವಿಡ ಚಳವಳಿಯ ನೇತಾರ ಈ.ವಿ.ರಾಮಸ್ವಾಮಿ ನಾಯಕರ್‌ರವರನ್ನು ಭೇಟಿಯಾಗಿ ಸಿರಿ ಭೂ ವಲಯ ಗ್ರಂಥದ ಬಗ್ಗೆ ಅವರಿಗೆ ತಿಳಿಸಿ ಅವರೊಂದಿಗೆ ಚರ್ಚಿಸಿದ ಸಮಾಜಮುಖಿ ವ್ಯಕ್ತಿಯಾಗಿದ್ದರು. ೧೯೮೪ರಲ್ಲಿ ಮ.ರಾಮಮೂರ್ತಿ ಕನ್ನಡ ಬಳಗದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಶಿವರುದ್ರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಈಶ್ವರಪ್ಪನವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈಶ್ವರಪ್ಪನವರ ಕನ್ನಡ ಪರ ಹೋರಾಟದ ಬದ್ಧತೆಯನ್ನು ಗುರುತಿಸಿ ನಗರದ ಗೆಳೆಯರ ಬಳಗದ ವತಿಯಿಂದ ಡಾ.ಎಲ್.ಚಿದಾನಂದ ಮೂರ್ತಿಯವರು ಬಿ.ಎಂ.ಪ್ರತಿಷ್ಠಾನದಲ್ಲಿ ನಡೆದ ಸಮಾರಂಭದಲ್ಲಿ ೨೦,೦೦೦ ರೂಪಾಯಿಗಳ ನಿಧಿಯನ್ನು ಅರ್ಪಿಸಿ ಗೌರವಿಸಲಾಯಿತು. ಅನೇಕ ಕನ್ನಡ ಪರ ಹೋರಾಟಗಳಲ್ಲಿ ಅನೇಕ ಕನ್ನಡ ಪರ ಹೋರಾಟಗಳಿಲ್ಲಿ ರಾಜ್ಯೋತ್ಸವದ ಸಂದರ್ಭಗಳಲ್ಲಿ ನಾನು ಅವರ ಜೊತೆಯಲ್ಲಿ ಭಾಗವಹಿಸಿದೆ. ಅವರ ನನ್ನ ಗೆಳತನ ಅಪ್ಯಾಯಮಾನವಾಗಿತ್ತು. ಪರಸ್ಪರ ವಿಚಾರವಿನಿಮಯವನ್ನು ಕನ್ನಡಪರ, ಜನಪರ ವಿಷಯದ ಬಗ್ಗೆ ಅವರು ತಿಳಿಸುತ್ತಾ ಇದ್ದರು. ಅವರ ನಿಧನ ನಂತರ ಕೆಲಕಾಲ ಕನ್ನಡ ಹೋರಾಟಕ್ಕೆ ಮಂಕು ಹಿಡಿಯಿತೇನು ಎನಿಸುತ್ತಿದೆ. ಪ್ರಾಮಾಣಿಕ ಹೋರಾಟಕ್ಕೆ, ಬದ್ಧತೆಗೆ, ಕನ್ನಡ ಚಳವಳಿಗೆ ಹೆಸರಾಗಿದ್ದರು. ಬೆ.ನಿ.ಈಶ್ವರಪ್ಪ.
ಬೆ.ನಿ.ಈಶ್ವರಪ್ಪನವರ ಬಗ್ಗೆ ಅಪಾರ ಗೌರವ ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರು ನೆ.ಭ.ರಾಮಲಿಂಗಶೆಟ್ಟರು ಬರೆದ ‘ಸಿಂಹ ಗರ್ಜನೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಈಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ಲಿಂಗಮ್ಮನವರಿಗೆ ೨೫ ಸಾವಿರ ರೂಪಾಯಿಗಳನ್ನು ಧನಸಹಾಯ ಮಾಡಿದರು. ಅವರ ಕನ್ನಡ ಸೇವೆಯನ್ನು ನಾರಾಯಣಗೌಡರು ಸ್ಮರಿಸಿದರು. ಹಾಗೂ ಹುತಾತ್ಮರಾದ ಮು.ಗೋವಿಂದರಾಜುರವರ ಧರ್ಮಪತ್ನಿ ಧನಭಾಗ್ಯಮ್ಮನವರಿಗೆ ಸಹ ೨೫,೦೦೦/- ರೂಪಾಯಿಗಳನ್ನು ನೀಡಿ ಸನ್ಮಾನಿಸಿದರು.

No comments:

Post a Comment

ಹಿಂದಿನ ಬರೆಹಗಳು