Wednesday, May 18, 2011

ಜಾತಿ ಪಕ್ಷಪಾತಿಗಳು ಪಾಪಿಗಳು, ದೇಶದ್ರೋಹಿಗಳು!



ಡಾ.ಎಲ್.ಎಸ್. ಶೇಷಗಿರಿರಾವ್


ಕನ್ನಡ ಸಾಹಿತ್ಯದ ಇವತ್ತಿನ ಸ್ಥಿತಿಗತಿ ಏನು? ಕನ್ನಡ ಸಾಹಿತ್ಯ-ಸಂಸ್ಕೃತಿ ವಿಮರ್ಶಕರಾಗಿ ತಮ್ಮ ಅಭಿಪ್ರಾಯವೇನು?

ಕನ್ನಡ ಸಾಹಿತ್ಯದ ಇಂದಿನ ಸ್ಥಿತಿಯನ್ನು ಪರಿಭಾವಿಸಿದಾಗ ಸಂತೋಷವೇ ಆಗುತ್ತದೆ. ಕಳೆದ ಶತಮಾನದ ೭೦, ೮೦ ಮತ್ತು ೯೦ರ ದಶಕಗಳು ಕನ್ನಡ ಸಾಹಿತ್ಯಕ್ಕೆ ಬಹಳ ಮುಖ್ಯವಾದವು. ಮಹಿಳೆಯರು, ದಲಿತರು ಮತ್ತು ಮುಸ್ಲಿಮರು ಈ ಅವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟರು. ಆವರೆಗೆ ಬೆಳಕಿಗೆ ಬಾರದಿದ್ದ ಸಮಕಾಲೀನ ಬದುಕಿನ ಅನುಭವಗಳನ್ನು ತೆರೆದಿಟ್ಟರು. ಈಚೆಗೆ ಸಾಹಿತಿಗಳು ಒಂದು ಸಾಮಾಜಿಕ ಅಥವಾ ಆರ್ಥಿಕ ‘ಇಸಂ’ಗೆ ಬದ್ಧರಾಗದೆ ತಮ್ಮ ಅನುಭವ ಮತ್ತು ಬಾಳ ಶೋಧನೆಗಳಿಗೆ ಬದ್ಧವಾಗಿ ಬರೆಯುತ್ತಿದ್ದಾರೆ. ಇದರಿಂದ ಕನ್ನಡ ಸಾಹಿತ್ಯ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ.
ಕನ್ನಡ ಸಂಸ್ಕೃತಿಯ ವಿಷಯ ಇಷ್ಟು ಸಮಾಧಾನದಿಂದ ಮಾತನಾಡುವಂತಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಬಿರುಗಾಳಿ ನಮ್ಮನ್ನು ಹಾರಿಸಿಕೊಂಡು ಹೋಗುತ್ತಿರುವಂತೆ ಕಾಣುತ್ತದೆ. ಹಣ, ಅಧಿಕಾರ, ಭೋಗಗಳ ಬೆನ್ನು ಹತ್ತುವುದೇ ನಮ್ಮ ಬದುಕಿನ ರೀತಿಯಾಗುತ್ತಿದೆ. ಸ್ವಂತಿಕೆ, ಸ್ವಾಭಿಮಾನಗಳು ಕನ್ನಡ ಸಂಸ್ಕೃತಿಯ ಜೀವಾಳ, ಇವು ನಮ್ಮ ಬದುಕಿನಿಂದ ಮರೆಯಾಗುತ್ತಿವೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ನಾಡು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದೀರಿ. ಈ ಸಂದರ್ಭದಲ್ಲಿ ನಮ್ಮ ಎದುರು ಇರುವ ಪ್ರಮುಖ ಸವಾಲುಗಳು ಯಾವುವು? ಅವುಗಳನ್ನು ಎದುರಿಸುವ ಬಗೆ ಹೇಗೆ?
ಸಂವಿಧಾನದ ಪ್ರಕಾರ ಭಾರತವು ಒಕ್ಕೂಟವಾಗಿದೆ ಅಷ್ಟೆ. ಆಡಳಿತದಲ್ಲಿ ನಿಜವಾದ ಸಂವಿಧಾನದ ಮನೋಧರ್ಮ ಇಲ್ಲ. ರಾಷ್ಟ್ರೀಯ ಪಕ್ಷಗಳು ತಮ್ಮ ವೋಟು ಗಳಿಕೆಯನ್ನು ಮುಖ್ಯ ಮಾಡಿಕೊಂಡಿವೆ. ಗಡಿ ಸಮಸ್ಯೆಯ ನಿರ್ವಹಣೆಯಲ್ಲಿ ನದಿ ನೀರಿನ ಹಂಚಿಕೆಯಲ್ಲಿ - ಅಂಚೆ ಚೀಟಿಗಳ ಬಿಡುಗಡೆಯಂತಹ ವಿಷಯದಲ್ಲಿ ಸಹ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಶ್ರೀ ಎಸ್.ಎಂ.ಕೃಷ್ಣ ಅವರು ವಿದೇಶಿ ವ್ಯವಹಾರಗಳ ಸಚಿವರಾಗುವವರೆಗೆ ಕರ್ನಾಟಕದ ರಾಜಕಾರಣಿಗಳಿಗೆ ಹಣಕಾಸು, ರಕ್ಷಣೆ, ಗೃಹ, ವಿದೇಶಿ ವ್ಯವಹಾರಗಳು ಇಂಥ ಮುಖ್ಯ ವಿಭಾಗಗಳು ಲಭ್ಯವಾಗಿದ್ದುಂಟೆ? ರಾಷ್ಟ್ರೀಯ ಪಕ್ಷಗಳು ಬೇರೆಡೆ ಸಲ್ಲದ ತಮ್ಮ ಧುರೀಣರನ್ನು ರಾಜ್ಯಸಭೆಗೆ ಕಳುಹಿಸಲು ಕರ್ನಾಟಕವನ್ನು ಬಳಸಿಕೊಳ್ಳುತ್ತಾರೆ. ಇವರು ವರ್ಷಗಟ್ಟಲೆ ಕರ್ನಾಟಕದಿಂದ ಆಯ್ಕೆಯಾಗಿ ಹೋದರೂ ಕನ್ನಡವನ್ನು ಕಲಿಯುವ ಕೃತಜ್ಞತೆಯ ಪ್ರಥಮ ಪಾಠವನ್ನೂ ಕಲಿಯುವುದಿಲ್ಲ.
ಇಂದು ಅಗತ್ಯವಾಗಿರುವುದು ಎರಡು ಹೆಜ್ಜೆಗಳು. ಒಂದು, ಪ್ರಬಲವಾದ ಪ್ರಾದೇಶಿಕ ಪಕ್ಷ ಒಂದನ್ನು ಕಟ್ಟುವುದು. ಎರಡನೆಯದು, ಸಂವಿಧಾನವನ್ನೇ ತಿದ್ದುಪಡಿ ಮಾಡಿ, ರಾಷ್ಟ್ರದ ಸದಸ್ಯತ್ವ ಮತ್ತು ರಾಜ್ಯದ ಸದಸ್ಯತ್ವ ಹೀಗೆ ಎರಡು ಬಗೆಯ ಸದಸ್ಯತ್ವಗಳನ್ನು ಮಾನ್ಯ ಮಾಡುವುದು. ರಾಜ್ಯದಲ್ಲಿ ಹುಟ್ಟಿ ಬೆಳೆದು ರಾಜ್ಯದ ಸದಸ್ಯತ್ವ ಪಡೆದವರಿಗೆ ಮಾತ್ರ ಆ ರಾಜ್ಯದ ಶಾಸನ ಸಭೆಗಳು ಮತ್ತು ಮಹಾನಗರ ಪಾಲಿಕೆಯಂತಹ ಇತರ ಚುನಾಯಿತ ಸಂಸ್ಥೆಗಳಿಗೆ ಮತದಾನ ಹಕ್ಕನ್ನು ಸೀಮಿತಗೊಳಿಸುವುದು ಇತ್ಯಾದಿ ಕ್ರಮಗಳನ್ನು ಜಾರಿಗೆ ತರುವುದು. ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ಗಳ ಸ್ವೇಚ್ಛಾಧಿಕಾರಕ್ಕೆ ಕಡಿವಾಣ ಹಾಕಬೇಕಾಗಿದೆ.

ಪದೇಪದೇ ಸಾಹಿತಿಯ ಗುಣಲಕ್ಷಣವೇನು ಎಂಬ ಪ್ರಶ್ನೆ ಬೌದ್ಧಿಕ ವಲಯದಲ್ಲಿ ಚರ್ಚಿತವಾಗುತ್ತದೆ. ಸಾಹಿತ್ಯ ಸಮಕಾಲೀನ ಸಾಮಾಜಿಕ, ರಾಜಕೀಯ ವರ್ತಮಾನಗಳಿಗೆ ಸ್ಪಂದಿಸುತ್ತಿರುತ್ತದೆ. ಹೀಗಿರುವಾಗ ಸಾಹಿತಿಯ ನೈತಿಕ ಜವಾಬ್ದಾರಿಗಳೇನು?
ಓದುಗರಲ್ಲಿ ಭಾವನಾ ಸೂಕ್ಷ್ಮತೆಯನ್ನು ಬೆಳೆಸುವುದು. ಸಮಾಜದಲ್ಲಿ ಎಲ್ಲ ಅನ್ಯಾಯಗಳ ಮೂಲ, ಜೀವನ ವಿರೋಧಿ ಮನೋಧರ್ಮದ ಮೂಲ ಭಾವನಾ ಸೂಕ್ಷ್ಮತೆಯ ಅಭಾವ, ಇತರರ ವಿಷಯದಲ್ಲಿ ನ್ಯಾಯ, ಅನುಕಂಪಗಳ ಅಭಾವ. ತನ್ನನ್ನು ಹಣ, ಅಧಿಕಾರ, ಜಾತಿ ಮೊದಲಾದುವುಗಳಿಗೆ ಮಾರಿಕೊಳ್ಳದೆ ಮಾನವ ಧರ್ಮಕ್ಕೆ ಅನುಗುಣವಾಗಿ ಬದುಕುವುದು, ಬರೆಯುವುದು.

ನೀವು ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೆ ಬಂದವರು. ಕನ್ನಡದಲ್ಲಿ ಈಗ ಕಥಾಸಾಹಿತ್ಯದ ಸ್ಥಿತಿ ಹೇಗಿದೆ? ಹೊಸ ತಲೆಮಾರಿನ ಕಥೆಗಾರರ ಬಗ್ಗೆ ನಿಮ್ಮ ಅನಿಸಿಕೆಯೇನು?
ಸಂತೋಷ ಪಡುವಂತೆ ಸಮೃದ್ಧಿಯಾಗಿದೆ, ಶ್ರೇಷ್ಠ ಗುಣಮಟ್ಟವನ್ನು ಮುಟ್ಟಿದೆ. ಡಾ.ಯು.ಆರ್.ಅನಂತಮೂರ್ತಿಯವರ ಪೀಳಿಗೆಯಿಂದ ಕನ್ನಡ ಸಣ್ಣ ಕಥೆಗೆ ಹೊಸ ಶಕ್ತಿ ಬಂದಿತ್ತು. ಹೊಸ ತೇಜಸ್ಸು ಬಂದಿತು. ಆನಂತರದ ವರ್ಷಗಳಲ್ಲಿಯೂ ಕನ್ನಡ ಸಣ್ಣ ಕಥೆ ವೈವಿಧ್ಯಮಯವಾಗಿದೆ. ಶ್ರೀಮಂತವಾಗಿದೆ. ಹೊಸ ಒಳನೋಟಗಳನ್ನು ಸಾಧಿಸಿದೆ. (ಕೆಲವೇ ಹೆಸರುಗಳನ್ನು ಹೇಳುವುದಾದರೂ ಜಯಂತ್ ಕಾಯ್ಕಿಣಿ, ರಾಘವೇಂದ್ರ ಪಾಟೀಲ, ವಿವೇಕ ಶಾನ್‌ಭಾಗ್, ಶ್ರೀಮತಿ ವೀಣಾ ಶಾಂತೇಶ್ವರ್, ಶ್ರೀಮತಿ ವೈದೇಹಿ, ದೇವನೂರು ಮಹಾದೇವ, ಕುಂ. ವೀರಭದ್ರಪ್ಪ, ಫಕೀರ ಮಹಮದ್ ಕಟ್ಪಾಡಿ, ನೇಮಿಚಂದ್ರ, ಉಮಾರಾವ್ ಮೊದಲಾದವರ ಸಣ್ಣ ಕಥೆಗಳು ವಿಶಿಷ್ಣ ಸಾಧನೆಗಳು.

ಮಕ್ಕಳ ಜ್ಞಾನವರ್ಧನೆಗಾಗಿ ನೀವು ವಿಶ್ವಕೋಶದ ಮಾದರಿಯಲ್ಲಿ ನೂರಾರು ಪುಟ್ಟ ಪುಸ್ತಕಗಳನ್ನು ಹೊರತಂದಿದ್ದೀರಿ. ಇಂಥ ಕೆಲಸ ಈಗಲೂ ಆಗಬೇಕಿದೆ. ಈ ನಿಮ್ಮ ಸತ್ಕಾರ್ಯಕ್ಕೆ ಪ್ರೇರಣೆಯೇನು?
೧೯೪೭ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಆ ರೋಮಾಂಚನವನ್ನು ಅನುಭವಿಸಿದ ತರುಣ ವರ್ಗಕ್ಕೆ ಸೇರಿದವನು ನಾನು. ಅಂದಿನ ರೋಮಾಂಚನ, ಆತ್ಮವಿಶ್ವಾಸ, ಭರವಸೆಗಳನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇಂತಹ ಅದ್ಭುತ ಅನುಭವವನ್ನು ಪಡೆದವರು ಅದೃಷ್ಟಶಾಲಿಗಳು. ಆದರೆ ೧೯೬೩, ೬೪ರ ಹೊತ್ತಿಗೆ (ಚೀನಾದೊಡನೆ ಯುದ್ಧದ ಅನುಭವ, ಅಪಮಾನದ ಅನುಭವಗಳ ಕಾಲ) ಈ ಧನ್ಯಭಾವಗಳು, ಹೆಮ್ಮೆ ಮಂಕಾಗಲು ಪ್ರಾರಂಭವಾಗಿ, ‘ಸಿನಿಸಿಸಂ’ ಮೂಡಲು ಪ್ರಾರಂಭವಾಯಿತು. ಗಾಂಧೀಜಿ, ಸುಭಾಷ್ ಚಂದ್ರಬೋಸ್, ವಲ್ಲಭಾಯಿ ಪಟೇಲ್ ಮೊದಲಾದವರು ನಮ್ಮನ್ನು ಅಗಲಿದ್ದರು. ಉಳಿದಿದ್ದ ಹಿಂದಿನ ವೀರರ ಕೀರ್ತಿ ಮಾಸುತ್ತಾ ಬಂದಿತ್ತು. ಜವಾಹರಲಾಲ್ ನೆಹರು ಅವರೇ ನಮ್ಮನ್ನು ನಿರಾಸೆಗೊಳಿಸಿದ್ದರು. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಪ್ರಾರಂಭವಾಗಿದ್ದವು. ಆದರೆ ‘ಸಿನಿಸಿಸಂ’, ಯಾವ ದೇಶಕ್ಕೆ ಆಗಲಿ ಪೀಳಿಗೆಗೇ ಮಾರಕ. ಆಗಲೇ ಎಳೆಯರಿಗಾಗಿ ಮನುಷ್ಯನ ಹಿರಿಮೆಯ ದರ್ಶನ ಮಾಡಿಸುವ ಪುಟ್ಟ ಪುಸ್ತಕಗಳ ಕಲ್ಪನೆ ಬಂದದ್ದು.

ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿರುವ ಕನ್ನಡ ಲೇಖಕರು ನೀವು. ಇಂಗ್ಲಿಷ್‌ನಿಂದ ಇವತ್ತಿನ ಕಾಲಮಾನದಲ್ಲಿ ನಾವು ಪಡೆದುಕೊಳ್ಳಬೇಕಿರುವುದು ಏನನ್ನು? ತಿರಸ್ಕರಿಸಬೇಕಾಗಿರುವುದು ಏನನ್ನು?
ನಾನು ಈಗ ಇಂಗ್ಲಿಷ್ ಭಾಷೆಯ ವಿಷಯ ಮಾತ್ರ ಮಾತನಾಡುತ್ತೇನೆ. ಇಂಗ್ಲಿಷ್ ಸಾಹಿತ್ಯದ ವಿಷಯವಲ್ಲ. ಇಂಗ್ಲಿಷ್ ಭಾಷೆಯಿಂದ ನಾವು ಪಡೆದುಕೊಳ್ಳಬೇಕಾದದ್ದು, ಮೊದಲನೆಯದಾಗಿ ಆಧುನಿಕ ಬದುಕಿಗೆ ಅಗತ್ಯವಾದಂತೆ ಭಾಷೆಯ ಸಂಪತ್ತನ್ನು ಎರವಲಿನಿಂದ ಬೆಳೆಸುವುದು. ಯಾವ ಪರಿಕಲ್ಪನೆಗೆ ತಮ್ಮ ಭಾಷೆಯಲ್ಲಿ ಪದವಿಲ್ಲದಾಗ ನಿಸ್ಸಂಕೋಚವಾಗಿ ಬೇರೆ ಭಾಷೆಯಿಂದ ಇಂಗ್ಲಿಷರು ತೆಗೆದುಕೊಳ್ಳುತ್ತಾರೆ. ‘ಬ್ರಹ್ಮ ‘ಪಂಡಿತ್ ಇಂಥ ಪದಗಳನ್ನು ನಮ್ಮಿಂದ ತೆಗೆದುಕೊಂಡರು. (ಚಪ್ಪಾತಿ, ಚಟ್ನಿ ಇಂದು ಕೇಂಬ್ರಿಡ್ಜ್ ನಿಘಂಟಿನಲ್ಲಿವೆ. ‘ಕಿಯಾಸ್ಕ್’ ಪದವನ್ನು ಜಪಾನಿ ಭಾಷೆಯಿಂದ ತೆಗೆದುಕೊಂಡರು) ಇಂದು ಎಲ್ಲ ಜ್ಞಾನಕ್ಷೇತ್ರಗಳು ವೇಗವಾಗಿ ವಿಸ್ತಾರಗೊಳ್ಳುತ್ತಿವೆ. ಹೊಸ ಹೊಸ ಪದಗಳ ಅಗತ್ಯ ಬೀಳುತ್ತದೆ. ಇಂಗ್ಲಿಷರು ಎಷ್ಟೋ ಬಾರಿ ಪದಗಳನ್ನು ಬೇರೆ ಭಾಷೆಗಳಿಂದ ಆಮದು ಮಾಡಿಕೊಂಡು ಬಿಡುತ್ತಾರೆ. ಎರಡನೆಯದಾಗಿ, ಸರಿ-ತಪ್ಪುಗಳ ನಿರ್ಧಾರದಲ್ಲಿ ಅವರು ಉದಾರವಾಗಿರುತ್ತಾರೆ. ಯಾವ ಭಾಷೆಯನ್ನು ಬಳಸುವವರೂ ಸರಿ-ತಪ್ಪುಗಳ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಟ್ಟು ‘ಹೇಗೆ ಬೇಕಾದರೂ ಮಾತನಾಡಲಿ, ಬರೆಯಲಿ’ ಎನ್ನುವಷ್ಟು ಉದಾರವಾಗಿರುವುದು ಸಾಧ್ಯವಿಲ್ಲ. ಆದರೆ ತಪ್ಪು ಎಂದು ಪರಿಗಣಿಸಿದ್ದ ಪ್ರಯೋಗವನ್ನು ಬಹುಜನರು ಸ್ವೀಕರಿಸಿದಾಗ, ಒಂದು ಘಟ್ಟದಲ್ಲಿ ಅದನ್ನು ಸ್ವೀಕರಿಸುವ ಮನೋಧರ್ಮ ಇಂಗ್ಲಿಷರದು. ‘ಂim ಚಿಣ’, ‘box oಜಿ mಚಿಣಛಿhes’, ಇವೇ ಸರಿಯಾದ ಪ್ರಯೋಗಗಳು ಎನ್ನುತ್ತಿದ್ದ ಕಾಲವಿತ್ತು. ಈಗ ‘ಂim ಜಿoಡಿ’ ‘mಚಿಣಛಿh box’ ಇವೂ ಸರಿ ಎಂದು ಪರಿಗಣಿತವಾಗಿವೆ. ‘ಮೊರೆಹೊಗು’ ಸರಿಯಾದ ಪ್ರಯೋಗ. ನಮ್ಮ ವೃತ್ತ ಪತ್ರಿಕೆಗಳು ‘ಮೊರೆ ಹೋಗು’ ಎಂದು ಬಳಸುತ್ತವೆ. ‘ಮೊರೆ ಹೊಗು’ ಎಂಬ ರೂಪವನ್ನು ಕೇಳುವುದೇ ಅಪರೂಪ. ‘ಮೊರೆ ಹೊಗು’ ಎನ್ನುವುದು ಸ್ವೀಕಾರಾರ್ಹವೆ?
ತಿರಸ್ಕರಿಸಬೇಕಾದದ್ದು ಇಂಗ್ಲಿಷರೇ ಕೈ ಬಿಟ್ಟಿರುವ ಹಳೆಯ ಪದಗಳನ್ನು sಚಿಟಿs, ಞim, hಚಿiಟ ಜಿಡಿom ಇಂತಹ ಪಳೆಯುಳಿಕೆಗಳನ್ನು.
ನಿಘಂಟು ರಚನೆಯ ಕ್ಷೇತ್ರದಲ್ಲಿ ನಿಮ್ಮದು ಬಹಳ ಮುಖ್ಯವಾದ ಹೆಸರು. ನಿಮಗೆ ಈ ಕ್ಷೇತ್ರ ಆಸಕ್ತಿ ಮೂಡಿಸಿದ್ದು ಹೇಗೆ? ನಿಘಂಟು ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಿರುವುದು ಏನು?
ಸರ್ಕಾರವು ನನ್ನನ್ನು ವಿಶೇಷ ತರಬೇತಿಗಾಗಿ ಹೈದರಾಬಾದಿನ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗಿಷ್‌ಗೆ ಕಳಿಸಿತು. ಅಲ್ಲಿ ಭಾಷಾ ವಿಜ್ಞಾನದ ಅಧ್ಯಯನ ಮಾಡಿದೆ. ಆಗ ಹೊಸದೊಂದು ಜಗತ್ತೆ ನನ್ನ ಮುಂದೆ ತೆರೆದುಕೊಂಡಿತು. ಆಗ ನಿಘಂಟುಗಳಲ್ಲಿ ಆಸಕ್ತಿ ಮೂಡಿತು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದ ನಂತರ, ಐ.ಬಿ.ಎಚ್. ಅನ್ನು ಆಗ ನಿರ್ವಹಿಸುತ್ತಿದ್ದ ಶ್ರೀ ಅನಂತರಾಮ್ ಅವರು ಪ್ರೊ. ಜಿ.ವೆಂಕಟಸುಬ್ಬಯ್ಯನವರು, ಪ್ರೊ.ಎಚ್.ಕೆ.ರಾಮ, ಚಂದ್ರಮೂರ್ತಿ ಮತ್ತು ನಾನು ಒಂದು ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟನ್ನು ಸಿದ್ಧಪಡಿಸಿಕೊಡಬೇಕೆಂದು ಸಲಹೆ ಮಾಡಿದರು. ಅದೊಂದು ವಿಶಿಷ್ಟವಾದ ಅನುಭವವಾಯಿತು. ಅನಂತರ ನನ್ನ ಕೆಲವು ಯೋಜನೆಗಳನ್ನು ಕಾರ್ಯಗತಮಾಡಲು ಒಬ್ಬನೇ ನಿಘಂಟನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಸುಭಾಷ್ ಸ್ಟೋರ್ಸ್‌ನವರು ಪ್ರಕಟಿಸಿದ ‘ವಿದ್ಯಾರ್ಥಿ ಮಿತ್ರ ಇಂಗ್ಲಿಷ್-ಕನ್ನಡ ನಿಘಂಟು’ ಒಂದು. ಇದು ವಿದ್ಯಾರ್ಥಿಗಳಿಗಾಗಿಯೇ ಸಿದ್ಧಪಡಿಸಿದ್ದು, ಇದರ ಎರಡನೆಯ ಭಾಗ (ಇಕೋ ನೆರವು’) ಬೇರೆ ಯಾವುದೇ ನಿಘಂಟಿನಲ್ಲಿಲ್ಲದ ಭಾಗಗಳಿವೆ (ಉದಾಃ ಕಾಗುಣಿತ ಗಮನಿಸಿ, ಉಚ್ಚಾರಣೆ ಗಮನಿಸಿ. ಭಾಷೆಯ ಭಾಗವಾಗಿ ಹೋಗಿರುವ ಹೆಸರುಗಳು) ಇದರ ನಂತರ ನಾನು ಸಿದ್ಧಪಡಿಸಿದ ನಿಘಂಟುಗಳಲ್ಲಿ ಹೊಸ ಭಾಗಗಳನ್ನು ಸೇರಿಸಿದ್ದೇನೆ. ಇತ್ತೀಚೆಗೆ ಪ್ರಕಟವಾದ ‘ಪ್ರೊ. ಎಲ್.ಎಸ್.ಎಸ್-ಸುಭಾಷ್ ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ಇಂಗ್ಲಿಷ್ ಪದಗಳ ಉಚ್ಚಾರಣೆಯನ್ನು ಇಂಗ್ಲಿಷ್ ಫೊರ್ನೆಕ್ ಸ್ಪೆಲಿಂಗ್‌ನಲ್ಲಿ ಕೊಟ್ಟಿದ್ದೇನೆ.
ಇಂಗ್ಲೀಷ್ ಪದಬಂಧಗಳು, ನುಡಿಕಟ್ಟುಗಳ ಬಳಕೆಯ ನಿದರ್ಶನಗಳನ್ನು ಕೊಡುವ ಆಧುನಿಕ ನಿಘಂಟು ಸಿದ್ಧವಾಗಬೇಕಾಗಿದೆ. (೬೦ ವರ್ಷಗಳ ಹಿಂದೆ ಪ್ರಕಟವಾದ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ನಿದರ್ಶನಗಳನ್ನು ಕೊಟ್ಟಿತ್ತು) ಒಂದು ವಿಸ್ತಾರವಾದ ನುಡಿಕೋಶ ಸಿದ್ಧವಾಗಬೇಕಾಗಿದೆ. ನಿಘಂಟುಗಳನ್ನು ಬಳಸುವವರಲ್ಲಿ ಬೇರೆ ಬೇರೆ ಸಮುದಾಯಗಳ ಅಗತ್ಯಗಳನ್ನು ಪೂರೈಸುವ ನಿಘಂಟುಗಳು ಪ್ರಕಟವಾಗಬೇಕಾಗಿದೆ.

ನೀವು ಮಕ್ಕಳ ಸಾಹಿತ್ಯದಲ್ಲೂ ತೊಡಗಿದವರು. ಇವತ್ತು ಮಕ್ಕಳ ಸಾಹಿತ್ಯ ಅವಗಣನೆಗೆ ಗುರಿಯಾಗಿದೆ. ಹೊಸ ತಲೆಮಾರಿನ ಲೇಖಕರು ಮಕ್ಕಳ ಸಾಹಿತ್ಯ ಬರೆಯುವುದನ್ನು ಅಪಮಾನವೆಂದು ಭಾವಿಸಿರುವ ಸಾಧ್ಯತೆಯಿದೆ. ಏಕೆ ಹೀಗೆ? ಮಕ್ಕಳ ಸಾಹಿತ್ಯ ಕನ್ನಡದಲ್ಲಿ ಕಳೆಗುಂದುತ್ತಿರುವುದು ನಿಜವಲ್ಲವೆ?
ನವೋದಯ ಯುಗದಲ್ಲಿ ಮಕ್ಕಳ ಸಾಹಿತ್ಯ ಸಮೃದ್ಧವಾಗಿತ್ತು. ಕುವೆಂಪು, ರಾಜರತ್ನಂ, ಕಾವ್ಯಾನಂದ ಮೊದಲಾದವರೆಲ್ಲ ಮಕ್ಕಳ ಸಾಹಿತ್ಯವನ್ನು ಸೃಷ್ಟಿಸಿದರು. ಆನಂತರ ಇದು ಅವಜ್ಞತೆಗೆ ಒಳಗಾಯಿತು. ಈಚೆಗೆ ಡಾ.ಲಕ್ಷ್ಮೀನಾರಾಯಣ ಭಟ್ಟ, ಡಾ.ಎಚ್.ಎಸ್. ವೆಂಕಟೇಶ್‌ಮೂರ್ತಿ, ಟಿ.ಎಸ್.ನಾಗರಾಜಶೆಟ್ಟಿ, ಕೆ.ವಿ. ಸುಬ್ಬಣ್ಣ ಮೊದಲಾದವರು ಈ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಆದರೂ ಇಲ್ಲಿ ಆಗಬೇಕಾದ ಕೆಲಸ ಬೆಟ್ಟದಷ್ಟಿದೆ.
ನಮ್ಮಲ್ಲಿ ಒಳ್ಳೆಯ ಮಕ್ಕಳ ಕವನ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಇದಕ್ಕೆ ಪ್ರೇರಣೆ ಬ್ರೌನಿಂಗನ ಒಂದು ಕವನ. ಇಂಥ ಕವನ ಅಥವಾ ‘ಆಲಿಸ್ ಇನ್ ವಂಡರ್‌ಲೆಂಡ್ನಂಥ ಕವನ ನಮ್ಮಲ್ಲಿ ಸ್ವತಂತ್ರವಾಗಿ ಬರಲೇ ಇಲ್ಲ. ಏಕೆ?
ಕನ್ನಡ ಸಾಹಿತ್ಯ ಲೋಕ ವರ್ತಮಾನದ ತವಕ, ತಲ್ಲಣಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತಿದೆ. ಹಿಂದೆ ಸಾಹಿತಿಗಳು ಚಳವಳಿಗೆ ಇಳಿದು ಜನಪರ ಚಳವಳಿಗಳನ್ನು ಮುನ್ನಡೆಸಿದ್ದರು. ಈಗ ಕೆಲವರನ್ನು ಬಿಟ್ಟರೆ ಇತರರಿಗೆ ಆ ಕುರಿತು ಆಸಕ್ತಿ ಇಲ್ಲ. ಹೀಗಾಗಿದ್ದಕ್ಕೆ ಕಾರಣವೇನು?
ಕನ್ನಡ ಸಾಹಿತ್ಯ ಲೋಕ ವರ್ತಮಾನದ ತವಕ, ತಲ್ಲಣಗಳಿಗೆ ಸ್ಪಂದಿಸುತ್ತಿದೆಯೆ ಇಲ್ಲವೆ ಎನ್ನುವುದು. ಕುತೂಹಲಕರ ಪ್ರಶ್ನೆ. ಸಾಹಿತ್ಯ ಸೃಷ್ಟಿಯಮಟ್ಟಿಗೆ ಹೇಳುವುದಾದರೆ, ಸಾಹಿತಿ ನೇರವಾಗಿ ಸಮಕಾಲೀನ ಬದುಕಿಗೆ ಸ್ಪಂದಿಸದಿರಬಹುದು. ಆದರೆ ಅವನ ಸಾಹಿತ್ಯದ ಸ್ಪಂದನದಲ್ಲಿ ಅದು ಭಾಗವಾಗಿರಬಹುದು. ಪಂಪ, ಕಾಳಿದಾಸ, ಷೇಕ್ಸ್‌ಪಿಯರರ ಸಾಹಿತ್ಯದಲ್ಲಿ ಕಾಣುವಂತೆ. ಪ್ರಗತಿಶೀಲ, ದಲಿತ, ಬಂಡಾಯ ಸಾಹಿತಿಗಳಂತೆ ನೇರವಾಗಿ ಸ್ಪಂದಿಸುವುದು ಒಂದು ಬಗೆ. ನವೋದಯ ಸಾಹಿತಿಗಳಂತೆ ಪರೋಕ್ಷವಾಗಿ ಸ್ಪಂದಿಸುವುದು ಒಂದು ಬಗೆ. ಇಂದು ಸೃಜನಸಾಹಿತ್ಯವನ್ನು ಕೊಡುತ್ತಿರುವ ತರುಣ ಪೀಳಿಗೆ ಸಹ ಸಮಕಾಲೀನ ಬದುಕಿಗೆ ಸ್ಪಂದಿಸುತ್ತಿದೆ ಎನ್ನಿಸುತ್ತದೆ.
ಚಳವಳಿಗಳ ಮಾತು-ನಿಮ್ಮ ಅಭಿಪ್ರಾಯ ಸರಿ ಎನ್ನಿಸುತ್ತದೆ. ಬಿ.ಎಂ.ಶ್ರೀ, ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆ ಮೊದಲಾದವರು ಸಾಂಸ್ಕೃತಿಕ ಚಳವಳಿಯ ಭಾಗವಾಗಿದ್ದರು. ಅನಕೃ ಅವರಿಂದ ಹೊಸ ಯುಗವೇ ಪ್ರಾರಂಭವಾಯಿತು. ನೇರವಾಗಿ ಹೋರಾಟಕ್ಕೆ ಅ.ನ.ಕೃ, ನಾಡಿಗೇರ ಕೃಷ್ಣರಾವ್, ಮ.ರಾಮಮೂರ್ತಿ ಮೊದಲಾದವರು ಧುಮುಕಿದರು. ಗೋಕಾಕ್ ವರದಿಗೆ ಸಂಬಂಧಿಸಿದ ಚಳವಳಿಯಲ್ಲಿಯೂ ಸಾಹಿತಿಗಳು ಪ್ರಮುಖ ಭಾಗವಹಿಸಿದರು. ಇದು ಚಳವಳಿಗಳ ಯುಗ. ಯಾವುದೇ ಅಗತ್ಯವು ಆಡಳಿತಗಾರರ ಗಮನ ಸೆಳೆಯಬೇಕಾದರೆ ಚಳವಳಿಯಾಗಬೇಕು. ಪ್ರಾಯಶಃ ಇಂದಿನ ಜೀವನದ ವೇಗ ಮತ್ತು ಒತ್ತಡಗಳಿಂದ ಸಾಹಿತಿಗಳು ಚಳವಳಿಗೆ ಇಳಿಯುವುದು ಕಡಿಮೆಯಾಗುತ್ತಿದೆ. ಇದು ವಿಷಾದಕರ.
ಸಾಹಿತ್ಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲೂ ಕೈಯಾಡಿಸಿದ್ದೀರಿ. ಹಿಂತಿರುಗಿ ನೋಡಿದಾಗ ಏನನ್ನಿಸುತ್ತದೆ.
ನಾನು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟು ಅರವತ್ತೈದು ವರ್ಷಗಳಾದವು. ನನ್ನ ಚಟುವಟಿಕೆಗಳ ಬಹುಭಾಗ ವಿಮರ್ಶೆಗೆ ಮೂಡಿಪಾಯಿತು. ನಾನು ಇಂಗ್ಲಿಷ್ ಆನರ್ಸ್ ತರಗತಿಗೆ ಸೇರುವಾಗ ಸಂದರ್ಶನದಲ್ಲಿ ಬಿ.ಎಂ.ಶ್ರೀ ಅವರು (ಆಗ ಅವರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು) ‘ನೀವು ಇಂಗ್ಲಿಷ್ ಸಾಹಿತ್ಯದ ಅಭ್ಯಾಸದಲ್ಲಿ ಪಡೆದುಕೊಂಡದ್ದನ್ನು ಕನ್ನಡದ ಸೇವೆಗೆ ಬಳಸಿ’ ಎಂದು ಹೇಳಿದ್ದರು. ಅವರ ಆದೇಶದಂತೆ ನಡೆದುಕೊಂಡೆ ಎನ್ನುವ ಸಮಾಧಾನವಿದೆ. ಹಿರಿಯರಾದ ಮಾಸ್ತಿಯವರು, ಸಿ.ಕೆ.ವೆಂಕಟರಾಮಯ್ಯ, ವಿ.ಸೀ, ರಾಜರತ್ನಂ, ಅನಕೃ, ಕಾರಂತರು ಮೊದಲಾದವರು ನನ್ನ ವಿಮರ್ಶೆಯನ್ನು ಕುರಿತು ಒಳ್ಳೆಯ ಮಾತನ್ನಾಡಿದರು. ಪತ್ರಿಕೆಗಳು ಲೇಖನ ಮತ್ತು ವಿಮರ್ಶೆಯನ್ನು ಬರೆಯಲು ಆಹ್ವಾನಿಸಿದರು. ನನ್ನ ಪೀಳಿಗೆಯ ಬಸವರಾಜ ಕಟ್ಟಿಮನಿ, ನಿರಂಜನ, ತರಾಸು, ವೆಂಕಟೇಶ್ ಮೊದಲಾದವರೂ ನನ್ನ ವಿಮರ್ಶೆಯಲ್ಲಿ ಬಯಸಿದರು. ಹೀಗಾಗಿ ನನಗೆ ಅರಿವಿಲ್ಲದೆಯೇ ನನ್ನ ಸಮಯ-ಶಕ್ತಿಗಳನ್ನೆಲ್ಲ ವಿಮರ್ಶೆಯೇ ಪಡೆದುಕೊಂಡಿತು. ಈ ಕ್ಷೇತ್ರದಲ್ಲಿ ನನ್ನ ಸಾಧನೆಗೆ ತೃಪ್ತಿ ಇದೆ. ಅಖಿಲ ಭಾರತ ಕನ್ನಡ ಸಾಹಿತ್ಯ, ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾದ ಮೊದಲನೆಯ ವಿಮರ್ಶಕ ನಾನು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದದ್ದು, ವಿಮರ್ಶಕ ಕೃತಿಗೆ - ‘ಇಂಗ್ಲಿಷ್ ಸಾಹಿತ್ಯ ಚರಿತ್ರೆ ನನ್ನ ‘ಆಧುನಿಕ ಕನ್ನಡ ಸಾಹಿತ್ಯ ಮೂವತ್ತೈದು ವರ್ಷಗಳಲ್ಲಿ ಹತ್ತು ಆವೃತ್ತಿಗಳನ್ನು ಕಂಡಿದೆ. ಪ್ರಾಚೀನ ಗ್ರೀಕ್ ನಾಟಕವನ್ನು ಕುರಿತು ಕನ್ನಡದಲ್ಲಿರುವ ಏಕೈಕ ಸಮಗ್ರ ಅಧ್ಯಯನ ನನ್ನ ‘ಗ್ರೀಕ್ ರಂಗಭೂಮಿ ಮತ್ತು ನಾಟಕ’. ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವದಲ್ಲಿ ವಿಮರ್ಶೆಗೆ ಸನ್ಮಾನ ಸಂದದ್ದು ನನಗೆ. ಪಾಶ್ಚಾತ್ಯ ಸಾಹಿತ್ಯವನ್ನು ಬಹುದೊಡ್ಡ ಪ್ರಮಾಣದಲ್ಲಿ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದ್ದೇನೆ. ಗೋಲ್ಡ್‌ಸ್ಮಿತ್, ಷೇಕ್ಸ್‌ಪಿಯರ್, ಕಾಫ್ಕ ಮೊದಲಾದವರನ್ನು ಕುರಿತು ಪುಸ್ತಕಗಳನ್ನು ಬರೆದಿದ್ದೇನೆ. ಆಧುನಿಕ ಕನ್ನಡ ಬರಹಗಾರರನ್ನು ಕುರಿತು ‘ಇಂಡಿಯನ್ ಏಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ನನ್ನ ಮೂವತ್ತೈದು ಲೇಖನಗಳ ಮಾಲೆಯೇ ಪ್ರಕಟವಾಯಿತು. ಮಾಸ್ತಿ, ಕೈಲಾಸಂ ಮೊದಲಾದವರನ್ನು ಕುರಿತು ಇಂಗ್ಲೀಷಿನಲ್ಲಿ ಪುಸ್ತಕಗಳನ್ನು ಬರೆದಿದ್ದೇನೆ. ಕನ್ನಡ ಸಾಹಿತಿಗಳನ್ನು ಕುರಿತು, ಇಂಗ್ಲಿಷ್‌ನಲ್ಲಿ ಕೇರಳದಲ್ಲಿ, ಮುಂಬೈಯಲ್ಲಿ, ಚೆನ್ನೈನಲ್ಲಿ, ದೆಹಲಿಯಲ್ಲಿ, ವಾರಣಾಸಿಯಲ್ಲಿ, ಹೈದರಾಬಾದಿನಲ್ಲಿ ಅಮೃತಸರದಲ್ಲಿ ಭಾಷಣ ಮಾಡಿದ್ದೇನೆ. ವಿಮರ್ಶೆಯಲ್ಲಿ ತಪ್ಪು ಮಾಡಿರಬಹುದು. ಆದರೆ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದೇನೆ. (ತಪ್ಪು ಮಾಡುವ ‘ರಿಸ್ಕ್’ ತೆಗೆದುಕೊಳ್ಳದಿದ್ದರೆ ವಿಮರ್ಶೆಯೇ ಸಾಧ್ಯವಿಲ್ಲ. ಪ್ರಸಿದ್ಧ ವಿಮರ್ಶಕ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ಪ್ರೊಫೆಸರ್ ಆಫ್ ಪೋಯಟ್ರಿ ಆಗಿದ್ದ ಕ್ವಿಲರ್‌ಕೂಜ್, ಮುಂದೆ ಕಾವ್ಯಕ್ಕೆ ನೊಬೆಲ್ ಬಹುಮಾನ ಪಡೆದ ಟಿ.ಎಸ್. ಎಲಿಯೆಟನ ಮೊದಲನೆ ಗಮನಾರ್ಹ ಕವನವನ್ನು ಓದಿ ‘ಈತನಿಗೆ ಐದು ಪಂಕ್ತಿ ಕಾವ್ಯ ಬರೆಯಲು ಬರುವುದಿಲ್ಲ ಎಂದು ಹೇಳಿರಲಿಲ್ಲವೆ?)
ವಿಮರ್ಶಕನಾಗಿ ಸಾಧನೆಯ ವಿಷಯದಲ್ಲಿ ಸಮಾಧಾನವಿದ್ದರೂ ಸಣ್ಣ ಕಥೆಗಳನ್ನು ಬರೆಯುವುದನ್ನು ಬಿಟ್ಟುದಕ್ಕಾಗಿ ವಿಷಾದವಿದೆ. ೧೯೪೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದೆ. ನನ್ನ ‘ಮುಯ್ಯಿ ಕಥೆ ಜನಪ್ರಿಯವಾಯಿತು. ಕೆಲವು ವರ್ಷಗಳ ಹಿಂದೆ ಪತ್ರಿಕಾ ಜಗತ್ತಿನ ಸ್ನೇಹಿತರ ಒತ್ತಾಯಕ್ಕಾಗಿ ಬರೆದ ‘ಸತ್ಯನಾರಾಯಣ’ ಕಥೆಯನ್ನು ಭಾರತ ಸರ್ಕಾರದ ಪ್ರಕಟಣ ವಿಭಾಗ ವರ್ಷದ ಉತ್ತಮ ಕಥೆಗಳಲ್ಲಿ ಒಂದೆಂದು ಆರಿಸಿ ಹಿಂದಿ ಭಾಷೆಗೆ ಅನುವಾದ ಮೂಡಿಸಿತು. ಸಣ್ಣ ಕಥೆಗಳನ್ನು ಬರೆದಾಗ ಒಂದು ವಿಶಿಷ್ಟ ಸಂತೋಷವಾಗುತ್ತಿತ್ತು. ಅದನ್ನು ನಿಲ್ಲಿಸಬಾರದಾಗಿತ್ತು.

ಈ ಸಂದರ್ಭಕ್ಕೆ, ಈ ಕಾಲಘಟ್ಟಕ್ಕೆ ‘ನಲ್ನುಡಿ’ಯ ಓದುಗರೊಂದಿಗೆ ಹಂಚಿಕೊಳ್ಳಬಯಸುವ ನಿಮ್ಮ ಮಾತುಗಳೇನು?
ಎರಡು ಅಂಶಗಳನ್ನು ಒತ್ತಿ ಹೇಳಲು ಬಯಸುತ್ತೇನೆ. ಪಾಶ್ಚಾತ್ಯ ಸಂಸ್ಥೆಗಳು ಎಲ್ಲ ದೇಶಗಳಲ್ಲಿನ ಭ್ರಷ್ಟಾಚಾರದ ಅಳತೆ ಮಾಡಿದ್ದಾರೆ. ಭಾರತಕ್ಕೆ ಬಹಳ ದೊಡ್ಡ ರ‍್ಯಾಂಕ್ ಸಿಕ್ಕಿದೆ. ಜಗತ್ತಿನಲ್ಲಿ ಲಂಚದ ತವರು ದೇಶಗಳಲ್ಲಿ ಒಂದೆಂದು ಭಾರತ ಪ್ರಸಿದ್ಧಿಯಾಗತೊಡಗಿದೆ. ಲಂಚವಲ್ಲದೆ ಇತರ ರೀತಿಯ ಭ್ರಷ್ಟಾಚಾರ ನಮ್ಮೆಲ್ಲರಿಗೆ ಅನುಭವಕ್ಕೆ ಬಂದಿದೆ. ಈ ಅಪಕೀರ್ತಿಯನ್ನು ತೊಡೆದು ಹಾಕಲು ಶ್ರಮಿಸೋಣ. ಭ್ರಷ್ಟಾಚಾರ ಮಾಡಿದವರು ನಮ್ಮ ಪಕ್ಷದವರು, ನಮ್ಮ ಜಾತಿಯವರು, ನಮ್ಮ ಬಂಧುಗಳು ಅಥವಾ ನೆಂಟರು ಎಂದು ಪಕ್ಷಪಾತ ಮಾಡುವುದು ಬೇಡ. ಅವರು ಪಾಪಿಗಳು, ದೇಶದ್ರೋಹಿಗಳು.
ಎರಡನೆಯದು, ಪ್ರಪಂಚದಲ್ಲಿ ಇಂದು ಸುಮಾರು ಆರರಿಂದ ಏಳು ಸಾವಿರ ಭಾಷೆಗಳಿವೆ. ಇವುಗಳಲ್ಲಿ ಲಿಪಿ ಇರುವುದು ಸುಮಾರು ನಾಲ್ಕು ನೂರು ಭಾಷೆಗಳಿಗೇ, ಇವುಗಳಲ್ಲಿ ಭವ್ಯ ಸಾಹಿತ್ಯವಿರುವುದು ಇನ್ನು ಕಡಿಮೆ ಸಂಖ್ಯೆಯ ಭಾಷೆಗಳಿಗೆ. ಅವುಗಳಲ್ಲಿ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಒಂದು. ತೇಜಸ್ವೀ ಸಂಸ್ಕೃತಿ ಇರುವ ರಾಜ್ಯಗಳಲ್ಲಿ ಒಂದು ಕರ್ನಾಟಕ. ಈ ಭಾಷೆಗಾಗಿ, ಸಂಸ್ಕೃತಿಗಾಗಿ ಶ್ರಮಿಸೋಣ, ಹೆಮ್ಮೆಪಡೋಣ. ಭಾಷೆಯ ಹಿರಿಮೆ ಆ ಭಾಷೆಯನ್ನು ಬಳಸುವವರನ್ನು ಅವಲಂಬಿಸುತ್ತದೆ. ಕನ್ನಡ ಮಾತನಾಡೋಣ, ಬರೆಯೋಣ, ಕನ್ನಡ ಪುಸ್ತಕಗಳನ್ನು ಪತ್ರಿಕೆಗಳನ್ನು ಕೊಂಡುಕೊಂಡು ಓದೋಣ. ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ ಶ್ರಮಿಸುವ ಸಂಸ್ಥೆಗಳಿಗೆ ಕ್ರಿಯಾಶೀಲ ಬೆಂಬಲ ನೀಡೋಣ. ಆದ ಹಣ ಸಹಾಯ ಮಾಡೋಣ, ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಅನ್ಯಾಯವಾದಾಗ ಪ್ರತಿಭಟಿಸುವ ಸಭೆಗಳಿಗೆ ಹೋಗೋಣ, ಚಳವಳಿಗಳನ್ನು ಬೆಂಬಲಿಸೋಣ. ಎರಡೂವರೆ ಸಾವಿರ ವರ್ಷಗಳ ಕಾಲ ಕನ್ನಡ ಭಾಷೆ-ಸಂಸ್ಕೃತಿಗಳನ್ನು ಉಳಿಸಿ ಬೆಳೆಸಿ ನಮಗೆ ಬಿಟ್ಟು ಹೋದವರಿಗೆ ನಾವು ಬೇರೆ ರೀತಿಯಲ್ಲಿ ಕೃತಜ್ಞತೆ ತೋರಿಸಿಬಿಟ್ಟೆವು? ಬಾಯಿ ಮಾತಿನ ಹೆಮ್ಮೆ, ಮೆಚ್ಚಿಕೆ ಇರಲಿ, ಆತ್ಮಸಾಕ್ಷಿಯಾಗಿ ಬೆಂಬಲ ನೀಡೋಣ, ಕೃತಘ್ನರಾಗುವುದು ಬೇಡ. ಸಿರಿಗನ್ನಡಂ ಗೆಲ್ಗೆ!


ಸಂದರ್ಶನ: ಭಾನುಮತಿ, ಚಿತ್ರಗಳು: ಶರಣ್ ಶಹಾಪುರ

No comments:

Post a Comment

ಹಿಂದಿನ ಬರೆಹಗಳು