Thursday, June 2, 2011

ಕನ್ನಡವೇ ಜಾತಿ ಕನ್ನಡವೇ ಧರ್ಮ ಕನ್ನಡವೇ ದೇವರು



"ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು" ಎಂಬ ಘೋಷ ವಾಕ್ಯದೊಂದಿಗೆ ಬಂದ "ಕರ್ನಾಟಕ ರಕ್ಷಣಾ ವೇದಿಕೆ" ಸುಮಾರು ಹತ್ತು ವರುಷಗಳ ಹಿಂದೆ ತನ್ನ ಮೂಲ ಬೇರುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ತನ್ನ ಕಾರ್ಯವನ್ನು ಮಾಡುತ್ತಿತ್ತು. ಆಗ ಗೆಳತಿ ರತ್ನಾಕಾಳೇಗೌಡ, ನಾರಾಯಣಗೌಡರ ಜೊತೆಯಲ್ಲಿ ಹಾಸನದ ಕಡೆ ಬಂದು ಶಾಖೆಯನ್ನು ಪ್ರಾರಂಭ ಮಾಡಲು ನಾನು ಹೋಗಿದ್ದೆ. ನಾರಾಯಣಗೌಡರು ಕನ್ನಡ ನಾಡು, ನುಡಿಯ ವಿಚಾರ ಬಿಟ್ಟರೆ ಬೇರೇನನ್ನು ಮಾತನಾಡಲಿಲ್ಲ. ಯಾವ ರೀತಿ ಕನ್ನಡಿಗರನ್ನು ಒಟ್ಟುಗೂಡಿಸಬೇಕು. ಅವರಲ್ಲಿರುವ ಸ್ವಾಭಿಮಾನವನ್ನು ಹೇಗೆ ಜಾಗೃತಿಗೊಳಿಸಬೇಕು ಎಂಬುದೇ ಅವರ ಉದ್ದೇಶ ಆಗಿತ್ತು. ಅವರ ನಿರಂತರ ಶ್ರಮದ ಫಲವಾಗಿ ಇಂದು ಕರ್ನಾಟಕದ ಮೂಲೆ ಮೂಲೆಯಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಿಗರು ಅದರಲ್ಲು ಸ್ವಾಭಿಮಾನಿ ಕನ್ನಡಿಗರ ಸೇನಾ ತುಕಡಿಗಳು ಸಜ್ಜಾಗಿ ನಿಂತಿವೆ. ಇದರಲ್ಲಿ ನಾರಾಯಣಗೌಡರ ಅಪಾರ ಪರಿಶ್ರಮದ ಫಲ ಅಡಗಿದೆ.
ಕನ್ನಡ ನಾಡು-ನುಡಿಗೆ, ನೆಲ-ಜಲಕ್ಕೆ ಅನ್ಯಾಯವಾದಾಗ ಕನ್ನಡ ಪರ ಸಂಘ ಸಂಸ್ಥೆಗಳು ಹೋರಾಟಗಳನ್ನು ಮಾಡಿವೆ. ಮಾಧ್ಯಮದ ಮುಂದೆ, ಸರಕಾರದ ಮುಂದೆ ತನ್ನ ಅಳಲನ್ನು ಹೇಳಿ ಸರಕಾರವನ್ನು ಎಚ್ಚರಿಸಿ ಒಂದೊಂದು ಬಾರಿ ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹವನ್ನು ಮಾಡಿ ಸರಕಾರವನ್ನು ಮಣಿಸಿವೆ. ಆದರೆ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳು ಒಂದಾಗಿ ನಿಂತು ಹೋರಾಟ ಮಾಡಿರುವುದು ಗೋಕಾಕ್, ಕಾವೇರಿ ಜಲವಿವಾದದಲ್ಲಿ ಮಾತ್ರ. ಕೆಲ ಸಂಘಟನೆಗಳು ಹೆಚ್ಚೆಂದರೆ ಒಂದು ಎರಡು ಶಾಖೆಗಳನ್ನು ಹೊಂದಿರಬಹುದು. ಆದರೆ ಕರವೇ ರಾಜ್ಯವ್ಯಾಪಿ ಪಸರಿಸಿಕೊಂಡಿದೆ. ಕರ್ನಾಟಕದ ನಾಡು-ನುಡಿ, ನೆಲ-ಜಲದ ಬಗ್ಗೆ ಸ್ವಾಭಿಮಾನವನ್ನು ಹೊಂದಿ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿದ, ಪ್ರಾಣವನ್ನು ನೀಡಿದ, ಹೋರಾಟ ಮಾಡುತ್ತಿರುವವರು ಇಂದಿಗೂ ಇದ್ದಾರೆ. ತಮ್ಮ ಕನ್ನಡಪರ ಸಂಘ-ಸಂಸ್ಥೆಗಳ ಮೂಲಕ ಹೋರಾಡುತ್ತಲೇ ಇದ್ದಾರೆ.
ಆದರೆ ಇಂದು ಜಾಗತೀಕರಣದ ಸಮಯದಲ್ಲಿ ಅನ್ಯಭಾಷಿಕಗಳ ದಾಳಿಯಿಂದ ನಮ್ಮನ್ನು ನಾವು ಉಳಿಸಿಕೊಳ್ಳಬೇಕಾದಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಂತಹ ಬೃಹತ್ ಆದ ವೇದಿಕೆಯ ಅವಶ್ಯಕತೆ ಖಂಡಿತಾ ಇತ್ತು. ಎಲ್ಲೋ ಒಂದು ಕಡೆ ಕನ್ನಡಕ್ಕೆ ಅನ್ಯಾಯವಾದಾಗ ಕರ್ನಾಟಕವೇ ದಿಗ್ಗನೇ ಎದ್ದು ನಿಲ್ಲುವಂತಹ ವೇದಿಕೆ ಖಂಡಿತ ಕನ್ನಡ ನಾಡಿಗೆ ಬೇಕಾಗಿತ್ತು. ಅಂಥ ಒಂದು ಬೃಹತ್ತಾದ ವೇದಿಕೆಯನ್ನು ನಿರಂತರವಾಗಿ ಕಟ್ಟಿ ನಿಲ್ಲಿಸುವುದರಲ್ಲಿ ನಾರಾಯಣಗೌಡರ ಸತತ ಪರಿಶ್ರಮ, ಅವರಲ್ಲಿರುವ ಸ್ವಾಭಿಮಾನ ಕಾರಣವಾಗಿದೆ.
"ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ
ಜಗ್ಗದೆಯ, ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ"
ಎಂಬ ಮಾತುಗಳು ಕರ್ನಾಟಕ ರಕ್ಷಣಾ ವೇದಿಕೆಯ ಮಂತ್ರವಾಗಬೇಕು. ಯಾರು ಏನೇ ಅಂದರು, ಯಾವ ಅಡೆ ತಡೆಗಳು ಬಂದರು. ಲೆಕ್ಕಿಸದೆ, ತನ್ನ ತಾಯಿ ನೆಲದ ಕೈಂಕರ್ಯವನ್ನು ಮಾಡುವ ಬುದ್ಧಿ, ಶಕ್ತಿ, ಜಾಣ್ಮೆ, ಚತುರತೆ ನಾರಾಯಣಗೌಡರಿಗೆ ತಾಯಿ ಭುವನೇಶ್ವರಿ ನೀಡಲಿ. ಸಮಸ್ತ ಕನ್ನಡಿಗರ ಅಭಿಮಾನದ ರಕ್ಷೆ ಗೌಡರಿಗೆ ಇದೆ.

ಶ್ರೀಮತಿ ಹಾ.ವೀ. ಮಂಜುಳಾಶಿವಾನಂದ
ನಂ.೩೬ ಚೆನ್ನಬಸಪ್ಪ ನಿಲಯ, ೨ನೇ ಮುಖ್ಯರಸ್ತೆ,
ಶೇಷಾದ್ರಿಪುರಂ, ಬೆಂಗಳೂರು-೫೬೦ ೦೨೦
ದೂ: ೯೪೮೦೫೧೧೭೧೪

No comments:

Post a Comment

ಹಿಂದಿನ ಬರೆಹಗಳು