Saturday, July 3, 2010

ವೀರಪ್ಪನ್ ಬೇಡಿಕೆ ಈಡೇರಿಸಿದ್ದು...


ಶ್ರೀ ಯಡಿಯೂರಪ್ಪನವರೆ,

ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಿದ ನಿಮ್ಮ ಮತ್ತೊಂದು ಮಹತ್ಸಾಧನೆ ಎಂದರೆ ನರಹಂತಕ ವೀರಪ್ಪನ್ ಬೇಡಿಕೆಯಾಗಿದ್ದ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದ್ದು! ನೀವು ಅದನ್ನು ಸಾಧನೆಯೆನ್ನುತ್ತೀರಿ, ನಾವು ಅದನ್ನು ನಾಚಿಕೆಗೇಡು ಎನ್ನುತ್ತೇವೆ.
ತಿರುವಳ್ಳುವರ್ ಪ್ರತಿಮೆ ಯಾರು ಯಾವ ಕಾರಣಕ್ಕೆ ಬೆಂಗಳೂರಿಗೆ ತಂದು ಕದ್ದು ಮುಚ್ಚಿ ಅನಾವರಣಕ್ಕೆ ಯತ್ನಿಸಿದರು ಎಂಬುದು ನಿಮಗೂ ಗೊತ್ತು, ರಾಜ್ಯದ ಸಮಸ್ತ ಜನತೆಗೂ ಗೊತ್ತು. ಬೆಂಗಳೂರಿನಲ್ಲಿರುವ ಎಲ್‌ಟಿಟಿಇ ಸಂಘಟನೆಯ ದರಿದ್ರ ಮುಖಗಳು ದಬ್ಬಾಳಿಕೆಯಿಂದ ತಂದಿಟ್ಟ ಪ್ರತಿಮೆ ಅದು. ಭಯೋತ್ಪಾದಕರು ತಂದಿಡುವ ಪ್ರತಿಮೆ ಬೇಡ ಎಂದು ಆಗ ಕನ್ನಡ ಸಂಘಟನೆಗಳು ಪ್ರತಿಭಟಿಸಿ ಆ ಪ್ರತಿಮೆಗೆ ಮುಸುಕು ಹಾಕಿದ್ದವು.
ಆದರೆ ನೀವು ಎರಡೂ ರಾಜ್ಯಗಳ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಮಹಾತ್ಮನ ಫೋಜು ನೀಡಿ ಸಾಹಿತಿಗಳ ಮನವೊಲಿಸಿಕೊಂಡಿರಿ. ತಮಿಳರನ್ನು ವಿರೋಧ ಕಟ್ಟಿಕೊಳ್ಳಲಾಗದ ವಿರೋಧಪಕ್ಷಗಳು ನಿಮ್ಮನ್ನು ಬೆಂಬಲಿಸಿದವು. ನೀವೇ ಖುದ್ದಾಗಿ ಚೆನ್ನೈಗೆ ಹೋಗಿ ಆರೋಗ್ಯ ಕೆಟ್ಟು ಮಲಗಿದ್ದ ಕರುಣಾನಿಧಿ ಜತೆ ಒಪ್ಪಂದ ಮಾಡಿಕೊಂಡು ತಿರುವಳ್ಳುವರ್ ಪ್ರತಿಮೆ ಅನಾವರಣ ಆಗಲಿದೆ ಎಂದು ಘೋಷಿಸಿದಿರಿ.
ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಇಳಿದಾಗ ನಿಮ್ಮ ಪೊಲೀಸು ಪಡೆಯನ್ನು ಬಿಟ್ಟು ದೌರ್ಜನ್ಯವೆಸಗಿದಿರಿ. ಮನೆಯಲ್ಲಿದ್ದ ಕಾರ‍್ಯಕರ್ತರನ್ನೂ ಬಿಡದೆ ಜೈಲಿಗೆ ಅಟ್ಟಿದಿರಿ. ಪ್ರತಿಭಟನೆಗೂ ಅವಕಾಶ ನೀಡದೆ ಕರವೇ ಕಾರ್ಯಕರ್ತರನ್ನು ಸಿಕ್ಕಸಿಕ್ಕಲ್ಲಿ ಬಂಧಿಸಿದಿರಿ. ಇದು ನಿಮ್ಮ ಹೇಡಿತನದ, ಪ್ರಜಾತಂತ್ರ ವಿರೋಧಿ ಕ್ರಮವಾಗಿತ್ತು. ಬಂಧನಕ್ಕೊಳಗಾದ ಕರವೇ ಮುಖಂಡರು, ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಜಡಿದು, ವಾರಗಟ್ಟಲೆ ಜೈಲಿನಿಂದ ಹೊರಬರದಂತೆ ಮಾಡಿದಿರಿ.
ಅದಾದ ನಂತರ ನೀವಂದುಕೊಂಡಂತೆ ಕರುಣಾನಿಧಿ ಬಂದು ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಿಹೋದರು. ಅನಾವರಣದ ಕಾರ್ಯಕ್ರಮದಲ್ಲಿ ನಿಮ್ಮ ಭಾವಚಿತ್ರದೊಂದಿಗೆ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಭಾವಚಿತ್ರಗಳೂ ಕಾಣಿಸಿಕೊಂಡವು. ಡಾ.ರಾಜ್‌ಕುಮಾರ್ ಅಪಹರಣ ಮಾಡಿದ ನಂತರ ವೀರಪ್ಪನ್ ಬೇಡಿಕೆಗಳ ಪೈಕಿ ತಿರುವಳ್ಳುವರ್ ಪ್ರತಿಮೆ ಅನಾವರಣವೂ ಒಂದಾಗಿತ್ತು. ಬಹುಶಃ ವೀರಪ್ಪನ್ ಆತ್ಮಕ್ಕೂ ನಿಮ್ಮ ಈ ನಡೆಯಿಂದ ಸಂತಸವಾಗಿರಬೇಕು.
ಆದರೆ, ಕನ್ನಡಿಗರ ಬೆನ್ನಿಗೆ ಚೂರಿ ಹಾಕಿ ನೀವು ಮಾಡಿದ ಈ ಕೃತ್ಯದಿಂದ ಇಡೀ ನಾಡು ತಲೆತಗ್ಗಿಸುವಂತಾಯ್ತು. ತಮಿಳು ಭಯೋತ್ಪಾದಕರಿಗೆ ನೀವು ಭದ್ರ ನೆಲೆಯನ್ನು ಒದಗಿಸಿದಂತಾಯ್ತು.
ಅಷ್ಟಕ್ಕೂ ಬಾಂಧವ್ಯ ಬೆಸೆಯಲು ನೀವೇನು ಆಕಾಶದಿಂದ ಅವತರಿಸಿದ ಶಾಂತಿದೂತರೇ? ನೀವು ಒಪ್ಪಿ ನಡೆಯುತ್ತಿರುವ ನಿಮ್ಮ ಪಕ್ಷದ ಸಿದ್ಧಾಂತದಲ್ಲಿ ‘ಬಾಂಧವ್ಯ ಎಂಬ ಶಬ್ದಕ್ಕೇನಾದರೂ ಅರ್ಥವಿದೆಯೇ? ದೇಶವನ್ನು ಧರ್ಮದ ಆಧಾರದಲ್ಲಿ ಒಡೆದ ಕುಖ್ಯಾತಿಯ ನಿಮ್ಮ ಪಕ್ಷಕ್ಕೆ ನಿಜವಾದ ಬಾಂಧವ್ಯದ ಅರ್ಥ ತಿಳಿದಿದಿಯೇ?
ಅಸಲಿಗೆ ನಿಮಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಬೇಕಿತ್ತು. ಸೋಲಿನ ಭೀತಿಯಿಂದಲೇ ಚುನಾವಣೆಯನ್ನು ನೀವು ಮುಂದೂಡಿಕೊಂಡುಬಂದಿದ್ದಿರಿ. ಬೆಂಗಳೂರಿನಲ್ಲಿರುವ ತಮಿಳು ಮತದಾರರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದವರು. ಅವರ ಮತ ಗಳಿಸಿದರೆ ಮೇಯರ್ ಗಾದಿಯನ್ನು ಪಡೆಯಬಹುದು ಎಂಬುದು ನಿಮ್ಮ ದೂರಾಲೋಚನೆ.
ಅದಕ್ಕಾಗಿಯೇ ‘ಬಾಂಧವ್ಯದ ನಾಟಕ ಹೂಡಿ ತಿರುವಳ್ಳುವರ್ ತಂದು ಕೂರಿಸಿದಿರಿ. ಅದಕ್ಕೆ ಪ್ರತಿಫಲವಾಗಿ ಬಿಬಿಎಂಪಿಯಲ್ಲೂ ಗೆದ್ದುಬಂದಿರಿ.
ನಿಮ್ಮ ತೀಟೆಗಾಗಿ ವೀರಪ್ಪನ್ ಬೇಡಿಕೆ ಈಡೇರಿಸಿದಕ್ಕಾಗಿ ಧಿಕ್ಕಾರವಿರಲಿ....

No comments:

Post a Comment

ಹಿಂದಿನ ಬರೆಹಗಳು