![](https://blogger.googleusercontent.com/img/b/R29vZ2xl/AVvXsEggASyeHo_Lr7MYuz7YG0l2gyfiGFEEMacxBCE_nT8_bPlM7bnOutYDUVtDAjzfFgkzHk52HDkKEhTycZaTKhZY-GWAhzcfO_pvTmSapT6-lFBmClfrlUMCndJQBugqUzs53geleHsUjJ0/s200/2year+logo1.jpg)
ಮಾನ್ಯ ಯಡಿಯೂರಪ್ಪನವರೆ,
ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ ನೀವು ಆಗಾಗ ಅತಿಗಣ್ಯರಿಗೆ ಬಿಡಿಎ ನಿವೇಶನಗಳನ್ನು ಮಂಜೂರು ಮಾಡುತ್ತೀರಿ. ಬೆಂಗಳೂರಿನಲ್ಲಿ ಯಾವುದೇ ರೀತಿಯ ಆಸ್ತಿ ಹೊಂದದೇ ಇರುವ ಅತಿಗಣ್ಯರಿಗೆ ಮಾತ್ರ ಇದು ಅನ್ವಯಿಸುತ್ತದೆ. ಹೀಗೆ ಯಾವುದೇ ಆಸ್ತಿ ಹೊಂದಿಲ್ಲ ಎಂದು ನಿವೇಶನ ಪಡೆಯುವವರು ಪ್ರಮಾಣಪತ್ರವನ್ನೂ ಸಲ್ಲಿಸಬೇಕು.
ನಿಮ್ಮ ಕಾಲದಲ್ಲಿ ನೀವು ಇದುವರೆಗೆ ಎಷ್ಟು ಮಂದಿಗೆ ನಿವೇಶನ ನೀಡಿದ್ದೀರಿ? ಅವರ ಪೈಕಿ ಬೆಂಗಳೂರಿನಲ್ಲಿ ನಿವೇಶನ ಹೊಂದದೇ ಇರುವವರು ಎಷ್ಟು ಮಂದಿ? ಸುಳ್ಳು ಪ್ರಮಾಣಪತ್ರಗಳನ್ನು ನೀಡಿ ನಿವೇಶನ ಪಡೆದವರು ಎಷ್ಟು ಮಂದಿ? ಬಹಿರಂಗಪಡಿಸುತ್ತೀರಾ ಯಡಿಯೂರಪ್ಪನವರೆ?
ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ಮುಖ್ಯಮಂತ್ರಿಗಳ ಮಗ, ಮಗಳು, ನೆಂಟರು, ಇಷ್ಟರು ನಿವೇಶನ ಪಡೆಯಬೇಕಾ? ಬಿಡಿಎ ಸಂಸ್ಥೆಯೇನು ಮುಖ್ಯಮಂತ್ರಿಗಳಿಗೆ ಬರೆದುಕೊಡಲಾದ ಜಹಗೀರಾ?
ನಿಮ್ಮ ಕಂದಾಯ ಸಚಿವ ಕರುಣಾಕರರೆಡ್ಡಿಯವರಿಗೆ ಬೆಂಗಳೂರಿನಲ್ಲಿ ಆಸ್ತಿಯೇ ಇಲ್ಲವೇ? ಅವರೇ ಚುನಾವಣೆ ಸಂದರ್ಭದಲ್ಲಿ ಕೊಟ್ಟಿರುವ ಪ್ರಮಾಣಪತ್ರದ ಪ್ರಕಾರ ಕೃಷ್ಣರಾಜಪುರದಲ್ಲಿ ಅವರಿಗೆ ಕೃಷಿಯೇತರ ಭೂಮಿ ಇದೆ. ಹೀಗಿದ್ದಾಗ್ಯೂ ನಿಯಮ ಉಲ್ಲಂಘಿಸಿ ಅವರಿಗೇಕೆ ನಿವೇಶನ ಕೊಟ್ಟಿರಿ?
ಜಿ ಪ್ರವರ್ಗದಡಿಯಲ್ಲಿ ನಿವೇಶನಗಳನ್ನು ಪಡೆದಿರುವ ನಿಮ್ಮ ಶಾಸಕರ ಪೈಕಿ ಎಷ್ಟು ಜನರಿಗೆ ಎಷ್ಟು ಆಸ್ತಿ ಇದೆ ಎಂಬುದು ನಿಮಗೆ ಗೊತ್ತಿಲ್ಲವೆ? ಗೊತ್ತಿಲ್ಲದಿದ್ದರೆ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅವರು ಸಲ್ಲಿಸಿದ ಪ್ರಮಾಣಪತ್ರಗಳನ್ನಾದರೂ ಪರಿಶೀಲಿಸಬಹುದಿತ್ತಲ್ಲವೆ? ಕಡೇ ಪಕ್ಷ ಗೆದ್ದು ಬಂದ ನಂತರ ಅವರು ಲೋಕಾಯುಕ್ತರಿಗೆ ಸಲ್ಲಿಸಿದ ಪ್ರಮಾಣಪತ್ರಗಳನ್ನಾದರೂ ಕೆದಕಿ ನೋಡಬಹುದಿತ್ತಲ್ಲವೆ? ಬೆಂಗಳೂರಿನಲ್ಲಿ ಇರಲು ನಮಗೆ ಸೂರಿಲ್ಲ ಎಂದು ಅವರು ಕೊಟ್ಟ ಖೊಟ್ಟಿ ಪ್ರಮಾಣಪತ್ರಗಳನ್ನು ಪಡೆದು ನಿವೇಶನ ಕೊಟ್ಟಿರಲ್ಲ, ಇದ್ಯಾವ ನ್ಯಾಯ? ಯಾರ್ಯಾರು ಸುಳ್ಳು ಪ್ರಮಾಣಪತ್ರ ನೀಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ನೀವೇ ಘೋಷಿಸಿದಿರಿ. ಎಷ್ಟು ಮಂದಿಯ ಮೇಲೆ ಕಾನೂನು ಕ್ರಮ ಕೈಗೊಂಡಿದ್ದೀರಿ? ಕರುಣಾಕರ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿದೆಯೇ ನಿಮಗೆ?
ಯಡಿಯೂರಪ್ಪನವರೆ, ರಾಜ್ಯದಲ್ಲಿ ನೂರಾರು ಮಂದಿ ಹಿರಿಯ ಕಲಾವಿದರು, ಸಾಹಿತಿಗಳು ಬೆಂಗಳೂರಿನಲ್ಲಿ ವಾಸಕ್ಕೊಂದು ಮನೆಯಿಲ್ಲದೆ ಒದ್ದಾಡುತ್ತಿದ್ದಾರೆ. ಆ ಪೈಕಿ ಕೆಲ ಮಂದಿ ನಿಮ್ಮ ಕಚೇರಿ ಸುತ್ತಿ ಸುತ್ತಿ ಸಾಕಾಗಿ ಹೋಗಿದ್ದಾರೆ. ಕನ್ನಡ ಚಿತ್ರರಂಗದ ಮೇರುನಟಿ ಲೀಲಾವತಿಯಂತವರಿಗೇ ನೀವು(ಹಿಂದೆ ಇದ್ದ ಮುಖ್ಯಮಂತ್ರಿಗಳೂ ಸೇರಿದಂತೆ) ನಿವೇಶನ ಕೊಡಲಿಲ್ಲ. ಪುಡಿಗಾಸು ಪಡೆದು ಅಭಿನಯ ಮಾಡಿಕೊಂಡು ಬಂದು, ಈ ಇಳಿ ವಯಸ್ಸಿನಲ್ಲಿ ಒಂದು ಮನೆ ಕಟ್ಟಿಕೊಳ್ಳಲೂ ಸಾಧ್ಯವಾಗದ ಹೆಣಗುತ್ತಿರುವ ನೂರಾರು ಪೋಷಕ ನಟರುಗಳಿದ್ದಾರೆ. ದೊಡ್ಡ ದೊಡ್ದ ಸಾಹಿತಿಗಳಿದ್ದಾರೆ. ಅವರಿಗೆ ನ್ಯಾಯಯುತವಾಗಿ ಕೊಡಬೇಕಾದ ನಿವೇಶನಗಳನ್ನು ಸಾವಿರಾರು ಕೋಟಿ ರೂ. ಒಡೆಯರಿಗೆ ಸತ್ಯನಾರಾಯಣ ಪೂಜೆಯ ಪ್ರಸಾದದಂತೆ ಹಂಚುತ್ತಿದ್ದೀರಲ್ಲ, ಇದಕ್ಕೇನು ಹೇಳಬೇಕು?
ಕಡೇ ಪಕ್ಷ ಜನ ಏನಂದುಕೊಂಡಾರು ಎಂಬ ಯೋಚನೆಯಾದರೂ ಬೇಡವೇ ನಿಮಗೆ?
No comments:
Post a Comment