Thursday, June 2, 2011

ಗುಡುಗಿನ ಶ್ರೀ ನಾರಾಯಣಗೌಡರು



ಗುಡುಗು ಮತ್ತು ಮಿಂಚು ಪ್ರಕೃತಿಯ ನಿಯಮ ಮತ್ತು ಸಮಾಜಕ್ಕೆ ಶೋಭೆಯನ್ನು ತರುತ್ತವೆ. ಇವಿಲ್ಲದೆ ಹೋದರೆ ಮಳೆಗಾಲಕ್ಕೆ ಕಳೆಯಿಲ್ಲ. ಬೆಲೆಯಿಲ್ಲ ಮತ್ತು ಪ್ರಯೋಜನವಿಲ್ಲ. ಇವು ಇದ್ದರೆ ಮಾತ್ರ ಮಳೆ ಖಂಡಿತವಾಗಿಯೂ ಆಗುವುದೆಂಬ ಭರವಸೆ. ರೈತಾಪಿ ಬಂಧುಗಳ ಆನಂದಕ್ಕೆ ಮಿತಿಯಿಲ್ಲ. ಮುಖ ಆಕಾಶದ ಕಡೆಯೇ ಮತ್ತೆ ಮತ್ತೆ ಎತ್ತಿ ನಿಲ್ಲುವುದು.
ಶ್ರೀ ನಾರಾಯಣಗೌಡರ ಗುಡುಗು ಕರ್ನಾಟಕದ ಜನಸ್ತೋಮಕ್ಕೆ ಒಂದು ವರ. ಕರ್ನಾಟಕದ ಹೆಮ್ಮೆಯ ಭಾಷೆ ಕನ್ನಡ. ಈ ಭಾಷೆ ಎಲ್ಲಾ ವರ್ಗಗಳ ಜನರಿಗೆ ಸೇರಿದ್ದು. ಭಾಷೆಗೆ ಜಾತಿ, ಮತ ಮತ್ತು ಪ್ರದೇಶಗಳ ಅಡ್ಡಗೋಡೆಯಿಲ್ಲ. ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರೆಂಬ ಭಾವನೆ ಕನ್ನಡ ಭಾಷೆಯ ಉಪಯೋಗದಿಂದ ಬರುವುದು. ಆದರೆ ಕಾರಣಾಂತರದಿಂದ ಕನ್ನಡ ಭಾಷೆಗೆ ಸಿಕ್ಕಬೇಕಾದ ಸ್ಥಾನಮಾನ ಇನ್ನೂ ದೊರಕಿಲ್ಲ. ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರ್ಕಾರ ಪರಿಗಣಿಸಲು ಹಿಂದೇಟು ಹಾಕುತ್ತಿದೆ. ತಮಿಳು ಭಾಷೆಗೆ ಈ ಸ್ಥಾನಮಾನ ಸಿಗುವಾಗ ಕನ್ನಡಕ್ಕೆ ಏಕಿಲ್ಲ? ಈ ಮಲತಾಯಿ ಮನೋಭಾವನೆಯನು ಕೇಂದ್ರ ಸರ್ಕಾರ ತಾಳಿರುವುದು ನ್ಯಾಯವಲ್ಲ, ಧರ್ಮವಲ್ಲ. (ಲೇಖಕರು ಈ ಲೇಖನವನ್ನು ಬರೆದಾಗ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರಲಿಲ್ಲ -ಸಂ)
ಹಾಗೆಯೇ ಕನ್ನಡ ಒಂದು ಮಾಧ್ಯಮ ಭಾಷೆಯಾಗುವುದರಲ್ಲಿ ಇನ್ನೂ ಅಡ್ಡಿ ಆತಂಕಗಳಿವೆ. ಕನ್ನಡಿಗರೇ ಆದ, ಈ ಮಣ್ಣಿನಲ್ಲೇ ಜನ್ಮಿಸಿದ ನಮ್ಮ ಅನೇಕ ಸಹೋದರರು ಕನ್ನಡ ದ್ರೋಹಿಗಳಾಗಿದ್ದಾರೆ. ಇದು ನಮ್ಮ ದುರ್ಭಾಗ್ಯವೆಂದು ಹೇಳಬಹುದು. ಕನ್ನಡ ಮಾಧ್ಯಮ ಕನಿಷ್ಟ ಪಕ್ಷ ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಮಾಧ್ಯಮವಾಗಿರಲು ಎಷ್ಟು ಕಸರತ್ತು ಮಾಡಬೇಕಾಗಿದೆ. ಇತ್ತೀಚೆಗೆ ೧೯೯೪ ರಿಂದ ಪ್ರಾರಂಭವಾದ ಶಾಲೆಗಳಲ್ಲಿ ಮಾತ್ರ ಕನ್ನಡ ಮಾಧ್ಯಮವಾಗಿದೆ. ಆದರೆ ೧೯೯೪ರ ಹಿಂದೆ ಪ್ರಾರಂಭವಾದ ಶಾಲೆಗಳಲ್ಲಿ ಇನ್ನೂ ಆಂಗ್ಲಭಾಷೆ ಮಾಧ್ಯಮವಾಗಿದೆ. ಅಂದರೆ ಸಮಾನ ಮಾಧ್ಯಮ ಭಾಷೆಯಿಲ್ಲ. ಉಚ್ಚ ನ್ಯಾಯಾಲಯದ ಮುಂದಿದೆ ಈ ವಿವಾದ. ವಿವಾದಕ್ಕೆ ಹೋದವರೂ ನಮ್ಮವರೇ. ಈಗ ತೀರ್ಪನ್ನು ನ್ಯಾಯಾಲಯ ಕಾದಿರಿಸಿದೆ. ಆದರೆ ತೀರ್ಪು ಹೊರ ಬರಲು ಇನ್ನೂ ಎಷ್ಟು ಕಾಲ ಬೇಕಾಗಿದೆ?
ಕರ್ನಾಟಕದಲ್ಲಿ ಕೆಲವು ಕೇಂದ್ರ ಶಾಲೆಗಳಲ್ಲಿ ೧ ರಿಂದ ೧೦ರವರೆಗೆ ಬೇರೆ ಭಾಷೆ ಮಾಧ್ಯಮವಾಗಿದ್ದರೆ, ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕೆಂಬ ನಿಯಮವನ್ನು ನಮ್ಮ ಅನೇಕ ಶಾಲೆಗಳು ಪರಿಪಾಲಿಸುತ್ತಿಲ್ಲ. ಇತ್ತೀಚೆಗೆ ಮದ್ರಾಸ್ ಉಚ್ಚ ನ್ಯಾಯಾಲಯ ಒಂದು ತೀರ್ಪನ್ನು ಕೊಟ್ಟು ತಮಿಳು ಭಾಷೆಯನ್ನು ಕಡ್ಡಾಯವಾಗಿ ಒಂದು ಭಾಷೆಯನ್ನಾಗಿ ೯ನೇ ತರಗತಿಯವರೆಗೆ ಕಲಿಸಬೇಕೆಂಬ ಸರ್ಕಾರದ ನಿಲುವನ್ನು ಎತ್ತಿ ಹಿಡಿಯಿತು. ಆದರೆ ನಾವು ಇಲ್ಲಿಯೂ ಹಿಂದೆ ಬಿದ್ದಿದ್ದೇವೆ.
ಕರ್ನಾಟಕ ರಾಜ್ಯಕ್ಕೆ ಸೇರಿದ ಕೆಲವು ಜಿಲ್ಲೆಗಳಲ್ಲಿ ಕನ್ನಡದ ಸುಳಿವೇ ಇಲ್ಲ. ಕನ್ನಡ ಧ್ವಜದ ಬದಲು ಮರಾಠಿ ಧ್ವಜ, ಕನ್ನಡದ ಬದಲು ಮರಾಠಿ ಅಧಿಕೃತ ಭಾಷೆ. ಜತೆಗೆ ಕೆಲವರು ಕಾಲು ಕನ್ನಡ ಮುಕ್ಕಾಲು ಮರಾಠಿ ಭಾಷೆ ಮಿಶ್ರ ಮಾಡಿ ಮಾತಾಡುವರು. ಸ್ಥಳೀಯ ಸಂಸ್ಥೆಗಳಲ್ಲಿ ಅವರದೇ ಪ್ರಭಾವ. ಬಹಿರಂಗವಾಗಿ ಕನ್ನಡವನ್ನು ವಿರೋಧಿಸುವರು. ಈ ಕನ್ನಡ ದ್ರೋಹಿಗಳಿಗೆ ರಾಜಕಾರಣಿಗಳ ಬೆಂಬಲವಿದೆ. ಇದನ್ನು ವಿರೋಧಿಸುತ್ತಿರುವವರು ಶ್ರೀ ನಾರಾಯಣಗೌಡರು. ಎಲ್ಲಿದ್ದಾರೆ ಮಿಕ್ಕವರು?
ಈ ಎಲ್ಲಾ ಸಮಸ್ಯೆಗಳ ಪರಿಹಾರ ರಾಜಕೀಯ ನಾಯಕರಿಂದ ಸಾಮಾನ್ಯವಾಗಿ ಸಾಧ್ಯವಿಲ್ಲ. ಅವರಿಗೆ ಸಮಯವಿಲ್ಲ ಮತ್ತು ಮನಸ್ಸಿಲ್ಲ. ಮತ್ತಿ ನ್ಯಾರು ನಾಯಕತ್ವವಹಿಸಿಕೊಳ್ಳಬೇಕು? ನಾಮಫಲಕದಲ್ಲೂ ಕನ್ನಡಕ್ಕೆ ವಂಚನೆ, ಅವಮಾನವಾಗಿದೆ. ಈ ಸಣ್ಣ ವಿಷಯದಲ್ಲೂ ನಮ್ಮ ವ್ಯಾಪಾರಸ್ಥರು ಸಹಕಾರ ಕೊಡುತ್ತಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಇವರಿಗೂ ಸ್ವಲ್ಪ ಇತಿಮಿತಿಗಳಿವೆ.
ಗುಡುಗಿದರೆ ಪೃಥ್ವಿ ಅಲ್ಲಾಡಬೇಕು. ನಿದ್ರೆಯಲ್ಲಿರುವವರು ಎದ್ದೇಳಬೇಕು. ಸಂಬಂಧಪಟ್ಟ ಜನರು, ಅಂದರೆ ಕನ್ನಡ ದ್ರೋಹಿಗಳು ನಡುಗಬೇಕು. ಇಂತಹ ಗುಡುಗಿನ ಶಕ್ತಿ ಶ್ರೀ ನಾರಾಯಣಗೌಡರಿಗೆ ಮಾತ್ರ ಇದೆ. ಕನ್ನಡದ ಮಮತೆ ತಮ್ಮ ಹೃದಯದ ಆಳದಿಂದ ಉದ್ಭವಿಸುವುದು. ನಾಲಿಗೆ ಬಹಳ ಚುರುಕಿದೆ, ಹರಿತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ತ್ಯಾಗ ಮನಸ್ಸು, ದಿಟ್ಟತನ, ನಿರ್ಭಯ, ಸ್ವಾತಂತ್ರ್ಯತೆ ಇವರಲ್ಲಿ ರಕ್ತಗತವಾಗಿದೆ. ನಮ್ಮ ಕನ್ನಡಕ್ಕೆ ಸಿಗಬೇಕಾದ ಮಾನ್ಯತೆ, ಸ್ಥಾನಮಾನ, ಇವರ ಹೋರಾಟದಿಂದ ಮಾತ್ರ ನಾವು ನಿರೀಕ್ಷೆ ಮಾಡಬಹುದು. ಶ್ರೀಯುತರಿಗೆ ಜನಸ್ತೋಮದಿಂದ ಇನ್ನೂ ಹೆಚ್ಚಿನ ಸಹಕಾರ ಬೇಕಾಗಿದೆ, ಬೆಂಬಲ ಬೇಕಾಗಿದೆ. ಕರ್ನಾಟಕದ ಬೇರೆ ಬೇರೆ ಮತೀಯ, ಜಾತಿಯ, ಮಾತೃಭಾಷೆಯ ಜನರು ಒಂದಾಗಿ ಕನ್ನಡ ಭಾಷೆಯ ಭವಿಷ್ಯವನ್ನು ಶ್ರೀ ನಾರಾಯಣಗೌಡರ ನಾಯಕತ್ವದಲ್ಲಿ ಕಾಣಬೇಕು.

ಪ್ರೊ. ಡಾ. ಮುಮ್ತಾಜ್ ಅಲಿಖಾನ್
ಸಚಿವರು
ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ನಂ.೧೮, ೧ನೇ ಸಿ ಮುಖ್ಯ ರಸ್ತೆ, ಗಂಗೇನಹಳ್ಳಿ ಬಡಾವಣೆ, ಬೆಂಗಳೂರು-೫೬೦ ೦೩೨

No comments:

Post a Comment

ಹಿಂದಿನ ಬರೆಹಗಳು