Friday, May 7, 2010

ಹೊಸ ಕನಸುಗಳತ್ತ...






ಒಂದು ಕೊರತೆ ನೀಗಿದೆ.
ಕರ್ನಾಟಕದ ಇತಿಹಾಸದಲ್ಲಿ ಅತಿದೊಡ್ಡ, ಕ್ರಿಯಾಶೀಲ, ರಾಜೀರಹಿತ ಬದ್ಧತೆಗಳ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆ. ವೇದಿಕೆಯ ಗೊತ್ತು ಗುರಿ, ನೀತಿ ನಿಲುವುಗಳನ್ನು ಸ್ಪಷ್ಟವಾಗಿ ಬಿಂಬಿಸುವ ಮುಖವಾಣಿ ಪತ್ರಿಕೆಯೊಂದರ ಕೊರತೆ ಇತ್ತು. ಅದು ಈಗ ನೀಗಿದೆ.
ಮೊದಲ ಸಂಚಿಕೆ ಓದಿದ್ದೀರಿ. ಹೇಗನ್ನಿಸಿತು? ತಪ್ಪದೇ ಹೇಳಿ.
ಇಂಥದ್ದೊಂದು ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ ಎಂದು ಕನ್ನಡದ ಸಾರಸ್ವತ ಲೋಕದ ಪ್ರತಿಭಾನ್ವಿತರಿಗೆ, ಬುದ್ಧಿಜೀವಿಗಳಿಗೆ, ಸಮಾಜಶಾಸ್ತ್ರಜ್ಞರಿಗೆ, ಎಲ್ಲ ಕ್ಷೇತ್ರಗಳ ಗಣ್ಯರಿಗೆ ಪತ್ರ ಬರೆದು ತಿಳಿಸಿದಾಗ, ಬಂದ ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹತ್ತು ವರ್ಷಗಳಿಂದ ನಾಡು-ನುಡಿ ರಕ್ಷಣೆಯ ವಿಷಯದಲ್ಲಿ ತೋರಿದ ಅಸಾಮಾನ್ಯ ಬದ್ಧತೆಗೆ ಇದು ದಕ್ಕಿದ ಉಡುಗೊರೆ ಎಂದೇ ನಾವು ಭಾವಿಸಿದ್ದೇವೆ.
ಮೊದಲ ಸಂಚಿಕೆಗೇ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಡಾ.ಯು.ಆರ್.ಅನಂತಮೂರ್ತಿ, ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ದೇ.ಜವರೇಗೌಡ, ಡಾ.ಕಮಲಾ ಹಂಪನಾ ಸೇರಿದಂತೆ ಪ್ರಮುಖರು ತಮ್ಮ ಬರೆಹಗಳನ್ನು ನೀಡಿದ್ದಾರೆ. ಈ ಎಲ್ಲರಿಗೂ ನಮ್ಮ ಕೃತಜ್ಞತೆಗಳು.
ಕನ್ನಡ ಚಳವಳಿ, ಇತಿಹಾಸ, ಸಾಹಿತ್ಯ, ಸಿನಿಮಾ ಸೇರಿದಂತೆ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳ ಕುರಿತೂ ಅರ್ಥಪೂರ್ಣ ಚರ್ಚೆ, ಸಂವಾದಗಳು ಈ ಪತ್ರಿಕೆಯಲ್ಲಿ ನಡೆಯಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸಾರಸ್ವತ ಲೋಕದ ಎಲ್ಲರನ್ನು ನಲ್ನುಡಿಯ ಅಂತರಂಗಕ್ಕೆ ವಿನಮ್ರವಾಗಿ ಸ್ವಾಗತಿಸುತ್ತೇವೆ. ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹತ್ತು ವರ್ಷಗಳಲ್ಲಿ ನಿರಂತರ ಹೋರಾಟಗಳ ಮೂಲಕವೇ ಜನಮನ ಗೆದ್ದಿದೆ. ಕನ್ನಡದ ಹಿತಾಸಕ್ತಿಗೆ, ಸಾರ್ವಭೌಮತೆಗೆ, ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲ ಕರವೇ ಸಮರವೀರರು ನಾಡಿನ ಉದ್ದಗಲಕ್ಕೂ ಹೋರಾಟದ ರಣಕಹಳೆಯನ್ನು ಮೊಳಗಿಸಿದ್ದಾರೆ. ಯುದ್ಧೋಪಾದಿಯಲ್ಲಿ ಚಳವಳಿಯನ್ನು ಸಂಘಟಿಸಿದ ಟಿ.ಎ.ನಾರಾಯಣಗೌಡರು, ಕನ್ನಡತನದ ವಿರೋಧಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಕರವೇ ಬಳಗಕ್ಕೆ ಪತ್ರಿಕೆ ಚೈತನ್ಯವಾಹಕವಾಗಿ ಕಾರ್ಯನಿರ್ವಹಿಸಲಿದೆ. ನಲ್ನುಡಿಯೂ ಸಹ ಕರವೇ ಹೋರಾಟದ ಭಾಗವಾಗಿಯೇ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ.
ಕನ್ನಡಿಗರ ಮನೆಮನೆಗೂ ಈ ಪತ್ರಿಕೆಯನ್ನು ತಲುಪಿಸುವ ಗುರಿ ನಮ್ಮದು. ತನ್ಮೂಲಕ ಕನ್ನಡಿಗರು ಒಗ್ಗೂಡುವ, ಹಕ್ಕುಗಳಿಗಾಗಿ ಹೋರಾಡುವ, ಕನ್ನಡವೇ ಸಾರ್ವಭೌಮವಾಗಿರುವ ಹೊಸ ಕನ್ನಡನಾಡು ನಿರ್ಮಿಸುವ ತವಕ ನಮ್ಮದು. ಈ ಹೊಸ ಕನಸುಗಳ ದಾರಿಗುಂಟ ನೀವು ನಮ್ಮೊಂದಿಗಿರಿ ಎಂದು ವಿನಯಪೂರ್ವಕವಾಗಿ ಕೋರುತ್ತೇವೆ.

ಪ.ಬ.ಜ್ಞಾನೇಂದ್ರಕುಮಾರ್

No comments:

Post a Comment

ಹಿಂದಿನ ಬರೆಹಗಳು