![](https://blogger.googleusercontent.com/img/b/R29vZ2xl/AVvXsEiVHf5U_lJH6jjeeZm_rU-l5BHCqx6FeUp6YjZkjZM4ByE8XNovqhOU2mqSyVP-U8pvrqtMvqwzjbDp3HevbML6QLhhHCVj_n2bGnB0D9c10TaiBMN0xOPqaZbamJIutj8HGGYGz-YE2Go/s320/babu+photos.jpg)
ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ಇಲ್ಲಿ ದಲಿತರೂ ಜನಿವಾರ ತೊಟ್ಟು ಬ್ರಾಹ್ಮಣರಾಗ್ತಾರೆ, ಮಡಿಯುಟ್ಟು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ, ಮುಸ್ಲಿಮರೂ ಕೂಡ ಕೊಂಡ ಹಾಯೋ ಮೂಲಕ ಹಿಂದೂಗಳ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗ್ತಾರೆ!
ಪರಸ್ಪರ ಕೋಮು ವೈಷಮ್ಯ, ಜಾತೀಯತೆಯೇ ಮೇಳೈಸುತ್ತಿರುವ ಈಗಿನ ಸಂದರ್ಭದಲ್ಲಿ ಹೀಗೂ ಒಂದು ಆಚರಣೆ ಇದೆ ಅಂದ್ರೆ ಅದು ನಿಜಕ್ಕೂ ಅಚ್ಚರಿಯ ವಿಚಾರವೇ ಸರಿ. ಒಂದು ಸಂಪ್ರದಾಯವನ್ನ ಮತ್ತೊಬ್ಬರು ಆಚರಿಸೋ ಇಂಥ ಅಪರೂಪದ ಪ್ರಕರಣ ನಡೆಯುತ್ತಿರೋದು ಬೇರೆ ಎಲ್ಲೂ ಅಲ್ಲ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ!
ಜನಿವಾರ ಅಂದ್ರೆ ಅದನ್ನು ಒಂದು ಜಾತಿಯ, ಮೇಲ್ವರ್ಗದ ಜನರೇ ಧರಿಸಬೇಕು ಎಂಬ ಪ್ರತೀತಿಯನ್ನ ಸುಳ್ಳು ಮಾಡುವಂತೆ ಇಲ್ಲಿ ದಲಿತರೂ ಜನಿವಾರ ಧರಿಸುತ್ತಾರೆ, ದೇವರನ್ನು ಹೊತ್ತು ಮೆರವಣಿಗೆ ಹೊರಡುತ್ತಾರೆ!
ಹಬ್ಬ, ಹರಿದಿನಗಳ ಆಚರಣೆ ಮೂಲಕ ಐಕ್ಯತೆ ಮತ್ತು ಸಾಮರಸ್ಯಕ್ಕೆ ರಾಜ್ಯಕ್ಕೆ ಮಾದರಿಯಾಗಿರುವ ಕುಣಿಗಲ್ನಲ್ಲಿ ಇಂಥದೊಂದು ಸಾಮರಸ್ಯದ ವಾತಾವರಣ ಕಾಣಲು ಸಾಧ್ಯ. ಹುಲಿಯೂರು ದುರ್ಗ ಹೋಬಳಿಯ ಉಜ್ಜನಿ ಗ್ರಾಮದಲ್ಲಿ ನಡೆಯುವ ಈ ಹಬ್ಬ ವಿಶಿಷ್ಟ ಹಾಗೂ ಅಚ್ಚರಿ ಎನಿಸಿದರೂ ನಮ್ಮೆಲ್ಲರ ಕಲ್ಪನೆಗೆ ಮೀರಿ ಆಚರಿಸಲ್ಪಡುತ್ತದೆ.
ನಾಗರಿಕತೆ ಎಷ್ಟೇ ಮುಂದುವರೆದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ದಲಿತರು-ಸವರ್ಣೀಯರು ಎಂಬ ಭಿನ್ನತೆ ದೂರವಾಗಿಲ್ಲ. ಅದೆಷ್ಟೋ ದೇವಸ್ಥಾನಗಳಲ್ಲಿ ಈಗಲೂ ಹರಿಜನರಿಗೆ ಪ್ರವೇಶವೇ ಇಲ್ಲದೆ, ಬಹಿಷ್ಕಾರಕ್ಕೆ ಒಳಗಾಗುತ್ತಿರುವ ನಾನಾ ಪ್ರಕರಣಗಳು ನಾವಿನ್ನೂ ಕೇಳುತ್ತಲೇ ಇದ್ದೇವೆ. ಇಂಥ ಕಾಲಘಟ್ಟದಲ್ಲೇ ಹರಿಜನರು ಜನಿವಾರ ಧರಿಸಿ ಪೂಜೆ ಮಾಡುವ ಮೂಲಕ ಇಡೀ ಹಬ್ಬದ ಕೇಂದ್ರ ಬಿಂದುವಾಗುವುದು ನಿಜಕ್ಕೂ ವಿಶೇಷ ಎನ್ನಲೇ ಬೇಕು.
ಉಜ್ಜನಿ ಗ್ರಾಮದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಅಮ್ಮನವರ ಹಬ್ಬ ಸುತ್ತ-ಮುತ್ತಲ ೧೫ ಹಳ್ಳಿಗಳಲ್ಲಿ ಪ್ರತಿ ವರ್ಷ ನಡೆಯುತ್ತದೆ. ಏಪ್ರಿಲ್ ೧೮ ರಿಂದ ೨೦ ರವರೆಗೆ ನಡೆಯಲಿದೆ.
ಅಂದ ಹಾಗೆ, ಈ ಹಬ್ಬದಲ್ಲಿ ವಿಶೇಷವಾಗಿ ‘ಹೆಬ್ಬಾರೆ ಗುಡ್ಡರು’ ಎಂದೇ ಕರೆಸಿಕೊಳ್ಳುವ ೬ ಮಂದಿ ಹರಿಜನರು ಹಬ್ಬಕ್ಕೂ ಮುನ್ನ ೧೫ ದಿನ ಜನಿವಾರ ಧರಿಸುತ್ತಾರೆ ಮತ್ತು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಆ ದಿನಗಳಲ್ಲಿ ಇವರು ಯಾವುದೇ ಕಾರಣಕ್ಕೂ ತಮ್ಮ ಮನೆಗೆ ಹೋಗುವಂತಿಲ್ಲ. ದೇವಸ್ಥಾನದ ಕೋಣೆಯೊಂದರಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಬೇಕು. ಹಬ್ಬ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ’ಮೈಲಿಗೆ’ ಆಗುವಂತಿಲ್ಲ. ಹಬ್ಬದಲ್ಲಿ ಪೂಜೆ, ಪುನಸ್ಕಾರ ಎಲ್ಲವೂ ಇವರದ್ದೇ!
ಮತ್ತೂ ವಿಶೇಷ ಅಂದ್ರೆ ಮುಸ್ಲಿಂರೂ ಗ್ರಾಮದೇವತೆಯ ಹಬ್ಬದಲ್ಲಿ ಸಕ್ರಿಯವಾಗಿ ಭಾಗಿಯಾಗ್ತಾರೆ. ಐದು ಮಂದಿ ಮುಸ್ಲಿಂ ಜೋಡಿಗಳು ಬಾಬಯ್ಯನ ಕೊಂಡ ಹಾಯುವ ಮೂಲಕ ಸೌಹಾರ್ದತೆ ಮೆರೆಯುತ್ತಾರೆ, ಭಕ್ತಿ ಭಾವ ಮೆರೆಯುತ್ತಾರೆ.
ಬಹುಶಃ ಇಂಥದೊಂದು ಸೌಹಾರ್ದತೆ ಮತ್ತು ಸಾಮರಸ್ಯವನ್ನ ಉಜ್ಜನಿ ಗ್ರಾಮದಲ್ಲಿ ಮಾತ್ರವೇ ಕಾಣಲಿಕ್ಕೆ ಸಾಧ್ಯ, ಇಲ್ಲಿರುವ ಬಹುಸಂಖ್ಯಾತ ಒಕ್ಕಲಿಗರು ಸೇರಿದಂತೆ ಎ ಸಮುದಾಯದ ಜನರು ಸೇರಿಕೊಂಡು ವಿಶಿಷ್ಟ ಹಾಗೂ ವಿಭಿನ್ನ ಆಚರಣೆಯ ಹಬ್ಬವನ್ನು ಗ್ರಾಮದಲ್ಲಿ ನೂರಾರು ವರ್ಷಗಳಿಂದ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಸಿಕೊಂಡು ಬರುತ್ತಿzರೆ.
ಬ್ರಾಹ್ಮಣರೆಂದೇ ಕರೆಯುತ್ತಾರೆ!
ಉಜ್ಜನಿ ಗ್ರಾಮದಲ್ಲಿ ಪ್ರತಿ ವರ್ಷ ೧೫ ದಿನಗಳ ಕಾಲ ಚೌಡೇಶ್ವರಿ ಹಬ್ಬ ನಡೆಯುತ್ತದೆ. ಹಬ್ಬಕ್ಕೂ ಮೊದಲೇ ಗ್ರಾಮದಲ್ಲಿ ಕಂಭ ಹಾಕಲಾಗುತ್ತದೆ. ಹೀಗೆ ಕಂಭ ಹಾಕಿದ ದಿನದಿಂದಲೇ ಹೆಬ್ಬಾರೆ ಅಮ್ಮನ ಕರಗ ಹೊರುವ ಸಲುವಾಗಿ ’ಹೆಬ್ಬಾರೆ ಗುಡ್ಡರು’ ಎಂದೇ ಕರೆಸಿಕೊಳ್ಳುವ ಆರು ಮಂದಿ ಹರಿಜನರು ಬಿಳಿ ಕಚ್ಚೆ ಧರಿಸಿ ಚೌಡಮ್ಮನ ಪೂಜಾರಿಯಿಂದ ಹೋಮ ಮಾಡಿದ ತೀರ್ಥ ಸ್ವೀಕರಿಸಿ ಜನಿವಾರ ಧರಿಸುತ್ತಾರೆ. ಆ ದಿನದಿಂದಲೇ ಅವರನ್ನು ಬ್ರಾಹ್ಮಣರೆಂದೇ ಕರೆಯಲಾಗುತ್ತದೆ.
೮೫೦ ವರ್ಷಗಳ ಇತಿಹಾಸ
ವಿಶೇಷ ಅಂದ್ರೆ, ಏಪ್ರಿಲ್ ೧೮ ರಿಂದ ೨೦ರವರೆಗೆ ಮೂರು ದಿನಗಳ ಕಾಲ ನಡೆಯುವ ವಿಜೃಂಭಣೆಯ ಜಾತ್ರೆ ಕಳೆಗಟ್ಟುವುದು ಈ ಬ್ರಾಹ್ಮಣರಿಂದಲೇ. ಮಾರ್ಚ್ ೧೯ ರಂದು ಅಗ್ನಿಕೊಂಡ ನಡೆಯಲಿದೆ. ಹಬ್ಬಕ್ಕೆ ಕಂಭ ನೆಟ್ಟ ದಿನದಿಂದ ಊರಿನಲ್ಲಿ ಯಾರೂ ಕಂಟು ಹಾಕುವಂತಿಲ್ಲ. ಮೆಣಸಿನಕಾಯಿ ಸುಡುವಂತಿಲ್ಲ. ಇದು ಊರಿನಲ್ಲಿ ಕಟ್ಟುನಿಟ್ಟಿನ ಸಂಪ್ರದಾಯ. ಸುತ್ತ-ಮುತ್ತಲ ಹತ್ತಾರು ಗ್ರಾಮಗಳು ಸೇರಿ ಆಚರಿಸುವ ಈ ಚೌಡೇಶ್ವರಿ ಜಾತ್ರೆಗೆ ೮೫೦ ವರ್ಷಗಳ ಐತಿಹಾಸಿಕ ಹಿನ್ನೆಲೆ ಇದೆ.
ಅಂದ ಹಾಗೆ, ಹರಿಜನರು ಇಲ್ಲಿ ಬ್ರಾಹ್ಮಣರಾಗಿ ಪೂಜೆ ಸಲ್ಲಿಸಲು ಬಲವಾದ ಕಾರಣವಿದೆ. ಈ ಹಿಂದೆ, ಅದೇ ಗ್ರಾಮದ ಹರಿಜನ ಯುವಕನೊಬ್ಬ ತಾನು ಬ್ರಾಹ್ಮಣ ಜಾತಿಯವನು ಎಂದು ಸುಳ್ಳು ಹೇಳಿ ಬ್ರಾಹ್ಮಣ ಕನ್ಯೆಯನ್ನು ಮದುವೆಯಾಗಿದ್ದನಂತೆ. ಆ ದಂಪತಿಗಳಿಗೆ ಐವರು ಗಂಡು ಮಕ್ಕಳು ಇದ್ದರೆಂದೂ, ನಂತರ ಗಂಡನ ಜಾತಿ ವಿಷಯ ತಿಳಿದು ಆಕೆ ಅಗ್ನಿಪ್ರವೇಶ ಮಾಡಿದಳು ಎಂಬ ಪ್ರತೀತಿ ಇದೆ. ಇದರಿಂದ ಆಕೆಯನ್ನು ಸಂತೈಸಲಿಕ್ಕಾಗಿ ಐವರು ಮಕ್ಕಳು ಮತ್ತು ತಂದೆ ಸೇರಿ ಆರು ಮಂದಿ ಪ್ರತೀ ವರ್ಷವೂ ಹಬ್ಬದ ವೇಳೆ ೧೫ ದಿನಗಳ ಮಟ್ಟಿಗೆ ಬ್ರಾಹ್ಮಣರಾಗುತ್ತಿzರೆ ಜತೆಗೆ ಪೂಜೆ ಸಲ್ಲಿಸುತ್ತಾರೆ.
ಮುಸ್ಲಿಂ ಜಾತಿಯ ಐವರು ದಂಪತಿ ತಲೆಯ ಮೇಲೆ ಸಿಂಗರಿಸಿದ ಗಡಿಗೆಗಳನ್ನು ಹೊತ್ತು ಕುಣಿಯುತ್ತಾ ಬಾಬಯ್ಯನ ಕೊಂಡ ಹಾಯುತ್ತಾರೆ. ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಚುಚ್ಚಿಸಿಕೊಂಡು ದೇವಿಗೆ ಭಕ್ತಿ ಮೆರೆಯುತ್ತಾರೆ. ಚೌಡೇಶ್ವರಿ ದೇವಿಯ ಕಂಭ ಹಾಕುವ ದಿನ ಬೆಳ್ಳಿ ಕಂಕಣ ತೊಡುವ ಪೂಜಾರಿ ಹಬ್ಬ ಮುಗಿಯುವವರೆಗೂ ಮನೆಯಲ್ಲಿ ಊಟ ಮಾಡುವಂತಿಲ್ಲ. ಆತನೇ ಅಡುಗೆ ತಯಾರಿಸಿಕೊಳ್ಳಬೇಕು. ಅಗ್ನಿಕೊಂಡದ ದಿನ ಉಜ್ಜನಿ ಗ್ರಾಮದಲ್ಲಿ ಹಬ್ಬದ ಸಡಗರ, ಎಲ್ಲೂ ಜನಸಾಗರವೇ ನೆರೆಯುತ್ತದೆ.
ಉಜ್ಜನಿ ಗ್ರಾಮದಲ್ಲಿ ನಡೆಯುವ ಈ ಹಬ್ಬ ಪ್ರತೀ ಗ್ರಾಮದಲ್ಲೂ ನಡೆದಿದ್ದೇ ಆದಲ್ಲಿ ಸಮಾಜದಲ್ಲಿ, ಅದರಲ್ಲೂ ಮುಖ್ಯವಾಗಿ ಹಳ್ಳಿಗಾಡಿನಲ್ಲಿ ಬೇರುಬಿಟ್ಟಿರುವ ಜಾತೀಯತೆ, ಕೋಮು ವೈಷಮ್ಯ ಕೊಂಚ ಮಟ್ಟಿಗಾದರೂ ಶಮನಗೊಂಡು, ಮನುಷ್ಯ ಮನುಷ್ಯರ ಮಧ್ಯೆ ಮಾನವೀಯತೆ ಮತ್ತು ಅಂತಃಕರಣದ ಬೀಜ ಮೊಳೆಯಲು ಸಾಧ್ಯವೇನೋ....
ಉಲ್ಲಾಸ
No comments:
Post a Comment